ಧಾರಾವಾಹಿ

ಆವರ್ತನ

ಅದ್ಯಾಯ-38

ಮಸಣದಗುಡ್ಡೆಯ ಎರಡನೆಯ ಬನ ಜೀರ್ಣೋದ್ಧಾರದ ನಂತರ ಗುರೂಜಿಯವರ ನಕ್ಷತ್ರವೇ ಬದಲಾಗಿಬಿಟ್ಟಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಸಂಪಾದನೆ ದುಪ್ಪಟ್ಟಾಗಿ ಕಷ್ಟಕಾರ್ಪಣ್ಯಗಳೆಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ತೂರಿ ಹೋಗಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು. ಅವರೀಗ ತಮ್ಮ ಜ್ಯೋತಿಷ್ಯ ವಿಭಾಗವನ್ನೂ, ಧಾರ್ಮಿಕ ಕೈಂಕರ್ಯಗಳ ವ್ಯವಹಾರವನ್ನೂ ಅಪ್ಪನ ಹಳೆಯ ಕೋಣೆಯಿಂದ ಹೊಸದಾಗಿ ನಿರ್ಮಿಸಿದ ವಿಶಾಲ ಪಡಸಾಲೆಯ ಹವಾನಿಯಂತ್ರಿತ ಕೊಠಡಿಗೆ ವರ್ಗಾಯಿಸಿದ್ದರು. ಆ ಕಛೇರಿಗೂ ಮತ್ತು ವಠಾರದ ಕೆಲವು ಕಡೆಗಳಿಗೂ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಆ ಉಪಕರಣಗಳು ಅವರ ವ್ಯವಹಾರಕ್ಕೆ ಸರ್ಪಗಾವಲಾಗಿದ್ದವು. ಇಷ್ಟಾಗುತ್ತಲೇ ಅವರು ತಮ್ಮ ಮಕ್ಕಳ ಭವಿಷ್ಯವನ್ನೂ ರೂಪಿಸಲು ನಿರ್ಧರಿಸಿದರು. ಅಪ್ಪ ಅಮ್ಮನನ್ನೂ ಮತ್ತು ತಮ್ಮ ಕನ್ನಡ ಮಾಧ್ಯಮದ ಸಹಪಾಠಿಗಳನ್ನೂ ಹಾಗೂ ವಠಾರದ ಆತ್ಮೀಯರನ್ನೂ ಅಗಲಿ ದೂರದ ಪರಕೀಯ ಶಾಲೆಗೆ ಹೋಗಲು ಸುತಾರಾಂ ಇಷ್ಟವಿಲ್ಲದೆ ಸದಾ ಅಳುತ್ತ ಕೂರುತ್ತಿದ್ದ ಮಗಳು ದೀಕ್ಷಾ ಮತ್ತು ಮಗ ದ್ವಿತೇಶ್‍ನನ್ನು ಗದರಿಸಿ, ಓಲೈಸಿ ಮಡಿಕೇರಿಯ ಪ್ರತಿಷ್ಠಿತ ರೆಸಿಡೆನ್‍ಶಿಯಲ್ ಆಂಗ್ಲ ಮಾಧ್ಯಮ ಸ್ಕೂಲಿಗೆ ದೊಡ್ಡ ಮೊತ್ತದ ಡೊನೇಷನ್ ಕೊಟ್ಟು ಸೇರಿಸಿ ನೆಮ್ಮದಿಪಟ್ಟರು.

