ನೆನಪುಗಳ ಸಂಗಾತಿ
ಬಾಲ್ಯ ಮರಳೀತೇ….
ಕಾಡುವ ನೆನಪುಗಳ ಮೆಲುಕು ಹಾಕುತ್ತಿದ್ದಾರೆ-
ಹಮೀದಾ ಬೇಗಂ ದೇಸಾಯಿ


ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಸಂಗತಿಗಳು ಅವಿಸ್ಮರಣೀಯ…ನಾನಾಗ 3-ನೇ ಇಯತ್ತೆ ಇರಬಹುದು..ಆಗೆಲ್ಲಾ ಮಕ್ಕಳ ಕೈಲಿ ದುಡ್ಡು ಕೊಡುತ್ತಿರಲಿಲ್ಲ ಪಾಲಕರು ಈಗಿನಂತೆ..ಏನಿದ್ದರೂ ಮನೆ ತಿನಿಸು..ನಮ್ಮ ತಾಯಿ ಶಿಕ್ಷಕಿ. ನನಗೆ ಬಹಳ ಷ್ಟು ಪೆನಸೀಲ ( ಬಳಪ ) ಕೊಡುತ್ತಿದ್ದರು. ನಾನು ಅವುಗಳನ್ನು ಒಂದು ಸಣ್ಣ ಡಬ್ಬಿಯಲ್ಲಿ ( ಇಂಗಿನ ತಗಡಿನ ಡಬ್ಬಿ) ಇಟ್ಟುಕೊಂಡು ಶಾಲೆಗೆ ಹೋಗುತ್ತಿದ್ದೆ. ನನ್ನ ಜೊತೆಗೆ ಇರುವ ಗೆಳತಿಯರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದೆ..ಮಾರಾಟ ಎಂಥದು..ಒಂದು ಬಳಪಕ್ಕೆ ಹುಣಸಿಕಾಯಿ, ನೆಲ್ಲಿಕಾಯಿ, ಪೆಪ್ಪರಮಿಂಟ ಗೋಳೆ…ಇಂಥಾವರೀ..ಒಮ್ಮೊಮ್ಮೆ ಬಳಪ ಮುಗಿದಾಗ..ನನ್ನ ಒಬ್ಬ ಆಪ್ತ ಗೆಳತಿ ತನ್ನ ಹತ್ರ ಇದ್ದ ನೆಲ್ಲಿಕಾಯಿ ಫ್ರಾಕ್ ದಿಂದ ಮುಚ್ಚಿ ತನ್ನ ಹಲ್ಲಿನಿಂದ ಕಡಿದು, ಗುಬ್ಬಿ-ಎಂಜಲಾ ಮಾಡಿ ನನಗ ಅರ್ಧಾ ನೆಲ್ಲಿಕಾಯಿ ತಿನ್ನಲಿಕ್ಕೆ ಕೊಡತಿದ್ದಳು..ನಾ ಅದನ್ನ ನನ್ನ ಫ್ರಾಕ್ ದಲ್ಲಿ ಒರೆಸಿ ತಿನ್ನೋದು..ಎಂಥಾ ಪ್ರೀತಿ, ಗೆಳೆತನ ಅದು..! ನಾವೆಲ್ಲ ಯಾವ ಜಾತಿ, ಕುಲ, ಸ್ವಚ್ಛ-ಹೊಲಸು…ಎಲ್ಲರೂ ಎಷ್ಟು ನಿಷ್ಕಲ್ಮಷ ಮನದವರು…ಆವಾಗ ಯಾವುದೇ ಸೋಂಕು, ಅಜಾರಿ…ಏನಿರಲಿಲ್ಲ… …ನೆನಪಾದರೆ ಸಂತೋಷ ದೊಂದಿಗೆ..ಕಣ್ಣು ತುಂಬಿ ಬರುತ್ತದೆ…
ಜೀವನದಲ್ಲಿ ಎಲ್ಲಕ್ಕಿಂತ ಸಂತೋಷ ಪಡುವ ಕಾಲ- ಬಾಲ್ಯದ ದಿನಗಳು …ಮತ್ತೆ ಬಾರದ ಕಾಲ ಅದು. ಗೆಳತಿಯರ ಒಡನಾಟ, ಸಣ್ಣ ಪುಟ್ಟ ಜಗಳ, ಮತ್ತೆ ಕೂಡಿ ಆಡುವ ನಿಷ್ಕಲ್ಮಷ ಮನಸ್ಸು, ಮರ ಹತ್ತಿ ಮಾವಿನಕಾಯಿ – ಪೇರಲಕಾಯಿ ಹರಿದು ತಿನ್ನುವ ಸಂತೋಷ..ಈಗ ಬರಲು ಸಾಧ್ಯವೇ..? ಈಜಲು ಬಾವಿಗೆ ಗಂಟೆಗಟ್ಟಲೆ ಹೋಗೋದು, ಅಂಡ್ಯಾಳ ಆಡೋದು, ಛಕ್ಕಾ ಆಡೋದು, ಚಿಗಳಿ ಕುಟ್ಟಿ ( ಯಾರದೋ ಮನೆ ಹಿತ್ತಲದಾಗ ಅರಿವೆ ಒಗೆಯೋ ಕಲ್ಲಿನಮ್ಯಾಲ ತುಡಗಲೇ) ಜ್ವಾಳ ದಂಟಿಗೆ ಸುತ್ತಿ..ಈಗಿನವರ ಲಾಲಿಪಾಪ್ ಹಂಗ ಚೀಪೋದು…ಛೆ ಛೆ. ಆ ಮಜಾನೇ ಬೇರೆ…ಆ ದಿನಗಳು ಈಗ ಬರೀ ನೆನಪು ಮಾತ್ರ…
ಹಮೀದಾ ಬೇಗಂ ದೇಸಾಯಿ

ಮತ್ತೆ ಬಾಲ್ಯಕ್ಕೆ ಕರೆದೊಯ್ಯಿತು. ಸೊಗಸಾದ ಬರಹ.