ಅಂಕಣ

ನೆಲಸಂಪಿಗೆ

ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…!

ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ ನನಗೆ ಕಂಡಿತು. ಮೊದಲೆಲ್ಲ, ‘ಅಂಗಡಿ ಪಕ್ಕಿ’ ಎಂಬ ಹೆಸರಿಗೆ ಅನ್ವರ್ಥವಾಗಿ ಸಾಲು ಅಂಗಡಿಗಳ ಮುಂದೆ ಗಲಾಟೆ ಎಬ್ಬಿಸುತ್ತ ಚೆಲ್ಲಿದ ಕಾಳು ಆರಿಸುತ್ತಿದ್ದ ಗುಬ್ಬಚ್ಚಿಗಳ ಹಿಂಡು ನೆನಪಾಗಿ ಈ ಒಂಟಿಗುಬ್ಬಿ ಸದ್ಯದ ಪರಿಸ್ಥಿತಿಗೆ ರೂಪಕವಾಗಿ ಕಂಡು ಎದೆಯೊಳಗೆ ನೋವಾಯಿತು. ಬಟ್ಟೆಖರೀದಿಸುವ ಆಸಕ್ತಿ ಉಳಿಯದೆ “ನನಗೀಗ ಏನೂ ಬೇಡ” ಎಂದು ತಿಳಿಸಿ ಮನೆಮಂದಿಯನ್ನು ಅಂಗಡಿಯೊಳಗೆ ಕಳಿಸಿ ಸುಮ್ಮನೆ ಯೋಚಿಸುತ್ತ ನಿಂತುಬಿಟ್ಟೆ…

