ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ

ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನದಲ್ಲಿ ಪ್ರಜೆಗಳ ವಾಕ್ ಸ್ವಾತಂತ್ರ್ಯಕ್ಕೆ ಮತ್ತು ಅಭಿವ್ಯಕ್ತಿ ಸ್ವತಂತ್ರಕ್ಕೆ ಬಹಳ ಮಹತ್ವ ನೀಡಲಾಗಿದೆ. ಪ್ರಜೆಗಳು ಆಡಳಿತ ವ್ಯವಸ್ಥೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಈ ಕಾರಣದಿಂದಲೇ ದೇಶದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಿಸಲು ಸುಲಭವಾಗಿದೆ. ಪತ್ರಿಕೋದ್ಯಮ ಅಥವಾ ಮಾಧ್ಯಮ ಸಂಸ್ಥೆಗಳನ್ನು ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಈ ಅಂಗವು ಯಾರ ಅಡಿಯಲ್ಲೂ ಅಥವಾ ಪರಿಮಿತಿಯಲ್ಲೂ ಕೆಲಸ ಮಾಡದೆ ಸ್ವತಂತ್ರವಾಗಿ, ದೇಶದ ಉಳಿವಿಗಾಗಿ, ಜನರ ರಕ್ಷಣೆಗಾಗಿ, ಕೆಲಸ ಮಾಡುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದೆ. ಆದರೆ ಇಂದು ಭಾರತದಲ್ಲಿ ಈ ಮಾಧ್ಯಮಗಳು ಹೊರ ಜಗತ್ತಿಗೆ ಯಾವುದೋ ಒಂದು ಕಾಣದ ಕೈನ ತೊದಲು ಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎನ್ನುವ ದೊಡ್ಡ ಹಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ಹಾಗೆ ಕಾಣುತ್ತಿವೆ. ಇದು ಎಷ್ಟು ಸತ್ಯ ಅಥವಾ ಸುಳ್ಳು ಎಂಬುದನ್ನು ಪ್ರಜೆಗಳಾದ ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆದರೆ ವಿಶ್ವಮಟ್ಟದಲ್ಲಿ ಪತ್ರಿಕೋದ್ಯಮಕ್ಕೆ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ತನ್ನದೇ ಆದ ದೊಡ್ಡ ಗೌರವವಿದೆ. ಆದ್ದರಿಂದಲೇ ಮೇ 3 ರನ್ನು ವಿಶ್ವ ಪತ್ರಿಕಾ ಸ್ವತಂತ್ರ ದಿನ ಎಂದು ಘೋಷಿಸಲಾಗಿದೆ. ಪತ್ರಿಕೋದ್ಯಮಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಪತ್ರಕರ್ತರ ಶ್ರಮವನ್ನು ಪರಿಗಣಿಸಿ ಸ್ಮರಿಸುವ ಸಲುವಾಗಿ ಈ ದಿನವನ್ನು ಮೀಸಲಿರಿಸಲಾಗಿದೆ. ಇಂತಹ ಮಹತ್ವವುಳ್ಳ ಪತ್ರಿಕೋದ್ಯಮಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ.

