ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..!

ಏಕೀಕರಣಕ್ಕೆಅರವತ್ತಾರು;  ಇನ್ನೂಎಳೆಯುತ್ತಿಲ್ಲಕನ್ನಡದತೇರು..!

ಬರಿಯ ಚದರ ಮೈಲಿಗಳಲ್ತು ಕರ್ನಾಟಕದ ದೇಶ ವಿಸ್ತೀರ್ಣಮಂ/

ನೆನೆ ನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ/

ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ/

ಪ್ರಾಣಮಯ, ಭಾವಮಯ ವಿಸ್ತೀರ್ಣಮಂ/

ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ//

                                      –ಕುವೆಂಪು

  “ಬರಿಯ ವಿಸ್ತೀರ್ಣದ  ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಅಳೆಯಬೇಡ. ಅದರ ಆಂತರಂಗಿಕವಾಗಿ ಅಡಗಿರುವ ಸಂಸ್ಕೃತಿಯ ಕೋಶವನ್ನು ನೋಡು. ಅದರ ಪ್ರಾಚೀನತೆ ಅಥವಾ ಹಿನ್ನೆಲೆಯನ್ನು ಗಮನಿಸು. ಅದರ ಪ್ರಾಣಮಯವಾದ, ಭಾವಮಯವಾದ ವಿಸ್ತೀರ್ಣತೆಯನ್ನು, ವೈಜ್ಞಾನಿಕ ಕೊಡುಗೆಗಳನ್ನು ಸ್ಮರಿಸು” ಹೀಗೆ ರಸಋಷಿ ಕುವೆಂಪುರವರು ಹೇಳಿ ಅನೇಕ ವರ್ಷಗಳು ಗತಿಸಿ ಹೋದವು. ಈ ಪ್ರಕಾರವಾಗಿ ಜಗತ್ತಿಗೆ ಬೆಳಕಾಗಬಹುದಾದ ಅತ್ಯುನ್ನತವಾದ ಸಂಸ್ಕೃತಿಯ ಹಿನ್ನೆಲೆಯೊಂದನ್ನು, ಭಾಷೆಯೊಂದರ ಘನತೆಯನ್ನು, ಶ್ರೇಷ್ಠತೆಯನ್ನು  ಕೇಳಿ ತಿಳಿದು ನಾವದನ್ನು ಆರ್ಜಿಸಿಕೊಂಡಿದ್ದೇವೆ.ಹಾಗಾದರೆ ಇವನ್ನೆಲ್ಲ ಅರಿತು, ತಿಳಿದು ನಾವು ಇಷ್ಟು ವರ್ಷ ಸಾಧಿಸಿದುದೇನು? ಕನ್ನಡ ಕನ್ನಡಿಗರ ಜೀವನದ ಭಾಷೆಯಾಗಿದೆಯೆ? ಕನ್ನಡ ಸಂಸ್ಕೃತಿಯ ಹಿರಿಮೆ ಉತ್ಥಾನಗೊಂಡಿದೆಯೆ? ನಮ್ಮನ್ನೇ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

    ‘ಕಾವೇರಿಯಿಂದ ಗೋದೆ’ವರೆಗೆ ಹಬ್ಬಿದ್ದಂತಹ ನಾಡು ನಮ್ಮದು. ಇಂದು ಅದರ ವಿಸ್ತಾರವನ್ನು ಕಳೆದುಕೊಂಡು ಅದು ಸಂಕೀರ್ಣತೆಗೆ ಒಳಗಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಕೇರಳದ ಕಾಸರಗೋಡಿನಂಥ ಅದೆಷ್ಟೋ ಅಪ್ಪಟ ಕನ್ನಡಿಗರಿರುವ ಭೂಭಾಗಗಳು ಇಂದು ಕರ್ನಾಟಕದಿಂದ ಏಕೀಕರಣದ ಕಾಲಕ್ಕೆ ದೂರವಾಗಿವೆ. 

ಭಾಷಾವಾರು ಪ್ರಾಂತಗಳ ಏಕೀಕರಣದ ಕಾಲಕ್ಕೆ ಇಂತಹ ಸಂದಿಗ್ಧ ಸನ್ನಿವೇಶಗಳು ಎಲ್ಲಾ ರಾಜ್ಯಗಳನ್ನು ಕಾಡಿವೆ‌ . ಕೆಲವೊಂದು ಕೊಡು ಕೊಳ್ಳುವಿಕೆ ಅನಿವಾರ್ಯ ಎಂಬ ಕಾರಣದಿಂದ ಅದನ್ನು ನಾವು ಮರೆತು ಬಿಡಬಹುದು. ಆದರೆ ಏಕೀಕರಣದ ನಂತರ ಅರವತ್ತಾರು ವರ್ಷಗಳಲ್ಲಿ ಈಗಿರುವ ಪುಟ್ಟ ಕನ್ನಡನಾಡಿನಲ್ಲೇ   ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಾಗಿಲ್ಲ ಎಂಬುದು ಬಹಳ ಖೇದಕರ ಸಂಗತಿ.