**

ನಮ್ಮ ಆ ಬಾಡಿಗೆ ಮನೆಗೆ ಸಕಾರಣವಾಗಿ ‘ಹಕ್ಕಿ ಮನೆ’ ಎಂದು ಹೆಸರಿಟ್ಟಿದ್ದೆವು. ವಿಶಾಲವಾಗಿದ್ದ ಮನೆಯ ಸುತ್ತ ಒಂದಷ್ಟು ಜಾಗವಿತ್ತು; ಮರಗಿಡಗಳಿದ್ದವು. ತೆಂಗು, ನುಗ್ಗೆ ಮರಗಳು, ಪಪ್ಪಾಯಿ, ಬಾಳೆ, ಕ್ರೋಟನ್ ಗಿಡಗಳು ಅಂದ ಹೆಚ್ಚಿಸಿದ್ದವು. ಅಷ್ಟು ಒಳ್ಳೆಯ ಬಾಡಿಗೆಮನೆ ಸಿಕ್ಕಿದ್ದು ನಮ್ಮಅದೃಷ್ಟವೆಂದೇ ಹೇಳಬೇಕು. ಹಗಲಿನ ವೇಳೆ ಹಕ್ಕಿ ಹಾಡು, ಕೋಳಿಗಳ ಕೂಗು, ಮುಂಗುಸಿ, ಅಳಿಲು, ನಾಯಿ, ಬೆಕ್ಕುಗಳ ಸುಂದರ ಪ್ರಪಂಚವಾದರೆ; ರಾತ್ರಿ ತಾರಸಿಯ ಮೇಲಿನ ಬೆಳದಿಂಗಳ ಲೋಕ, ಇರುಳಹಕ್ಕಿಗಳ ಸವಿಮಾತು!ಇಂತಹ ಮನೆಗೆ ಹೋದ ಸ್ವಲ್ಪ ಸಮಯದಲ್ಲಿ ಮಗ ಮತ್ತು ನಾನು ರಜೆಯ ದಿನ ಒಂದು ಕಿಲಾಡಿತನ ಮಾಡಿದೆವು. ಎರಡುರಟ್ಟಿನ ಪೆಟ್ಟಿಗೆಯನ್ನುತೆಗೆದುಕೊಂಡು, ರಂಧ್ರಕೊರೆದು, ದಾರಕಟ್ಟಿ ಸಿಟೌಟಿನ ಕಂಬಕ್ಕೆ ಬಿಗಿಯಾಗಿ ಬಿಗಿದೆವು. “ಯಾವುದಾದರೊಂದು ಹಕ್ಕಿ ಬಂದು ಅದನ್ನು ತನ್ನ ಗೂಡಾಗಿ ಸ್ವೀಕರಿಸಬಾರದೇ’ ಎಂಬ ಅಸಾಧ್ಯ ಹಂಬಲ, ಕಲ್ಪನೆ ಮಾತ್ರ ನಮ್ಮದಾಗಿತ್ತು. ಆದರೆ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮಡಿವಾಳ ಹಕ್ಕಿ(ಮ್ಯಾಗಿಫೈ ರಾಬಿನ್)ಯೊಂದು ನಮ್ಮಕಲ್ಪನೆಯನ್ನು ವಾಸ್ತವಕ್ಕಿಳಿಸಿ ಔದಾರ‍್ಯ ಮೆರೆಯಿತು! ಆ ಬೆಳಗು ರಟ್ಟಿನ ಪೆಟ್ಟಿಗೆಗೆ ನಾರು ತಂದು ಹಾಕುತ್ತಿದ್ದ ಮಡಿವಾಳವನ್ನು ಕಂಡು ಕನಸೊಂದನ್ನು ಎಡವಿ ಬಿದ್ದಂತೆ ನನಗೆ ಭಾಸವಾಯಿತು! ಮಗನಂತೂ ಹಕ್ಕಿಗಳಿಗೆ ತೊಂದರೆಯಾದೀತೆಂದು ಮೌನವಾಗಿಯೇ ಕುಣಿದು ಖುಷಿಪಟ್ಟ!  ಬದುಕಿನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಅನುಭವಕ್ಕೆ ತೆರೆದುಕೊಂಡ ಸಂಭ್ರಮ ನನ್ನದಾಗಿತ್ತು. ಹುಲುಮಾನವರಾದ ನಾವು  ಕೊಟ್ಟ ‘ಗೂಡನ್ನುʼಆಕಾಶಲೋಕದ ಕಿನ್ನರರಾದ ಹಕ್ಕಿಗಳು ಸ್ವೀಕರಿಸುವುದೆಂದರೆ ಏನು  ಕಮ್ಮಿಯಮಾತೇ ? ಈ ಪುಳಕವೇ ನನ್ನ ಮುಂದಿನ ದಿನಗಳಿಗೆ ಉತ್ಸಾಹದ ಅಮೃತವೆರೆಯಿತು. ಸಿಟೌಟ್‌ನಲ್ಲಿದ್ದ ಹಕ್ಕಿಗಳಿಗೆ ತೊಂದರೆಯಾಗದಂತೆ ಚೂರೂ ಶಬ್ದ ಮಾಡದೆ ಇಡೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದಿನಚರಿಯ ಭಾಗವಾಯಿತು. ಹಕ್ಕಿಜೋಡಿ ಬೇಕೆಂಬಷ್ಟು ನಾರನ್ನುತಂದು ಗೂಡಿನೊಳಗೊಂದು ಗೂಡು ಮಾಡಿದವು. ನಂತರ ಮೊಟ್ಟೆಯಿಟ್ಟದ್ದು, ಕಾವು ಕೊಟ್ಟದ್ದುಎಲ್ಲವನ್ನೂ ಅವುಗಳ ನಿಶ್ಯಬ್ದ ಚಲನವಲನದಿಂದ ತಿಳಿದುಕೊಂಡೆವು. ಕೆಲವೇ ದಿನದಲ್ಲಿ ಮರಿಯೊಡೆದು ‘ಚೀಂಚೀಂ’ ಎಂಬ ಕಂದಮ್ಮಗಳ ಸದ್ದು ಕೇಳಿಬಂದಾಗ ವ್ಯಕ್ತಪಡಿಸಲಾದ ಸಂತಸ, ಎನರ್ಜಿ ಮನೆಯನ್ನೆಲ್ಲ ತುಂಬಿಕೊಂಡಿತು. ದಿನದ ಕೆಲಸಗಳನ್ನು ಮುಗಿಸಿ ಕತ್ತಲ ನೀರವತೆಯಲ್ಲಿ ಸ್ವಲ್ಪ ಹೊತ್ತು ಕುಳಿತು ನಿಸರ್ಗದ ಸದ್ದುಗಳನ್ನು ಆಲಿಸುವುದು ನನ್ನ ನಿತ್ಯದ ಅಭ್ಯಾಸ. ಇಂಥಾ ಹೊತ್ತಿನಲ್ಲಿ ತಲೆ ಮೇಲೆಯೇ ಇರುತ್ತಿದ್ದ ಹಕ್ಕಿ ಸಂಸಾರದ ಮೆಲುಮಾತು, ಜೀವಂತಿಕೆ ನನ್ನನ್ನು ಹೊಸದೊಂದು ಬೆಚ್ಚನೆಯ ಲೋಕಕ್ಕೆ ಕರೆದೊಯ್ಯುತ್ತಿತ್ತು. ತುಸು ದಿನಗಳಲ್ಲಿ ಮರಿಗಳು ದೊಡ್ಡವಾಗಿ ಕೊನೆಗೊಮ್ಮೆ ಹಾರಿ ಹೋದದ್ದು ತಿಳಿದಾಗ ಸದ್ಯ;  ಎಲ್ಲವೂ ಸರಿಯಾಯಿತಲ್ಲ! ನಮ್ಮರಟ್ಟಿನ ಪೆಟ್ಟಿಗೆಯಿಂದ ಇಷ್ಟಾದರೂ ಸಹಾಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟೆವು. ಆದರೆ ಆ ರಟ್ಟಿನ ಪೆಟ್ಟಿಗೆಗೆ ಇನ್ನೂ ಹಲವು ಕರ್ತವ್ಯಗಳಿರಬಹುದೆಂದು ತಕ್ಷಣಕ್ಕೆ ನನಗೆ ಹೊಳೆದಿರಲಿಲ್ಲ.

ವಿಜಯಶ್ರೀ ಹಾಲಾಡಿಯವರ ಬರಹ
ಹಕ್ಕಿಗಳ ಕುರಿತು

.

