ಕಥಾ ಸಂಗಾತಿ
ಉತ್ತಮ ಎ ದೊಡ್ಮನಿ
“ರಂಗಣ್ಣನ ಮಂಗ”


ಒಂದು ಊರಿನಲ್ಲಿ ಒಬ್ಬ ರಂಗಣ್ಣ ಎನ್ನುವವನಿದ್ದ. ಇರಲು ಒಂದು ಚಿಕ್ಕ ಮನೆ. ಅದನ್ನು ಮನೆ ಅಂದರೆ ಮನೆ, ಜೋಪಡಿ ಅಂದರೆ ಜೋಪಾಡಿ, ನೀವು ಏನಾದರೂ ಅನ್ಕೋಬಹುದು, ಆದರೆ ರಂಗಣ್ಣನಿಗೆ ಮಾತ್ರ ಅದು ಮನೆನೇ.
ಅವನಿಗೆ ನನ್ನವರು-ತನ್ನವರು ಎಂದು ಹೇಳಿಕೊಳ್ಳುವರು ಯಾರು ಇರಲಿಲ್ಲ. ಇಷ್ಟಾ ಆದರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇಲ್ಲದಿದ್ದರೆ ಮರಗಮ್ಮನ ಕಟ್ಟೆಯ ಮೇಲೆ ಕುಳಿತು ಯಾರಾದರೂ ಕೊಟ್ಟ ಬೀಡಿ ಸೇದುತ್ತಾ ಕಾಲ ಮ್ಯಾಲ ಕಾಲ ಹಾಕಿ ಮಲಗ್ತೀದ್ದ. ಊಟ ಸಿಕ್ಕರೆ ತಿನ್ನುತ್ತಿದ್ದ, ಇಲ್ಲ ಅಂದರೆ ಇಲ್ಲ. ಬದುಕ ಅಂದುರು ಹಿಂಗೆ ಇರಬೇಕು ಅನ್ನೋ ನಿಯಮ-ಗಿಮಾ ಏನ್ ಇರಲಿಲ್ಲ.
ಆಗಾಗ ಊರ ಪಕ್ಕದ ಕಾಡಿಗೆ ಹೋಗಿ ಒಣ ಕಟ್ಟಿಗೆಗಳನ್ನು ಆರಿಸಿಕೊಂಡು ಹೋಟೆಲ್ಗೆ ಮಾರುತ್ತಿದ್ದ. ಅದಕ್ಕೆ ಒಂದು ಕಪ್ ಚಹಾ, ಕೆಲವೊಮ್ಮೆ ನಾಸ್ಟಾ ಸಿಗುತ್ತಿತ್ತು. ಅದೇ ಅವನ ಸಂಬಳ.ಆ ಹೋಟೆಲ್ ತೊಗರಿ ಕಟ್ಟಿಗೆಯಿಂದ ಕಟ್ಟಿದ ಅದರ ಮೇಲೆ ನಾಲ್ಕು ಪತ್ರಾ. ಚಹಾ ಗ್ಲಾಸ್ ತೊಳೆದಿದ ನೀರಿನಲ್ಲಿ ನಾಯಿಗಳು, ಹಂದಿಗಳು ಖಾಯಂ ಠಿಕಾಣಿ. ಕೋಳಿಗಳು ನೆಂಟರ ಹಾಗೆ ಬಂದು ದಣಿಯೂ ಹಾರಿಸ್ಕೊತಿವು. ಒಳಗೆ ನೊಣಗಳದ್ದೇ ಜಾತ್ರೆ.
ರಂಗಣ್ಣ ಹೋಟೆಲ್ ಒಳಗೆ ಹೋಗ್ತಾ ಇರಲಿಲ್ಲ. ಅವನಿಗೋಸ್ಕರ ಹೊರಗೇ ಒಂದು ಗ್ಲಾಸ್ ಇಟ್ಟಿರುತ್ತಿದ್ದರು. ಅದರಲ್ಲಿ ಚಹಾ ಕುಡಿದು, ತಾನೆ ತೊಳೆದು ಅದೇ ಜಾಗದಲ್ಲಿ ಇಟ್ಟು ಹೊರಡುತ್ತಿದ್ದ.ಅವಾ ಏನು ಹುಟ್ಟಿನಿಂದ ಕುಂಟನಲ್ಲ. ಚಿಕ್ಕವನಿದ್ದಾಗ ಅಪ್ಪುನ ಜೊತೆ ದನ ಮೇಯಿಸಲು ಹೋಗಿ ತೆಗ್ಗಿನಲ್ಲಿ ಬಿದ್ದಿದ್ದ. ಆಗ ಸರಿಯಾದ ಚಿಕಿತ್ಸೆ ಸಿಗದೇ ಕುಂಟಾಗಿದ್ದ. ಊರವರು ದಯೆಯಿಂದ ಸರ್ಕಾರದ ಅಂಗವಿಕಲ ವೇತನ ಮಾಡಿಸಿಕೊಟ್ಟಿರು. ಅದು ಯಾರ ಅಂತ ಅವನೀಗ ಗೊತ್ತಿಲ್ಲ. ಅದೇ ಅವನ ಬದುಕಿನ ಒಂದು ಆಧಾರವಾಗಿತ್ತು. ಹೀಗೆ ಯಾರಿಗೂ ತೊಂದರೆ ಕೊಡದೆ, ಯಾರ ಮೇಲೂ ಆಸೆ ಇಡದೆ ರಂಗಣ್ಣ ತನ್ನ ಬದುಕು ಸಾಗಿಸುತ್ತಿದ್ದ.
