ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಮಕ್ಕಳಿಗೆ ಅರಿವಿರಲಿ ಕಷ್ಟ

ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು. ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು ಅನುಭವಿಸಿದ್ದೆವು ಎಂಬ ಅರಿವು ಅವರಲ್ಲಿ ಮೂಡಿಸಬೇಕು. ಅಷ್ಟೇ ಅಲ್ಲ ಅವರು ಈಗ ಅನುಭವಿಸುತ್ತಿರುವ ಸುಖ ಆರಾಮಗಳು ನಮ್ಮ ಕಷ್ಟದ ಪ್ರತಿಫಲವೆಂದು ತಿಳಿಸಿ ಹೇಳಬೇಕು . ಈ ಕಠೋರ ಪ್ರಪಂಚದಲ್ಲಿ ಬಾಳಲು ಬೇಕಾದ ಧೈರ್ಯ ತುಂಬಬೇಕಾದರೆ ಅಲ್ಲಿ ಅನುಭವಿಸಬೇಕಾದ ಸಮಸ್ಯೆಗಳ ಅರಿವು ಚಿಕ್ಕಂದಿನಿಂದಲೇ ಅವರ ಮನದಲ್ಲಿ ಚಿತ್ರಿತವಾಗಬೇಕು.

ಕಷ್ಟವೆಂದರೇನೆಂದೇ ಅರಿಯದಂತೆ ಶುದ್ಧೋದನ ಸಿದ್ಧಾರ್ಥನನ್ನು ಬೆಳೆಸಿದ. ಒಮ್ಮಿಂದೊಮ್ಮಿಗೆ ಧುತ್ತೆಂದು ಎದುರಾದಾಗ ಜೀವನದ ಕಟು ಸತ್ಯ ಅವನಲ್ಲಿ ವೈರಾಗ್ಯವನ್ನೇ ಮೂಡಿಸಿತು. ಅರಮನೆಯ ಸುಖ ಭೋಗದಲ್ಲಿ ಮುಳುಗಿದ ಮಹಾವೀರನಿಗೆ ಇದ್ದಕ್ಕಿದ್ದಂತೆ ವಿರಕ್ತಿ ಮೂಡಿದುದೂ ಹಾಗೆ . ಅದರ ಬದಲು ಚಿಕ್ಕಂದಿನಿಂದಲೇ ಜೀವನದ ಹಂತಹಂತಗಳಲ್ಲಿ ಎದುರಾದ/ ಎದುರಾಗುವ ಆರ್ಥಿಕ ಸಾಮಾಜಿಕ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳಿಗೆ ಅರ್ಥ ಮಾಡಿಸಿ ಅವುಗಳ ಪರಿಹಾರದ ನಿಟ್ಟಿನಲ್ಲಿ ಅವರ ಸಲಹೆ ನೆರವನ್ನು ಪಡೆದುಕೊಂಡರೆ “ಕುಟುಂಬ” ವ್ಯವಸ್ಥೆಗೆ ಪೂರ್ಣ ನ್ಯಾಯ ಒದಗಿಸಿದಂತೆ. ಅಪ್ಪ ಅಮ್ಮ ಬೆವರು ಸುರಿಸಿ ಕಷ್ಟಪಟ್ಟು ಹಣ ಸಂಪಾದಿಸುವುದರ ಅರಿವು ಮಕ್ಕಳಿಗೆ ಇರದಿದ್ದಲ್ಲಿ ಅವರು ವಿದ್ಯೆಯ ಕಡೆಗೆ ಲಕ್ಷ್ಯ ಕೊಡದೆ ಜೀವನದಲ್ಲಿ ಏನನ್ನೂ ಸಾಧಿಸದ ಅಪ್ರಯೋಜಕರಾಗಬಹುದು. ತಂದೆ ತಾಯಿಯರ ಪರಿಶ್ರಮದ ಅರಿವಿರುವ ಮಕ್ಕಳು ತಾವು ದೊಡ್ಡವರಾದ ಮೇಲೆ ಹಣಕ್ಕೆ ಪರಿಶ್ರಮಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ ಮತ್ತು ಹೆತ್ತವರನ್ನು ಗೌರವಿಸುತ್ತಾರೆ ಕೂಡ .

