Category: ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ […]

ಧಾರಾವಾಹಿ ಆವರ್ತನ ಅದ್ಯಾಯ-38 ಮಸಣದಗುಡ್ಡೆಯ ಎರಡನೆಯ ಬನ ಜೀರ್ಣೋದ್ಧಾರದ ನಂತರ ಗುರೂಜಿಯವರ ನಕ್ಷತ್ರವೇ ಬದಲಾಗಿಬಿಟ್ಟಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಸಂಪಾದನೆ ದುಪ್ಪಟ್ಟಾಗಿ ಕಷ್ಟಕಾರ್ಪಣ್ಯಗಳೆಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ತೂರಿ ಹೋಗಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು. ಅವರೀಗ ತಮ್ಮ ಜ್ಯೋತಿಷ್ಯ ವಿಭಾಗವನ್ನೂ, ಧಾರ್ಮಿಕ ಕೈಂಕರ್ಯಗಳ ವ್ಯವಹಾರವನ್ನೂ ಅಪ್ಪನ ಹಳೆಯ ಕೋಣೆಯಿಂದ ಹೊಸದಾಗಿ ನಿರ್ಮಿಸಿದ ವಿಶಾಲ ಪಡಸಾಲೆಯ ಹವಾನಿಯಂತ್ರಿತ ಕೊಠಡಿಗೆ ವರ್ಗಾಯಿಸಿದ್ದರು. ಆ ಕಛೇರಿಗೂ ಮತ್ತು ವಠಾರದ ಕೆಲವು ಕಡೆಗಳಿಗೂ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಆ […]

ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು  ಅಳುತ್ತಾಳೆ.    ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ!    ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು.                                                                                         *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು.    ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು.    ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು.    ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ […]

ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.

ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? […]

ಧಾರಾವಾಹಿ ಆವರ್ತನ ಅದ್ಯಾಯ-34                                ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ […]

