ಅಂಕಣ ಬರಹ

ಊರೊಳಗೆ ಪಂಥ

ರಣದೊಳಗೆ ಓಟವೆ

Image result for photos of fa.gu.halakatti

ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ ಈತನ ವಚನಗಳು ಆಗಿಹೋದ ಪುರಾತನ ಕಾಲದ ಮಹತ್ವದ ವಚನಕಾರರಲ್ಲಿ ಗಣಿಸಲು ಏನೂ ಅಡ್ಡಿಯಿಲ್ಲ.‌ ಪುರಾತನರ ವಚನಗಳಲ್ಲಿ ಈತನವೂ ಸೇರಿರುವುದರಿಂದ ಈತನ ಕಾಲವನ್ನು ಸು ೧೧೬೦ ಎಂದೇ ಹೇಳಬಹುದಾಗಿದೆ” ಎಂದಿದ್ದಾರೆ.೧ ಹನ್ನೊಂದು ಜನರ ಚರಿತ್ರೆಯ ವಿವರಗಳು ತಿಳಿದು ಬರುವುದಿಲ್ಲ, ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ.೨  ಎಂದು ಒಂದು ಕಡೆ ಹೇಳಿದರೆ. ಮತ್ತೊಂದು ಕಡೆ ‘ವಿರೂಪಾಕ್ಷ ಪಂಡಿತನು (೧೫೮೫) ಚೆನ್ನಬಸವ ಪುರಾಣದಲ್ಲಿ ಈತನೇ ‘ಮಾದರ ಕೇತಯ್ಯ ….. ‘ ಎಂಬ ಪದ್ಯದಲ್ಲಿ ಅರಿವಿನ ಮಾರಿತಂದೆಯ ಹೆಸರನ್ನು ಹೇಳಿದ್ದಾನೆ.೩ ಎಂದು ಸಾಹಿತ್ಯ ಚರಿತ್ರಾಕಾರರು ಹೇಳಿದ್ದಾರೆ.

ಜ್ಞಾನ, ತಿಳುವಳಿಕೆ, ಅನುಭವಗಳ ಸಮಪ್ರಮಾಣದ ಮಿಶ್ರಣವಾದ ಅರಿವಿಗೆ ಬಹುದೊಡ್ಡ ಪ್ರಾಶಸ್ಯ್ಯವನ್ನು ಮಾರಿತಂದೆಯು ತನ್ನ ವಚನಗಳಲ್ಲಿ ಕೊಟ್ಟಿರುವುದರಿಂದ ಈತನನ್ನ “ಅರಿವಿನ ಮಾರಿತಂದೆ” ಎಂದು ಕರೆಯಲಾಗಿದೆ.೪  ಬಸವಣ್ಣನವರು ತಮ್ಮ ವಚನಗಳಲ್ಲಿ ಹೆಸರಿಸಿರುವ ಮಾರಿತಂದೆ ಈತನಲ್ಲ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.೫  ಸದಾಶಿವಮೂರ್ತಿ, ಸದಾಶಿವಮೂರ್ತಿಲಿಂಗ,  ಸದಾಶಿವಲಿಂಗಮೂರ್ತಿ, ಸದಾಶಿವಲಿಂಗ ಎಂದು ಈತನ ವಚನಗಳ ಅಂಕಿತಗಳು ಇವೆ. ಅರಿವಿನ ಮಾರಿತಂದೆಯ‌ ಒಟ್ಟೂ ವಚನಗಳ ಸಂಖ್ಯೆ ೩೦೨, ಅದರಲ್ಲಿ ೨೫೧ ಸಾಮಾನ್ಯ ವಚನಗಳಾಗಿದ್ದು, ಉಳಿದವು ಬೆಡಗಿನ ವಚನಗಳಾಗಿವೆ. ಅರಿವಿನ ಮಾರಿತಂದೆಯ ವಚನವೊಂದು ಹೀಗಿದೆ

ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು

ಊರೊಳಗೆ ಪಂಥ ರಣದೊಳಗೆ ಓಟವೆ ?

ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೇ ?

ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವವನ ಭಕ್ತಿ

ಅಲಗಿನ ಘೃತವ ಶ್ವಾನ ನೆಕ್ಕಿ ನಾಲಿಗೆ ಹರಿದು

ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು.

