ಮಹಿಳಾದಿನದ ವಿಶೇಷ

ಮುಖಾಮುಖಿ

Image result for images of sad woman paintings

ಟಿ.ಎಸ್.ಶ್ರವಣಕುಮಾರಿ

ಮುಖಾಮುಖಿ

ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ.  ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ.

ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು ಸಮಯದ ಪರಿವೆಯಿಲ್ಲದೆ, ಯಾವುದೇ ನಿರ್ದಿಷ್ಟ ವಿಷಯವಿಲ್ಲದೆ, ನಿರಾತಂಕವಾಗಿ ಹರಟುತ್ತಾ ಕುಳಿತುಕೊಳ್ಳುವ ಸೊಬಗೇ ಬೇರೆ.  ಜೊತೆಯಲ್ಲಿ ಮಧ್ಯೆ ಮಧ್ಯೆ ಕುರುಕುಲು ತಿಂಡಿಯೋ, ಕಾಫಿಯೋ, ಮಜ್ಜಿಗೆಯೋ, ಪಾನಕವೋ ಏನೋ ಒಂದನ್ನು ಸ್ವಾಹಾಮಾಡುತ್ತಾ ಮಾತನಾಡುವ ಮಜಾನೇ ಬೇರೆ.  ಎರಡು ವರ್ಷದಲ್ಲಿ ಊರಲ್ಲಿ ಎಲ್ಲೆಲ್ಲಿ ಏನಾಯಿತು; ಗುರುತು ಪರಿಚಯದವರ ಯಾರ ಯಾರ ಮನೆಯಲ್ಲಿ ಏನೇನು ನಡೆಯಿತು ಅದಕ್ಕೆ ಅಮ್ಮನ ಟಿಪ್ಪಣಿಗಳೇನು.. ಎಲ್ಲವೂ ಪುರಸೊತ್ತು ಇಲ್ಲದಂತೆ ಬರಬೇಕು.

ಹೀಗೇ ಮಾತಾಡುತ್ತಿರುವಾಗ ಇವರು ಮೊದಲು ಇದ್ದವಠಾರದ ಮನೆಯ ಪಕ್ಕದಮನೆಯ ಮೇಷ್ಟ್ರು ರಾಮಾಜೋಯಿಸರ ವಿಷಯವೂ ಬಂತು.  “ಆತಂಗೆ 90.. 92.. ವರ್ಷವಾಗಿತ್ತೇನೋ ಕಣೆ, ಈ ದಸರಾ ಹಬ್ಬದ ಮಹರ್ನಮಮಿಯ ದಿನ ಹೋಗಿ ಬಿಟ್ಟರಂತೆ.” ಅಂದರು. “ಅವರ ಹೆಂಡತಿ ಅಹಲ್ಯಾಬಾಯಿ ಇನ್ನೂ ಚಿಕ್ಕವರಲ್ವಾ” ಸುಜಾತ ಕೇಳಿದಳು. “ಹ್ಞೂಂ.. ನನಗಿಂತ ಎಂಟು ಹತ್ತು ವರ್ಷವೇ ಚಿಕ್ಕವರು.  ನನಗೀಗ 60 ದಾಟಿತು. ಆಕೆಗಿನ್ನೂ 50ರ ಸುಮಾರೇನೋ” ಅಮ್ಮ ಅಂದರು. “ಆಕೆ ಇನ್ನೂ ಅಲ್ಲೇ ಇದಾರಾ?” “ಇಲ್ಲ; ಆತ ಹೋದ್ಮೇಲೆ ಅಷ್ಟು ಬಾಡಿಗೆ ಕೊಡಕ್ಕೆ ಆಗ್ದೆ ಅವರ ಸೋದರಮಾವನ ಮನೆ ಒಂದು ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಇದೆಯಂತೆ. ಹಳೇಮನೆ. ಎಷ್ಟೋ ವರ್ಷದಿಂದ ಯಾರೂ ಆ ಮನೇನಲ್ಲಿ ವಾಸವಾಗಿರ್ಲಿಲ್ಲವಂತೆ; ಯಾರೋ ಅದನ್ನ ಸ್ವಲ್ಪ ಕ್ಲೀನ್ ಮಾಡಿಸಿ ಕೊಟ್ಟಿದಾರಂತೆ. `ಇರೋಷ್ಟು ಕಾಲ ಇದ್ಗೊಂಡು ಹೋಗು’ ಅಂತ. ಅಲ್ಲೇ ಇದಾರೇಂತ ಕೇಳ್ದೆ.  ಪಾಪ ಏನು ಜೀವನವೋ ಆಕೇದು. ಸುಖಾ ಅನ್ನೋದನ್ನ ಕೇಳಿಕೊಂಡೇ ಬರ್ಲಿಲ್ಲ” ನಿಟ್ಟುಸಿರಿಟ್ಟರು ಅಮ್ಮ.  “ಯಾಕಮ್ಮಾ, ಅದೇನು ಜೋರಿದ್ರಲ್ವಾ ಆಕೆ.  ಮೇಷ್ಟ್ರನ್ನ ಹುರಿದು ಮುಕ್ಕಿ ತಿಂತಾ ಇದ್ರು. ದಿನ ಬೆಳಗಾದ್ರೆ ಓನರ್ ಕಿಟ್ಟಣ್ಣ ಇಲ್ಲಾ ಅವ್ರ ಹೆಂಡ್ತಿ ಪದ್ದಕ್ಕನ ಜೊತೆ ಅವ್ರ ರಗಳೆ ತಪ್ಪಿದ್ದೇ ಇಲ್ಲ ಎಷ್ಟೋ ಸಲ ಕೊಡ ಕೊಡಾನೇ ಹಿಡ್ಕೊಂಡು ಹೊಡದಾಡ್ಕೋತಾ ಇದ್ರಲ್ಲ. ಅವ್ರಿಗೆ ಅಯ್ಯೋ ಅಂತಿದೀಯಲ್ಲ” ಅಚ್ಚರಿಯಿಂದ ಕೇಳಿದಳು ಸುಜಾತ.  “ಅಲ್ಲಾ ತನ್ಗಿಂತ ಸುಮಾರು ಹತ್ರ ಹತ್ರ ನಲವತ್ತು ವರ್ಷ ದೊಡ್ಡ ಗಂಡನ್ನ ಕಟ್ಟಿಕೊಂಡು ಆಕೆ ಏನು ಕಮ್ಮಿ ಅನುಭವಿಸಿದ್ರಾ.  ಏನೇನು ಸಂಕಟಾ ಇತ್ತೋ ಆಕೆ ಮನಸ್ನಲ್ಲಿ.  ಜಗಳದಲ್ಲಿ ತೀರಿಸ್ಕೋತಾ ಇದ್ರು” ಅಮ್ಮ ಕಳಕಳಿಯಿಂದ ಅಂದರು.  “ಅದೂ ಸರಿಯೇ ಆದ್ರೆ ನಮ್ಮೇಲೆಲ್ಲಾ ಸುಮ್ಸುಮ್ನೆ ರೇಕ್ಕೊತಿದ್ರು. ಪಾಠ ಹೇಳಿಸ್ಕೊಳ್ಳೋಕೆ ಅವ್ರ ಮನೇಗೆ ಹೋಗ್ತಿದ್ವಲ್ಲ; ಒಂದೊಂದ್ಸಲ ಅದ್ಹೇಗೆ ಬೈಯೋರು ಗೊತ್ತಾ. `ಬಂದ್ಬುಟ್ವು ಪಿಶಾಚಿಗಳು; ಹೊತ್ತಿಲ್ಲ-ಗೊತ್ತಿಲ್ಲ; ಎದ್ದ್ಹೋಗ್ರೆ’ ಅಂತ ಕೋಲು ತೆಗೆದುಕೊಂಡೇ ಬಂದು ಬಿಡೋರಲ್ಲ.  ಮೇಷ್ಟ್ರು ಅವ್ರನ್ನ ಗದರಿಸಿಕೊಂಡು ನಮಗೆ ಸಮಾಧಾನ ಹೇಳ್ತಿದ್ರು.  ದೇವ್ರಂತ ಮೇಷ್ಟ್ರು ನಿಜವಾಗ್ಲೂ. ರಾತ್ರಿ ಮನೇ ಹೊರಗೆ ಹಾಸಿಕೊಂಡು ನಮ್ಮನ್ನೆಲ್ಲಾ ಪಕ್ಕಕ್ಕೆ ಕೂರಿಸ್ಕೊಂಡು ನಕ್ಷತ್ರ ತೋರಿಸ್ತಾ ಎಷ್ಟು ಚೆನ್ನಾಗಿ ಕತೆ ಹೇಳ್ತಿದ್ರು. ಆಗ ಆಕೇಗೆ ಎಷ್ಟು ರೇಗೋದು. ವಟವಟಾಂತ ಅಂತಿರೋವ್ರು.” ಸುಜಾತ ಮಾತು ಮುಗಿಸುವಷ್ಟರಲ್ಲಿ ಅಪ್ಪ ಬಂದಿದ್ದರಿಂದ ಊಟಕ್ಕೆ ತಟ್ಟೆ ಹಾಕಲು ಅಮ್ಮ ಎದ್ದರು. ಆ ಮಾತು ಅಲ್ಲಿಗೇ ನಿಂತಿತು….