     ಒಂದಷ್ಟು ದಿನ ಕಳೆದ ಅನಂತರ ಒಂದು ದಿನ ಮಡಿವಾಳ ಹಕ್ಕಿಯೊಂದು ಮತ್ತೆ ನಮ್ಮಗೂಡಿಗೆ ನಾರು-ಬೇರು ತಂದು ಹಾಕುತ್ತಿದ್ದುದ್ದನ್ನು ನೋಡಿದೆ! ಅರೇ, ಇದ್ಯಾವ ಹಕ್ಕಿ; ಒಮ್ಮೆಉಪಯೋಗವಾದ ಹಕ್ಕಿಗೂಡು ಮತ್ತೆ ವಾಸಯೋಗ್ಯವಲ್ಲ ಎಂಬುದು ಬಾಲ್ಯದಿಂದಲೂ ಕಂಡ ಹಾಗೆ, ಓದಿದ ಹಾಗೆ ನನ್ನ ತಿಳುವಳಿಕೆ! ಆದರಿಲ್ಲಿ ಆ ‘ಜ್ಞಾನ’ ಉಲ್ಟಾ ಹೊಡೆದಿತ್ತು!  ಹೌದು, ಪುನಃ ಇನ್ನೊಂದು ಹಕ್ಕಿ ನಮ್ಮರಟ್ಟಿನ ಪೆಟ್ಟಿಗೆಯನ್ನುತನ್ನ ಮನೆಯಾಗಿ ಸ್ವೀಕರಿಸಿತ್ತು. ಇದಂತೂ ಬಹಳ ಖುಷಿಯ, ಕುತೂಹಲದ ವಿಷಯ. ಎರಡು, ಮೂರು ದಿನ ತಿರುತಿರುಗಿ ಈ ವಿಷಯವನ್ನೇ ಮಾತಾಡಿದ್ದಾಯಿತು. ಆದರೆ ಅಷ್ಟರಲ್ಲಿ ನಮ್ಮ ಮನೆಯ ಓನರ್‌ ಅವರ ಒತ್ತಡ ಮಿತಿಮೀರಿ ‘ಮನೆ ಬಿಟ್ಟು ಹೊರಡಿ’ ಎಂಬ ಕೊನೆಯ ‘ವಾರ್ನಿಂಗ್’ ಹೊರಬಿದ್ದಿತು! ತಾವೇ ಬಂದು ಅಲ್ಲಿ ನೆಲೆಸುತ್ತೇವೆಂಬ ಅವರ ಮಾತಿಗೆ ನಮ್ಮಲ್ಲಿ ಬದಲಿರಲಿಲ್ಲ. ಆದರೆ ನನಗೆ ಇನ್ನೊಂದು ಮನೆ ಹುಡುಕುವ, ಸಾಮಾನು ಸರಂಜಾಮು ಸಾಗಿಸುವ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಎಲ್ಲ ಚಿಂತೆಗಳ ಮಧ್ಯೆ ಹಕ್ಕಿಗಳ ವ್ಯಥೆ ಎಡೆಬಿಡದೆ ಕಾಡುತ್ತಿತ್ತು. ವಿಧಿಯಿಲ್ಲದೆ ಮತ್ತೊಂದು ವಾರದಲ್ಲಿ ನಾವು ಮನೆ ಖಾಲಿ ಮಾಡಿದೆವು. ಕನಸಿನ ಗೂಡುಕಟ್ಟುತ್ತಿರುವ ಹಕ್ಕಿಗಳಿಗೇನು ಹೇಳುವುದು… ಹೊರಟ ಗಳಿಗೆ ಮನ ಭಾರವಾಗಿತ್ತು. ಆದರೆ ಗಟ್ಟಿಮನಸ್ಸು ಮಾಡಿ ನಾನೊಂದು ನಿರ್ಧಾರ ತೆಗೆದುಕೊಂಡೆ. ಮುಂದೆ ಆ ಮನೆಗೆ ಬರುವ ಯಾರೇ ಆದರೂ ಬಾಗಿಲಲ್ಲೇ ಇರುವ ರಟ್ಟಿನ ಪೆಟ್ಟಿಗೆಯನ್ನು ‘ಕಸ’ವೆಂದು ತಿಳಿದು ಆಚೆ ಎಸೆಯುವುದು ಖಾತ್ರಿಯಿತ್ತು. ಹಾಗಾಗಿ, ಐದಾರು ದಿನ ನಾರು ತಂದಿಟ್ಟ ಹಕ್ಕಿಗಳಲ್ಲಿ ಕ್ಷಮೆ ಬೇಡಿ, ನಡುಗುವ ಕೈಗಳಿಂದ ಗೂಡನ್ನು ಬಿಚ್ಚಿ ಜೋಪಾನವಾಗಿ ಹೊಸ ಮನೆಗೆ ಒಯ್ದೆ. ಮುಂದೆ ಕೇಳಿಸಬಹುದಾದ ಮೊಟ್ಟೆ ಮರಿಗಳ ಆಕ್ರಂದನಕ್ಕಿಂತ ಇದು ಉತ್ತಮವೆಂದು ನಾನು ಭಾವಿಸಿದೆ.