  ಜಗತ್ತಿನುದ್ದಗಲಕ್ಕೂ ವಸಾಹತುಗಳನ್ನು ಸ್ಥಾಪಿಸಿ, ಇಂಗ್ಲೆಂಡ್ ಎಂಬ  ಪುಟ್ಟ ದೇಶಕ್ಕೆ ‘ಸೂರ್ಯ ಮುಳುಗದ ನಾಡು’ ಎಂಬ ಅಭಿದಾನ ಕೊಡಿಸಿದ  ಆಂಗ್ಲರು ಬರೇ ವಸಾಹತುಗಳ ಆಳ್ವಿಕೆಯನ್ನಷ್ಟೇ

ನಡೆಸಲಿಲ್ಲ. ತಮ್ಮ ಶಿಕ್ಷಣ ಪದ್ಧತಿಯನ್ನು ಆ ದೇಶಗಳಿಗೆ ನೀಡಿ,  ತಮ್ಮ ಭಾಷೆ ಮತ್ತು ಸಂಸ್ಕೃತಿ ವಿಶ್ವ ವಿಶಾಲತೆಗಳಿಸುವಂತೆ ಮಾಡಿದರು. ಅರಬ್ ನಾಡಿನಲ್ಲಿ ಉದಯಿಸಿದ ಇಸ್ಲಾಂ ಧರ್ಮೀಯರು ಉರ್ದು ಭಾಷೆಯನ್ನು ಜಗದಾದ್ಯಂತ ವಿಸ್ತರಿಸಿದರು. ಆದರೆ ನಾವೇನು ಮಾಡುತ್ತಿದ್ದೇವೆ. ಜಗದುದ್ದಗಲದ ವಿಚಾರ ಬಿಡೋಣ. ನಮ್ಮದೇ ಆದ ಸೀಮಿತ ವ್ಯಾಪ್ತಿಯಲ್ಲಿ ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಿದ್ದೇವೆಯೇ? ಚಿಂತಿಸಬೇಕಾಗಿದೆ.

    ನಾವೇ ಪೋಷಿಸಿ ಬೆಳೆಸಬೇಕಾದ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಭಾಷೆಗಳಲ್ಲೊಂದಾದ ಕನ್ನಡವನ್ನು ಇಂದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ  ಬಳಸುತ್ತಿರುವವರ ಸಂಖ್ಯೆ  ಶೇ. 36. ಪರಭಾಷೆಯ ಆಕ್ರಮಣ ಎನ್ನುವುದಕ್ಕಿಂತ ನಮ್ಮ ಭಾಷಾಭಿಮಾನ ಶೂನ್ಯತೆ ಕನ್ನಡಕ್ಕೆ ಶಾಪವಾಗಿ ಪರಿಣಮಿಸಿದೆ. ನಮ್ಮ ಪಕ್ಕದಲ್ಲೇ 

ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಂತಹ ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಾಪಿಟ್ಟು ರಕ್ಷಿಸುವಂತಹ ರಾಜ್ಯಗಳಿದ್ದೂ  ನಾವು ಅವರಿಂದ  ಈ ವಿಚಾರ ಕಲಿಯದಿರುವುದು ದುರದೃಷ್ಟಕರ ಸಂಗತಿ.

          ಕನ್ನಡನಾಡಿನ ಪೂರ್ವ ಸಂಸ್ಕೃತಿಯು ಸುಮಾರು 2500 ವರ್ಷಗಳಷ್ಟು ಹಿಂದಕ್ಕೆ ಸಾಗುತ್ತದೆ. ಅದು ಜಗದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿದೆ. ಕಾಲ ಗರ್ಭದಲ್ಲಿ ಸಾಗುತ್ತಾ ಬಂದಿರುವ ಭಾಷೆಯ, ಸಂಸ್ಕೃತಿಯ ಹಿನ್ನೆಲೆಯನ್ನು ಗಮನಿಸಿದಾಗ

