ಕಥಾಯಾನ

ಸಂತೆಯಲಿ ಕಂಡ ರೇಣುಕೆಯ ಮುಖ

Multicolored Selective-color Photography of Woman's Face

ಮಲ್ಲಿಕಾರ್ಜುನ ಕಡಕೋಳ

ಸಂತೆಯಲಿ ಕಂಡ ರೇಣುಕೆಯ ಮುಖ

ಸಂತೆಯಲಿ ಕಂಡ ರೇಣುಕೆಯ ಮುಖ

  ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ  ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ  ಮರೆಯಲಾಗದ ಮೃದುಲ ಮುಖವದು.  ಅದೊಂದು ಅನಿರ್ವಚನೀಯ ಮಧುರ ಸ್ಮೃತಿ.

ಹೌದು, ಅವಳ ” ಆ ಮುಖ ” ನನ್ನ  ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ  ಸುಮಧುರ ಸಮಾರಾಧನೆ. ಅವಳನ್ನು  ಅದೆಷ್ಟು ಬಾರಿ ಭೆಟ್ಟಿ ಮಾಡಿ,  ಅವಳೊಂದಿಗೆ ಮಾತಾಡಿ, ಜೀವಹಗುರ  ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ.

ಯಡ್ರಾಮಿಯ ಶಾಲಾದಿನಗಳು  ಮುಗಿಯುವ ಮುಜೇತಿ… ಅವಳ ನನ್ನ  ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ  ಕುತೂಹಲ ನನಗೆ. ಆದರೆ ಅವಳು  ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ  ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಹೀಗೆ ವರುಷ ನಾಲ್ಕು ಕಳೆದಿರಬಹುದು. 

 ಅದೊಂದು ಮಟಮಟ ಮಧ್ಯಾಹ್ನ . ದುಡಿದು, ದಣಿದು ಬಂದಿದ್ದಳು. ಕಂದು ಬಣ್ಣದ ಸೀರೆಯುಟ್ಟಿದ್ದಳು. ಕಡಲೇಬೇಳೆ ಬಣ್ಣದ ಹಣೆಯ ಮೇಲಿದ್ದ ಗಂಧ ಕುಂಕುಮದ ಬೊಟ್ಟೆಲ್ಲ ಕರಗಿ ಕಟಿನೀರು ಬಸಿದು ಮೃದುಮಲ್ಲಿಗೆ ಮುತ್ತಿನಂತೆ, ಹವಳದ ತುಟಿದಾಟಿ ಅವಳೆದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು. ಬಾವಾಗೋಳ ತೆಕ್ಕೆಯ ಪಕ್ಕದ ಹಣಮಂದೇವರ  ಗುಡಿಯ ಬಾಜೂಕೆ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿ ಗಿಡದ ದಟ್ಟನೆರಳು : ಪತರಾಸಿನ  ಹೊಟೇಲಿಗೂ ಹಣಮಪ್ಪನ ಗುಡಿಯ  ಪೌಳಿಗೂ. 

  ಗುಡಿಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು  ” ತನ್ನ  ಮಾತಾಡಿಸಿ ಬಿಡುತ್ತೇನೆಂಬಂತೆ ”  ಕಮಟಾದ ಹರಕು ಸೀರೆಯ ಸೆರಗಿನಿಂದ  ಮುಖದ ಮೇಲಿಂದುದುರುವ ಕಟ್ನೀರು  ಒರೆಸಿಕೊಂಡಳು. ಸೆರಗ ಮರೆಯಲಿದ್ದ  ಅರಿಶಿಣ ಉಂಡೆದ್ದ ಕೆಂಪು ಕುಪ್ಪಸದ  ದಾಸವಾಳಗಳ ಮೇಲೆ ಬಿದ್ದ ಕಟಿನೀರಿನ  ಹಸಿ ಹಸಿ ಗುರುತುಗಳು..!  ಆ ಹಸಿ ಗುರುತುಗಳ  ಮೇಲೆ  ಬಿಸಿ ಬಿಸಿ ಹಾಡಿನ ಚಿದ್ವಿಲಾಸದ ಸಾಲುಗಳನ್ನು  ಬರೆಯಲು  ನನ್ನ ಬರಹಗಣ್ಣು ಕನಸಿದವು. ಅಭಿಜಾತ ಪ್ರೀತಿಯ ಪ್ರಥಮವಾಂಛೆ ಅರಳಿ ನಿಂತ ಕವಿಸಮಯ.