ಗುರೂಜಿಯವರಲ್ಲಿದ್ದ ಅಪಾರ ಧಾರ್ಮಿಕ ಸ್ವಜ್ಞಾನದಿಂದಲೂ ವಿಶೇಷ ಬುದ್ಧಿಶಕ್ತಿಯಿಂದಲೂ ಅವರತ್ತ ಆಕರ್ಷಿತರಾಗಿ ಬರುತ್ತಿದ್ದ ಬಡವರ, ದುರ್ಬಲರ ಮತ್ತು ಶ್ರೀಮಂತವರ್ಗದವರ ನಾನಾ ವಿಧದ ಸಮಸ್ಯೆ, ತೊಂದರೆಗಳನ್ನು ಅವರು ಬಹಳ ಕರುಣೆ ಮತ್ತು ಕೌಶಲ್ಯದಿಂದ ಹೋಗಲಾಡಿಸುವ ಕ್ರಮವು ಬಹಳ ಬೇಗನೇ ಅವರನ್ನು, ‘ಜನಾನುರಾಗಿ ಜ್ಯೋತಿಷ್ಯರು!’ ಎಂಬ ಹೆಗ್ಗಳಿಕೆಗೂ ಪಾತ್ರರನ್ನಾಗಿಸಿತ್ತು. ಹಾಗಾಗಿ ಅವರ ಬೇಡಿಕೆಯನ್ನೂ ಹೆಚ್ಚಿತ್ತು. ಗುರೂಜಿಯವರ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದ ರಾಜ್ಯದ ಪ್ರಸಿದ್ಧ, ‘ಅವಿಭಾಜ್ಯ’ ಎಂಬ ಖಾಸಗಿ ದೂರದರ್ಶನ ಮಾಧ್ಯಮವು ಪ್ರತೀ ಶುಕ್ರವಾರ ಅವರನ್ನು ತಮ್ಮ ವಾಹಿನಿಗೆ ಕರೆಯಿಸಿಕೊಂಡು, ‘ಮಹರ್ಷಿ ವಚನ!’ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರಪಡಿಸುತ್ತ ಅವರಿಗೆ ಮತ್ತಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಗುರೂಜಿಯವರ ಈ ಎಲ್ಲಾ ಸೃಜನಶೀಲ ಕಾರ್ಯಚಟುವಟಿಕೆಗಳಿಂದಾಗಿ ಅಪಾರ ಸಿರಿವಂತಿಕೆಯೂ ಅವರನ್ನು ಅರಸಿ ಬಂದಿದೆ. ಆದ್ದರಿಂದ ಅವರೀಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಬ್ಯುಸಿಯಾಗಿರುವುದು ಅನಿವಾರ್ಯವಾಗಿದೆ. ತಮ್ಮ ಕೆಲಸದ ಒತ್ತಡವನ್ನು ತುಸು ಕಡಿಮೆ ಮಾಡಿಕೊಳ್ಳಲು ಅವರು ರಾಘವ ಮತ್ತು ಅಣ್ಣಪ್ಪ ಎಂಬಿಬ್ಬರು ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಹಿರಿಯರ ನೆನಪಿಗಾಗಿ ಮೊನ್ನೆ ಮೊನ್ನೆಯವರೆಗೆ ಕ್ಷೀಣವಾಗಿ ಉಸಿರಾಡಿಕೊಂಡಿದ್ದ ಹಳೆಯ ಮನೆಯನ್ನು ಒಡೆದುರುಳಿಸಿ, ದೇವಕಿಯ ಆಸೆಗೂ ಮತ್ತು ತಮ್ಮ ಘನತೆಗೂ ಸರಿಹೊಂದುವಂಥದ್ದೊಂದು ಮೂರು ಸಾವಿರ ಚದರಡಿಯ ಭವ್ಯ ಬಂಗಲೆಯನ್ನು ತೋಟದ ನಟ್ಟನಡುವೆ ಕಟ್ಟಿಸಿಕೊಂಡು ಪುಟ್ಟ ಸಂಸಾರದೊಂದಿಗೆ ಹೆಮ್ಮೆಯಿಂದ ಬದುಕುತ್ತ, ಬಿಡುವಿಲ್ಲದೆ ದುಡಿಯುತ್ತ ಇನ್ನಷ್ಟು ಯಶಸ್ಸು ಗಳಿಸುವತ್ತಲೇ ಮುಖ ಮಾಡಿದ್ದಾರೆ.

