ಬಿ.ಟಿ.ನಾಯಕ್ ಅವರ ಸಣ್ಣಕಥೆ ʼಮದನಪ್ಪʼ

ಮದನಪ್ಪ  

ಅಮ್ಮಾss….. ನಾನು ಮದನಪ್ಪ, ಮನೆ ಕಸವನ್ನು ಕೊಡುವುದು ಇದೆಯಾ ? ಎಂದಾಗ
ನಾಗ ಲಕ್ಷ್ಮಮ್ಮ ಮನೆಯೊಳಗಿಂದ ಕಸದ ಬುಟ್ಟಿಯೊಂದಿಗೆ  ಬಂದೇ ಬಿಟ್ಟಳು ಮತ್ತು ಆತನ ಕೈಯಲ್ಲಿ ಕೊಟ್ಟಳು.ಆತ ಅದನ್ನು ಪಡೆದೊಯ್ದ ಮದನಪ್ಪ ತನ್ನ ಗಾಡಿಯಲ್ಲಿ ಹಾಕಿ ಬಂದು,ಖಾಲಿಯಾದ ಬುಟ್ಟಿಯನ್ನು ಅಮ್ಮಗೆ ನೀಡಿ ಹೀಗೆ ಕೇಳಿದ;
‘ಅಮ್ಮಾ.. ಸಾಹೇಬರು ಇದ್ದಾರೆಯೇ ?’
‘ಇಲ್ಲ.ಇಲ್ಲ . ಹಾಂ.. ಹಾ ಮಲಗಿದ್ದಾರೆ .  ಏಕೆ…..ಏನಾಗಬೇಕು ?
‘ಅದೇ ಅಮ್ಮ.. ಇವತ್ತಿನ ದಿನ ಅವರು ಪ್ರತಿ ತಿಂಗಳು ನನಗೆ ಐವತ್ತು ರೂಪಾಯಿ ಕೊಡುತ್ತಿದ್ದರು, ಹಾಗಾಗಿ ಕೇಳಿದೆ’ ಎಂದ.ಹೌದಾss… ಅವರಾss…..ಇನ್ನೂ ಎದ್ದಿಲ್ಲ.’ಯಾಕೋ.. ಸಾಹೇಬರು ಇನ್ನೂ ಮಲಗಿದ್ದಾರೆ.  ನಿನ್ನೆ ತಡ ರಾತ್ರಿಯಾಗಿ ಮಲಗಿದ್ದಾರೆಯೇ ? ‘ ಅಥವಾ ಅವರಿಗೆ ಹುಶ್ಯಾರು ಇಲ್ವಾ ? ಎಂದು ಕೇಳಿದಾಗ ಅಮ್ಮ;’ಏನೋ ಗೊತ್ತಿಲ್ಲ.  ಅವರು ಮಲಗಿದ್ದಾರೆ ಅಷ್ಟೇ. ಯಾವಾಗ ಏಳ್ತಾರೋ ನನಗೆ ಗೊತ್ತಿಲ್ಲ. ಅದೆಲ್ಲಾ ಉಸಾಬರಿ ನಿನಗೇಕೆ ? ನಿನ್ನ ಕೆಲ್ಸ ನೀನು ನೋಡಿಕೋ ಹೋಗು ಎಂದು ಅಮ್ಮ ಸಿಡಿಮಿಡಿಗೊಂಡರು.  ಆಯಿತು ಬಿಡಮ್ಮ.. ಅವರು ಎದ್ರೇ  ಮದನಪ್ಪ ಕೇಳಿದ ಅಂತ್ಹೇಳಿಯಮ್ಮ’
‘ಅಯಿತಾಯಿತು….ನಿಂದೊಂದು ಕಿರಿ ಕಿರಿ’ ಎಂದು ಸರ್ರನೇ ಮನೆಯೊಳಕ್ಕೆ ಹೊರಟು ಹೋದಳು.
ಇತ್ತ ಮದನಪ್ಪ ತನ್ನ ಮುಖವನ್ನು ಏಕೋ ಸಣ್ಣದು ಮಾಡಿಕೊಂಡ ಮತ್ತು ಸಾಹೇಬರಾದ                             ನರಸಿಂಗಪ್ಪನವರ ಒಳ್ಳೆಯತನ ಮತ್ತು ಈ ಮೊದಲು ಅವರು ತನಗೆ ಆಸರೆಯಾದದ್ದು ನೆನಪಿಸಿಕೊಂಡದ್ದು ಹೀಗಿತ್ತು;
‘ಏನು ಮದನಪ್ಪ.. ನೀನೇನೋ ಜನರಿಗಾಗಿ ಆರೋಗ್ಯದ ಕೆಲಸ ಅಂತ ಮಾಡ್ತೀಯಾ, ಆದರೆ, ನಿನ್ನ ಆರೋಗ್ಯದ ಕಾಳಜಿ ಯಾರು ಮಾಡ್ತಾರೆ ?’
‘ಅದ್ಯಾರು ಇಲ್ಲ ಬಿಡಿ ಸಾಹೇಬರೇ, ನಾನು ನತ ದೃಷ್ಟನೇ ಸರಿ.  ಅದು ಹೇಗೆಂದರೆ, ಒಮ್ಮೆ ನಾನು ಕಸ ಕೊಂಡೊಯ್ಯುವಾಗ ಅಚಾನಕ್ಕಾಗಿ ಕರಿವೀರಮ್ಮಕ್ಕಳ ಮನೆಯಂಗಳದಲ್ಲಿ ನನ್ನ ಗಾಡಿಯಿಂದ ಕಸ ಹಾರಿ ಬಿತ್ತು.  ನಾನಾಗ ಅದನ್ನು ಗಮನಿಸಲಿಲ್ಲ. ಆದರೆ, ಆ ತಾಯಿ ಅದನ್ನೇ ರಂಪ ಮಾಡಿ, ಬಾಯಿಗೆ ಬಂದ ಹಾಗೆ ನನ್ನನ್ನು ಆಗ ಬಯ್ದಿದ್ದಳು.  ಆ ಕ್ಷಣವೇ, ನಾನು ಗಾಡಿಯಿಂದ ಇಳಿದು, ಬಿದ್ದ ಕಸವನ್ನೆಲ್ಲಾ ಬಳಿದುಕೊಂಡು ಹೋದೆ.  ಆದರೆ, ನಿಲ್ಲದ ಆಕೆಯ ಬೈಗುಳಿಂದ ಬಹಳೇ ನೊಂದುಕೊಂಡೆ.  ಅಕ್ಕ ಸುಮ್ಮನೇ ಹೇಳಿದ್ದರೆ, ನಾನು ಖುಷಿಯಿಂದ ಅದನ್ನು ಕೊಂಡೊಯ್ಯುತ್ತಿದ್ದೆ.  ಅಲ್ಲದೆ, ನಾನು ‘ತಪ್ಪಾಯಿತಕ್ಕ’ ಅಂತ ಹೇಳಿದ್ರೂ
‘ಅದೆಷ್ಟು ಸೊಕ್ಕು ನಿನ್ನದು’ ಎಂದು ಜೋರಾಗಿ ಮಾತಿನಿಂದ ತಿವಿದಿದ್ದಳು !