ಅದು ನಿರಂತರವಾಗಿ ಏಳುಬೀಳಿನ ಹಾದಿಯಲ್ಲೇ ಸಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ರಾಜಾಡಳಿತದ ಕಾಲಕ್ಕೆ ಒಮ್ಮೆ ರಾಜ್ಯದ ಆಡಳಿತ ಭಾಷೆಯಾಗಿ, ಇನ್ನೊಮ್ಮೆ  ಅದರಿಂದ ಹೊರತಾಗಿ, ಮತ್ತೊಮ್ಮೆ ಕನ್ನಡ ಭಾಷಿಕ ಪ್ರದೇಶಗಳೇ ಹರಿದು ಹಂಚಿಹೋಗಿ ಹೀಗೆ ನಿರಂತರವಾಗಿ ಏಳುಬೀಳುಗಳನ್ನು ಕಂಡಿದೆ. ಆದರೆ ಅಂತಹ ಕಠಿಣ ಸನ್ನಿವೇಶದಲ್ಲಿಯೂ ಭಾಷೆ ಮತ್ತು ಸಂಸ್ಕೃತಿ  ತನ್ನತನವನ್ನು ಕಾಯ್ದುಕೊಂಡು ಬರಲು ಕಾರಣವಾದ ಸಂಗತಿಯೆಂದರೆ, ಜನತೆಯಲ್ಲಿನ ಸ್ವಸಂಸ್ಕೃತಿ ಮತ್ತು ಭಾಷೆಯ ಕುರಿತಾಗಿ ಇದ್ದ ಪ್ರಜ್ಞೆ ಮತ್ತು ಅಭಿಮಾನ. ಇಂದಿನ ದುಸ್ತರ ಸನ್ನಿವೇಶದಲ್ಲಿ ಈ ಪ್ರಜ್ಞೆ ಮತ್ತೆ ಮೂಡಬೇಕಿದೆ. ” ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು” ಎಂದ ಅಡಿಗರ ಕಾವ್ಯ ಸಾಲುಗಳು ಕನ್ನಡಿಗರ ಧಮನಿ ಧಮನಿಯಲ್ಲಿ ಹರಿದು ಮೈದೋರಬೇಕಿದೆ.

   ಚಿತ್ತಾಣ ,ಬೆದಂಡೆಗಳಂತಹ ಕಾವ್ಯ ಜಾತಿಗಳಿಂದ , ಚಂಪೂವಾಗಿ, ವಚನವಾಗಿ, ಷಟ್ಪದಿಯಾಗಿ, ರಗಳೆಯಾಗಿ, ಆಧುನಿಕ ಗದ್ಯಕ್ಕೆ ತನ್ನನ್ನು  ತೆರೆದುಕೊಂಡು ನವೋದಯ, ಪ್ರಗತಿಶೀಲ, ಬಂಡಾಯ, ದಲಿತ ಬಂಡಾಯ ಸಾಹಿತ್ಯಕ್ಕೆ ಮೇಲ್ಪಂಕ್ತಿ ದೊರಕಿಸಿಕೊಟ್ಟ ಭಾಷೆ ಕನ್ನಡ. ಪಂಪನಿಂದ  ಮಹಾಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯದ ಮಾರ್ಗ ಅದೊಂದು ರಾಜ ಮಾರ್ಗ. ಇಂತಹ ವಿಶಾಲವಾದ ಸಾಹಿತ್ಯದ ಅರಿವು, ಈ ದಾರಿಯಲ್ಲಿ ಕನ್ನಡ ಭಾಷೆ ತನ್ನನ್ನು ಮಾರ್ಪಡಿಸಿಕೊಂಡ ರೀತಿ, ಒಗ್ಗಿಕೊಂಡ ರೀತಿ ಅನನ್ಯ. ನಮ್ಮ ಮನದ ವಿಕಾಸಕ್ಕೆ, ನಮ್ಮತನದ ಕುರಿತಾಗಿ ಹೆಮ್ಮೆಪಡಲು ಈ ವಿಶಾಲತೆಯ ಅರಿವು ನಮಗಿಂದು ಬೇಕಾಗಿದೆ.