                                                                                ***

ಅಂದು ಮುಂಜಾನೆ ಒಂಬತ್ತು ಗಂಟೆಯ ಹೊತ್ತು. ಸುಮಿತ್ರಮ್ಮ ರಾಧಾಳನ್ನು ಕರೆದುಕೊಂಡು ಗುರೂಜಿಯ ಮನೆಗೆ ಬಂದರು. ಆಗ ಗುರೂಜಿಯವರ ಕಛೇರಿಯಲ್ಲಿ ಹದಿನೈದಿಪ್ಪತ್ತು ಜನರ ಸಣ್ಣ ದಿಬ್ಬಣವೇ ನೆರೆದಂತಿತ್ತು. ಸ್ವಲ್ಪ ಮಂದಬುದ್ಧಿಯ ಅವರ ಸಹಾಯಕ ಅಣ್ಣಪ್ಪ ಬಂದವರನ್ನೆಲ್ಲ ಅಭಿಮಾನದಿಂದ ಕುಳ್ಳಿರಿಸಿ ವಿಚಾರಿಸುತ್ತ ಬಾಯಾರಿಕೆ, ಟೀ, ಕಾಫಿ ಕೊಡುವ ಸೇವೆಯಲ್ಲಿ ತೊಡಗಿ ನಗುನಗುತ್ತ ಓಡಾಡುತ್ತಿದ್ದ. ಚತುರ ಬುದ್ಧಿಯ ರಾಘವ ಯಾರ ಕಣ್ಣಿಗೂ ಬೀಳದೆ ಗುರೂಜಿಯವರು ವಹಿಸಿದ್ದ ಗುಪ್ತಕಾರ್ಯವನ್ನು ನಿಭಾಯಿಸುತ್ತಿದ್ದ. ಸುಮಿತ್ರಮ್ಮನೂ, ರಾಧಾಳೂ ಜನರ ಕೊನೆಯ ಸಾಲಿನಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಹೇಮಚಂದ್ರ ಎಂಬ್ಬ ದುಬೈ ರಿಟರ್ರ್‍ನ್ ವ್ಯಕ್ತಿಯೊಬ್ಬ ಆಗಮಿಸಿದ. ಹೇಮಚಂದ್ರ ಇಪ್ಪತ್ತು ವರ್ಷಗಳ ಕಾಲ ದುಬೈಯ ಹೊಟೇಲೊಂದರಲ್ಲಿ ಹಗಲು ರಾತ್ರಿ ದುಡಿದು ಸಂಪಾದಿಸಿ ಎರಡು ವರ್ಷದ ಹಿಂದಷ್ಟೇ ಆ ದೇಶವನ್ನು ಬಿಟ್ಟು ಊರಿಗೆ ಬಂದಿದ್ದವನು, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ್ದ ಹಲವು ಲಕ್ಷ ರೂಪಾಯಿಗಳನ್ನು ಬಳಸಿ ಊರಿನಲ್ಲಿ ಹೊಟೇಲು ಉದ್ಯಮ ಆರಂಭಿಸಿ ಗೌರವದಿಂದ ಬಾಳಬೇಕೆಂದು ಮನಸ್ಸು ಮಾಡಿದ್ದ. ಹಾಗಾಗಿ ಅದಕ್ಕವನು ಸೂಕ್ತ ಜಾಗವೊಂದನ್ನೂ ಹುಡುಕುತ್ತಿದ್ದ. ಊರಿನಲ್ಲಿ ಅದಾಗಲೇ ಪ್ರಸಿದ್ಧವಾಗಿದ್ದ, ‘ಹೋಟೆಲ್ ಕೊಡೆಕ್ಕೆನಾ’ (ಉಪ್ಪು, ಹುಳಿ, ಖಾರದಂಥ ಮಸಾಲೆ ಪದಾರ್ಥಗಳು ಸಮಾ ಪ್ರಮಾಣದಲ್ಲಿ ಬೆರೆತ ಸ್ವಾದಿಷ್ಟ ಖಾದ್ಯಕ್ಕೆ ತುಳುವಿನಲ್ಲಿ: ‘ಕೊಡಕ್ಕೆನಾ!’ ಎಂದು ಉದ್ಗರಿಸುವ ವಾಡಿಕೆ ಇದೆ) ಎಂಬ ಮಾಂಸಹಾರಿ ಹೊಟೇಲಿನ ಪಕ್ಕದ ಕಟ್ಟಡವೊಂದು ದಲ್ಲಾಳಿ ಲಕ್ಷ್ಮಣನ ಮೂಲಕ ಖಾಲಿ ಇರುವುದು ಅವನಿಗೆ ತಿಳಿಯಿತು.

