ಮಕ್ಕಳ ಸಂಗಾತಿ
“ಭವಿಷ್ಯ ಕಟ್ಟಿಕೊಳ್ಳುವ
ಮಕ್ಕಳಿಗೆ ಶಾಶ್ವತ,
ವೈಜ್ಞಾನಿಕ ನಿಯಮ ರೂಪಿಸಿ”.
ಹೇಮಚಂದ್ರ ದಾಳಗೌಡನಹಳ್ಳಿ

ಈ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ, ಒಂದನೆಯ ತರಗತಿಯ ದಾಖಲು ವಯೋಮಿತಿಯನ್ನು 5 ವರ್ಷ 5ತಿಂಗಳು ಎಂದು ಘೋಷಿಸಲಾಗಿದೆ. ಇಂಥ ಮಹತ್ವದ ನಿರ್ಣಯ ಘೋಷಿಸಿದ ಮಾನ್ಯ ಶಿಕ್ಷಣ ಮಂತ್ರಿಗಳ ಸಾಮಾಜಿಕ ಕಳಕಳಿಯನ್ನು ಮೊದಲು ಗೌರವಿಸುತ್ತೇನೆ. ಜೊತೆಗೆ ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಇದೇ ರೀತಿಯ ಘೋಷಣೆಯ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಣಕ್ಕೆ ಸಂಬಂಧಪಟ್ಟ ಯಾವುದೇ ನಿರ್ಣಯಗಳು ದೂರದೃಷ್ಟಿಯಿಂದ ಕೂಡಿರಬೇಕು ಎಂಬುದು ಸರ್ವಜನಸಮ್ಮತ ನೀತಿ.
ಒಂದು ಮಗು ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ತನ್ನ ಯಾವ ವಯಸ್ಸಿನಿಂದ ಶಿಕ್ಷಣವನ್ನು ಪ್ರಾರಂಭಿಸಬೇಕು ಎಂದು ನಿರ್ಣಯಿಸುವಾಗ ಸಹಜವಾಗಿಯೇ ಮನೋವಿಜ್ಞಾನದ ಮೊರೆ ಹೋಗಬೇಕಾಗುತ್ತದೆ. ನಮ್ಮ ಸಂವಿಧಾನದ 86ನೆಯ ತಿದ್ದುಪಡಿಯ ಮೂಲಕ 21A ವಿಧಿಯನ್ನು ಸೇರಿಸಿ, ಮೂಲ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸಲಾಗಿದೆ. ಜೊತೆಗೆ 51A ವಿಧಿಯಲ್ಲಿನ ಮೂಲಭೂತ ಕರ್ತವ್ಯಗಳ ಪಟ್ಟಿಗೆ 11ನೆಯ ಕರ್ತವ್ಯವನ್ನು ಸೇರ್ಪಡೆಗೊಳಿಸಿದ್ದು, ಇದರನ್ವಯ ಶಿಕ್ಷಣವನ್ನು ಒದಗಿಸುವುದು ಪೋಷಕರ ಕರ್ತವ್ಯವಾಗಿದೆ. 14 ವರ್ಷ ತುಂಬುವ ವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ರಾಜ್ಯ ನೀಡಬೇಕೆಂದು ಸಂವಿಧಾನದ 45 ನೆಯ ವಿಧಿಯು ನಿರ್ದೇಶಿಸುತ್ತಿದ್ದು, ಇದರ ಆಧಾರದಿಂದ 86ನೆಯ ತಿದ್ದುಪಡಿಯು ಮೇಲಿನ ಅಂಶಗಳನ್ನು ಸೇರಿಸಿರುವುದನ್ನು ಗಮನಿಸಬಹುದು. ಪ್ರತೀ ಶೈಕ್ಷಣಿಕ ವರ್ಷದ ಜೂನ್ 1 ಅಥವಾ ಅದಕ್ಕಿಂತ ಮೊದಲು ಜನಿಸಿದ ಮಗು ಒಂದನೆಯ ತರಗತಿಗೆ ದಾಖಲಾಗಲು ಅರ್ಹ ಎಂಬುದು ಪ್ರಸ್ತುತ ನಿಯಮ ಮತ್ತು ಸಮಸ್ಯೆಯ ಕೇಂದ್ರಬಿಂದು. ಎರಡು ಶೈಕ್ಷಣಿಕ ವರ್ಷಗಳಿಂದ ಪೋಷಕರನ್ನು ಮತ್ತು ಜವಾಬ್ದಾರಿಯುತ ಮಾನ್ಯ ಮಂತ್ರಿಗಳನ್ನು ಕಾಡುತ್ತಿದೆ. ಅದರ ಪರಿಣಾಮವೇ ಈ ವರ್ಷಕ್ಕೆ ಸೀಮಿತ ಎಂಬ ನಿರ್ಬಂಧದ ಮೇಲೆ ವಯೋಮಿತಿಯನ್ನು ಸಡಿಲಗೊಳಿಸಿ ಎರಡು ಶೈಕ್ಷಣಿಕ ವರ್ಷಗಳಿಂದ ಅವಕಾಶ ನೀಡಲಾಗುತ್ತಿದೆ.