ಮನೆಯಲ್ಲಿ ಆಡಬಹುದಾದ ಮಾತಿನ ಒಂದು ಹಂತದ ಸರಕೆಲ್ಲಾ ಮುಗಿದ ಮೇಲೆ ಅಂದು ತನ್ನ ಬಾಲ್ಯದ ಗೆಳತಿ, ರಾಮದೇವರ ಗುಡಿಯ ಹತ್ತಿರದಲ್ಲಿರೋ ಗಾಯಿತ್ರಿಯನ್ನು ಮಾತನಾಡಿಸಿಕೊಂಡು ಬರೋಣವೆಂದು ಸುಜಾತ ಊಟಕ್ಕೆ ಮುಂಚೆಯೇ ಹೊರಟಳು.  ಅವರ ಮನೆಗೆ ಯಾವಾಗ ಹೋದರೂ ಹಾಗೆ.  ಊಟಕ್ಕೆ ಮುಂಚೆ ಒಂದಷ್ಟು ಹರಟಿ, ಗಂಟೆಗಟ್ಟಲೇ ಮಾತಾಡುತ್ತಲೇ ಊಟ ಮಾಡಿ, ಅದಾದ ನಂತರ ಹಾಲ್ನಲ್ಲಿ ಚಾಪೆಯ ಮೇಲೆ ಉರುಳಿಕೊಂಡು ಆ ಮಾತಿನ ವರಸೆಯನ್ನು ಮುಂದುವರೆಸುತ್ತಾ ಪ್ರೈಮರಿ ಸ್ಕೂಲಿನಿಂದ ಹಿಡಿದು ಡಿಗ್ರಿವರೆಗಿನ ಎಲ್ಲ ದಿನಗಳನ್ನು, ಜನಗಳನ್ನು, ಸ್ನೇಹಿತರನ್ನೂ, ಮೇಷ್ಟ್ರು, ಲೆಕ್ಚರರ್ಸ್ ಎಲ್ಲರೂ ಒಂದು ಮೆರವಣಿಗೆ ಬಂದು ಹೋಗಬೇಕು. ನಂತರ ಕಾಫಿ ಜೊತೆಗೊಂದಷ್ಟು ಕುರುಕುಲು ಮೆಲ್ಲುತ್ತಾ ಇಂದು ಏನೂ ಮಾತಾಡಿದ ಹಾಗೆ ಆಗಲಿಲ್ಲ ಎನ್ನುತ್ತಾ ಇನ್ನೊಂದು ದಿನ ತನ್ನ ಮನೆಗೆ ಬಂದು ಮಾತು ಮುಂದುವರೆಸಲು ಆಹ್ವಾನವಿತ್ತು ಬರುತ್ತಿದ್ದಳು ಸುಜಾತ.  ಹೀಗೆ ಅವಳು ವಾಪಸ್ಸು ಹೋಗುವಷ್ಟರಲ್ಲಿ ಕನಿಷ್ಟ ಪಕ್ಷ ಇವಳೆರಡು ಸಲ, ಅವಳೆರಡು ಸಲ ಒಬ್ಬರೊಬ್ಬರ ಮನೆಗೆ ಬಂದು ಹೋಗುವುದು ಸಾಮಾನ್ಯ ನಡಾವಳಿಯಾಗಿತ್ತು.  ಹೀಗೇ ದೀಪ ಹಚ್ಚುವ ಹೊತ್ತಾದಾಗ “ಅಯ್ಯಯ್ಯೋ ಅಮ್ಮ ಹೇಳಿದ್ರು, ದೀಪ ಹಚ್ಚೋ ಹೊತ್ತೊಳಗೆ ಬಂದ್ಬಿಡು ಅಂತ. ಹೊರಡ್ತೀನಿ ಕಣೆ” ಎನ್ನುತ್ತಾ ಗಡಬಡಿಸಿಕೊಂಡು ಎದ್ದಳು.

