ದಾರಾವಾಹಿ

ಆವರ್ತನ

ಅದ್ಯಾಯ-40

Buy Abstract Art Handmade Painting by NISHA AGARWAL. Code:ART_2668_57371 -  Paintings for Sale online in India.

ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ.

‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ ಮನೆಗೆ ಬಂದಿದ್ದ ನಾಗರಹಾವು ಅದಕ್ಕೂ ಮುಂಚೆ ರಾಧಾಳ ಮನೆಯಂಗಳಕ್ಕೂ ಬಂದು ಹೋಗಿದ್ದನ್ನು ಆತಂಕದಿಂದ ವಿವರಿಸಿದರು. ಸುಮಿತ್ರಮ್ಮನ ಮಾತುಗಳನ್ನು ಕೇಳಿದ ಗುರೂಜಿಯ ಕವಡೆಗಳು ರಾಧಾಳ ಹಣೆ ಬರಹದೊಂದಿಗೂ ಆಟವಾಡಲು ಮುಂದಾಗಿ ನೀಡಿದ ಸುಳಿವಿನ ಮೇರೆಗೆ ಗುರೂಜಿಯವರು ಅವಳನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದವರು, ‘ನೋಡಮ್ಮಾ, ಸುಮಿತ್ರಮ್ಮ ನಿಮ್ಮ ವಠಾರಕ್ಕೆ ಸಂಬಂಧಿಸಿದ ನಾಗನ ಕುರಿತು ನಿನಗೆ ಎಲ್ಲ ವಿಷಯವನ್ನೂ ತಿಳಿಸಿರಬಹುದು. ಆದರೆ ನಾವೂ ಒಮ್ಮೆ ಹೇಳುತ್ತೇವೆ. ನಿನ್ನ ಮನೆಯ ಹತ್ತಿರ ಇರುವ ದೊಡ್ಡ ಹಾಡಿಯು ನಾಗ ಪರಿವಾರ ದೈವಗಳಿಗೆ ಸೇರಿದ ಸ್ಥಾನ. ಅದರ ಸುತ್ತಮುತ್ತ ಮಾಂಸಾಹಾರಿಗಳು ವಾಸಿಸುವುದು ನಿಷಿದ್ಧ. ಆದರೂ ನೀವು ಕುಳಿತಾಗಿದೆ. ತಿಳಿದೋ ತಿಳಿಯದೆಯೋ ಆ ವಠಾರದಲ್ಲಿ ಸಂಚರಿಸುವ ನಾಗನಿಗೂ ಅವನ ಪರಿವಾರಕ್ಕೂ ನಿಮ್ಮಿಂದ ಅಶುದ್ಧವಾಗಿಯೂ ಆಗಿದೆ. ಅದರಿಂದ ಅವನು ಕೋಪಗೊಂಡಿದ್ದಾನೆ. ಅದರ ಸೂಚನೆಯಾಗಿ ನಿನ್ನ ಗಂಡನ ಕನಸಿನಲ್ಲೂ ಮತ್ತು ಅವನ ಮೈಮೇಲೂ ನಾಗಧೂತನೇ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ತೋರಿ ಬರುತ್ತಿದೆ!’ ಎಂದು ಆತಂಕದಿಂದ ಹೇಳಿದರು. ಅಷ್ಟು ಕೇಳಿದ ರಾಧಾ ಕಂಗಾಲಾದಳು. ಅವಳಿಗೆ ಅಳು ಉಕ್ಕಿ ಬಂತು. ‘ನಿಮ್ಮ ದಮ್ಮಯ್ಯ ಗುರೂಜೀ… ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ…!’ ಎಂದು ಬೇಡಿಕೊಂಡಳು.

