ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!

ವಿಶೇಷ ಲೇಖನ

ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!

ಪ್ರಚಾರಪ್ರಿಯರಲ್ಲದ, ಪ್ರಚಾರವನ್ನೇ ಬಯಸದ ಎಲೆಮರೆಕಾಯಿಯ ಸಾಧಕಿ ಸಕಲಕಲವಲ್ಲಭೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ

!

ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆಮಾತಾಗಿರುವ ಕಮಲಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ (ಹಟ್ಟಿ ಚಿನ್ನದ ಗಣಿ) ನಿವಾಸಿ.

ಇವರ ಪೂರ್ವಜರು ಆಂಧ್ರದವರು. ಆಗ ಹಗಲುವೇಷ, ಬುರ್ರಕಥೆ ಹೇಳುತ್ತಾ ಹೀಗೆ ಲೋಕ ಸಂಚಾರಿಯಾಗಿ ವಲಸೆ ಬರುತ್ತಾ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ನೆಲೆಗೊಂಡಿದ್ದಾರೆ. ಇವರ ಹಿರಿಯರ ಆಂಧ್ರದಲ್ಲಾಗಲಿ, ಈಗಿನ ಇವರ ಕರ್ನಾಟಕದಲ್ಲಾಗಲಿ ಒಂದು ಖಾಯಂ ನೆಲೆಸುವ ಸ್ಥಳ ನಿಗದಿತವಾಗಿ ಇದೇ ಅಂತ ಇರಲಿಲ್ಲ. ಆಗ ಒಂದು ಊರಲ್ಲಿ ನೆಲೆಸಿದ್ರೆ ತಿಂಗಳಿಗಿಂತ ಹೆಚ್ಚು ದಿನಗಳಿದ್ದ ಊರುಗಳ ಉದಾಹರಣೆಯೇ ಇಲ್ಲ. ಊರಿಗೊಂದು ನಾಲ್ಕು ದಿನ ಟೆಂಟ್ ಹಾಕ್ತಾ ಹೋಗೋರು. ಈ ಊರು ಬಿಡುತ್ತೇವೆ ಎಂದರೆ, ಮುಂದಿನ ಊರಲ್ಲಿ ಇರೋಕೆ ಸ್ಥಳ, ಪ್ರಾಣಿಗಳಿಗೆ ಹುಲ್ಲು, ನೀರು, ಆಹಾರದ ಸಂಪನ್ಮೂಲಗಳು ಸಿಗುತ್ತವೆಯಾ ಅಂತ ಖಚಿತತೆಗೆ ಮೊದಲೇ ಜಾಗ ನೋಡ್ಕಂಡು ಬರೋರು. ಜಾಸ್ತಿ ಹೆಂಡ ಕುಡಿಯೋರು. ಆಗ ಹೆಂಡ ಎಂಟಾಣೆ-ನಾಕಾಣೆಗೆ ಸಿಗುತ್ತಿತ್ತು. ಜಾಸ್ತಿ ಗುಡ್ಡಗಾಡು ನೋಡೋರು ಅಡವಿಯಲ್ಲೆ ಇರೋರು. ಇವರ ತಂದೆ ಅಡವಿಯೊಳಗಿನ ಪಲ್ಯ ತಿನ್ನಿಸಿಯೇ ಬೆಳೆಸಿದ್ದಾರೆ. ಆಡು, ದನ ಸಾಕಿದ್ರೂ ಸಹ ಅಡವಿಯಾಗಿನ ಮೇವು, ನೀರೇ ಗತಿ. ಮತ್ತೆ ಮನೇಲಿ ಹುಲ್ಲಾಗಲಿ, ನೀರಾಗಲಿ ಹಾಕ್ತಿವಿ ಅನ್ನುವಂಗಿಲ್ಲ ಇವರಿಗೂ ಅಡವಿಯೇ ಊಟ ಆಗಿರುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾ, ಹಿಂಗೆಲ್ಲ ಬದುಕಿದ ನಂತರ ಮೂವತ್ತು ವರ್ಷದ ಹಿಂದೆ ಖಾಯಂ ಆಗಿ ಇವರ ತಂದೆ ಮಸ್ಕಿ ತಾಲೂಕಿನ ಕುಗ್ರಾಮವಾದ ನೆಲಕೋಳದಲ್ಲಿ ನೆಲೆಗೊಳ್ಳುತ್ತಾರೆ.