ಒಂದು ದಿನ ಬೆಳಗ್ಗೆ ಎದ್ದು, ಹೋಟೆಲ್ನಲ್ಲಿ ಚಹಾ ಕುಡಿದು, ಬೀಡಿ ಹಚ್ಚಿಕೊಂಡು ಕಟ್ಟಿಗೆ ತರಲು ಕಾಡಿಗೆ ಹೋದ. ಅಲ್ಲಲ್ಲಿ ಬಿದ್ದಿದ್ದ ಒಣ ಕಟ್ಟಿಗೆಗಳನ್ನು ಕೂಡಿಸಿ ಹೊರೆ ಕಟ್ಟಲು ಮುಂದಾದಾಗ, ಹತ್ತಿರದಿಂದ ಸಣ್ಣದ್ದೊಂದು ಧ್ವನಿ ಕೇಳಿಸಿತು.”ಏನಿರಬಹುದು?” ಎಂದು ಸುತ್ತಲೂ ನೋಡಿದ.
ಮುಳ್ಳಿನ ಗಿಡದ ನಡುವೆ ಒಂದು ಮಂಗ್ಯಾನ ಮರಿ ಸಿಕ್ಕಿಕೊಂಡು ಕಿರುಚುತ್ತಿತ್ತು.”ಅಯ್ಯೋ ಪಾಪ!” ಎಂದು ಓಡಿಹೋಗಿ ಮುಳ್ಳುಗಳನ್ನು ಬದಿಗಿಟ್ಟು ಅದನ್ನು ಎಚ್ಚರಿಕೆಯಿಂದ ಹೊರತೆಗೆದ.
ಕಟ್ಟಿಗೆಯ ಹೊರೆ ತಲೆಯ ಮೇಲೆ ಹೊತ್ತು ಊರ ಕಡೆ ಹೊರಟ.ಆದರೆ ಆ ಮರಿ ಅವನ ಹಿಂದೆ ಹಿಂದೆ ಬರತೊಡಗಿತು. ಓಡಿಸಿದರೂ ಅದು ಹೋಗಲಿಲ್ಲ.
ಕೊನೆಗೆ ನಗುತ್ತಾ, “ನನಗೂ ಯಾರಿಲ್ಲ… ನಿನಗೂ ಯಾರಿಲ್ಲ… ಇನ್ನು ನಾವು ಇಬ್ಬರೂ ದೋಸ್ತುರು” ಎಂದು ಹೇಳಿ ತನ್ನ ಹೆಗಲ ಮೇಲೆ ಕೂರಿಸಿಕೊಂಡ.ಅಲ್ಲಿಂದಲೇ ಅವರಿಬ್ಬರ ಬದುಕು ಒಂದಾಯಿತು.
ರಂಗಣ್ಣ ಹೆಗಲ ಮೇಲೆ ಕುಳಿತ ಮಂಗ್ಯಾನ ಮರಿ ಊರಿಗೆ ಬಂದಾಗ ಎಲ್ಲರ ಕಣ್ಣು ಅವರಿಬ್ಬರ ಮೇಲೆಯೇ ನೆಟ್ಟಿತು.ಹೋಟೆಲ್ ಮುಂದೆ ಕಟ್ಟಿಗೆಯ ಹೊರೆ ಇಳಿಸುತ್ತಿದ್ದಂತೆ ಭೀಮಣ್ಣಗೌಡ ನಗುತ್ತಾ, “ಏನಪ್ಪಾ ರಂಗ, ಇವತ್ತ ಇದೇನು ನಿಂದು ಹೊಸ ಅವತಾರ?” ಎಂದ.
ಪಕ್ಕದಲ್ಲೇ ನಿಂತಿದ್ದ ತುರುಕೂರು ಮುಲ್ಲಾ, “ಅಯ್ಯೋ… “ರಂಗಕ್ಕೆ ಉಪ್ಪಾರ ಮಂಗ್ಯಾ” ಎಂದು ತಮಾಷೆ ಮಾಡಿದ.
ಅಲ್ಲಿದ್ದವರೆಲ್ಲ ನಕ್ಕರು. ರಂಗಣ್ಣ ಮಾತ್ರ ಯಾರ ಮಾತಿಗೂ ಉತ್ತರಿಸದೆ ಮುಗುಳ್ನಗುತ್ತಾ ಕಟ್ಟಿಗೆಯನ್ನು ಇಳಿಸಿ ತನ್ನ ಜೋಪಡಿಯ ಕಡೆ ನಡೆದುಹೋದ.
ಮನೆಗೆ ಬಂದ ಕೂಡಲೆ ಮರಿಯನ್ನು ಕೆಳಕ್ಕಿಳಿಸಿದ. ಅದರ ಕಾಲಿಗೆ ಸಣ್ಣ ಗಾಯವಾಗತ್ತು ಅರಸೀಣ ಹಚ್ಚಿ, ಹಳೆಯ ಬಟ್ಟೆಯ ತುಂಡಿನಿಂದ ಮೆಲ್ಲಗೆ ಕಟ್ಟಿದ.ಒಂದು ಹಳೆಯ ತಟ್ಟೆಯಲ್ಲಿ ನೀರು ಹಾಕಿ ಅದರ ಮುಂದೆ ಇಟ್ಟ. ನಂತರ ಮನೆಯಲ್ಲಿ ತಿನ್ನಲು ಏನಾದರೂ ಇದೆಯೇ ಎಂದು ಹುಡುಕಿದ.ಕೊನೆಗೆ ಪಕ್ಕದ ಮನೆಯ ಪಾರವ್ವ ಹಿಂದಿನ ರಾತ್ರಿ ಕೊಟ್ಟಿದ್ದ ಒಣ ರೊಟ್ಟಿ ಸಿಕ್ಕಿತು. ಅದನ್ನು ಚಿಕ್ಕಚಿಕ್ಕ ತುಂಡುಗಳಾಗಿ ಮುರಿದು ಮಂಗದ ಮುಂದೆ ಇಟ್ಟ.ಮೊದಲು ಅದು ಅನುಮಾನದಿಂದ ನೋಡಿತು. ನಂತರ ಹಸಿವಿನಿಂದ ನಿಧಾನವಾಗಿ ತಿನ್ನತೊಡಗಿತು. ರೊಟ್ಟಿಯನ್ನೂ ಅದರ ಜೊತೆ ಹಂಚಿಕೊಂಡ.