     ನಮ್ಮʼಹೊಸʼ ಬಾಡಿಗೆಮನೆ ಹಳೆಯ ಮನೆಯೇ ಆದರೂ ನಿಸರ್ಗದ ಮಡಿಲಲ್ಲಿತ್ತು. ಇಲ್ಲಿಯೂ ಮನೆ ಮುಂದೆ ಕಂಬವೊಂದಿತ್ತು. ರಟ್ಟಿನ ಪೆಟ್ಟಿಗೆಯ ಹಕ್ಕಿಗೂಡನ್ನು ಬರೀ ನೆನಪಿಗೆಂದೇ ಬಿಚ್ಚಿಕೊಂಡು ಬಂದದ್ದು ಹೌದಾದರೂ ನೋಡೋಣವೆಂದು ಕಂಬಕ್ಕೆ ಕಟ್ಟಿ, ಮನೆ ಸಾಮಾನು ಜೋಡಿಸುವಲ್ಲಿ, ಶಾಲೆಯ ಕೆಲಸದಲ್ಲಿ ನಿರತಳಾದೆ. ಸುಮಾರು ತಿಂಗಳೊಂದು ಕಳೆದಿತ್ತು. ಒಂದು ದಿನ ವಿನ್ಯಾಸ್‌ ಕರೆದು ತೋರಿಸಿದ; ಇನ್ನೊಂದು ಮಡಿವಾಳ ಹಕ್ಕಿ ಜೋಡಿ ಅದೇ ಪ್ರೀತಿಯ ಗೂಡಿಗೆ ಮತ್ತೆ ನಾರು ತಂದು ಹಾಕುತ್ತಿತ್ತು. ಈ ಸಲವಂತೂ ನಾನು ಭಾವುಕಳಾದೆ. ಕಣ್ಣೀರು ಉಕ್ಕಿ ಮಣ್ಣಿಗೆ ಸೇರಿತು. ಹಕ್ಕಿಗಳು ಮರಿಗಳಿಗೆ ಬೆಚ್ಚನೆಯ ಹಾಸಿಗೆ ಮಾಡಿದವು; ಮೊಟ್ಟೆಯಿಟ್ಟವು, ಮರಿಗಳೂ ಒಡೆದವು. ಆ ಹೊತ್ತಿಗೆ ಬಿರುಬೇಸಗೆ ಕಳೆದು ಮಳೆಗಾಲ ಆರಂಭವಾಗಿತ್ತು. ಜೋರು ಗಾಳಿ ಮಳೆಗೆ ಸಿಬ್ರ್(ಎರಚಲು) ಬಡಿದು ಗೂಡು ಹಾಳಾಗುತ್ತದೇನೋ ಎಂಬ ಭಯ ಕಾಡಿತು. ಈಗಾಗಲೇ ಆ ಪೆಟ್ಟಿಗೆ ಚೂರು ಶಿಥಿಲವಾಗಿತ್ತು. ಆದರೆ ಒಳಗಡೆ ನಾರಿನ ಆಶ್ರಯವಿತ್ತು. ಹಕ್ಕಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದಿನಚರಿಯಲ್ಲಿ ಮೈಮರೆತಿದ್ದವು. ಈ ಸಂದರ್ಭದಲ್ಲೇ ಒಂದು ದಿನದ ಮಟ್ಟಿಗೆ ನಾವು ಹಾಲಾಡಿಗೆ ಹೋಗಬೇಕಾಯಿತು. ಆದರೆ ಹಾಗೆ ಹೋಗಿ ಬರುವುದರೊಳಗೆ ಇಲ್ಲಿ ನಮ್ಮ ಮೂಡಬಿದ್ರೆಯ ನಿಸರ್ಗದ ಮನೆಯಲ್ಲಿ ದೊಡ್ಡ ಅವಘಡವೇ ನಡೆದಿತ್ತು. ಏನಾಯಿತೋ ಗೊತ್ತಾಗಲಿಲ್ಲ ದೊಡ್ಡ ಹಕ್ಕಿಯ ದಾಳಿಯೋ, ಹಾವಿನ ಕಿತಾಪತಿಯೋ… ಮರಿಗಳು ಮಾಯವಾಗಿದ್ದವು! ಅಪ್ಪ-ಅಮ್ಮ ಹಕ್ಕಿಗಳು ಬಹುಶಃ ಹಾರಿಹೋಗಿದ್ದವು. ಇಂತಹ ನೋವುಗಳಿಗೆ ಪದಗಳಿಲ್ಲ. ಅಂತೂ ಹೇಗೋ ಎಲ್ಲವನ್ನೂ ಮರೆತು ಬದುಕಬೇಕೆಂಬ ಸೂತ್ರ ಅನುಸರಿಸಿ ಕುಂಟುವ ಮನಸ್ಸಿನೊಂದಿಗೆ ದಿನಕಳೆದ್ದಾಯಿತು.