***

ಅದೆಲ್ಲಿದ್ದವೋ ಅಷ್ಟೊಂದು ಮೋಡಗಳು.. ಒಮ್ಮೆಲೇ ಕವಿಯತೊಡಗಿ ಮಳೆ ಬರುವುದರೊಳಗೆ ಆಟೋ ಹಿಡಿಯಬೇಕು ಎಂದು ದಾಪುಗಾಲು ಹಾಕುತ್ತಾ ನಡೆದಳು.  ಆ ಸರ್ಕಲ್ಲಿನಲ್ಲಿ ಒಂದೂ ಆಟೋ ನಿಂತಿರಲಿಲ್ಲ.  ಹೋಗುವಷ್ಟು ದೂರ ಹೋಗುತ್ತಿರೋಣ, ಆಟೋ ಸಿಕ್ಕ ತಕ್ಷಣ ಹತ್ತಿಕೊಂಡರಾಯಿತು ಎಂದುಕೊಂಡು ಗಾಂಧೀಬಜಾರಿನಲ್ಲಿ ನಡೆಯಲೂ ಕಷ್ಟ ಎಂದುಕೊಂಡು ದೊಡ್ಡ ಬ್ರಾಹ್ಮಣರ ಕೇರಿಯ ಕಡೆ ತಿರುಗಿದಳು.  ಅಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ರ ಯಾವುದಾದರೂ ಸಿಗಬಹುದು ಎನ್ನುವ ಆಸೆಯಿಂದ ಇನ್ನೂ ಒಂದು ಅರ್ಧ ಫರ್ಲಾಂಗ್ ಕೂಡಾ ನಡೆದಿದ್ದಳೋ ಇಲ್ಲವೋ ಧಡಧಡನೆಂದು ಮಳೆ ಶುರುವಾಗೇ ಹೋಯಿತು. ಮಳೆಯಿಂದಾಗಿ ಕತ್ತಲೂ ಕವಿಯತೊಡಗಿತು.  ಎಲ್ಲಾದರೂ ನಿಲ್ಲಲು ಜಾಗ ಸಿಗುವುದೇನೋ ಎಂದು ಅಕ್ಕ ಪಕ್ಕ ನೋಡಿ ಒಂದು ಜಗಲಿಯ ಮನೆಯ ಮುಂದೆ ಅವಳು ನಿಲ್ಲುವ ಹೊತ್ತಿಗೆ ಕರೆಂಟೂ ಹೋಗಿ ಪೂರ್ಣವಾಗಿ ಕತ್ತಲಾಯಿತು.  ಇನ್ನೇನು ಮಾಡಲೂ ತೋಚದೆ ಜಗಲಿಯ ಒಪ್ಪಾರದ ಒಳಗೆ ಹೋಗಿ ನಿಂತಳು. ಮಳೆ ಧಾರಾಕಾರವಾಗಿ ಸುರಿಯತೊಡಗಿ ಭಯವೂ ಶುರುವಾಯಿತು.  ಅಮ್ಮ ಹೇಳಿದ ಹಾಗೆ ಹೊತ್ತಿಗೆ ಮುಂಚೆಯೇ ಮನೆ ಸೇರಿಕೊಳ್ಳಬೇಕಿತ್ತು ಎಂದು ಸಲಸಲವೂ ಹೇಳಿಕೊಂಡಳು.  ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.  ಜೋರಾಗಿ ಮಿಂಚು, ಗುಡುಗು ಅಬ್ಬರಿಸಿತು.  ಆ ಬೆಳಕಲ್ಲಿ ಅವಳಿಗೆ ಆ ಮನೆಯ ಬಾಗಿಲು ತೆಗೆದೇ ಇದೆ ಎಂದು ತಿಳಿಯಿತು. ಇದ್ಯಾರು ಪುಣ್ಯಾತ್ಮರು ಈ ಮಳೆಯಲ್ಲಿ ಹೀಗೆ ಮನೆಬಾಗಿಲು ಹಾರುಹೊಡೆದುಕೊಂಡು ಕೂತಿದಾರಲ್ಲ; ಒಂದು ಸಪ್ಪಳವೂ ಒಳಗಿಂದ ಕೇಳುತ್ತಿಲ್ಲ.  ಯಾರಾದರೂ ಇದ್ದಾರೋ ಇಲ್ಲಾ ಪಾಳು ಬಿದ್ದ ಮನೆಯೋ ಎಂದು ಅವಳಿನ್ನೂ ಅಂದುಕೊಳ್ಳುತ್ತಿರುವಾಗಲೇ ಒಳಗಿಂದ ಒಂದು ಗೊಗ್ಗರು ದನಿ ಕೇಳಿಸಿತು…