ಧಾರಾವಾಹಿ ಆವರ್ತನ ಅದ್ಯಾಯ-33 ಆಸ್ಪತ್ರೆಯಲ್ಲಿ ಒಂದು ವಾರ ತೀವ್ರ ನಿಗಾಘಟಕದಲ್ಲಿ ನರಳಿದ ಶ್ರೀನಿವಾಸ ಕೊನೆಗೂ ಬದುಕುಳಿದ. ಆದರೆ ಈ ಘಟನೆಯಿಂದ ಪ್ರವೀಣನ ನಾಗದೋಷದ ಭೀತಿಯು ದುಪ್ಪಟ್ಟಾಗಿ ಪ್ರಜ್ವಲಿಸತೊಡಗಿತು. ತನ್ನ ಅನಾಚಾರದಿಂದಲೇ ಇವೆಲ್ಲ ಅನಾಹುತಗಳು ನಡೆಯುತ್ತಿರುವುದು! ಎಂದು ಭಾವಿಸಿದವನು ಇನ್ನು ತಡಮಾಡಬಾರದು. ತನ್ನ ಜೀವನ ಸರ್ವನಾಶ ಆಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶಂಕರನ ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಸಂಗತಿಯೂ ಅವನಿಗೆ ತಿಳಿಯಿತು. ಕೂಡಲೇ ಹಳೆಯ ಗೆಳೆಯನನ್ನು ಹೊಸ ಆತ್ಮೀಯತೆಯಿಂದ ಅರಸಿ ಹೋಗಿ ಭೇಟಿಯಾದ. ಶಂಕರನೂ ಪ್ರವೀಣನನ್ನು ಆಪ್ತತೆಯಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದ. ಆದರೆ ಅವನ ಮೂತ್ರ ಪ್ರಸಂಗ, ಚರ್ಮರೋಗ ಮತ್ತು ಹಾವಿನ ಕಡಿತದ ವಿಷಯವನ್ನು ಕೇಳಿದವನು ‘ಇದು ಖಂಡಿತಾ ನಾಗದೋಷದ ಪ್ರತಿಫಲವೇ ಮಾರಾಯಾ…! ಇಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ!’ ಎಂದು ಆತಂಕ ವ್ಯಕ್ತಪಡಿಸಿದ. ‘ಅಲ್ವಾ ಅಲ್ವಾ ಶಂಕರಣ್ಣಾ…? ನನಗೆ ಆವತ್ತು ಸುರೇಶ ಹೇಳಿದಾಗಲೇ ಅದು ಗೊತ್ತಾಗಿತ್ತು. ಆದರೆ ನನ್ನ ಮನೆಯವಳೂ, ಆ ಚರ್ಮರೋಗದ ಡಾಕ್ಟ್ರೂ ಹೇಳುವುದು ನಾನು ಸರಿಯಾಗಿ ಸ್ನಾನನೇ ಮಾಡುವುದಿಲ್ಲವಂತೆ. ಅದರಿಂದ ಹುಳಕಜ್ಜಿ ಬಂದಿದೆಯಂತೆ! ಹಾಗಾದರೆ ನನ್ನ ಮೈದುನನಿಗೆ ಹಾವು ಯಾಕೆ ಕಚ್ಚಿತು? ಅದೂ ನನ್ನ ಅಂಗಡಿಯ ಒಳಗೆಯೇ ಬಂದು ಕಚ್ಚಬೇಕಿತ್ತಾ…!’ ಎಂದು ಭಯದಿಂದ ಕಣ್ಣುಬಾಯಿ ಬಿಟ್ಟುಕೊಂಡು ಅಂದವನು, ‘ನನಗೀಗ ನೀವು ಹೇಳಿದ ಮೇಲೆ ಧೈರ್ಯ ಬಂತು ಶಂಕರಣ್ಣಾ…ಆದ್ದರಿಂದ ನೀವೇ ಇದಕ್ಕೊಂದು ಪರಿಹಾರವನ್ನೂ ಸೂಚಿಸಬೇಕು!’ ಎಂದು ಕೇಳಿಕೊಂಡ. ‘ನೀನೇನೂ ಹೆದರಬೇಡ ಮಾರಾಯಾ ನಾನಿದ್ದೇನೆ. ಎಲ್ಲಾ ಸಮ ಮಾಡುವ ನಡೀ…!’ ಎಂದು ಶಂಕರ ಗತ್ತಿನಿಂದ ಹೇಳಿದವನು ಕೂಡಲೇ ಅವನನ್ನು ಏಕನಾಥ ಗುರೂಜಿಯವರ ಹತ್ತಿರ ಕರೆದೊಯ್ದ.    ಆ ಸಮಯದಲ್ಲಿ ಗುರೂಜಿಯವರು ತಮ್ಮ ಹಳೆಯ ಮನೆಯ ಒಂದು ಪಾಶ್ರ್ವವನ್ನು ಒಡೆದು, ಮುಂದೆ ತಮ್ಮಲ್ಲಿ ನಿರಂತರ ನಡೆಯಲಿರುವ ವಿವಿಧ ಪೂಜಾ ಕೈಂಕರ್ಯಗಳಿಗೆ ಸಹಾಯಕವಾಗುವಂಥ ವಿಶಾಲವಾದ ಆಧುನಿಕ ಪಡಸಾಲೆಯೊಂದನ್ನು ನಿರ್ಮಿಸತೊಡಗಿದ್ದರು. ಅತ್ತ ಶಂಕರನ ಕಾರು ಬಂದು ತಮ್ಮ ಮನೆಯೆದುರು ನಿಂತುದನ್ನೂ, ಅವನೊಂದಿಗೆ ಶ್ರೀಮಂತನೊಬ್ಬ ಇಳಿದು ಬರುತ್ತಿರುವುದನ್ನೂ ಮತ್ತು ಅವನ ಮುಖದಲ್ಲಿದ್ದ ಕಳವಳವನ್ನೂ ಗ್ರಹಿಸಿದವರಿಗೆ ತಮ್ಮ ಪಡಸಾಲೆಯ ಕೆಲಸವು ನಿರ್ವಿಘ್ನವಾಗಿ ಸಮಾಪ್ತಿಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದೆನಿಸಿತು. ಆದ್ದರಿಂದ ಮಂದಹಾಸ ಬೀರುತ್ತ ಇಬ್ಬರನ್ನೂ ಬರಮಾಡಿಕೊಂಡು ತಮ್ಮ ಜ್ಯೋತಿಷ್ಯದ ಕೋಣೆಗೆ ಕರೆದೊಯ್ದರು.    