ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ

ಕವಿತೆ

ನಾಗರಾಜಹರಪನಹಳ್ಳಿ

ಪ್ರತಿಕ್ಷಣದ ಉಸಿರು
ನನ್ನೆದೆಯಲ್ಲಿ ಬಿಸಿರಕ್ತವಾಗಿದೆ
ಕೈ ಬೆರಳ ಸ್ಪರ್ಶ
ಹಾಡಿದ ರಾಗ ಅನುರಣಿಸುತ್ತಿದೆ
ಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲ
ಒಲವ ಒಳಹರಿವು ……..
**


ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿ
ಮಲಗಿರುವ ಬೆಟ್ಟಸಾಲುಗಳೇ
ಬಯಲು ಕಣಿವೆ ಮುದ್ದಿಸಿ ಸಾಗುವ
ಮಂಜು ಮೋಡಗಳೇ
ಆಕೆಗೆ
ಮುಗಿಲ ಸಂದೇಶವ ಅನುವಾದಿಸಿ ಬಿಡಿ


ಈಗೀಗ
ಪ್ರತಿ ಮಾತು ಒಲವಿನ ಸಂದೇಶ
ಹೊತ್ತು ತರುತ್ತಿದೆ
ಬದುಕು ಹಿತವೆನಿಸುತ್ತಿದೆ
ಹಕ್ಕಿಯ ಇಂಚರ
ಮಳೆಯ ಧ್ಯಾನಕ್ಕೂ
ಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….
**


ನಿನ್ನ ಬೆರಳ
ಸ್ಪರ್ಶದಿಂದ
ಕವಿತೆಗೆ ಹೊಸ
ಅರ್ಥ ದಕ್ಕಿತು
ನಿನ್ನ ಹೆರಳ
ಪರಿಮಳ ನನ್ನೆದೆಯಲ್ಲಿ
ಹೊಸ ತರಂಗಗಳ
ಅಲೆ ಎಬ್ಬಿಸಿತು


Leave a Reply

Back To Top