ಅದು ಅಲ್ಲಿಗೆ ನಿಲ್ಲಲಿಲ್ಲ,  ಮಾರನೇ ದಿನವೂ ಅದನ್ನು ಹೇಳಿ ಹೇಳಿ ನನಗೆ ಬಯ್ಯುತ್ತಲೇ ಇದ್ದಳು.  ನನ್ನ ತಪ್ಪು ಅಲ್ಲಿ ಇತ್ತು, ಆಗ ನಾನು ತಲೆ ತಗ್ಗಿಸಿಕೊಂಡೆ.  ನೀವೇ ಹೇಳಿ ಸಾಹೇಬರೇ, ದಿನಾಲೂ ಕಸ ಎತ್ತೊಯ್ಯುವ ನಾನು ಬೇರೆಯವರ ಅಂಗಳಕ್ಕೆ  ಕಸ ಹಾಕುತ್ತೇನೆಯೇ ?’
‘ಹೋಗಲಿ ಬಿಡು ಮದನ, ಏನೋ ತಪ್ಪು ತಿಳುವಳಿಗೆ ಆಗಿದೆ ಅಷ್ಟೇ.  ನೀನು ಬೇಜಾರು ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳಬೇಡ’ ಎಂದಿದ್ದರು.
‘ಆಯಿತು ಬಿಡಿ, ನಾವು ಎಷ್ಟೇ ಆಗಲಿ ಕೀಳು ವೃತ್ತಿ ಮಾಡೋವ್ರು ಎನ್ನೋದು ಅವರ ಮನಸ್ಸಿನಲ್ಲಿ ನಿಚ್ಚಳವಾಗಿ ನಾಟಿದೆ. ಹಾಗಾಗಿ, ಅವರು ನನ್ನನ್ನು ಕೀಳಾಗಿ ನೋಡ್ತಾರೆ’ ಎಂದ ನೋವಿನಿಂದ.
‘ಹುಚ್ಚಪ್ಪ..ನೀನು ಅದೇಕೆ ಕೀಳು ಅಂತ ಅನ್ಕೋಬೇಕು ?.  ನೀನು ಒಬ್ಬ ಮಹಾನ್ ಸಮಾಜ ಸೇವಕ.  ನೀನು ಮಾಡುವ ಕೆಲಸಕ್ಕೆ ಅದೆಷ್ಟು ಸಂಬಳ ಕೊಟ್ಟರೂ ಸಾಲದು. ಇಂಥಹವುಗಳಿಗೆಲ್ಲ ತಲೆ ಕೆಡಿಸಿಕೊಳ್ಳಬೇಡ.’ ಎಂದರು.
‘ಅದು ಬಿಡಿ ಸಾಹೇಬ್ರೇ .. ಒಂದೊಮ್ಮೆ ಅವರ ಚಿಕ್ಕ ಮಗು ನನಗೆ ಕಸದ ಬುಟ್ಟಿಯನ್ನು ಕೊಡಲು ಓಡೋಡಿ ಬಂತು.  ಆ ಮಗುವಿನಿಂದ ಕಸವನ್ನು ಪಡೆದು, ನಾನು ಪ್ರೀತಿಯಿಂದ ಅದರ ಕೆನ್ನೆ ತಟ್ಟಿದೆ.  ಆ ಮಗು ‘ಥ್ಯಾಂಕ್ಸ್ ಅಂಕಲ್’ ಎಂದಿತು.  ಅದನ್ನು ಕಂಡ ಅಕ್ಕ;
‘ಅದ್ಹೇಗೆ ನಿನ್ನ ಹೊಲಸು ಕೈಗಳಿಂದ ಅವನನ್ನು ಮುಟ್ಟಿದೆ ಅಂತಾ ನನಗೆ ಸಿಕ್ಕಾ
ಪಟ್ಟೆ ಬಯ್ದು ಬಿಟ್ಟಳು ಮತ್ತು ಆ ಮಗುವಿಗೆ ಕೂಡಾ;
‘ಶುದ್ಧ ಅವಿವೇಕಿ ನೀನು, ಯಾವಾಗ ನೀನು ಒಳ್ಳೇದು ಕೆಟ್ಟದು ಎಂಬುದು ಅರೀತೀಯಾ ‘ ಎಂದು ನನಗೆ ಕೇಳಿಸುವ ಹಾಗೆ ಮಗುವನ್ನು ಬಯ್ದಿದ್ದಳು.
‘ಹೌದಾ..? ಆಕೆ ಹಾಗೆ ಮಾಡಬಾರದಾಗಿತ್ತು. ನೀನು ಮಗುವಿಗೆ ಪ್ರೀತಿ ತೋರಿಸಿದೆ, ಅದನ್ನು ನೋಡಿ ಆಕೆಗೆ ಖುಷಿಯಾಗಬೇಕಿತ್ತು’ ಎಂದರು ಸಾಹೇಬರು.
‘ಇರ್ಲಿ ಬಿಡಿ ಸಾಹೇಬರೇ, ನಾನು ಮಾಡುತ್ತಿರುವ ಉದ್ಯೋಗವೇ ಹಾಗಿದೆ.  ಏನೂ ಅನ್ನೋಕ್ಕಾಗೋದಿಲ್ಲ ಮತ್ತು ಮಾಡೊಕ್ಕಾಗೋದಿಲ್ಲ’ ಎಂದ ಮದನಪ್ಪ.
