ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಮದನಾರಿಯಂತಿತ್ತು ಮಣಿಪುರ ಮದನಾರಿಯಂತಿತ್ತು ಮಣಿಪುರ ಮಣಿಪುರವನ್ನು ನಾವು ಸೇರಿದ ವೇಳೆಗೆ ಮಳೆಯ ಮಣಿಗಳು ಗಗನಮುಖದಿಂದ ಧರಣಿವದನದೆಡೆಗೆ ಬೀಳುತ್ತಿದ್ದವು. ವರ್ಷ ಕಾಲ ಆರಂಭವಾಗಿತ್ತು. ಮಳೆಯ ನೀರಿಗಾಗಿಯೇ ಕಾದುಕುಳಿತಿದ್ದ ಚಾತಕ ಪಕ್ಷಿಗಳು ಹನಿಹನಿಗಳನ್ನು ಕುಡಿಯುತ್ತಿದ್ದ ಪರಿಯನ್ನು ಕಂಡು ಅಸೂಯೆಯನ್ನು ತಾಳದಾದವು ಹಂಸಗಳು. ತಮಗೆ ಸಲ್ಲಬೇಕಾದ ವರ್ಷಧಾರೆಯನ್ನು ಭೂಮಿ ಸೇರುವುದಕ್ಕೂ ಮೊದಲೇ ಕುಡಿದು ಮುಗಿಸುತ್ತಿವೆ ಚಾತಕ ಪಕ್ಷಿಗಳು ಎಂಬ ಮತ್ಸರ ಹಂಸಗಳಲ್ಲಿ. ಭರದಿಂದ ಓಡುತ್ತಿದ್ದವು ಆಚೆಗೆ.ಮಣಿಪುರದ ಸಮೃದ್ಧತೆಯನ್ನೇ ಕಾಣುತ್ತಾ ಬರುತ್ತಿದ್ದೆ ನಾನು. ಚಿನ್ನ ಬೆಳ್ಳಿಗಳ ಕೋಟೆಗಳಿದ್ದವು. ಮಾಣಿಕ್ಯ ವಜ್ರವೈಢೂರ್ಯಗಳಿಂದ ಮಾಡಲ್ಪಟ್ಟ ಕೊತ್ತಳಗಳ ಸಾಲುಗಳಿದ್ದವು. ಕೆಂಪು ಹವಳದ ತೋರಣಗಳಿದ್ದವು. ಮುತ್ತು ರತ್ನಗಳಿಂದ ನಿರ್ಮಿಸಲಾದ ಗೋಪುರಗಳಿದ್ದವು. ಚಿತ್ರಚಿತ್ತಾರಗಳಿಂದ ಶೋಭಿಸುತ್ತಿದ್ದವು ಅಲ್ಲಿಯ ದ್ವಾರಗಳು. ಹಗಲಿಗೆ ಹೆದರಿ ಚದುರಿಹೋಗಿದ್ದ ಬೆಳದಿಂಗಳು ಮಣಿಪುರವನ್ನು ಹೊಕ್ಕು, ಮುತ್ತಿಗೆ ಹಾಕಿ, ಯುದ್ಧಕ್ಕಾಗಿ ಕಾದು ಕುಳಿತಿರಲು ಅದರ ಜೊತೆಗಿನ ಯುದ್ಧಕ್ಕಾಗಿ ಇಲ್ಲಿಗೆ ಬಂದು ಇಡಿಯ ನಗರವನ್ನು ವಶಪಡಿಸಿಕೊಂಡಿದೆ ಎಳೆಬಿಸಿಲು ಎಂಬAತೆ ತೋರುತ್ತಿತ್ತು ಮಣಿಪುರದಲ್ಲಿದ್ದ ಸೌಧಗಳು, ಕೋಟೆಗಳು. ಬೆಳದಿಂಗಳ ಕಾಂತಿಯನ್ನು ಎತ್ತರೆತ್ತರದ ಸೌಧಗಳಲ್ಲಿ ಕಾಣಬಹುದಾಗಿತ್ತು. ಹೊಚ್ಚಹೊಸತಾದ ಚಿನ್ನದ ಕೋಟೆಗಳ ಹೊಳಪದು ಎಳೆಬಿಸಿಲಿನ ನೆನಪನ್ನು ಮೂಡಿಸುವಂತಿತ್ತು.ಶ್ರೇಷ್ಠವಾದ ಗಿರಿಶಿಖರಗಳನ್ನು ಮೀರಿಸುವಂತಿದ್ದ ಅಲ್ಲಿಯ ಚಿನ್ನದ ಗೋಪುರಗಳು ಹೆಣ್ಣಿನ ದಪ್ಪ ಮೊಲೆಯಂತೆ ತೋರಿದವು, ನನ್ನ ಕಣ್ಣಿಗೆ. ಲಾವಣ್ಯವತಿಯ ಬಾಹುಬಳ್ಳಿಯಂತೆ ಕಾಣುತ್ತಿತ್ತು ಅಲ್ಲಿಯ ರಾಜಮಾರ್ಗ. ಕಮಲಮುಖಿಯ ಸುಂದರ ವದನದಂತಿತ್ತು ಅರಮನೆ. ಮೇಲೆ ಹಾರಾಡುತ್ತಿದ್ದ ಧ್ವಜಗಳು ಮುಗುದೆಯ ಮುಂಗುರುಳನ್ನು ಜ್ಞಾಪಿಸುವಂತಿದ್ದವು. ಮದನಾರಿಯ ಮಣಿಹಾರವಾಗಿತ್ತು ಕಟ್ಟಿದ್ದ ತೋರಣಗಳು. ಕೋಟೆಗಳವು ಹೆಣ್ಣಿನ ಮೈಯ್ಯಲ್ಲಿ ಶೋಭಿಸುವ ಉಡುಗೆಯಿದ್ದ ಹಾಗೆ. ನಗರದ ಗಡಿಯದು ಸುಂದರಿಯ ಸೊಂಟವನ್ನಲAಕರಿಸುವ ಡಾಬು. ಅಲ್ಲಿನ ಶ್ವೇತವರ್ಣದ ಗೃಹಗಳು ಹೆಣ್ಣಿನ ದಂತಗಳು. ಮಣಿಪುರ ನಗರವದು ಚೆಲುವ ನಾರಿಯಂದದಿ ಗೋಚರವಾಯಿತು ನನ್ನ ದೃಷ್ಟಿಗೆ.ಅತೀವ ಜನಸಮೂಹವಿತ್ತು ನಗರದೊಳಗೆ. ಗುಂಪುಗುAಪಾಗಿ ನಗರವನ್ನು ಪ್ರವೇಶಿಸುವವರಿದ್ದರು. ಅಲ್ಲಿಂದ ತಂಡೋಪತAಡವಾಗಿ ಹೊರಹೋಗುವವರಿದ್ದರು. ಆನೆಗಳು, ಕುದುರೆಗಳು ಎಲ್ಲೆಡೆಯೂ ಕಾಣಸಿಗುತ್ತಿದ್ದವು. ಪುರಜನರು ತೋರುತ್ತಿದ್ದರು ದೆಸೆದೆಸೆಯಲ್ಲಿ. ಮಣಿಪುರದ ಅರಸನಾಗಿದ್ದವ ಬಭ್ರುವಾಹನ. ಇವನಿಗೆ ಅನುದಿನವೂ ಸಾವಿರ ಬಂಡಿಗಳಷ್ಟು ಧನಕನಕಗಳು ಸಲ್ಲುತ್ತಿದ್ದವು ರಾಜರ ಕಡೆಯಿಂದ. ನನ್ನ ಜೊತೆಯಲ್ಲಿದ್ದ ಹಂಸಧ್ವಜ ಅರಸನೂ ಸಹ ಬಭ್ರುವಾಹನನಿಗೆ ತಪ್ಪದೆಯೇ ಕಪ್ಪಕಾಣಿಕೆಗಳನ್ನು ಸಲ್ಲಿಸುವವನಾಗಿದ್ದ.“ಅಧಿಕ ಸೊಗಸಿನಿಂದ ಕಂಗೊಳಿಸುತ್ತಿದೆ ಈ ನಗರ. ಇದನ್ನಾಳುತ್ತಿರುವ ಅರಸ ಯಾರು? ಅವನು ಕುದುರೆಯನ್ನು ಕಟ್ಟಿ, ನಮ್ಮೊಡನೆ ಯುದ್ಧ ಹೂಡುವ ಮನಸ್ಸು ಮಾಡಿಯಾನೇ?” ಎಂದು ಪ್ರಶ್ನಿಸಿದೆ ಹಂಸಧ್ವಜನಲ್ಲಿ.ಮಣಿಪುರದರಸನ ಸಾಮರ್ಥ್ಯವನ್ನು ಬಣ್ಣಿಸತೊಡಗಿದ ಚಂಪಕಾ ನಗರಿಯ ದೊರೆ. “ಮಣಿಪುರವೆಂಬ ಈ ನಗರವನ್ನು ಪಾಲಿಸುತ್ತಿರುವವನು ಬಭ್ರುವಾಹನ ಎಂಬ ರಾಜ. ಸಮರ್ಥ ದೊರೆ ಎಂಬ ಪ್ರಸಿದ್ಧಿ ಪಡೆದವನವನು. ದೊರೆಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಇವನ ಸಾಮರ್ಥ್ಯ ಸಾಧನೆಗಳನ್ನು ಒಪ್ಪಿಕೊಂಡ ಅರಸರು ಪ್ರತೀದಿನವೂ ತಪ್ಪದೆ ಸಾವಿರ ಬಂಡಿ ಕನಕವನ್ನು ತಂದೊಪ್ಪಿಸುತ್ತಾರೆ ಇವನಿಗೆ. ಒಂದುವೇಳೆ ಲೋಪವಾದರೆ ಶಿಕ್ಷೆಯಿತ್ತಾನು ಎಂಬ ಭೀತಿ ಎಲ್ಲರಲ್ಲಿಯೂ ಇದೆ” ಎಂದ ಹಂಸಧ್ವಜ, ಬಭ್ರುವಾಹನನ ಸಚಿವನ ಬಗೆಗೆ ಹೇಳತೊಡಗಿದ.“ಸುಬುದ್ಧಿಯೆಂಬ ಸಚಿವನಿದ್ದಾನೆ ಇವನಿಗೆ. ಈ ನಗರವನ್ನು ನಿಜಾರ್ಥದಲ್ಲಿ ಪಾಲಿಸುತ್ತಿರುವವನು ಅವನೇ. ಧರ್ಮಕ್ಕೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾನೆ. ಪ್ರಜೆಗಳ ಬಗೆಗೆ ಅನುರಾಗವನ್ನು ಇಟ್ಟುಕೊಂಡಿದ್ದಾನೆ. ಪುರದ ಜನರಿಗೆ ಸೌಖ್ಯ ನೀಡುವವರಾಗಿ ಗುರುತಿಸಿಕೊಂಡಿದ್ದಾರೆ ಈ ರಾಜ ಸಚಿವರು” ಎಂದ ಹಂಸಧ್ವಜನಿಗೆ ಬಭ್ರುವಾಹನನ ಸೇನೆಯ ಸಾಮರ್ಥ್ಯ ತಿಳಿದಿತ್ತು.ಒಂದೇ ಕಿವಿಯಿರುವ ಕಪ್ಪನೆಯ ಕುದುರೆಗಳು, ಶುದ್ಧ ಶ್ವೇತವರ್ಣದ ಆನೆಗಳು, ಚಿನ್ನದ ರಥಗಳು ಅಗಣಿತ ಸಂಖ್ಯೆಯಲ್ಲಿದ್ದವು ಮಣಿಪುರದಲ್ಲಿ. ಅವುಗಳ ಸಂಖ್ಯೆ ಅದೆಷ್ಟು ಎನ್ನುವುದು ಬಭ್ರುವಾಹನನ ಕರಣಿಕರಿಗೇ ತಿಳಿದಿರಲಿಲ್ಲ. ಉಳಿದ ಸಾಮಾನ್ಯ ಕುದುರೆ, ಆನೆ, ರಥಗಳ ಲೆಕ್ಕಾಚಾರವದು ಸುಲಭವಾಗಿ ಸಿಗುವಂತಿರಲಿಲ್ಲ. ಪರಾಕ್ರಮಶಾಲಿಯಾದ ಅರಸನಿವನು ಎನ್ನುವುದು ನನಗೆ ದೃಢವಾಯಿತು.ಮಣಿಪುರದಲ್ಲಿದ್ದ ಜನರೆಲ್ಲರೂ ಹರಿಭಕ್ತರಾಗಿದ್ದರು. ವೇದ ಶಾಸ್ತçಗಳನ್ನು ತಿಳಿದವರಾಗಿದ್ದರು. ಸತ್ಯವನ್ನೇ ನುಡಿಯುವ ವ್ರತವನ್ನು ಪಾಲಿಸುತ್ತಿದ್ದರು. ಕೋಪವನ್ನು ತೊರೆದವರಾಗಿದ್ದರು. ಅಹಿಂಸೆಯೆಡೆಗೆ ಮನಸ್ಸು ಮಾಡಿದ್ದರು. ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಕದನ ಸಮರ್ಥರಾಗಿದ್ದರು. ದಾನದ ಗುಣವಿತ್ತು. ಅಸೂಯೆ ಇದ್ದವರಲ್ಲ. ಅಲ್ಲಿಯ ಸಕಲ ನಾರಿಯರು ಪತಿವ್ರತೆಯರೆನಿಸಿಕೊಂಡಿದ್ದರು. ಹೀಗೆ ಸರ್ವ ಸಜ್ಜನರನ್ನೇ ಒಳಗೊಂಡ ಈ ನಗರವನ್ನು ಶ್ರೀಮನ್ನಾರಾಯಣ ಎರಡನೇ ವೈಕುಂಠವಿದು ತನ್ನ ಪಾಲಿಗೆ ಎಂಬ ಮಮಕಾರದಿಂದ ಪೊರೆಯುತ್ತಿದ್ದ.“ಬಭ್ರುವಾಹನನೆಂಬ ಈ ಬಲುವೀರ ಕಟ್ಟದಿರುತ್ತಾನೆಯೇ ಯಜ್ಞಾಶ್ವವನ್ನು!” ಎಂದ ಹಂಸಧ್ವಜ. ಹೀಗೆ ಅವನು ನುಡಿದ ಕ್ಷಣದಲ್ಲಿಯೇ ಹದ್ದೊಂದು ಹಾರಿಬಂದು ನನ್ನ ಕಿರೀಟದ ತುದಿಯಲ್ಲಿ ಕಾಲೂರಿ ಕುಳಿತಿತು. ನನ್ನ ಗಮನಕ್ಕಿದು ಬಂದಿರಲಿಲ್ಲ. ನನ್ನ ಜೊತೆಗಿದ್ದ ವೀರರು ವಿವರಿಸಿದರು ಇದನ್ನು. ಸೋಲಿನ ಸೂಚನೆಯಿದು ಎಂದು ನುಡಿದರವರು ಆತಂಕದಿAದ.ಹೀಗೆ ಚಿಂತೆಯ ಕಾರ್ಮೋಡವೊಂದು ನಮ್ಮನ್ನು ಕವಿದ ಕ್ಷಣದಲ್ಲಿಯೇ ಬಭ್ರುವಾಹನ ಅವನ ಸೇವಕರನ್ನು ಅಟ್ಟಿ, ನಮ್ಮ ಕುದುರೆಯನ್ನು ಕೊಂಡೊಯ್ದು, ಕಟ್ಟಿಸಿಯೇಬಿಟ್ಟ. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-124 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮೊಮ್ಮಕ್ಕಳು ಬಂದ ಖುಶಿ ಆಸ್ಪತ್ರೆಗೆ ಬಂದ ಸುಮತಿಯ ಎರಡನೇ ಮಗಳು ಸಂಜೆ ವಾರ್ಡಿಗೆ ಕಾಫಿ-ಬ್ರೆಡ್ ಬಂದಾಗ ಸರತಿಯಲ್ಲಿ ನಿಂತು ಪಡೆದುಕೊಂಡು ಅಮ್ಮನಿಗೆ ಕೊಟ್ಟಳು. ಕಾಫಿ ಕುಡಿದು ತಾಯಿ ಮಲಗಿದ ನಂತರ ವಾರ್ಡಿನ ಹೊರಗಿನ ವೆರಾಂಡಾದ ಮೆಟ್ಟಿಲಿನ ಮೇಲೆ ಕುಳಿತು ತನ್ನ ಪಠ್ಯ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಓದಿನಲ್ಲಿ ಸಂಪೂರ್ಣ ಮಗ್ನಳಾಗಿದ್ದ ಅವಳ ಕುತ್ತಿಗೆಯನ್ನು ಎರಡು ಪುಟ್ಟ ಕೈಗಳು ಬಿಗಿಯಾಗಿ ಅಪ್ಪಿಕೊಂಡವು. ತಿರುಗಿ ನೋಡಿದಾಗ ತನ್ನ ಹಿಂದೆ ತುಂಟತನದಿಂದ ನಗುತ್ತಾ ನಿಂತಿದ್ದ ಅಕ್ಕನ ಮಗನನ್ನು ಕಂಡಳು. ತಲೆ ಎತ್ತಿ ನೋಡಿದಾಗ ಬಾವ ಹಾಗೂ ಮಗುವನ್ನು ಎತ್ತಿಕೊಂಡು ನಿಂತಿರುವ ಅಕ್ಕನನ್ನು ಕಂಡಳು. ಅವಳಿಗೆ ಬಹಳ ಆನಂದವಾಯಿತು. ಅಕ್ಕನ ಮಗನನ್ನು ಎತ್ತಿಕೊಂಡು…”ಬನ್ನಿ…ಅಮ್ಮ ಈಗತಾನೇ ಮಲಗಿದ್ದಾಳೆ”…ಎಂದು ಹೇಳುತ್ತಾ ಅಕ್ಕ-ಬಾವನನ್ನು ಒಳಗೆ ಕರೆದುಕೊಂಡು ನಡೆದಳು. ಅಕ್ಕನ ಕಂಕುಳಲ್ಲಿ ಇದ್ದ ಪುಟ್ಟ ಮಗು ಚಿಕ್ಕಮ್ಮನ ಕಡೆಗೆ ಎತ್ತಿಕೋ ಎನ್ನುವಂತೆ ಎರಡೂ ಕೈಗಳನ್ನು ಚಾಚಿತು. ಅಕ್ಕನ ಮಗನ ಕೆನ್ನೆಯನ್ನು ಮೃದುವಾಗಿ ಸವರುತ್ತಾ… “ಪುಟ್ಟಾ ನೀನು ಇಲ್ಲಿ ಕುಳಿತು ಅಜ್ಜಿಯನ್ನು ಎಬ್ಬಿಸು….ನಾನು ನಿನ್ನ ತಂಗಿಯನ್ನು ಎತ್ತಿಕೊಳ್ಳುತ್ತೇನೆ”… ಎಂದ ಚಿಕ್ಕಮ್ಮನ ಮಾತಿಗೆ… “ಹೂಂ”….ಎಂದ ಆ ಮಗು ಖುಷಿಯಿಂದ ಅಜ್ಜಿಯ ಪಕ್ಕ ಕುಳಿತು…..”ಅಮ್ಮಾಮ್ಮಾ…ಣೀಚೇ…ಞಾಯೀ.. ವನ್ನಿಟ್ಟುಂಡ್”….( ಅಜ್ಜೀ ಎದ್ದೇಳು ನಾನು ಬಂದಿದ್ದೇನೆ) ಎಂದು ತೊದಲು ನುಡಿಯಲು, ಮೊಮ್ಮಗನ ಧ್ವನಿ ಕೇಳಿ ಎಚ್ಚೆತ್ತ ಸುಮತಿ ಎದ್ದು ಕುಳಿತು ಮೊಮ್ಮಗನನ್ನು ಅಪ್ಪಿಕೊಂಡಳು. ಹಿರಿಯ ಮಗಳು, ಪುಟ್ಟ ಮೊಮ್ಮಗಳು ಮತ್ತು ಅಳಿಯ ಎಲ್ಲರನ್ನೂ ಕಂಡು ಸುಮತಿ ಹರ್ಷಿತವಾದಳು. ಅಳಿಯನನ್ನು ಉದ್ದೇಶಿಸಿ ಅಲ್ಲಿಯೇ ಇದ್ದ ಸ್ಟೂಲ್ ನ ಮೇಲೆ ಕುಳಿತುಕೊಳ್ಳುವಂತೆ ಹೇಳಿದಳು.  ಅಳಿಯ ‘ಹ್ಮೂ’ಎಂದು ತಲೆಯಾಡಿಸಿ ಸ್ಟೂಲ್ ಮೇಲೆ ಕುಳಿತುಕೊಂಡ. ಹಿರಿಯಮಗಳು ಅಮ್ಮನ ಪಕ್ಕದಲ್ಲಿಯೇ ಕುಳಿತುಕೊಂಡಳು. ಮೊಮ್ಮಗ ಅಜ್ಜಿಯ ತೊಡೆಯನ್ನು ಏರಿ ಕುಳಿತುಕೊಂಡ….”ಅಜ್ಜಿಗೆ ಹುಷಾರಿಲ್ಲ ಕಂದಾ… ಬೆಡ್ ಮೇಲೆ ಕುಳಿತುಕೋ”…. ಎಂದು ಸುಮತಿಯ ಅಳಿಯ ತನ್ನ ಮಗನಿಗೆ ಹೇಳಿದರೂ ಅವನು ಕೇಳಲಿಲ್ಲ. …”ಉಹೂಂ… ಞಾ…. ಇವೀಡೆಯೇ ಇಚ್ಚಾಂ”… (ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ) ಎಂದು ಹೇಳುತ್ತಾ ಅಜ್ಜಿಯ ಮುಖವನ್ನೊಮ್ಮೆ ನೋಡಿದ. ಸುಮತಿ ಪ್ರೀತಿಯಿಂದ ಮೊಮ್ಮಗನ ಕೆನ್ನೆಗೆ ಹೂ ಮುತ್ತೊಂದನ್ನು ಕೊಟ್ಟು….”