ಆಗ ಅವಳ ಅಳುವಿಗೆ ತಾವೂ ಕನಿಕರಪಟ್ಟಂತೆ ಗುರೂಜಿಯವರ ಮುಖಭಾವವು ಬದಲಾಯಿತು. ‘ನೋಡಮ್ಮಾ ನಿನ್ನ ಕಷ್ಟ ನಮಗೂ ಅರ್ಥವಾಗುತ್ತದೆ. ಸದ್ಯಕ್ಕೆ ನಾಗನ ಕೋಪದಿಂದ ಪಾರಾಗಬೇಕಾದರೆ ನಿಮ್ಮ ಶಕ್ತ್ಯಾನುಸಾರ ಮನೆಯಲ್ಲಿ ನಾಗಶಾಂತಿಯೊಂದನ್ನು ಮಾಡಿಸಬೇಕು. ಬಳಿಕ ಸಂಸಾರ ಸಮೇತ ಷಣ್ಮುಖಕ್ಷೇತ್ರಕ್ಕೆ ಹೋಗಿ ಸೇವೆ ಕೊಟ್ಟು ಬನ್ನಿ. ಅದಾಗುವ ಹೊತ್ತಿಗೆ ಆ ಬನವೂ ಜೀರ್ಣೋದ್ಧಾರವಾಗುತ್ತದೆ. ಆ ಕಾರ್ಯದಲ್ಲೂ ತನು ಮನ ಧನಾದಿಗಳಿಂದ ಸಹಕರಿಸಿ. ಆಮೇಲೆ ನಿನ್ನ ಗಂಡ ಹುಷಾರಾಗುತ್ತಾನೆ ಮತ್ತು ನಿಮ್ಮೆಲ್ಲ ತೊಂದರೆಗಳೂ ಪರಿಹಾರವಾಗುತ್ತವೆ. ಹೋಗಿ ಬನ್ನಿ!’ ಎಂದು ಅಭಯವಿತ್ತರು. ಆದರೆ ರಾಧಾ ಗುರೂಜಿಯ ಪರಿಹಾರ ವಿಧಿಗಳನ್ನು ಕೇಳಿ ದಂಗಾದಳು. ಅವುಗಳನ್ನು ನೆರವೇರಿಸಲು ಹಣಕ್ಕೇನು ಮಾಡುವುದು? ಎಂಬ ಚಿಂತೆ ಅವಳನ್ನು ಆಕ್ಷಣವೇ ಕಾಡತೊಡಗಿತು. ಏನೂ ತೋಚದೆ ಕುಳಿತಳು. ಅವಳ ಮೌನ ಕಂಡು ಗುರೂಜಿಗೆ ಕಿರಿಕಿರಿಯಾಯಿತು. ಅವರು ಅಸಡ್ಡೆಯಿಂದ ಸುಮಿತ್ರಮ್ಮನನ್ನು ದಿಟ್ಟಿಸಿದರು. ಆಗ ಸುಮಿತ್ರಮ್ಮನೂ ಸಂಕೋಚದಿಂದ, ‘ಏನು ಮಾಡುತ್ತಿ ಮಾರಾಯ್ತೀ…?’ ಎಂದು ಮೃದುವಾಗಿ ಪ್ರಶ್ನಿಸಿದರು. ರಾಧಾಳಿಗೆ ಮಾತಾಡುವುದು ಅನಿವಾರ್ಯವಾಯಿತು. ಏನಾದರಾಗಲಿ. ಈಗ ಬಂದಿರುವ ಗಂಡಾಂತರವೊಂದು ನಿವಾರಣೆಯಾದರೆ ಸಾಕು ಎಂದುಕೊಂಡವಳು, ‘ಆಯ್ತು ಗುರೂಜಿ ತಾವು ಹೇಳಿದಂತೆಯೇ ಮಾಡುತ್ತೇವೆ’ ಎಂದಳು. ಆಗ ಗುರೂಜಿ ಶಾಂತರಾದವರು, ಕುಂಕುಮದ ಪೊಟ್ಟಣವೊಂದನ್ನೂ, ಒಂದಿಷ್ಟು ಉರಿದ ಕಡಲೇಬೇಳೆ ಕಾಳುಗಳನ್ನೂ ಅವರಿಬ್ಬರ ಕೈಗಳಿಗೆ ಎಸೆದರು. ಅವರು ಅದನ್ನು ಕಣ್ಣಿಗೊತ್ತಿಕೊಂಡು ಗುರೂಜಿಯ ಕಾಣಿಕೆಯಿಟ್ಟು ಹಿಂದಿರುಗಿದರು.

ರಾಧಾಳ ಪರಿಸ್ಥಿತಿಯನ್ನು ನೆನೆದ ಸುಮಿತ್ರಮ್ಮನಿಗೆ, ಗುರೂಜಿಯವರು ಅವಳಿಗೆ ಸೂಚಿಸಿದ ಪರಿಹಾರವನ್ನು ಕೇಳಿ ಯಾಕೋ ಒಂಥರಾ ಸಂಕಟವಾಗತೊಡಗಿತು. ಇಂಥ ಬಡ ಅಮಾಯಕರ ವಿಷಯದಲ್ಲಿ ತಾವೆಲ್ಲೋ ತಪ್ಪು ಮಾಡುತ್ತಿದ್ದೇವೇನೋ ಎಂಬ ಭಯ, ಪಾಪಪ್ರಜ್ಞೆಯೂ ಅವರನ್ನು ಕಾಡತೊಡಗಿತು. ಆದ್ದರಿಂದ ತಮ್ಮ ತಳಮಳವನ್ನು ನಿವಾರಿಸಿಕೊಳ್ಳುವುದಕ್ಕಾಗಿ ದಾರಿಯುದ್ದಕ್ಕೂ ರಾಧಾಳಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ನಡೆದರು. ರಾಧಾ ಮನೆಗೆ ಬಂದವಳು ಗಂಡನಿಗೆ ವಿಷಯ ವಿವರಿಸಿದಳು. ಅಷ್ಟು ಕೇಳಿದ ಗೋಪಾಲ ಮತ್ತೂ ವಿಚಲಿತನಾದ. ಅಲ್ಲದೇ ಅವನು ತನ್ನ ಕನಸಿನಲ್ಲಿ ಕಾಣಿಸಿಕೊಂಡ ಸರ್ಪಕ್ಕೂ ಮತ್ತದರ ಭಯಂಕರ ವರ್ತನೆಗೂ ಹಾಗೂ ಜ್ವರದಿಂದ ತನಗಾದ ವಿಚಿತ್ರಾನುಭವಕ್ಕೂ ತಾಳೆ ಹಾಕಿದ. ಮರುಕ್ಷಣ, ಹೌದು ಗುರೂಜಿಯ ಮಾತುಗಳು ಅಕ್ಷರಶಃ ಸತ್ಯ ಎಂದು ಅವನಿಗನ್ನಿಸಿತು!