‘ಬೇಡ..ಮದನ ನೊಂದುಕೊಳ್ಳಬೇಡ. ಮುಂದೊಂದು ದಿನ ಅವರು ಅರ್ಥ ಮಾಡಿಕೊಳ್ತಾರೆ. ಅದು ಬಿಡು, ನಿನಗೆ ನಾನು ಎರಡು ನೂರು ರೂಪಾಯಿ ಕೊಡ್ತೇನೆ ನೀನು ಮಾಸ್ಕ ಮತ್ತು ಕೈಗವಚಗಳನ್ನು ಖರೀದಿಸಿ ಉಪಯೋಗ ಮಾಡು. ಅಲ್ಲದೆ, ನಾನು ಅವಾಗಾವಾಗ, ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡ್ತೇನೆ. ಎಂದು ಹೇಳಿ ಆತನಿಗೆ ಸಾಹೇಬರು ಹಣ ಕೊಟ್ಟಿದ್ದರು ಮತ್ತು ಪ್ರತಿ ತಿಂಗಳು ಐವತ್ತು ರೂಪಾಯಿ ಕೂಡಾ ಕೊಡುತ್ತಿದ್ದರು.  ತಾವು ಇಲ್ಲದಾಗ ತಮ್ಮ ಮನೆಯಾಕೆಯ ಬಳಿ ಕೇಳಿ ಪಡೆದುಕೋ.’ ಎಂದು ಹೇಳಿದ್ದರೂ ಕೂಡಾ.  
ಇವೆಲ್ಲಾ ಮದನಪ್ಪನಿಗೆ ನೆನಪು ಏಕೆ ಬಂದಿತೋ ಆತನಿಗೆ ತಿಳಿಯಲಿಲ್ಲ.  ಯಥಾ ಪ್ರಕಾರ ಮದನಪ್ಪ ತನ್ನ ಕಸದ ವಾಹನವನ್ನು ಚಾಲನೆ ಮಾಡಿಕೊಂಡು ಅಲ್ಲಿಂದ ಹೊರಟು ಹೋದ.  

ಇತ್ತ ನಾಗ ಲಕ್ಷ್ಮಮ್ಮ ತಾನಿದ್ದಲ್ಲಿಂದ ತನ್ನ ಯಜಮಾನನ್ನು ಕೆಟ್ಟದಾಗಿ ಕೂಗಿ ಕರೆದಳು.                                   ಆದರೆ, ಆಕೆಗೆ ಉತ್ತರ ದೊರಕಲಿಲ್ಲ.  ಆಗ ಆಕೆಗೆ ಕೋಪ ಮೂಡಿ ಆತನು ಮಲಗಿದ                                            
ಕೋಣೆಗೆ ಹೋಗಿ ಅಲ್ಲಿ ನೋಡಿ  ಗಾಬರಿಯಾಗುತ್ತಾಳೆ. ಆತ ನೆಲಹಾಸಿನ ಮೇಲೆ ಬಿದ್ದು ಒದ್ದಾಡುತ್ತಿದ್ದ ! ಆಕೆ ತಕ್ಷಣಕ್ಕೆ ಗಾಬರಿಯಾಗಿ ಆಚೆ ಇಚೆ ಓಡಾಡುತ್ತಾ ಜೋರಾಗಿ ಕೂಗಿಕೊಂಡಳು.  ಆಗ ಅಕ್ಕ ಪಕ್ಕದ ಮನೆಯವರೆಲ್ಲರೂ ಗಾಬರಿಗೊಂಡರು.  
ಅವರಲ್ಲಿ ಕೆಲವರು ಓಡೋಡಿ ಬಂದು;
‘ಏನಾಯಿತು ಅಕ್ಕಾ’ ಎಂದು ಕೇಳಿದಾಗ;  ಆಕೆ ತನ್ನ ಯಜಮಾನ ಬೋರಲು ಬಿದ್ದದ್ದನ್ನು ತೋರಿಸಿ ಅಳುತ್ತಲೇ ನಿಂತಳು.  ಆ ಕ್ಷಣ ತಡ ಮಾಡದೆಯೇ, ಪಕ್ಕದ ಮನೆಯಾತ ಆನಂದಣ್ಣ
ಆಟೋಗೆ ಕರೆ ಮಾಡಿ ತರಿಸಿ, ಅದರಲ್ಲಿ ಆತನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ತಕ್ಷಣವೇ  ನರಸಿಂಗಪ್ಪನಿಗೆ ಚಿಕಿತ್ಸೆ ಆರಂಭವಾಯಿತು.  ಆನಂದಣ್ಣ ಅನಾರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ, ಆತನಿಗೆ ಹಗುರವಾದ ‘ಹೃದಾಯಾಘಾತ’ ಆಗಿದೆ ಎಂದು ಹೇಳಿದರು.
ನಾಗಲಕ್ಶ್ಮಮ್ಮ ಅಳುತ್ತಲೆಯೇ ಇದ್ದಳು.  ಆಕೆಗೆ ಪಕ್ಕದ ಮನೆಯ ಶಾರದಮ್ಮ
ಸಮಾಧಾನಿಸುತ್ತಿದ್ದರು.