ಹೊಟೇಲು ಕೊಡೆಕ್ಕೆನಾದಲ್ಲಿ ವಿವಿಧ ಬಗೆಯ ಕರಿದ ಮೀನು ಮತ್ತು ರುಚಿಕಟ್ಟಾದ ಮಾಂಸದ ಅಡುಗೆ ನಾಡಿನಾದ್ಯಂತ ಪ್ರಸಿದ್ಧವಾಗಿತ್ತು. ವರ್ಷದ ಮುನ್ನೂರರ್ವತ್ತೈದು ದಿನವೂ ತೆರೆದಿರುತ್ತಿದ್ದ ಆ ಹೊಟೇಲಿನಲ್ಲಿ ಜನಜಂಗುಳಿ ಹೇಗೆ ತುಂಬಿರುತ್ತದೆಯೆಂದರೆ, ಊಟ ಮಾಡುತ್ತಿದ್ದವರ ಹಿಂದೆ ಮುಂದೆ ತೂರಿ ನಿಂತುಕೊಂಡು ಕಾಯುತ್ತ ಸೀಟು ಖಾಲಿಯಾಗುತ್ತಲೇ ಮುಲಾಜಿಲ್ಲದೆ ನುಗ್ಗಿ ಕುಳಿತು ಉಂಡು ಹೋಗುವಂಥ ಜನರಿದ್ದರು. ಒಮ್ಮೆ ಆ ಹೊಟೇಲಿನ ಗಿರಾಕಿಗಳ ಧಾವಂತವನ್ನೂ ಅಲ್ಲಿನ ಊಟದ ರುಚಿಯನ್ನೂ ಸ್ವತಃ ಅನುಭವಿಸಿದ ಹೇಮಚಂದ್ರ ಅದರ ಪಕ್ಕದಲ್ಲಿಯೇ ತನ್ನ ವ್ಯಾಪಾರವನ್ನೂ ಆರಂಭಿಸಲು ಮನಸ್ಸು ಮಾಡಿದ. ದುಬೈ ನಮೂನೆಯ ಅಡುಗೆಯಿಂದ ಗಿರಾಕಿಗಳನ್ನು ಆಕರ್ಷಿಸಿ ಹಣ, ಹೆಸರು ಎರಡನ್ನೂ ಒಟ್ಟಿಗೆ ಗಳಿಸಲು ಇಚ್ಛಿಸಿದ. ಹಾಗಾಗಿ ದಲ್ಲಾಳಿ ಲಕ್ಷ್ಮಣ ತೋರಿಸಿದ ಕಟ್ಟಡದ ಅರ್ಧ ಭಾಗವನ್ನು ಬಾಡಿಗೆಗೆ ಪಡೆದುಕೊಂಡ. ಅಂತರ್‍ರಾಷ್ಟ್ರೀಯ ವಿನ್ಯಾಸದಿಂದ ಅದನ್ನು ಸುಸಜ್ಜಿತಗೊಳಿಸಲು ದುಬೈ ಸಂಪಾದನೆಯ ಬಹುಪಾಲು ವಿನಿಯೋಗಿಸಿದ. ಅದಕ್ಕೆ ‘ಹೊಟೇಲ್ ಸತ್ಕಾರ್’ ಎಂದು ನಾಮಕರಣ ಮಾಡಿ ಒಂದು ಶುಭದಿನದಂದು ವ್ಯಾಪಾರವನ್ನು ಆರಂಭಿಸಿದ. ಊಟ, ತಿಂಡಿ ತಿನಿಸುಗಳ ಬೆಲೆಯೇನೂ ದುಬಾರಿಯಿರಲಿಲ್ಲ. ಆದ್ದರಿಂದ ಕೊಡೆಕ್ಕೆನಾದ ಒಂದಷ್ಟು ಗಿರಾಕಿಗಳು ಮತ್ತು ಹೊಸಬರೂ ಹೇಮಚಂದ್ರನ ಹೊಟೇಲಿಗೆ ಬರುತ್ತ ವಿವಿಧ ಖಾದ್ಯಗಳ ರುಚಿಯನ್ನು ಸವಿಯತೊಡಗಿದರು. ಹಾಗಾಗಿ ಒಂದಷ್ಟು ಕಾಲ ವ್ಯಾಪಾರ ಭರದಿಂದ ಸಾಗಿತು. ಹೇಮಚಂದ್ರನ ಹೊಟೇಲ್‍ನ ಆಧುನಿಕ ವಿನ್ಯಾಸವನ್ನೂ ಅದರ ಆರಂಭದ ವೈಭವವನ್ನೂ ಕಂಡ ಕೊಡೆಕ್ಕೆನಾದ ಹೊಟೇಲ್ ಮಾಲಕ ರವಿರಾಜ ಮತ್ತು ಅವನ ಚಿಕ್ಕಪ್ಪ ದುಗ್ಗಪ್ಪಣ್ಣ ಇಬ್ಬರೂ ಕೊಡೆಕ್ಕೆನವಾಗಿ ನಕ್ಕರು. ಆದರೆ ಹೇಮಚಂದ್ರ ತನ್ನ ಅಡುಗೆಗೆ ಬಳಸುತ್ತಿದ್ದ ಕೃತಕ ರಾಸಾಯನಿಕವೂ ಮತ್ತು ಹೊಟೇಲ್ ಕೊಡೆಕ್ಕೆನಾದ ಅಡುಗೆಯ ತಾಜಾ ರುಚಿಗಳು ಇವನ ಆಹಾರದಲ್ಲಿ ಸಿಗದಿದ್ದುದನ್ನೂ ಬಹಳ ಬೇಗನೇ ಮನಗಂಡ ಗಿರಾಕಿಗಳ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸುತ್ತ ಹೋಯಿತು.