ಕಾಡಿಗೆ ಹೋಗಿ ಬಂದ ಆಯಾಸದಿಂದ ರಂಗಣ್ಣ ಬಾಗಿಲು ಮುಂದ ಮಾಡಿ ನೆಲದ ಮೇಲೆಯೇ ಅಡ್ಡಾದ.
ಮಂಗ್ಯಾನ ಮರಿಗೆ ಮಾತ್ರ ಹೊಸ ಮನೆಯ ಕುತೂಹಲ.
ಒಮ್ಮೆ ಈ ಮೂಲೆಗೆ, ಮತ್ತೊಮ್ಮೆ ಆ ಮೂಲೆಗೆ ಓಡುತ್ತಾ, ಗೋಡೆಯ ಮೇಲೆ ಹತ್ತಿ ಇಳಿಯುತ್ತಾ, ಪಾತ್ರೆಗಳನ್ನು ಮುಟ್ಟುತ್ತಾ ಆಟವಾಡತೊಡಗಿತು.ರಂಗಣ್ಣ ಕಣ್ಣು ಮುಚ್ಚಿದರೆ ಸಾಕು, ಅದು ಬಂದು ಅವನ ಎದೆ ಮೇಲೆ ಹತ್ತುತ್ತಿತ್ತು.
ಕಿವಿ ಎಳೆಯುತ್ತಿತ್ತು.ಕೂದಲು ಹಿಡಿದು ಎಳೆಯುತ್ತಿತ್ತು.
“ಅಯ್ಯೋ… ಇದು ಮಲಗೋಕೂ ಬಿಡಂಗ ಕಾಣಲ್ಲ!” ಎಂದು ನಗುತ್ತಾ ಅದನ್ನು ತಬ್ಬಿಕೊಂಡ.
“ಇದು ಯಾವಾಗ ಬೇಕಾದರೂ ಓಡಿಹೋಗಬಹುದು. ಅದಕ್ಕೆ ಕಟ್ಟಿ ಹಾಕಲು ಚೈನ್ ಮಾಡಿ ಜೊತೆ ತಗೊಂಡು ಓಡಾಡಬಹುದು, ಜೊತೆಯಲ್ಲೇ ಇಟ್ಟುಕೊಳ್ಳಬಹುದು.”
ಎಂದುಕೊಂಡು ಮಂಗವನ್ನು ಬಗಲಲ್ಲಿ ಎತ್ತಿಕೊಂಡು ಕಂಬಾರ ನಾಗಪ್ಪನ ಮನೆ ಕಡೆ ಹೊರಟ.ನಾಗಪ್ಪನ ಮನೆಗೆ ಹೋಗುವ ದಾರಿ ಶಾಲೆಯ ಮುಂದೆ ಹಾದು ಹೋಗುತ್ತಿತ್ತು.
ಅಷ್ಟರಲ್ಲಿ ಶಾಲೆ ಆಟಕೆ ಬಿಡಲಾಗಿತ್ತು.ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು.
ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ಕಂಡ ತಕ್ಷಣ ಎಲ್ಲ ಮಕ್ಕಳು ಓಡಿಬಂದರು.”ಮಂಗ… ಮಂಗ…!” ಎಂದು ಕೂಗುತ್ತಾ ಅದರ ಹಿಂದೆ ಬಿದ್ದರು.
ಮೊದಲು ಮಂಗ ಹೆದರಿತು.ಟಿಸ್ ಟಿಸ್ ಅಂತ ಅವುರ ಮ್ಯಾಲೆ ಜಿಗಿದಾಗೆ ಮಾಡದು. ಸ್ವಲ್ಪ ಹೊತ್ತಿನಲ್ಲೇ ಮಕ್ಕಳ ಜೊತೆ ಆಟವಾಡಲು ಶುರುಮಾಡಿತು.ಒಬ್ಬನ ತಲೆಯ ಮೇಲೆ ಹಾರಿ ಕುಳಿತಿತು.ಇನ್ನೊಬ್ಬನ ಕೈಯಲ್ಲಿದ್ದ ಕಡಲೆ ಕಸಿದುಕೊಂಡಿತು.ಮಕ್ಕಳು ನಗುತ್ತಾ ಅದರ ಹಿಂದೆ ಓಡಿದರು.
ಶಾಲೆಯ ಮೈದಾನವೇ ಕ್ಷಣಾರ್ಧದಲ್ಲಿ ಸಂಭ್ರಮದಿಂದ ತುಂಬಿತು.ರಂಗಣ್ಣ ಮಾತ್ರ ನಿಂತು ಮಕ್ಕಳ ಖುಷಿಯನ್ನು ನೋಡಿ ಮನಸಾರೆ ನಕ್ಕ.”ಇದು ನನಗಿಂತ ಬೇಗ ಊರವರ ಮನಸ್ಸು ಗೆದ್ದಿತಲ್ಲ…” ಎಂದು ತನ್ನೊಳಗೆ ಮಾತಾಡಿಕೊಂಡ.
ಅಲ್ಲಿಂದ ನಿಧಾನವಾಗಿ ನಾಗಪ್ಪನ ಮನೆಯ ಕಡೆ ಹೆಜ್ಜೆ ಹಾಕಿದ.
ನಾಗಪ್ಪನ ಮನೆಯ ಮುಂದೆ ಹೋಗಿ ರಂಗಣ್ಣ ನಿಂತ.
“ನಾಗಪ್ಪಣ್ಣ… ಓ ನಾಗಪ್ಪಣ್ಣ…” ಎಂದು ಎರಡು-ಮೂರು ಸಲ ಕೂಗಿದ.ಒಳಗಿಂದ ಕಬ್ಬಿಣದ ಮೇಲೆ ಸುತ್ತಿಗೆಯ ಸದ್ದು ನಿಂತಿತು.”ಯಾರು?” ಎಂದು ಹೊರಗೆ ಬಂದ ನಾಗಪ್ಪ, ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ನೋಡಿ ಕಕ್ಕಾಬಿಕ್ಕಿಯಾದ.
“ಏನಯ್ಯ ರಂಗಾ! ಇದು ಎಲ್ಲಿಂದ ತಂದೆ?”