ಕುಳಿತುಕೊಳ್ಳಲಿ ತೊಂದರೆಯಿಲ್ಲ”…. ಎಂದು ಹೇಳುತ್ತಾ ಮೊಮ್ಮಗನ ತಲೆಯನ್ನು ನೇವರಿಸಿದಳು.‌ ಅಳಿಯ ಒಂದು ಕ್ಷಣ ಏನನ್ನೋ ಯೋಚಿಸುತ್ತಾ …”ಅಮ್ಮಾ ಹೇಗಿದ್ದೀರಿ?…ಎಂದು ಕೇಳಿದಾಗ….”ಪರವಾಗಿಲ್ಲಪ್ಪ”… ಎಂದು ಉತ್ತರಿಸಿದಳು ಸುಮತಿ…. “ಡಾಕ್ಟರ್ ಏನು ಹೇಳಿದರು ಅಮ್ಮಾ”…..ಎಂದು ಹಿರಿಯ ಮಗಳು ಸುಮತಿಯನ್ನು ಕೇಳಲು,…”ಸ್ವಲ್ಪ ದಿನ ಇಲ್ಲಿದ್ದು ಔಷಧೋಪಚಾರ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ”….ಎಂದು ಹೇಳುತ್ತಾ ಸುಮತಿ ಎರಡನೇ ಮಗಳ ಕಡೆಗೆ ನೋಡಿದಳು. ಅಕ್ಕನ ಮಗಳನ್ನು ಎತ್ತಿಕೊಂಡು ಅವಳನ್ನು ಮುದ್ದು ಮಾಡುತ್ತಿದ್ದ ಎರಡನೇ ಮಗಳ ಮುಖ ಅಮ್ಮನ ಮಾತು ಕೇಳಿ ಮ್ಲಾನವಾಯಿತು. ಇದನ್ನು ಗಮನಿಸಿದ ಹಿರಿಯ ಮಗಳು ತಂಗಿಯ ಕಡೆಗೆ ನೋಡುತ್ತಾ….”ಏನು ಹೇಳಿದರು ಡಾಕ್ಟರ್?…ನೀನೇಕೆ ಹೀಗೆ ಇದ್ದಕ್ಕಿದ್ದ ಹಾಗೆ ಮಂಕಾದೆ”…. ಎಂದು ಕೇಳಲು ಆಮೇಲೆ ಹೇಳುತ್ತೇನೆ ಎಂಬಂತೆ ಸನ್ನೆ ಮಾಡಿದಳು. ಸುಮತಿ ಇದ್ಯಾವುದನ್ನೂ ಗಮನಿಸದೇ ಮೊಮ್ಮಗನ ಬಾಲಭಾಷೆಯನ್ನು ಕೇಳುವುದರಲ್ಲೇ ಮಗ್ನಳಾಗಿದ್ದಳು.  ತನ್ನ ಅಣ್ಣ ಅಜ್ಜಿಯ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಅವನ ಪುಟ್ಟ ತಂಗಿ ತಾನೂ ಅಜ್ಜಿಯ ಬಳಿ ಹೋಗುತ್ತೇನೆ ಎನ್ನುವಂತೆ ಚಿಕ್ಕಮ್ಮನ ತೋಳಿಂದ ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ಗಮನಿಸಿದ ಸುಮತಿ…. “ಬಾ ನನ್ನ ಮುದ್ದು ಮೊಮ್ಮಗಳೇ…. ಅಜ್ಜಿಯ ತೊಡೆ ಮೇಲೆ ಕುಳಿತುಕೋ”… ಎಂದು ಹೇಳುತ್ತಾ ಮೊಮ್ಮಗಳನ್ನು ಎತ್ತಿಕೊಂಡು ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಸುಮತಿ ತನ್ನ ಅನಾರೋಗ್ಯದ ಆಯಾಸವನ್ನು ಮರೆತಳು. ಅವರಿಬ್ಬರನ್ನು ಮುದ್ದಾಡುತ್ತಾ ಅವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ವಾರ್ಡಿನ ಬಾಗಿಲಿನ ಮುಂದೆ ಆಸ್ಪತ್ರೆಯ ಊಟದ ತಳ್ಳುಗಾಡಿ ಬಂದು ನಿಂತಿತು. ಅಡುಗೆಯವ…..” ಎಲ್ಲರೂ ಬನ್ನಿ ಬೇಗ ಊಟ ತೆಗೆದುಕೊಳ್ಳಿ”…. ಎಂದು ಕೂಗಿದ. ಸುಮತಿಯ ಎರಡನೇ ಮಗಳು ಊಟದ ತಟ್ಟೆ ಹಾಗೂ ಒಂದು ಬಟ್ಟಲನ್ನು ಹಿಡಿದು ಸರತಿಯ ಸಾಲಿನಲ್ಲಿ ನಿಂತಳು. ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರು ಇತ್ತು. ಮಧ್ಯಾಹ್ನದ ಊಟಕ್ಕೆ ಅನ್ನ ಸಾರು ಒಂದು ಮೊಟ್ಟೆ ಎರಡು ಬಾಳೆಹಣ್ಣು ಆಸ್ಪತ್ರೆಯಿಂದ ಕೊಡುತ್ತಿದ್ದರು. ಅಡುಗೆಯವರು ಊಟ ಬಡಿಸಿದಾಗ ಅದನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಸಣ್ಣ ಕಪಾಟಿನ ಮೇಲೆ ಮತ್ತೊಂದು ತಟ್ಟೆಯಿಂದ ಮುಚ್ಚಿಟ್ಟಳು….”ಬನ್ನಿ ಮಕ್ಕಳೇ…. ಅಜ್ಜಿ ಊಟ ಮಾಡಲಿ…. ನಾವು ಈಗ ಮನೆಗೆ ಹೋಗೋಣ…. ನಾಳೆ ಮತ್ತೆ ಅಜ್ಜಿಯನ್ನು ನೋಡಲು ಅಮ್ಮನ ಜೊತೆ ನೀವಿಬ್ಬರೂ ಇಲ್ಲಿಗೆ ಬರಬಹುದು”… ಎಂದು ಹೇಳಿ, ಹೆಂಡತಿಯ ಕಡೆಗೆ ತಿರುಗಿ ಹೋಗೋಣವೇ ಎಂಬಂತೆ ನೋಡಿದ. ಪತಿಯ ನೋಟದ ಅರ್ಥವನ್ನು ಅರಿತ ಸುಮತಿಯ ಹಿರಿಯ ಮಗಳು ‘ಸರಿ’ ಎನ್ನುವ ತಲೆ ಆಡಿಸಿ ಮಗಳನ್ನು ಸುಮತಿಯ ಮಡಿಲಿನಿಂದ ಎತ್ತಿಕೊಂಡಳು.  ಆ ಪುಟ್ಟ ಮಗು ತಾನು ಬರುವುದಿಲ್ಲವೆಂದು ಹಠ ಮಾಡಿತು. ಮೊಮ್ಮಗನೂ ಅಜ್ಜಿಯ ಕುತ್ತಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡು ಞಾಯಿ…ವನ್ನಿಲ್ಲ….ಅಮ್ಮಾಮ್ಮೆಡೆ ಕೂಡೆ ಇಚ್ಚಾಂ….(ನಾನು ಬರುವುದಿಲ್ಲ ಅಜ್ಜಿಯ ಜೊತೆ ಇಲ್ಲೇ ಇರುತ್ತೇನೆ) ಎಂದು ಹೇಳಿದ. ಅವನನ್ನು ಪುಸಲಾಯಿಸಿ ಕರೆದುಕೊಂಡು ಹೋಗಲು ಅಳಿಯ ಹರಸಾಹಸ ಪಡಬೇಕಾಯಿತು…._ನಾಳೆ ಮತ್ತೆ ಬರೋಣ”… ಎಂದು ಹೇಳಿದಾಗ ಒಲ್ಲದ ಮನಸ್ಸಿನಿಂದ ವಾರ್ಡಿನ ಬಾಗಿಲಿನಿಂದ ಆಚೆ ಮರೆಯಾಗುವವರೆಗೂ ಅಜ್ಜಿಯನ್ನೇ ನೋಡುತ್ತಾ ಅಪ್ಪ ಅಮ್ಮನ ಜೊತೆಗೆ ಹೋದ. ಮೊಮ್ಮಕ್ಕಳನ್ನು ಕಳುಹಿಸಲು ಸುಮತಿಗೆ ಮನಸ್ಸಿಲ್ಲದಿದ್ದರೂ ಮತ್ತೆ ಬರುತ್ತಾರೆ ಅಲ್ಲವೇ ಎನ್ನುವ ಕಾರಣದಿಂದ ಕಳುಹಿಸಿಕೊಟ್ಟಳು.‌….”ಅಮ್ಮ ಈಗ ಊಟ ಮಾಡು…. ನರ್ಸ್ ಬಂದು ಔಷಧಿ ಕೊಡುವ ಸಮಯವಾಯಿತು…. ತಡ ಮಾಡಬೇಡ”… ಎಂದ ಮಗಳ ಮಾತಿಗೆ ತಲೆಯಾಡಿಸಿ, ಊಟದ ತಟ್ಟೆಯನ್ನು ಅವಳ ಕೈಯಿಂದ ಪಡೆದಳು. ತಾಯಿ ಊಟ ಮುಗಿಸಿದ ನಂತರ ಅಲ್ಲಿಯೇ ತಟ್ಟೆಯಲ್ಲಿ ಕೈ ತೊಳೆಯಲು ನೀರನ್ನು ಕೊಟ್ಟಳು. ಆಸ್ಪತ್ರೆಯ ಕೈ ತೊಳೆಯುವ ಜಾಗ ಸ್ವಲ್ಪ ದೂರ ಇದ್ದಿದ್ದರಿಂದ ದಿನವೂ ಹೀಗೆ ತಟ್ಟೆಯಲ್ಲಿ ಕೈ ತೊಳೆಯಲು ಹೇಳುತ್ತಿದ್ದಳು. ನಂತರ ತಾನು ಹೋಗಿ ಶುಚಿಯಾಗಿ ತಟ್ಟೆಯನ್ನು ತೊಳೆದುಕೊಂಡು ಬಂದು ಇಡುತ್ತಿದ್ದಳು. ನರ್ಸ್ ಬಂದು ರಾತ್ರಿಯ ಔಷಧಿಯನ್ನು ಕೊಟ್ಟರು. ಔಷಧಿಯನ್ನು ಕುಡಿದು ಸುಮತಿ ದಿಂಬನ್ನು ಬೆನ್ನಿನ ಹಿಂದೆ ಇಟ್ಟು ಒರಗಿ ಕುಳಿತುಕೊಂಡಳು. ತಾಯಿಯ ಹಾಸಿಗೆ ಪಕ್ಕದಲ್ಲಿಯೇ ಸ್ಟೂಲನ್ನು ಎಳೆದುಕೊಂಡು ಮಗಳು ಕುಳಿತುಕೊಂಡು ತಾಯಿಯ ಹಸ್ತವನ್ನು ತನ್ನ ಎರಡೂ ಕರಗಳಲ್ಲಿ ಹಿಡಿದುಕೊಂಡ ತಾಯಿಯ ಮುಖವನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡಿದಳು.

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-26 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕನ್ನಡಾಬಿಮಾನ *ಗಡಿ ಭಾಗವೆಂದರೆ |ಕಡಿಮೆ ಇಲ್ಲ ಕನ್ನಡಕೆ ಉಡಿಯ ತುಂಬುವೆ ಕನ್ನಡ -ತಾಯಿಗೆಒಡವೆಯ ಇಡಿಸುವೆ ಪದಗಳ||*ಅಂತ ಹಾಡುತ ಜಯದೇವಿ ತಾಯಿಯವರು ಗಡಿಭಾಗದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.  ಗಡಿಭಾಗದಲ್ಲಿ ವಾಸಿಸುವುದರಿಂದ ಕನ್ನಡದ ಮೇಲಿನ ಪ್ರೀತಿ, ಗೌರವ ಅಥವಾ ನಿಷ್ಠೆ ಕಡಿಮೆಯಾಗುವುದಿಲ್ಲ  ಸ್ಪಷ್ಟಪಡಿಸುತ್ತ* ಉಡಿಯ ತುಂಬುವೆ ಕನ್ನಡ ಪದಗಳ …ಎಂಬುದು ಸಾಂಕೇತಿಕವಾಗಿದೆ. ಮುತ್ತೈದೆಯಾದ ಕನ್ನಡಾಂಬೆಯ ಉಡಿಯನ್ನು ಕನ್ನಡದ ಮಧುರ ಪದಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯಿಂದ ತುಂಬಿಸಿ ಅವಳನ್ನು ಗೌರವಿಸುವ ಸಂಕಲ್ಪವನ್ನು ವ್ಯಕ್ತಪಡಿಸುತ್ತ…. *ಒಡವೆ ಇಡಿಸುವೆ ಕನ್ನಡ ಪದಗಳ* ಎಂಬುದು ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಧರಿಸುವ ಅಮೂಲ್ಯ ಆಭರಣಗಳೆಂಬ ಭಾವವನ್ನು ತಿಳಿಸುತ್ತದೆ. ಬಂಗಾರ, ಬೆಳ್ಳಿ ಅಥವಾ ರತ್ನಗಳಿಗಿಂತ  ಶ್ರೇಷ್ಠ ಕನ್ನಡದ  ಪದಗಳು…. ಸಾಹಿತ್ಯ ಮತ್ತು ಸಂಸ್ಕೃತಿಯೇ ಕನ್ನಡಾಂಬೆಯ ನಿಜವಾದ ಅಲಂಕಾರವೆಂದು ಸಾರುವ ತ್ರಿಪದಿ ಗಡಿಭಾಗದ ಕನ್ನಡಿಗರ ಅಚಲ ಕನ್ನಡಾಭಿಮಾನವನ್ನು, ಕನ್ನಡ ತಾಯಿಯನ್ನು ಪದಗಳ ಮೂಲಕ ಆರಾಧಿಸುವ ಮನೋಭಾವವನ್ನು ಹಾಗೂ ಕನ್ನಡ ಭಾಷೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮತ್ತಷ್ಟು ಶ್ರೀಮಂತಗೊಳಿಸುವ ಸಂಕಲ್ಪವನ್ನು ಸುಂದರವಾಗಿ ಅಭಿವ್ಯಕ್ತಿಸುತ್ತ… ಮನದಾಳಕ್ಕೆ ಇಳಿಯುವಂತಹ ತ್ರಿಪದಿಗಳು ರಚಿಸಿದರು…. ಗಡಿನಾಡಿನಲ್ಲಿ ಬದುಕಿದ ತಾಯಿಯವರು‌…ನಿಸರ್ಗದ ಮಡಿಲಿನಲ್ಲಿ ಹುಟ್ಟಿದ ನದಿಯೊಂದು ತನ್ನ ತಾಯಿನಾಡನ್ನು ತೊರೆದು ಹರೆವಂತೆ ಕನ್ನಡದ ಅಸ್ಮಿತೆಯನ್ನು ಎಲ್ಲೆಡೆ ಹರಡಿದವರಲ್ಲಿ ಒಬ್ಬರಾದರು!!!  ಜಯದೇವಿ ತಾಯಿಯವರ ಹೃದಯವೂ ಕನ್ನಡದ ನೆಲ, ಕನ್ನಡದ ಜನ ಮತ್ತು ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಬಿಟ್ಟು ದೂರವಾಗಲಿಲ್ಲ.ಬೆಟ್ಟಗಳಂತೆ ಅಚಲವಾದ ಅವರ ಕನ್ನಡ ಪ್ರೇಮ, ಸಾಗರದಷ್ಟು ವಿಶಾಲವಾಗಿತ್ತು. ಮಳೆಯ ಹನಿಗಳು ಭೂಮಿಗೆ ಜೀವ ತುಂಬುವಂತೆ, ಅವರ ಕನ್ನಡದ ಪ್ರೀತಿ ಸಾವಿರಾರು ಜನರ ಮನಗಳಲ್ಲಿ ಭಾಷೆಯ ಮೇಲಿನ ಗೌರವವನ್ನು ಅರಳಿಸಿತು.ವಸಂತ ಬಂದಾಗ ಮರಗಳು ಹೊಸ ಚಿಗುರು ಬಿಡುವಂತೆ, ತಾಯಿಯವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಹೊಸ ಚೈತನ್ಯ ಮೊಳೆಯುತ್ತಿತ್ತು. ಪರಿಮಳವನ್ನು ಎಲ್ಲೆಡೆ ಹರಡುವ ಹೂವಿನಂತೆ, ಅವರ ಕನ್ನಡದ ಅಭಿಮಾನ ಎಲ್ಲೆಡೆ ಪಸರಿಸಿತು. ಅವರು ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ನೋಡದೆ, ಬದುಕಿನ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಯ ಭಾಷೆಯಾಗಿ ಕಂಡರು. ಜಯದೇವಿ ತಾಯಿಯವರಿಗೆ ಕನ್ನಡವೇ ಉಸಿರು, ಅವರ ಆತ್ಮ, ಅವರ ಬದುಕಿನ ಧ್ಯೇಯವಾಗಿತ್ತು….  ಕನ್ನಡವನ್ನೇ ಬದುಕಿದರು…!!!