“ಅಡ್ನೇಡಿ ಸಬ್ ರಜಿಸ್ಟ್ರಾರ್!” ಒಂದು ಸಣ್ಣಕಥೆ ಕೆ.ಬಿ.ವೀರಲಿಂಗನಗೌಡ್ರ ಅವರಿಂದ

ಓರ್ವ ತಾಯಿ ಮೊಮ್ಮಗನಿಗೆ ತನ್ನ ಹೆಸರಲ್ಲಿದ್ದ ಆಸ್ತಿಯನ್ನು ಗಿಫ್ಟ್ ಮಾಡುವುದಾಗಿ ತಿಳಿಸಿದಳು. ಮಗ ಮೊದಲು ಗೊತ್ತಿರುವ ಬಾಂಡ್ ರೈಟರ್ ಹತ್ತಿರ ವಿಚಾರಿಸಿದನು, ಅವ್ರು “ಗಿಫ್ಟ್ ಮಾಡ್ಲಿಕ್ಕೆ ಬರುತ್ತೆ ನಾಳೆ ನಿಮ್ಮೆಲ್ಲ ಕಾಗದಪತ್ರ ತಗೊಂಡು ನಮ್ಮ ಕಚೇರಿಗೆ ಬರ‍್ರಿ” ಅಂದ್ರಂತೆ ಆ ಪ್ರಕಾರ ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒಟ್ಟುಮಾಡಿಕೊಂಡು ಬಾಂಡ್ ರೈಟರ್ ಕಚೇರಿ ತಲುಪ್ತಾನೆ ಮಗ, ಬಾಂಡ್ ರೈಟರ್ “ಯಾವುದಕ್ಕೂ ಒಂದ ಮಾತ ಸಬ್ ರಜಿಸ್ಟ್ರಾರ್ ಕೇಳ್ಕೊಂಡು ಬರೂಣ ಬರ‍್ರಿ” ಅಂತಾ ಅವನನ್ನು ಕರ‍್ಕೊಂಡು ಸಬ್ ರಸಜಿಸ್ಟ್ರಾರ್ ಕಚೇರಿಗೆ ಹೋದ್ರು, ಅಲ್ಲಿ ಎಲ್ಲ ದಾಖಲೆ ನೋಡಿ ಸಬ್ ರಜಿಸ್ಟ್ರಾರ್ “ನಿಮ್ಮ ತಾಯಿ ಮೊಮ್ಮಗನಿಗೆ ಗಿಫ್ಟ್ ಮಾಡಲು ಬರಲ್ಲ, ಮೊದಲು ನಿಮ್ಮ ಹೆಸರಿಗೆ ವಾಟ್ನಿಪತ್ರ ಮಾಡಸ್ಕೊಬೇಕು, ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆಯಾದ್ಮೇಲೆ ನೀವು ನಿಮ್ಮ ಮಗನಿಗೆ ವರ್ಗಾವಣೆ ಮಾಡಬೇಕು” ಅಂದ್ರಂತೆ.
 ಅನಿವಾರ್ಯವಾಗಿ ಮಗ ಒಪ್ಪಿಕೊಂಡು, ಅವರಾದೇಶದಂತೆಯೇ ಅಮ್ಮನಿಗೆ ತಿಳಿಹೇಳಿ ತನ್ನ ಹೆಸರಿಗೆ ಆಸ್ತಿ ನೋಂದಣಿ ಮಾಡಿಸ್ಕೊಳ್ತಾನೆ.