ಶಂಕರ ತನ್ನ ಗೆಳೆಯನ ವ್ಯವಹಾರ ಮತ್ತು ಅವನ ಪ್ರಸ್ತುತ ಸಮಸ್ಯೆಯನ್ನು ಗುರೂಜಿಗೆ ಹಳೆಯ ಸಲುಗೆಯಿಂದ ವಿವರಿಸಿದ. ಆದರೆ ಅವರು ಅವನ ಸ್ನೇಹದತ್ತ ಗಮನಕೊಡದೆ ಅವನ ಮಾತುಗಳನ್ನು ಮಾತ್ರವೇ ಗಂಭೀರರಾಗಿ ಕೇಳಿಸಿಕೊಂಡರು ಹಾಗೂ ಕ್ಷಣಹೊತ್ತು ಕಣ್ಣುಮುಚ್ಚಿ ಧ್ಯಾನಸ್ಥರಂತೆ ಕುಳಿತು ಪ್ರವೀಣನ ಸಮಸ್ಯೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮಥಿಸಿದರು. ಗುರೂಜಿಯ ಗಾಂಭೀರ್ಯವನ್ನೂ ಅವರು ತನಗಾಗಿ ಧ್ಯಾನಿಸುತ್ತಿದ್ದ ರೀತಿಯನ್ನೂ ಕಂಡ ಪ್ರವೀಣನಿಗೆ ಅರ್ಧಕ್ಕರ್ಧ ಭಯ ಹೋಗಿಬಿಟ್ಟಿತು. ಆದರೆ ಅತ್ತ ಗುರೂಜಿಯ ಯೋಚನಾಲಹರಿ ಈ ರೀತಿ ಸಾಗುತ್ತಿತ್ತು, ‘ಓ ಪರಮಾತ್ಮಾ… ಕೊನೆಗೂ ನೀನು ನಮ್ಮ ಜೀವನಕ್ಕೊಂದು ಭದ್ರ ನೆಲೆಯನ್ನು ಕರುಣಿಸಿಬಿಟ್ಟೆ. ಅದಕ್ಕಾಗಿ ಅನಂತಾನಂತ ಕೃತಜ್ಞತೆಗಳು ದೇವಾ! ಹಾಗೆಯೇ ಈಗ ನಮ್ಮಲ್ಲಿಗೆ ನೀನು ಕಳುಹಿಸಿರುವ ಈ ವ್ಯವಹಾರವೂ ಸಾಂಗವಾಗಿ ನೆರವೇರುವಂಥ ಶಕ್ತಿಯನ್ನು ದಯಪಾಲಿಸು ಪ್ರಭುವೇ!’ಎಂದು ಪ್ರಾರ್ಥಿಸಿದರು. ನಂತರ ನಿಧಾನವಾಗಿ ಕಣ್ಣು ತೆರೆದು ಪ್ರವೀಣನನ್ನು ದಿಟ್ಟಿಸಿದರು. ಆಗ ಅವನು ಅವರನ್ನು ದೈನ್ಯದಿಂದ ನೋಡಿದ. ‘ಹೌದು ಪ್ರವೀಣರೇ, ನೀವು ಮಾಡಿರುವುದು ಮಹಾ ಅಪರಾಧವೇ ಆಗಿದೆ! ಅದರಲ್ಲಿ ಎರಡು ಮಾತಿಲ್ಲ’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಪ್ರವೀಣ ಭಯದಿಂದ ಇನ್ನಷ್ಟು ಇಳಿದುಹೋದ. ಅದನ್ನು ಗಮನಿಸಿದ ಗುರೂಜಿ, ‘ಆದರೂ ನೀವಿನ್ನು ಹೆದರಬೇಕಾಗಿಲ್ಲ. ನಿಮ್ಮ ಆ ಪಾಪಕೃತ್ಯವನ್ನು ಸರಿಪಡಿಸುವ ಮಾರ್ಗ ನಮ್ಮಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧರಿದ್ದೀರಾ?’ ಎಂದು ಮುಖದಲ್ಲಿ ನಿರ್ಭಾವ ತೋರಿಸುತ್ತ ಕೇಳಿದರು. ಆದರೂ ಅವರ ಕೆಳದುಟಿಯು ಸಣ್ಣಗೆ ಕಂಪಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ‘ಆಯ್ತು ಗುರೂಜಿ. ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಒಟ್ಟಾರೆ ನನ್ನ ಸಮಸ್ಯೆಯನ್ನು ನಿವಾರಿಸಿಕೊಡಬೇಕು ತಾವು!’ ಎಂದ ಪ್ರವೀಣ ನಮ್ರನಾಗಿ ಕೇಳಿಕೊಂಡ. ಆಗ ಗುರೂಜಿಯ ಮುಖದಲ್ಲಿ ನಗು ಮೂಡಿತು.  ‘ಆಯ್ತು, ಸರಿಮಾಡಿ ಕೊಡುವ. ಆದರೆ ಅದಕ್ಕಿಂತ ಮೊದಲು ಆ ಜಾಗವನ್ನು ನಾವೊಮ್ಮೆ ನೋಡಬೇಕಲ್ಲಾ…?’ ‘ಆಯ್ತು ಗುರೂಜಿ. ನಿಮಗೆ ಪುರುಸೋತ್ತಿದ್ದರೆ ಈಗಲೇ ಹೋಗಿ ನೋಡಿ ಬರಬಹುದು!’ ಎಂದ ಪ್ರವೀಣನು, ಶಂಕರನ ಮುಖ ನೋಡುತ್ತ, ‘ಹೇಗೇ…ಹೋಗಿ ಬರುವ ಅಲ್ಲವಾ…?’ ಎಂದು ಕಣ್ಣಿನಲ್ಲೇ ಪ್ರಶ್ನಿಸಿದ.  ಆದರೆ ಅತ್ತ, ‘ಈಗಲೇ ಹೋಗುವುದಾ…?’ ಎಂದ ಗುರೂಜಿ ಬೇಕೆಂದೇ ಕೆಲವುಕ್ಷಣ ಯೋಚಿಸುವಂತೆ ನಟಿಸಿದವರು ನಂತರ, ‘ಸರಿ. ಹೊರಡುವ…!’ ಎಂದರು. ‘ನೋಡಮ್ಮಾ ದೇವಕೀ… ಎಲ್ಲಿದ್ದೀಯೇ?’ ಎಂದು ಹೆಂಡತಿಯನ್ನು ಕೂಗಿ ಕರೆದರು. ಅವಳು ಅಡುಗೆ ಕೋಣೆಯಿಂದಲೇ, ‘ಏನೂಂದ್ರೆ….?’ ಎಂದಳು. ‘ಪಡಸಾಲೆಯ ಕೆಲಸವನ್ನು ಸ್ವಲ್ಪ ಗಮನಿಸುತ್ತಿರು. ನಾವು ಹೊರಗೆ ಹೋಗಿ ಬರುತ್ತೇವೆ…’ ಎಂದು ಸೂಚಿಸಿದರು. ‘ಆಯ್ತು, ಹೋಗಿ ಬನ್ನಿ…!’ ಎಂಬ ಅವಳ ಉತ್ತರ ಸಿಗುತ್ತಲೇ ಎದ್ದು ಅವರೊಂದಿಗೆ ಹೊರಟರು.                                                                                    *** ಗುರೂಜಿ ಮತ್ತು ಶಂಕರನೊಂದಿಗೆ ಪ್ರವೀಣ ಮಸಣದಗುಡ್ಡೆಗೆ ಬಂದವನು ಅಲ್ಲಿಂದ ಸ್ವಲ್ಪ ದೂರವಿದ್ದ ಸುರೇಶನ ಸರಕಾರಿ ಕಾಲೋನಿಗೆ ಅವರನ್ನು ಕರೆದೊಯ್ದ. ಅಲ್ಲಿನ ಅಶ್ವತ್ಥ ಮರದ ಕಟ್ಟೆಯೊಂದಲ್ಲಿ ಗುರೂಜಿಯವರನ್ನು ಕುಳ್ಳಿರಿಸಿದವನು ಶಂಕರನನೊಂದಿಗೆ ಸುರೇಶನ ಮನೆಯತ್ತ ಹೋದ. ಸುರೇಶ ಆಹೊತ್ತು ತನ್ನ ಬಡಾವಣೆಯ ಕೊನೆಯ ಸಾಲಿನ ಹರಕು ಮುರುಕು ಮನೆಯೊಂದರಲ್ಲಿ ಕುಡಿದು ಮತ್ತನಾಗಿ ಮಲಗಿದ್ದ. ಪ್ರವೀಣ ಮತ್ತು ಶಂಕರನ ಚೆನ್ನಾಗಿ ಪರಿಚಯವಿದ್ದ ಅಲ್ಲಿನವರಲ್ಲಿ ಒಂದಿಬ್ಬರು ಗಂಡಸರು ಅವರನ್ನು ಕಂಡು ದಡಬಡನೆದ್ದು ಬಂದು ಅವರಿಂದ ವಿಷಯ ತಿಳಿದುಕೊಂಡವರು ಕೂಡಲೇ ಸುರೇಶನನ್ನು ಎಬ್ಬಿಸಲು ಅವನ ಮನೆಯೊಳಗೆ ನುಗ್ಗಿದರು. ಆದರೆ ಸುರೇಶ ಏಳುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಲ್ಲೊಬ್ಬ ಸುರೇಶನ ನೆತ್ತಿಗೆ ಒಂದು ಚೊಂಬು ತಣ್ಣೀರು ಸುರಿದು ಎಬ್ಬಿಸಬೇಕಾಯಿತು. ಅದರಿಂದ ಸುರೇಶ ಎಚ್ಚರಗೊಂಡು ಕೆಂಡಾಮಂಡಲನಾದವನು ಇಬ್ಬರಿಗೂ ಕೆಟ್ಟಕೆಟ್ಟ ಪದಗಳಿಂದ  