ಆದ್ದರಿಂದ ಹೇಮಚಂದ್ರ ಹೊಟೇಲು ಆರಂಭಿಸಿದ ಐದಾರು ತಿಂಗಳೊಳಗೆ ಅವನು ಅಷ್ಟು ದೊಡ್ಡ ಹೊಟೇಲಿನ ಗಲ್ಲಾದಲ್ಲಿ ಕುಳಿತು ನೊಣ ಹೊಡೆಯುವ ಪರಿಸ್ಥಿತಿಗೆ ಬಂದು ತಲುಪಿದ. ಕೊನೆಗೆ ಅವನ ಅವಸ್ಥೆ ಕೆಲಸಗಾರರಿಗೆ ಸಂಬಳ ನೀಡಲೂ ಸಾಧ್ಯವಿಲ್ಲದಂತಾಗಿ ಒಬ್ಬೊಬ್ಬರೇ ಕೆಲಸಬಿಟ್ಟು ಹೋಗತೊಡಗಿದರು. ನಂತರ ಕಟ್ಟಡದ ಮಾಲಿಕನಿಂದಲೂ ಬಾಡಿಗೆಯ ವಿಷಯದಲ್ಲಿ ತಕರಾರೆದ್ದು ಹೇಮಚಂದ್ರ ಹೈರಾಣಾಗಿಬಿಟ್ಟ. ಆದರೆ ಅಷ್ಟರಲ್ಲಿ ಕಾಲವೂ ಮಿಂಚಿತ್ತು. ಹೊರದೇಶದಲ್ಲಿ ದುಡಿದ ಹಣವೆಲ್ಲ ನೀರಲ್ಲಿಟ್ಟ ಹೋಮವಾಗಿತ್ತು. ಅದರೊಂದಿಗೆ ಅವನು ಮತ್ತಷ್ಟು ಸಾಲದ ಸುಳಿಗೂ ಸಿಲುಕಿದ್ದ. ಕೊನೆಗೊಂದು ದಿನ ಜೀವನದಲ್ಲಿ ಜಿಗುಪ್ಸೆ ಬಂದು, ರಾತ್ರೋರಾತ್ರಿ ಹೋಟೇಲಿಗೆ ಬೀಗ ಜಡಿದು ಹೊರಟವನು ಕೆಲವು ಕಾಲ ಬುದ್ಧಿಭ್ರಮಣೆಗೊಂಡವನಂತೆ ಎಲ್ಲೆಲ್ಲೋ ತಿರುಗಾಡತೊಡಗಿದ. ಆದರೆ ಇದೇ ಸಮಯದಲ್ಲಿ ಅವನ ದೂರದ ಸಂಬಂಧಿ ಪ್ರಕಾಶನೆಂಬವನೊಬ್ಬ ಅವನ ಸಹಾಯಕ್ಕೆ ಓಡೋಡಿ ಬಂದ.

‘ಅಲ್ಲ ಮಾರಾಯಾ, ನೀನು ಹೋಗಿ ಹೋಗಿ ಆ ಕೊಡೆಕ್ಕೆನಾದವನ ಪಕ್ಕದಲ್ಲಿ ವ್ಯಾಪಾರ ಶುರುಮಾಡಿದ್ದಿಯಲ್ಲ. ಸ್ವಲ್ಪವಾದರೂ ಮಂಡೆ ಬೇಡವಾ ನಿಂಗೆ…? ಅವನು ಅಲ್ಲಿ ಎಷ್ಟು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಗೊತ್ತುಂಟಾ? ಅವನ ಅಪ್ಪನ ಕಾಲದಿಂದಲೂ ಆ ಹೊಟೇಲು ಅಲ್ಲುಂಟು. ಹಾಗಾಗಿ ಅವನ ಹತ್ತಿರ ಯಾರು ಹೊಟೇಲಿಟ್ಟರೂ ಉದ್ಧಾರವಾಗುವುದಿಲ್ಲ. ಯಾಕೆಂದರೆ ತಮ್ಮ ಸುತ್ತಮುತ್ತ ಯಾರನ್ನೂ ಮೇಲೆ ಬರಲು ಅವರು ಬಿಡುವುದಿಲ್ಲ. ಬಂದವರೆಲ್ಲರೂ ನಿನ್ನಂತೆಯೇ ಕೈ ಸುಟ್ಟುಕೊಂಡು ಓಡಿ ಹೋದವರೇ! ಇದನ್ನೆಲ್ಲ ವಿಚಾರಿಸಿಕೊಂಡೇ ಮುಂದುವರೆಯಬೇಕಿತ್ತು ನೀನು. ನಿನ್ನ ವ್ಯಾಪಾರದ ವಿಜೃಂಭಣೆಯನ್ನು ನೋಡಿದ ಅವರು ಹೊಟ್ಟೆ ಉರಿದುಕೊಂಡು ನಿನಗೆ ಸರಿಯಾಗಿ ಮಾಟ ಮಾಡಿಸಿದ್ದಾರೆ ಬಡ್ಡೀಮಕ್ಕಳು! ಆ ರವಿರಾಜನ ಚಿಕ್ಕಪ್ಪ, ದುಗ್ಗಪ್ಪ ಇದ್ದಾನಲ್ವಾ ಅವನು ಯಾವಾಗಲೂ ಬಲ್ಮೆಯವರ ಮನೆಯಲ್ಲೇ ಬಿದ್ದುಕೊಂಡಿರುತ್ತಾನೆ. ನಿನ್ನಂತೆಯೇ ಅಲ್ಲಿ ವ್ಯಾಪಾರ ಆರಂಭಿಸಿದ ತುಂಬಾ ಜನ ಅವರ ಮಾಟಮಂತ್ರಗಳಿಗೇ ಲಗಾಡಿ ಹೋಗಿದ್ದಾರೆ. ಈಗ ನಿನ್ನ ಕಥೆಯೂ ಹಾಗೆಯೇ ಆಯಿತು ನೋಡು!’ ಎಂದು ತನ್ನ ಬಂಧುವಿನ ನಷ್ಟಕ್ಕೆ ಅನುಕಂಪ ತೋರಿಸುವ ನೆಪದಿಂದ ಅವನ ಸೋಲಿನ ಗಾಯವನ್ನು ಮತ್ತಷ್ಟು ಕೆದಕಿ ಉಪ್ಪು, ಖಾರ ಸವರಿ ಬಳಿಕ ಮುಲಾಮು ಹಚ್ಚುವ ಕೆಲಸಕ್ಕೂ ಮುಂದಾದ.