‘ಗುರೂಜಿಯವರು ಹೇಳಿದ ಪೂಜೆಗಳನ್ನು ಊರಲ್ಲಿ ಮಾಡಿಸುವುದೆಂದರೆ ನಿಮಗೆ ತುಂಬಾ ಖರ್ಚಾಗುತ್ತದೆ. ಹಾಗಾಗಿ ಅವರು ನಿಮ್ಮನ್ನು ಹ್ಯಾಗೂ ಷಣ್ಮುಖಕ್ಷೇತ್ರಕ್ಕೆ ಹೋಗಿ ಬರಲು ಹೇಳಿದ್ದಾರೆ. ನಾಗಶಾಂತಿಯನ್ನೂ ಅಲ್ಲಿಯೇ ಮಾಡಿಸಿಕೊಂಡು ಬಂದುಬಿಡಿ. ಎಲ್ಲಿಯಾದರೇನು? ನಾಗನಿಗೆ ಸಂದಾಯವಾದರೆ ಸೈಯಲ್ಲವಾ!’ ಎಂದು ರಾಧಾಳ ಅಪ್ಪ ಅಳಿಯನಿಗೆ ಹಗುರವಾಗುವಂಥ ಸಲಹೆಯನ್ನು ನೀಡಿ ಒಂದಿಷ್ಟು ಹಣವನ್ನೂ ಕೊಟ್ಟರು. ಗೋಪಾಲ ದಂಪತಿಗೂ ಅವರ ಮಾತು ಸರಿಯೆನಿಸಿತು. ಕೂಡಲೇ ಮಕ್ಕಳನ್ನು ಕಟ್ಟಿಕೊಂಡು ಷಣ್ಮುಖಕ್ಷೇತ್ರಕ್ಕೆ ಹೋದರು. ಅಲ್ಲಿ ಮೂರು ದಿನಗಳ ಕಾಲ ಕ್ಷೇತ್ರದ ಛತ್ರದಲ್ಲಿದ್ದು ತಮಗೆ ಸೂಚಿಸಲಾದ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿದವರು, ಇನ್ನು ಮುಂದಾದರೂ ನಮ್ಮನ್ನು ಹಿಡಿದಿರುವ ನಾಗದೋಷವು ನಿವಾರಣೆಯಾಗಬಹುದು ಎಂಬ ದೃಢವಿಶ್ವಾಸದಿಂದ ಊರಿಗೆ ಹಿಂದಿರುಗಿದರು.

ಆದರೆ ಗೋಪಾಲನ ದುರಾದೃಷ್ಟ ಅಷ್ಟುಬೇಗನೇ ಅವನ ಬೆನ್ನು ಬಿಡುವಂತೆ ತೋರಲಿಲ್ಲ. ಷಣ್ಮುಖಕ್ಷೇತ್ರಕ್ಕೆ ಹೋಗಿ ಬಂದ ಮೂರನೆಯ ದಿನ ಅದೇ ಜ್ವರ ಅವನನ್ನು ಮರಳಿ ಹಿಡಿದುಕೊಂಡಿತು. ರಾಧಾ ಮತ್ತೆ ದಿಕ್ಕು ತೋಚದಾದಳು. ಆದರೆ ಆಗ ಅವಳಿಗೆ ಡಾ. ನರಹರಿ ಕೊಟ್ಟಿದ್ದ ಮಾತ್ರೆಗಳಲ್ಲಿ ಇನ್ನೂ ಕೆಲವು ಉಳಿದಿರುವುದು ತಟ್ಟನೆ ನೆನಪಾಯಿತು. ಕೂಡಲೇ ಅದನ್ನು ಹುಡುಕಿ ತಂದು ಬಿಸಿ ನೀರಿನೊಂದಿಗೆ ಗಂಡನಿಗೆ ನುಂಗಿಸಿದಳು. ಆದರೆ ಅವನು ಸ್ವಲ್ಪಹೊತ್ತಿನಲ್ಲಿ ಮರಳಿ ವಿಚಿತ್ರವಾಗಿ ಬದಲಾದವನು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಗಾಯಗೊಂಡ ಕೋಪಿಷ್ಟ ಹಾವಿನಂತೆ ಉಸಿರು ದಬ್ಬುತ್ತ ಇಡೀ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತ ಹೊರಳಿ, ಹೊರಳಿ ತೆವಳತೊಡಗಿದ. ಕೈಕಾಲುಗಳು ಸೆಟೆದುಕೊಂಡಂತೆ ವರ್ತಿಸತೊಡಗಿದ. ಅವನ ಅಂತ ಭೀಕರ ಸ್ಥಿತಿಯನ್ನು ಕಂಡ ರಾಧಾ ಕಂಗಾಲಾದಳು. ಮರಳಿ ಅವಳನ್ನು ನಾಗದೋಷದ ಭಯವು ಕಾಡತೊಡಗಿತು. ಹಾಗಾಗಿ ಗಂಡನೆದುರು ಕೂರಲಾಗದೆ ದಡಕ್ಕನೆದ್ದು ಸುಮಿತ್ರಮ್ಮನ ಮನೆಗೆ ಧಾವಿಸಿದಳು.