ಬಯ್ಯುತ್ತ ಎದ್ದು ಕುಳಿತ. ಆದರೆ ಅವರು ಅವನ ಅಂಥ ಬೈಗುಳವನ್ನು ಕೇಳಿ ತಮಾಷೆಯಾಗಿ ನಗುತ್ತ ಪ್ರವೀಣ, ಶಂಕರರು ಬಂದಿರುವುದನ್ನು ಅವನಿಗೆ ತಿಳಿಸಿದರು. ಅವರ ಹೆಸರು ಕಿವಿಗೆ ಬೀಳುತ್ತಲೇ ಸುರೇಶ ತಟ್ಟನೆ ನೆಟ್ಟಗಾದ. ‘ಓಹೋ, ಆ ಬೇವರ್ಸಿ ಬಂದಿದ್ದಾನಾ…? ಅಂವ ನನ್ನನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅಂತ ಗೊತ್ತಿತ್ತು ಬಿಡಿ!’ ಎಂದು ನಗುತ್ತ ಎದ್ದು ತೂರಾಡುತ್ತ ಹೊರಗೆ ಬಂದ. ಅಲ್ಲಿ ತನ್ನ ವಠಾರದವರೆಲ್ಲರೂ ತಂತಮ್ಮ ಹೊಸ್ತಿಲು, ಅಂಗಳದಲ್ಲಿ ನಿಂತುಕೊಂಡು ತನ್ನತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಕಂಡ ಸುರೇಶ ತನ್ನ ಮಹತ್ವವನ್ನು ಸಾರುವ ಉದ್ದೇಶದಲ್ಲಿ,‘ನಮಸ್ಕಾರ ಪ್ರವೀಣಣ್ಣ… ಏನು ವಿಷಯ ಮಾರಾಯ್ರೇ…?’ಎಂದು ಸಂಗತಿ ತನಗೆ ಗೊತ್ತಿದ್ದರೂ ಜೋರಿನಿಂದ ಪ್ರಶ್ನಿಸಿದ. ಅವನ ಅಹಂಕಾರದ ಮಾತುಗಳನ್ನು ಕೇಳಿದ ಪ್ರವೀಣ, ಶಂಕರರಿಬ್ಬರಿಗೂ ಕೆಟ್ಟ ಕೋಪ ಬಂತು. ಆದರೆ ಈ ಸಮಯದಲ್ಲಿ ತಾಳ್ಮೆಗೆಟ್ಟರೆ ಕೆಲಸ ಕೆಡುವುದೆಂದು ವಿವೇಕ ಎಚ್ಚರಿಸಿತು. ‘ಏನಿಲ್ಲ ಮಾರಾಯಾ ನಮ್ಮ ಗುರೂಜಿಯವರು ಬಂದಿದ್ದಾರೆ. ಮೊನ್ನೆ ನೀನು ತೋರಿಸಿದ ನಾಗನ ಕಲ್ಲಿದ್ದ ಆ ಜಾಗ ಮತ್ತು ಅದರ ಕಥೆಯನ್ನು ಸ್ವಲ್ಪ ಅವರಿಗೆ ಹೇಳಬೇಕಿತ್ತಲ್ಲವಾ…?’ ಎಂದು ಪ್ರವೀಣ, ‘ಈಗಲೇ ಹೊರಡು…!’ ಎಂಬಂಥ ಭಾವದಿಂದ ಆಜ್ಞಾಪಿಸಿದ. ‘ಅರೇ, ಅದಕ್ಕೇನಂತೆ ಹೋಗುವ. ನಡೆಯಿರಿ!’ ಎಂದು ಸುರೇಶ ಅವರಿಗಿಂತ ಮುಂದೆ ನಡೆದವನು ತಟ್ಟನೆ ನಿಂತು,‘ಆದರೆ ಪ್ರವೀಣಣ್ಣ ನನಗೀಗ ಸ್ವಲ್ಪ ಎದುರು ಹಾಕದೆ (ಸಾರಾಯಿ ಕುಡಿಯದೆ) ಕೈಕಾಲು ಅಲ್ಲಾಡುವುದಿಲ್ಲ ನೋಡಿ. ಆಗ ಸ್ವಲ್ಪ ಕುಡಿದು ಮಲಗಿದ್ದೆ. ಆದರೆ ಈ ದರ್ವೇಶಿಗಳಿದ್ದಾರಲ್ಲ…ಇವರು, ನೀವು ಬಂದ ಸುದ್ದಿಯನ್ನು ಹೇಳುವ ಗಡಿಬಿಡಿಯಲ್ಲಿ ನನ್ನ ಮಂಡೆಗೆ ಸಮಾ ನೀರು ಸುರಿದು ಎಬ್ಬಿಸಿ ಎಲ್ಲಾ ಹಾಳು ಮಾಡಿಬಿಟ್ಟರು!’ಎಂದು ಆ ಇಬ್ಬರತ್ತ ಕೋಪದಿಂದ ದಿಟ್ಟಿಸುತ್ತ ಹೇಳಿದ. ಆದರೆ ಅವರು ಆಗಲೂ ತಮಾಷೆಯಿಂದ ನಗುತ್ತ ನಿಂತಿದ್ದರು. ‘ಆಯ್ತು, ಆಯ್ತು ಮಾರಾಯಾ. ಸ್ವಲ್ಪವೇನು ಕೆಲಸವಾದ ಮೇಲೆ ಇಡೀ ಬಾಟಲಿಯನ್ನೇ ಕೊಡಿಸುತ್ತೇನೆ. ಕುಡಿದು ಬಿದ್ದು ಸಾಯಿ ಅತ್ಲಾಗೆ. ಈಗ ಮೊದಲು ನಡೆ!’ ಎಂದು ಪ್ರವೀಣ ತನ್ನ ಕೋಪವನ್ನು ತಮಾಷೆಯೊಂದಿಗೆ ಬೆರೆಸಿ ತೋರಿಸಿದ.