ಪತ್ರಿಕೋದ್ಯಮದ ಇತಿಹಾಸ
ಪತ್ರಿಕೋದ್ಯಮ ಸಂವಹನದ ಒಂದು ಮಾರ್ಗ. ಪತ್ರಿಕೋದ್ಯಮ ಜಾರಿಗೆ ಬರುವ ಮೊದಲು ಮಾತು ಅಥವಾ ಪತ್ರಗಳು ಸಂವಹನದ ಮೂಲಗಳಾಗಿದ್ದವು. ಆದರೆ ಇವು ಜಗತ್ತಿನ ಎಲ್ಲಾ ಸುದ್ದಿಗಳನ್ನು ನೀಡುತ್ತಿರಲಿಲ್ಲ. ಪತ್ರಿಕೋದ್ಯಮದ ಮೂಲ ರೂಪಗಳನ್ನು ಪೂರ್ವದ ಚೀನಾ ಹಾಗೂ ಪಶ್ಚಿಮದ ರೋಮ್‌ನಲ್ಲಿ ಗುರುತಿಸಲಾಗಿದೆ. ಜೇಮ್ಸ್ ಅಗಸ್ಟಸ್ ಹಿಕಿಯವರ ಸಂಪಾದಕತ್ವದಲ್ಲಿ 1780 ರಲ್ಲಿ ಭಾರತದ ಮೊದಲ ಪತ್ರಿಕೆಯು ಬೆಂಗಾಲ್ ಗೆಜೆಟ್ ಎಂಬ ಹೆಸರಿನಿಂದ ಪ್ರಸಾರವಾಯಿತು . ಮೇ 30, 1826 ರಂದು ಭಾರತದಲ್ಲಿ ಪ್ರಕಟವಾದ ಮೊದಲ ಹಿಂದಿ ಭಾಷೆಯ ಪತ್ರಿಕೆಯಾದ ಉದಾಂತ್ ಮಾರ್ತಾಂಡ್ (ದಿ ರೈಸಿಂಗ್ ಸನ್), ಕಲ್ಕತ್ತಾದಿಂದ (ಈಗ ಕೋಲ್ಕತ್ತಾ ) ಪ್ರಾರಂಭವಾದವು. 1836 ರಲ್ಲಿ ಮೌಲವಿ ಮುಹಮ್ಮದ್ ಬಾಕಿರ್ ಅವರು ದೆಹಲಿ ಉರ್ದು ಅಖ್ಬರ್ ಎಂಬ ಮೊದಲ ಉರ್ದು ಭಾಷೆಯ ಪತ್ರಿಕೆಯನ್ನು ಸ್ಥಾಪಿಸಿದರು .ಆಂಗ್ಲೋ-ಇಂಡಿಯನ್ ಪತ್ರಿಕೆಗಳು ಸಂಪೂರ್ಣವಾಗಿ ಬ್ರಿಟಿಷ್ ಹಿತಾಸಕ್ತಿಗಳನ್ನು ಉತ್ತೇಜಿಸಿದವು. ಇಂಗ್ಲಿಷ್‌ನ ರಾಬರ್ಟ್ ನೈಟ್ ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಸ್ಟೇಟ್ಸ್ ಮನ್ ಎಂಬ ಎರಡು ಪ್ರಮುಖ ಇಂಗ್ಲಿಷ್ ಭಾಷೆಯ ಪತ್ರಿಕೆಗಳನ್ನು ಸ್ಥಾಪಿಸಿದರು. ಅವು ವಿಶಾಲ ಭಾರತೀಯ ಪ್ರೇಕ್ಷಕರನ್ನು ತಲುಪಿದವು. ಅವರು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಿದರು. ನೈಟ್ ಜನರಿಗೆ ಪತ್ರಿಕಾ ಶಕ್ತಿಯನ್ನು ಪರಿಚಯಿಸಿದರು. ಇದರಿಂದ ಜನರು ರಾಜಕೀಯ ವಿಷಯಗಳು ಮತ್ತು ರಾಜಕೀಯ ಪ್ರಕ್ರಿಯೆಯ ಬಗ್ಗೆ ಪರಿಚಿತರಾದರು.

ಪತ್ರಿಕಾ ಸ್ವತಂತ್ರದ ಅರ್ಥ
ಪತ್ರಿಕಾ ಸ್ವತಂತ್ರವು ಪತ್ರಕರ್ತರ ಮತ್ತು ಮಾಧ್ಯಮ ಸಂಸ್ಥೆಗಳು ಸೆನ್ಸರ್ಶಿಪ್ ಅಥವಾ ಸರ್ಕಾರದ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸಲು ಅನುಮತಿಸುವ ಒಂದು ಮೂಲಭೂತ ತತ್ವವಾಗಿದೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಮುಖ ಅಂಶವಾಗಿದೆ ಮತ್ತು ಪ್ರಜಾಪ್ರಭುತ್ವ ಸಮಾಜಕ್ಕೆ ಅತ್ಯಗತ್ಯವಾಗಿದೆ.

ಪತ್ರಿಕಾ ಸ್ವಾತಂತ್ರ್ಯದ ಸಂವಿಧಾನಿಕ ಹಿನ್ನೆಲೆ
ಪತ್ರಿಕಾ ಅಥವಾ ಮಾಧ್ಯಮದ ಸ್ವತಂತ್ರವೂ ಭಾರತದ ಸಂವಿಧಾನದ ಅನುಚ್ಛೇದ 19 (1) (a) ನಲ್ಲಿ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನೀಡಿರುವ ಹಕ್ಕುಗಳನ್ನು ಉಲ್ಲೇಖಿಸುತ್ತದೆ. ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತದೆ ಮತ್ತು ಸರ್ಕಾರದ ಕ್ರಮಗಳ ಪರ ಅಥವಾ ವಿರುದ್ಧವಾಗಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ.