6 ವರ್ಷ ಪೂರೈಸಿರಬೇಕೆಂಬ ನಿಯಮದ ತೊಡಕನ್ನು ಇದು ನಿರೂಪಿಸುತ್ತದೆ. ಮಕ್ಕಳನ್ನು ಶಿಕ್ಷಣಕ್ಕೆ ಅರ್ಲಿಯಾಗಿ ತೊಡಗಿಸಿ ಅವರ ಬಾಲ್ಯವನ್ನು ಕಸಿಯಲಾಗುತ್ತಿದೆ ಎಂಬ ಮನೋವೈಜ್ಞಾನಿಕ ಆರೋಪವೇ ಈ ನಿಯಮಕ್ಕೆ ಹಿನ್ನೆಲೆಯಾಗಿರಬಹುದು. ಆದರೆ ಮನೋವಿಜ್ಞಾನಿಗಳು ಬಾಲ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಎಲಿಜಬೆತ್ ಬಿ. ಹರ್ಲಾಕ್ ಅವರು 2 ರಿಂದ 6 ವರ್ಷ ವಯೋಮಾನವನ್ನು ಪೂರ್ವ ಬಾಲ್ಯ ಎಂದೂ 6 ರಿಂದ 12 ನ್ನು ಉತ್ತರ ಬಾಲ್ಯವೆಂದು ಗುರುತಿಸಿದ್ದಾರೆ. ಇದನ್ನು ಗುರುತಿಸಲು ಅವರು ಆ ಕಾಲದ (ಅಂದರೆ ಸು. 1968) ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ವಯಸ್ಸಿನ ವಿವಿಧ ಹಂತಗಳಲ್ಲಿ ಆ ಮಕ್ಕಳ ದೈಹಿಕ, ಬೌದ್ಧಿಕ, ಸಾಮಾಜಿಕ,ಸಂವೇಗಾತ್ಮಕ, ನೈತಿಕ ವಿಕಾಸವನ್ನು ಅಧ್ಯಯನಕ್ಕೊಳಪಡಿಸಿದ್ದಾರೆ. 5 ರಿಂದ 6 ವರ್ಷ ವಯೋಮಾನದ ಮಕ್ಕಳ ಭಾಷಾಕಲಿಕೆ ತೀವ್ರ ಗತಿಯಲ್ಲಿ ರುತ್ತದೆ ಎಂದೂ ಗುರುತಿಸುತ್ತಾರೆ. 6 ವರ್ಷ ತುಂಬಿದ ಮಕ್ಕಳು ಕಲಿಕೆಗೆ ಪಕ್ವ ಗೊಂಡಿದ್ದು, ಅದಕ್ಕೆ ತಕ್ಕಂತಹ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿ ಅವರ ಕಲಿಕೆಯನ್ನು ಪೋಷಿಸಬೇಕೆಂದು ನಿರ್ದೇಶನ ನೀಡಿದ್ದಾರೆ.
