Day: October 9, 2021

ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು

ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು  ಅಳುತ್ತಾಳೆ.    ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ!    ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು.                                                                                         *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು.    ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು.    ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು.    ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ […]

ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ […]

Back To Top