ಭಾರತದಲ್ಲಿ ಪತ್ರಿಕೋದ್ಯಮದ ಪ್ರಾಮುಖ್ಯತೆ
1. ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆ ದೇಶದ ಹಿತ ಕಾಯುವ ದೃಷ್ಟಿಯಿಂದ ಪತ್ರಿಕಾ ಮಾಧ್ಯಮ ಮತ್ತು ಮಾಧ್ಯಮ ಸಂಸ್ಥೆಗಳು ಸರ್ಕಾರದ ಕೆಲಸಗಳ ಬಗ್ಗೆ ನೇರವಾಗಿ ಪ್ರಶ್ನಿಸುವ ಅಧಿಕಾರಗಳನ್ನು ಹೊಂದಿವೆ ಈ ಮೂಲಕ ಜನರಿಗೆ ಸರ್ಕಾರದ ಉದ್ದೇಶಗಳನ್ನು ತಿಳಿಸುವುದು ಇವುಗಳ ಹೊಣೆಗಾರಿಕೆಯೂ ಸಹ ಆಗಿದೆ
2. ಮಾಹಿತಿ ಪ್ರಸರಣ ದೇಶ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಸಹ ಏನೆಲ್ಲಾ ವಿಚಾರಗಳು ನಡೆಯುತ್ತಿವೆ ಎನ್ನುವ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡುವ ದೊಡ್ಡ ಜವಾಬ್ದಾರಿಯನ್ನು ಈ ಮಾಧ್ಯಮಗಳು ಹೊತ್ತಿವೆ
3. ಅಧಿಕಾರಗಳ ಪರಿಶೀಲನೆ ಸರ್ಕಾರ ಏನೆಲ್ಲ ಪ್ರಜಾಪರ ಕೆಲಸಗಳನ್ನು ಮಾಡುತ್ತಿವೆ ಎಂಬುದನ್ನು ತಿಳಿಸುವುದು ಮತ್ತು ಅದನ್ನು ಶ್ಲಾಘಿಸುವುದು ಅಷ್ಟೇ ಅಲ್ಲದೆ ಸರ್ಕಾರ ಪ್ರಜಾ ವಿರೋಧಿ ಕೆಲಸ ಮಾಡಿದಾಗ ಇದೇ ಮಾಧ್ಯಮಗಳು ಸರ್ಕಾರಗಳನ್ನು ಪ್ರಶ್ನಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.
4. ಪಾರದರ್ಶಕತೆ ಮಾಧ್ಯಮಗಳು ಯಾವುದೋ ಒಬ್ಬ ವ್ಯಕ್ತಿಯ ಅಥವಾ ಪಕ್ಷದ ಅಥವಾ ಸಂಸ್ಥೆಯ ಅಥವಾ ಇನ್ನಿತರೆ ಯಾವುದೋ ಒಂದು ವಿಚಾರದ ಪರವಾಗಿರದೆ ಜನರ ಒಳಿತಿಗಾಗಿ ಪಾರದರ್ಶಕವಾಗಿ ಕೆಲಸ ಮಾಡುವ ಹೊಣೆ ಹೊತ್ತಿವೆ. ಈ ಸಂವಹನ ಮಾಧ್ಯಮಗಳು ಯಾವಾಗಲೂ ತಟಸ್ಥ ಧೋರಣೆಯನ್ನು ಹೊಂದಿರಬೇಕಿರುತ್ತದೆ.
5. ಮೂಲಭೂತ ಹಕ್ಕುಗಳ ರಕ್ಷಣೆ ಪತ್ರಿಕಾ ಮಾಧ್ಯಮವಾಗಲಿ ಅಥವಾ ಮಾಧ್ಯಮ ಸಂಸ್ಥೆಗಳಾಗಲಿ, ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾದಾಗ ಅವುಗಳ ರಕ್ಷಣೆಗಾಗಿ ಎದ್ದು ನಿಲ್ಲುವುದು ಇವುಗಳ ಕರ್ತವ್ಯವಾಗಿದೆ
6. ಅಂತರಾಷ್ಟ್ರೀಯ ಸ್ಥಾನಮಾನ ಮಾಧ್ಯಮಗಳು ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಷಯಗಳಲ್ಲಿ ಭಾರತದ ಸ್ಥಾನಮಾನ ಏನಿದೆ ಎಂಬುದನ್ನು ದೇಶಕ್ಕೆ ತಿಳಿಸುವ ಪ್ರಯತ್ನ ಮಾಡುವುದು ಮುಖ್ಯವಾಗಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಂಕ
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆಯು ಪತ್ರಿಕಾ ಸ್ವಾತಂತ್ರ್ಯದ ಕುರಿತು 180 ದೇಶಗಳ ಸೂಚ್ಯಂಕವನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕದಲ್ಲಿ ಭಾರತವು 2002ರಲ್ಲಿ 80ನೇ ಸ್ಥಾನದಲ್ಲಿತ್ತು. ಆದರೆ 2023ರ ವರದಿಯ ಅನುಸಾರ 161ನೇ ಸ್ಥಾನ ಪಡೆದಿದೆ. ಪಾಕಿಸ್ತಾನ (150ನೇ ಸ್ಥಾನ) ಹಾಗೂ ಅಫ್ಘಾನಿಸ್ತಾನ (152ನೇ ಸ್ಥಾನ) ದೇಶಗಳನ್ನು ಹಿಂದಿಕ್ಕಿದೆ. ಇದರ ಬಗ್ಗೆ ಎಲ್ಲರೂ ಯೋಚಿಸುವ  ಅಗತ್ಯವಿದೆ. ಇದಕ್ಕೆ ಕಾರಣಗಳನ್ನು ಹುಡುಕಿ ಅವುಗಳನ್ನು ನಿವಾರಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ದೇಶದ ಪತ್ರಿಕಾ ಮಾಧ್ಯಮವಾಗಲಿ ಅಥವಾ ಮಾಧ್ಯಮ ಸಂಸ್ಥೆಗಳಾಗಲಿ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿವೆ ಎಂಬುದು ನಮಗೀಗಾಗಲೇ ತಿಳಿದಿದೆ ಆದರೆ ಈಗಿನ ಕಾಲಘಟ್ಟಕ್ಕೆ ಈ ಎಲ್ಲಾ ಮಾಧ್ಯಮಗಳು ತಮ್ಮ ನೈಜತೆಯನ್ನು ಉಳಿಸಿಕೊಂಡು ಜೀವಂತಿಕೆಯಿಂದ ತಟಸ್ಥವಾಗಿ ಪ್ರಜಾಪರವಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ. ನಿಜವಾಗಿಯೂ ಸರ್ಕಾರ ಈ ಮಾಧ್ಯಮಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ನಮ್ಮ ದೇಶದಲ್ಲಿ ಇಂದು ಪತ್ರಿಕಾ ಸ್ವತಂತ್ರ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂಬುದು ನನ್ನ ಭಾವನೆ. ಪಕ್ಷಾತೀತವಾಗಿ ಕೆಲಸ ಮಾಡಬೇಕಿದ್ದ ಮಾಧ್ಯಮಗಳು ಇಂದು ಯಾವುದೋ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತಿರುವ ರಹಸ್ಯವಾಗಿದೆ. ಆದರೆ ಇದರಿಂದ ಪ್ರಜೆಗಳಿಗಾಗಿ ಅಥವಾ ದೇಶಕ್ಕಾಗಿ ಯಾವುದೇ ಒಳಿತಾಗಲು ಸಾಧ್ಯವಿಲ್ಲ. ಈ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ನಮ್ಮ ಮಾಧ್ಯಮಗಳು ತಮ್ಮ ನೈಜ ಸ್ವಾತಂತ್ರ್ಯವನ್ನು ಬಳಸಿಕೊಂಡು ದೇಶದ ಹಿತಕ್ಕಾಗಿ ಜನಪರ ದನಿಯಾಗಿ, ಸರ್ಕಾರಗಳಿಗೆ ಕಿವಿ ಹಿಂಡುವ ಕೈಗಳಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಎತ್ತಿ ಹಿಡಿಯುವ ಶಕ್ತಿಯಾಗಿ ನಿಲ್ಲುವ ಅಗತ್ಯವಿದೆ. ಇದು ಸದೃಢ ಭಾರತ ನಿರ್ಮಾಣಕ್ಕೆ ಬುನಾದಿಯಾಗುತ್ತದೆ. ಎಲ್ಲಾ ಪತ್ರಿಕಾ ಮಾಧ್ಯಮ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಶುಭಾಶಯಗಳು.

Leave a Reply

Back To Top