    ಎರಡು ಮೂರು ತಿಂಗಳ ನಂತರ ಒಂದು ದಿನ ಹಕ್ಕಿಗೂಡಿನೊಳಗೆ ದೊಡ್ಡದೊಡ್ಡ ಹುಲ್ಲಿನೆಳೆಗಳು ಕಂಡುಬಂದವು. ಇದನ್ಯಾರು ತಂದಿಟ್ಟರೆಂದು ತಿಳಿಯಲಿಲ್ಲ! ಆ ಸಂಜೆ ಹೊತ್ತು ಮನೆಯೆದುರು ಹುಲ್ಲು ಬೆಳೆದ ಜಾಗದಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನವರಲ್ಲಿ ಕೇಳಿದೆ; “ನೀವೇನಾದರೂ… ಹುಲ್ಲನ್ನು ಹಕ್ಕಿ ಗೂಡೊಳಗೆ ಹಾಕಿದ್ದೀರಾ?” ಎಂದು! ಏಕೆಂದರೆ ಯಾರೋ ಮನುಷ್ಯರೇ ತುಂಬಿಟ್ಟಂತೆ ಅಸಡಾ ಬಸಡಾ ಇತ್ತದು. ಇವರು ನಗಾಡಿದರು. “ನನಗೇನು  ಬೇರೆ ಕೆಲಸ ಇಲ್ವಾ?” ಎನ್ನುತ್ತಾ! ಹಾಗಾದರೆ ಇದ್ಯಾವುದೋ ಹೊಸ ಹಕ್ಕಿಯ ಕಾರುಬಾರೇ ಇರಬೇಕೆಂದು ಜ್ಞಾನೋದಯ ಹೊಂದಿ ಕಳ್ಳನನ್ನು ಕಂಡುಹಿಡಿಯಲು ಕಾದುಕೂತೆವು. ಅಂತೂ ಕಳ್ಳ ಬೇಗನೆ ಸಿಕ್ಕಿಹಾಕಿಕೊಂಡ; ಅದೊಂದು ‘ಮುನಿಯ’. ಭರದಿಂದ ಹುಲ್ಲನ್ನು ತಂದು ರಟ್ಟಿನ ಪೆಟ್ಟಿಗೆಯೊಳಗೆ  ಒಟ್ಟುತ್ತಿತ್ತು. ಇದಂತೂ ಭಯಂಕರ ಚಟುವಟಿಕೆಯ ಹಕ್ಕಿ. ಎಂಥಾ ಚುರುಕು, ಏನು ಕತೆ!  ನಿಜವಾಗಿಯೂ ಅದೃಷ್ಟಶಾಲಿ ರಟ್ಟಿನಪೆಟ್ಟಿಗೆ ಮತ್ತು ನಾವು. ಈ ಹಕ್ಕಿ ಜೋಡಿಯೂ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಿಗೆ ತುತ್ತುಣಿಸಿ, ದೊಡ್ಡ ಮಾಡಿ ಒಂದು ದಿನ ತೆರಳಿದವು. ಆದರೆ ಖಾಲಿಯಾದ ಗೂಡು ಹಾಗೇ ಉಳಿಯಲಿಲ್ಲ. ಮತ್ತೆ ಎರಡು ಮುನಿಯ ಹಕ್ಕಿಯ ಸಂಸಾರಗಳು ಬಂದವು. ಯಾವ ಅವಘಡಗಳಿಗೂ ತುತ್ತಾಗದೆ ನೆಮ್ಮದಿಯಿಂದ ಬದುಕಿ ಗೂಡನ್ನು ಖಾಲಿ ಮಾಡಿ ಹೊರಟುಹೋದವು. ಇಷ್ಟೆಲ್ಲಾ ಆಗುವಾಗ ಬಿರುಸಾದ ಮಳೆ ಮತ್ತು ಬಿಸಿಲಿಗೆ ಸ್ವಲ್ಪ ಭಾಗವನ್ನು ಒಡ್ಡಿಕೊಂಡಿದ್ದ ಗೂಡು ಮತ್ತಷ್ಟು ಶಿಥಿಲವಾಗಿತ್ತು. ಕೊನೆಯ ಸಲವಂತೂ ಇನ್ನೇನು ಕಳಚಿ ಬೀಳುತ್ತದೋ ಎಂಬಂತಾಯಿತು. ಆದರೆ ಒಳಗಡೆ ನಾರು, ಬೇರು, ಹುಲ್ಲಿನ ಬಲವಾದ ಮನೆಯೇ ಇದ್ದುದರಿಂದಲೋ ಏನೋ ಮುನಿಯಗಳು ಧೈರ‍್ಯವಾಗಿ ವಾಸಿಸಿದವು. ಲೆಕ್ಕ ಹಾಕಿದರೆ; ಕಾಲಾನುಕಾಲಕ್ಕೆ ಒಟ್ಟು ಆರು ಹಕ್ಕಿ ಸಂಸಾರಗಳು ನಮ್ಮ ಈ ಒಂದೇ ರಟ್ಟಿನ ಪೆಟ್ಟಿಗೆಯನ್ನು ತಮ್ಮಗೂಡಾಗಿ ಸ್ವೀಕರಿಸಿದ್ದವು! ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಇದೂ ಒಂದು. ಮುಗ್ಧ ಹಕ್ಕಿಗಳು ಮನುಷ್ಯರಾದ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸದ ಕುರುಹು ಇದೆಂದು ಭಾವಿಸಿ ಸದಾ ಕೃತಜ್ಞಳಾಗಿರುತ್ತೇನೆ. ಶಿಥಿಲವಾದ ಗೂಡನ್ನು ಬಿಚ್ಚಿ ನೆನಪಿಗೆಂದು ಇಟ್ಟುಕೊಂಡೆವು.