‘ಸುಮಿತ್ರಮ್ಮಾ, ಸುಮಿತ್ರಮ್ಮಾ…ಇವರು ಹೇಗೇಗೋ ಆಡುತ್ತಿದ್ದಾರೆ ಮಾರಾಯ್ರೇ…ಸ್ವಲ್ಪ ಬನ್ನಿಯೇ…!’ ಎಂದು ಅಂಗಲಾಚಿದಳು. ಸುಮಿತ್ರಮ್ಮನೂ ಗಾಬರಿಬಿದ್ದು ಅವಳನ್ನು ಹಿಂಬಾಲಿಸಿದರು. ಆದರೆ ಅಷ್ಟರವರೆಗೆ ಕೋಣೆಯಿಡೀ ತೆವಳುತ್ತಿದ್ದ ಗೋಪಾಲ ಈಗ ನಿತ್ರಾಣಗೊಂಡು ಕವುಚಿ ಬಿದ್ದ ಹೆಣದಂತೆ ಮಲಗಿದ್ದ. ಅವನ ಬಾಯಿಯಿಂದ ಎಂಜಲು ನೊರೆನೊರೆಯಾಗಿ ಹರಿಯುತ್ತಿತ್ತು. ಅವನ ಘೋರ ಸ್ಥಿತಿಯನ್ನು ಕಂಡ ಸುಮಿತ್ರಮ್ಮನಿಗೆ ಗುರೂಜಿಯ ಮಾತು ಮತ್ತು ಸಲಹೆಗಳು ತಟ್ಟನೆ ಕಣ್ಣೆದುರು ಸುಳಿದವು. ಹೌದು ಗುರೂಜಿಯವರು ಹೇಳಿದ್ದೆಲ್ಲವೂ ಸತ್ಯ. ಇವನಿಗೆ ಖಂಡಿತಾ ನಾಗನ ಶಾಪ ತಟ್ಟಿದೆ! ಎಂದು ಯೋಚಿಸಿದ ಅವರನ್ನೂ ಆ ಭಯವು ಆವರಿಸಿಕೊಂಡಿತು.

‘ಅಯ್ಯಯ್ಯೋ ದೇವರೇ…! ಇದೇನಪ್ಪಾ ದುರಾವಸ್ಥೆ? ನೀವು ಆದಷ್ಟು ಬೇಗ ಈ ಮನೆಯನ್ನು ಮಾರಿ ದೂರವೆಲ್ಲಾದರೂ ಹೊರಟು ಹೋಗಿ ಮಾರಾಯ್ತೀ… ಇನ್ನು ನಿಮಗೆ ಈ ಸ್ಥಳ ಖಂಡಿತಾ ಆಗಿಬರುವುದಿಲ್ಲ!’ ಎಂದು ಆತಂಕದಿಂದ ಹೇಳಿದವರು ಕೆಲವು ಕ್ಷಣ ಏನೂತೋಚದೆ ನಿಂತುಬಿಟ್ಟರು. ಸುಮಿತ್ರಮ್ಮನಿಂದಲೂ ಆ ಮಾತುಗಳನ್ನು ಕೇಳಿದ ರಾಧಾಳಿಗೆ ನಿಂತ ನೆಲವೇ ಕುಸಿದಂತಾಯಿತು. ಆದರೆ ಆ ಪರಿಸ್ಥಿತಿಯಲ್ಲೂ ಅವಳಿಗೆ ಮತ್ತೆ ಡಾ. ನರಹರಿ ನೆನಪಾದ. ಸುಮಿತ್ರಮ್ಮನನ್ನು ಕರೆದುಕೊಂಡು ಅವನ ಮನೆಗೆ ಓಡಿದಳು.

                                                         ***

ಇಂದು ರಾಧಾಳ ಅದೃಷ್ಟಕ್ಕೆ ನರಹರಿಗೆ ರಜೆಯ ದಿನವಾಗಿತ್ತು. ಅವನು ತಾರಸಿಯ ಮೇಲೆ ಕುಳಿತುಕೊಂಡು ಯಾವುದೋ ಪುಸ್ತಕ ಓದುತ್ತಿದ್ದ. ಅಷ್ಟರಲ್ಲಿ ಮನೆಯ ಕರೆಗಂಟೆ ಬಾರಿಸಿದ್ದರಿಂದ ಕೆಳಗಿಳಿದು ಬಂದವನು ಸುಮಿತ್ರಮ್ಮನನ್ನೂ ರಾಧಾಳನ್ನೂ ಕಂಡು ಆತ್ಮೀಯ ನಗು ಬೀರಿದ. ರಾಧಾಳ ಕಣ್ಣೀರು ಗಮನಿಸಿ, ‘ಏನಾಯ್ತಮ್ಮಾ…?’ ಎಂದ. ರಾಧಾ ತನ್ನ ಗಂಡನ ಪರಿಸ್ಥಿತಿಯನ್ನು ಅಳುತ್ತ ಬಡಬಡಿಸಿದಳು. ನರಹರಿಯು ಕೂಡಲೇ ತನ್ನ ಶುಶ್ರೂಷೆಯ ಚೀಲವನ್ನು ಹಿಡಿದುಕೊಂಡು ಅವರೊಂದಿಗೆ ನಡೆದ.