“ಯಾರಲ್ನಿಂತಿರೋದು?..” ಹೆದರಿಕೆಯಿಂದಲೂ, ಮಳೆಯಿಂದಲೂ ಮುದ್ದೆಯಾಗಿ ಹೋಗಿದ್ದ ಸುಜಾತ ನಡುಗುತ್ತಾ “ತುಂಬಾ ಮಳೆ ಬರ್ತಿದೆಯಲ್ಲಾ.. ಅದಕ್ಕೆ ನಿಂತಿದೀನಿ.  ನಿಮಗೇನೂ ತೊಂದರೆ ಮಾಡಲ್ಲ.  ಮಳೆ ನಿಂತ ತಕ್ಷಣ ಹೊರಟು ಹೋಗ್ತೀನಿ” ತಡವರಿಸಿದಳು. “ಅದ್ಸರೀ.. ಅಲ್ಲೇ ನಿಂತಿದ್ರೆ ಎರಚಲು ಬಡಿದು ಇನ್ನು ಒದ್ದೆಯಾಗ್ತೀಯಮ್ಮ. ಒಳಗೆ ಬಂದು ಕೂತ್ಕೋ ಬಾ” ಕರೆಯಿತು ಒಳಗಿನ ಕಂಠ.  ಇನ್ನೂ ಸುಜಾತ ಅನುಮಾನಿಸುತ್ತಿರುವುದನ್ನು ನೋಡಿದ ಆಕೆ “ಪರವಾಗಿಲ್ಲ ಬಾಮ್ಮ.  ನಾನು ಒಬ್ಳೇ ಇರೋದು.” ಭಂಡ ಧೈರ್ಯ ಮಾಡಿಕೊಂಡು `ಬಾಗಿಲ ಬಳಿಯೇ ಕೂತರಾಯಿತು. ಏನಾದರೂ ಹೆಚ್ಚು ಕಡಿಮೆಯಾದರೆ ಓಡಿಬಿಡಬಹುದು’ ಎಂದುಕೊಳ್ಳುತ್ತಾ ಮನೆಯೊಳಗೆ ಹೆಜ್ಜೆಯಿಟ್ಟಳು.  “ಅಲ್ಲೇ ಒಂದು ಪೆಟ್ಟಿಗೆ ಇದೆ. ಕೂತ್ಕೋ.  ಸ್ವಲ್ಪ ಕೈಚಾಚಿದ್ರೆ ಪಕ್ಕದಲ್ಲಿರೋ ಬುಟ್ಟೀನಲ್ಲಿ ಒಂದು ಒಣ ಸೀರೆ ತುಂಡಿದೆ. ತೊಗೊಂಡು ತಲೆ ಒರಸ್ಕೋ” ಎಂದಿತು ಮುದುಕಿ. ಇಷ್ಟು ಹೊತ್ತಿಗೆ ಸ್ವಲ್ಪ ಧೈರ್ಯ ಬಂದಿದ್ದರಿಂದ ಅಲ್ಲಿ ಕೂತುಕೊಂಡು ಒಣಬಟ್ಟೆಯ ತುಂಡಿನಿಂದ ತಲೆಯನ್ನೂ ಕೈಯನ್ನೂ ಒರಸಿಕೊಂಡಳು.  “ನೀನ್ಯಾರು? ಎಲ್ಲಿ ನಿಮ್ಮನೆ?” ಕೇಳಿತು ಮುದುಕಿ.  ಈ ಊರಿನಲ್ಲಿ ಹೆಚ್ಚುಕಡಿಮೆ ಹಳಬರೆಲ್ಲರಿಗೂ ಒಬ್ಬರಿಗೊಬ್ಬರು ತಿಳಿದೇ ಇರ್ತಾರೆ ಎಂದುಕೊಂಡ ಸುಜಾತ ಹೇಳಿದಳು “ಆಯಿಲ್ ಮಿಲ್ ಶಿವರಾಮಯ್ಯನವರ ಮಗಳು…” “ಓ.. ನೀನೇ.. ಪಂಕಜಮ್ಮನ ಮಗಳು ಸುಜಾತ ಅಲ್ವೇ. ಅಥವಾ ಸುನೀತಾನೋ… ನಿಮ್ಮಣ್ಣ ಸುರೇಶ ಅಲ್ವಾ” ಸಂಭ್ರಮದಿಂದ ಕೇಳಿತು ಆ ಕಂಠ. `ಇಷ್ಟು ಚೆನ್ನಾಗಿ ನಮ್ಮ ಇಡೀ ಕುಟುಂಬವನ್ನೇ ಜ್ಞಾಪಕ ಇಟ್ಟುಕೊಂಡಿರೋವ್ರು ಈ ಬೀದೀನಲ್ಲಿ ಯಾರಿದಾರೆ?’ ಅವಾಕ್ಕಾಗಿ ಹೋದಳು ಸುಜಾತ. “ಹಾ! ನಾನು ಸುಜಾತಾನೇ… ನೀವು ಯಾರೂಂತ ಗೊತ್ತಾಗಲಿಲ್ಲ..” ಸಧ್ಯ ಯಾರೋ ಗೊತ್ತಿರೋರ ಮನೆಯಲ್ಲೇ ಕೂತಿದೀನಿ ಎಂದು ಸ್ವಲ್ಪ ಧೈರ್ಯ ತಂದುಕೊಳ್ಳುತ್ತಾ ನುಡಿದಳು.  “ನಾನು ಯಾರೂಂತ ಗೊತ್ತಾಗ್ಲಿಲ್ವೇನೇ ಪುಟ್ಟಿ; ನಿಮ್ಮನೇ ಪಕ್ಕದಲ್ಲಿದ್ವಲ್ಲ.. ಮೇಷ್ಟ್ರ ಹೆಂಡ್ತಿ ಅಹಲ್ಯಾಬಾಯಿ” ಎಂದಾಗ ಸುಜಾತ `ಹಾ!‘ಎನ್ನುತ್ತಾ ಧ್ವನಿ ಬಂದ ಮೂಲೆಯನ್ನೇ ನೋಡಿದಳು. ಏನೂ ಕಾಣಲಿಲ್ಲ.  ಅವರೊಂದಿಗಿನ ಮುಖಾಮುಖಿಗೆ ತಯಾರಿದ್ದಿಲ್ಲದ ಸುಜಾತ ಈಗ ಮಾತನ್ನು ಮುಂದುವರೆಸಲೇ ಬೇಕಿತ್ತು.  “ನೀವೊಬ್ರೇ ಇದೀರೀಂತ ಹೇಳಿದ್ಳು ಅಮ್ಮ, ಮತ್ತೆ ಮನೆ ಬಾಗಿಲು ಇಷ್ಟು ಹೊತ್ತಿನಲ್ಲಿ ತೆಕ್ಕೊಂಡು ಕೂತಿದೀರಲ್ಲ.  ಯಾರಾದ್ರೂ ನುಗ್ಗಿದ್ರೆ?”  “ನುಗ್ಗಿ ಏನ್ಮಾಡ್ತಾರೆ? ಏನು ನಗವಾ, ನಾಣ್ಯವಾ? ಏನಿದೆ ಕೊಳ್ಳೇ ಹೊಡೆದು ತೊಗೊಂಡು ಹೋಗೋಕೆ ಈ ಮುದಿಗೂಬೆ ಪ್ರಾಣ ಒಂದು ಬಿಟ್ಟು.  ಅದ್ಯಾರಿಗೂ ಬೇಕಾಗಿಲ್ಲ.. ಯಮನಿಗೂ..” ಕಹಿಯಾಗಿ ಹೇಳಿದಳು ಅಹಲ್ಯಾಬಾಯಿ.  “ಅಟ್ಟದ ಮೇಲೆ ಯಾವ ಕಾಲದಿಂದಲೋ ಒಟ್ಟಿರೋ ಕಟ್ಟಿಗೇಗಾದ್ರೂ ಒಂದಿಷ್ಟು ಬೆಲೆಯಿದೆಯೇನೋ.. ಈ ಮುದಿಕೊರಡಿಗೆ ಏನೂ ಇಲ್ಲ.. ನನ್ನ ಪ್ರಾಣ ತೊಗೊಂಡು ಯಾವನು ಏನು ಮಾಡ್ತಾನೆ ಹೇಳು”.  “ಛೇ, ಹಾಗನ್ಬೇಡಿ. ನೋವಾಗತ್ತೆ.” ನೋವಿನಿಂದ ನುಡಿದಳು ಸುಜಾತ “ಮೇಷ್ಟ್ರು ದಸರಾ ಹಬ್ಬದ ದಿನಗಳಲ್ಲಿ ಹೋಗಿಬಿಟ್ಟರೂಂತ ಅಮ್ಮ ಹೇಳಿದ್ಳು.  ಜೀವನಕ್ಕೆ ಏನು ಮಾಡ್ತಿದೀರಿ?”  “ಅವರಿದ್ದಾಗ ಏನು ಮಾಡ್ತಿದ್ವೋ ಅದೇ, ಪಿಂಚಣೀ ಅಂತ ಆಗ ಸಾವಿರ ರೂಪಾಯಿ ಬರ್ತಿತ್ತು; ಈಗ ಮುನ್ನೂರು ರೂಪಾಯಿ ಬರತ್ತೆ.  ಆಗ ಇವ್ರನ್ನ ಹುಡುಕ್ಕೊಂಡು ಯಾರೋ ಶಿಷ್ಯರು ಆಗ-ಈಗ ಬಂದು ಏನಾದ್ರೂ ಸ್ವಲ್ಪ ಕೈಯಲ್ಲಿ ಹಾಕಿ ಹೋಗ್ತಿದ್ರು.  ಈಗ ಯಾರೂ ಈ ಕಡೆ ತಿರಗಲ್ಲ.  ಏನೋ ಇರೋಕೆ ಈ ಮನೆ ಕೊಟ್ಟಿರೋದೆ ದೊಡ್ಡ ಪುಣ್ಯ” ನಿಟ್ಟುಸಿರಿಟ್ಟಳು ಆಕೆ. ಮಳೆ ಜೋರಾಗುತ್ತಲೇ ಇತ್ತು.. ಮೌನ ಮಾತಾಗಿತ್ತು..