“ಕಾಡಲ್ಲಿ ಮುಳ್ಳಿಗೆ ಸಿಕ್ಕಿಕೊಂಡಿತ್ತು. ಪಾಪ ಅಳ್ತಿತ್ತು. ಬಿಡಿಸಿಕೊಂಡು ಬಂದೆ. ಈಗ ನನ್ನ ಜೊತೆಯಲ್ಲೇ ಇರ್ತದೆ. ಇದಕ್ಕೊಂದು ಸಣ್ಣ ಚೈನ್ ಮಾಡಿಕೊಡು.”ನಾಗಪ್ಪ ನಕ್ಕ.
“ನಿನಗೇ ಗತಿಯಿಲ್ಲ. ಈಗ ಇದನ್ನೂ ಸಾಕ್ತೀಯಾ?”
ಅಷ್ಟರಲ್ಲಿ ಅಲ್ಲೇ ಕುಳಿತಿದ್ದ ಕುರುಬರ ಬೀರಣ್ಣ,
“ನಾಯಿ ಸಾಕೋರು, ಬೆಕ್ಕು ಸಾಕೋರು ನೋಡಿದ್ದೇವೆ. ನೀನು ಮಂಗ ಸಾಕ್ತೀಯಪ್ಪಾ! ಊರಲ್ಲಿ ನೀನೇ ಭಾರಿ.”
ರಂಗಣ್ಣ ಮಾತ್ರ ಮಂಗದ ತಲೆಯನ್ನು ಸವರುತ್ತಾ,
“ಇದಕ್ಕೂ ಜೀವ ಇದೆ ಬೀರಣ್ಣ. ಇದಕ್ಕೂ ಪ್ರೀತಿ ಬೇಕಲ್ಲ…” ಎಂದ.ಆ ಒಂದು ಮಾತಿಗೆ ಅಲ್ಲಿದ್ದವರು ಕ್ಷಣಕಾಲ ಮೌನರಾದರು.ಅಷ್ಟರಲ್ಲಿ ಅಡುಗೆ ಮನೆಯಿಂದ ನಾಗಪ್ಪನ ಹೆಂಡತಿ ಹೊರಬಂದಳು.”ಏನ್ರಿ ಇಷ್ಟೊಂದು ಗದ್ದಲ?”
ಅವಳ ಕಣ್ಣು ಮಂಗದ ಮರಿಯ ಮೇಲೆ ಬಿತ್ತು.
“ಅಯ್ಯೋ… ಎಷ್ಟು ಮುದ್ದಾಗಿದೆ!” ಎಂದು ಅದನ್ನು ಎತ್ತಿಕೊಳ್ಳಲು ಕೈ ಚಾಚಿದಳು.ಮಂಗ ಹೆದರಿ ಓಡಿ ಹೋಗಿ ರಂಗಣ್ಣನ ಬೆನ್ನ ಹಿಂದೆ ಅಡಗಿತು.ನಾಗಪ್ಪ ನಗುತ್ತಾ,ನೋಡಪ್ಪ ಈ ಹೆಂಗಸುರ ಕಂಡೂರಾ ಗಂಡದೇರು ಅಷ್ಟೇ ಅಂಜತರ ಅನ್ಕೊಂಡಿದ್ದೆ, ಆದುರು ಈ ಮಂಗ್ಯಾಗಳು ಹೇದುರ್ತಾವ ಅಂತ ನಾಗಪ್ಪ. ಎಲ್ಲರೂ ಒಮ್ಮೆಲೇಗೆ ಕೊಳ್ಳ ಅಂತ ನಕ್ಕುರು.ಹೌದು ಹೌದು ಬಾರಿ ಅಂಜತಿರಿ ಅಂತ
ಒಳಗೆ ಹೋಗಿ ಒಂದು ತಟ್ಟೆಯಲ್ಲಿ ಬಿಸಿ ರೊಟ್ಟಿ, ಸ್ವಲ್ಪ ಪಲ್ಯ, ಒಂದು ಬಟ್ಟಲಲ್ಲಿ ನೀರು ತಂದು ರಂಗಣ್ಣನ ಮುಂದೆ ಇಟ್ಟಳು.”ಮೊದಲು ನೀನು ಊಟ ಮಾಡು. ಆಮೇಲೆ ಚೈನ್ ಮಾಡಿಸಿಕೋ.”ರಂಗಣ್ಣ ಕೃತಜ್ಞತೆಯಿಂದ ಅವಳನ್ನು ನೋಡಿದ.
