ಅಂಕಣ ಸಂಗಾತಿ

ಸಕಾಲ

ಸಕಾಲ

ಶಿವಲೀಲಾ ಹುಣಸಗಿ

ಮಹಾನಾಯಕ ನೀನು ಭೀಮರಾವ್

ರಾಷ್ಟ್ರ ಸಂವಿಧಾನಕೆ
ನೀನೆ ಶಿಲ್ಪಿಯು
ನೀನೆ ಕಲಿಸಿಕೊಟ್ಟೆ
ಸಮಾನತೆಯನು
ನಿನ್ನ ಲೇಖನಿಯ
ಬರಹ ದೇಶಕರ್ಚನೆ
ಒಂದು ಒಂದು ಮಾತುಕೂಡ
ಭೀಮ ಘರ್ಜನೆ
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್
ನಾಯಕ ನೀನು ಭೀಮರಾವ್

ಮಹಾನಾಯಕ ನೀನು ಭೀಮರಾವ್
ಹಂಸಲೇಖ

ಈ ಹಾಡು ಕೇಳಿದವರಿಗೆ ಮನಸ್ಸಿನಲ್ಲಿ ಧೈರ್ಯ, ಸಾಹಸ ಹಾಗೂ ಬದುಕಿದರೆ ಹೀಗೆ ಬದುಕಬೇಕೆಂಬ ಛಲ ಹುಟ್ಟದಿರದು.
ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಈ ಜೊತೆಗೆ ಭಾರತದ ಸಂವಿಧಾನ ರಚನೆಯಲ್ಲಿ ಗಣನೀಯ ಕೊಡುಗೆ ನೀಡಿದ ಅಂಬೇಡ್ಕರ್ ಅವರು ‘ಸಂವಿಧಾನ ಶಿಲ್ಪಿ’ ಎಂದೇ ಜನಜನಿತರಾಗಿದ್ದಾರೆ. ಭಾರತದ ಸಂವಿಧಾನ ರಚನಾಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೆನಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಡಾ.ಬಿ.ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದವರು.ಇದೇ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.

1908 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ, ಅಸ್ಪೃಶ್ಯವಾಗಿದ್ದ ಅವರ ಸಮಾಜದಲ್ಲಿ ಮೊದಲನೆಯವರು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿದರು. ಅವರ ಓದು ಕೇವಲ ಇಲ್ಲಿಗೆ ಸೀಮಿತವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥ ಶಾಸ್ತ್ರ ಮತ್ತು ರಾಜನೀವಿಷಯಗಳಲ್ಲಿ ಅವರು ಬಿ.ಎ. ಪದವಿ ಸಂಪಾದಿಸಿದರು. ನಂತರ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿ ನಂತರ ಪಿಎಚ್.ಡಿ ಪದವಿಯನ್ನು ಸಹಗಳಿಸಿದ್ದು ಅವರ ಪ್ರತಿಬಿಂಬಿಸುತ್ತದೆ‌. ಇದಷ್ಟೇ ಅಲ್ಲ 1952 ರವರೆಗೆ ದೇಶ ವಿದೇಶಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಲ್ಲದೇ, ಹಲವು ಪದವಿಗಳನ್ನು ಗಳಿಸಿದ್ದು ಅಂಬೇಡ್ಕರ್‌ರ ಮಹಾನ್ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

ನೊಂದ ಜನರಿಗೆ,ನೀ ದೇವರೋ
ಜಗ ಹೇಳಿದೆ,ಜೈ ಭೀಮರಾವ್
ಜೈ ಭೀಮ್, ಜೈ ಭೀಮ್ ,ಜೈ ಭೀಮ್
ಸಂಕಟದಲಿ ಬಂದೆ,ಆಗೀ ಆಧಾರ
ಆಗೀ ಆಧಾರ,ಆಗೀ ಆಧಾರ