ನೋಂದಣಿ ಪ್ರಕ್ರಿಯೆ ಮುಗಿದ ಮೇಲೆ ಸಬ್ ರಜಿಸ್ಟ್ರಾರ್ ಬಾಂಡ್ ರೈಟರ್ ಮೂಲಕ ಎಂಟು ಸಾವಿರ ಲಂಚಕ್ಕೆ ಬೇಡಿಕೆಯಿಟ್ಟರಂತೆ, ಮಗ ಯಾವ ಕಾರಣಕ್ಕೆ ಲಂಚ ನೀಡಬೇಕು? ಅಂತಾ ಪ್ರಸ್ನಿಸಿದಾಗ “ನಿಮ್ಮ ಆಸ್ತಿ ಪತ್ರದ ಪಟ್ಟಾ ಕಾಲಂಲ್ಲಿ ‘ಹೊಸಶರ‍್ತು’ ಅಂತಾ ಇದೆ ಹಾಗಿದ್ದರೆ ನೋಂದಣಿ ಮಾಡಲು ಬರುವುದಿಲ್ಲ, ಸಾಹೇಬರಿಗೆ ನಾನೇ ಹೇಳಿ ನೋಂದಣಿ ಮಾಡಿಸಿದಿನಿ, ಆ ಕಾರಣಕ್ಕಷ್ಟೇ ಅವರು ಹಣ ಕೇಳ್ತಾರೆ ಅಂತ ಬಾಂಡ್ ರೈಟರ್ ಹೇಳ್ತಾರೆ, ಆಮೇಲೆ ಅವನೇ ಸಬ್ ರಜಿಸ್ಟ್ರಾರ್ ಬಳಿ ಹೋಗಿ “ಸರ್ ನಾನೂ ಈ ಹಿಂದೆ ಪತ್ರಕರ್ತನಾಗಿ ಕೆಲಸ ಮಾಡಿದಿನಿ, ಲಂಚ ಕೊಡದೆ ಎಲ್ಲಡೆ ಕೆಲಸ ಮಾಡ್ಕೊಂಡಿದಿನಿ, ದಯವಿಟ್ಟು ಲಂಚ ಕೇಳ್ಬೇಡಿ ಎಲ್ಲವೂ ನೀವು ಹೇಳಿದಂತೆಯೇ ಕೇಳಿರುವೆ” ಅಂದನಂತೆ, ಕಡೆಗೆ ಅಳೆದು ತೂಗಿ ಏನೇಲ್ಲ ರಂಪಾಟ ಮಾಡಿ ಅವನಿಂದ ಮೂರು ಸಾವಿರ ಲಂಚ ಕಿತ್ಕೊಂಡೇ ನೋಂದಣಿ ಕಾಗದ ಕೈಗಿಟ್ಟರಂತೆ.

 ಮಗನಿಗಾದರೂ ಒಂದಿಷ್ಟು ಮಾಹಿತಿ ಗೊತ್ತಿರಲಿ ಅಂತಾ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ “ಸರ್ ಆಸ್ತಿಯಲ್ಲಿ ಹೊಸಶರ‍್ತು ಅಂತಾ ಇದ್ರೆ ನೋಂದಣಿ ಮಾಡಲು ಬರಲ್ವಾ?” ಮತ್ತೆ ನನ್ನ ತಾಯಿ ತನ್ನ ಮೊಮ್ಮಗನಿಗೆ ಗಿಫ್ಟ್ ಮಾಡಲು ಬರಲ್ವಾ?” ಅಂತಾ ಕೇಳಿದಾಗ ‘ಬರುತ್ತೆ ಯಾವ ತೊಂದರೆಯೂ ಇಲ್ಲ’ ಎಂದು ಉತ್ತರಿಸಿದರಂತೆ, ಮಗ ತಡಮಾಡದೆ ಸಬ್ ರಜಿಸ್ಟ್ರಾರ್ ಮೇಲೆ ಒಂದು ಆನಲೈನ್ ದೂರು ಸಲ್ಲಸ್ತಾನೆ, ವಿಷಯ ಗೊತ್ತಾಗುತ್ತಿದ್ದಂತೆ ಬಾಂಡ್ ರೈಟರ್ ದೂರುದಾರನ ಮನೆಗೆ ಬಂದು ನಮ್ಮಿಂದ ತಪ್ಪಾಗಿದೆ, ಈಗ ನಿಮ್ಮ ಮಗನ ಹೆಸರಿಗೆ ನಾವೇ ವರ್ಗಾಯಿಸುತ್ತೇವೆ ನೀವು ಏನೂ ಹಣ ಕೊಡಬೇಡಿ, ಪ್ಲೀಸ್ ದೂರು ಹಿಂಪಡೆಯಿರಿ ಎಂದು ವಿನಂತಿಸಿಕೊಂಡರಂತೆ.