ಇಂತೀ ಭೇದಂಗಳ ಅರಿತು ನಿರತನಾಗಿರಬೇಕು

ಸದಾಶಿವಮೂರ್ತಿಲಿಂಗವನರಿವುದಕ್ಕೆ.೬

ಈ ವಚನವು ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣುತ್ತಿದೆಯಾದರೂ ತನ್ನ ಆಂತರ್ಯದಲ್ಲಿ ವೀರಭಾವವೊಂದರ‌ ಸಮರ ಪ್ರಜ್ಞೆ ನಿರಂತರವಾದ ಹರಿವನ್ನು ಹೊಂದಿದೆ. ಅಪಾಯಕಾರಿಗಳ ಲಕ್ಷಣ ಮತ್ತು ಅವರು ಆ ಮನಸ್ಥಿತಿಯಿಂದ ಹೊರಬರುವ ಮಾರ್ಗವನ್ನು ಈ ವಚನವು ತಿಳಿಸುತ್ತಿದೆ.

ಎಲ್ಲ ಕಾಲದಲ್ಲಿಯೂ ಮಾತಿನ ಮಲ್ಲರ ಬಹುದೊಡ್ಡ ಗುಂಪೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆ ಮಾತಿನ ಮಲ್ಲರ ಗುಂಪು ಕೆಲವೊಮ್ಮೆ ತಮ್ಮೊಡನೆ ಸಂಪರ್ಕಕ್ಕೆ ಬರುವವರಿಗೆ ಹಾದಿಯ ನಿರ್ದೇಶವನವನ್ನೂ ಯಾವುದೇ ಭಿಡೆ ಇಲ್ಲದೆ ಮಾಡಲು ಶುರು ಮಾಡಿಬಿಡುತ್ತದೆ. ಕ್ರಿಯೆಯಲ್ಲಿ ನಿರತಕಾರವರಿಗೆ ಅದರ ಅಗತ್ಯವೇ ಇರುವುದಿಲ್ಲ. ಅಥವಾ ಮಾತಿನ ಮಲ್ಲರು ಕ್ರಿಯೆಯಲ್ಲಿ ತೊಡಗಿದರೆ ಮಾತು ತನ್ನಿಂದ ತಾನೇ ನಿಂತುಬಿಡುತ್ತದೆ.