ಅವರ ಪ್ರತಿಯೊಂದು ಮಾತಿನಲ್ಲಿ ಕನ್ನಡದ ಲಾಲಿತ್ಯ,ಪ್ರತಿಯೊಂದು ಬರಹದಲ್ಲಿ ಕನ್ನಡದ ಸೌಂದರ್ಯ, ಪ್ರತಿಯೊಂದು ಕಾರ್ಯದಲ್ಲಿ ಕನ್ನಡದ ಪರಿಮಳ ತುಂಬಿಕೊಂಡಿತ್ತು. ಅವರ ದೃಷ್ಟಿಯಲ್ಲಿ ಕನ್ನಡ ಎಂದರೆ ಕರುಣೆ, ಸಂಸ್ಕಾರ, ಶರಣ ತತ್ವಗಳ ಪ್ರತಿಪಾದನೆ, ಜ್ಞಾನ ಮತ್ತು ಆತ್ಮಗೌರವದ ಪ್ರತೀಕ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಓದಬೇಕು, ಕನ್ನಡದಲ್ಲೇ ಯೋಚಿಸಬೇಕು ಎಂಬ ಆಶಯವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು. ಅವರಿಗೆ ಕನ್ನಡ ತಾಯಿ ಎಂದರೆ ದೇವತೆ. ತಾಯಿಯ ಮಡಿಲು ಮಗುವಿಗೆ ಹೇಗೆ ಸುರಕ್ಷಿತ ಆಶ್ರಯವೋ, ಹಾಗೆಯೇ ಕನ್ನಡ ಭಾಷೆ ಕನ್ನಡಿಗರಿಗೆ ಆತ್ಮೀಯ ನೆಲೆ ಎಂದು ಅವರು ನಂಬಿದ್ದರು. ಆ ಕಾರಣಕ್ಕಾಗಿಯೇ ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ಕೂ ಅವರು ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದರು. ಕನ್ನಡದ ಮೇಲಿನ ಅವರ ಪ್ರೀತಿ ಆಕಾಶದಷ್ಟು ಅಪಾರ, ಭೂಮಿಯಷ್ಟು ಸಹನಶೀಲ, ನದಿಯಷ್ಟು ನಿರಂತರ, ವಟವೃಕ್ಷದಷ್ಟು ಆಶ್ರಯದಾಯಕವಾಗಿತ್ತು. ಕನ್ನಡದ ಗೌರವ ಕುಂದಿದಾಗ ಅವರ ಮನ ನೋಯುತ್ತಿತ್ತು, ಕನ್ನಡದ ಕೀರ್ತಿ ಹೆಚ್ಚಾದಾಗ ಅವರ ಮುಖ ಅರಳಿದ ಹೂವಿನಂತೆ ಸಂತೋಷದಿಂದ ಕಂಗೊಳಿಸುತ್ತಿತ್ತು.ಜಯದೇವಿ ತಾಯಿಯವರ ಕನ್ನಡಾಭಿಮಾನ ಇಂದು ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶ. ಭಾಷೆಯನ್ನು ಪ್ರೀತಿಸುವುದು ಎಂದರೆ  ಭಾಷೆಯ.. ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಕನ್ನಡಾಭಿಮಾನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾರಿ ತೋರಿಸಿದರು.  *ಶರಣ ಸಾಹಿತ್ಯವು ….ಕನ್ನಡಾಂಬೆಯ ದಿವ್ಯ ಬೆಳಕು*ಶರಣ ಸಾಹಿತ್ಯವು ಕನ್ನಡ ನಾಡಿನ ಆತ್ಮ, ಕನ್ನಡ ಭಾಷೆಯ ದಿವ್ಯ ಬೆಳಕು, ಕನ್ನಡಾಂಬೆಗೆ ಬೆಳಗುವ ಅಮರ ದೀಪವಾಗಿದೆ. ಇದು  ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿ. ಅಜ್ಞಾನ, ಅಂಧಶ್ರದ್ಧೆ, ಜಾತಿ-ಮತದ ಸಂಕೋಲೆಗಳನ್ನು ಕಳಚಿ ಸಮಾನತೆ, ಪ್ರೀತಿ, ಕರುಣೆ, ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿದ ಮಹಾನ್ ಚಳುವಳಿ ನಡೆದದ್ದು ವಚನ ಸಾಹಿತ್ಯದ ಮೂಲಕ ಕನ್ನಡದಲ್ಲಿ ಅಂತ ಹೇಳುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದರು. ಅರಮನೆಯ ಭಾಷೆಯಾಗಿದ್ದ ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ ರೂಪಿಸಿದರು. ಅವರ ವಚನಗಳು ಇಂದಿಗೂ ದಾರಿದೀಪಗಳಾಗಿ ಹೊಳೆಯುತ್ತಿವೆ. ಆದ್ದರಿಂದ ಶರಣ ಸಾಹಿತ್ಯವನ್ನು ಕನ್ನಡದ ದಿವ್ಯ ಬೆಳಕು ಎಂದು ಕರೆಯುವುದು ಅತ್ಯಂತ ಸಮಂಜಸ. *ಕತ್ತಲನ್ನು ಓಡಿಸುವ ಸೂರ್ಯನ ಕಿರಣಗಳಂತೆ, ಶರಣ ಸಾಹಿತ್ಯವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಹರಡುವದೆಂದು ಜಯದೇವಿ ತಾಯಿಯವರು ಅಭಿಮಾನದಿಂದ ನುಡಿಯವರು * ಮಳೆಯು ಭೂಮಿಯನ್ನು ಹಸನಾಗಿಸುವಂತೆ, ಈ ಸಾಹಿತ್ಯವು ಮನಸ್ಸುಗಳನ್ನು ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಹಸನಾಗಿಸಿದೆಂದು.  ಕನ್ನಡಿಗರ ಅಮೂಲ್ಯ ಸಂಪತ್ತಾಗಿ….ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗಿರುವ ಶ್ರೇಷ್ಠ ಪರಂಪರೆಯಾಗಿದೆ. ಶರಣ ಸಾಹಿತ್ಯದ ಬೆಳಕು ಎಂದಿಗೂ ಆರದು. ಅದು ಪ್ರತಿಯೊಂದು ಕನ್ನಡಿಗನ ಹೃದಯದಲ್ಲಿ ಸತ್ಯದ ಜ್ಯೋತಿಯಾಗಿ, ಸಮಾನತೆಯ ಸಂದೇಶವಾಗಿ, ಮಾನವೀಯತೆಯ ಮಹಾಪ್ರಕಾಶವಾಗಿ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ. ಕನ್ನಡ ಇರುವವರೆಗೆ, ಕನ್ನಡದ ದಿವ್ಯ ಬೆಳಕಾಗಿ ಶರಣ ಸಾಹಿತ್ಯವು ಅನಂತ ಕಾಲದವರೆಗೆ ಜನಮನಗಳನ್ನು ಪ್ರಕಾಶಮಾನಗೊಳಿಸುತ್ತಲೇ ಇರುತ್ತದೆ. ಎಂದು ರಾಜಾರೋಷವಾಗಿ ಎಲ್ಲ ಭಾಷಣಗಳಲ್ಲಿ ತಾಯಿಯವರು ಸಾರುತ್ತಿದ್ದರು. *ಕನ್ನಡದ ದಿವ್ಯ ಬೆಳಕಾದ ಶರಣ ಸಾಹಿತ್ಯವು ಕನ್ನಡವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿತು ಅಂತ ಜಯದೇವಿ ತಾಯಿಯವರು ನುಡಿಯುತ್ತಿದ್ದರು…!!! ಹನ್ನೆರಡನೇ ಶತಮಾನದಲ್ಲಿ ಶರಣರ ವಚನ ಕ್ರಾಂತಿಯು ಇಡೀ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಆದರೆ ಕಾಲಕ್ರಮೇಣ, ವಿಶೇಷವಾಗಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಹಲವು ಶತಮಾನಗಳ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಂದ ತೆಲುಗು, ಮರಾಠಿ ಹಾಗೂ ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಕನ್ನಡ ಭಾಷೆಯ ಬಳಕೆ, ಅದರ ಬಳಕೆ ಮತ್ತು ಶರಣ ಸಾಹಿತ್ಯದ ಅರಿವು ಅನೇಕ ಪ್ರದೇಶಗಳಲ್ಲಿ ಕ್ಷೀಣಿಸತೊಡಗಿತು. ಇಂತಹ ಸಂದರ್ಭದಲ್ಲಿ, ಕನ್ನಡದ ಆತ್ಮಸ್ವರೂಪವಾಗಿರುವ ಶರಣ ಸಾಹಿತ್ಯದ ಜ್ಯೋತಿಯನ್ನು ಮತ್ತೆ ಜನಮನಗಳಲ್ಲಿ ಪ್ರಜ್ವಲಿಸುವ ಮಹತ್ತರ ಸಂಕಲ್ಪವನ್ನು ಜಯದೇವಿ ತಾಯಿಯವರು ಕೈಗೊಂಡರು. ವಚನ ಸಾಹಿತ್ಯವನ್ನು ಮನೆಮನೆಗೆ, ಮನಸ್ಸುಮನಸ್ಸಿಗೆ ತಲುಪಿಸುವ ಮೂಲಕ ಕನ್ನಡದ ಆತ್ಮಗೌರವವನ್ನು ಮರುಜಾಗೃತಗೊಳಿಸಿದರು. ಅವರ ಪ್ರಯತ್ನವು ಸಾಹಿತ್ಯದ ಪ್ರಸಾರ ಮಾಡುತ…  ಕನ್ನಡದ ಮೆರುಗನ್ನು ಪುನರುಜ್ಜೀವನಗೊಳಿಸುವ ಶರಣರ ಮೌಲ್ಯಗಳ ಪುನರ್‌ಸ್ಥಾಪನೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಮಹಾಯಜ್ಞವಾಗಿತ್ತು. ಸತ್ಯಶರಣರ ಪಾದವ ನೆನೆದರೆ |ಚಿಂತೆ ಚಿತೆಯು ಶಮನಾಗುವದು ||ಶಾಂತ ಚಿತ್ತ ನಿಜ ಹಂತವನೇರುತ |ತಸಂತಸದಿ ನಲಿದಾಡುವದು||ಎನ್ನುತ…..ಶರಣರ ವಚನಗಳನ್ನು ಜನಜೀವನದೊಂದಿಗೆ ಬೆಸೆದು, ಕನ್ನಡದ ದಿವ್ಯ ಬೆಳಕನ್ನು ಮತ್ತೆ ಪ್ರಜ್ವಲಿಸಿದ ಸಾಂಸ್ಕೃತಿಕ ಸಾಧಕಿಯಾಗಿ ಜಯದೇವಿ ತಾಯಿಯವರು ಚಿರಸ್ಮರಣೀಯರಾಗಿದ್ದಾರೆ. ಅವರ ಸೇವೆಯಿಂದ ಶರಣ ಸಾಹಿತ್ಯವು ಮತ್ತೊಮ್ಮೆ ಜನಮನಗಳಲ್ಲಿ ಜ್ಞಾನಜ್ಯೋತಿಯಾಗಿ ಹೊಳೆಯಿತು…. ಕನ್ನಡದ ಹೊಳಪು ಹೊಸ ಉತ್ಸಾಹದಿಂದ ನಾಡಿನಾದ್ಯಂತ ಹರಡಿತು. ಜಯದೇವಿ ತಾಯಿಯವರಲ್ಲಿ ಶರಣ ಸಾಹಿತ್ಯದ ಮೇಲಿನ ಅಭಿರುಚಿ ಬಾಲ್ಯದಲ್ಲಿಯೇ ಮೊಳಕೆಯೊಡೆದಿತ್ತು. ವಚನಗಳಲ್ಲಿದ್ದ  ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಸರಳವಾದ ಜೀವನದರ್ಶನವು ಅವರ ಮನಸ್ಸನ್ನು ಆಳವಾಗಿ ಸೆಳೆದಿತ್ತು.ವಚನಗಳನ್ನು ಓದಿ ಅರ್ಥೈಸಬೇಕೆಂಬ ಅಪಾರ ಜಿಜ್ಞಾಸೆಯೇ ಅವರಿಗೆ ಕನ್ನಡ ಕಲಿಯುವ ಪ್ರೇರಣೆಯಾಯಿತು.ಅಕ್ಷರಜ್ಞಾನವನ್ನು ಗಳಿಸುವುದಕ್ಕಾಗಿಯೇ,  ಶರಣರ  ವಚನಗಳ  ಅಮೃತ ಸತ್ವವನ್ನು ಆಸ್ವಾದಿಸುವ ಮಹದಾಸೆಯಿಂದ ಅವರು ಕನ್ನಡವನ್ನು ಅಭ್ಯಾಸ ಮಾಡಿದರು. ಕನ್ನಡ ಭಾಷೆಯನ್ನು  ಸಂವಹನದ ಮಾಧ್ಯಮವಾಗಿ..ಶರಣರ ಚಿಂತನೆಗಳ ಅಪೂರ್ವ ಲೋಕಕ್ಕೆ ಕರೆದೊಯ್ಯುವ ಪವಿತ್ರ ಸೇತುವೆಯೆಂದು ಭಾವಿಸಿದರು.ವಚನಗಳ ಮೇಲಿನ  ಅಪಾರ ಪ್ರೀತಿ, ಅಧ್ಯಯನಶೀಲತೆ ಮತ್ತು ಕನ್ನಡಾಭಿಮಾನವೇ ಮುಂದೆ ಅವರನ್ನು ಶರಣ ಸಾಹಿತ್ಯದ ಪ್ರಚಾರಕಿ, ಕನ್ನಡ ಸಂಸ್ಕೃತಿಯ ಮುಂಚೂಣಿ ಸೇವಕಿ ಹಾಗೂ ವಚನ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಮಹಾನ್ ಸಾಧಕಿಯನ್ನಾಗಿ ರೂಪಿಸಿತು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮೌನ ಯೋಗಿ ಶ್ರೀ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ.  ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ. ವ್ಯಕ್ತಿತ್ವ ಮತ್ತು ಜೀವನ  ಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು. ಮೌನಯೋಗಿ: ಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ. ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣ:  ಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ. ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವ: ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶರಣರ ಬುತ್ತಿ:  ಈ ಜಾತ್ರೆಯ ಒಂದು ವಿಶಿಷ್ಟ ಸಂಪ್ರದಾಯವೆಂದರೆ, ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಭಕ್ತರಿಗಾಗಿ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ ಮತ್ತು ಕರ್ಜಿಕಾಯಿಗಳನ್ನು ತಯಾರಿಸಿ, ಬುತ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ತರುತ್ತಾರೆ. ಸಾಮಾಜಿಕ ಸೇವೆಗಳು: ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು, ನೇತ್ರ ಚಿಕಿತ್ಸಾ ಶಿಬಿರಗಳು, ರಕ್ತದಾನ ಮತ್ತು ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಮಠವು ಜನಪರ ಕಾರ್ಯಗಳನ್ನು ಮಾಡುತ್ತದೆ. ಶ್ರೀಮಠದ ಸಮಾಜ ಸೇವೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಿಕ್ಷಣ ಸಂಸ್ಥೆಗಳು, ಉಚಿತ ಪ್ರಸಾದ ನಿಲಯ (ದಾಸೋಹ) ಮತ್ತು ಸಾವಯವ ಕೃಷಿ ಹಾಗೂ ಗೋಶಾಲೆಯನ್ನು ನಡೆಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ   ನೀಡುತ್ತಿದೆ.    