ಸಂವಿಧಾನದ ನಿಯಮ ಮತ್ತು ಶೈಕ್ಷಣಿಕ ಮನೋವಿಜ್ಞಾನದ ಅಧ್ಯಯನಾಧಾರಿತ ನಿರ್ದೇಶನ ಎರಡೂ ಅಂಶಗಳ ಹಿನ್ನೆಲೆಯನ್ನು ಕೂಲಂಕಶವಾಗಿ ಪರಿಶೀಲಿಸಿ ಭವಿಷ್ಯವನ್ನು ಕಟ್ಟಿಕೊಳ್ಳುವ ಮಕ್ಕಳಿಗಾಗಿ ದೂರದೃಷ್ಟಿಯುಳ್ಳ ನಿಯಮವನ್ನು ರೂಪಿಸಿ ಪ್ರಸ್ತುತದ ಗೊಂದಲವನ್ನು ನಿವಾರಿಸಬೇಕಾದುದು ತುರ್ತಾಗಿದೆ. ಮನೋವಿಜ್ಞಾನದ ಅಧ್ಯಯನದ ಎರಡು ಅಂಶಗಳನ್ನು ಪ್ರಧಾನವಾಗಿ ಗಮನಿಸಬೇಕು.: ಒಂದು; 5-6 ವರ್ಷದ ಮಕ್ಕಳ ಭಾಷಾ ಕಲಿಕೆಯು ತೀವ್ರಗತಿಯಲ್ಲಿರುತ್ತದೆಂಬುದು.
ಇನ್ನೊಂದು 6 ವರ್ಷ ವಯೋಮಾನದ ಮಕ್ಕಳು ಕಲಿಕೆಗೆ ಪಕ್ವ ಗೊಂಡಿದ್ದು ಅವರಿಗೆ ತಕ್ಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಬೇಕೆಂಬುದು. ಜೂನ್ 1 ನೆಯ ದಿನಾಂಕದೊಳಗೆ 6 ವರ್ಷ ಪೂರೈಸಿದ ಮಕ್ಕಳನ್ನು ಮಾತ್ರ ಒಂದನೆಯ ತರಗತಿಗೆ ದಾಖಲಿಸಲು ಅರ್ಹಗೊಳಿಸುವುದರಿಂದ ಜೂನ್-2 ಅಥವಾ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಮಕ್ಕಳು ತಾವು ಕಲಿಕೆಗೆ ಪಕ್ವಗೊಂಡ ನಂತರವೂ 8-10 ತಿಂಗಳು ಕಾಯಬೇಕಾಗುತ್ತದೆ. ಕಲಿಕೆಯ ಮೇಲಿನ ಆಸಕ್ತಿ ಕಡಿಮೆಯಾಗಿ ಶಿಕ್ಷಣ ವಿಮುಖರಾಗುವ ಅಪಾಯವಿರುತ್ತದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು ಅದನ್ನೇ ಪೋಷಿಸಿದಂತಾಗುತ್ತದೆ.
ಸಂವಿಧಾನದ ಪ್ರಕಾರ ಚಿಂತಿಸಿದರೂ, ಜೂನ್ 1 ಕ್ಕೆ 6 ವರ್ಷ ಪೂರೈಸಿದ ಮಕ್ಕಳಿಗೆ ಮಾತ್ರ ಒಂದನೆಯ ತರಗತಿಗೆ ದಾಖಲಿಸುವ ಅವಕಾಶ ನೀಡುವ ನಿಯಮದಿಂದ ಜೂನ್ 2 ಅಥವಾ ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಮಕ್ಕಳು 6 ವರ್ಷದ ಮೇಲೆ 8-10 ತಿಂಗಳ ಆದ ನಂತರ ಶಿಕ್ಷಣ ಕಲಿಕೆಗೆ ಬರುವಂತಾಗುತ್ತದೆ. ಆಗ ಸಹಜವಾಗಿಯೇ 6-14 ವರ್ಷ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬ ನಿರ್ದೇಶನವು ಹಲವು ಮಕ್ಕಳಿಗೆ 7-15 ಆಗಿಬಿಡುತ್ತದೆ. 