ಇತ್ತ ಮಾರನೇ ದಿನ ಬೆಳಗ್ಗೆ ಮದನಪ್ಪ ತನ್ನ ಉದ್ಯೋಗ ಪ್ರಾರಂಭಿಸಿ, ಸಾಹೇಬರ ಮನೆಯ ಹತ್ತಿರಕ್ಕೆ ಬಂದ.  ಅವರ ಮನೆ ಬೀಗ ಹಾಕಿರುವುದನ್ನು ಕಂಡು, ಅಲ್ಲಿ ವಿಚಾರಿಸಿದ.  ಆಗ ಅವರು ಪರಿಸ್ಥಿತಿಯನ್ನು ವಿವರಿಸಿದರು. ಆ ಸಮಯದಲ್ಲಿ, ಸಾಹೇಬರ ಸುದ್ದಿ ಕೇಳಿ ಆತನಿಗೆ                          ಅಸಮಾಧಾನವಾಯಿತಲ್ಲದೇ, ಅವರನ್ನು ಕಾಣಲು ತವಕ ಉಂಟಾಗಿ, ಕಸದ ಗಾಡಿಯನ್ನು                                                                                                                           ಅಲ್ಲಿಯೇ ಬಿಟ್ಟು, ಆತನೂ ಆಸ್ಪತ್ರೆ ಕಡೆಗೆ ಓಡುತ್ತಲೇ ಹೋದ. ಸುಮಾರು ಇಪ್ಪತ್ತು ನಿಮಿಷಗಳಾದ ಮೇಲೆ ಮದನಪ್ಪ ಆಸ್ಪತ್ರೆ ತಲುಪಿ ಅಲ್ಲಿ ಆ ಬಗ್ಗೆ ವಿಚಾರಿಸಿದ. ಆಗ ಆತನಿಗೆ ಸಾಹೇಬರು ಐ.ಸಿ.ಯು.ನಲ್ಲಿ ಇರುವುದು ತಿಳಿದು, ಆ ಕಡೆಗೆ ಹೋದ.  ಅಲ್ಲಿ ಒಂದು ಮೂಲೆಯಲ್ಲಿ ನಾಗಲಕ್ಷ್ಮಮ್ಮ ದುಃಖಿಸುತ್ತಾ ಕುಳಿತಿದ್ದಳು.  ಆತನ ದೃಷ್ಟಿ ಸಾಹೇಬರ ಕಡೆಗೆ ಹೋದಾಗ, ಆತನಿಗೆ ಕರುಳು ಕಿತ್ತು ಬಂದಂತಾಯಿತು. ಏಕೆಂದರೆ, ಸಾಹೇಬರು ಕೈ ಕಾಲುಗಳನ್ನು ಸಂಕಟದಿಂದಲೇ                                                                                                                                 ಹೊರಳಾಡಿಸುತ್ತಲೇ ಇದ್ದರು. ಅವರು ಅದೆಷ್ಟು ನೋವು ಅನುಭವಿಸುತ್ತಲಿದ್ದಾರೆಂದು  ಅವರ ನೋವಿನ ಭಾಧೆ, ಒದ್ದಾಡುವಿಕೆಯಿಂದ  ಅರ್ಥವಾಗುತ್ತಿತ್ತು.  ಅವರು ಒಮ್ಮೊಮ್ಮೆ ಉಂಟಾಗಿ                                     ಪುಟಿದೇಳುತ್ತಿದ್ದರು.  ಅವರ ಯಾತನೆ ನೋಡಿ ಮದನಪ್ಪನಿಗೆ ತೀವ್ರ ದುಃಖ                               ಅಳುವದಕ್ಕೆ ಪ್ರಾರಂಭಿಸಿದ.  ಆತನ ಅಳುವುದು ನಿಲ್ಲಲೇ ಇಲ್ಲ.  ಅಲ್ಲಿ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಹೊರಗೆ ಕರೆದೊಯ್ದರು. ಅಲ್ಲಿಯೂ ಆತ ಅಳುವುದನ್ನು ನಿಲ್ಲಿಸಲಿಲ್ಲ. ಅವನು ಅತ್ತೂ ಅತ್ತೂ ಹಾಗೆಯೇ ಕುಸಿದು ಬಿದ್ದ.  ಅಕ್ಕ ಪಕ್ಕದವರು ಆತನ ಮುಖಕ್ಕೆ ನೀರನ್ನು ಚಿಮುಕಿಸಿದಾಗ, ಆತನಿಗೆ ಕೊಂಚ ಪ್ರಜ್ಞೆ ಮೂಡಿತು.  ಆಮೇಲೆ ಆತನಿಗೆ ಸ್ವಲ್ಪ ನೀರು ಕುಡಿಸಿ, ಒಂದು ಕಡೆ ಕೂಡ್ರಿಸಿದರು.  ಆಗ ನಾಗ ಲಕ್ಶ್ಮಮ್ಮ ಮೆಲ್ಲಗೆ ಆತನ ಬಳಿಗೆ ಬಂದು;
‘ಮದನಣ್ಣ…ನಿನ್ನ ಸಾಹೇಬ್ರಿಗೆ ಏನೂ ಆಗುವುದಿಲ್ಲ ತಾನೇ ?’ ಎಂದಾಗ;
‘ಅಮ್ಮಾ.. ನನ್ನ ಸಾಹೇಬ್ರು  ದೇವರಂಥಹವರು. ಅವರಿಗೆ ಏನೂ ಆಗುವುದಿಲ್ಲ, ಅಮ್ಮಾ ನೀವು ಧೈರ್ಯಗೆಡಬಾರದು.’ ಎಂದ.
‘ಅಲ್ಲಪ್ಪ, ನನ್ನ ಮಕ್ಕಳು ಇನ್ನೂ ಯಾರೂ ಬಂದಿಲ್ಲ. ಆದರೆ, ನೀನು ನನ್ನ ಮಗನಾಗಿ ಓಡೋಡಿ ಬಂದಿದ್ದೀಯಾ.  ನನಗೆ ಬಹಳೇ ಹೆಮ್ಮೆ ಎನ್ನಿಸುತ್ತದೆ’ ಎಂದಳು.
‘ಅಮ್ಮಾ…ನೀವು ನನಗೆ ಮಗ ಎಂದಿರೀ.  ನನಗೆ ಈ ದುಃಖದಲ್ಲಿ ಸಂತೋಷ ತಡೆದುಕೊಳ್ಳಲು ಆಗುತ್ತಿಲ್ಲ.’ ಎಂದು ಮತ್ತೇ ದುಃಖಿಸಲಾರಂಭಿಸಿದ.  ಆಗ ನಾಗ ಲಕ್ಶ್ಮಮ್ಮ ಹೀಗೆ ಹೇಳಿದರು;
‘ಅಪ್ಪಾ.. ನೀನು ನಿನ್ನೆ ಸಾಹೇಬರನ್ನು ಕೇಳಿದೆ.  ಅವರು ಪೇಪರ್ ಓದುತ್ತಲೇ, ಅಲ್ಲಿಯೇ ಮಂಚದ ಮೇಲೆ ಕುಳಿತಿದ್ದರು.  ಆಗ ನಾನು ನಿನಗೆ ಸುಳ್ಳು ಹೇಳಿದೆ.  ಆದರೆ, ಅದೇ ನಿಜ ಆಯಿತು ಅಲ್ವ. ?’