ಮಾತಿನಲ್ಲಿ ಎಲ್ಲರೂ, ಎಲ್ಲವೂ ಒಂದೇ ಎನ್ನುವ (ವಾಕ್+ಅದ್ವೈತ), ಆದರೆ ಅನುಭವಜನ್ಯ ಅರಿವಿನಿಂದ ಒಂದೇ ಎಂಬುದನ್ನು ಅರಿತು, ನಡೆದು ತೋರದಂತಹವರ (ಸ್ವಯ+ಅದ್ವೈತ) ಸ್ಥಿತಿಯನ್ನು ಹೇಳಲು ಅರಿವಿನ ಮಾರಿತಂದೆ ಎರಡು ಸಾದೃಶ್ಯಗಳನ್ನು ಬಳಸಿದ್ದಾನೆ. ಒಂದು, ಊರೊಳಗೆ ತಾನು ಕಟ್ಟಿಕೊಂಡ ಗುಂಪಿನೊಳಗೆ ವೀರಾಧಿವೀರ, ಆದರೆ ನಿಜವಾದ ರಣರಂಗದಲ್ಲಿ ಬೆನ್ನು ತಿರುಗಿಸಿ ಓಡಿ ಹೋಗುವ ರಣಹೇಡಿಯ ಚಿತ್ರವನ್ನು ಮತ್ತು ಖಡ್ಗದ ತುದಿಗೆ ಸವರಿದ ಘೃತ (ತುಪ್ಪ) ವನ್ನು ನೆಕ್ಕಿ ನಾಲಿಗೆ ಸೀಳಿದ ನಾಯಿಯು ಮತ್ತೆ ಖಡ್ಗವನ್ನು ಕಂಡು ಓಡುವ ಚಿತ್ರ. ಈ ಎರಡರ ಮೂಲಕ ಮಾತಿನ ಮಲ್ಲರು ಮತ್ತವರು ರಣಹೇಡಿಗಳು. ಬದುಕಿನಲ್ಲಿ ಏಕತ್ವವನ್ನು ಸಾಧಿಸಿ ತೋರಿಸಲಾರದ ಹೇಡಿಗಳು ಎಂದೂ, ನಾಲಿಗೆ ಸಿಳಿದ ನಾಯಿಯ ಸ್ಥಿತಿಯು ಅವರು ಸ್ವಯಾದ್ವೈತವನ್ನು ಸಾಧಿಸಲಾರದ, ಆಚರಿಸಲಾರದವರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ಏಕಭಾವವೆನ್ನುವುದು ಘೃತದ ಹಾಗೆ. ಅದನ್ನು ಸಾಧಿಸಿದವರು ಹೆದರಿ ಓಡಬೇಕಿಲ್ಲ ಎಂಬ ದನಿಯೂ ಇದರಲ್ಲಿ ಅಡಗಿದೆ. ಮಾತಿನಲ್ಲಿ ಮಾತ್ರ ವಚನ ರಚನೆಗಳನ್ನು ಮಾಡುತ್ತಾ, ಬದುಕಿನಲ್ಲಿ ಅದರ ತತ್ವಗಳನ್ನು ಆಚರಿಸದವರೆಲ್ಲರೂ, ಸ್ವಾನುಭವದಿಂದ ನುಡಿದಂತೆ ನಡೆಯದವರು ಹೇಡಿಗಳು, ನಾಲಿಗೆ ಹರಿದ ನಾಯಿಗಳು ಎಂದು ಹೇಳುತ್ತಿದ್ದಾನೆ. ವಚನದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. “ಅರಿತು ನಿರತ” ಎಂಬ ಪದಗಳು ಒಂದಕ್ಕೊಂದು ಸಾಧಿಸುವ ಸಂಬಂಧ ವ್ಯಕ್ತಿ ಮತ್ತು ಸಮಾಜಕ್ಕೆ ಮಹತ್ವವಾದದ್ದು ಎನ್ನುತ್ತಿದ್ದಾನೆ. ಅರಿತು ಸಾಧಿಸಲಾರದ ಅಥವಾ ಅರಿಯದೆ ಮಾತನಾಡುವ ಎಲ್ಲರೂ ರಣಹೇಡಿ, ನಾಲಿಗೆ ಸೀಳಿದ ನಾಯಿಗಳೆನ್ನುವ ಭಾವ ವಚನದಲ್ಲಿದೆ. ಇದೊಂದು ರೀತಿಯಲ್ಲಿ ನುಡಿದು ಸೂತಕಿಗಳಾಗುವ ಸ್ಥಿತಿ.

ಅರಿವಿನ ಮಾರಿತಂದೆಯು ಮಾತು ಮತ್ತು ಕ್ರಿಯೆಗಳು ಒಂದಿಲ್ಲದ ರಣಹೇಡಿಗಳಿಗೆ ವಚನದ ಮೊದಲ ಸಾಲಿನಲ್ಲಿಯೇ ಪಂಥಾಹ್ವಾನವನ್ನು ಕೊಡುತ್ತಾನೆ ಮತ್ತದು ಎದುರಿನವರ ನಡೆ ನುಡಿಯನ್ನು ನಿರ್ದೇಶನ ಮಾಡುವ ಸಮರ ಪ್ರಜ್ಞೆಯ ರೀತಿಯಲ್ಲಿ ಬಂದಿದೆ. ಇದು ವೀರನ ಲಕ್ಷಣ. ತಾನು ಅನುಸರಿಸಿಲ್ಲದೆ, ಅನುಭವಕ್ಕೆ ಅರಿವಿಗೆ ಬಾರದ, ಕೇವಲ ಮಾತಿಗಾಗಿ “ಸಮಯವನ್ನು ನೋಯಿಸಿ” ಎದುರಿನವರಿಗೆ ಮಾಡಲು ಆಡಲು ಹೇಳುವ ಜಾಯಮಾನದವರಲ್ಲ ವಚನಕಾರರು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವೀರರಸವನ್ನು ಕುರಿತು ವಿವೇಚನೆ ಮಾಡುವಾಗ ದಾನವೀರ, ಧರ್ಮವೀರ, ದಯಾವೀರ ಎಂದು ಮೂರು ಭಾಗಗಳಲ್ಲಿ ಈ ವೀರರಸವು ಕಾವ್ಯಗಳಲ್ಲಿ ಹರಿದು ಬಂದಿದೆ ಎಂದು ಮೀಮಾಂಸಕರು ಹೇಳಿದ್ದಾರೆ. ಅರಿವಿನ ಮಾರಿತಂದೆಯ ಒಳಗೆ ಧರ್ಮವೀರದ ನದಿಯೊಂದು ನಿರಂತರವಾಗಿ ಹರಿಯುತ್ತಿರುವ ಸ್ಥಿತಿಯಲ್ಲಿ ನಿಂತಿದ್ದಾನೆ. ನಡೆ ನುಡಿಗಳು ಒಂದಾದ ಏಕತ್ರ ಸ್ಥಿತಿಯದು.