ಏ ಬೀರಪ್ಪ ನಿಂಗೊತ್ತಿಲ್ಲ ಈ ಹೆಣ್ಣು ಮಕ್ಕಳು. ನಾ ಯಾರ್ ಹೇಳು, ಕಂಬಾರ ನಾಗಪ್ಪ. ಕಬ್ಬಿಣ ಕಾಸಿ ಬಗ್ಗಿಸೋದೆ ನನ್ನ ಕೆಲಸ, ಯಾವಾಗ-ಹೇಗೆ-ಎಲ್ಲಿ ಬಡಿಬೇಕಂತ ನನಗೆಲ್ಲಾ ಗೊತ್ತು. ಹೌದಪ್ಪ ಎಲ್ಲರಿಗೂ ನಿನ್ನ ಧೈರ್ಯ ಇರಬೇಕಲ್ಲ. ಈಗ ಈ ಕೆಲಸ ಬಿಟ್ಟು ಊರಿನ ಗಂಡುಸರಿಗ-ಮುಂದ ಮದಿ ಆಗವರಿಗೆ ಪಾಠ ಮಾಡ “ಹೆಂಡತಿಯರಿಗೆ ಹದ್ದಬಸ್ತನಲ್ಲಿ ಹೇಗ ಇಡುವುದು ಅಂತ” ಗಿರಾಕಿ ಬಹಳ ಆತದ. ಹೇ ಹುಚ್ಚ ಅದಕ್ಕೆ ನೀವೆಲ್ಲ ಫೇಲ್ ಆತಿರಿ ನೋಡು, ನಾವೂ ಮಾಡೋದು ಅವರಿಗೆ ಗೊತ್ತಾಗಬಾರದು. ಎಲ್ಲಾ ಸೀಕ್ರೆಟ್ ಇರಬೇಕು. ಇದೆಲ್ಲ ಗೊತ್ತಾದರೆ ನನ್ನ ದುಖಾನ ಬಂದಾತದ. ಸರಿ ಏನಾದ್ರೂ ಮಾಡು ನಾ ಹೋಗ್ತೀನಿ, ಚಾ ಗ್ಲಾಸ್ ಅಲ್ಲೇ ಕಟ್ಟಿ ಮೇಲೆ ಇಟು, ರೊಕ್ಕ ಆಮೇಲೆ ಕೂಡ್ತಿನಿ ಅಂತ, ಕೊಡಲಿ ಹೆಗಲ ಮ್ಯಾಲ್ ಇಟ್ಟುಕೊಂಡು ಹೊರಟ
ಊಟ ಮುಗಿದ ಮೇಲೆ ನಾಗಪ್ಪ ಸಣ್ಣ ಕಬ್ಬಿಣದ ಸರ ಮಾಡಿ, ಕುತ್ತಿಗೆಗೆ ನೋವಾಗದಂತೆ ಮೃದುವಾಗಿ ಚೈನ್ ಹಾಕಿದ ಕೂಡಲೇ ಅದು ಎರಡು ಹೆಜ್ಜೆ ಹಿಂದೆ ಸರಿದು, ಮತ್ತೆ ರಂಗಣ್ಣನ ಹೆಗಲ ಮೇಲೆ ಹಾರಿ ಕುಳಿತಿತು.ಈ ಪ್ರೀತಿಗೆ ಚೈನ್ ಬೇಕಾಗಲ್ಲ. ಆದರೆ ಊರು ದೊಡ್ಡದು. ಕಳೆದು ಹೋದರೆ ಹುಡುಕೋಕಾಗಲ್ಲ.”ಆ ಮಾತು ಕೇಳಿ ನಾಗಪ್ಪನ ಮುಖದಲ್ಲಿ ಮೆಚ್ಚುಗೆಯ ನಗು ಮೂಡಿತು.ಅಲ್ಲಿದ್ದ ಎಲ್ಲರಿಗೂ ಮೊದಲ ಬಾರಿಗೆ ರಂಗಣ್ಣನ ಸರಳ ಮನಸ್ಸಿನ ಆಳ ಅರ್ಥವಾಯಿತು.
ಅಂದು ಸಂಜೆ ರಂಗಣ್ಣ ಮಂಗವನ್ನು ಹೆಗಲ ಮೇಲೆ ಕೂರಿಸಿಕೊಂಡು ಊರೊಳಗೆ ನಡೆದಾಗ, ಮಕ್ಕಳು ಹಿಂದೆ ಹಿಂದೆ ಓಡಿದರು.ಯಾರೋ ಕಡಲೆ ಕೊಟ್ಟರು.ಇನ್ನೊಬ್ಬರು ಬಾಳೆಹಣ್ಣು ಕೊಟ್ಟರು.ಹೋಟೆಲ್ನವನು ಬ್ರೆಡ್ ಕೊಟ್ಟ.
ಮಂಗ ಎಲ್ಲವನ್ನೂ ಮೊದಲು ರಂಗಣ್ಣನ ಕೈಗೆ ಕೊಟ್ಟು, ಅವನು ಕೊಟ್ಟ ನಂತರವೇ ತಿನ್ನುತ್ತಿತ್ತು.ಅದನ್ನು ನೋಡಿದ ತುರುಕೂರು ಮುಲ್ಲಾ ನೋಡ್ರಿ ಗೌಡ ಮನಷ್ಯರು ಅಂತೂ ಜೋಡಿ ಆಲಿಲ್ಲ, ಈ ಮೂಕ ಪ್ರಾಣಿ ಜೋಡಿಯಿತ್ತು.
ಏನ್ ಮಾಡೋದು ಅವುನ ಅವ್ವ ಸಂಡಸ್ ಮಾಡುಕು ಹೋದಾಗ ಹಾವು ಕಚ್ಚಿ ಸತ್ತುಳು. ಅದೇ ಟೆನ್ಶನ್ ದಾಗ ಇದ್ದು ಇದ್ದು ಹೀಗ ಆದ. ಅದಕ್ಕೆ ಗೌಡ್ರೆ ನೀವು ನಮ್ಮೂರಿಗೊಂದು ಶೌಚಾಲಯ ಕಟ್ಟಿಸಬೇಕು. ಗಂಡಸರಿಗೆ ಅಲ್ಲದೆ ಹೋದರೂ ಈ ಹೆಣ್ಣು ಮಕ್ಕಳಿಗಾದರೂ ಶೌಚಾಲಯ ಕಟ್ಟಿಸಬೇಕು. ಗಂಡಸುರು ಎಲ್ಲದುರು ಹೋಗ್ತಾರ ಪಾಪ ಈ ಹೆಂಗಸುರದು ಹೈರಾಣ ಆದಾ.
ನೀ ಹೇಳೋದ ಕರೆ ಅದಾರೋ. ಪಂಚಾಯಿತಿಯಿಂದ ಕಟ್ಟುಸ್ತೇವು ಅಂತೇಳಿ ರೊಕ್ಕ ತೊಗೋತಾರೆ, ಕಟ್ಟಿಸಿದುರು ಅದರಲ್ಲಿ ಕೂಡಲ್ಲ ಮತ್ತೆ ಹೊರಗೆ ಹೋಗ್ತಾರೆ. ಈ ನಮ್ಮ ಹಳ್ಳಿ, ಜನ ಮಡಿ-ಮೈಲಿಗೆ ಅದು ಇದು ಅಂತ ಹೇಳಿ. ನಾ ಏನು ಕೈಹಿಡಿದು ಕುಡಿಸುಕಾಗುತ್ತಾ ಮುಲ್ಲಾ. ನೀವು ಹೇಳೋದು ಕರೆಯಾದರೆ ಜನರಿಗೆ ಬುದ್ಧಿ ಬರಬೇಕು ಗೌಡ್ರೆ. ಅಂತ ಹೇಳಿ ಅವರು ಲೆಕ್ಕದಲ್ಲಿ ಬೆಳಗ್ಗಿನ ಚಾ ಕುಡಿದು ಅವುನು ಕೈಯಾಗ ಸಂಡಾಸ್ಹೊ ಡಬ್ಬಾ ಹಿಡಕೊಂಡು ಹಳ್ಳುದ ಕಡೆ ಹೊರಟು ಹೋದ.