‘ಇಲ್ಲಮ್ಮ.. ನೀವು ಅವರಿಗೆ ತೊಂದರೆ ಕೊಡಬಾರದೆಂದು ಹಾಗೆ ಹೇಳಿದ್ದೀರಿ ಅಷ್ಟೇ.  ನಾನೇನೂ ತಪ್ಪು ತಿಳಿದಿದ್ದಿಲ್ಲ’ ಎಂದಾಗ ;
ನಾಗ ಲಕ್ಷ್ಮಮ್ಮ ಅಳಲು ಪ್ರಾರಂಭಿಸಿದಳು.  ಆಗ ಮದನಣ್ಣ;
‘ಅಮ್ಮಾ ಈಗ ನೀವು ಕಣ್ಣೀರು ಹಾಕ ಬೇಡಿ ?’ ಎಂದ.
‘ನಾನು ಐವತ್ತು ರೂಪಾಯಿ ಸಲುವಾಗಿ ಸುಳ್ಳು ಹೇಳಿದೆ.  ಅದೇ, ನನಗೆ ಘಾಸಿಯಾಯಿತು’
‘ಹಾಗೇನಿಲ್ಲ ತಾಯಿ, ಏನೋ ಸಹಜವಾಗಿ ನುಡಿದಿದ್ದೀರಿ.  ನಮ್ಮ ಸಾಹೇಬರು ಎಂದಿನಂತೆ ಹುಷಾರು ಆಗುತ್ತಾರೆ, ನೀವು ನೊಂದು ಕೊಳ್ಳಬೇಡಿ’ ಎಂದ.
‘ಅಷ್ಟಾದರೆ ಸಾಕು ಮದನಣ್ಣ’ ಎಂದು ಮುಖ ಮುಚ್ಚಿಕೊಂಡು ಮತ್ತೇ ದುಃಖಿಸತೊಡಗಿದಳು.  ಆಕೆ ಅತ್ತೂ ಅತ್ತೂ ಕೊನೆಗೆ ಆಕೆಗೆ ಕಣ್ಣೀರು ಬತ್ತಿ ಹೋದವೇನೋ ಎಂದನಿಸಿತು.  ಏಕೆಂದರೆ,
ಆಕೆ ತದೇಕ ದೃಷ್ಟಿಯಿಂದ ಏನನ್ನೋ ನೋಡುತ್ತಾ ಸ್ಥಬ್ದವಾಗಿ ಒಂದು ಕಡೆ ಕುಳಿತಳು.
ಆಗ ಮದನಣ್ಣ ಇನ್ನೊಂದು ಬಾರಿ ಸಾಹೇಬರನ್ನು ನೋಡಲು ಒಳಗೆ ಹೋಗುವವನನ್ನು ಸಿಬ್ಬಂದಿ ತಡೆದು;
‘ಏನೂ ಗಲಾಟೆ ಮಾಡುವಂತಿಲ್ಲ…ಸುಮ್ಮನೆ ಹೋಗಿ, ನೋಡಿಕೊಂಡು ಎರಡೇ ಎರಡು ನಿಮಿಷದಲ್ಲಿ ಮರಳ ಬೇಕು’ ಎಂದು ದಿಗ್ಬಂಧನ ಮಾಡಿದರು.!
ಆತ ಹಾಗೆಯೇ ಮಾಡಿ, ಒಳಗಿರುವ ದುಃಖವನ್ನು ಅದುಮಿಕೊಂಡು ಹಾಗೆಯೇ ಹೊರಗೆ ಬಂದು,  ಮತ್ತೇ ಅತ್ತು ಸಾಹೇಬರಿಗಾಗಿ ದೇವರಲ್ಲಿ ಪ್ರಾರ್ಥಿಸಿದ.  ಆನಂತರ, ತನ್ನ ‘ಕಸದ ಕಾಯಕ’ ಮುಂದುವರೆಸಲು, ಅಮ್ಮಗೆ ಹೇಳಿ ಹೊರಟು ಹೋದ.

ಮಾರನೇ ದಿನ ಮತ್ತದರ ಮಾರನೆಯ ದಿನ ಮದನಪ್ಪ ಆಸ್ಪತ್ರೆಗೆ ಹೋಗಿ ಸಾಹೇಬರನ್ನು ನೋಡಿಕೊಂಡು ಬಂದ. ಅವರ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಕಂಡು ಹಿಗ್ಗಿದ.  ಆದರೆ, ಅವರಿಗೆ ಎಚ್ಚರವಿರಲಿಲ್ಲವಾದರೂ, ವೆಂಟಿಲೇಟರನ್ನು ತೆಗೆದಿದ್ದರು. ಅಂದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು ಎಂದೇ ಅರ್ಥ.!  ಅಮ್ಮ ಅಲ್ಲಿ ಎಲ್ಲೂ ಕಾಣಲಿಲ್ಲ. ಅಲ್ಲಿ ವಿಚಾರಿಸಿದ. ಮೇಲೆ ಇಲ್ಲೇ ಎಲ್ಲೋ ಮೇಲೆ ಕೆಳಗೆ ಇರಬಹುದೆಂದು ಅವರು ಹೇಳಿದರು.                            ಆದರೆ, ಅಮ್ಮ ಹಣ ಜೋಡಿಸುವ ಸಲುವಾಗಿ ಪರದಾಡುತ್ತಿದ್ದರು ಎಂದು ತಿಳಿಯಿತು.  ಆಗ ಒಮ್ಮಿಂದೊಮ್ಮೆಲೆ ಅವರು ಬಂದರು.  ಮದನಪ್ಪ ಅವರ ಜೊತೆಗೆ ಖುಷಿಯಾಗಿ ಮಾತಾಡಿದ.
ಆಗ ಆತ ತಲೆ ಕೆರೆಯುತ್ತಾ ಹೀಗೆ ಕೇಳಿದ;
‘ಅಮ್ಮಾ ನಾನು ಚಿಕ್ಕವನು, ನಿಮಗೆ ಏನೋ ಹೇಳಬೇಕೆಂದಿದ್ದೇನೆ ‘ ಎಂದ.
‘ಏನು.. ಏನದು ?’
‘ಅದೇ ನೀವು ಸಾಹೇಬರ ಆಸ್ಪತ್ರೆ ಬಿಲ್ ಗಾಗಿ ಹಣ ಹೊಂದಿಸುವುದು ತಿಳಿಯಿತು.  ಅದರಲ್ಲಿ ನಾನೇನಾದರೂ ಮಾಡಬಲ್ಲೆನೇ ?’