ಚಿಕ್ಕೇನಕೊಪ್ಪದ ಮೌನಯೋಗಿ, ಪೂಜ್ಯ ಶ್ರೀ ಚನ್ನವೀರ ಶರಣರ ವೈಯಕ್ತಿಕ ಲೌಕಿಕ ಜೀವನ ಮತ್ತು ಅವರ ತಂದೆ-ತಾಯಿಗಳ ನಿಖರವಾದ ಹೆಸರುಗಳ ಕುರಿತು ಇತಿಹಾಸದ ದಾಖಲೆಗಳಲ್ಲಾಗಲಿ ಅಥವಾ ಸಾರ್ವಜನಿಕ  ಮೂಲಗಳಲ್ಲಾಗಲಿ ಯಾವುದೇ ಸ್ಪಷ್ಟ ಮಾಹಿತಿಯು ಲಭ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅವರ ಹಿನ್ನೆಲೆಯ ಕುರಿತಾದ ಕೆಲವು ಮುಖ್ಯ ಸಂಗತಿಗಳು  ಅವಧೂತ ಹಾಗೂ ಮೌನ ಪರಂಪರೆ:  ಶ್ರೀ ಚನ್ನವೀರ ಶರಣರು ಒಬ್ಬ ಪರಮ ಅವಧೂತರಾಗಿ ಮತ್ತು ಮೌನಯೋಗಿಯಾಗಿ ಜೀವಿಸಿದರು. ಅವರು ತಮ್ಮ ಪೂರ್ವಾಶ್ರಮದ (ಸಂಸಾರದ ಅಥವಾ ಹುಟ್ಟಿನ) ವಿವರಗಳನ್ನು ಸಂಪೂರ್ಣವಾಗಿ ತೊರೆದು, ಕೇವಲ ಲೌಕಿಕ ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬೆಳಕಿಗೆ ಬಾರದ ಹಿನ್ನೆಲೆ:  ಇತಿಹಾಸದ ಪ್ರಕಾರ, ಅವರು ಬಳಗಾನೂರಿನ ಚಿಕ್ಕೇನಕೊಪ್ಪ ಮಠಕ್ಕೆ ಬಂದು ನೆಲೆಸಿದ ನಂತರವೇ ಅವರ ದಿವ್ಯ ತಪಃಶಕ್ತಿ ಮತ್ತು ಪವಾಡಗಳು ಜನಸಾಮಾನ್ಯರಿಗೆ ತಿಳಿಯತೊಡಗಿದವು. ಹೀಗಾಗಿ ಅವರ ತಂದೆ, ತಾಯಿ ಅಥವಾ ಬಾಲ್ಯದ ಲೌಕಿಕ ವಿವರಗಳು ಮರೆಯಾಗಿ, ಅವರು ಕೇವಲ “ಚಿಕ್ಕೇನಕೊಪ್ಪದ ಶರಣರು” ಎಂದೇ ಪ್ರಸಿದ್ಧರಾದರು. ಸಾಹಿತ್ಯದಲ್ಲಿ ಉಲ್ಲೇಖ:  ಪಂ. ಪುಟ್ಟರಾಜ ಗವಾಯಿಗಳು ಬರೆದಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಗ್ರಂಥದಲ್ಲಿಯೂ ಇವರ ಅಧ್ಯಾತ್ಮಿಕ ಸಾಧನೆ, ಪವಾಡಗಳು ಮತ್ತು ಸಮಾಜ  ಮುಖಿ ಸೇವೆ ಬಗ್ಗೆ ಹೇಳಿದ್ದಾರೆಯೇ ಹೊರತು ಅವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಚಿಕ್ಕೇನಕೊಪ್ಪದ ಮಹಾನ್ ತಪಸ್ವಿ ಶ್ರೀ ಚನ್ನವೀರ ಶರಣರ ನಿಖರವಾದ ಹುಟ್ಟಿದ ದಿನಾಂಕ ಮತ್ತು ವರ್ಷ ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಲಭ್ಯವಿಲ್ಲ. ಅವರು ಒಬ್ಬ ಸಿದ್ಧ ಪುರುಷರಾಗಿದ್ದು, ಸಂಸಾರ ಹಾಗೂ ಕಾಲದ ಗಡಿಯಿಂದ ದೂರವಿದ್ದ ಕಾರಣ ಅವರ ಬಾಲ್ಯ ಮತ್ತು ಜನನದ ವಿವರಗಳು ಬೆಳಕಿಗೆ ಬಂದಿಲ್ಲ.  ಅವರ ಮಹಾಸಮಾಧಿ (ಮರಣ) ಹಾಗೂ ಪುಣ್ಯಸ್ಮರಣೆಯ   1. ಮರಣ / ಲಿಂಗೈಕ್ಯರಾದ ವಿವರ ಲಿಂಗೈಕ್ಯರಾದ ತಿಂಗಳು: ಶ್ರೀ ಚನ್ನವೀರ ಶರಣರು  1995 ಜನೆವರಿ ತಿಂಗಳ ಅವಧಿಯಲ್ಲಿ ಲಿಂಗೈಕ್ಯರಾದರು (ಮಹಾಸಮಾಧಿ ಹೊಂದಿದರು).:    ಘನಮೌನಿಗಳು:  ಶರಣರನ್ನು ಇತಿಹಾಸದಲ್ಲಿ “ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರು” ಎಂದು ಕರೆಯಲಾಗುತ್ತದೆ. ಅವರು ಮೌನವ್ರತವನ್ನು ಆಚರಿಸುತ್ತಿದ್ದರಿಂದ ತಮ್ಮ ಜನ್ಮ ವೃತ್ತಾಂತವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ದೈವೀಪುರುಷ: ಭಕ್ತರ ನಂಬಿಕೆಯ ಪ್ರಕಾರ, ಅವರು ಯಾವುದೇ ಸಾಮಾನ್ಯ ಮನುಷ್ಯನಂತೆ ಹುಟ್ಟು-ಸಾವಿನ ಬಂಧನಕ್ಕೆ ಒಳಗಾಗದೆ, ಕೇವಲ ಲೋಕ ಕಲ್ಯಾಣಕ್ಕಾಗಿ ಬಂದು ಮಠದಲ್ಲಿ ನೆಲೆಸಿದ ದೈವೀ ಸ್ವರೂಪಿಯಾಗಿದ್ದರು.ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ನಡೆಯುವ ಅವರ ಪುಣ್ಯಸ್ಮರಣೆಯ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶರಣರ ಗದ್ದುಗೆಯ ದರ್ಶನ ಪಡೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಮಾಡಿದರು. ಮೌನವೇ ತಪಸ್ಸು ಮಾತು ಬೆಳ್ಳಿ ಮೌನ ಬಂಗಾರ ಎಂದು ತಿಳಿದು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಒಬ್ಬ ಶ್ರೇಷ್ಠ ಶಿವಯೋಗ ಸಾಧಕರು. ಸಾವಿಲ್ಲದ ಶರಣರು. ಬಸವ ಮಾರ್ಗದ ರೂವಾರಿಗಳು ಚಿಕ್ಕೇನಕೊಪ್ಪದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಶೆ ಮುಕ್ತರಾಗಲಿ ಯುವಜನತೆ ಈ ವಾರ ಮಾದಕ ವ್ಯಸನ ನಿವಾರಣಾ ಸಪ್ತಾಹ ಆಚರಿಸಲಾಯಿತು. ಕುಡಿತ ಮತ್ತು ಮಾದಕ ಪದಾರ್ಥಗಳ ವ್ಯಸನ ಯುವ ಪಿಳಿಗೆಗೆ ಒಂದು ಶಾಪ.ಯಾವಾಗ ವ್ಯಸನಕ್ಕ ಬಲಿ ಆಗ್ತಾರ ಅಂತ ಗೊತ್ತಾಗಲ್ಲ.ಗೊತ್ತಾಗುವಷ್ಟರಲ್ಲಿ ವ್ಯಸನಿಗಳಾಗಿ ಅದರಿಂದ ಹೊರ ಬರಲಾರದವರಾಗಿರತಾರ.ಇತ್ತೀಚಿಗೆ ಲಡಾಖ್ ಪ್ರವಾಸ ಹೋಗಿದ್ಧ.ಇಷ್ಟು ದಿನ ಅಲ್ಲಿ ಮದ್ಯಪಾನಕ್ಕ ಅವಕಾಶ ಇರಲಿಲ್ಲ.ಈಗ ಸರ್ಕಾರ ಅವಕಾಶ ಮಾಡಕೊಟ್ಟದ.ಅದರ ಅಗತ್ಯ ಇರಲಿಲ್ಲ ನಿಜ.ಆದ್ರ ಸರ್ಕಾರ ಕ್ಕ ಮದ್ಯ ಮಾರಾಟ ಒಂದು ದೊಡ್ಡ ಆದಾಯ.ಬ್ಯಾರೆ ಬಿಸಿನೆಸ್ ನಿಂದ ಬರುವ ಟ್ಯಾಕ್ಸ್ ಗಿಂತ ಮದ್ಯ ಮಾರಾಟದಿಂದ ಬರುವ ಟ್ಯಾಕ್ಸ್ ಸರ್ಕಾರ ಕ್ಕ ಉಪಯೋಗ. ಆದ್ರ ಇದರಿಂದ ಆಗುವ ಉಪಯೋಗ ಅನುಪಯೋಗ ಜನ ಸಾಮಾನ್ಯರು ಚರ್ಚಿಸಬೇಕು.ಅಲ್ಲಿ ಇರುವದು ದಯಡಿಯುವ ವರ್ಗ.ಗಳಿಸಿದ ದುಡ್ಡಲ್ಲಿ ಸಂಸಾರ ನೋಡಕೊಂಡು ಆರಾಮ ಇದ್ರು.ಈಗ ಮದ್ಯ ಅವರಿಗೆ ಅಧಪತನಕ್ಕ ಕರೆದೊಯ್ಯತದ. ಸುಲಭವಾಗಿ ಸಿಗುವದರಿಂದ ದುಡಿದ ತಮ್ಮ ದಣಿವು ಪರಿಹಾರ ಮಾಡಕೊಳ್ಳಾಕ ಮದ್ಯದ ಮೊರೆ ಹೋಗತಾರ.ಕ್ರಮೇಣ ವ್ಯಸನಿಗಳಾಗತಾರ.ಆದ್ರ ಅಲ್ಲಿನ ಸರ್ಕಾರ ದವರ ಹೆಳಿಕೆ ಬ್ಯಾರೆ.ಯುವ ಜನ ಬ್ಯಾರೆ ಬ್ಯಾರೆ ನಶೆ ಪದಾರ್ಥ ಉಪಯೋಗಿಸಿ ಹಾಳಾಗುವದನ್ನು ತಡೆಯಲು ಮದ್ಯ ಮಾರಾಟದ ಪರವಾನಿಗೆ ಕೊಡಲಾಗಿದೆ ಎಂದು ಹೇಳತಾರಂತೆ.ಒಂದು ವ್ಯಸನಕ್ಕೆ ಮತ್ತೊಂದು ವ್ಯಸನ ಪರ್ಯಾಯ ಆಗಲ್ಲ.ಮದ್ಯ ಮಾರಾಟ ಮುಕ್ತ ರಾಜ್ಯಗಳು ಇವೆ.ಸಿಗಲಾರದು ಎಂದು ಜನ ಅದರ ಗೋಜಿಗೆ ಹೋಗದಿರಬಹುದು.ಉಳ್ಳವರು ಬೇರೆ ವ್ಯವಸ್ಥೆ ಮೂಲಕ ತರಿಸಿಕೊಂಡು ಕುಡಿಬಹುದು. ಆದ್ರೆ ಮುಕ್ತವಾಗಿ ಸಿಗುವದರಿಂದ ಆಗುವ ಅಧಪತನ , ಸಿಗದಿದ್ದಾಗ ಆಗದು.ಅದಕ್ಕೆ ಮದ್ಯ ಮಾರಾಟದ ನಿಷೇಧ ಒಳ್ಳೆದು. ಒಮ್ಮೆ ಓದಿದ ನೆನಪು.ಝೆನ್ ಝಿ ಗಳು ಕುಡಿಯುವದಕ್ಕ ಅಷ್ಟು ಒಲವು ತೊರಿಸುತ್ತಿಲ್ಲ ಎಂದು. ಆದ್ರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮುಕ್ತ ವಾಗಿ ಮದ್ಯ ಮತ್ತು ಗಾಂಜಾ ಇತರ ಮಾದಕ ಪದಾರ್ಥಗಳ ಸೇವನೆ ಮಾಡತಾರೆ.ಇಂಜಿನಿಯರಿಂಗ್ , ವೈದ್ಯಕೀಯ ವಿದ್ಯಾರ್ಥಿಗಳೆ ಇದಕ್ಕೆ ಹೆಚ್ಚು ಬಲಿ ಆಗತಿದ್ದಾರೆ.ಯೌವನದ ಅಮಲಿನಲ್ಲಿ ಏನು ಮಾಡಿದ್ರು ನಡಿತದ ಎಂಬ ದೋರಣೆ. ಗೆಳೆಯರೊಂದಿಗೆ ಸೇರಿ ಒಂದು ಹೊಸ ಅನುಭವ ಎಂದು ಶುರು ಮಾಡುವದು ಯಾವಾಗ ತಮಗ ವ್ಯಸನ ಆಗತದ ಎಂದು ಅರಿವಾಗುವಷ್ಟರಲ್ಲಿ ಅದರಿಂದ ಹೊರ ಬರಲಾರದವರಂಗ ಆಗಿರತಾರ.ಹಾಗಂತ ಎಲ್ಲ ವಿದ್ಯಾರ್ಥಿಗಳು ವ್ಯಸನಿಗಳೆ ಅಂತ ಹೆಳಕ್ಕಾಗಲ್ಲ.ತಮ್ಮ ಬುದ್ಚಿಯ ಸೀಮೀತದಲ್ಲಿ ಇರುವವರು ಮಾದಕ ವಸ್ತು ಗಳನ್ನು ಒಂದು ಪ್ರಯೋಗವಾಗಿ ಉಪಯೋಗಿಸಿಕೊಂಡು ಬಿಡತಾರ.ಅದನ್ನೆ ದಿನಚರಿ ಮಾಡಿಕೊಂಡವರ ವ್ಯಸನ ಬಿಡಿಸೋದು ಕಷ್ಟ. ಕಾಲೇಜ್ ಯುನಿವರ್ಸಿಟಿ ಗಳಲ್ಲಿ ಮಾದಕ ವಸ್ತುಗಳನ್ನು ಎಲ್ಲಿಂದ ತರತಾರ..! ಇವುಗಳನ್ನು ನಿಯಂತ್ರಣ ಮಾಡಲು ಅಲ್ಲಿನ ಸಿಬ್ಬಂದಿ ಪ್ರಯತ್ನ ಮಾಡಬಹುದು . ಆದ್ರ ವಿದ್ಯಾರ್ಥಿಗಳು ಕದ್ದು ಮುಚ್ಚಿ ಮಾಡುವ ವ್ಯಸನಕ್ಕ ಅವರು ಕುರುಡಾಗಿರತಾರ ಅಂತ ಕಾಣತದ.ನನ್ನ ಮಗ ಕಲಿಯುವ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಾಂಜಾ ಮತ್ತಿತರ ನಶೆ ಪದಾರ್ಥಗಳನ್ನು ಉಪಯೋಗಿಸುವದನ್ನು ಹೇಳತಿರತಾನೆ.ಅದು ಕೆಟ್ಟದ್ದು ಎಂದು ಅವರಿಗೂ ಗೊತ್ತು.ಆದ್ರೂ ಯೌವನದ ಹುರುಪು.ಈಗಲ್ಲದಿದ್ರೆ ಮಜಾ ಮತ್ಯಾವಾಗ ಮಾಡೋದು , ಒಂದು ಸಲ ಮಾಡಿ ನೋಡೋಣ , ಹೀಗೆ ಒಂದು ಪ್ರಯೋಗವಾಗಿ ಶುರುಮಾಡತಾರೆ. ಮಾದಕ ಪದಾರ್ಥಗಳ ಬಗ್ಗೆ ನಮಗೆ ಗೊತ್ತಿರುವದಕ್ಕಿಂತ ಹೆಚ್ಚು ನಮ್ಮ ಮಕ್ಕಳಿಗೆ ಗೊತ್ತಿರತದ. ಅದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆಯೂ ತಿಳಿದಿರತದ.ನಾವು ಅವರಿಗೆ ಎಚ್ಚರಿಕೆ ಕೊಡಬಹುದು.ಆದ್ರ ನಿಯಂತ್ರಿಸಲಿಕ್ಕ ಆಗಲ್ಲ.ಅದರ ಪರಿಣಾಮ ದುಷ್ಪರಿಣಾಮ ಸ್ವತಃ ಅವರು ತಿಳಕೊಂಡು ತಮ್ಮನ್ನು ತಾವು ನಿಯಂತ್ರಣ ಮಾಡಕೊಳ್ಳಬೇಕು. ನಶೆ ಪದಾರ್ಥಗಳ ಬಳಕೆ ಮಾಡುವುದು ಬೇಡ ಅಂತ ಎಲ್ಲಾ ಹೆತ್ತವರಂತೆ ನಾನು ನನ್ನ ಮಕ್ಕಳಿಗೆ ಹೇಳತೇನೆ.ಆದ್ರ ಬೇಡವೇ ಬೇಡ ಅಂತ ಹೆಳಲಾರೆ.ಗೆಳೆಯರ ಸಂಗಡ ಅವರು ಬೆರೆತು ಅವರಿಷ್ಟ ಇದ್ರೆ ಉಪಯೋಗಿಸಲಿ , ಎಚ್ಚರಿಕೆ ಮಾತ್ರ ಸದಾ ಇರಲಿ ಎಂಬುದು ಸೂಚಿಸತೆನ ಯುವ ಜನ ಮದ್ಯಕ್ಕಿಂತ ಇತರ ನಶೆ ಪದಾರ್ಥ ಗಳಿಗೆ ಬಲಿ ಆಗತಿರೋದು ಶೋಚನೀಯ.ಇಂತಹ ನಶೆಗಳು ದೇಶವಿದೇಶಗಳ ನೆಲದಲ್ಲಿ ಸಾಂಕ್ರಾಮಿಕ ವಾಗಿ ವ್ಯಾಪಿಸತಿವೆ. ಇವುಗಳನ್ನು ತೆಡಯಲು ಪೋಲಿಸ್ ಪಡೆಗಳು ಶ್ರಮಿಸಬೇಕು.ಕಾಲೇಜ್ ಗಳಲ್ಲಿ ವಿದ್ಯಾರ್ಥಿ ಗಳ ಕೈಗೆ ಸಿಗದಂಗ ನಿಯಂತ್ರಿಸಬೇಕು. ಆದ್ರ ಈಗಿನ ಸಿನಿಮಾಗಳಲ್ಲಿ ಹೀರೋ ಸಿಗರೇಟ್ ಮತ್ತು ಡ್ರಗ್‌ ವ್ಯಸನಿ ಆಗಿರತಾನ.ಅವನನ್ನು ಹೀರೋ ಅನ್ನತೀವಿ.ಇಂತಹ ಹೀರೋಗಳು ಸಮಾಜಕ್ಕ ಏನು ಸಂದೇಶ ಕೊಡತಾರ..ಈಗಿನ ಎಲ್ಲಾ ಸಿನಿಮಾಗಳಲ್ಲೂ ಹೀರೋ ನ್ ಕೈಯಲ್ಲಿ ಉರಿಯುವ ಸಿಗರೇಟ್ ಇರತದ. ಮುಂದಿನ ಎರಡ್ಮೂರು ವರ್ಷಗಳಲ್ಲಿ ನಮ್ಮ ರಾಜ್ಯ ವ್ಯಸನ ಮುಕ್ತವಾಗಿ ಮಾಡಲಾಗತದ ಅಂತ ಸರ್ಕಾರ ಹೆಳ್ಯಾದ.ಒಳ್ಳೆದು.ನಶೆ ಪದಾರ್ಥಗಳು ವಿದ್ಯಾರ್ಥಿ ಗಳ ಕೈಗೆ ಸಿಗದಂಗ ಮೊದಲು ನಿಯಂತ್ರಿಸಬೇಕು.ನಶೆ ಪದಾರ್ಥಗಳು ನಮ್ಮ ರಾಜ್ಯದಲ್ಲಿ ತಯ್ಯಾರಾಗದಂತೆ , ಹೊರಗಿನಿಂದ ಬರದಂತೆ ನಿಯಂತ್ರಣ ಮಾಡೊದು ಮುಖ್ಯ. ಮದ್ಯ ಮತ್ತು ಇತರ ಮಾದಕ ಪದಾರ್ಥ ಗಳಲ್ಲಿ ಬಹಳ ವ್ಯತ್ಯಾಸ ಇರತದಂತ.ಮದ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ದುಷ್ಪರಿಣಾಮ ಆಗತದಂತ ಈ ಮಾದಕ ವಸ್ತುಗಳನ್ನು ಉಪಯೋಗಿಸುವ ದರಿಂದ.ಗೊತ್ತಿರಲಾರದವ್ರು ಯಾರೂ ಇಲ್ಲ ಈಗ.ಗೊತ್ತಿದ್ರೂ ಒಂದು ಸಲ ನೋಡೊಣ ಎಂಬ ಪ್ರಯೋಗ ಯುವಜನತೆಯ ಆಸೆ.ಇದೇ ಕ್ರಮೇಣ ವ್ಯಸನ ಆಗೊದು ದುರಂತ. ವಿದ್ಯಾರ್ಥಿಗಳು ಜಸ್ಟ್ ಫನ್ ಎಂದು ಶುರುಮಾಡುವ ನಶೆಗಳು ಅವರ ಜೀವಕ್ಕೆ ಮಾರಕ ಆಗತಾವೆ ಅಂತ ಅರ್ಥಾಗಲ್ಲ.ಆದರೂ ಒಂದು ಸಮಾಧಾನ.ಈಗೀನ ವಿದ್ಯಾರ್ಥಿಗಳು ತಮ್ಮ ಜೀವನದ ಒಳ್ಳೆದು ಕೆಟ್ಟದ್ದು ತಾವೇ ನಿರ್ಧರ ಮಾಡ್ತಾರ.ಅವರಲ್ಲಿ ವಿವೇಚನೆ ಅದ.ದೊಡ್ಡ ನಗರಗಳಲ್ಲಿ ಪಬ್ ಗಳಲ್ಲಿ ಕಾಣುವ ಯುವಕ ಯುವತಿಯರೆಲ್ಲ ಹೆಚ್ಚಾಗಿ ಸ್ವಾವಲಂಬಿ ಗಳು. ವ್ಯಸನದ ಪರಿಣಾಮ ಬಲ್ಲವರು, ತಮ್ಮ ಮಿತಿಯಲ್ಲಿ ಜೀವನವನ್ನು ಎಂಜಾಯ್ ಮಾಡುವದಕ್ಕೆ ಆಕ್ಷೇಪ ಮಾಡಲಾಗದು.ಆದ್ರೆ ದುಡಿಯುವ ವರ್ಗದ ವ್ಯಸನಿಗಳ ಜೀವನ ಶೋಚನೀಯ.ಮಾದಕವಸ್ತು ನಿಯಂತ್ರಣ ಮಾಡುವದೆ ಇದಕ್ಕೆಲ್ಲ ಪರಿಹಾರ. ಜ್ಯೋತಿ ಡಿ ಬೊಮ್ಮಾ

Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ಈ ಪ್ರಪಂಚದಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯ.ಹಾಗೆಂದು ಕೆಟ್ಟದ್ದನ್ನು ಮಾಡುವುದು ಸರಿಯಲ್ಲ.ನಾವುಗಳು, ನಾವಾಗಿ ಜೀವಿಸಲು ಕೆಲವು ಸುಲಭ ಸುಲಲಿತ ಮಾರ್ಗಗಳಿವೆ.ಒಳ್ಳೆಯ ಮಾರ್ಗವನ್ನಾರಿಸಿಕೊಂಡು ನಮ್ಮ ದುಡಿತದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಇವತ್ತಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿರಲಿ,ಕಂಪನಿ ಕೆಲಸಗಾರರಿರಲಿ,ಅಥವಾ ಕಾರ್ಮಿಕ ಕೆಲಸಗಾರರಿರಲಿ,ರೈತರೇ ಇರಲಿ.ರಾಜಕಾರಣಿಯಿರಲಿ,ಅಥವಾ ಇನ್ನಾರಾದರೂ ಇರಲಿ,ಬಾಳಿನ ದೋಣಿ ಸಾಗಿಸಲು ಒಂದು ದುಡಿಮೆಯಂತೂ ಬೇಕು.ತುಸು ತಡವಾದರೂ ಸರಿಯಾದ ರೀತಿಯಲ್ಲಿ ಪರಿಶ್ರಮಪಟ್ಟು ದುಡಿಮೆಯಲ್ಲಿ ತೃಪ್ತಿ ಕಾಣಬೇಕಾಗುತ್ತದೆ.‌ ಮಾಡುವ ಕೆಲಸದಲ್ಲಿ ಸುಖ,ಆನಂದವನ್ನು ಅನುಭವಿಸಿ, ಸನ್ಮಾರ್ಗದೊಂದಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿ  ನಿರಂತರವಾಗಿರಬೇಕು.ಒಮ್ಮೆಲೆ ದುಡಿದು ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ.ದುಡಿತದಲ್ಲಿ  ನಾವೆಷ್ಟು  ಆತುರಾತುರ ಮಾಡಿದರೂ ಕೋಳಿ ಕೂಗುವುದಿಲ್ಲ.ಬೆಳಕರಿಯುವುದಿಲ್ಲ.ಮಾಗಬೇಕು,ಕಾಯಬೇಕು,ಸಹನೆಯಂತೂ ತುಂಬಾನೆ ಬೇಕು.ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರ ಅಧೀನದಲ್ಲಿ ದುಡಿಯುತ್ತೇವೆಂದರೆ ಯಾವಾಗಲೂ ಯಾರಾದರೂ,ಯಾವುದೇ ಕೆಲಸದಲ್ಲಿ  ಯಜಮಾನರು,ಕೆಲಸ ನೀಡಿದ ಸಂಸ್ಥೆಯವರು,ಹಿರಿಯ ಅಧಿಕಾರಿಗಳು ಬೈಯುತ್ತಾರೆ ಎಂದರೆ ಅವರಿಗೂ ಒತ್ತಡವಿರಬಹುದು?  ಅವರು ಬೈದಾಡುತ್ತಾರೆ ಎಂದರೆ ನಾವೂ ಸಹ ಎದುರು ವಾದಿಸ ಬಾರದು.ಆ ಕೆಲಸದ ಬಗ್ಗೆ ಚರ್ಚೆ ಮಾಡಬೇಕಷ್ಟೆ.ಅದನ್ನು ಬಿಟ್ಟು ಏರು ದನಿಯಲ್ಲಿ ಎದುರುತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಬಾರದು. ಅನಾಹುತ,ಅನರ್ಥಗಳಾಗುತ್ತವೆ.ನಮ್ಮ ಸ್ವಾರ್ಥವೆ ಗೆಲ್ಲಬೇಕು ಎನ್ನುವುದು ನಮ್ಮದೇ  ತಪ್ಪು.ಏಕೆಂದರೆ ನಮಗೆ ವಹಿಸಿದ ಕೆಲಸವೇ ಬಹು ಮುಖ್ಯ.ಪ್ರತಿಯೊಬ್ಬರಿಗೂ ಅವರದೆಯಾದ ವಿಚಾರ ಸರಣಿ,ಸಹಾನುಭೂತಿ,ಸಹಾಯ ಸಹಕಾರ ಇದ್ದೇ  ಇರುತ್ತದೆ.ಅದಕ್ಕಾಗಿ ನಮ್ಮ ನಮ್ಮ ಕೆಲಸ ಮಾಡಲು,ಮತ್ತೊಬ್ಬರಿಂದ ಹೇಳಿಸಿಕೊಳ್ಳಬಾರದು.ಅವರು ಹೇಳುವತನಕ ಕೆಲಸ ಮಾಡದೆ ಇರೋದು ನಮ್ಮದೇ ಖಂಡಿತ ತಪ್ಪಾಗುತ್ತದೆ.ನಮ್ಮ ಕೆಲಸ ಕಾರ್ಯಗಳಲ್ಲಿ ಸಹಜತೆ,ದಕ್ಷತೆ , ಪ್ರಾಮಾಣಿಕತೆ, ಪ್ರಬುದ್ಧತೆ,ಮತ್ತು ಸ್ಪಷ್ಟತೆ ಇರಬೇಕು.ಹಾಗಿದ್ದರೆ ಮಾತ್ರ ಬಹು ದಿನಗಳವರೆಗೆ ದುಡಿಮೆಲ್ಲಿರುತ್ತೇವೆ.*ಮಾತು ಬೆಳ್ಳಿ,ಮೌನ ಬಂಗಾರ* ಎಂಬಂತೆ,ಮಾತು ಕಡಿಮೆ ಮಾಡಿ,ಹೆಚ್ಚಿನ ಮೌನದಲ್ಲಿದ್ದರೆ ಮನಸ್ಸಿಗೆ ಒಳ್ಳೆಯದು.ಮನೆಗೂ ಒಳ್ಳೆಯದು,ಸಮಾಜಕ್ಕೂ ಒಳ್ಳೆಯದು.ಆದರೆ ನಾವು ಮಾಡುವ ಕೆಲಸಕ್ಕಿಂತ ಮಾತಿಗೇ ಮೊದಲ ಸ್ಥಾನ ಕೊಟ್ಟರೆ, ಕಚೇರಿ ಎಂಬುದು ಸೋಮಾರಿತನದ  ತಾಣವಾಗುವುದು.ಮಾತು ಅಧಿಕವಾದಷ್ಟು ನಮ್ಮೊಳಗೆ ಅಲ್ಪತನ ಹೊರಬರುತ್ತದೆ.ನಮ್ಮ ಕಚೇರಿಯಲ್ಲಿ ನಮ್ಮ ನಮ್ಮ ಸಿಬ್ಬಂಧಿಯವರು ಸಣ್ಣ ಸಣ್ಣ ವಿಷಯಕ್ಕೆ ಅಹಂಕಾರ ತೋರಿದರೆ ಅದಕ್ಕೆ ಹುಂಬತನ ಎನ್ನಬಹುದು.ಆದರೆ ಕಾಲು ಕೆದರಿ ವಾದಕ್ಕಿಳಿದರೆ…..? ಕೋಪದಿ ಬೈದಾಡಿ ಜೋರು ಮಾಡಿ ಕದನಕ್ಕಿಳಿದರೆ..?ಮೌನವಾಗಿರಬೇಕು. ಇಂತಹ ವಿಷಯಗಳು ಪ್ರತಿ ಸಂಸ್ಥೆಗಳಲ್ಲಿ,ಪ್ರತಿ ಕಚೇರಿಯಲ್ಲಿ ನಡೆದಿರುತ್ತವೆ.ಎಂದಿಗೂ ಬಗೆಹರಿಯುವುದಿಲ್ಲ.ಇಂತವರ ಜೊತೆ ಮಾತಿನ ಕಾಳಗ,ವಿವಾದ, ವಿಚಾರಣೆ,ಮಾಡುವುದರಲ್ಲಿ ಯಾವ ಅರ್ಥವಿಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದೆಷ್ಟೋ ಮಾತುಗಳಿಗೆ ಮೌನವೆ ಸಮಾಧಾನವಾಗುವುದು.ಸಂದಾನವೂ ಆಗಬಲ್ಲದು.​ಈ ಮೇಲಿನ ಮಾತು  ಕೇವಲ ಜಲಚರಗಳ ಬಗೆಗಿನ ಮಾತಲ್ಲ; ಇದು ಮನುಷ್ಯ ಸಮಾಜ, ರಾಜಕೀಯ, ಉದ್ಯೋಗ,ಕೃಷಿ  ಹಾಗೂ ದೈನಂದಿನ ಜೀವನದ ಅಸ್ತಿತ್ವದ ಹೋರಾಟವನ್ನು ಕುರಿತು ಹೇಳುವ ಅತ್ಯಂತ ಶ್ರೇಷ್ಠವಾದ ತತ್ತ್ವವಾಗಿದೆ.​ಯಾವುದಾದರೂ  ಒಂದು ಮಾತನ್ನು  ಅರ್ಥಮಾಡಿಕೊಳ್ಳಲು ಮೊದಲು ಅದರ ಬಾಹ್ಯ ರೂಪವನ್ನು ನೋಡಬೇಕು. ಈ ಉಕ್ತಿಯು ಪ್ರಕೃತಿಯ ಸಹಜ ನಿಯಮವೊಂದನ್ನು ನಮಗೆ ಪರಿಚಯಿಸುತ್ತದೆ.ನೀರಿನಲ್ಲಿನರುವ ಜಲಚರಗಳಾದ ಮೀನು, ಕಪ್ಪೆ ,ಏಡಿ,ಅಥವಾ ಯಾವುದೇ ಸಣ್ಣ ಜಲಚರಗಳಿಗೆ ನೀರೇ ಆಸರೆ, ನೀರೇ ಜೀವನ. ನೀರನ್ನು ಬಿಟ್ಟು ಅವು ಕ್ಷಣಕಾಲವೂ ಬದುಕಲಾರವು.​ಅತೀ ಬಲಶಾಲಿ ಜಲಚರಗಳಿದ್ದರೂ ಅವುಗಳೂ  ಬದುಕುತ್ತಿವೆ. ನೀರಿನಲ್ಲಿ ಮೊಸಳೆಯೂ ವಾಸಿಸುತ್ತದೆ. ಮೊಸಳೆಯನ್ನು ‘ಜಲರಾಜ’ ಎನ್ನಬಹುದು. ನೀರಿನೊಳಗೆ ಮೊಸಳೆಗೆ ಸಿಗುವಷ್ಟು ದೈಹಿಕ ಶಕ್ತಿ ಮತ್ತು ಹಿಡಿತ ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ‘ಆನೆ ಬಿದ್ದರೂ ಕುದುರೆ ಬಿದ್ದರೂ ಮೊಸಳೆಗೆ ನೀರೇ ಬಲ’ ಎಂಬ ಇನ್ನೊಂದು ಗಾದೆಯೂ ಇದೆ.​ ನೀರಿನಲ್ಲೇ ಬದುಕಬೇಕಾದ ಸಣ್ಣ ಜೀವಿಯೊಂದು ಅದೇ ನೀರಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮೊಸಳೆಯೊಂದಿಗೆ ಹಗೆತನ ಸಾಧಿಸಿದರೆ ಏನಾಗಬಹುದು? ಅದರ ಜೀವಕ್ಕೆ ಗಂಡಾಂತರ ಬರುವುದು ನಿಶ್ಚಿತ. ತನಗಿಂತ ನೂರು ಪಟ್ಟು ಬಲಶಾಲಿಯಾದ ಶತ್ರುವಿನ ಜಾಗದಲ್ಲೇ ಇದ್ದುಕೊಂಡು, ಅವನೊಂದಿಗೇ ದ್ವೇಷ ಸಾಧಿಸುವುದು ಆತ್ಮಹತ್ಯೆಗೆ ಸಮಾನ ಎಂಬುದು ಇದರ ನೇರ ಅರ್ಥ.​ಈ ಮಾತಿನ ಹಿಂದೆ ಒಂದು ಶ್ರೇಷ್ಠವಾದ ಆಧ್ಯಾತ್ಮಿಕ ಚಿಂತನೆಯೂ ಅಡಗಿದೆ. ಇಲ್ಲಿ ‘ನೀರು’ ಎನ್ನುವುದನ್ನು ಈ ಜಗತ್ತು ಅಥವಾ ಸಂಸಾರಕ್ಕೆ ಹೋಲಿಸಬಹುದು. ‘ಮೊಸಳೆ’ ಎನ್ನುವುದನ್ನು ಪ್ರಕೃತಿಯ ನಿಯಮಗಳು, ಕಾಲ ಅಥವಾ ಭಗವಂತನ ಶಕ್ತಿಗೆ ಹೋಲಿಸಬಹುದು.​”ನಾವು ಪ್ರಕೃತಿಯ ಮಡಿಲಲ್ಲಿ ಬದುಕುತ್ತಾ, ಪ್ರಕೃತಿಯ ನಿಯಮಗಳನ್ನೇ ಉಲ್ಲಂಘಿಸಿ ಬಾಳಲು ಸಾಧ್ಯವಿಲ್ಲ.”​ಮನುಷ್ಯನು ಈ ಭೂಮಿಯ ಮೇಲೆ ಹುಟ್ಟಿದ್ದಾನೆ (ನೀರಲ್ಲಿ ವಾಸ). ಈ ಸೃಷ್ಟಿಯನ್ನು ನಿಯಂತ್ರಿಸುವ ಕೆಲವು ಅದೃಶ್ಯ ಶಕ್ತಿಗಳು, ಕರ್ಮ ಸಿದ್ಧಾಂತಗಳು ಮತ್ತು ಪ್ರಕೃತಿಯ ನಿಯಮಗಳಿವೆ (ಮೊಸಳೆ). ಮನುಷ್ಯ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಪ್ರಕೃತಿಯ ವಿರುದ್ಧ ತಿರುಗಿಬಿದ್ದರೆ, ಅಂತಿಮವಾಗಿ ವಿನಾಶ ಹೊಂದುವುದು ಅವನೇ. ಆದ್ದರಿಂದ, ನಾವು ಬಾಳುವ ಪರಿಸರ ಮತ್ತು ನಮ್ಮನ್ನು ಸಲಹುವ ಶಕ್ತಿಗಳೊಂದಿಗೆ ದ್ವೇಷ ಸಾಧಿಸದೆ, ಸಾಮರಸ್ಯದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವಿದು.​ಮಾನವ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಗಾದೆ ಮಾತುಗಳು ದಿಕ್ಸೂಚಿಯಾಗಿವೆ. ಮನುಷ್ಯ ಸಂಘಜೀವಿ. ಅವನು ಸಮಾಜ ಅಥವಾ ಕುಟುಂಬವನ್ನು ಬಿಟ್ಟು ಒಂಟಿಯಾಗಿ ಬಾಳಲಾರನು.​ನಾವು ಒಂದು ಹಳ್ಳಿಯಲ್ಲೋ ಅಥವಾ ನಗರದ ಗಲ್ಲಿಯಲ್ಲೋ ವಾಸಿಸುವಾಗ, ಸುತ್ತಮುತ್ತಲಿನ ಜನರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳೊಂದಿಗೆ,ರಾಜಕಾರಣಿಯೊಂದಿಗೆ, ಅನಗತ್ಯ ದ್ವೇಷ ಕಟ್ಟಿಕೊಂಡರೆ, ಕಷ್ಟಕಾಲದಲ್ಲಿ ನಮಗೆ ಯಾರೂ ನೆರವಾಗುವುದಿಲ್ಲ.ಒಂದು ಜಂಟಿ ಕುಟುಂಬದಲ್ಲಿ ವಾಸಿಸುವಾಗ, ಮನೆಯ ಯಜಮಾನ ಅಥವಾ ಪ್ರಮುಖ ರಾಜಕಾರಣಿ,ಅಧಿಕಾರಿ,ಅಥವಾ ಪುಡಿ ಗುಂಡಾಗಿ ರಿ  ವ್ಯಕ್ತಿಯೊಂದಿಗೆ ಸದಾ ಕಲಹ ಹೂಡುತ್ತಿದ್ದರೆ ಆ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮನೆಯಲ್ಲೇ ವಾಸಿಸುತ್ತಾ, ಮನೆಯ ಮುಖ್ಯಸ್ಥನನ್ನೇ ದ್ವೇಷಿಸುವುದು ಸಂಸಾರದ ನೆಮ್ಮದಿಯನ್ನು ಕೆಡಿಸುತ್ತದೆ.​ಆಧುನಿಕ ಜಗತ್ತಿನಲ್ಲಿ,ಈ ಮೋಬೈಲ್ ಕಾಲದಲ್ಲಿ ಒಳ್ಳೆಯ ಮಾತನ್ನು ತಿಳಿವಳಿಕೆಗಾಗಿ ಹೇಳಿದರೆ ನಗಾಡುವ ಪಟ್ಟೆ ಹುಡುಗರಿದ್ದಾರೆ.ಮೇಲಿನ ಮಾತು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾದ ಪಾಠವನ್ನು ಕಲಿಸುತ್ತದೆ. ಕಛೇರಿಗಳಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳಗಳಲ್ಲಿ ಇದನ್ನು ನಾವು ಪ್ರತಿದಿನ ನೋಡಬಹುದು.​ಮೇಲಾಧಿಕಾರಿಗಳೊಂದಿಗೆ ಸಂಬಂಧವನ್ನು ನಮ್ರತೆಯಿಂದ ಇಟ್ಟುಕೊಂಡಿರಬೇಕು.