14 ವರ್ಷದೊಳಗೆ ಪ್ರಾಥಮಿಕ ಶಿಕ್ಷಣ ಮುಗಿಯುವಂತೆ ನಿಯಮ ರೂಪಿಸಿ ಮಕ್ಳಳ ಭವಿಷ್ಯವನ್ನು ಕಾಲ ವ್ಯರ್ಥವಾಗದಂತೆ ರೂಪಿಸಬೇಕಾಗುತ್ತದೆ. ಹಾಗಾಗಿ ಜೂನ್ ಒಂದರ ಬದಲಾಗಿ ಅಕ್ಟೋಬರ್ ತಿಂಗಳ ಯಾವುದಾದರೊಂದು ದಿನಾಂಕವನ್ನು ನಿಗದಿಪಡಿಸಿ ಅಲ್ಲಿಗೆ 6 ವರ್ಷ ತುಂಬಿದ ಮಕ್ಕಳನ್ನು ಆ ಶೈಕ್ಷಣಿಕ ವರ್ಷದ ಒಂದನೆಯ ತರಗತಿಗೆ ದಾಖಲಿಸುವ ನಿಯಮ ರೂಪಿಸಿದರೆ, ಕನಿಷ್ಟ 5ವರ್ಷ 8 ತಿಂಗಳ ಮಗು ಗರಿಷ್ಟ 6 ವರ್ಷ 4 ತಿಂಗಳ ಮಗು ಒಂದನೆಯ ತರಗತಿಯಲ್ಲಿ ಕಲಿಕೆಗೆ ತೊಅಡಗಿಸಿಕೊಳ್ಳಲು ಅವಕಾಶವಾಗುತ್ತದೆ. ದಿನಾಂಕ 08-04-2025 ರ ಪ್ರಜಾವಾಣಿ ಪತ್ರಿಕೆಯ ‘ಒಂದನೇ ತರಗತಿ 6 ವರ್ಷ ಸಂದಿಗ್ಧ ‘ಎಂಬ ತಲೆಬರಹದ ವರದಿಯಲ್ಲಿ ಉಲ್ಲೇಖಿಸಿರುವಂತೆ ಹರಿಯಾಣ ರಾಜ್ಯದಲ್ಲಿ ಈ ವಯೋಮಿತಿಯನ್ನು ಸೆಪ್ಟೆಂಬರ್ -1ಕ್ಕೆ, ಒಡಿಶಾ- ಅಕ್ಟೋಬರ್- 1, ಮಹಾರಾಷ್ಟ್ರ -ಜುಲೈ-1,ಜಮ್ಮು ಮತ್ತು ಕಾಶ್ಮೀರ -ಸೆಪ್ಟಂಬರ್-30, ಹೀಗೆ ನಿಗದಿಪಡಿಸಿ ನಿಯಮ ಮಾಡಿದ್ದಾರೆ. ಕೆಲವು ದೇಶಗಳಲ್ಲಿಯಂತೂ 4-5 ವರ್ಷದ ವಯೋಮಿತಿಯನ್ನು ನಿಗದಿಪಡಿಸಿ ನಿಯಮ ರೂಪಿಸಿರುವುದನ್ನು ಅದೇ ವರದಿಯಲ್ಲಿ ಗುರುತಿಸಲಾಗಿದೆ. ಹಾಗಾಗಿ 6-14 ಎಂಬ ನಿಯಮವನ್ನೇ ಪಾಲಿಸಲು ನಾವು 6 ವರ್ಷದ ವಯಸ್ಸನ್ನು ಅಕ್ಟೋಬರ್ ತಿಂಗಳಿಗೆ ನಿಗಧಿಪಡಿಸಿದರೆ ಈ ಗೊಂದಲಕ್ಕೆ ಶಾಶ್ವತ ಪರಿಹಾರ ಆಗಬಹುದೆನಿಸುತ್ತದೆ. ಈ ರೀತಿ ಚಿಂತನೆ ಮಾಡಿ ತಜ್ಞ ಮತ್ತು ಸಾಮಾಜಿಕ ಬದ್ಧತೆಯ ಮನೋವಿಜ್ಞಾನಿಗಳ ಸಲಹೆಗಳನ್ನು, ಅದೇ ಸಾಮಾಜಿಕ ಕಾಳಜಿಯುಳ್ಳ ತಜ್ಞ ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆದುಕೊಂಡು ಎಲ್ಲಾ ದೃಷ್ಟಿಯಿಂದಲೂ ಒಳಿತಾಗುವಂತೆ ಒಂದು ಶಾಶ್ವತ ನಿಯಮವನ್ನು ತುರ್ತಾಗಿ ಜಾರಿಗೊಳಿಸಬೇಕಾಗಿದೆ.
————-
ಹೇಮಚಂದ್ರ ದಾಳಗೌಡನಹಳ್ಳಿ

One thought on ““ಭವಿಷ್ಯ ಕಟ್ಟಿಕೊಳ್ಳುವ ಮಕ್ಕಳಿಗೆ ಶಾಶ್ವತ, ವೈಜ್ಞಾನಿಕ ನಿಯಮ ರೂಪಿಸಿ”.ಹೇಮಚಂದ್ರ ದಾಳಗೌಡನಹಳ್ಳಿ”