” ಅವು” ನನ್ನ ಕಳ್ಳಗಣ್ಣಿಗೆ ಬಿದ್ದುದು ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣುಹಾಯಿಸಿ, ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ  ಕಣ್ಣುಗಳವು…! ಒಂದೊಂದು ಕಣ್ಣಲ್ಲೂ  ಪೂರ್ಣಚಂದಿರಿನ ಹಾಲ್ಬೆಳದಿಂಗಳು…  

ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು.  ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ  ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ  ಇಬ್ಬರನು ಕಾಡಲಿಲ್ಲ, ಕಾಣಲಿಲ್ಲ. ಕಣ್ಣಿಗೆ ಕಾಣದ  ವಯಸು. ಕೊರಳ ಮೋಹದ ಬಲೆಗೆ ಕರುಳಬಳ್ಳಿ ಸುತ್ತಿಕೊಂಡ, ಬ್ರಹ್ಮಾಂಡ ಬೀಜಗಳ ಖಂಡುಗ ಕನಸು.

ಹೇಳು, ಕನಸುಗಳಿಗೆ ಒಡತಿಯಾಗುವೆಯಾ…ಎಂದು ಕೇಳುವುದನ್ನ ತಡೆ ಹಿಡಿದು  ಹೆಸರು ಕೇಳಿದೆ. ” ರೇಣುಕ ” ಎಂದಳು. ನಾನು ಈ ಊರಿನವಳಲ್ಲ…ನನ್ನ ಅಪ್ಪ  ಯಾರಂತ ನನಗೇ ಗೊತ್ತಿಲ್ಲ. ಅವ್ವ  ಜೋಗೇರ ಚೆಂಗಳಿ…ದೇವರಿಗೆ  ಬಿಟ್ಟವಳು… ನಾನವಳ ಮಗಳು.

 ನಾನು ಪ್ರಶ್ನಿಸದಿದ್ದರೂ ತಾನೇ ಕತೆ  ಹೇಳಿದಂತೆ  ಹೇಳ ತೊಡಗಿದಳು. ” ನಂಗೊತ್ತಿಲ್ಲ… ಅದೇಕೋ ನಿಮ್ಮುಂದೆ  ಎಲ್ಲ ಹೇಳಿಕೊಳ್ಳಬೇಕನಸ್ತಿದೆ ” ಎನ್ನುತ್ತಾ ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ  ನಿಂಬೆವ್ವ  ತನಗೆ ಮಾಡಿದ ಸಹಾಯ, ಸಹಕಾರ ಕುರಿತು  ಹೇಳುತ್ತಾ., ಮಠದ ಬೀಜದಹೋರಿ ಯೊಂದು ತನ್ನನ್ನು  ಬೆನ್ನಟ್ಟಿ ದಾಳಿ ಮಾಡಿ, ಹೆಣ್ತನದ ಜೀವಶಿಲ್ಪಕ್ಕೆ ಕೈಹಾಕಲು ಬಂದಾಗ ತನ್ನನ್ನು ಕಾಪಾಡಿದಾಕೆ. ಹೀಗೆ ಲಮಾಣೇರ ನಿಂಬೆವ್ವ ತನ್ನ ಕುಟುಂಬದ “ಜೀವದ ಜೀವ” ಎಂದಳು. 

  ಅಂದು ಸೋಮವಾರ ಯಡ್ರಾಮಿ ಸಂತೆಯದಿನ,  ಅಮ್ಮನ ಕೊಡ ತುಂಬಿ ತುಳುಕುವಷ್ಟು ರೊಕ್ಕ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ  ಕಾಲ್ಗೆಜ್ಜೆ,  ಭಂಡಾರದ ಚೀಲ  ತೋರಿಸಿದಳು. ಅದು ನನ್ನ  ತಾಯಿಗೇ ಕಡೆಯಾಗಲಿಲ್ಲ. ನನಗೂ  ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ  ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ  ಮತ್ತು ಸುಮ್ಮನಲ್ಲ.. 