‘ಈಗ ಸೋತು ಸುಣ್ಣವಾದ ಮೇಲೆ ಮಂಡೆ ಹಾಳು ಮಾಡಿಕೊಂಡು ಬದುಕುವುದರಲ್ಲಿ ಅರ್ಥವೇನಿದೆ ಹೇಳು. ಎಲ್ಲದಕ್ಕೂ ಪರಿಹಾರವೊಂದು ಇದ್ದೇ ಇರುತ್ತದೆ. ನಾವದನ್ನು ತಾಳ್ಮೆಯಿಂದ ಹುಡುಕಬೇಕಷ್ಟೆ!’ ಎಂದು ಆಪ್ತವಾಗಿ ಅಂದವನು ತನ್ನ ಆತ್ಮೀಯರೂ ಮತ್ತು ಮೇಲಾಗಿ ತನ್ನ ಕೆಲಸಕ್ಕೆ ಕೈತುಂಬಾ ಕಮಿಶನ್ ಕೊಡುವವರೂ ಆದ ಏಕನಾಥ ಗುರೂಜಿಯವರ ಮನೆಯ ದಾರಿಯನ್ನು ಅವನಿಗೆ ತೋರಿಸಿಕೊಟ್ಟ. ತನ್ನ ದೂರದ ಬಂಧುವಿಂದ ಭರವಸೆಯ ಬೆಳಕನ್ನು ಕಂಡ ಹೇಮಚಂದ್ರನಿಗೆ ಮತ್ತೆ ಜೀವನದಲ್ಲಿ ಆಶಾಭಾವನೆ ಮೂಡಿತು. ಆ ದಿನವೇ ಗುರೂಜಿಯವರ ಮನೆಯತ್ತ ಧಾವಿಸಿದ.

ಗುರೂಜಿಯ ಗುಪ್ತ ಸಹಾಯಕ ರಾಘವನು ಹೇಮಚಂದ್ರ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ. ಆದರೆ ಅವನು ಈ ಮೊದಲೆಂದೂ ಗುರೂಜಿಯ ಹತ್ತಿರ ಬಂದುದನ್ನು ರಾಘವ ನೋಡಿರಲಿಲ್ಲ. ಆದ್ದರಿಂದ ಅವನು ಕೂಡಲೇ ತನ್ನ ಪತ್ತೆದಾರಿ ಕೆಲಸಕ್ಕಿಳಿದ. ಹೇಮಚಂದ್ರ ಗುರೂಜಿಯ ಮನೆಯಂಗಳಕ್ಕಡಿಯಿಟ್ಟವನು ಅಲ್ಲಿನ ಜನಸಂದಣಿಯನ್ನು ಕಂಡು ಬೇಸರಗೊಂಡು ಅಲ್ಲೇ ಸಮೀಪವಿದ್ದ ಮಾವಿನ ಮರದ ಬುಡದ ಕಲ್ಲು ಬೆಂಚಿನ ಮೇಲೆ ಕುಳಿತ. ಅವನನ್ನು ಗಮನಿಸಿದ ಅಣ್ಣಪ್ಪ ಕಾಫಿ ತಂದು ಕೊಟ್ಟು ಮುಗ್ಧವಾಗಿ ಹಲ್ಲು ಗಿಂಜಿ ಹೊರಟು ಹೋದ. ಹೇಮಚಂದ್ರ ಕಾಫಿ ತೆಗೆದುಕೊಂಡು ಕುಡಿಯುತ್ತ, ಚಡಪಡಿಸುತ್ತ ಸಮಯ ಕಳೆಯತೊಡಗಿದ. ಮಾವಿನ ಮರದ ಸುತ್ತಮುತ್ತ ತಂಪಾದ ಗಾಳಿ ಬೀಸುತ್ತಿತ್ತು. ಕೆಲಹೊತ್ತಿನಲ್ಲಿ ಅವನ ಮನಸ್ಸೂ ತಿಳಿಯಾಗುತ್ತ ಬಂತು. ಹಾಗಾಗಿ ತಾನು ಗುರೂಜಿಯವರಿಗೆ ವಿವರಿಸಬೇಕಾದ ವಿಚಾರವನ್ನು ಯೋಚಿಸುತ್ತ ಕಾಫಿ ಹೀರತೊಡಗಿದ. ಅಷ್ಟರಲ್ಲಿ ರಾಘವನ ಆಗಮನವಾಯಿತು. ಅವನು ತಾನೂ ಗುರೂಜಿಯವರನ್ನು ಕಾಣಲು ಬಂದ ಗಿರಾಕಿಯಂತೆ ಹೇಮಚಂದ್ರನತ್ತ ಬಂದವನು ಪರಿಚಯದ ನಗೆ ಬೀರುತ್ತ, ‘ಉಸ್ಸಪ್ಪಾ…!’ ಎಂದು ಉಸಿರು ದಬ್ಬಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಆದರೆ ಹೇಮಚಂದ್ರ ತನ್ನ ತಾಪತ್ರಯಗಳ ಮಡುವಿನಲ್ಲೇ ಮುಳಗೇಳುತ್ತಿದ್ದವನು ಅವನ ನಗುವಿಗೆ ಪ್ರತಿ ನಗದೆ ಅಲಕ್ಷ್ಯ ಮಾಡಿದ. ಅದರಿಂದ ರಾಘವ ತುಸು ಪೆಚ್ಚಾದ. ಆದರೆ ಅವನು ತನ್ನ ಕಾಯಕದಲ್ಲಿ ಪಳಗಿದವನು. ಆದ್ದರಿಂದ, ‘ಛೇ! ಛೇ! ಇದೆಂಥದು ಮಾರಾಯ್ರೇ ಇಲ್ಲಿನ ಅವಸ್ಥೆ…! ಈ ಗುರೂಜಿಯವರಲ್ಲಿಗೆ ನೀವು ಯಾವತ್ತೇ ಬನ್ನಿ, ಬೆಳಿಗ್ಗೆಯಿಂದ ನಡುರಾತ್ರಿಯವರೆಗೆ ಜನರ ಗುಂಪೊಂದು ತಪ್ಪುವುದೇ ಇಲ್ಲ ನೋಡಿ!’ ಎಂದು ಹೇಮಚಂದ್ರನನ್ನು ನೋಡುತ್ತ ಬೇಸರದಿಂದ ಅಂದ.