ಕಾಲ ಕಳೆಯುತ್ತಾ ಹೋಯಿತು.ಮಂಗ ಈಗ ರಂಗಣ್ಣನ ಸಾಕುಪ್ರಾಣಿಯಷ್ಟೇ ಅಲ್ಲ, ಅವನ ನೆರಳೇ ಆಗಿತ್ತು.
ರಂಗಣ್ಣ ಎಲ್ಲಿಗೆ ಹೋದರೂ ಅದು ಹೆಗಲ ಮೇಲೆಯೇ ಇರುತ್ತಿತ್ತು. ಕಟ್ಟಿಗೆ ತರಲು ಕಾಡಿಗೆ ಹೋದರೆ ಜೊತೆ, ಹೋಟೆಲ್ಗೆ ಚಹಾ ಕುಡಿಯಲು ಹೋದರೆ ಜೊತೆ, ಮರಗಮ್ಮನ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದಿದರೂ ಜೊತೆ, ಮತ್ತ ಆಗಾಗ ಅದನ್ನು ಬೀಡಿ ಸೆದತಿತ್ತು. ಬೆಳಿಗ್ಗೆ ರಂಗಣ್ಣ ಎದ್ದರೆ ಮೊದಲು ಅವನ ಮುಖವನ್ನು ಕೈಯಿಂದ ಮುಟ್ಟಿ ಎಬ್ಬಿಸುತ್ತಿತ್ತು. ಅವನು ತಡವಾಗಿ ಎದ್ದರೆ ಕಿವಿ ಎಳೆದು ಎಚ್ಚರ ಮಾಡುತ್ತಿತ್ತು. ಅದನ್ನು ನೋಡಿ ಪಕ್ಕದ ಮನೆಯ ಪಾರವ್ವ,”ರಂಗಣ್ಣಾ, ನಿನಗೆ ಹೆಂಡತಿ ಇರಲಿಲ್ಲ. ಆದರೆ ಈಗ ಇದೆ ನೀನುಗ ಮಗುವಿನ ರೂಪದಲ್ಲಿ ಬಂದಿದೆ ಅನಿಸ್ತದೆ.”ಎಂದಳು.
ರಂಗಣ್ಣ ನಕ್ಕು,
“ನನ್ನ ಅದೃಷ್ಟಕ್ಕೇ ಮನುಷ್ಯರು ಸಿಗಲಿಲ್ಲ ಅಕ್ಕ… ನನ್ನ ತಾಯಿಯ ಇದರ ರೂಪದಲ್ಲೇ ಬಂದಿದಾಳೆ.”ಎಂದ.ಊರಿನ ಮಕ್ಕಳಿಗೆ ಮಂಗ ಎಂದರೆ ಪ್ರಾಣ.ಶಾಲೆ ಬಿಟ್ಟ ಕೂಡಲೇ ರಂಗಣ್ಣನ ಮನೆಯ ಮುಂದೆ ಸೇರುತ್ತಿದ್ದರು.ಯಾರಾದರೂ ಕಡಲೆ ತರುತ್ತಿದ್ದರು.ಇನ್ನೊಬ್ಬರು ಬಾಳೆಹಣ್ಣು.
ಮತ್ತೊಬ್ಬರು ಹಣ್ಣುಗಳು.ಮಂಗ ಕೂಡ ಮಕ್ಕಳ ಜೊತೆ ಆಟವಾಡುತ್ತಾ, ಅವರ ಭುಜದ ಮೇಲೆ ಹತ್ತುತ್ತಾ,ಓಡಾಡುತ್ತಾ ಎಲ್ಲರ ಮನಸ್ಸನ್ನೂ ಗೆದ್ದಿತ್ತು.
ಹಿಂದೆ “ಕುಂಟ ರಂಗ” ಎಂದು ಕರೆಯುತ್ತಿದ್ದವರು ಈಗ ಪ್ರೀತಿಯಿಂದ,”ರಂಗಣ್ಣ!” ಎಂದು ಕರೆಯುತ್ತಿದ್ದರು.
ಒಬ್ಬ ಮೂಕ ಜೀವ ರಂಗಣ್ಣನ ಬದುಕಿನ ಜೊತೆಗೆ ಅವನ ಗೌರವವನ್ನೂ ಬದಲಿಸಿತ್ತು.ಒಮ್ಮೆ ಸಂತೆಗೆ ಹೋಗಿದ್ದ ಒಬ್ಬ ವ್ಯಾಪಾರಿ ಮಂಗದ ಆಟ ನೋಡಿ ನಿಂತ.
“ಇದನ್ನು ನನಗೆ ಮಾರಿಬಿಡು. ಹತ್ತು ಸಾವಿರ ಕೊಡ್ತೀನಿ.”
ಎಂದ.ರಂಗಣ್ಣ ನಗುತ್ತಾ ತಲೆಯಾಡಿಸಿದ.
“ನನಗೆ ಇದು ಹಣ ಅಲ್ಲಪ್ಪ… ನನ್ನ ಅಮ್ಮನೆ.”
“ಹದಿನೈದು ಸಾವಿರ ಕೊಡ್ತೀನಿ.”
“ಇಲ್ಲ.”
“ಇಪ್ಪತ್ತು ಸಾವಿರ.”
ರಂಗಣ್ಣನ ಕಣ್ಣು ತುಂಬಿಕೊಂಡವು.