ಭಾರತಕ್ಕೆ ಮರಳಿದ ಅಂಬೇಡ್ಕರ್ ಮುಂಬಯಿನಲ್ಲಿ ಬೋಧನಾ ವೃತ್ತಿಯನ್ನು ಆರಂಭಿಸಿದರು. ಈ ಜೊತೆಗೆ ವಕೀಲಿ ವೃತ್ತಿ, ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯತ್ವದ ಕಾರ್ಯ ಜೊತೆಗೆ ವೃತ್ತ ಪತ್ರಿಕೆಗಳನ್ನು ಸಹ ಅವರು ಆರಂಭಿಸಿದರು. ಲಂಡನಿನಲ್ಲಿ ಭಾರತದ ಭವಿಷ್ಯದ ಸಂವಿಧಾನದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಏರ್ಪಡಿಸಲಾಗಿದ್ದ ಮೂರು ದಿನಗಳ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಅಂಬೇಡ್ಕರ್, ಮಹತ್ವಪೂರ್ಣ ಸಲಹೆಗಳನ್ನು ನೀಡಿದರು. ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಮತ್ತು ಅವರ ಜೀವನ ಮಟ್ಟ ಸುಧಾರಿಸಲು ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಉದ್ದೇಶದಿಂದ “ಬಹಿಷ್ಕೃತ ಹಿತಕಾರಣೀ ಸಭಾ” ಎಂಬ ಕಲ್ಯಾಣ ಸಂಸ್ಥೆಯನ್ನು ಸಹ ಹುಟ್ಟು ಹಾಕುವಲ್ಲಿ ಅಂಬೇಡ್ಕರ್ ಅವರು ಮಹತ್ವಪೂರ್ಣವಾದ ಪಾತ್ರವನ್ನು ವಹಿಸಿದರು.

ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರ್ ಅವರು ಮಾಡಿದ ಅಹಿಂಸಾತ್ಮಕ ಹೋರಾಟಗಳು ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಪ್ರತ್ಯೇಕ ಚುನಾವಣಾ ಕ್ಷೇತ್ರ, ಹೀಗೇ ಇನ್ನೂ ಹತ್ತು ಹಲವು ಸೌಲಭ್ಯಗಳ ಕುರಿತಂತೆ ದಲಿತರ ಪರವಾಗಿ ಅಹಿಂಸಾತ್ಮಕ ಆಂದೋಲನಗಳ ನೇತೃತ್ವವನ್ನು ಅವರು ವಹಿಸಿದ್ದರು. ಅವರ ಈ ಹೋರಾಟದ ಪರಿಣಾಮ ಆಗ ಅವರು ಮಹಾತ್ಮಾ ಗಾಂಧಿ ಹಾಗೂ ಪ್ರಭಾವಿ ಕಾಂಗ್ರೆಸ್‌ನ ದ್ವೇಷವನ್ನು ಕಟ್ಟುಕೊಳ್ಳಬೇಕಾಗಿ ಬಂದರೂ, ಎದೆಗುಂದದೇ ಹೋರಾಟ ನಡೆಸಿದ್ದು ಅಂಬೇಡ್ಕರ್ ಅವರ ಮನಸ್ಥೈರ್ಯಕ್ಕೆ ಸಾಕ್ಷಿ.

ತಮ್ಮದೇ ಆದ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿ 1935ರ ಪ್ರಾಂತೀಯ ಚುನಾವಣೆಯಲ್ಲಿ ಜಯಶೀಲರಾದರು. ರಕ್ಷಣಾ ಸಲಹಾ ಸಮಿತಿಯ ಸದಸ್ಯ, ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಕಾರ್ಮಿಕ ಸದಸ್ಯರಾಗಿದ್ದು ಅವರ ರಾಜಕೀಯ ಜೀವನದ ಕೆಲವು ಮಹತ್ವಪೂರ್ಣ ಘಟನಾವಳಿಗಳು. ಇವಲ್ಲಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ನಾವು ನೆನಪಿಸಿಕೊಳ್ಳಬೇಕಾಗಿರುವುದು ನಮ್ಮ ಸಂವಿಧಾನದ ರಚನಾಕಾರರಾಗಿ. 1947 ರಲ್ಲಿ ಭಾರತ ಸ್ವತಂತ್ರವಾದಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನವಿತ್ತರು.ಕೆಲ ವಾರಗಳ ನಂತರ ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿದಾಗ, ಆ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು. ಇಂತಹ ಹೊಣೆಗಾರಿಕೆಯ, ಬೃಹತ್ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ ಸಂಪೂರ್ಣ ಹೆಗ್ಗಳಿಕೆ ಅಂಬೇಡ್ಕರರಿಗೆ ಸಲ್ಲಬೇಕು. ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಹಾಗೂ ಅಂಬೇಡ್ಕರರ ಕೊಡುಗೆಯನ್ನು ಇಂದಿಗೂ ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.