ಆಗ ಹೇಮಚಂದ್ರ ವಾಸ್ತವಕ್ಕೆ ಬಂದು, ‘ಹೌದಾ…?’ ಎಂದು ಅಚ್ಚರಿಯಿಂದ ಅಂದವನು ಬಳಿಕ, ‘ನಾನು ಇದೇ ಮೊದಲ ಸಲ ಬರುತ್ತಿರುವುದು ಮಾರಾಯ್ರೇ. ಈ ಗುರೂಜಿ ಅಷ್ಟೊಂದು ಫೇಮಸ್ಸಾ…?’ ಎಂದ ಕುತೂಹಲದಿಂದ.

‘ಓಹೋ, ಹೌದಾ…? ಹಾಗಾದರೆ ನೀವು ಸರಿಯಾದ ಜಾಗಕ್ಕೇ ಬಂದಿದ್ದೀರಿ ಅಂತಾಯ್ತು. ಅಯ್ಯೋ, ಈ ಗುರೂಜಿಯವರ ಶಕ್ತಿಯನ್ನು ನಿಮಗೆ ನಾನೇನು ಹೇಳುವುದು ಮಾರಾಯ್ರೇ. ಊರಿಗೂರೇ ಇವರ ಚಮತ್ಕಾರವನ್ನು ಕೊಂಡಾಡುತ್ತಿದೆ!’ ಎಂದು ರಾಘವನು, ಗುರೂಜಿಯವರು ದೇವರೇ ಎಂಬಂತೆ ಹೊಗಳಿದ.

‘ಓಹೋ… ಹೌದಾ ಮಾರಾಯ್ರೇ…ಹಾಗಾದರೆ ನೀವೂ ಇವರ ಹಳೆ ಗಿರಾಕಿಯೇ ಎಂದಾಯ್ತು…!’

‘ಛೇ, ಛೇ! ಗಿರಾಕಿ ಬಿರಾಕಿ ಎಂಥದ್ದೂ ಇಲ್ಲ. ಹಿಂದೊಂದು ಕಾಲದಲ್ಲಿ ಹಾಳಾಗಿ ಹೋಗಿದ್ದ ನನ್ನ ಬದುಕನ್ನು ಮತ್ತೆ ಬೆಳಗಿಸಿದಂಥ ಮಹಾನುಭಾವ ಇವರು!’

‘ಹೌದಾ, ಅದು ಹೇಗೆ…?’

‘ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡುವುದು ಹೇಳಿ? ಒಂದುವೇಳೆ ನನ್ನ ಆಗಿನ ಅವಸ್ಥೆಯನ್ನು ನೀವು ಕಣ್ಣಾರೆ ನೋಡಿರುತ್ತಿದ್ದರೆ ಈಗಲೇ ಎದ್ದು ಹೋಗಿ ಗುರೂಜಿಯವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತು ಬಿಡುತ್ತಿದ್ದೀರಷ್ಟೇ. ಹಾಗಿತ್ತು ನನ್ನ ದುರಾವಸ್ಥೆ!’