“ಹಣ ಕೊಟ್ಟು ಅಮ್ಮನನ್ನು ಕೊಳ್ಳೋಕಾಗುತ್ತಾ? ಸ್ನೇಹನನ್ನ ಕೊಂಡುಕೊಳ್ಳೋಕಾಗುತ್ತಾ? ಹಾಗಿದ್ರೆ ಇದನ್ನ ಹೇಗೆ ಮಾರಲಿ?”ವ್ಯಾಪಾರಿ ಮೌನವಾಗಿ ಹೊರಟ.
ಅಲ್ಲಿದ್ದವರು ರಂಗಣ್ಣನನ್ನು ಹೊಸ ದೃಷ್ಟಿಯಿಂದ ನೋಡಿದರು.ಬಡವನಾಗಿದ್ದ. ಆದರೆ ಸಂಬಂಧಗಳ ಬೆಲೆ ಗೊತ್ತಿದ್ದ ಶ್ರೀಮಂತ.ಒಮ್ಮೆ ಊರ ಜಾತ್ರೆಯಲ್ಲಿ ಮಂಗ ಮಾಡಿದ ಚೇಷ್ಟೆ ನೋಡಲು ಜನರು ಗುಂಪುಗುಂಪಾಗಿ ಸೇರಿದರು.ಯಾರೋ ಬಿಸ್ಕತ್ ಕೊಟ್ಟರು.ಯಾರೋ ತೆಂಗಿನಕಾಯಿ.ಯಾರೋ ಬಾಳೆಹಣ್ಣು.ಆದರೆ ಮಂಗ ಎಲ್ಲವನ್ನೂ ಮೊದಲು ರಂಗಣ್ಣನ ಕೈಗೆ ಕೊಟ್ಟು, ಅವನು ಒಡೆದು ಕೊಟ್ಟ ನಂತರವೇ ತಿನ್ನುತ್ತಿತ್ತು.
“ನೋಡ್ರಪ್ಪಾ… ಇದಕ್ಕೆ ರಂಗಣ್ಣನೇ ಎಲ್ಲಾ.”
ಎಂದು ಒಬ್ಬ ವೃದ್ಧ ಹೇಳಿದ.ಆ ಮಾತು ಕೇಳಿ ರಂಗಣ್ಣನ ಕಣ್ಣುಗಳಲ್ಲಿ ನೀರಿನ ಹನಿ ತನಗಿರಿವಿಲ್ಲದಂತೆ ಬಂದವು”ನಾನು ಇದನ್ನ ಉಳಿಸಿದೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ… ಆದರೆ ನಿಜ ಹೇಳ್ಬೇಕಂದ್ರೆ, ನನ್ನನ್ನೇ ಬದುಕಿಸಿದ್ದು ಇದು.”ಎಂದು ಮೆಲ್ಲಗೆ ಹೇಳಿದ.
ಆ ಮಾತು ಕೇಳಿದವರಲ್ಲಿ ಹಲವರು ತಲೆ ತಗ್ಗಿಸಿದರು.
ಕೆಲವು ಸಂಬಂಧಗಳಿಗೆ ರಕ್ತ ಬೇಕಾಗುವುದಿಲ್ಲ.ಪ್ರೀತಿ ಸಾಕು.
ಮಳೆಗಾಲ ಶುರುವಾಯಿತು. ಒಂದೆರಡು ದಿನ ಸುರಿದ ಮಳೆ ಅಲ್ಲ, ಆಕಾಶಕೆ ತೂತು ಬಿದ್ದಿದೆ ಅನ್ನೋ ಹಾಗೆ ಸುರಿಯುತ್ತಿತ್ತು. ಗಾಳಿ, ಗುಡುಗು, ಮಿಂಚು—ರಾತ್ರಿಯಿಡೀ ಊರನ್ನು ಎಚ್ಚರ ಇಟ್ಟಿತ್ತು.ರಂಗಣ್ಣನ ಜೋಪಡಿಯ ಮೇಲಿದ್ದ ಹಳೆಯ ಪತ್ರಗಳು ಗಾಳಿಗೆ ಹಾರಿ, ಮಳೆಯ ನೀರು ಹನಿ-ಹನಿಯಾಗಿ ಒಳಗೆ ಬೀಳತೊಡಗಿತು.ಮಂಗ ಕೆಲವೊಮ್ಮೆ ರಂಗಣ್ಣನ ಮಡಿಲಿಗೆ ಬಂದು ಕುಳಿತರೆ, ಮತ್ತೊಮ್ಮೆ ಅವನ ಮೇಲೆ ಬಿದ್ದ ನೀರನ್ನು ತನ್ನ ಪುಟ್ಟ ಕೈಗಳಿಂದ ತಡೆಯಲು ಪ್ರಯತ್ನಿಸುತ್ತಿತ್ತು.
“ಏನಿಲ್ಲ ಮರಿ… ಬೆಳಗಾಗಲಿ, ನೋಡ್ಕೊಳೋಣ…”
ಎಂದು ರಂಗಣ್ಣ ಅದನ್ನು ತಬ್ಬಿಕೊಂಡ.ಹೊರಗೆ ಮಳೆ ಮಾತ್ರ ನಿಲ್ಲುವ ಲಕ್ಷಣವೇ ಇರಲಿಲ್ಲ.
ಮರುದಿನ ಬೆಳಗ್ಗೆ ಆಯಿತು.ಆದರೆ ಇವತ್ತು ವಿಚಿತ್ರ.
ರಂಗಣ್ಣ ಹೋಟೆಲ್ಗೆ ಬಂದಿರಲಿಲ್ಲ.ಮರಗಮ್ಮನ ಕಟ್ಟೆಯ ಮೇಲೂ ಕಾಣಿಸಲಿಲ್ಲ.ಬೆಳಗಿನ ಜಾವದಿಂದಲೇ ಸಪ್ಪಳ ಮಾಡುತ್ತಿದ್ದ ಮಂಗದ ಕಿರುಚಾಟಯಿಲ್ಲ. ಪಕ್ಕದ ಮನೆಯ ಪಾರವ್ವಗೆ ಏನೋ ಅನುಮಾನ ಹುಟ್ಟಿಸಿತು.”ಏನಾಯ್ತೋ?” ಎಂದು ಬಾಗಿಲು ತಳ್ಳಿಕೊಂಡು ಒಳಗೆ ಹೋದಳು. ಜೋಪಡಿಯ ನೆಲವೆಲ್ಲ ನೀರು.ಒಂದು ಮೂಲೆಯಲ್ಲಿ ಒದ್ದೆಯಾದ ಚಾಪೆ.ಅದರ ಮೇಲೆ ರಂಗಣ್ಣ ಮಲಗಿದ್ದ.