ಗೋಪಾಲನ ಮನೆಯ ತೊಡಮೆಯ ಹತ್ತಿರ ಬಂದ ನರಹರಿಯು ಅಪ್ರಜ್ಞಾಪೂರ್ವಕವಾಗಿ ಕೆಲವು ಕ್ಷಣ ಸುಮ್ಮನೆ ನಿಂತುಬಿಟ್ಟ. ಅಲ್ಲೊಂದು ವಿಶೇಷ ಚೈತನ್ಯವು ತನ್ನೊಳಗೆ ಪ್ರವಾಹಿಸಿದಂತಾಗಿ ಅಚ್ಚರಿಗೊಂಡ. ರಾಧಾಳ ವಠಾರದಲ್ಲಿ ನಿಸರ್ಗದತ್ತವಾದ ಸಹಜ ಜೀವಂತಿಕೆ ತುಂಬಿ ತುಳುಕುತ್ತಿರುವುದನ್ನು ಅವನ ಒಳಮನಸ್ಸು ಗ್ರಹಿಸಿತು. ಮರುಕ್ಷಣ ಉಲ್ಲಸಿತನಾದ. ರಾಧಾಳ ಅಂಗಳದಲ್ಲಿ ಹಸುವಿನೊಂದಿಗಿದ್ದ ಕಂದು ಬಣ್ಣದ ಪುಟ್ಟ ಕರುವೊಂದು ಅಮ್ಮನ ಕೆಚ್ಚಲನ್ನು ಗುದ್ದಿಗುದ್ದಿ ಹಾಲು ಕುಡಿಯುತ್ತಿತ್ತು. ಆದರೆ ಆ ತಾಯಿ ಹಸುವು ಯಾಂತ್ರಿಕವಾಗಿ ಮೇಯುತ್ತಿತ್ತು. ಅತ್ತ ಕಡೆ ಏಳೆಂಟು ಊರ ಕೋಳಿಗಳ ಹಿಂಡೊಂದು ಸ್ವಚ್ಛಂದವಾಗಿ ಮೇಯುತ್ತಿದೆ ಎಂದೆನಿಸಿದರೂ ತಮ್ಮ ಮನೆಯಜಮಾನರ ನೋವು ದುಃಖಗಳು ಅವುಗಳನ್ನೂ ಭಾದಿಸುತ್ತಿವೆ ಎಂಬುದು ಅವುಗಳ ನೀರಸ ಚಲನೆಯಿಂದಲೇ ತಿಳಿಯುತ್ತಿತ್ತು. ನರಹರಿಯು ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತ ಅಂಗಳಕ್ಕಡಿಯಿಟ್ಟ. ಅಲ್ಲಿನ ಹಸುಗಳ ಸೆಗಣಿ ಮತ್ತು ಗಂಜಲದ ಸುವಾಸನೆಗಳು ತನ್ನ ಮೆದುಳನ್ನು ಚುರುಕುಗೊಳಿಸಿದಂತೆ ಭಾಸವಾಯಿತು ಅವನಿಗೆ. ಅದರ ಬೆನ್ನಿಗೆ ನೇರಳೆ, ಪೇರಳೆ, ಸಂಪಿಗೆ ಮತ್ತು ಹಲಸಿನ ಮರಗಳಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಕಲರವವೂ ಹೃದಯಸ್ಪರ್ಶಿಯೆನಿಸಿತು. ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿವನು, ನಮ್ಮ ಮನುಷ್ಯಕುಲವು ನಿಜವಾಗಿಯೂ ಬದುಕಿ ಬಾಳಬೇಕಾದ ಜೀವನಕ್ರಮವೆಂದರೆ ಹೀಗೆಯೇ ಅಲ್ಲವೇ! ಎಂದುಕೊಂಡು ಮುಂದುವರೆದ.

ನರಹರಿಯನ್ನು ಕಂಡ ಮೋತಿಯು ಜೋರಾಗಿ ಬೊಗಳಿತು. ಆದರೆ ಅವನ ಆತ್ಮೀಯ ನಗುವನ್ನು ಕಂಡದ್ದು ಅವನತ್ತ ಓಡಿ ಬಂದು ಬಾಲವಲ್ಲಾಡಿಸುತ್ತ ಗೌರವ ಸೂಚಿಸಿತು. ಆದರೆ ನರಹರಿಯ ಹಿಂದೆ ಸ್ವಲ್ಪದೂರದಲ್ಲಿ ನಿಂತುಕೊಂಡು ತನ್ನತ್ತ ಭಯದಿಂದ ದಿಟ್ಟಿಸುತ್ತಿದ್ದ ಸುಮಿತ್ರಮ್ಮನನ್ನು ಕಂಡದ್ದು ಮರಳಿ ಕೆರಳಿತು. ಅಷ್ಟೊತ್ತಿಗೆ ರಾಧಾ ಅದನ್ನು ಗದರಿಸಿ ದೂರಕ್ಕಟ್ಟಿದಳು. ಆದ್ದರಿಂದ ಆಗಿನ ಸನ್ನಿವೇಶವನ್ನು ಅರ್ಥಮಾಡಿಕೊಂಡ ಆ ಪ್ರಾಣಿಯೂ ಬೊಗಳುವುದನ್ನು ನಿಲ್ಲಿಸಿ ದೂರ ಹೋಗಿ ಕುಳಿತು ಮನೆಯತ್ತ ಆತಂಕದಿಂದ ನೋಡತೊಡಗಿತು. ನರಹರಿ ಗೋಪಾಲನ ಮನೆಯೊಳಗೆ ಹೋದ. ಅಲ್ಲಿ ಪಡಸಾಲೆಯಲ್ಲಿ ಸೆಗಣಿ ಸಾರಿಸಿದ ಮಣ್ಣಿನ ನೆಲದ ಮೇಲೆ ಕೇದಗೆಯ ಒಲಿಗಳಿಂದ ನೆಯ್ದ ಚಾಪೆಯೊಂದು ಹಾಸಿದ್ದು ಅದೀಗ ಪುಡಿಪುಡಿಯಾಗಿತ್ತು! ಸ್ವಲ್ಪ ಹೊತ್ತಿನ ಮುಂಚೆ ಅದರಲ್ಲಿ ಮಲಗಿದ್ದ ಗೋಪಾಲ ಈಗ ತಣ್ಣನೆ ಉಸಿರು ದಬ್ಬುತ್ತ ಕೋಣೆಯ ಮೂಲೆಯೊಂದರಲ್ಲಿ ನಿಸ್ತೇಜನಾಗಿ ಬಿದ್ದಿದ್ದ. ನರಹರಿ ಅವನನ್ನು ದೀರ್ಘವಾಗಿ ಪರೀಕ್ಷಿಸಿದ. ಅವನ ಮುಖ ಕೆಲವು ಕ್ಷಣ ವೇದನೆಯಿಂದ ಕಳೆಗುಂದಿತು.