 ಓದು ಬರಹ ಬರುವ ಪ್ರಜ್ಞಾವಂತರನ್ನೇ ಸಬ್ ರಜಿಸ್ಟ್ರಾರ್ ಇಷ್ಟೊಂದು ಯಾಮಾರಸ್ತಾರಂದ್ರೆ ಇನ್ನು ಮುಗ್ದ ರೈತರ ಕಥೆ ದೇವರೇ ಬಲ್ಲ. ಒಟ್ಟಾರೆ ಸಬ್ ರಜಿಸ್ಟಾರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ, ರೈತರು ಅಂದ್ರೆ ಅವರ ದೃಷ್ಠಿಯಲ್ಲಿ ಗುಲಾಮರೆಂದೇ ತಿಳಿದುಕೊಂಡಿದ್ದಾರೆ. ಆ ಮಗನು ಗಮನಿಸಿದಂತೆ ಬಹುತೇಕ ಅಧಿಕಾರಿಗಳು ಇತ್ತೀಚಿಗೆ ಹೊಟ್ಟೆಗೆ ಅನ್ನಾನೇ ತಿನ್ತಾಯಿಲ್ಲ ಅಂತಾ ತನ್ನ ಸ್ನೇಹಿತನೆದಿರು ನೊಂದುಕೊಂಡು ನಡೆದಿದ್ದನ್ನೆಲ್ಲಾ  ಹೇಳಿಕೊಂಡನಂತೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಆಸ್ತಿ ಗಿಫ್ಟ್ ಮಾಡಿದರೆ ಅಂದಾಜು ೨೫೦೦ರೂ ಸರ್ಕಾರಿ ಶುಲ್ಕ, ವಾಟ್ನಿ ಮಾಡಿದರೆ ಅಂದಾಜು ೫೫೦೦ರೂ ಶುಲ್ಕ, ಒಂದುಬಾರಿಯ ನೋಂದಣಿಗೆ ಒಟ್ಟಾರೆ ಅಂದಾಜು ೧೫೦೦೦ರೂ, ಅಡ್ನೇಡಿ ಸಬ್ ರಜಿಸ್ಟ್ರಾರ್ ಒಂದು ಬಾರಿ ನೋಂದಣಿಯಾಗುವುದನ್ನು ಬೇಕೆಂದೇ ಎರಡು ಬಾರಿ ನೋಂದಣಿ ಮಾಡಸ್ತಾನೆ. ಇನ್ನು ಗಿಫ್ಟ್ ಅಂದ್ರೆ ಆಸ್ತಿ ಕೊಡುವ ಪಡೆವವರ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುವುದು, ವಾಟ್ನಿ ಅಂದ್ರೆ ಕೊಡುವ ಪಡೆವವರ ನಡುವಿನ ಸಂಬಂಧ ಮುರಿದುಕೊಂಡು ಬೇರೆಬೇರೆಯಾಗುವುದು. ವಾಟ್ನಿಪತ್ರ ಮಾಡಿಸಿಕೊಂಡ ಮಗನ ಅದೃಷ್ಟ ಚೆನ್ನಾಗಿದೆ, ತಾಯಿ ಅನಕ್ಷರಸ್ಥೆಯಾದ್ದರಿಂದ ನೋಂದಣಿ ಕಾಗದದಲ್ಲಿ ನೀಚ ಉಪ ನೋಂದಣಿ ಅಧಿಕಾರಿ  ಬೇರೆ ಬೇರೆ ಮಾಡಿರುವುದು ಚೂರು ಗೊತ್ತಾಗಲಿಲ್ಲ.

Leave a Reply

Back To Top