ಅರಮನೆ

ಕವಿತೆ

ಕೃಷ್ಣಮೂರ್ತಿ ಕುಲಕರ್ಣಿ.

ಅರಮನೆಗಳು ಎಂದರೆ
ಹಾಗೇಯೆ ಸ್ವಾಮಿ,
ಒಂದಿಲ್ಲ‌ ಒಂದುದಿನ
ಅವು ತಮ್ಮ
ದಿಮಾಕು ದೌಲತ್ತು
ಕಳೆದುಕೊಳ್ಳುತ್ತವೆ!
ಬದುಕಿನಲ್ಲಿ ಬರುವ
ಸುಖ ದುಃಖಗಳಂತೆ,
ದುಃಖದ ನೋವಿಗೆ ನರಳದೆ,
ಸುಖದ ಸಡಗರಕ್ಕೆ ಹಿಗ್ಗದೆ,
ಅಲ್ಲಿರುವ ಬಾಗಿಲು ಕಿಟಕಿ
ಗೋಡೆಯಲಿ ಹೂತಿರುವ ಗೂಟಗಳು ಮಾತ್ರ ನಿರಂಬಳವಾಗಿ
ಉಳಿಯಲು ಸಾಧ್ಯ,
ಅಲ್ಲಿಯೇ ಹುಟ್ಟಿಬೆಳೆದ
ಇರುವೆಗಳು ಸಾಗಿಹೋಗುತ್ತವೆ,
ಅರಮನೆ ಇರುವ ಮನೆಯಲ್ಲ,
ಅದೊಂದು ಸ್ಮಾರಕ ಎಂಬುದು ಅವುಗಳ ಗಮನಕ್ಕೆ ಬಂದಿರಬೇಕು,
ತಾವು ಕಟ್ಟುವ ಗೂಡಿಗೆ
ಗೆದ್ದಿಲೊ ಹಾವೋ ಬರುವಹಾಗೆ,
ದುಃಸ್ವಪ್ನ ಕಂಡಿರಲೂಬೇಕು,
ವಿಶಾಲವಾದ ಸೌಧ ಕಟ್ಟಿದವರು,
ವಿಶಾಲ ಮನೋಭಾವ ಬೆಳೆಸಲಿಲ್ಲ,
ಅರಮನೆಯ ಅಂಗಳದಲ್ಲಿ,
ಭಿನ್ನತೆಯ ಕರ್ಕಿ ಆಳಕ್ಕೆ
ಬೇರುಗಳ ಇಳಿಬಿಟ್ಟು ದಟ್ಟವಾಗದಿದ್ದರೂ,
ದಿಟ್ಟವಾಗಿಯೇ ಹಬ್ಬಿಹರಡಿದ್ದು,
ಕಟ್ಟಿದವರ ಗಮನಕ್ಕೆ ಬರಲೇಇಲ್ಲ,
ಸಂಕುಚಿತ ಮನೋಭಾವಗಳ
ಸಂತೆ ಜರುಗಿದಾಗ,
ಅರಮನೆ ಆಡಂಬರ‌ ಕಳೆದುಕೊಂಡು ಬರಡಾಯಿತು,
ಏಕಾಂಗಿ ಸ್ಮಾರಕದ ಸುತ್ತಲೂ,
ಬೀಸುವ ಬಿರುಗಾಳಿ ರಭಸಕ್ಕೆಮಾಗಿದ ಜೀವದಂತೆ ಸಹಿಸದನೋವು,
ಮನೆಮುಂದೆ ಬೆಳೆದ ತುಳಸಿ
ಹಿತ್ತಲಿನ ಮಲ್ಲಿಗೆ ಬಳ್ಳಿ,
ಹೇಗೊ ಅಸ್ತಿತ್ವ ಉಳಿಸಿಕೊಂಡಿವೆ,
ಪೂಜೆಗೆ ಕೊಂಡ್ವ್ಯಲು ಬರುವರೆಂದು,
ದೊರೆ ಇರದ ಅರಮನೆಗೆ
ಕಾವಲುಗಾರನೇಕೆ ಇದ್ದಾನು?
ಪರಿವಾರದವರೇಕೆ ಸುಳಿದಾರು?
ಸಂತೆ ಮುಗಿದಮೇಲೆ
ಅಲ್ಯಾರು ಉಳಿದಾರು?
ಅರಮನೆ ಅಂಗಳದಿ ಬೀಜಬಿತ್ತಲು ಮುಂದಾದ
ರೈತರಿಗೂ ತಕರಾರು,
ಗೊಂದಲದ ಗೂಡು ಅರಮನೆ,

*********

One thought on “ಅರಮನೆ

Leave a Reply

Back To Top