ಇದ್ದಕ್ಕಿದ್ದಂತೇ “ನಿಮ್ಮಮ್ಮ ಬಹಳ ಒಳ್ಳೆಯ ಹೆಂಗಸು.  ವಠಾರದವ್ರೆಲ್ಲಾ ನನ್ನ ವಿರುದ್ಧವಾಗಿದ್ದಾಗ ಒಂದಿನಾನೂ ಆಕೆ ಒಂದು ಕೆಟ್ಟ ಮಾತು ಅಂದವರಲ್ಲ.  ಏನೋ.. ಅವರೊಬ್ರಿಗೇ ನನ್ನ ನೋವು, ಕಷ್ಟ ಅರ್ಥವಾಗಿತ್ತೇನೋ… “ ಅಂದಳು. ಆಕೆ ಅಳುತ್ತಿದ್ದಳೇ.. ಕತ್ತಲಲ್ಲಿ ಗೊತ್ತಾಗಲಿಲ್ಲ.. ಸ್ವಲ್ಪಹೊತ್ತು ತಡೆದು ಕೇಳಿದಳು “ನಾನೇನಾದ್ರೂ ಮಾತಾಡಿದ್ರೆ ನಿಂಗೆ ಬೇಜಾರಾಗತ್ತಾ.  ಯಾಕೋ ಈ ಮಳೆ ಬಂತೂಂದ್ರೆ ನಂಗೆ ಹಳೆಯದೆಲ್ಲಾ ನೆನಪಿಗೆ ಬರತ್ತೆ.  ಹೇಳ್ಕೊಳಕ್ಕೂ ಯಾರೂ ಇಲ್ಲ; ಈಗ ನಿನ್ಮುಂದೆ ಹೇಳ್ಳಾ..” “ಖಂಡಿತಾ ನಂಗೆ ಬೇಜಾರಾಗಲ್ಲ; ನಿಮಗೆ ನೋವಾಗತ್ತೇನೋ ಅಂತ ನಾನೇನೂ ಕೇಳಲಿಲ್ಲ ಅಷ್ಟೆ.  ನಾವು ಚಿಕ್ಕವ್ರಿದ್ದಾಗ ನಿಮ್ಮನ್ನ ಕಂಡ್ರೆ ಭಯ ಪಡ್ತಾ ಇದ್ವಿ.  ಆದ್ರೆ ನೀವು ಯಾಕೆ ಹಾಗಿದ್ರೀ ಅಂತ ಯೋಚ್ನೆ ಮಾಡೋ ವಯಸ್ಸು ನಮ್ಮದಲ್ವಲ್ಲಾ.  ಈಗ ನೀವು ಏನು ಹೇಳಿದ್ರೂ ನಂಗರ್ಥವಾಗತ್ತೆ. ನಿಮ್ಮ ಮನಸ್ಸು ಹಗುರಾಗೋ ಹಾಗಿದ್ರೆ ಹೇಳಿ.” ಕಕ್ಕುಲತೆಯಿಂದ ನುಡಿದಳು ಸುಜಾತ.  ಏನನ್ನೋ ನೆನಪಿಸಿಕೊಳ್ಳುತ್ತಿರುವಂತೆ ಸ್ವಲ್ಪ ಹೊತ್ತು ಮೌನವಾಗಿದ್ದ ಆಕೆ ಕನಸಿನಲ್ಲಿರುವಂತೆ ಎಂದೋ ನಡೆದದ್ದನ್ನು ಹೇಳತೊಡಗಿದಳು…