***

    ಮುಂದೆ ಅನಿವಾರ‍್ಯ  ಪರಿಸ್ಥಿತಿಯಲ್ಲಿ ಪ್ಲಾಟೊಂದರಲ್ಲಿ ವಾಸಿಸಲು ಹೊರಟಾಗ ಅಲ್ಲಿಯೂ ಹಕ್ಕಿಗಳು ನಮ್ಮನ್ನು ಹಿಂಬಾಲಿಸಿ ಸಂಧಿಸುತ್ತವೆಂದು ನಾನು ಊಹಿಸಿರಲಿಲ್ಲ! ಆದರೆ ಮಣ್ಣಿನ ಸ್ಪರ್ಶ, ಮರಗಳ ಸೊಗಡು ಇಲ್ಲದ ಫ್ಲಾಟಿನ  ಮನೆಯಲ್ಲಿ ಸೂರಕ್ಕಿಗಳು ಬಂದು ದಿನಗಳನ್ನು ಹಗುರಗೊಳಿಸಿಬಿಟ್ಟವು! ಬಾಲ್ಕನಿಯಲ್ಲಿದ್ದ ಬಟ್ಟೆಯೊಣಗಿಸುವ ದಾರಕ್ಕೆ ಗೂಡು ಕಟ್ಟಿ ಮರಿಗಳನ್ನು ಪೊರೆದವು. ವಿಚಿತ್ರವೆಂದರೆ ಇಲ್ಲಿಯೂ ಕೂಡಾ ಖಾಲಿಯಾದ ಗೂಡು ತಿರಸ್ಕೃತಗೊಳ್ಳದೆ ಮತ್ತೆ ಮತ್ತೆ ಸೂರಕ್ಕಿಗಳು ಬಂದು ಅದರೊಳಗೆ ಹಾಸಿಗೆ ಮಾಡಿ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸಿಕೊಂಡು ಹೋದವು. ಹೀಗೆ ಒಂದು ವರ್ಷದಲ್ಲಿ ನಾಲ್ಕೈದು ಆವರ್ತನವಾದ ನಂತರ ಗೂಡು ಹರಿದು ಹೋಗಿ ಕಾಲು ಭಾಗ ಮಾತ್ರ ಉಳಿದುಕೊಂಡಿತು. ಆದರೂ ಬಿಡದೆ ಮತ್ತೊಂದು ಸೂರಕ್ಕಿ ಬಂದು ಅದೇ ಗೂಡನ್ನು ಪೂರ್ಣಗೊಳಿಸಿ ತನ್ನ ಜೊತೆಗಾತಿಯೊಂದಿಗೆ ಮರಿಗಳನ್ನು ಬೆಳೆಸಿ ಬಾನಿಗೆ ಹಾರಿಸಿತು! ಅಚ್ಚರಿಯೆಂದರೆ ನವೀಕರಣಗೊಂಡ ಈ ಹೊಸ ಗೂಡಿಗೆ ಮತ್ತೆ ಮತ್ತೆ ಹೊಸ ಜೋಡಿ ಬಂದು ಕುಟುಂಬ ಪೊರೆದವು. ನೀರವ ರಾತ್ರಿಗಳಲ್ಲಿ ಕಾವು ಕೊಡಲು ಗೂಡಿನಿಂದ ತಲೆ ಹೊರ ಹಾಕಿ ಕುಳಿತ ಹಕ್ಕಿ ಒಮ್ಮೆ ನನ್ನ ಮಗು ಎನಿಸಿದರೆ, ಇನ್ನೊಮ್ಮೆ ನಮ್ಮನ್ನು ಕಾಯುವ ನಿಸರ್ಗದ ಕಣ್ಣು ಅನ್ನಿಸುವುದು. ಇದಂತೂ  ನಾನು ಬರೆಯುವ ಕುರ್ಚಿಯಿಂದ, ನಿದ್ದೆ ಹೋಗುವ  ಮಂಚದಿಂದ ಬರೀ ಒಂದು  ಮಾರು ದೂರದಲ್ಲಿರುವ  ಗೂಡು. ಅಂದರೆ ಸೂರಕ್ಕಿ ಸಂಗಾತಿಗಳು ಸದಾ ನನ್ನ ಹತ್ತಿರ…..ತೀರಾ ಹತ್ತಿರ!

    ಈ ನಡುವೆ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ನಮ್ಮ ‘ಹಕ್ಕಿಮನೆ’ಯಲ್ಲಿ ಪಿಕಳಾರ (ಬುಲ್ ಬುಲ್)ಗಳು ಅಂಗಳದ ಕ್ರೋಟನ್ ಗಿಡದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವಾದರೂ;  ಬೆಕ್ಕೋ, ಹಾವೋ ತಿಂದು ಹಾಕಿದ್ದರಿಂದ ವ್ಯರ್ಥವಾಗಿತ್ತು. ಬಹುಶಃ ರಟ್ಟಿನ ಪೆಟ್ಟಿಗೆಯನ್ನು ನಾವು ಕಂಬಕ್ಕೆ ಎತ್ತರದಲ್ಲಿ ಕಟ್ಟಿದ್ದು ಈ ದೃಷ್ಟಿಯಿಂದ ಬಹಳ ಸಹಾಯವಾಯಿತು ಮತ್ತು ಹಕ್ಕಿಗಳಿಗೂ ಮೆಚ್ಚುಗೆಯಾಯಿತೆಂದು ಕಾಣುತ್ತದೆ! ಇನ್ನು, ನಮ್ಮ ಫ್ಲಾಟಿನ ಗೋಡೆಗಳ ಸಂದುಗೊಂದುಗಳಲ್ಲಿ ಪಾರಿವಾಳದ ನೆಲೆ, ಅವುಗಳ ಗುಟರ್‌ಗುಟರ್ ಸಂಗೀತ ಸದಾ ಸೆಳೆಯುತ್ತದೆ. ಬಾಲ್ಕನಿಯಲ್ಲಿ ನೀರು, ಕಾಳು, ಬಾಳೆಹಣ್ಣು ಇಡುವ ವ್ಯವಸ್ಥೆ ಮಾಡಿದ್ದೇವೆ. ಪಿಕಳಾರ, ಹೆಣ್ಣುಕೋಗಿಲೆ, ಕಾಗೆ, ಮೈನಾ, ಕದುಗನಹಕ್ಕಿ, ದರಲೆಹಕ್ಕಿ(ಸಾತ್ಭಾಯಿ)ಗಳು ಬಂದು, ತಿಂದು, ಮಿಂದು, ನೀರು ಕುಡಿದು ಹೋಗುತ್ತವೆ. ಒಂದು ಕಾಲಿಲ್ಲದ ಎರಡು ಕಾಗೆಗಳೂ ಕೂಡಾ ಆಗಾಗ ಆಗಮಿಸುತ್ತವೆ.‌

