ಕಾವ್ಯ ಸಂಗಾತಿ
ಎ.ಹೇಮಗಂಗಾ
ಗಜಲ್


ಎಂದಾದರೂ ಒಮ್ಮೆ ಬಾಳ ಯಾತ್ರೆಯು ಮುಗಿಯಲೇಬೇಕಲ್ಲ
ಕಾಲನ ಕರೆಯು ಬಂದಾಗ ಎದುರಾಡದೇ ಹೋಗಲೇಬೇಕಲ್ಲ
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಲ್ಲ ಜೀವಿಗಳಿಗೂ ಬುವಿಯಲಿ
ಬೇಕೋ ಬೇಡವೋ ಬಾಳ ಬಂಡಿಯನು ಎಳೆಯಲೇಬೇಕಲ್ಲ
ನಿಯಂತ್ರಿಸುವ ವಿಧಿ ಆಣತಿಗೆ ತಲೆ ಬಾಗದವರು ಎಲ್ಲುಂಟು ?
ಅಂತಕ ಬಂದಿರಲು ‘ ನಾಳೆ ಬಾ ‘ ಎನ್ನದೇ ಶರಣಾಗಲೇಬೇಕಲ್ಲ
ಸಂಕಷ್ಟಗಳ ಸಂಕೋಲೆಯಲಿ ಸಿಲುಕಿ ನರಳುವುದು ಜೀವ
ನೋವ ಮರೆಸುತ ನಗೆಯ ಮುಖವಾಡ ಧರಿಸಲೇಬೇಕಲ್ಲ
ಅಪಮಾನ ಅಪನಿಂದೆಗೆ ಹೆದರಿ ಸಾವ ಬಯಸದಿರು *ಹೇಮ*
ಸಾರ್ಥಕ ಜನ್ಮ ನಿನ್ನದಾಗಲು ದೃಢ ಮನದಿ ಬದುಕಲೇಬೇಕಲ್ಲ
ಎ. ಹೇಮಗಂಗಾ