‘ಆವತ್ತು ಕೆಲವು ಪರೀಕ್ಷೆಗಳನ್ನು ಮಾಡಿಸಲು ಹೇಳಿದ್ದೆನಲ್ಲಮ್ಮಾ, ಅದನ್ನು ಮಾಡಿಸಿದ್ದೀರೇನು…?’ ಎಂದ ಮೃದುವಾಗಿ.

‘ಹೌದು ಡಾಕ್ಟ್ರೇ ಹೇಳಿದ್ರೀ. ಆದರೆ ನೀವು ಕೊಟ್ಟ ಔಷಧಿಯಿಂದಲೇ ಜ್ವರಬಿಟ್ಟಿತು. ಹಾಗಾಗಿ ಮರೆತುಬಿಟ್ಟೆವು…!’ ಎಂದು ರಾಧಾ ಹಿಂಜರಿಯುತ್ತ ಅಂದಳು.

‘ಛೇ ಛೇ! ಎಂಥ ಕೆಲಸವಾಯಿತಮ್ಮಾ…? ಆ ಪರೀಕ್ಷೆಗಳನ್ನು ಆವತ್ತೇ ಮಾಡಿಸಿಕೊಳ್ಳಬೇಕಿತ್ತಲ್ಲವಾ…!’ ಎಂದ ನರಹರಿ ಆತಂಕದಿಂದ.

‘ಹೌದಾ ಡಾಕ್ಟ್ರೇ..?’ ಎಂದು ನೋವಿನಿಂದ ಕೇಳಿದ ರಾಧಾ, ‘ಈಗೇನು ಮಾಡುವುದು…?’ ಎಂಬಂತೆ ಅವನನ್ನೇ ದಿಟ್ಟಿಸಿದಳು.

‘ನೋಡಿಯಮ್ಮ. ಇದೊಂದು ಬಗೆಯ ಮೆದುಳು ಜ್ವರದ ಸೂಚನೆ! ಈಗಲೇ ತಡವಾಗಿಬಿಟ್ಟಿದೆ. ಸದ್ಯಕ್ಕೊಂದು ಔಷಧಿ ಕೊಡುತ್ತೇನೆ. ಅದರ ಪರಿಣಾಮ ಇಳಿಯುವುದರೊಳಗೆ ಇವನನ್ನು ಆಸ್ಪತ್ರೆಗೆ ದಾಖಲಿಸಬೇಕು!’ ಎಂದು ನರಹರಿ ಗಂಭೀರವಾಗಿ ಹೇಳಿದ. ಅದರಿಂದ ರಾಧಾ ಇನ್ನಷ್ಟು ಹೆದರಿದಳು. ಅತ್ತ ಮರಗಟ್ಟಿ ನಿಂತುಕೊಂಡು ನಾಗದೋಷದ ಹೆದರಿಕೆಯನ್ನೇ ಉಸಿರಾಡುತ್ತ ಗೋಪಾಲನನ್ನು ದಿಟ್ಟಿಸುತ್ತಿದ್ದ ಸುಮಿತ್ರಮ್ಮನಿಗೆ ನರಹರಿ, ‘ಇದು ಮೆದುಳು ಜ್ವರದ ಸೂಚನೆ!’ ಎಂದಾಗ ಒಮ್ಮೆಲೇ ದಿಗಿಲಾಯಿತು. ‘ಅಯ್ಯಯ್ಯೋ ದೇವರೇ…! ಈ ಮನುಷ್ಯ ಏನು ಹೇಳುತ್ತಿದ್ದಾನೆ…!? ಎಂದು ಆತಂಕ, ವಿಸ್ಮಯದಿಂದ ಚಡಪಡಿಸುತ್ತ ಅಂದುಕೊಂಡರು. ಅದರ ಬೆನ್ನಿಗೆ ಅವರನ್ನು ಬಲವಾದ ಅನುಮಾನವೊಂದೂ ಕಾಡಿತು. ಈ ನರಹರಿ ಎಷ್ಟು ಒಳ್ಳೆಯ ಡಾಕ್ಟ್ರಾಗಿದ್ದರೂ ಇವನದಿನ್ನೂ ಹುಡುಗು ಪ್ರಾಯ. ಹಾಗಾಗಿ ಇಂಥ ವಿಚಾರಗಳ ಬಗ್ಗೆ ಇವನಿಗೇನು ಗೊತ್ತಿದ್ದೀತು ಮಣ್ಣು! ಎಂದು ಯೋಚಿಸಿದವರು, ‘ಅಲ್ಲ ಡಾಕ್ಟ್ರೇ, ಅವನು ಹೆಡೆ ತುಳಿದ ನಾಗರಹಾವಿನಂತೆ ಆಡುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಅಷ್ಟಲ್ಲದೆ ಪ್ರಶ್ನೆಯಿಟ್ಟಲ್ಲೂ ಅದು ನಾಗದೋಷದ್ದೇ ಸೂಚನೆ ಅಂತನೂ ತಿಳಿದು ಬಂದಿದೆ. ಹೀಗಿರುವಾಗ ನೀವು ನೋಡಿದರೆ ಮೆದುಳು ಜ್ವರ ಅದು ಇದೂ ಅಂತ ಬೇರೇನೋ ಹೇಳುತ್ತಿದ್ದೀರಲ್ಲಾ ಏನಿದು ತಮಾಷೆ…!?’ ಎಂದರು ಅಸಹನೆಯಿಂದ.