***

ಮೇಲಿನ ನನ್ನಅನುಭವದ  ಪ್ರಸಂಗಗಳಲ್ಲಿ ಬರುವ ಗುಬ್ಬಚ್ಚಿ, ಮಡಿವಾಳಹಕ್ಕಿ, ಮುನಿಯ, ಸೂರಕ್ಕಿ, ಪಿಕಳಾರ, ಮೈನಾ, ಕೋಗಿಲೆ, ಕಾಗೆ, ದರಲೆಹಕ್ಕಿ, ಪಾರಿವಾಳ ಮುಂತಾದುವೆಲ್ಲವೂ ಮನುಷ್ಯನ ಸುತ್ತಮುತ್ತ ವಾಸಿಸುವ ಹಕ್ಕಿಗಳು. ಮಾನವನ ದಿನಚರಿಯೊಂದಿಗೆ  ಇವುಗಳ ಬದುಕೂ ತಳುಕು ಹಾಕಿಕೊಂಡು ಬಿಟ್ಟಿದೆ! ಪೂರ್ಣಚಂದ್ರ ತೇಜಸ್ವಿಯವರು ಒಂದು ಕಡೆ ಗುಬ್ಬಚ್ಚಿಯನ್ನು ಉಲ್ಲೇಖಿಸುತ್ತಾ “ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು” ಎಂದು ಉದ್ಗರಿಸುತ್ತಾರೆ. ತಮ್ಮ ಈ ಸ್ವಭಾವದಿಂದಾಗಿ ಇಂತಹ ಹಕ್ಕಿಗಳು ಇಂದು ನೆಲೆ ಕಳೆದುಕೊಳ್ಳುತ್ತಿವೆ. ಗುಬ್ಬಚ್ಚಿಯ ದಾರುಣ ಕಥೆಯಂತೂ ನಮಗೆಲ್ಲರಿಗೂ ಗೊತ್ತೇ ಇದೆ. ನಾವು ಈಗಲೂ ಸುಮ್ಮನಿದ್ದರೆ ಅಳಿದುಳಿದ ಕೆಲ ಗುಬ್ಬಿಗಳೂ ಕಾಣೆಯಾಗುತ್ತವೆ ಮತ್ತು ಇತರ ಹಕ್ಕಿಗಳೂ ಗುಬ್ಬಚ್ಚಿಯಂತೇ ಸಂಕಟಕ್ಕೆ ಬೀಳುತ್ತವೆ.

ನಗರೀಕರಣ, ಆಧುನೀಕರಣ, ಜಾಗತೀಕರಣಗಳ ದೆಸೆಯಿಂದ ಯದ್ವಾತದ್ವ ಬದಲಾದ ಮಾನವನ ಬದುಕು ಇಡೀ ಪರಿಸರಕ್ಕೇ ಆಪತ್ತು ತಂದಿಟ್ಟಿದೆ. ಅದರಲ್ಲೂ ಮನುಷ್ಯನ ಸುತ್ತಮುತ್ತ ವಾಸಿಸುವ ಪ್ರಾಣಿ, ಪಕ್ಷಿಗಳು ನೇರ ಅಪಾಯಕ್ಕೆ ತೆರೆದುಕೊಂಡಿವೆ. ನಮ್ಮಅತಿಯಾಸೆ, ಕೊಳ್ಳುಬಾಕತನ, ʼಶುಚಿತ್ವʼದ ಕುರಿತಾದ ಎಡಬಿಡಂಗಿ ಆಲೋಚನೆಗಳು, ತೋರಿಕೆಯ ಆಧುನಿಕ ಜೀವನ ಮುಂತಾದವುಗಳ ಫಲವನ್ನು ಪಾಪದ ಈ ಹಕ್ಕಿಗಳು, ಪ್ರಾಣಿಗಳು ಅನುಭವಿಸುತ್ತವೆ. ನಿಜವೆಂದರೆ, ಇಂದು ಮನುಷ್ಯನ ಜೀವನ ಕ್ರಮವೇ ಅಮಾನವೀಯವಾಗಿದೆ. ಹಕ್ಕಿ ಪಕ್ಷಿ ಪ್ರಾಣಿಗಳ ಜೊತೆ ಸಹಜೀವನ ನಡೆಸುತ್ತ ಬಂದಿದ್ದ ನಮ್ಮ ಪೂರ್ವಿಕರ ಮಾದರಿಯನ್ನು ತ್ಯಜಿಸಿದ್ದೇವೆ. ಎಲ್ಲೂ ಒಂದು ಕಾಳು ಧಾನ್ಯ ಚೆಲ್ಲುವುದಿಲ್ಲ. ಮಿಕ್ಕ ಆಹಾರ, ನೀರು ಚರಂಡಿ ಸೇರಿ ಗಬ್ಬಾಗುತ್ತದೆ. ಮನೆಗಳು, ಕಟ್ಟಡಗಳೆಲ್ಲ ಕಾಂಕ್ರೀಟ್ ಮಯವಾಗಿವೆ. ಮೊಬೈಲ್ ಮುಂತಾದ ತಂತ್ರಜ್ಞಾನದ  ಮಿತಿಮೀರಿದ ಬಳಕೆ ಪ್ರಾಣಿ-ಪಕ್ಷಿಗಳಿಗೆ ನೂರಾರು ಸಮಸ್ಯೆಯೊಡ್ಡಿದೆ. ಕಾಡು, ಗಿಡ, ಮರ, ಪೊದೆಗಳು ಮಂಗಮಾಯವಾಗಿವೆ. ಕೊನೆಗೆ ಹಕ್ಕಿಗೊಂದು ನಾರು, ಬೇರು, ಕಡ್ಡಿ, ಎಲೆ, ಜುಂಗು, ಹೂವು ಸಿಗುವುದೂ ದುಸ್ತರವಾಗಿದೆ! ನಾವು ಮಾಡಿದ ಸಾವಿರಾರು ತಪ್ಪುಗಳಿಗೆ ಹಕ್ಕಿಗಳು, ಬೀದಿಗೆ ತಳ್ಳಲ್ಪಟ್ಟ ನಾಯಿ-ಬೆಕ್ಕುಗಳು ಶಿಕ್ಷೆಯನುಭವಿಸುತ್ತಿವೆ!