“ನಮ್ಮಮ್ಮಂಗೆ ನಮ್ಮಣ್ಣ, ಮತ್ತೆ ನಾವಿಬ್ರು ಹೆಣ್ಣು ಮಕ್ಕಳು.  ನಾನೇ ಕಡೆಯವಳು. ನನಗೂ, ನಮ್ಮಕ್ಕನಿಗೂ ಹದಿನೈದು ವರ್ಷಗಳ ಅಂತರ. ಆ ಕಾಲಕ್ಕೆ ಹೆಣ್ಣು ಮಕ್ಕಳಿಗೆ 13, 14 ವರ್ಷಕ್ಕೆಲ್ಲಾ ಮದುವೆ ಮಾಡಿ ಬಿಡ್ತಿದ್ರು. ನಾನು ಹುಟ್ಟಕ್ಮುಂಚೇನೆ ಅಕ್ಕನ್ನ ಕೇಳಿಕೊಂಡು ಬಂದು ಮದುವೆ ಮಾಡಿಕೊಂಡು ಹೋಗಿದ್ರಂತೆ.  ಹಾಗಾಗಿ ಅವಳು ಯಾವತ್ತೂ ನಂಗೆ ಹತ್ತಿರ ಆಗ್ಲೇ ಇಲ್ಲ. ನಮ್ಮಪ್ಪನಿಗೆ 50 ವರ್ಷವಾಗಿದ್ದಾಗ ಹುಟ್ಟಿದ್ದವಳು ನಾನು. ಅವಳದಾದ ಮೇಲೆ ಅಣ್ಣಂದೂ ಆಯ್ತು.  ಅಮ್ಮನಿಗೂ ಅವರ ಮುಟ್ಟು ನಿಲ್ಲೋ ಕಾಲದಲ್ಲಿ, ಇಬ್ಬರು ಮಕ್ಕಳ ಮದುವೆಯೂ ಮುಗಿದ ಮೇಲೆ ನಾನು ಹುಟ್ಟಿದ್ದು ಅವಮಾನ ಅನ್ನಿಸಿತ್ತು.  ಹಾಗಾಗಿ ಅವರಿಬ್ಬರಿಗೂ ನಾನೊಂದು ಹೊರೆಯಾಗಿದ್ದೆ ಅಷ್ಟೆ.  ಪ್ರೀತಿ ಎಂದೂ ಸಿಗಲಿಲ್ಲ. ಅವರಿಬ್ರೂ ಅಮ್ಮನ ಬಣ್ಣ, ರೂಪ ಹೊತ್ತುಕೊಂಡು ಬಂದಿದ್ರು.  ನಾನು ನಮ್ಮಪ್ಪನಂತೆ ಕರಿ ಬಣ್ಣ, ಉಬ್ಬು ಹಲ್ಲು… ಕುರೂಪಿಯ ಎಲ್ಲಾ ಲಕ್ಷಣ ತೆಗೆದುಕೊಂಡು ಬಂದಿದ್ದೆ.  ಅತ್ತಿಗೆ ಜಾಣೆ.  ಗದ್ದಲವಿಲ್ಲದ ಹಾಗೆ ಗಂಡನಿಗೆ ಟ್ರಾನ್ಸಫರ್ ಮಾಡಿಸಿಕೊಂಡು ಕರೆದುಕೊಂಡು ಹೊರಟು ಹೋದಳು. ಮೊದಮೊದಲು ಸ್ವಲ್ಪ ದುಡ್ಡು ಕಳಿಸುತ್ತಿದ್ದ ಅಣ್ಣ ಬರುಬರುತ್ತಾ ನಿಲ್ಲಿಸಿಬಿಟ್ಟ.  ಅಪ್ಪನದು ಪ್ರೈವೇಟ್ ಸ್ಕೂಲಿನಲ್ಲಿ ಟೀಚರ್ ಕೆಲಸ.  ರಿಟೈರಾದ ಮೇಲೂ ಏನೂ ಹೆಚ್ಚು ದುಡ್ಡು ಬರಲಿಲ್ಲ; ಪಿಂಚಿಣಿಯೂ ಇರಲಿಲ್ಲ.  ಜೀವನ ಸ್ವಲ್ಪ ಕಷ್ಟವೇ ಆಯಿತು.  ಮಗನೇ ಮಾಡದಿದ್ದ ಮೇಲೆ ಮದುವೆಯಾಗಿದ್ದ ಮಗಳಿಂದ ಏನು ತಾನೆ ನಿರೀಕ್ಷೆ ಮಾಡಕ್ಕೆ ಸಾಧ್ಯ?” ಸ್ವಲ್ಪ ಹೊತ್ತು ಮಾತು ನಿಲ್ಲಿಸಿದರು ಅಹಲ್ಯ.  ಆಕೆಯೇ ಮಾತಾಡಲಿ ಎಂದು ಕಾದಳು ಸುಜಾತ. ಮಳೆ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. 