‘ಹಾಗಾದರೆ ಸರಿ ಹೋಗುವ…!’ ಎಂದು ಸುರೇಶ ತಾಳತಪ್ಪಿದ ಹೆಜ್ಜೆಗಳನ್ನಿಡುತ್ತ ಮುಂದೆ ನಡೆದ.    ಸ್ವಲ್ಪಹೊತ್ತಿನಲ್ಲಿ ಸುರೇಶ ಗುರೂಜಿಯವರನ್ನು ಅಲ್ಲಿನ ಕುರುಚಲು ಹಾಡಿಯತ್ತ ಕರೆದುಕೊಂಡು ಹೋಗಿ ಆ ಪೊದೆಯನ್ನು ತೋರಿಸಿದ. ಪ್ರವೀಣನಿಗೆ ಮೂತ್ರ ಹುಯ್ಯಲು ಆ ಸ್ಥಳವು ಬಹಳ ಇಷ್ಟವಾಗಿದ್ದುದರಿಂದ ಆ ಪರಿಸರವಿಡೀ ಗಬ್ಬು ವಾಸನೆ ಬೀರುತ್ತಿತ್ತು. ಗುರೂಜಿಯವರು ಕುತೂಹಲದಿಂದ ಅದರತ್ತ ಹೋದವರಿಗೆ ಒಮ್ಮೆಲೇ ವಾಂತಿ ಬಂದಂತಾಯಿತು. ಆದರೂ ಮೂಗು ಮುಚ್ಚಿಕೊಂಡು ಆ ಜಾಗವನ್ನೂ ಅಲ್ಲಿನ ಕಲ್ಲುಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸತೊಡಗಿದರು. ಆದರೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಉಸಿರುಗಟ್ಟಿತು. ತಟ್ಟನೆ ಈಚೆಗೆ ಧಾವಿಸಿ ಬಂದವರು, ‘ಛೇ, ಛೇ! ಎಂಥದಿದು ಪ್ರವೀಣರೇ… ಎಷ್ಟು ವರ್ಷಗಳಿಂದ ಇಲ್ಲಿ ಗಲೀಜು ಮಾಡುತ್ತಿದ್ದೀರಿ…? ಈ ಜಾಗವಿಡೀ ಸರ್ಕಾರಿ ಪಾಯಿಖಾನೆಯ ಥರಾ ನಾರುತ್ತಿದೆಯಲ್ಲ. ಅಪಚಾರ ಅಪಚಾರ…!’ ಎಂದು ಗೊಣಗಿದರು. ಅಷ್ಟು ಕೇಳಿದ ಪ್ರವೀಣನಿಗೆ ಭಯ, ಅವಮಾನವೆಲ್ಲವೂ ಒಟ್ಟೊಟ್ಟಿಗಾಯಿತು. ಪೆಚ್ಚು ನಗುತ್ತ ನಿಂತುಕೊಂಡ. ಗುರೂಜಿಯವರು ಆ ಪೊದೆಯ ಸುತ್ತಮುತ್ತ ದಟ್ಟ ಮರಗಳಿಂದ ತುಂಬಿದ ಪ್ರದೇಶವೊಂದನ್ನು ಮೂಗು ಮುಚ್ಚಿಕೊಂಡೇ ಪರೀಕ್ಷಿಸುತ್ತ ಸ್ವಲ್ಪಹೊತ್ತು ಸುತ್ತಾಡಿದರು. ಅಲ್ಲೊಂದು ಕಡೆ ವಿಶಾಲವಾದ ಮನೆಯಿದ್ದು ಈಗ ಅದರ ನಾಮಾಶೇಷ ಮಾತ್ರವೇ ಉಳಿದಿದ್ದುದು ಕಾಣಿಸುತ್ತಿತ್ತು. ಆದ್ದರಿಂದ ಈ ಬನವೂ ಅದಕ್ಕೆ ಸಂಬಂಧಿಸಿದ್ದು ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಮತ್ತೊಮ್ಮೆ ಅವೆಲ್ಲವನ್ನೂ ಪರಿಶೀಲಿಸಿ ಮುಂದಿನ ಕಾರ್ಯಚರಣೆ ಏನೆಂಬುದರ ಕುರಿತು ಅಲ್ಲಿಯೇ ನಿರ್ಧರಿಸಿಬಿಟ್ಟರು. ಈಗ ಸುರೇಶ ಮಾತನಾಡಿ,‘ಆ ಜಾಗದ ವಾರಸುದಾರರು ಈಗ ಇಲ್ಲಿ ಸುತ್ತಮುತ್ತ ಯಾರು ಇಲ್ಲ. ಜಾಗವು ಸರಕಾರದ ಸ್ವಾಧೀನದಲ್ಲಿದೆ! ಎಂದ. ಗುರೂಜಿ ಅವನ ಹೇಳಿಕೆಯನ್ನು ಕೇಳಿಸಿಕೊಂಡರಾದರೂ ಅವರಿಗೆ ಅದರಲ್ಲಿ ವಿಶ್ವಾಸ ಬರಲಿಲ್ಲ. ಆದ್ದರಿಂದ ಆ ಕುರಿತು ಸತ್ಯವನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪ್ರವೀಣ ಮತ್ತು ಶಂಕರನಿಗೆ ವಹಿಸಲಿಚ್ಛಿಸಿದವರು,‘ನೋಡಿ ಪ್ರವೀಣರೇ, ನೀವಿನ್ನು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಇಲ್ಲಿನ ಸಂಗತಿ ಏನೆಂಬುದು ನಮಗೆ ಸ್ಪಷ್ಟವಾಗಿದೆ. ಅವೆಲ್ಲವನ್ನೂ ಸುಸೂತ್ರವಾಗಿ ಪರಿಹರಿಸಿಕೊಡುವ ಜವಾಬ್ದಾರಿ ನಮ್ಮದು. ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತದೆ. ನೀವು ಕೂಡಲೇ ಆ ವ್ಯವಸ್ಥೆಯನ್ನು ಮಾಡಿಕೊಳ್ಳಿ ಮತ್ತು ಈ ಸ್ಥಳಕ್ಕೆ ಸಂಬಂಧಪಟ್ಟು ನಾವು ಹೇಳುವ ಕೆಲವು ಮುಖ್ಯ ವಿಚಾರಗಳನ್ನೂ ತಿಳಿದುಕೊಳ್ಳುವ ಕೆಲಸವನ್ನು ನೀವಿಬ್ಬರೂ ಮಾಡಬೇಕಾಗುತ್ತದೆ. ಎಷ್ಟು ಬೇಗ ಆ ಮಾಹಿತಿಯನ್ನು ತಂದು ನಮಗೆ ಒಪ್ಪಿಸುತ್ತೀರೋ ಅಷ್ಟೇ ಬೇಗ ನಿಮ್ಮ ಸಮಸ್ಯೆಯನ್ನೂ ನಿವಾರಿಸಿಕೊಡುತ್ತೇವೆ!’ ಎಂದರು ಗಂಭೀರವಾಗಿ. ‘ಹಣದ ವ್ಯವಸ್ಥೆ ಮಾಡಿಕೊಳ್ಳಿ…!’ಎಂದಾಕ್ಷಣ ಪ್ರವೀಣ ಸ್ವಲ್ಪ ಅಶಾಂತನಾದ. ಅದನ್ನು ಗಮನಿಸಿದ ಶಂಕರ,‘ಅದರ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದು ಮಾರಾಯಾ ಸುಮ್ಮನಿರು…!’ ಎಂದು ಕಣ್ಣಿನಲ್ಲೇ ಅವನನ್ನು ಸಮಾಧಾನಿಸಿದ.    ಗುರೂಜಿಯ ಆಜ್ಞೆಯಂತೆ ಗೆಳೆಯರಿಬ್ಬರು ಕೆಲವೇ ದಿನದೊಳಗೆ ಆ ಬನದ ಚರಿತ್ರೆಯನ್ನು ತಿಳಿದುಕೊಂಡು ಬಂದು ಅವರಿಗೊಪ್ಪಿಸಿದರು. ಆ ವರದಿಯ ಪ್ರಕಾರ, ‘ಸದ್ಯ ಬನದ ವಾರಸುದಾರರು ಈಶ್ವರಪುರದಲ್ಲಿ ಯಾರೂ ಇಲ್ಲ. ಅವರ ದೂರದ ಸಂಬಂಧಿಗಳಾದ ಒಂದೆರಡು ಕುಟುಂಬಗಳು ಇರುವುವಾದರೂ ಮೂಲ ಜಾಗಕ್ಕೆ ಸಂಬಂಧಿಸಿದವರ ಮಾಹಿತಿ ಮತ್ತು ವಿಳಾಸ ಅವರಿಗೂ ಗೊತ್ತಿಲ್ಲ ಹಾಗೂ ಬನದ ಜಾಗವೂ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಸ್ಮಶಾನವಿದ್ದ ಜಮೀನು ಮಾತ್ರ ಸರಕಾರದ್ದು. ಹಾಗಾಗಿ ಸ್ಮಶಾನದ ಸುತ್ತಮುತ್ತದ ಒಂದಷ್ಟು ಭೂಮಿ ಸಹಜವಾಗಿಯೇ ಪಾಳುಬಿದ್ದಿದೆ. ಅದರಲ್ಲಿ ಬನವೂ ಸೇರಿಬಿಟ್ಟಿದೆ!’ ಎಂದು ತಿಳಿದು ಬಂತು. ಅಷ್ಟು ವಿಷಯನ್ನು ತಿಳಿದ ಗುರೂಜಿಯವರು ಒಳಗೊಳಗೇ ಹರುಷಗೊಂಡರು.‘ಈಶ್ವರಪುರದ ಹೃದಯಭಾಗದಲ್ಲಿರುವ ನಾಗ ಬನವದು. ಅಲ್ಲಿ ಸುತ್ತಮುತ್ತಲ್ಲೆಲ್ಲೂ ಬೇರೊಂದು ಬನವೂ ಇಲ್ಲ. ಹಾಗಾಗಿ ಅದನ್ನು ತಮ್ಮಿಂದ ಊರ್ಜಿತಗೊಳಿಸುವುದೇ ನಾಗದೇವನಿಚ್ಛೆಯಿರಬೇಕು. ಅಷ್ಟಲ್ಲದೇ ತಮ್ಮ ಜೀವನದೇಳಿಗೆಯ ಕಾರ್ಯಸಾಧನೆಗೂ ಆ ಪರಿಸರವು ಹೇಳಿ ಮಾಡಿಸಿದಂತಿದೆ. ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಿ ತಮ್ಮದಾಗಿಸಿಕೊಳ್ಳಬೇಕು!’ ಎಂದು ನಿರ್ಧರಿಸಿದರು ಹಾಗೂ ಕೂಡಲೇ ಪ್ರವೀಣನನ್ನೂ ಶಂಕರನಿಗೂ ಮನೆಗೆ ಕರೆದು ತಮ್ಮ ಮನದಿಂಗಿತವನ್ನು ಅವರಿಗೆ ವಿವರಿಸಿದರು. ಜೊತೆಗೆ ಆ ಶುಭಕಾರ್ಯಕ್ಕೆ ತಗಲುವ ಖರ್ಚುವೆಚ್ಚವನ್ನೂ ಮತ್ತದನ್ನು ಹೊಂದಿಸುವ ಬಗೆಯನ್ನೂ ಹಾಗೂ ಆ ಕಾರ್ಯದಲ್ಲಿ ಪಾಲುಗೊಳ್ಳುವುದರಿಂದ ಅವರ ಜೀವನದಲ್ಲಾಗುವ ಸಮೃದ್ಧಿಗಳು ಯಾವ ಯಾವ ರೀತಿಯವು ಎಂಬುದನ್ನೆಲ್ಲ ಅಂದು ಶಂಕರನಿಗೆ ವಿವರಿಸಿದಂತೆಯೇ ಇಂದು ಪ್ರವೀಣನಿಗೂ ತಿಳಿಸಿ ಅವನನ್ನು ಸಜ್ಜುಗೊಳಿಸಿದರು.    ಗುರೂಜಿಯವರ ಮಾತು ಕೇಳಿದ ಪ್ರವೀಣ ಮತ್ತು ಶಂಕರ ಆ ಕಾರ್ಯದ ಕುರಿತು ಭಾರೀ ಉತ್ಸುಕರಾದರು. ಗುರೂಜಿಯ ಮಾರ್ಗದರ್ಶನದಂತೆ ಅವರ ಹೇಳಿಕೆಯನ್ನು ಆ ಬನದ ಸುತ್ತಮುತ್ತಲಿನ ಜನರಲ್ಲಿ ಪ್ರಚಾರ ಮಾಡುತ್ತ ಬಂದರು. ಬಳಿಕ ಜೀರ್ಣೋದ್ಧಾರದ ವಿಷಯಕ್ಕೆ ಸಂಬಂಧಿಸಿ ನಗರಸಭೆಯಿಂದಲೂ ಕೆಲವೇ ದಿನದಲ್ಲಿ ‘ನೋ ಅಬ್ಜಕ್ಷನ್!’ ಲೆಟರ್ ಕೂಡಾ ಪ್ರವೀಣನ ಕೈಸೇರಿತು. ಆದ್ದರಿಂದ ದಟ್ಟ ಹಸಿರಿನಿಂದ ತುಂಬಿ ಆರೋಗ್ಯಪೂರ್ಣವಾಗಿದ್ದ ಆ ಬನವನ್ನು ಕೂಡಲೇ‘ಕಾಂಕ್ರೀಟ್ ಭವನ’ವನ್ನಾಗಿ ಮಾರ್ಪಡಿಸಲು ಶುಭದಿನವೊಂದನ್ನು ಗೊತ್ತುಪಡಿಸಲಾಯಿತು. ಆದರೆ ಅದಕ್ಕಿನ್ನೂ ಒಂದೂವರೆ ತಿಂಗಳ ಗಡುವಿತ್ತು. ಈ ಎರಡನೆಯ ಜೀರ್ಣೋದ್ಧಾರದ ಮೂಲಕ ಗುರೂಜಿಯವರಿಗೆ ತಮ್ಮ ಧಾರ್ಮಿಕ ವರ್ಚಸ್ಸು ಮತ್ತು ಸಂಪಾದನೆಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಬಹಳ ಹಿಂದೆಯೇ ಅವರೊಳಗೆ ಹೊಸ ವಿಚಾರವೊಂದು ಮೊಳೆತಿತ್ತು. ಆದ್ದರಿಂದ ಇದೇ ಕಾರ್ಯಕ್ರಮದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವರು ಮನಸ್ಸು ಮಾಡಿದರು. (ಮುಂದುವರೆಯುವುದು) ********* ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, […]

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

‘ನಾನೇನು ನನ್ನ ಲಾಭಕ್ಕೆ ಆ ಪ್ರಾಣಿಗಳನ್ನು ಸಾಕಿದೆನಾ? ನೀವು ನಮಗಾಗಿ ಎಷ್ಟೊಂದು ಕಷ್ಟಪಡುತ್ತೀರಿ. ಅದಕ್ಕೆ ನನ್ನಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಯೋಚಿಸಿದೆ. ಹೀಗಿರುವಾಗ ಇಂಥ ಪರಿಸ್ಥಿತಿಯಲ್ಲಿ ತಾಳ್ಮೆಗೆಟ್ಟರೇನು ಬಂತು…?’ ಎಂದು ಅಳುತ್ತ ಹೇಳಿ ಧುರಧುರನೇ ಒಳಕ್ಕೆ ನಡೆದಳು.

Back To Top