ಅನಾರೋಗ್ಯವಿದ್ದಾಗ್ಯೂ, 1948ರ ಆರಂಭದಲ್ಲಿ ಸಂವಿಧಾನ ರಚನೆಯ ಮಹತ್ವಪೂರ್ಣ ಜವಾಬ್ದಾರಿಯನ್ನು ಬಹುತೇಕ ಒಬ್ಬಂಟಿಯಾಗಿ ಮಾಡಿದ ಅಂಬೇಡ್ಕರರು, ಅದೇ ವರ್ಷದ ಕೊನೆಯಲ್ಲಿ ಪೂರ್ಣಗೊಳಿಸಿ, ಸಂಸತ್ತಿನಲ್ಲಿ ಮಂಡಿಸಿದರು. ಕೆಲವೇ ಕೆಲವು ತಿದ್ದುಪಡಿಯೊಂದಿಗೆ ಸಂಸತ್ತಿನ ಪೂರ್ಣ ಅಂಗೀಕಾರವನ್ನು ಇದು ಪಡೆಯಿತು. ಸಂವಿಧಾನ ರಚನೆಯಂತಹ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿದ ಅಂಬೇಡ್ಕರ್ ಅವರ ಹೆಸರು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ.ಬದುಕಿದರೆ ಹಿಂಗೆ‌ ಬದುಕಬೇಕು. ಹುಟ್ಟಿದ್ದಕ್ಕೂ ಜನ್ಮ ಸಾರ್ಥಕ.

‘ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ’ ಎಂದು ಘೋಷಿಸಿ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಅವರ ಜೀವನದ ಮತ್ತೊಂದು ಮಹತ್ವಪೂರ್ಣ ಘಟ್ಟ. ಅಸ್ಪೃಶ್ಯರಿಗೆ ಇಲ್ಲಿ ಏಳಿಗೆಯಿಲ್ಲ ಎನ್ನುವ ಮನೋಭಾವವನ್ನು ಹೊಂದಿದ್ದ ಅಂಬೇಡ್ಕರ್ ಅವರು ಬೌದ್ಧ ಧರ್ಮವೇ ಅತ್ಯಂತ ಸೂಕ್ತ ಎಂದು ನಿರ್ಣಯಿಸಿದ್ದರು. ದೇಶ ವಿದೇಶಗಳಲ್ಲಿ ನಡೆದ ಅನೇಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದ ಅಂಬೇಡ್ಕರ್, ಅನೇಕ ಕೃತಿಗಳನ್ನು ಸಹ ರಚಿಸಿದ್ದಾರೆ. 1956 ರಲ್ಲಿ ನಾಗಪುರದಲ್ಲಿ ತಾವೂ ಬೌದ್ಧ ಧರ್ಮ ಸ್ವೀಕರಿಸಿದ್ದೇ ಅಲ್ಲದೇ ತಮ್ಮ ಕರೆಗೆ ಓಗೊಟ್ಟು ಬಂದಿದ್ದ ಸುಮಾರು ಮೂರುವರೆ ಲಕ್ಷ ಜನರಿಗೆ ಬೌದ್ಧ ಧರ್ಮದ ದೀಕ್ಷೆ ಕೊಟ್ಟಿದ್ದು ಅವರ ಜೀವನದ ಪ್ರಮುಖ ಘಟನಾವಳಿಗಳಲ್ಲಿ ಒಂದು. ಬಹುಶಃ ಭಾರತದಲ್ಲಿ ಸಾಮ್ರಾಟ ಅಶೋಕನ ನಂತರ ಬೌದ್ಧ ಧರ್ಮದ ಪ್ರಚಾರವನ್ನು ಮಾಡಿದ್ದು ಅಂಬೇಡ್ಕರ್ ಅವರೇ ಎಂಬುದು ಗಮನಿಸಬೇಕಾದ ಅಂಶಗಳಲ್ಲೊಂದು. 1956 ರ ಡಿಸೆಂಬರ್ 6 ರಂದು ಅಂಬೇಡ್ಕರ್ ಅವರು ನಿಧನರಾದರು. ಭಾರತದ ಮಹಾನ್ ಚೇತನವೊಂದು ಅಂದು ಕಣ್ಮರೆಯಾಯಿತು.