‘ನೀನು ಏನೂ ಮಾಡುವುದು ಬೇಡ.  ಅದಾಗಲೇ ಹೊಂದಿಕೆ ಮಾಡಲಾಗಿದೆ.  ನನ್ನ ಮಕ್ಕಳು ದೂರದಲ್ಲಿದ್ದರೂ, ಹಣವನ್ನು ಕಳಿಸಿದ್ದಾರೆ.  ಏನೂ ತೊಂದರೆ ಇಲ್ಲ’ ಎಂದಳು.
‘ಸರಿ ಅಮ್ಮ ನಾನು ಬರ್ತೇನೆ’ ಎಂದು ಹೇಳಿ ಹೊರಟುಬಿಟ್ಟ.

ಒಂದೆರಡು ದಿನಗಳಾದ ಮೇಲೆ ಮದನಪ್ಪ ತನ್ನ ಉದ್ಯೋಗದಂತೆ ಅಲ್ಲಲ್ಲಿ ತಿರುಗಾಡಿ, ನರಸಿಂಗಪ್ಪನ ಮನೆ ಮುಂದೆ ಬಂದು ನಿಂತ.  ಆತನಿಗೆ ಆಶ್ಚರ್ಯವಾಯಿತು !
ಅದೇನೆಂದರೆ, ಅಲ್ಲಿ ಅಂಗಳಕ್ಕೆ ನೀರನ್ನು ಸಿಂಪಡಿಸಿ, ರಂಗೋಲಿ ಹಾಕಲಾಗಿತ್ತು. ಅಂದರೆ, ಸಾಹೇಬರು ಮನೆಗೆ ಬಂದಿರಬಹುದಾ ಅಥವಾ ಇಂದು ಬರುತ್ತಾರೆಯೇ ಎಂಬ ಪ್ರಶ್ನೆ                      
ಆತನನ್ನು ಕಾಡಿತು.  ಆಗ ಆತ ತವಕದಿಂದ ಮನೆಯೊಳಕ್ಕೆ ಹೋದ. ಅಲ್ಲಿ ಅಮ್ಮನನ್ನು ಕಂಡು;
‘ಅಮ್ಮ ಸಾಹೇಬರು ಬಂದಿದ್ದಾರೆಯೇ ?’ ಎಂದ.
‘ಇಲ್ಲ.. ಅದರ ವ್ಯವಸ್ಥೆ ನಡೆದಿದೆ. ಆದರೆ, ಇಂದು ನೀನು ಅವರಿಗಾಗಿ ಕಾಯಬೇಡ.  ನಾಳೆ ಸರಿಯಾಗಿ ಮಧ್ಯಾನ್ಹ ಒಂದು ಗಂಟೆಗೆ ಇಲ್ಲಿಗೆ ಬಂದು ಬಿಡು. ಅದನ್ನು ಮಾತ್ರ                          
ತಪ್ಪಿಸಬೇಡ’ ಎಂದಳು.
‘ಅದೇನು, ಅಮ್ಮ ಮಧ್ಯಾನ್ಹಕ್ಕೆ ಏಕೆ.. ಬೆಳಗ್ಗೆ ಹೇಗೂ ನಾನು ಇಲ್ಲಿಗೆ ಬರುತ್ತೀನಿ ಅಲ್ವ ?’
‘ನಿನಗೆ ತಿಳಿಯುವುದಿಲ್ಲ.  ಈ ವಿಷಯದಲ್ಲಿ ನೀನು ಏನೂ ವಿಚಾರ ಮಾಡುವಂತಿಲ್ಲ. ನಾನು ಹೇಳಿದ ಹಾಗೆ ಕೇಳಬೇಕು ಅಷ್ಟೇ’ ಎಂದಳು.
‘ಆಯಿತಮ್ಮ ನಾಳೇನೇ, ಒಂದು ಗಂಟೆಗೆ ತಪ್ಪದೆ ಬರ್ತೇನೆ’ ಎಂದು ಹೋಗಿಯೇ ಬಿಟ್ಟ !

ಮದನಪ್ಪ ಮಾರನೇ ದಿನ ಮಾಮೂಲಿನಂತೆ ಮುಂಜಾನೆ ಎದ್ದವನೇ ತನ್ನ ಉದ್ಯೋಗಕ್ಕೆ ಹೋಗಲು ಅಣಿಯಾದ. ತನ್ನ ಕಾಯಕದಂತೆ ಎಲ್ಲರ ಮನೆಗೂ ಹೋಗಿ, ಕಸವನ್ನು                
ಸಂಗ್ರಹಿಸಿದ.  ಏನೋ ಆತನಿಗೆ ಸಾಹೇಬರ ಮನೆ ಕಡೆಗೆ ಲಕ್ಷ್ಯ ಹೋಯಿತು.  ಆದರೆ, ಅಮ್ಮ ಮಧ್ಯಾನ್ಹ ಬರುವಂತೆ ಹೇಳಿದ್ದಾರೆ.  ಹಾಗಾಗಿ, ಈಗ ಹೋಗುವಂತಿಲ್ಲ ಎಂದು, ಬೇರೆ ಯಾರ ಕಡೆಯಿಂದಲಾದರೂ ವಿಚಾರಿಸಿದರಾಯಿತು ಎಂದು, ಅಲ್ಲೇ ಹೋಗುತ್ತಿದ್ದ ಪರಮೇಶಣ್ಣನಲ್ಲಿ ವಿಚಾರಿಸಿ ದಾಗ; ಆತ ಹೀಗೆ ಹೇಳಿದ;
‘ಅವರು ಇನ್ನೂ ಆಸ್ಪತ್ರೆಯಿಂದ ಬಂದಿಲ್ಲವಂತೆ’ ಎಂದ.
‘ಅರೆ ! ಅಮ್ಮ ನನಗೆ ಮಧ್ಯಾನ್ಹ ಒಂದು ಗಂಟೆಗೆ ಬರಲಿಕ್ಕೆ ಹೇಳಿದ್ದಾರೆ,  ಪರಮೇಶಣ್ಣ ನೀನು ಸರಿಯಾಗಿ ವಿಚಾರಿಸಿದೆಯೇ ?’