‘ಹೌದಾ? ಅಂಥದ್ದೇನಾಗಿತ್ತು ಮಾರಾಯ್ರೇ…?’

‘ಅದೊಂದು ದೊಡ್ಡ ಕಥೆ. ಇಲ್ಲಿನ ಜನರ ಗುಂಪು ನೋಡಿದರೆ ನಮಗೂ ಸಮಯ ಬೇಕಾದಷ್ಟಿದೆ ಅಂತನ್ನಿಸುತ್ತದೆ. ಚುಟುಕಾಗಿ ಹೇಳುತ್ತೇನೆ ಕೇಳಿ. ಕೆಲವು ವರ್ಷಗಳ ಹಿಂದೆ ಎಲ್ಲರಂತೆ ನಾನೂ ಒಳ್ಳೆಯ ವ್ಯಾಪಾರ ವಹಿವಾಟು ಮಾಡಿಕೊಂಡು ಚೆನ್ನಾಗಿದ್ದವನು. ಆದರೆ ನಮ್ಮ ಹತ್ತಿರ ಸಂಬಂಧಿಕನೊಬ್ಬ ನನ್ನನ್ನು ಪೂರಾ ಲಗಾಡಿ ತೆಗೆದುಬಿಟ್ಟ. ಅವನ ಬಣ್ಣಬಣ್ಣದ ಮಾತಿಗೂ, ಮತ್ಸರದ ಕಣ್ಣುಗಳಿಗೂ ಸದಾ ಮಂಗವಾಗುತ್ತಿದ್ದ ನನ್ನ ಮೇಲೆ ಅವನು ದೊಡ್ಡ ಮಾಟ ಮಾಡಿಸಿದ್ದು ನನಗೆ ಗೊತ್ತೇ ಆಗಲಿಲ್ಲ ನೋಡಿ. ಹಾಗಾಗಿ ಒಮ್ಮೆಲೇ ಸರ್ವನಾಶವಾಗಿಬಿಟ್ಟೆ. ಆದರೆ ದೇವರು ನನ್ನ ಕೈಬಿಡಲಿಲ್ಲ. ಅದೇಹೊತ್ತಿಗೆ ಯಾರೋ ಪುಣ್ಯಾತ್ಮರು ಈ ಗುರೂಜಿಯವರ ಮನೆಯ ಬಾಗಿಲು ತೋರಿಸಿದರು. ಆವತ್ತೇ ಇಲ್ಲಿಗೆ ಓಡಿ ಬಂದುಬಿಟ್ಟೆ. ಆನಂತರ ದೇವರ ದಯೆಯಿಂದ ನನ್ನ ಜೀವನ ಮತ್ತೆ ಸುಧಾರಿಸಿತು. ಈಗ ಇವರ ಕೃಪೆಯಿಂದ ಚೆನ್ನಾಗಿ ಸಂಪಾದನೆಯಿದೆ. ಇದಿಷ್ಟು ನನ್ನ ಕಥೆ!’ ಎಂದ ರಾಘವ ತನ್ನ ಚಿನ್ನದ ವಾಚಿನ ಡಾಬನ್ನೂ ಕೈಬೆರಳುಗಳಲ್ಲಿ ಹೊಳೆಯುತ್ತಿದ್ದ ಉಂಗುರಗಳನ್ನೂ ಹೇಮಚಂದ್ರ ನೋಡಲೆಂದೇ ಎರಡೆರಡು ಬಾರಿ ಕೊಡವಿ ಸರಿಪಡಿಸಿಕೊಂಡವನು ರಪ್ಪನೆ ಗೋಲ್ಡ್‍ಫ್ಲ್ಯಾಕ್ ಸಿಗರೇಟೊಂದನ್ನು ಹಚ್ಚಿ ಉಲ್ಲಾಸದಿಂದ ಸೇದತೊಡಗಿದ.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

2 thoughts on “

  1. ಸಂಪತ್ತು ಮನುಷ್ಯನ ಜೀವನಶೈಲಿಯನ್ನು ಬದಲಾಯಿಸಲು ಯಾವ ರೀತಿ ಪ್ರೇರಣೆಯಾಗುವುದೆಂದು ಏಕನಾಥ ಗುರೂಜಿಯ ಪಾತ್ರ ಸ್ಪಷ್ಟ ನಿದರ್ಶನವಾಗಿದೆ. ಈ ಅಧ್ಯಾಯದಲ್ಲಿ, ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹೇಮಚಂದ್ರ ಪ್ರವೇಶ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಅಭಿನಂದನೆ ಸರ್.

Leave a Reply

Back To Top