“ನಿಮ್ಮ ಮೇಷ್ಟ್ರು ಹೈಸ್ಕೂಲಿನಲ್ಲಿ ನಮ್ಮಪ್ಪನ ಶಿಷ್ಯರಾಗಿದ್ದರಂತೆ. ಗವರ್ನಮೆಂಟ್ ಪ್ರೈಮರಿ ಸ್ಕೂಲಿನಲ್ಲಿ ಕೆಲಸ ಸಿಕ್ಕಿತ್ತು.  ನಮ್ಮನೇ ಪಕ್ಕದಲ್ಲೇ ಮನೆ ಮಾಡಿದ್ರು.  ಮೇಷ್ಟ್ರು ಅನ್ನೋ ಗೌರವಕ್ಕೆ ಆಗಾಗ ಮನೆಗೆ ಬಂದು ಹೋಗೋವ್ರು. ಏನಾದ್ರೂ ಅಷ್ಟಿಷ್ಟು ಸಹಾಯಾನೂ ಮಾಡೋವ್ರು. ಅವರಿಗೂ ಮದುವೆಯಾಗಿ ನನ್ನ ವಯಸ್ಸಿನ ಮಗಳಿದ್ದಳು.  ನಂಗೆ ಅವಳೇ ಜೊತೆ.  ಅವಳು ತುಂಬಾ ಚೆನ್ನಾಗಿದ್ಳು.  ಆ ಜಂಭ ಇದ್ರೂ, ನಂಜೊತೆ ಸ್ನೇಹವಾಗೇ ಇದ್ಳು.  ಏಳೆಂಟು ವರ್ಷವಾಗಿದ್ದಾಗೇನೋ.. ಒಂದ್ಸಲ ಮೊಗ್ಗಿನ ಜಡೆ ಹಾಕಿಕೊಂಡು ಮೇಷ್ಟ್ರ ಮನೇಗೆ ಹೋಗಿದ್ದೆ.  ನನ್ನ ಅಲಂಕಾರ ನೋಡಿ ಭಲೇ ಖುಷಿಯಾಗಿ ಕೆನ್ನೇ ಹಿಂಡ್ತಾ `ಏನು ಚೆನ್ನಾಗಿ ಕಾಣ್ತಿದೀಯಲ್ಲೇ ಪುಟ್ಟಿ; ನನ್ನ ಮದ್ವೆ ಮಾಡ್ಕೊಂತೀಯೇನೇ’ ಅಂತ ತಮಾಷೆ ಮಾಡಿದ್ರು.  `ಥೂ! ನೀವೆಷ್ಟು ದೊಡ್ಡೋರು ನಾನು ಮಾಡ್ಕೊಳಲ್ಲಪ್ಪಾ’ ಅಂತ ಕೋಪಿಸಿಕೊಂಡಿದ್ದೆ.  ತಕ್ಷಣವೇ ಅವರು ತಮಾಷೆಗೆ ಕೇಳ್ದೆ ಪುಟ್ಟಿ. ನಿನ್ನಂತ ಪುಟ್ಮಕ್ಳನ್ನ ಮದ್ವೆ ಆಗ್ತಾರಾ. ನಿಂಗೆ ಒಳ್ಳೇ ಹುಡುಗ ಸಿಕ್ಕಿ ಮದುವೆ ಆಗಿ ಸುಖವಾಗಿ ಬಾಳು ತಾಯಿ’ ಅಂತ ಮನಃಪೂರ್ವಕವಾಗಿ ಹಾರೈಸಿದ್ದರು.ನನ್ನಂತ ಕುರೂಪೀನೂ ಸುಂದರಿ ಅಂದ್ರಲ್ಲಾ ಅಂತ ನಂಗೆ ಖುಷಿಯೇ ಆಗಿತ್ತು…. 