ನನ್ನ ಪರಿಚಿತರ ಮನೆಯಲ್ಲಿ ಮನೆಯ ಆರ್ಥಿಕ ಸಮಸ್ಯೆ ಕಷ್ಟಗಳ ಪರಿವೇ ಇಲ್ಲದಂತೆ ಮಗ ಹಾಗೂ ಮಗಳನ್ನು ಮುದ್ದಾಗಿ ಬೆಳೆಸಿದರು. ಮುಂದೆ ವಿದೇಶಕ್ಕೆ ಹೆಚ್ಚಿನ ಓದಿಗೆ ಕಳಿಸಲಿಲ್ಲ ಇಲ್ಲೆ ಕೆಲಸಕ್ಕೆ ಸೇರಬೇಕಾಯಿತು ಎಂದು ಮಗ ಹೆತ್ತವರ ಮೇಲೆ ಹರಿಹಾಯುತ್ತಾನೆ . ತನ್ನ ಶ್ರೀಮಂತ ಗೆಳತಿಯರಂತೆ ಅದ್ಧೂರಿ ವಿವಾಹ ಮಾಡಲಿಲ್ಲವೆಂದು ಮಗಳಿಗೆ ಕೋಪ . ಮೊದಲಿನಿಂದ ತಮ್ಮ ಇತಿಮಿತಿಯ ,ಕಷ್ಟಗಳ ಅರಿವು ಮಕ್ಕಳಲ್ಲಿ ಮೂಡಿಸಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಅಲ್ಲವೇ?

ಇನ್ನು ಅಮ್ಮಂದಿರು ಮನೆಯ ಕೆಲಸಗಳ, ಆಗುಹೋಗುಗಳಲ್ಲಿನ ಸಾಧಕ ಬಾಧಕಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಗೃಹಕೃತ್ಯಗಳಲ್ಲಿ ಮಕ್ಕಳ ಸಹಾಯವನ್ನು ತೆಗೆದುಕೊಳ್ಳಬೇಕು . ತಾನು ಸುಸ್ತಿನಿಂದ ದಣಿದಿದ್ದರೂ ಮಕ್ಕಳನ್ನು ಕಡ್ಡಿ ಆಚೆ ತೆಗೆದು ಇಡದಂತೆ,ತಿಂದ ತಟ್ಟೆಯಲ್ಲಿ ಕೈ ತೊಳೆಸುವ ಅಮ್ಮಂದಿರನ್ನು ಕಂಡಿದ್ದೇನೆ. ಇದು ಮಕ್ಕಳಿಗೆ ಪೂರಕವಾಗದ ಮಾರಕವೆನಿಸುವ ಮುದ್ದು ಅಷ್ಟೇ.

ನಮ್ಮ ತಂದೆ ತಾಯಿಗಳ ಆರ್ಥಿಕ ಪರಿಸ್ಥಿತಿಯ ಅರಿವಿದ್ದ ಕಾರಣ ನಾವು ಇದ್ದುದ್ದರಲ್ಲಿಯೇ ತೃಪ್ತರಾಗಿರುವ ಗುಣ ಬೆಳೆಸಿಕೊಂಡು ಓದಿ ಕೆಲಸಕ್ಕೆ ಸೇರುವ, ಮನೆಗೆ ನೆರವಾಗುವ ಗುರಿ ಹೊಂದಿದ್ದೆವು . ಅಮ್ಮನಿಗೆ ಮನೆಗೆಲಸದಲ್ಲಿ ಕೈಜೋಡಿಸುತ್ತಿದ್ದೆವು. ಆಡಂಬರಕ್ಕೆ ಮನಸೋಲದೆ ಸರಳತೆಯಲ್ಲಿ ಬೆಳೆದೆವು.

ಮಕ್ಕಳಿಗೆ ಜೀವನದ ಕಷ್ಟ ನಷ್ಟದ ಬಗ್ಗೆ ತಿಳಿಸಿ ಹೇಳಿ ಬದುಕಿನ ಸಮರಕ್ಕೆ ಅಣಿಗೊಳಿಸುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಆಗುತ್ತದೆ . ಅವರ ರಕ್ಷಣೆ ನಮ್ಮ ಹೊಣೆ ನಿಜ ; ಆದರೆ ನಾಳೆ ನಾವಿರದಿದ್ದರೂ ತಮ್ಮನ್ನು ತಾವು ಪೊರೆದುಕೊಳ್ಳುವುದಕ್ಕೆ ಅವರನ್ನು ದೈಹಿಕ ಮಾನಸಿಕ ಹಾಗೂ ಆರ್ಥಿಕವಾಗಿ ಸದೃಢರಾಗಿಸಿ ಸನ್ನದ್ಧಗೊಳಿಸುವಲ್ಲಿ ಕಷ್ಟಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುವುದು ಮುಖ್ಯ ಅವಶ್ಯ ಮಾತ್ರವಲ್ಲ ಅನಿವಾರ್ಯವೂ ಹೌದು .


               ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top