ಮಂಗ ಅವನ ತಲೆಯ ಬಳಿ ಕುಳಿತು, ಅವನ ಮುಖವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿತ್ತು.
“ರಂಗಣ್ಣ…!”
ಎಂದು ಪಾರವ್ವ ಜೋರಾಗಿ ಕರೆದಳು.
ಯಾವ ಉತ್ತರ ಇರಲಿಲ್ಲ.ಹತ್ತಿರ ಹೋಗಿ ಅವನ ಕೈ ಹಿಡಿದಳು.
ದೇಹ ತಣ್ಣಗಾಗಿತ್ತು.ರಾತ್ರಿಯ ಚಳಿ ಮತ್ತು ಜ್ವರ ಅವನ ಉಸಿರನ್ನೇ ಕಸಿದುಕೊಂಡಿದ್ದವು.ಆ ಕ್ಷಣದಲ್ಲಿ ಮಂಗ ಜೋರಾಗಿ ಕಿರುಚಿತು.ಅದು ಕಾಡಿನ ಕೂಗಲ್ಲ.
ತನ್ನವನನ್ನು ಕಳೆದುಕೊಂಡ ಮಗುವಿನ ಅಳುವಾಗಿತ್ತು.
ಸುದ್ದಿ ಊರಿಡೀ ಹರಡಿತು.
ಎಲ್ಲರೂ ಓಡಿಬಂದರು.
ಹೋಟೆಲ್ನವನು ಅತ್ತ.
ತುರುಕೂರು ಮುಲ್ಲಾ ಕಣ್ಣೀರೊರೆಸಿಕೊಂಡ.
ಭೀಮಣ್ಣಗೌಡ ಮಾತೇ ಬರದೆ ನಿಂತ.
ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು.
ಕುರುಬರ ಬೀರಣ್ಣ ನಿಧಾನವಾಗಿ ಹೇಳಿದ,
“ಬದುಕಿದ್ದಾಗ ಒಂಟಿಯಾಗಿದ್ದ. ಸತ್ತಾಗ ಇಡೀ ಊರನ್ನೇ ಅಳಿಸಿ ಹೋದ.”
ಊರವರು ತಮ್ಮ ಕೈಯಾರೆ ರಂಗಣ್ಣನ ಅಂತ್ಯಕ್ರಿಯೆ ನೆರವೇರಿಸಿದರು.ಕಾಡಿನ ಅಂಚಿನಲ್ಲಿದ್ದ ದೊಡ್ಡ ಆಲದ ಮರದ ಕೆಳಗೆ ಅವನಿಗೆ ಸಮಾಧಿ ಮಾಡಿದರು.
ಅಂದಿನಿಂದ ಮಂಗ ಊರಿಗೆ ಬರಲಿಲ್ಲ.ಅದು ಆಲದ ಮರವೇ ತನ್ನ ಮನೆಯನ್ನಾಗಿ ಮಾಡಿಕೊಂಡಿತು.
ಪ್ರತಿದಿನ ಬೆಳಗ್ಗೆ ಸಮಾಧಿಯ ಮೇಲೆ ಬಂದು ಮೌನವಾಗಿ ಕುಳಿತುಕೊಳ್ಳುತ್ತಿತ್ತು.ಯಾರಾದರೂ ಹಣ್ಣುಗಳು ಕೊಟ್ಟರೆ ತೆಗೆದುಕೊಳ್ಳುತ್ತಿತ್ತು.ಆದರೆ ಮೊದಲು ಸಮಾಧಿಯ ಮೇಲೆ ಇಟ್ಟು, ನಂತರವೇ ತಿನ್ನುತ್ತಿತ್ತು.ಅದನ್ನು ನೋಡಿದವರು ಮಾತಾಡದೆ ಕಣ್ಣೀರೊರೆಸಿಕೊಳ್ಳುತ್ತಿದ್ದರು.
ಮಕ್ಕಳು ಆಟವಾಡಲು ಬಂದಾಗ,
“ಇದು ರಂಗಣ್ಣನ ಮಂಗ.”
ಎಂದು ಹೊಸ ಮಕ್ಕಳಿಗೆ ತೋರಿಸುತ್ತಿದ್ದರು.ರಂಗಣ್ಣ ಕಥೆ ಒಂದು ದಂತಕಥೆಯಾಯಿತು.
ಕಾಲ ಕಳೆದಂತೆ ಮಂಗಕ್ಕೆ ವಯಸ್ಸಾಯಿತು.
“ಒಂದು ದಿನ ಬೆಳಿಗ್ಗೆ ಎಂದಿನಂತೆ ಮಕ್ಕಳು ಆಲದ ಮರದ ಕೆಳಗೆ ಆಟವಾಡಲು ಬಂದರು. ಮಂಗ ರಂಗಣ್ಣನ ಸಮಾಧಿಯ ಪಕ್ಕದಲ್ಲೇ ಮಲಗಿತ್ತು. ಯಾವಾಗಲೂ ಮಕ್ಕಳನ್ನು ಕಂಡರೆ ಜಿಗಿದು ಓಡಿಬರುತ್ತಿದ್ದ ಅದು, ಆ ದಿನ ಮಾತ್ರ ಎದ್ದಿ ಬರೆಲೇಯಿಲ್ಲ…”
ಉತ್ತಮ ಎ ದೊಡ್ಮನಿ




ಅಂತರಾಳದ ಭಾವನೆಗಳೊಂದಿಗೆ ತಾನೆ ಓಡಿಸಿಕೊಂಡು ಹೋಗುವ ಅಧ್ಬುತ ಕತೆ.