“ಅವರ ಮಗಳ ಮದುವೇನೂ ಆಯ್ತು.  ಆಮೇಲೆ ಅವರ ಹೆಂಡತಿಗೆ ಅದೇನು ಖಾಯಿಲೆ ಬಂತೋ ಕಾಣೆ; ದಿನದಿನಕ್ಕೂ ನವೆಯುತ್ತಾ ಹೋಗಿ ಒಂದಾರು ತಿಂಗಳಲ್ಲಿ ಹೋಗೇ ಬಿಟ್ರು.  ಮೇಷ್ಟ್ರು ಒಬ್ಬಂಟಿಯಾಗಿದ್ರು. ಅದೆಷ್ಟು ಪ್ರಯತ್ನ ಪಟ್ರೂ ನಂಗೆ ಒಂದು ಗಂಡೂ ಸಿಗಲಿಲ್ಲ.  ಇದೇ ಕೊರಗಲ್ಲೇ ಅಪ್ಪ ಹಾಸಿಗೆ ಹಿಡಿದವರು ಒಂದಿನ ಇವರನ್ನ ಕರೆಸಿಕೊಂಡು ಕೇಳಿಕೊಂಡರು.  “ಇನ್ನು ಹೆಚ್ಚು ದಿನ ನಾನು ಬದುಕ್ತೀನೀಂತ ನನಗನ್ನಿಸ್ತಿಲ್ಲ; ನಾನು ಸಾಯೋ ಮುಂಚೆ ಇವಳನ್ನು ಒಂದು ಒಳ್ಳೇ ಕೈಯಲ್ಲಿಡಬೇಕೂಂತ ತುಂಬಾ ಪ್ರಯತ್ನ ಪಟ್ಟೆ.  ಇನ್ನು ನನ್ನಿಂದಾಗಲ್ಲ.  ನಿನ್ನ ಹೆಂಡತೀನೂ ಪಾಪ ತೀರ್ಕೊಂಡ್ಳು.  ಈಗ ನೀನೂ ಒಬ್ಬಂಟಿಯಾಗಿದೀಯ. ನಮ್ಮ ಅಹಲ್ಯನ ಕನ್ಯಾಸೆರೇನ ಬಿಡಿಸ್ತೀಯ?” ಹೌಹಾರಿ ಹೋದ್ರು ಮೇಷ್ಟ್ರು “ಅವ್ಳು ನನ್ನ ಮಗಳ ಸಮಾನ.  ನಾನು ಹೇಗೆ ಮದುವೆಯಾಗಕ್ಕೆ ಸಾಧ್ಯ ಹೇಳಿ.  ದಯವಿಟ್ಟು ಈ ಮಾತೊಂದು ಆಡಬೇಡಿ. ನಾನೂ ಬೇಕಾದ್ರೆ ಅವಳ ಮದುವೇಗೆ ಪ್ರಯತ್ನ ಪಡ್ತೀನಿ.” ಅದ್ಯಾಕೋ ನಮ್ಮಪ್ಪ ಹಿಡಿದ ಪಟ್ಟನ್ನು ಬಿಡಲಿಲ್ಲ.  `ಸಾಯೋ ಮುದುಕನ ಮಾತು ನಡೆಸಿಕೊಡು’ ಅಂತ ಪಟ್ಟು ಹಿಡಿದು ಒಪ್ಪಿಸಿಬಿಟ್ರು.  ಮದುವೆಯ ಯಾವ ಸಂಭ್ರಮಾನೂ ನಂಗಿರಲಿಲ್ಲ. ನಮ್ಮ ಮನೆಯಿಂದ ಪಕ್ಕದ ಮನೆಗೆ ಬಂದಿದ್ದೆ ಅಷ್ಟೆ.  ಅವರಿಗೆ ಯಾವತ್ತೂ ನನ್ನನ್ನ ಹೆಂಡತಿಯಾಗಿ ನೋಡಕ್ಕೇ ಆಗ್ಲಿಲ್ಲ. ನಂಗೂ ಅವರನ್ನ ಗಂಡನ ಹಾಗೆ ನೋಡಕ್ಕೆ ಆಗ್ಲಿಲ್ಲ.  ಇಬ್ರೂ ಅಪ್ಪ, ಮಗಳ ಹಾಗೆ ಇದ್ವಿ.  ಅವರ ಮಗಳು, ಅಳಿಯ ಯಾವಾಗಾದರೂ ಬಂದಾಗ ಅವರಿಬ್ಬರ ಮಾತು, ಕತೆ, ಒಡನಾಟ ನಾನೇನು ಕಳೆದುಕೊಂಡಿದೀನಿ ಅನ್ನೋದನ್ನ ಚುಚ್ಚಿ ತೋರಿಸ್ತಿತ್ತು.  ಅವಳಿಗೂ ನಮ್ಮ ಮದುವೆ ಅಷ್ಟೊಂದು ಸಹನೆಯಾಗೇನೂ ಇರಲಿಲ್ಲ; ಸುಮ್ಮನಿದ್ದಳು ಅಷ್ಟೇ.. ಗೆಳತಿಯಾಗಿದ್ದೋಳನ್ನ ಮಗಳಾಗಿ ನೋಡೋದು ಎಷ್ಟು ಕಷ್ಟ ಅಲ್ವಾ?” “ಹೌದು ನಿಜಕ್ಕೂ” ಅಂದಳು ಸುಜಾತ. ಆಕೆಯ ಮಾತು ಮುಂದುವರೆಯಿತು.  “ವಠಾರದ ಸುತ್ತಮುತ್ತಲ ಎಲ್ಲರ ಕಣ್ಣಲ್ಲೂ ನಾವಿಬ್ಬರೂ ಗಂಡ ಹೆಂಡತಿ. ತೀರಿಕೊಂಡ ಅಪ್ಪನಿಗೆ ನೆಮ್ಮದಿ ಸಿಕ್ಕಿತ್ತು.  ಅಮ್ಮ ಅವರ ತಮ್ಮನ ಮನೆ ಸೇರಿಕೊಂಡಿದ್ದಳು.  ನಾನು ಸದಾ ಒಬ್ಬಂಟಿಯೇ… ಪ್ರತಿ ರಾತ್ರಿಯೂ ನನ್ನನ್ನು ಕೊಲ್ಲುತ್ತಿತ್ತು. ಬೆಳಗಾದರೆ ಸಾಕು ಎಂದು ಕಾಯುವಂತಾಗುತ್ತಿತ್ತು.  ವಠಾರದ ಮನೆಯಲ್ವಾ ಅಕ್ಕಪಕ್ಕದ ಮನೆಗಳ ಮಂಚಗಳ ಕಿರಕಿರ ಸದ್ದು, ಕಿಲಕಿಲ ನಗು ಮನಸ್ಸನ್ನು ಕೆಡಿಸುತ್ತಿತ್ತು. ಉಪವಾಸವಿರಬಹುದು; ಊಟವಿದ್ದೂ ಉಪವಾಸವಿರುವುದು ಕಷ್ಟ ಅಲ್ವಾ…  ಯಾರಾದರೂ ವಯಸ್ಸಿನ ಹುಡುಗರನ್ನು ಸಹಜವಾಗಿ ಮಾತಾಡಿಸಿದರೂ ಎಲ್ಲರ ಕಣ್ಣೂ ನನ್ಕಡೆ ತಿರುಗ್ತಿತ್ತು.  ಕೆಲವರಂತೂ ನನಗೆ ಕೇಳೋ ಹಾಗೆ `ಪಾಪ ಮೇಷ್ಟ್ರು’ ಎಂದು ಹೇಳುತ್ತಿದ್ದರು.  ಜಗತ್ತಿಗೆಲ್ಲಾ ಅವರು ಒಳ್ಳೆಯವರು!! ನಾನು?  ನಾನೇನು ಪಾಪ ಮಾಡಿದ್ದೆ? ಕುರೂಪಿ ಹೆಣ್ಣಿಗೆ ಆಸೆಗಳಿರುವುದಿಲ್ಲವೇ? ಯೌವನವಿರುವುದಿಲ್ಲವೇ.  ತಡಕೊಳ್ಳಲಾಗ್ದೆ ಒಂದ್ಸಲ ಮನೇಲಿದ್ದ ತಿಗಣೆ ಔಷದಿ ಕುಡಿದುಬಿಟ್ಟಿದ್ದೆ.  ಹೇಗೆ ಹೇಗೋ ಬದುಕಿಸಿಕೊಂಡರು… ಆಗ್ಲೂ ಮೇಷ್ಟ್ರು ಪಾಪ! ನಾನು ಪಾಪಿ!” ಮಳೆಯ ಶಬ್ದದಲ್ಲೂ ಅವರು ಬಿಕ್ಕುತ್ತಿರುವುದು ಕೇಳುತ್ತಿತ್ತು. ಮಳೆ ನಿಲ್ಲುತ್ತಾ ಬಂತು.

ಹತ್ತಿರ ಎದ್ದು ಹೋಗಿ ಅವರ ಪಕ್ಕದಲ್ಲಿ ಕುಳಿತ ಸುಜಾತ ಅವರ ಬೆನ್ನನ್ನು ನೇವರಿಸಲು ಕೈಚಾಚಿದಳು. ಠಕ್ಕನೆ ಕರೆಂಟು ಬಂದು ಮನೆಯಲ್ಲಿದ್ದ ಮಿಣುಕುದೀಪ ಹೊತ್ತಿಕೊಂಡಿತು. ಚಾಚಿದ ಕೈಗೆ ಅವರ ಬೆತ್ತಲೆ ಬೆನ್ನು ತಗುಲಿತು. ತಲೆ ಮೇಲಿನ ಸೆರಗು ಜಾರಿ ಬೋಡುತಲೆ ಕಾಣಿಸಿತು. ಇದೇನು? ಹೌಹಾರಿದಳು ಸುಜಾತ.  “ಇಲ್ಲದಿದ್ದರೆ ಮಠದಲ್ಲಿ ಪಂಕ್ತಿಯಲ್ಲಿ ಊಟ ಹಾಕುವುದಿಲ್ಲ…” ಮೂಕಳಾದ ಸುಜಾತ ತಡೆಯಲಾಗದೆ ಅವರನ್ನು ತಬ್ಬಿಕೊಂಡಳು.. ಕಣ್ಣೀರು ಬೋಡುನೆತ್ತಿಯ ಮೇಲೆ ಜಾರುತ್ತಿತ್ತು…

******

One thought on “ಮಹಿಳಾದಿನದ ವಿಶೇಷ

Leave a Reply

Back To Top