ಡೇಕರಿಕೆ ಶುರುವಾಗಿ., ಕಾಲಿಗೆ ಗೆಜ್ಜೆ  ಕಟ್ಟಿಕೊಂಡಳು. ಕುಣಿಯುತ್ತಾ  ಲೋಕಾಕರ್ಷಣೆಯ ಝಲಕಿನಲಿ  ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ  ಸಂತೆಯ ಜನ  ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ. ಕನಸು ಮತ್ತು ಕಣ್ಣೀರು ಬಿಕರಿಯ ಕ್ಷಣ. ಹಾಗನಿಸಿದ್ದು ನನಗೆ. ಎಡ ಬಗಲಿಗೆ ದಾರೂ ತುಂಬಿದ ಸಣ್ಣ ತತ್ರಾಣಿ ಕಟ್ಟಿಕೊಂಡ ಎಣ್ಣೆಗಮಟಿನ ಜಡೆಯ ಮುದುಕನೊಬ್ಬ ತುಂತಣಿ, ಚೌಡಿಕೆ  ನುಡಿಸುತ್ತ ಜನರ ಹಣೆಗೆ ಭಂಡಾರ  ಹಚ್ಚುತ್ತಾ, ಬೇವಿನ ಸೊಪ್ಪಿನ ಸಡಿಲ ಸಿವುಡು ಸವರುತಾ ಉಧೋ..ಉಧೋ..ಉಧೋ.. ಉದ್ಘೋಷಣೆಗಳೊಂದಿಗೆ… ಜನ ಜಂಗುಳಿಯ ನಡುವೆ ಸೇರಿಕೊಂಡ. 

ಆರಂಭಕ್ಕೆ ಅದೆಷ್ಟೋ ವರಗಳು  ರೇಣುಕೆಯ ಮದುವೆ ಮಾಡಿಕೊಳ್ಳಲೆಂದು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಈಗೀಗಂತು ಐಹಿಕ ಸುಖದ ಮಾತುಗಳಿಂದ ವಿಮುಕ್ತಳು. ಅಬ್ಬಾ..! ಆಕೆ ಗೆಜ್ಜೆ ಕಟ್ಟಿಕೊಂಡು ಲಯಬದ್ದವಾಗಿ ಕುಣಿಯುತ್ತಾ  ಹಾಡುತ್ತಿದ್ದರೆ ಉತ್ತರಾದಿಯ ರಾಧೆ -ಕೃಷ್ಣರ ಹಾಡಿನ ಮೋಡಿ..!  ಆಹಾ!! ಮಣ್ಣ ನಾದದಲಿ ಕಲೆತು ಹೋದ ಅವಳೆದೆಗಣ್ಣುಗಳ ಕುಣಿತ. ಅಭಿಜ್ಞಾನ ಪ್ರೀತಿ ಹುಟ್ಟಿಸುವ ಅವಳ ಸಿರಿಕಂಠದ ಲೋಕ ಸಂಗೀತಕೆ ಮಾರು ಹೋಗದವರಿಲ್ಲ. ಅಂದಿನ ಆ ಪಾರಿಜಾತದ ಅಮಲು – ಘಮಲಿನ ಗಂಧರ್ವ ಗುಂಗಿನಿಂದ ನಾನಿನ್ನೂ  ಪಾರಾಗಿ ಬಂದಿಲ್ಲ. ಅದೆಲ್ಲ ಮಹಾ ಸ್ವಪ್ನದಂತೆ ನನ್ನೆದೆಯಲ್ಲಿ ಸ್ಥಾಯಿಗೊಂಡಿದೆ. ಅದೊಂದು ಮರೆಯಲಾಗದ ಸ್ಥಾಯೀಸ್ಮರಣೆ.

***********************

3 thoughts on “ಕಥಾಯಾನ

  1. ಬಯಲು ಸಿಮೇಯ ಅದ್ಭುತ ಕಥೆ…. ಕಡಕೋಳದ ಕಥೆ ಹೆಳಿದಾಗಲೆ ನಿಮ್ಮನ್ನ ಭೆಟಿಯಾಗಬೇಕೆಂಬ ಮನಸ್ಸಿತ್ತು. ಅದ್ಹೆಗೊ ಈ ಬ್ಗಾಗನಲ್ಲಿ ತಮ್ಮ ಹೆಸರು ನೊಡಿ ಕಥೆ ಒದಿದೆ ಅದ್ಭುತ ಮಲ್ಲಿಕಾರ್ಜುನ ಸರ್. ನಾನು ನಿಮ್ಮ ಪಕ್ಕದ ತಾಲೂಕು ಸಿಂದಗಿಯವನು. ನಿಮ್ಮ ನಂಬರ ಕೊಡಿ ಸರ್.

  2. ಬಳಸುವ ಪದಗಳು, ಕಟ್ಟಿಕೊಡುವ ಚಿತ್ರಣಗಳು ಎಲ್ಲವೂ ಭಾಷೆಯನ್ನ ದುಡಿಸಿಕೊಂಡಿವೆ. ಕಾಡುವ ಬರಹ.

Leave a Reply

Back To Top