***

ನಮ್ಮೂರಿನ ಹತ್ತಿರ ‘ಕಲ್‌ಮರಿಗೆ’ ಎಂಬ ಹೆಸರಿನ ಊರೊಂದಿದೆ. ಕಲ್ಲಿನ ಮರಿಗೆ ಎಂದರೆ ಕಲ್ಲಿನಿಂದ ಮಾಡಿದ ನೀರು ತುಂಬಿಸಿಡುವ ತೊಟ್ಟಿ. ಹಳೆಯ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆಂದು ಅಲ್ಲಲ್ಲಿ ಇಂತಹ ಮರಿಗೆಗಳಲ್ಲಿ ನೀರು ತುಂಬಿಸಿಡುವ ವ್ಯವಸ್ಥೆಯಿತ್ತು. ಇದಕ್ಕೆ ಸಾಕ್ಷಿಯಾಗಿ ಇವತ್ತು ಈ ಅರ್ಥ ಸೂಚಿಸುವ ಸುಮಾರು ಊರು, ಸ್ಥಳಗಳು ಉಳಿದುಕೊಂಡಿವೆ. ಆದರೆ ಪ್ರಸ್ತುತ ನಮ್ಮ ಪೇಟೆಗಳು ಎತ್ತ ಮುಖ ‘ಓಡುತ್ತಿವೆಯೋ’ ತಿಳಿಯದು! ಧಾವಂತ, ಆತುರ, ಗಡಿಬಿಡಿ, ಅಮಾನವೀಯತೆ, ಸ್ವಾರ್ಥಪರತೆ, ಲೋಲುಪತೆಯೇ ಪೇಟೆಯ ಗುರುತೆಂಬಂತಾಗಿದೆ. ಈ  ಓಟ ಮಾನವರಾದ ನಮ್ಮನ್ನೂ, ನುಂಗಿ ನೊಣೆಯುವ ದಿನ ಬಹುದೂರವೇನಿಲ್ಲ ಎಂದು ಪರಿಸರತಜ್ಞರು, ಚಿಂತಕರು ನೆನಪಿಸುತ್ತಲೇಇದ್ದಾರೆ…!

     ಇಂಥಹ ಕಾಲದಲ್ಲಿ ಸುಮ್ಮನೇ ಮಾತು, ಬರೆಹ, ಭಾಷಣಗಳಲ್ಲಿ ಕಳೆದುಹೋಗದೆ ನಾವೊಂದು ಖುಷಿಯ ಕೆಲಸ ಮಾಡೋಣ. ಈ ಬೇಸಿಗೆಯಲ್ಲಿ ಮತ್ತು ಯಾವತ್ತೂ ಪ್ರಾಣಿ, ಪಕ್ಷಿಗಳಿಗೆ, ನಾಯಿ, ಬೆಕ್ಕು, ದನಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನೀರು ಕಾಳುಕಡಿಯ ವ್ಯವಸ್ಥೆಯನ್ನು ನಮ್ಮ ಮನೆಗಳಲ್ಲಿ, ನಾವಿರುವ ಪೇಟೆ, ಪಟ್ಟಣಗಳಲ್ಲಿ ಮಾಡುವ… ಸಾಧ್ಯವಾದರೆ ಹಕ್ಕಿಗಳಿಗೆ ಗೂಡುಗಳನ್ನೂ ಇಡುವ. ಮನಸ್ಸು ಮಾಡಿದರೆ  ಎಲ್ಲವೂ ಸಾಧ್ಯ.  ಸೌಂದರ‍್ಯಕ್ಕೆ ಹೆಸರಾದ ಹಕ್ಕಿಗಳನ್ನೊಮ್ಮೆ ನೋಡಿ; ಸರ್ವಾಂಗ ಚಲುವರಾದ ಅವುಗಳು ನಿಸರ್ಗವನ್ನು ಉಳಿಸಿ, ಬೆಳೆಸುತ್ತವೆ. ಆದರೆ ಮನುಷ್ಯರಾದ ನಾವು ??

************************

ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

Leave a Reply

Back To Top