ನಾವು ಕೆಲಸ ಮಾಡುವ ಸಂಸ್ಥೆಯೇ ನಮಗೆ ಜೀವನೋಪಾಯ ಅಲ್ಲಿರುವ ನಮ್ಮ ಬಾಸ್ ಅಥವಾ ಮ್ಯಾನೇಜರ್ (ಮೊಸಳೆ) ಅಧಿಕಾರ ಹೊಂದಿರುವ ವ್ಯಕ್ತಿ.​ಬುದ್ಧಿವಂತಿಕೆಯ ನಡವಳಿಕೆಯಿಂದ ತಲೆಬಾಗಿರಬೇಕಾಗುತ್ತದೆ. ಉದ್ಯೋಗದಲ್ಲಿರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದೇ ಸಂಸ್ಥೆಯಲ್ಲಿ ಸಂಬಳ ಪಡೆಯುತ್ತಾ, ಸಂಸ್ಥೆಯ ಮುಖ್ಯಸ್ಥರೊಂದಿಗೆ ನೇರ ಹಗೆತನ ಬೆಳೆಸಿಕೊಂಡರೆ ವೃತ್ತಿಜೀವನ ಹಾಳಾಗುತ್ತದೆ. ಇಲ್ಲಿ ಶರಣಾಗತಿ ಮುಖ್ಯವಲ್ಲ, ಬದಲಿಗೆ ‘ಸಮಯಪ್ರಜ್ಞೆ’ ಜಾಣತನ,ನಯವಿನಯತೆ, ಮತ್ತು ‘ರಾಜತಾಂತ್ರಿಕತೆ’ ಮುಖ್ಯವಾಗುತ್ತದೆ. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿವೇಕ ಇರಬೇಕೇ ಹೊರತು ಕೇವಲ ಆವೇಶವಲ್ಲ. ​ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಈ ಗಾದೆಯನ್ನು ಪಾಲಿಸದ ರಾಜರುಗಳು ಹೇಗೆ ನಾಶವಾದರು ಮತ್ತು ಹೇಗೆ ಪಾಲಿಸಿದರು, ಹೇಗೆ ಉಳಿದುಕೊಂಡರು ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಬಲಿಷ್ಠ ಸಾಮ್ರಾಜ್ಯಗಳ ಪಕ್ಕದಲ್ಲಿದ್ದ ಸಣ್ಣ ಪುಟ್ಟ ಸಂಸ್ಥಾನಗಳು, ಆ ಬಲಿಷ್ಠ ರಾಜರೊಂದಿಗೆ ಅನಗತ್ಯವಾಗಿ ಯುದ್ಧ ಸಾರಿದಾಗ ಧೂಳೀಪಟವಾದವು. ಆದರೆ, ಯಾರು ತಮ್ಮ ಮಿತಿಯನ್ನು ಅರಿತು, ಬಲಿಷ್ಠರೊಂದಿಗೆ ಸ್ನೇಹ ಹಸ್ತ ಚಾಚಿದರೋ ಅಥವಾ ತಂತ್ರಗಾರಿಕೆಯಿಂದ ವರ್ತಿಸಿದರೋ ಅವರು ತಮ್ಮ ಪ್ರಜೆಗಳನ್ನು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಂಡರು.​ಅಂತರರಾಷ್ಟ್ರೀಯ ರಾಜಕೀಯದಲ್ಲಿ ಇಂದು ಜಾಗತಿಕ ಮಟ್ಟದಲ್ಲೂ ಅಷ್ಟೇ, ಒಂದು ಸಣ್ಣ ದೇಶವು ತನ್ನ ಪಕ್ಕದಲ್ಲೇ ಇರುವ ಸೂಪರ್ ಪವರ್ ದೇಶದೊಂದಿಗೆ ವೈರತ್ವ ಬೆಳೆಸಿಕೊಂಡರೆ ಆ ದೇಶದ ಆರ್ಥಿಕತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.*ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ* ಎಂಬ ಗಂಭೀರ ಮಾತು ನಮಗೆ ಹೇಡಿತನವನ್ನು ಕಲಿಸುವುದಿಲ್ಲ, ಬದಲಿಗೆ ಬದುಕುವ ಕಲೆಯಾದ ‘ವಿವೇಕ’ವನ್ನು ಕಲಿಸುತ್ತದೆ.ಶತ್ರು ಬಲಶಾಲಿಯಾಗಿದ್ದಾಗ ಆವೇಶದಿಂದ ಹೋರಾಡುವುದಕ್ಕಿಂತ, ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಬಲಹೀನನಾದವನು ಬಲಿಷ್ಠನ ಎದುರು ಜಾಣ್ಮೆಯಿಂದ ವರ್ತಿಸಬೇಕು.​ನಾವು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಪ್ರಭಾವಿ ಶಕ್ತಿಗಳೊಂದಿಗೆ ಅನಗತ್ಯ ಘರ್ಷಣೆಗೆ ಇಳಿಯಬಾರದು. ಬೆಂಕಿಯ ಒಟ್ಟಿಗೆ ಇದ್ದು ಸುಟ್ಟುಕೊಳ್ಳುವುದಕ್ಕಿಂತ, ಅದರ ಶಾಖವನ್ನು ಬಳಸಿಕೊಂಡು ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವವರೆ ನಿಜವಾದ ಜಾಣರು ಎಂಬುದೇ ಈ ಶ್ರೇಷ್ಠ ಗಾದೆಯ ಪರಮ ತಾತ್ಪರ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು.  ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು.  ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ.  ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-32 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅಸುರರನ್ನು ಮಣಿಸಿದೆ ಅಂಜನಾಸುತನ ಬಲದಿಂದ ನಮ್ಮೆಡೆಗೆ ಮುನ್ನುಗ್ಗಿಬರುತ್ತಿದ್ದ ದೈತ್ಯಸೇನೆಯಲ್ಲಿ ಅಪರಿಮಿತ ಬಲದ ರಾಕ್ಷಸಿಯರೂ ಇದ್ದರು. ಯುದ್ಧಕ್ಕೆ ಸಿದ್ಧನಾಗಿ ನಿಂತಿದ್ದ ನನ್ನ ರಥದಲ್ಲಿದ್ದ ಧ್ವಜವದು ಅವರ ಕ್ರೂರದೃಷ್ಟಿಗೆ ಬಿತ್ತು. ನಾನು ಹನುಮಧ್ವಜಧಾರಿ. ನನ್ನ ರಥದ ಬಾವುಟದಲ್ಲಿದ್ದವನು ಆ ಶ್ರೀರಾಮನ ಪ್ರಿಯಭಂಟ ಹನುಮಂತ. ರಕ್ಕಸಿಸಮೂಹವದು ಅಳುಕಿತು ಮಾರುತಸುತನನ್ನು ಕಂಡೊಡನೆಯೇ. ಅಂದು ಸಾಗರ ಉಲ್ಲಂಘನದ ಆ ಸಮಯದಲ್ಲಿ ತನ್ನನ್ನು ನುಂಗಿದ ರಾಕ್ಷಸಿಯ ದೇಹ ಸೀಳಿದವನು ಆಂಜನೇಯ. ಲಂಕೆಗೆ ಹೋದ ಬಳಿಕ ಅಲ್ಲಿ ಎದುರಾದ ರಕ್ಕಸಿ ಪಡೆಗೆ ರಾಕ್ಷಸ ರೂಪ ತೋರಿದವನು ವಾಯುಪುತ್ರ. ಆ ಭೀಕರ ನೆನಪು ಮೂಡಿತು ನನ್ನನ್ನು ಎದುರಿಸಲು ಬಂದಿದ್ದ ರಾಕ್ಷಸಿಯರಿಗೆ.ಅಂದು ಲಂಕಿಣಿಯನ್ನು ಬಲವಾಗಿ ಒದೆದ ಬಲಶಾಲಿ ಹನುಮಂತ ಇಂದಿಲ್ಲಿಗೆ ಮತ್ತೆ ಬಂದಿದ್ದಾನೆ ಎಂಬ ಭ್ರಮೆಗೆ ಒಳಗಾದ ರಕ್ಕಸಿಯೊಬ್ಬಳು ದೂರದೂರಕ್ಕೆ ಓಡಿದಳು, ರಣದ ಆಸಕ್ತಿಯನ್ನೇ ತೊರೆದವಳಂತೆ, ಮರಣ ಭಯಕ್ಕೆ ಒಳಗಾದವಳಂತೆ.ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಗೆ ಬೆಂಕಿಯಿತ್ತ ಹನುಮ ಸಾಹಸ ನೆನಪಾಯಿತು ಇನ್ನೊಬ್ಬ ರಕ್ಕಸಿಗೆ. “ಮೊದಲೇನಿದ್ದರೂ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ಆಮೇಲೆ ಯುದ್ಧದ ಮಾತು” ಎಂದು ಬೊಬ್ಬೆ ಹೊಡೆದವಳು ತನ್ನ ಮನೆಗೆ ಓಡಿದಳು. ಮನೆಯೊಳಗಿದ್ದ ಸರಕನ್ನೆಲ್ಲಾ ಹೊರಗೆಸೆಯಲು ಶುರುಮಾಡಿದಳು.“ರಕ್ಕಸಿಯ ನೆರಳನ್ನು ಸಹಿಸುವುದಿಲ್ಲ ಈ ಕಪಿ” ಎಂದ ಇನ್ನೊಬ್ಬ ರಾಕ್ಷಸಿ ತನ್ನ ನೆರಳದು ಭೂಮಿಯ ಮೇಲೆ ಬೀಳದಂತಹ ತಾಣವನ್ನು ಹುಡುಕಿ ಅಲ್ಲಿ ಹೋಗಿ ನಿಂತಳು.ಹೀಗೆ ಯುದ್ಧಾಸಕ್ತರಾಗಿ ಬಂದ ರಕ್ಕಸಿಯರಿಗೆ ಭೀತಿ ಮೂಡಲು ನನ್ನ ಧ್ವಜದಲ್ಲಿದ್ದ ಹನುಮ ಕಾರಣನಾದ. ಹೀಗಿದ್ದಾಗಲೇ ಹನುಮನಿಗೆ ಹೆದರುವವಳು ತಾನಲ್ಲ ಎಂದು ಗತ್ತು ಗಾಂಭೀರ್ಯದಿAದ ಮುಂದೆ ಬಂದಳು ಒಬ್ಬ ರಕ್ಕಸಿ. ತನ್ನ ದೈತ್ಯ ಮೊಲೆಗಳಿಂದಲೇ ಶತ್ರು ಸೈನ್ಯವನ್ನು ಪುಡಿಗಟ್ಟುತ್ತೇನೆ ಎಂದು ಅಬ್ಬರಿಸಿದಳು. ಹಾಗೆ ಹೇಳಿದವಳು ಯೋಜನಸ್ತನಿಯೆಂಬ ರಾಕ್ಷಸಿ. ಅರ್ಜುನ ಸೇನೆಯನ್ನು ನಾಶಮಾಡಲು ನನ್ನ ಹೊಟ್ಟೆಯಿದು ಸಾಕು ಎಂದು ಆರ್ಭಟಿಸಿದಳು ಲಂಬೋದರಿ ಎಂಬ ನಿಶಾಚರಿ ದೈತ್ಯೆ. ಹೀಗೆ ಇವರಿಬ್ಬರೂ ಹೊಟ್ಟೆ, ಮೊಲೆಗಳನ್ನು ಮುಂದುಮಾಡಿಕೊAಡು, ಉಳಿದ ಅಸುರ ಪಡೆಯೊಡನೆ ನಮ್ಮ ಸೇನೆಯನ್ನು ನಾಶಪಡಿಸುವ ಉತ್ಸಾಹ ತೋರಿದರು.ಆಗಲೇ ಭೀಕರ ರೂಪದಲ್ಲಿ ಬಂದ ಭೀಷಣ ಮಹಾಸ್ತçಗಳ ಮಳೆಯನ್ನೇ ಕರೆದ, ನನ್ನ ಮೇಲೆ. ಬಗೆಬಗೆಯ ಮೃಗಗಳ ರೂಪವನ್ನು ತಾಳಿ ಬೆದರಿಸುವ ಯತ್ನ ಮಾಡಿದ. “ನನಗೆ ಜನ್ಮ ಕೊಟ್ಟವನಿಗೆ ಮರಣವನ್ನು ತಂದಿಟ್ಟವನು ನಿನ್ನ ಅಣ್ಣ ಭೀಮ. ನೀನೆಂತು ಪ್ರಾಣ ಉಳಿಸಿಕೊಳ್ಳುವೆಯೋ ನೋಡುತ್ತೇನೆ. ನಿನ್ನನ್ನು ಹಿಡಿದು ನರಮೇಧ ಯಾಗಕ್ಕೆ ಬಲಿಪಶುವಾಗಿಸದೆ ಬಿಡುವುದಿಲ್ಲ” ಎಂದು ಭೂಮಿ ನಡುಗುವಂತೆ ಬೊಬ್ಬಿರಿದ ಭೀಷಣ.ಅವನ ಭೀಕರ ಬೊಬ್ಬೆಯದು ನನ್ನಲ್ಲಿ ನಗು ಮೂಡಿಸಿತು. ನನ್ನ ರಕ್ಷೆಗಾಗಿ ಉಗ್ರವಾದ ಬಾಣವೊಂದನ್ನು ಹೂಡಿದೆ. ನನ್ನ ಒಂಟಿ ಬಾಣದ ಏಟಿಗೆ ಜಂಟಿ ಜಂಟಿಯಾಗಿ ತತ್ತರಿಸಿಹೋದರು ಅಸುರರು. ಒಂದರ ಹಿಂದೊAದರAತೆ ಶರಗಳನ್ನು ಪ್ರಯೋಗಿಸುತ್ತಲೇ ಹೋದೆ ಅಸುರರ ಮೇಲೆ.ಬಿರುಗಾಳಿ ಬೀಸಿದಾಗ ಮೋಡಗಳೆಲ್ಲಾ ಚದುರಿಹೋಗುವಂತೆ ದಿಕ್ಕುದಿಕ್ಕಿಗೆ ಹೋಗಿಬಿದ್ದರು ಅಸುರರು. ಕೆಲವರ ಅಂಗಾAಗಗಳು ಮುರಿದುಹೋದವು. ಕೈಕಾಲುಗಳನ್ನು ಕಳೆದುಕೊಂಡರು ಕೆಲವರು. ಕೆಲವರ ದೇಹದಲ್ಲಿ ನಾನು ಪ್ರಯೋಗಿಸಿದ ಬಾಣಗಳು ನೆಟ್ಟಿದ್ದವು. ವೇದನೆಗಳನ್ನು ತಾಳಲಾರದೆ ಕೆಲವರು ಪ್ರಾಣಬಿಟ್ಟರು. ಜೀವ ಉಳಿಸಿಕೊಳ್ಳುವುದಕ್ಕಾಗಿ ಗಿಡಮರಗಳ ಆಶ್ರಯ ಪಡೆದರು ಕೆಲವರು. ಯುದ್ಧರಂಗದಿAದಲೇ ಓಡಿಹೋಗಿ ಉಳಿದೆವು ತಾವು ಎಂದು ಬೀಗಿದರು ಕೆಲವರು.ಈಗ ನನಗೆ ನನ್ನ ಧ್ವಜದಲ್ಲಿ ಕುಳಿತಿದ್ದ ಹನುಮನ ನಿಜ ನೆರವು ದೊರಕಿತು. ಸ್ತನ, ಉದರಗಳಿಂದ ಸೈನಿಕರನ್ನು ಬಡಿಬಡಿದು ಕೊಲ್ಲುತ್ತಿದ್ದ ಯೋಜನಾಸ್ತನಿ, ಲಂಬೋದರಿಯರೆAಬ ರಕ್ಕಸಿಯರನ್ನು ಕಂಡು ಅಚ್ಚರಿಪಟ್ಟ ಅಂಜನಾಸುತ. ಹಿಂದಿನ ನೆನಪೆಲ್ಲವೂ ಬಂತು ಅವನಿಗೆ. ನಸುನಕ್ಕ. ತನ್ನ ಬಾಲವನ್ನು ಅಸುರರಿದ್ದ ದಿಕ್ಕುದಿಕ್ಕಿಗೆ ಬಡಿದ. ಹನುಮಂತನ ಬಾಲದ ಬಲವಾದ ಏಟಿಗೆ ಇನ್ನೂ ಶಕ್ತಿ ಮೂಡದ ಬಾಲರಂತಾಗಿಹೋದರು ರಕ್ಕಸರು. ಜೋರುಜೋರಾಗಿ ಚೀರುತ್ತಾ ಪ್ರಾಣ ಕಳೆದುಕೊಂಡರು. ಎಲ್ಲೆಡೆಯೂ ಅಸುರರ ಉಗ್ರರೂಪವನ್ನು ತೋರುತ್ತಿದ್ದ ರಣರಂಗವೀಗ ಜೀವಂತ ಅಸುರರಿಲ್ಲದೆಯೇ ಶೂನ್ಯವಾಗಿ ತೋರುತ್ತಿತ್ತು. ಅಸುರರನ್ನು ಕೊಲ್ಲುವ ಬಯಲಾಟದೆಡೆಗೆ ಮನಸ್ಸು ಮಾಡಿದ್ದ ಹನುಮಂತ ಈಗ ಅಸುರ ತಾಣವನ್ನು ಬಯಲು ಬಯಲಾಗಿಸಿದ್ದ.ತನ್ನವರನ್ನು ಕಳೆದುಕೊಂಡ ಭೀಷಣ ಭೀತಿಗೆ ಒಳಗಾದ. ತಾನು ಹೀಗೆಯೇ ಇದ್ದರೆ ತನ್ನ ಪ್ರಾಣವೂ ಉಳಿಯಲಾರದು ಎನ್ನುವುದು ದೃಢವಾಯಿತು ಅವನಿಗೆ. ಮಾಯಾವಿಯಾಗಿ ಕೈಚಳಕ ತೋರಿಸಲು ನಿರ್ಧಾರ ಮಾಡಿದ.ತಕ್ಷಣವೇ ಅಲ್ಲೊಂದು ಪುಣ್ಯಾಶ್ರಮ ಕಾಣಿಸಿಕೊಂಡಿತು. ಅಸುರ ರೂಪವನ್ನು ಕಳಚಿಕೊಂಡ ಭೀಷಣ ಮುನಿರೂಪದಲ್ಲಿ ಕಾಣಿಸಿಕೊಂಡ. ಅದೀಗ ಯುದ್ಧರಂಗವಾಗಿರಲಿಲ್ಲ. ಅಸುರ ಪಟ್ಟಣವಾಗಿರಲಿಲ್ಲ. ಎಲ್ಲೆಡೆಯೂ ಗಂಗಾನದಿಯ ನೀರಿನ ಹರಿವು. ಮುನಿಗಳ ಕುಟೀರಗಳು. ಯಜ್ಞಕುಂಡದಿದೆದ್ದ ಹೊಗೆ. ಹೂವಿನ ಗಿಡಗಳು. ಹಣ್ಣಿನ ಮರಗಳು. ಭೀಷಣನ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ನನ್ನ ಕಣ್ಣಿಗೂ ಭ್ರಾಂತಿ ಮೂಡುವಂತಹ ವಾತಾವರಣವಲ್ಲಿ ನಿರ್ಮಾಣಗೊಂಡಿತ್ತು.ಮುನಿಯ ವೇಷದಲ್ಲಿ ನನ್ನೆದುರು ಬಂದ ಭೀಷಣ “ಅಸುರರನ್ನು ಕೊಲ್ಲುವುದು ಸರಿಯಲ್ಲ. ಹಿಂಸೆಯನ್ನು ಮಾಡದಿರು. ದೇವರ ಅರ್ಚನೆಯ ಮೂಲಕ ಸನ್ಮಾರ್ಗದಲ್ಲಿ ಸಾಗು” ಎಂದು ಕಪಟ ಬೋಧನೆ ಮಾಡಿದ.