ಸುಮಿತ್ರಮ್ಮನ ಆ ಬಗೆಯ ಮಾತು ಕೇಳಿದ ನರಹರಿ ಕಕ್ಕಾಬಿಕ್ಕಿಯಾದ. ಆದರೆ ಅವರ ಮುಖದಲ್ಲಿದ್ದ ಅಸಹನೆಯನ್ನು ಕಂಡವನಿಗೆ ತಟ್ಟನೆ ವಿಷಯ ಮನವರಿಕೆಯಾಗಿ ಅವರ ಮೇಲೆ ಅನುಕಂಪ ಮೂಡಿತು. ‘ನೋಡಿ ಸುಮಿತ್ರಮ್ಮಾ ನೀವು ಹಿರಿಯರು. ನಿಮ್ಮೆದುರು ನಾನು ತುಂಬಾ ಚಿಕ್ಕವನು. ಆದರೂ ಒಂದು ಮಾತು ಹೇಳಬೇಕೆನಿಸುತ್ತದೆ. ನೀವು ತಪ್ಪು ತಿಳಿದು ಕೊಳ್ಳುತ್ತೀರೇನೋ…?’ ಎಂದು ಅವರನ್ನು ದಿಟ್ಟಿಸಿದ. ಅದಕ್ಕವರು ಕೂಡಲೇ, ‘ಹಾಗೇನಿಲ್ಲ ಹೇಳಿ, ಹೇಳಿ…!’ ಎಂದರು ಅಸಡ್ಡೆಯಿಂದ.

‘ಅಲ್ಲಾ ಸುಮಿತ್ರಮ್ಮಾ, ಪ್ರಸ್ತುತ ಇಪ್ಪತ್ತೊಂದನೆಯ ಶತಮಾನದ ಆಧುನಿಕ ಕಾಲಘಟ್ಟದಲ್ಲಿ ಹುಟ್ಟಿರುವ ನಾವುಗಳೆಲ್ಲ ಇನ್ನೂ ಸ್ವತಂತ್ರವಾಗಿ ಆಲೋಚಿಸಲು, ನಿರ್ಧರಿಸಲು ಕಲಿತಿಲ್ಲವೆಂದರೆ ಜೀವನದ ನೈಜಾರ್ಥವನ್ನು ತಿಳಿಯಲು ಹೇಗೆ ಸಾಧ್ಯ ಹೇಳಿ…?’ ಎಂದ ನಗುತ್ತ. ಅವನ ಮಾತು ಕೇಳಿದ ಸುಮಿತ್ರಮ್ಮನಿಗೆ, ‘ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲವೇ ಅಲ್ಲ!’ ಎಂದೆನಿಸಿದ್ದರೊಂದಿಗೆ ಅವನ ನಗುವು ಅವರಲ್ಲಿ ಅವಮಾನವನ್ನೂ ಸೃಷ್ಟಿಸಿಬಿಟ್ಟಿತು.

ಹಾಗಾಗಿ, ‘ಅದೇನು ಕಾಲಘಟ್ಟವೋ ಡಾಕ್ಟ್ರೇ, ಅದೆಲ್ಲ ನಮಗೊಂದೂ ಅರ್ಥವಾಗುವುದಿಲ್ಲ ಬಿಡಿ. ಆದರೆ ನಮ್ಮ ವಠಾರದೊಳಗೊಂದು ದೊಡ್ಡ ನಾಗರಹಾವು ಕೆಲವು ಕಾಲದಿಂದ ಸಿಕ್ಕಸಿಕ್ಕ ಮನೆಗಳಿಗೆಲ್ಲಾ ನುಗ್ಗಿ ಎಲ್ಲರ ಮೇಲೂ ಹಗೆ ಸಾಧಿಸುತ್ತ ತೊಂದರೆ ಕೊಡುತ್ತಿದೆಯಲ್ಲ, ಹಾಗಾದರೆ ಅದು ಯಾವ ಕಾರಣಕ್ಕೆ ಹಾಗೆ ವರ್ತಿಸುತ್ತಿದೆ ಅನ್ನುವುದನ್ನು ಸ್ವಲ್ಪ ವಿವರಿಸುತ್ತೀರಾ…?’ ಎಂದು ತಮ್ಮ ನಂಬಿಕೆಯೇ ಸರಿ ಎಂಬಂತೆ ಸಿಡುಕಿ ಕೇಳಿದರು.