‘ಹ್ಞೂ ಕಣಪ್ಪ.. ನೀನೇ ಬೇಕಾದರೆ, ಅಲ್ಲಿಗೆ ಹೋಗಿ ಕೇಳು’ ಎಂದ.
‘ಆಯಿತು ಬಿಡಣ್ಣ.. ನೀನು ಹೇಳಿದ್ದೇ ನಿಜ ಇರಬಹುದು’ ಎಂದು ಆತನನ್ನು ಹೋಗಲು ಬಿಟ್ಟ.
ಆದರೂ ಆತನ ಮನಸ್ಸು ಕೇಳಲಿಲ್ಲ.  ಮನೆಯ ಹತ್ತಿರಕ್ಕೆ ಹೋದ. ಅಲ್ಲಿಯೇ ದೂರದಲ್ಲಿ ನಿಂತು ನೋಡುತ್ತಲೇ ಇದ್ದ.  ಆಗ ಅವನ ಪರಿಚಯದ  ರಂಗಮ್ಮ ಅಲ್ಲಿ ಎದುರಾದಳು.  ಆಗ ಆಕೆಯೊಡನೆ ವಿಷಯ ವಿಚಾರಿಸಿದಾಗ, ಆಕೆ ಹೀಗೆ ಹೇಳಿದಳು;
‘ಮದನಪ್ಪ,. ಅವರಂತೂ ಇನ್ನೂ ಬಂದಿಲ್ಲ. ಬಹುಶಃ ಬರಬಹುದೇನೋ.’ ಎಂದಳು.
‘ಅದು ಹೇಗೆ ಹೇಳ್ತೀಯಾ ರಂಗಮ್ಮಕ್ಕ ?’ ಎಂದಾಗ ;
ಆಕೆ ಆ ಮನೆಯಂಗಳದಲ್ಲಿರುವ ಬಣ್ಣ ಬಣ್ಣದ ರಂಗೋಲಿ ಚಿತ್ತಾರವನ್ನು ತೋರಿಸಿದಳು.  ಆಗ ಮದನಪ್ಪನಿಗೆ ಖುಷಿಯಾಯಿತು. ಇನ್ನೇನು ತಾನು ಒಂದು ಗಂಟೆಗೆ ಬರುವುದು ನಿಶ್ಚಿತ ಎಂದು ಕೊಂಡು, ಅಲ್ಲಿಂದ ಹೊರಟು ಬಿಟ್ಟ.

ಮದನಪ್ಪನು  ಒಂದು ಗಂಟೆ ಸಮಯ ಯಾವಾಗ ಆಗುವುದೋ ಎಂಬುದು                            ಕಾಯುತ್ತಿದ್ದ.  ಹಾಗೋ ಹೀಗೋ ಆ ಸಮಯ ಹತ್ತಿರಕ್ಕೆ ಬಂದಿತು. ಕೊಂಚ ಮುಂಚಿತವಾಗಿ ಅಲ್ಲಿಗೆ ಹೋದರಾಯಿತು ಎಂದು, ತನ್ನ ವಾಹನವನ್ನು ಒಂದು ಕಡೆ ನಿಲ್ಲಿಸಿ. ನರಸಿಂಗಪ್ಪನವರ ಮನೆ ಕಡೆಗೆ ಹೋದ. ಅಲ್ಲಿ ಕೆಲವು ಜನರು ಒಳಗೆ ಹೋಗುತ್ತಿದ್ದರು ಮತ್ತು ಕೆಲವರು ಒಳಗಿನಿಂದ ಬರುತ್ತಿದ್ದರು.  ಆತನಿಗೆ ಸಾಹೇಬರು ಬಂದಿದ್ದಾರೆ ಎಂದು ಖಾತ್ರಿಯಾಗಿ, ತಾನೂ                
ಮನೆಯೊಳಗೆ ಹೋದ.  ಅಲ್ಲಿ ಅಮ್ಮ ಆ ಕ್ಷಣಕ್ಕೆ ಎದುರಿಗೆ ಬಂದರು, ಮತ್ತು ಈತನನ್ನು ಒಳಗೆ ಕರೆದಾಗ, ಆತ ಅಲ್ಲಿಯೇ ಬಾಗಿಲ ಬಳಿ ನಿಂತುಕೊಂಡನು.  ಆಮೇಲೆ ಅಮ್ಮ ಪುನಃ ಕರೆದಾಗ;
‘ಅಮ್ಮ ಸಾಹೇಬರು ಎಲ್ಲಿದ್ದಾರೆ ?’
‘ಅದೋ ಪಕ್ಕದ ರೂಮಿನಲ್ಲಿದ್ದಾರೆ, ಹೋಗಿ ಭೇಟಿಯಾಗು’ ಎಂದಾಗ, ಆತ ಚೆಂಗನೇ ಹಾರಿದವನಂತೆ ಕ್ಷಣ ಮಾತ್ರದಲ್ಲಿ ಅವರ ರೂಮಿಗೆ ಹೋಗಿಬಿಟ್ಟ !
ಅಲ್ಲಿ ಸಾಹೇಬರು ಮಂಚದ ಮೇಲೆ ಕುಳಿತಿದ್ದರು. ಈತನನ್ನು ಕಂಡು ಅವರು ಸನ್ನೆ ಮಾಡಿ ಕರೆದು, ಪಕ್ಕಕ್ಕೆ ಕುಳಿತುಕೊಳ್ಳುವಂತೆ ಹೇಳಿದರು.  ಆದರೆ, ಆ ಗೋಜಿಗೆ ಮಾದಣ್ಣ ಹೋಗಲಿಲ್ಲ, ಅಲ್ಲಿಯೇ ಮುಂದೆ ನಿಂತುಕೊಂಡು ಅವರ ಅರೋಗ್ಯ ವಿಚಾರಿಸಿದ. ಆಗ ಅವರು;
‘ಈಗ ಏನೂ ತೊಂದರೆ ಇಲ್ಲ’ ಎಂದು ಹೇಳಿದಾಗ ಖುಷಿಗೊಂಡು;
‘ಸಾಹೇಬರೇ, ನಾನು ಹೊರಡುತ್ತೇನೆ’ ಎಂದು ಹೇಳಿ ತಯಾರಾದ. ಆಗ ಅಮ್ಮ ಎದುರಿಗೆ ಬಂದು ಹೀಗೆ ಹೇಳಿದಳು;
‘ಮದನಣ್ಣ ಒಂದು ಗಂಟೆಗೆ ಇನ್ನೂ ಎಷ್ಟು ಸಮಯವಿದೆ ? ಎಂದಳು.  