ನಿನ್ನಿಂದ ಅಸಮಾನತೆ
ಈಗ ದೂರ
ಕರಗೋಯ್ತು ಭಾರ
ಮರೆಯಾಯ್ತು ದೂರ
ಸಂಕಟದಲಿ ಬಂದೆ
ಆಗೀ ಆಧಾರ
ನಿನ್ನಿಂದ ಅಸಮಾನತೆ
ಈಗ ದೂರ
ನೀ ತೋರಿದ ದಾರೀಲಿ

ದೇಶ ಸಾಗಿದೆ
ಸೂರು ನೀರು ಭೇದವೀಗ
ದೂರವಾಗಿದೆ
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್

ಭಾರತದ ಸಂವಿಧಾನದ ರಚನಾಕಾರರಾಗಿ ಅಲ್ಲದೆ, ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರರು ಮಾಡಿದ ಅಹಿಂಸಾತ್ಮಕ ಹೋರಾಟಗಳು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಅವರ ಪರವಾಗಿನ ಧ್ವನಿಯಾಗಿ ನಿಂತಿದ್ದು ಅವರ ಸಾಧನೆಯ ಮೈಲಿಗಲ್ಲು. ಅಭಿಮಾನಿಗಳಿಂದ “ಬಾಬಾ ಸಾಹೇಬ್” ಎಂದು ಕರೆಸಿಕೊಂಡ ಅಂಬೇಡ್ಕರರನ್ನು ನಾವೆಲ್ಲರೂ ಗೌರವಿಸೋಣ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

8 thoughts on “

  1. ಡಾ.ಅಂಬೇಡ್ಕರ್ ರವರ ಕುರಿತು ಬರೆದ ಲೇಖನ ತುಂಬಾ ಮಾಧುರ್ಯವಾಗಿದೆ.ಸೂಪರ್

  2. ತುಂಬಾ ಅರ್ಥಪೂರ್ಣ ಲೇಖನ ಮತ್ತು ಕವಿತೆಗಳು ಡಾ. ಬಿಆರ್ ಅಂಬೇಡ್ಕರ್ ಅವರ ಕುರಿತು ತುಂಬಾ ಅರ್ಥಪೂರ್ಣ ಹಾಗೂ ಪ್ರೇರಣಪುರಿತ ಲೇಖನ ಹಾಗೂ ಕವನಗಳು ಅಭಿನಂದನೆಗಳು ಶಿವಲೀಲಾ ಅವರಿಗೆ

  3. ಡಾ.ಬಿ.ಆರ್.ಅಂಬೇಡ್ಕರ್ ರ ಜೀವನದ ಎಲ್ಲ ಸಂಘರ್ಷವನ್ನು ಸುಂದರವಾಗಿ ಬಿಂಬಿತವಾಗಿದೆ.ಈಗ ಟಿ.ವಿಯಲ್ಲಿ
    ಪ್ರಸಾರವಾಗುತ್ತಿರುವ ಮಹಾನಾಯಕ ಭೀಮರಾವ್ ರ ಆತ್ಮ ಚರಿತ್ರೆಯ ಹಾಡು ಬಳಸಿದ್ದು ಖುಷಿಯಾಯಿತು.ಉಪಯುಕ್ತ ಮಾಹಿತಿಯುಕ್ತ ಲೇಖನ…

  4. ಅರ್ಥಪೂರ್ಣ,ಸಮಗ್ರ ಅಧ್ಯಯನ ತೆರೆದಿಟ್ಟ ಸಂವಿಧಾನ ಶಿಲ್ಪಿಯ ಮಹತ್ವಪೂರ್ಣ ಲೇಖನ.ಸೂಪರ್

Leave a Reply

Back To Top