     ಹಾಗಾದರೆ ಕನ್ನಡ ನಾಡಿನಲ್ಲಿ ಕನ್ನಡವನ್ನುಳಿದು ಬೇರೆ ಭಾಷೆಗಳು ಇರಬಾರದೆ? ಕನ್ನಡಿಗರು ಪರಭಾಷೆಗಳನ್ನು ಕಲಿಯಬಾರದೆ? ಖಂಡಿತವಾಗಿಯುೂ ಇರಬೇಕು; ಕಲಿಯಬೇಕು. ಸಂಸ್ಕೃತಿಯ ಪ್ರವಾಹ ಒಂದರಿಂದ ಇನ್ನೊಂದಕ್ಕೆ ಹರಿಯಬೇಕು. ಭಾಷೆಗಳ ಕೊಡು- ಕೊಳ್ಳುವಿಕೆಯಾಗಬೇಕು. ತ್ರಿ ಭಾಷಾ ಸೂತ್ರ ಬೇಕು.  ಹೆಚ್ಚಿನ ಜ್ಞಾನವನ್ನು ಎಲ್ಲರೂ ಸಂಪಾದಿಸಬೇಕು. ಆಗ ಮಾತ್ರವೇ ಒಂದು ಭಾಷೆ, ಸಂಸ್ಕೃತಿ  ಶ್ರೀಮಂತವಾಗಬಲ್ಲದು. ಆದರೆ ಈ ಕಲಿಕೆ ಅಥವಾ ಸಂಸ್ಕೃತಿಯ ವಿಕಾಸ‌ ಎನ್ನುವುದು ಮರದ ಮೇಲೆ ಬೆಳೆದು ಕೊನೆಗೆ ಮರದ ಜೀವವನ್ನೇ ಹೀರುವ ‘ಬಂದಳಿಕೆ’ಗಳಂತಾಗಬಾರದು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು ಯೋಗ್ಯವೇ..! ಹಾಗಂತ ಮನೆಯ ಯಜಮಾನನ ಸ್ಥಾನವನ್ನೇ ಆತನಿಗೆ ಬಿಟ್ಟು ಕೊಡಲಾದೀತೆ? ಈ ನಿಲುವಿನಲ್ಲಿ ಪರಭಾಷೆಯ ಜೊತೆಗಿನ ನಮ್ಮ ಸ್ನೇಹ , ಸಂಬಂಧಗಳು ಸಾಗಬೇಕಿದೆ.

     ಭಾಷೆ ಉಳಿಯಬೇಕಂದರೆ ಮೊದಲು ಕನ್ನಡನಾಡಿನ ಆಡಳಿತ ಭಾಷೆ, ವ್ಯವಹಾರದ ಭಾಷೆ ಕನ್ನಡವಾಗಬೇಕು. ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು. ಕಾರ್ಖಾನೆಗಳು ಮತ್ತು ಕನ್ನಡನಾಡಿನಲ್ಲಿ ನೆಲೆಸಿರುವ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕು. ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಅತಿಯಾದ ಹೇರಿಕೆ ನಿಲ್ಲಬೇಕು. ಕನ್ನಡ ಮಾದ್ಯಮ ಶಾಲೆಗಳ ಅಭಿವೃದ್ಧಿಗೆ  ಕಂಕಣಬದ್ಧರಾಗಬೇಕು. ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲಾ ನಾಮಫಲಕಗಳು ಕನ್ನಡರೂಪ ಪಡೆಯಬೇಕು. ಮುಖ್ಯವಾಗಿ ಕನ್ನಡಿಗರೆಲ್ಲರ ಮನೆ ಮನಗಳ  ಭಾಷೆ ಕನ್ನಡವಾಗಬೇಕು. ಆಗ ಮಾತ್ರವೇ ಕನ್ನಡದ ತೇರು ಮುಂದಕ್ಕೆ ಸಾಗಬಲ್ಲದು.

 “ಮನೆಯ ಹಿತ್ತಲದೊಳಗೆ ಅರಳಿದರೆ ಭಾಷೆ

ಹಣ್ಣು ಹಂಪಲದಾಗಿ ಪಲಿಸುವುದು ಆಸೆ

ನೀರು ಗೊಬ್ಬರ ಹಾಕಿ ಬೆಳೆಸಿದರೆ ತೋಟ

ಈ ನೆಲಕೆ ತಪ್ಪುವುದು ಪರಭಾಷೆ ಕಾಟ” 

ಎಂಬ ದಿನಕರರ ಸಾಲುಗಳು ಎಷ್ಟು ಸತ್ಯ ಅಲ್ಲವೇ?


 –ವಿಷ್ಣು ಆರ್. ನಾಯ್ಕ

Top of Form Bottom of Form

2 thoughts on “ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..!

Leave a Reply

Back To Top