‘ಆಯ್ಯೋ ಅಮ್ಮ ನಾನು ಸಾಹೇಬರನ್ನು ಭೇಟಿ ಮಾಡಿದ್ದೇ ಒಂದು ಗಂಟೆಗೆ’ ಎಂದ.
‘ಅದು ಆಯಿತು, ಈಗ ಊಟದ ಸಮಯ.  ನೀನು ನಮ್ಮಲ್ಲಿ ಊಟ ಮಾಡ್ಕೊಂಡೇ ಹೋಗಬೇಕು’ ಎಂದಳು.  ಅದಕ್ಕೆ, ನರಸಿಂಗಪ್ಪ ಕೂಡ ತಮ್ಮ ಕ್ಷೀಣ ಧ್ವನಿ ಮೂಡಿಸಿ ಸನ್ನೆ ಮಾಡಿ, ತಾವು ಕೂಡ ತಯಾರಾದರು. ಆಮೇಲೆ ದೊಡ್ಡ ಹಾಲ್ ನಲ್ಲಿ, ಒಂದೇ ಒಂದು ತಟ್ಟೆ ಇಡಲಾಗಿತ್ತು. ಅಲ್ಲಿ ಮದನಣ್ಣನನ್ನು ಕೂಡ್ರಿಸಿದರು.  ಮಾದಣ್ಣನಿಗೆ ಮುಜುಗರ ಆಯಿತು.
‘ಬೇಡ ಅಮ್ಮ’ ಎಂದ ಅವನ ಮಾತನ್ನು ಆಕೆ ಕೇಳಲೇ ಇಲ್ಲ. ತಟ್ಟೆಗೆ ಎಲ್ಲಾ ಪದಾರ್ಥಗಳನ್ನು ಬಡಿಸಿ ಉಣ್ಣಲಿಕ್ಕೆ ಹೇಳಿದಳು. ಆತ ತಟ್ಟೆಯಲ್ಲಿದ್ದ ಪದಾರ್ಥಗಳನ್ನು ನೋಡಿ ಗಾಬರಿಯಾದ. ಅಲ್ಲಿ ಸೇವಿಗೆ ಪಾಯಸದಿಂದ ಹಿಡಿದು ಎಲ್ಲವನ್ನು ಹಾಕಿದ್ದರು.  ಆತನ ಪಕ್ಕದಲ್ಲಿಯೇ ನರಸಿಂಗಪ್ಪ ಒಂದು ಕುರ್ಚಿ ಹಾಕಿಕೊಂಡು ಕುಳಿತುಕೊಂಡರು. ಹಾಗೋ ಹೀಗೋ ಮದನಣ್ಣ  ಬಡಿಸಿದ್ದನ್ನು ಎಲ್ಲವನ್ನೂ ಬಿಡದೇ ತಿಂದು ಮುಗಿಸಿದ. ಆಮೇಲೆ ಆತ ತಟ್ಟೆ ತೆಗೆಯಲು ಮುಂದಾದಾಗ, ಅಮ್ಮ ತಡೆದು ತಾನೇ ತೆಗೆದಳು. ಒಟ್ಟಿನಲ್ಲಿ ಮನೆ ಮಗನಿಗೆ ನೀಡುವ ವಾತ್ಸಲ್ಯ ಸ್ಪರ್ಶ ಅಲ್ಲಿ ಆತನಿಗಿತ್ತು. ಆತ ಊಟವಾದ ಮೇಲೆ ಕೇಳಿದ;
‘ಹೀಗೇಕೆ ನನಗೆ ಈ ವ್ಯವಸ್ಥೆ ಮಾಡಿದಿರಿ ?’ ಎಂದಾಗ;
‘ಮದನಣ್ಣ, ನೀನು ನಮಗೆ ನಿಜವಾಗಿಯೂ ಮಗನಾಗಿ ನಮ್ಮ ಬೆನ್ನ ಹಿಂದೆ ಇದ್ದೆ ಅಂತಲೇ ನಿಮ್ಮ ಸಾಹೇಬರು ಪುನರ್ಜನ್ಮ ಪಡೆದರು’ ಎಂದಳು.
‘ಹಾಗಂತಾ ಯಾರು ಹೇಳಿದರು ಅಮ್ಮ.  ನೀವು ನಿಮ್ಮ ಯಜಮಾನರನ್ನು ಕಾಪಾಡಿಕೊಂಡಿದ್ದೀರಿ, ಬೇರೆ ಯಾರೂ ಏನೂ ಮಾಡಿಲ್ಲ’ ಎಂದಾಗ ಆಕೆ ತಡೆದು;
‘ನೀನು ಏನೂ ಹೇಳಬೇಡ,  ನಾನು ನಿನ್ನೊಳಗಿನ ಪ್ರೀತಿ ವಾತ್ಸಲ್ಯ ಅರಿತುಕೊಂಡಿದ್ದೇನೆ’ ಎಂದಾಗ, ಆತ ಮತ್ತೇ ಭಾವುಕನಾಗಿ ಕಣ್ಣೀರು ಹಾಕಿದ.  ಆದರೆ, ಅವು ಈಗ ಆನಂದ ಭಾಷ್ಪಗಳಾಗಿ ಮುತ್ತಿನಂತೆ ಉದುರಿದವು.


8 thoughts on “ಬಿ.ಟಿ.ನಾಯಕ್ ಅವರ ಸಣ್ಣಕಥೆ ʼಮದನಪ್ಪʼ

  1. ಒಳ್ಳೆಯ ಕತೆ.
    — ಎಸ್ ಆರ್ ಸೊಂಡೂರು ಗಂಗಾವತಿ

  2. ಮಾನವತೆ ತುಂಬಿದ ಕಥೆ ಚೆನ್ನಾಗಿದೆ.

  3. ಮನಕಲಕುವ ಕಥೆ. ಎಲ್ಲರ ಮನತಟ್ಟುವಂಥಹುದು. ನಾಯಕರೇ ಮನದುಂಬಿದ ಅಭಿನಂದನೆಗಳು.

Leave a Reply

Back To Top