ಅವರ ಮಾತಿನಲ್ಲಿದ್ದ ವ್ಯಂಗ್ಯವನ್ನು ಗಮನಿಸಿದ ನರಹರಿ ಗಂಭೀರವಾದ. ‘ಆ ಹಾವು ಎಲ್ಲರ ಮೇಲೆ ಹಗೆ ಸಾಧಿಸುತ್ತಿದೆ ಮತ್ತು ನಾಗದೋಷದಿಂದಲೇ ಸುತ್ತಾಡುತ್ತಿದೆ ಎಂದು ನಿಮಗೆ ಹೇಗೆ ತಿಳಿಯಿತು ಸುಮಿತ್ರಮ್ಮಾ? ಅಥವಾ ನಿಮಗೆ ಹಾಗೆ ಹೇಳಿದವರು ಯಾರು…?’ ಎಂದು ಸಮಾಧಾನದಿಂದ ಪ್ರಶ್ನಿಸಿದ. ಆದರೆ ಸುಮಿತ್ರಮ್ಮನಿಗೆ ಅವನು ಅಂಥ ಪ್ರಶ್ನೆಗಳಿಂದ ತಮ್ಮನ್ನು ಗೇಲಿ ಮಾಡುತ್ತಿದ್ದಾನೆಂದೇ ಅನ್ನಿಸಿ ರೇಗಿಬಿಟ್ಟಿತು. ‘ಅರೇರೇ…! ಹಾಗಾದರೆ ಮತ್ತ್ಯಾಕೆ ಅದು ಪದೇಪದೇ ಎಲ್ಲರ ಮನೆಗಳೊಳಗೂ ನುಗ್ಗುತ್ತ ಉಗ್ರವಾಗಿ ವರ್ತಿಸುತ್ತ ಹೆದರಿಸುತ್ತಿರುವುದು? ಅಷ್ಟಲ್ಲದೇ ನಮ್ಮೂರಿನಲ್ಲಿ ಎಲ್ಲರ ನಂಬಿಕೆಯೂ ಹಾಗೆಯೇ ಇರುವುದಲ್ಲವಾ! ಅದೂ ಅಲ್ಲದೇ ಆ ಹಾವಿನ ಹಿಂಸೆ ತಾಳಲಾಗದೆ ಆವತ್ತು ಪ್ರಶ್ನೆಯಿಡಲು ಏಕನಾಥ ಗುರೂಜಿಯವರಲ್ಲಿಗೂ ಹೋಗಿದ್ದೆವು. ಅವರು ಕೂಡಾ ಅದನ್ನೇ ಹೇಳಿದರಲ್ಲ! ಅಂದರೆ ಹಿಂದಿನಿಂದಲೂ ಬಂದ ನಮ್ಮ ಹಿರಿಯರ ನಂಬಿಕೆ, ಆಚರಣೆಗಳು ಮತ್ತು ಪ್ರಸಿದ್ಧ ಜ್ಯೋತಿಷ್ಯರೊಬ್ಬರ ಮಾತುಗಳೆಲ್ಲ ಸುಳ್ಳೆಂದಾ ನಿಮ್ಮ ಮಾತಿನರ್ಥ…?’ ಎಂದು ಸುಮಿತ್ರಮ್ಮ ಅವನನ್ನು ದುರುಗುಟ್ಟುತ್ತ ಪ್ರಶ್ನಿಸಿದರು.

ಸುಮಿತ್ರಮ್ಮನ ಕಣ್ಣಿನಲ್ಲಿ ಸಿಡಿಯುತ್ತಿದ್ದ ಕೋಪದ ಕಿಡಿಗಳನ್ನು ಕಂಡ ನರಹರಿ ಉಭಯಸಂಕಟಕ್ಕೆ ಸಿಲುಕಿದ. ‘ಈ ಜನರ ನಂಬಿಕೆ, ಅಜ್ಞಾನಗಳನ್ನು ಕಟ್ಟಿಕೊಂಡು ತನಗೇನಾಗಬೇಕಿದೆ. ಯಾರು ತಮಗೆ ಹ್ಯಾಗೆ ಬೇಕೋ ಹಾಗಿರಲಿ. ಅವರವರ ಬದುಕು ಮತ್ತು ಅದರ ಕಷ್ಟಸುಖಗಳೆಲ್ಲ ಅವರದ್ದೇ ಅಲ್ಲವೇ. ಅವಕ್ಕೆಲ್ಲ ತಾನೇಕೆ ತಲೆಕೆಡಿಸಿಕೊಳ್ಳಬೇಕು ಹಾಗೂ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು…?’ ಎಂದು ಯೋಚಿಸಿ ಉದಾಸೀನನಾದ. ಆದರೆ ಮರುಕ್ಷಣ, ‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top