ವ್ಯೋಮಮೂರ್ತಿ, ತಲೆವೆಳಗಾದ ಸ್ವಯಜ್ಞಾನಿಯಾದ ಅಲ್ಲಮನೂ “ನುಡಿದು ಸೂತಕಿ” ಗಳಾಗದಿರಲೆಂಬ ಕಾರಣದಿಂದಲೇ ಕೊಟ್ಟ ಎಚ್ಚರಿಕೆ೭  ಬಸವಣ್ಣನವರು “ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಗಮದೇವನೆಂತೊಲಿವನಯ್ಯಾ”೮  ಎಂದು ಹೇಳುವ ಮಾತುಗಳೂ ಇದೇ ಎಚ್ಚರಿಕೆಯಲ್ಲಿ ಬಂದಿದೆ. ಪ್ರತೀ ಕ್ಷಣವೂ ಬದುಕನ್ನು ಅರಿತು ನಿರತನಾಗಿ ನಡೆವ ಕ್ರಮವನ್ನು ವಚನಕಾರರು ತಿಳಿಸುತ್ತಲೇ ಇಂದಿಗೂ ಜೀವಂತರಾಗಿದ್ದಾರೆ


ಅಡಿಟಿಪ್ಪಣಿಗಳು

೧. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ (೧೯೭೭)

೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ (೨೦೧೬)

೩. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬

೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬

೫. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್. ಡಿ. ವಿ. ಕೆ ಮೂರ್ತಿ. ಮೈಸೂರು ಪು ೪೫೬ ಮತ್ತು ೪೫೭

೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೬, ಪು ೧೦೦೩

೭. ಮಾತೆಂಬುದು ಜ್ಯೋತಿರ್ಲಿಂಗ !

     ಸ್ವರವೆಂಬುದು ಪರತತ್ವ !

     ತಾಳೋಷ್ಠ ಸಂಪುಟವೆಂಬುದೇ ನಾದಬಿಂದಕಳಾತೀತ !

     ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳೆ

ಅಲ್ಲಮನ ವಚನ ಚಂದ್ರಿಕೆ. ಡಾ. ಎಲ್. ಬಸವರಾಜು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ. ಸಂ. ೯೫೧. ಪು ೨೧೪ (೨೦೧೪)

೮. ನುಡಿದರೆ ಮುತ್ತಿನ ಹಾರದಂತಿರಬೇಕು

     ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

     ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು

     ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು

     ನುಡಿಯೊಳಗಾಗಿ ನಡೆಯದಿದ್ದಡೆ

     ಕೂಡಲಸಂಗಮದೇವನೆಂತೊಲಿವನಯ್ಯಾ ?

( ಟಿಪ್ಪಣಿ : ವಚನದಲ್ಲಿ ಮಾತು ಹೇಗಿರಬೇಕೆಂಬುದಕ್ಕೆ ಮೂರು ಉಪಮೆಗಳನ್ನು ಕೊಡುತ್ತಾರೆ. ಹಾರ, ದೀಪ್ತಿಗಳು ಸರಿ. ಆದರೆ “ಸಲಾಕೆ” ಯ ಮೊನಚು, ಅದರ ಕಾರ್ಯ ಸ್ಪಷ್ಟವಾಗಿ ಅರ್ಥವಾಗಿದ್ದವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಮಾತೆಂಬುದು ಸಲಾಖೆಯಂತೆ ಮೊನಚು ಹೌದು,‌ ರಕ್ಷಣೆಗೂ ಹೌದು ಎಂಬುದನ್ನು ಮರೆಯುವ ಹಾಗಿಲ್ಲ. )

ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೮೦೨. ಪು ೬೭೨

****************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top