ತಕ್ಷಣವೇ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನ ಮೂಲರೂಪವೇ ಒದಗಿಬಂತು. ಮುನಿಯಾಗಿದ್ದವ ಮತ್ತೆ ಅಸುರನಾದ. ಒಡನೆಯೇ ಆಕ್ರಮಿಸಿ ಅವನ ಪಟ್ಟಣದಲ್ಲಿದ್ದ ಸಂಪತ್ತೆಲ್ಲವನ್ನೂ ಸೂರೆಗೊಂಡೆ. ಅದನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟೆ. ಕುದುರೆಯ ಜೊತೆಗೆ ಮುಂದಕ್ಕೆ ಸಾಗಿದ ನಮ್ಮನ್ನು ಕರಬೀಸಿ ಕರೆಯುತ್ತಿತ್ತು ಮಣಿಪುರ… ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-25 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ನೇತ್ರ ಚಿಕಿತ್ಸೆ ಶಿಬಿರ ೧೯೫೦ ಮತ್ತು೧೯೫೧ ರ ಸಮಯ…….ಈ ಅವಧಿಯಲ್ಲಿ ಜಯದೇವಿ ತಾಯಿಯವರು ಕೈಗೊಂಡ ನೇತ್ರ ಚಿಕಿತ್ಸಾ ಶಿಬಿರಗಳು ಆ ಕಾಲದ ಸಾಮಾಜಿಕ ಸೇವೆಯ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿದವು.  ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದ ಸಾವಿರಾರು ಬಡಜನರಿಗೆ ಚಿಕಿತ್ಸೆ ದೊರೆಯುವುದು ಅತ್ಯಂತ ಕಷ್ಟಕರವಾಗಿದ್ದ ಸಮಯ ಅಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಪ್ರಸಿದ್ಧ ನೇತ್ರತಜ್ಞರಾದ ಡಾ.ಎಮ.ಸಿ.ಮೋದಿ ಅವರನ್ನು ಆಹ್ವಾನಿಸಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದರು. ಆ ಕಾಲದಲ್ಲಿ ಕಾಚಬಿಂದು, ಮೇಲ್ವಿಂದು, ಕಣ್ಣಿನ ಸೋಂಕುಗಳು, ಓರೆಕಣ್ಣು ಹಾಗೂ ಇತರ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರು ಚಿಕಿತ್ಸೆಯ ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ನೋವನ್ನು ಅರಿತ ಜಯದೇವಿ ತಾಯಿಯವರು *ಜನಸೇವೆಯೇ ದೇವಸೇವೆ* ಎಂಬ ಧ್ಯೇಯದೊಂದಿಗೆ ಈ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದರು. ಒಂದು ವಾರ ಕಾಲ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು ,೩000 ಜನರಿಗೆ ಕಾಚಬಿಂದು, ಮೇಲ್ವಿಂದು, ಹೂತುಂಬುವಿಕೆ ಹಾಗೂ ಓರೆಕಣ್ಣು ಸರಿಪಡಿಸುವಂತಹ ಚಿಕಿತ್ಸೆಗಳು ನೀಡಲಾಯಿತು. ಅಲ್ಲದೆ ೨,000ಕ್ಕೂ ಹೆಚ್ಚು ಜನರಿಗೆ ನೇತ್ರ ಪರೀಕ್ಷೆ, ಔಷಧೋಪಚಾರ ಮತ್ತು ಸಲಹೆಗಳನ್ನು ಒದಗಿಸಲಾಯಿತು. ಕಣ್ಣಿನ ತೊಂದರೆಗಳಿಂದ ನರಳುತ್ತಿದ್ದ ಜನರಿಗೆ ಈ ಶಿಬಿರ ಹೊಸ ಆಶಾಕಿರಣವಾಗಿ ಪರಿಣಮಿಸಿತು. ತೀವ್ರ ಸಮಸ್ಯೆ ಹೊಂದಿದ್ದ ೪೫ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಷ್ಟೇ ಅಲ್ಲದೆ ೩೭೫ ಜನರಿಗೆ ವಿವಿಧ ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆಗಳೂ ನೆರವೇರಿಸಲ್ಪಟ್ಟವು. ಆ ಕಾಲದ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸಾ ಕಾರ್ಯ ನಡೆಯುವುದು ನಿಜಕ್ಕೂ ಅಸಾಧಾರಣ ಸಾಧನೆಯಾಗಿತ್ತು.ಈ ಮಹತ್ಕಾರ್ಯದಲ್ಲಿ ಶ್ರೀ ಎಂ.ಪಿ. ಪಾಟೀಲರು ಹಾಗೂ ಶ್ರೀ ಪಠಣೆ ಅವರು ಜಯದೇವಿ ತಾಯಿಯವರೊಂದಿಗೆ ಕೈಜೋಡಿಸಿದರು. ಶಿಬಿರಕ್ಕೆ ಆಗಮಿಸಿದ ರೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಒಟ್ಟು ೫೭೮೦ ಜನರಿಗೆ ಹಾಸಿಗೆ, ಹೊದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು.  ದೂರದ ಊರುಗಳಿಂದ ಬಂದ ಜನರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಅದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಯಾವುದೇ ಕೊರತೆ ಉಂಟಾಗದಂತೆ ಜಯದೇವಿ ತಾಯಿಯವರು ಸ್ವತಃ ಮೇಲ್ವಿಚಾರಣೆ ವಹಿಸಿದ್ದರು. ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಆಹಾರ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಸೇವಾಭಾವ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿಯ ಅಪೂರ್ವ ಉದಾಹರಣೆಯಾಗಿ ಈ ಶಿಬಿರಗಳು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವು.  ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸಾವಿರಾರು ಜನರು ಮತ್ತೆ ಬೆಳಕನ್ನು ಕಂಡರು. ಅನೇಕರ ಜೀವನದಲ್ಲಿ ಹೊಸ ಆಶಾಭರವೂ ಮೂಡಿತು. ಜಯದೇವಿ ತಾಯಿಯವರ ಜನಪರ ಕಾಳಜಿ, ದಯೆ ಮತ್ತು ಸೇವಾ ಮನೋಭಾವದ ಜೀವಂತ ಸಾಕ್ಷಿಯಾಗಿ ಈ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ. (ಸಹಕಾರ ಚಳುವಳಿ)೧೯೫೧ರ ಸಮಯದಲಿ‌‌… ಇನ್ನೊಂದಡೆ ಭಾರತವು ಸ್ವಾತಂತ್ರ್ಯವಾಗಿ   ರಾಜಕೀಯವಾಗಿ ಸ್ವತಂತ್ರವಾಗಿದ್ದರೂ, ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಭಾಷೆ, ಧರ್ಮ, ಜಾತಿ, ವೃತ್ತಿ ಹಾಗೂ ಪ್ರಾಂತಗಳ ಆಧಾರದ ಮೇಲೆ ಜನರು ವಿಭಜಿತರಾಗಿದ್ದರು. ಒಂದೇ ದೇಶದ ಪ್ರಜೆಗಳಾಗಿದ್ದರೂ ಪರಸ್ಪರ ಭಿನ್ನಾಭಿಪ್ರಾಯಗಳು, ಪ್ರಾಂತೀಯತೆ ಮತ್ತು ಮತೀಯ ಭಾವನೆಗಳು ಸಮಾಜದಲ್ಲಿ ಬೇರೂರಿದ್ದವು. ಇಂತಹ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಮರಸ್ಯ ಅತ್ಯಗತ್ಯ ಎಂಬುದನ್ನು ಜಯದೇವಿ ತಾಯಿಯವರು ಮನಗಂಡರು.ಈ ಹಿನ್ನೆಲೆಯಲ್ಲಿ ಅವರು *ಸಹಕಾರ ಚಳುವಳಿ* ಯನ್ನು ಜನಜಾಗೃತಿಯ ಸಾಧನವಾಗಿ ಬಳಸಿದರು. “ನಾವು ಮೊದಲು ಭಾರತೀಯರು, ನಂತರ ಭಾಷಿಕರು, ಮತೀಯರು ಅಥವಾ ಪ್ರಾಂತೀಯರು” ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿದರು. ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಸಂವಾದಗಳನ್ನು ನಡೆಸಿದರು. *ಸಹಕಾರವಿರೆ ಮನೆಯು | ಸಹಕಾರವಿದೆ ಮಠವುಸಹಕಾರವಿದೆ ಬದುಕು ಬಾಳುವೆ – ತಿಳಿಯಣ್ಣ,ಸಹಕಾರದಿಂದಲೇ ಸರ್ಕಾರವು.||* ಈ ಅರ್ಥಪೂರ್ಣ ವಚನವನ್ನು ಜಯದೇವಿ ತಾಯಿಯವರು ತಮ್ಮ ಜೀವನದ ಆದರ್ಶವನ್ನಾಗಿಸಿಕೊಂಡಿದ್ದರು. ಮನುಷ್ಯನ ಬದುಕಿನಲ್ಲಿ ಸಹಕಾರಕ್ಕೆ ಪರ್ಯಾಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಒಂದು ಕುಟುಂಬ ಸುಖವಾಗಿ ನೆಮ್ಮದಿಯಿಂದ ಇರಬೇಕಾದರೆ ಪರಸ್ಪರ ಸಹಕಾರ ಅಗತ್ಯ. ಒಂದು ಮಠ, ಸಂಘ ಅಥವಾ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ನಡುವೆ ಅನ್ಯೋನ್ಯತೆ ಮತ್ತು ಒಗ್ಗಟ್ಟು ಇರಬೇಕು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರ ಸಹಕಾರ, ಪರಸ್ಪರ ವಿಶ್ವಾಸ ಮತ್ತು ಒಮ್ಮತದ ಮೇಲೆ ನಿಂತಿರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಿತನಾಗಿ, ಪ್ರಾಮಾಣಿಕನಾಗಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದರು. ವ್ಯಕ್ತಿಯ ಉದಾತ್ತ ಗುಣಗಳೇ ಸಂಘಟನೆಗಳ ಶಕ್ತಿಯಾಗುತ್ತವೆ ಎಂದು ಅವರು ನಂಬಿದ್ದರು. ಅಹಂಕಾರ, ಸ್ವಾರ್ಥ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಕೈಜೋಡಿಸಿದಾಗ ಮಾತ್ರ ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವೆಂದು ತಿಳಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಅದು ಹೃದಯಗಳನ್ನು ಜೋಡಿಸುವ ಮಾನವೀಯ ಮೌಲ್ಯ. ಒಬ್ಬರ ದುಃಖದಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆನ್ನೆಲುಬಾಗುವುದು, ಸಮಾಜದ ಹಿತಕ್ಕಾಗಿ ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು…. ಇವೆಲ್ಲವೂ ಸಹಕಾರದ ನಿಜವಾದ ರೂಪಗಳೆಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ಅವರು ಸಹಕಾರ ಚಳವಳಿಯ ಬೆಳವಣಿಗೆಯನ್ನು ಕಂಡು ಹರ್ಷಿಸುತ್ತಾ, *”ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ,ನೂರಕ್ಕೆ ಸಾವಿರಾರು ಸಹಕಾರದ ಬಳ್ಳಿ ಹಬ್ಬಲಿ!* ಎಂದು ಹೃದಯಪೂರ್ವಕವಾಗಿ ಹಾರೈಸುತ್ತಿದ್ದರು. ಸಹಕಾರದ ಬೀಜವು ಪ್ರತಿಯೊಂದು ಮನಸ್ಸಿನಲ್ಲಿ ಮೊಳಕೆಯೊಡೆದು, ಅದರ ಬಳ್ಳಿ ಊರುಗಳಿಂದ ನಗರಗಳಿಗೆ, ಕುಟುಂಬಗಳಿಂದ ಸಮಾಜಕ್ಕೆ, ಸಮಾಜದಿಂದ ರಾಷ್ಟ್ರದವರೆಗೆ ವ್ಯಾಪಿಸಲಿ ಎಂಬುದು ಅವರ ಕನಸಾಗಿತ್ತು. ಒಗ್ಗಟ್ಟು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದಲೇ ಸಮೃದ್ಧ ಸಮಾಜ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಹಕಾರ ಸಂಘಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕೆಂದು ಒತ್ತಿಹೇಳಿದರು.ಆ ಸಮಯದಲ್ಲಿ ದೇಶದ ಗಡಿಭಾಗಗಳ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿದ್ದವು. ಆದ್ದರಿಂದ ತಾಯಿಯವರು ಜನರಿಗೆ, “ಮೊದಲು ದೇಶದ ಗಡಿಗಳನ್ನು ಭದ್ರಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸೋಣ. ನಂತರ ಭಾಷಿಕ ಪ್ರಾಂತಗಳ ಬೇಡಿಕೆಗಳನ್ನು ಶಾಂತಿಯುತವಾಗಿ ಚರ್ಚಿಸೋಣ” ಎಂದು ಕರೆ ನೀಡಿದರು. ಭಾಷೆಯ ಹೆಸರಿನಲ್ಲಿ ಸಂಘರ್ಷ ಮಾಡುವುದಕ್ಕಿಂತ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದು ತಿಳಿಸಿದರು.