ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
![](https://sangaati.in/wp-content/uploads/2023/02/jayashrebandari.jpeg)
![](https://sangaati.in/wp-content/uploads/2023/02/index-18.jpg)
ಪ್ರೇಮ ತಂತಿ ವೈಣಿಕನಾಗಿ ಯಮುನೆ ತೀರಕೆ ಬರಬಾರದೇ ಮಾಧವ.
ರೋಮ ಬಿತ್ತಿಗೆ ರೋಮಾಂಚನ ನೀಡುತ ಸೇರಬಾರದೇ ಮಾಧವ.
ಕಷ್ಗಗಳ ಪರಿಹರಿಸುತ ಸುಜನರ ಪೊರೆಯುವ ಸರಸಿಜಾಕ್ಷನಲ್ಲವೇ
ಕೆಟ್ಟ ಗಳಿಗೆ ಸರಿಸಿ ಅಭಯ ಹಸ್ತ ಚಾಚುತ ಇರಬಾರದೇ ಮಾಧವ.
ನೀನೊಲಿದರೆ ಕೊರಡು ಕೊನರಿ ಕೊರಗು ಮಾಯವಾಗುವುದು.
ಕನಲುತ ಬಾಳುವ ಮನಕೆ ಒಲಿದು ತಂಪು ತರಬಾರದೇ ಮಾಧವ.
ಗೋಪಿಕೆಯರ ಸಂಕಷ್ಟಕ್ಕೆ ಕರಗುತ ಸೆರೆಯಿಂದ ಬಿಡಿಸಿದವನು
ಗೋವುಗಳ ಕಾಯುತ ಗಿರಿ ಎತ್ತುತ ನೋವುಗಳ ಮೀರಬಾರದೆ ಮಾಧವ.
ಯಶೋದೆಯ ಮುದ್ದಿನ ಕಾನ್ಹಾ ಎಂದು ಜಯಾ ಅರಿತಿಹಳು
ವಸುಧೆಯಲಿ ಭಕ್ತರ ರಕ್ಷಿಸುತ ಯುಗ ಯುಗದಿ ದುಃಖ ತೀರಬಾರದೇ ಮಾಧವ
ಜಯಶ್ರೀ ಭ ಭಂಡಾರಿ.