ಅವರು ನಡೆಸಿದ ಸಭೆಗಳಲ್ಲಿ ಕನ್ನಡಿಗರು, ಮರಾಠಿಗರು, ತೆಲುಗಿಗರು, ಉರ್ದು ಭಾಷಿಕರು ಸೇರಿದಂತೆ ವಿವಿಧ ಸಮುದಾಯದ ಜನರು ಭಾಗವಹಿಸುತ್ತಿದ್ದರು. ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೋಧಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದರು. ಸಹಕಾರ ಸಂಘಗಳ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ, ಸಮುದಾಯದ ಸಮಸ್ಯೆಗಳನ್ನು ಸಮೂಹವಾಗಿ ಪರಿಹರಿಸುವ ಮಾರ್ಗವನ್ನು ತೋರಿಸಿದರು. ಜಯದೇವಿ ತಾಯಿಯವರ ಈ ಪ್ರಯತ್ನಗಳು   ರಾಷ್ಟ್ರ ನಿರ್ಮಾಣದ ಕಾರ್ಯವಾಗಿತ್ತು. ವಿಭಜನೆಯತ್ತ ಸಾಗುತ್ತಿದ್ದ ಸಮಾಜವನ್ನು ಒಗ್ಗಟ್ಟಿನ ದಾರಿಯಲ್ಲಿ ನಡೆಸುವ ಅವರ ಸಂಕಲ್ಪವು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಭಾಷೆ, ಧರ್ಮ ಮತ್ತು ಜಾತಿಯ ಭೇದಗಳನ್ನು ಮೀರಿ ಮಾನವೀಯತೆ ಹಾಗೂ ರಾಷ್ಟ್ರೀಯತೆಯ ಭಾವನೆಗಳನ್ನು ಬಲಪಡಿಸಿದ ಅವರ ಸೇವೆ ಇಂದಿಗೂ ಆದರ್ಶಪ್ರಾಯವಾಗಿದೆ. “ಹಾಗೆಯೇ ಅವರಿಗೆ ತಾಯಿ ಭಾಷೆಯ ಮೇಲಿನ ಪ್ರೇಮವೂ ಅಪಾರವಾಗಿತ್ತು. ವಿಶೇಷವಾಗಿ ಕನ್ನಡದ ಮೇಲಿನ ಅವರ ಅಭಿಮಾನ ಮತ್ತು ತಾಯ್ನುನುಡಿ ಮೇಲಿನ ಗೌರವ ಅಚಲವಾಗಿತ್ತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಅವರು ನಂಬಿದ್ದರು. ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.  ಕನ್ನಡವೆಂದರೆ ಅವರಿಗೆ ಜೀವದಷ್ಟೇ ಪ್ರೀತಿ. ಕನ್ನಡದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಅವರ ಹೃದಯದಲ್ಲಿ ಸದಾ ಜಾಗೃತವಾಗಿತ್ತು. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ ಎಂಬ ದೃಢ ನಂಬಿಕೆಯೊಂದಿಗೆ ಅವರು ಭಾಷಾ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. *ಜಯದೇವಿ ತಾಯಿಯವರಿಗೆ ಕನ್ನಡ ಅವರ ಉಸಿರಾಗಿದ್ದರೆ, ಇತರ ಭಾಷೆಗಳು ಅವರ ಹೃದಯದ ಆತ್ಮೀಯ ಅತಿಥಿಗಳಾಗಿದ್ದವು.* ಕನ್ನಡವನ್ನು ಅವರು ಎಷ್ಟು ಪ್ರೀತಿಸುತ್ತಿದ್ದರೋ, ಅಷ್ಟೇ ಗೌರವ ಮತ್ತು ಆದರವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ನೀಡುತ್ತಿದ್ದರು. ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ಅವುಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಆಸ್ವಾದಿಸುತ್ತಿದ್ದರು. ಆದರೆ ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ತಿರಸ್ಕರಿಸುವುದಲ್ಲ ಎಂಬುದನ್ನು ಅವರು ಸದಾ ಹೇಳುತ್ತಿದ್ದರು. ‘ಪ್ರತಿಯೊಬ್ಬರಿಗೂ ಅವರ ತಾಯಿಭಾಷೆ ತಾಯಿಯಂತೆಯೇ. ಕನ್ನಡಿಗನಿಗೆ ಕನ್ನಡ ಹೇಗೆ ಅಮೂಲ್ಯವೋ, ಮರಾಠಿಗನಿಗೆ ಮರಾಠಿ, ಹಿಂದಿ ಭಾಷಿಕನಿಗೆ ಹಿಂದಿಯೂ ಅಷ್ಟೇ ಅಮೂಲ್ಯ. ತಮ್ಮ ತಾಯಿಭಾಷೆಯನ್ನು ಗೌರವಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅವರು ಪ್ರೀತಿಯಿಂದ ತಿಳಿಸುತ್ತಿದ್ದರು. *ಭಾಷೆಗಳು ಮನುಷ್ಯರನ್ನು ಬೇರ್ಪಡಿಸಲು ಅಲ್ಲ, ಹೃದಯಗಳನ್ನು ಜೋಡಿಸಲು* ಎಂಬುದು ಅವರ ನಂಬಿಕೆಯಾಗಿತ್ತು. ನುಡಿ ಭಾಷೆಯ ಮೇಲೆ ಹೆಮ್ಮೆ ಇಟ್ಟುಕೊಂಡು, ಇತರರ ತಾಯ್ನುಡಿಯನ್ನು ಸಹ ಗೌರವಿಸುವ ವಿಶಾಲ ಮನೋಭಾವವನ್ನು ಅವರು ಜೀವನದುದ್ದಕ್ಕೂ ಪಾಲಿಸಿದರು. ಭಾಷೆಗಳ ನಡುವೆ ಗೋಡೆಗಳನ್ನು ಕಟ್ಟದೆ, ಪ್ರೀತಿ ಮತ್ತು ಪರಸ್ಪರ ಗೌರವದ ಸೇತುವೆಗಳನ್ನು ನಿರ್ಮಿಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು.( ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ ಕ್ರಾಂತಿಕಾರಿ ಕವಿ ಸರ್ವಜ್ಞ ಸರ್ವಜ್ಞ ಕವಿ 16ನೇ  ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು.  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ. ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ.  ಜನನ ಮತ್ತು ಬಾಲ್ಯ ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು. ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ. ತಂದೆ ತಾಯಿ : ತಂದೆ ಕುಂಬಾರ ಮಲ್ಲ  ಮತ್ತು ತಾಯಿ ಮಾಳೆ (ಮಾಳಲಾದೇವಿ). ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ ಬಂದ ಚಂದ್ರಶೇಖರ ನಾನು ಸರ್ವಜ್ಞ  ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ. ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು. ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ.  ಪ್ರಸಿದ್ಧ ವಚನ (ತ್ರಿಪದಿ) ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ:  “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ”  ( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ. ಸರ್ವಜ್ಞನು ಕಂಡ ಬಸವಣ್ಣ ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ. ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ.  ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು ೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ | ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ | ಬಸವಣ್ಣನೆ ಕರ್ತೃ ಸರ್ವಜ್ಞ ||  ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ.  ೨. ಬಸವ ನಾಮಸ್ಮರಣೆಯ ಮಹಿಮೆ ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು | ಬಸವನ ಪಾದವ ನಂಬಿದ ಭಕ್ತರು | ಹಸನಾದರಯ್ಯ ಸರ್ವಜ್ಞ ||  ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ.  ೩. ಬಸವಣ್ಣನೇ ಜಗದ ಗುರು ಬಸವನೆ ಜಗದಾದಿ ಬಸವನೆ ಜಗದೀಶ | ಬಸವನೇ ಜಗದ ಗುರುಪ್ರಣವವೆಂದರಿದು | ಬಸವನನು ಜಪಿಸು ಸರ್ವಜ್ಞ ||   ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು.  ೪. ಮಂತ್ರಸಿದ್ಧ ಬಸವಣ್ಣ ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ | ಮಂತ್ರಸಿದ್ದನು ಬಸವಣ್ಣನ ಪಾದಕ್ಕ | ಶರಣೆನ್ನಿರೆಲ್ಲ ಸರ್ವಜ್ಞ  ಕಾಮವನ್ನು ಗೆದ್ದವನು ಬಸವಣ್ಣ. ಭಕ್ತರ ಚಿಂತೆಗಳನ್ನು ಪರಿಹರಿಸುವವನು ಬಸವಣ್ಣ. ಆಧ್ಯಾತ್ಮಿಕ ಮಂತ್ರಸಿದ್ಧಿಯನ್ನು ಹೊಂದಿರುವ ಆ ಬಸವಣ್ಣನ ಪಾದಗಳಿಗೆ ನಾವೆಲ್ಲರೂ ಭಕ್ತಿಯಿಂದ ಶರಣಾಗಬೇಕು. ೫. ಶಂಭುವಿನ ಕರುಣೆ ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ | ಶಂಭುವಿನ ಕರುಣ ನಿನಗುಂಟ ನಾನಿಮ್ಮ | ನಂಬಿ ಹೇಳಿದೆನು ಸರ್ವಜ್ಞ  ಬಸವಣ್ಣನೇ, ನಿನ್ನ ಅಪಾರವಾದ ಮಹಿಮೆಯನ್ನು ನಾನು ಪೂರ್ಣವಾಗಿ ನಂಬಿ ಹೇಳುತ್ತಿದ್ದೇನೆ. ಸಾಕ್ಷಾತ್ ಶಿವನ (ಶಂಭುವಿನ) ಸಂಪೂರ್ಣ ಕೃಪೆ ನಿನ್ನ ಮೇಲಿದೆ ಎಂಬುದನ್ನು ನಾನು ದೃಢವಾಗಿ ನಂಬಿ ಜಗತ್ತಿಗೆ ಸಾರುತ್ತಿದ್ದೇನೆ ಎಂದು ಹೇಳಿದ್ದಾರೆ.  ೬ ಲೋಕಕ್ಕೆ ಬಸವಣ್ಣನೇ ಮುದ್ದು ಹಸಿದೊಡಂಬಲಿ  ಮುದ್ದು ಬಿಸಿಲಿಗೆ ಕೊಡೆ ಮುದ್ದು ಬಸುರಿಗೆ ಶಿಶು ಮುದ್ದು ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ. ಬೇಸಿಗೆಯ ಬಳಲಿಕೆಗೆ ಅಂಬಲಿ ಕೊಟ್ಟಾಗ ಹೊಟ್ಟೆಗೆ ಹಿತವಾಗಿರುತ್ತದೆ. ಹಸಿದ ಹೊಟ್ಟೆ ತಣ್ಣಗೆ ಮಾಡುವ ಅಂಬಲಿ ಆರೋಗ್ಯಕ್ಕೂ ಒಳ್ಳೆಯದು. ಬಿಸಿಲಿಗೆ ಒಂದು ಕೊಡೆ ಇದ್ದರೆ ಅದಕ್ಕಿಂತ ಹೆಚ್ಚಿನ ಆನಂದ ಇನ್ನೊಂದಿಲ್ಲ. ಬಸುರಿ ಹೆಣ್ಣು ಮಗಳು ಓಣಿಯಲ್ಲಿ ಆಡುವ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತಾಳೆ ಬಸುರಿ. ೭ ಬಸವ ಪೀಠವು ಎದ್ದು ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು,ಧರೆಯವಗೆ  ವಶವಾಗದಿಹುದೆ  ಸರ್ವಜ್ಞ ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪವು ಒಂದು ಪ್ರಬಲ ಪ್ರಜಾಪ್ರಭುತ್ವದ ಅಂಗವಾಗಿ ಹೊರ ಹೊಮ್ಮಿತು.ಅದನ್ನೇ ಸರ್ವಜ್ಞ ಬಸವ ಪೀಠವು ಎದ್ದು ಜಾಗೃತಗೊಂಡು ಹೊಸ ನಾಣ್ಯಗಳು ಚಲಾವಣೆಗಾಗಿ ಹುಟ್ಟಿ ಕೊಂಡು ಆ ಚಲಾವಣೆಗೊಳ್ಳುವ ನಾಣ್ಯಗಳ ಮೇಲೆ ಬಸವನ. ಮುದ್ರೆ ನಾಡಲ್ಲಿ ಮೆರೆಯುವಾಗ ಬೆಳಕಿಗೆ ಬರುವಾಗ. ಇಡೀ ಜಗತ್ತು ಅವನಿಗೆ ವಶವಾಗಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾನೆ. ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ. ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ  ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ. ಜಯಂತಿ: ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ.  ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top