ಕಾರಣ, ಅಲ್ಲಿನ ಜನ ನೀವೆಲ್ಲ ಚೆನ್ನಾಗಿ ಹಗಲುವೇಷ, ಬುರ್ರಕಥೆ ಹೇಳುವವರು. ಮಕ್ಳು ಮರಿ ಕಟ್ಕೊಂಡು ಊರೂರು ಯಾಕೇ ಸುತ್ತುತ್ತೀರಿ ನಮ್ಮೂರಲ್ಲೆ ಇದ್ದುಬಿಡಿ ಅಂತ ಇವರಿಗೆ 8 ಎಕರೆ ಗೈರಾಣಿ ಭೂಮಿ ಯತಗಲ್ ರಾಮನಗೌಡ, ಶಾಣುಗೌಡ, ಹನುಮಗೌಡ, ನೆಲಕೋಳದ ತಳವಾರ ರಂಗಪ್ಪ (ಇಲ್ಲಿ ಹೆಸರಿಸಿದ ಕೆಲವೊಬ್ಬರು ಈಗಲೂ ಇದ್ದಾರೆ) ಮುಂತಾದ ಗಣ್ಯರು ಸೇರಿ (ಗುಡ್ಡದ ಅಕ್ಕ-ಪಕ್ಕ ಭೂಮಿ, ಇವರ ಹೆಸರಲ್ಲಿ ಸಹ ಇರುವುದಿಲ್ಲ. ಕೃಷಿಯೇತರ ಸರಕಾರದ ಅಧೀನದಲ್ಲಿರುವ ಭೂಮಿ) ಕೊಟ್ಟಿದ್ದರು. ಸುಮಾರು ವರ್ಷ ಅಲ್ಲಿ ವ್ಯವಸಾಯ ಮಾಡಿ ಆ ಹೊಲದಲ್ಲಿ ದಾಸರಾವು ಸೇರಿದ್ದಕ್ಕಾಗಿ ಜೀವಭಯಕ್ಕೆ ಆ ಭೂಮಿ ಸಹ ಬಿಟ್ಟರು. ಈಗ ಅಲ್ಲಿ ಸರಕಾರ ಗಿಡಗಳನ್ನು ನೆಟ್ಟಿದೆ.

ಕಮಲಮ್ಮನ ತಾಯಿ ನಾಗಮ್ಮ, ಅಜ್ಜಿ ಯಲ್ಲಮ್ಮ ಬುರ್ರಕಥಾ ಹೇಳುತ್ತಿದ್ದರು. ಆಗಿನ‌ ಕಾಲದಲ್ಲಿ ಡುಮ್ಕಿ ಯಲ್ಲಮ್ಮ, ನಾಗಮ್ಮ ಬುರ್ರಕಥೆ ಹೇಳುತ್ತಾರಂದ್ರೆ ಸಾಕು ಜನ ಸೇರೋರು. ಅಷ್ಟೊಂದು ಚಿರಪರಿಚಿತ ಪರಿಣಿತರು. ಆಗವರನ್ನು ಮೀರಿಸುವವರು ಯಾರೂ ಇರಲಿಲ್ಲ. ಆಗ ವೇದಿಕೆಗಳ ಮುಖವೇ ನೋಡದ ಪ್ರತಿಭೆಗಳವು. ಆ ವ್ಯವಸ್ಥೆಯೂ ಇರಲಿಲ್ಲ. ಇಡೀ ಊರಿಗೆ ರಾತ್ರಿ ಒಂದು ಬಡಾವಣೆಯ ಯಾರದಾದ್ರೂ ಮನೆಮುಂದೆ, ದೇವಸ್ಥಾನಗಳ ಮುಂದೆ ಬುರ್ರಕಥೆ ಹೇಳುತ್ತಿದ್ದರು. ಅದೇ ಇವರ ವೇದಿಕೆಯಾಗಿತ್ತು. ನಾಗಮ್ಮನ ಹಿಂದೆ ಹಿಮ್ಮೇಳವಾಗಿ ಇವರು ಹೋಗುತ್ತಿದ್ದರು. ಸುಮಾರು ವರ್ಷಗಳ ಕಾಲ ಹಿಮ್ಮೇಳವಾಗಿಯೇ ಇದ್ದರು. ನಾಗಮ್ಮನಿಗೆ ಕೆಮ್ಮು-ದಮ್ಮು, ಕಫ ಸೇರಿ ಸುಸ್ತಿಯಾದ ಕಾರಣ ಬುರ್ರಕಥೆ ಬಿಟ್ಟರು. ಮಕ್ಕಳು ಒತ್ತಾಯಪೂರ್ವಕವಾಗಿ ಬುರ್ರಕಥೆಯೇ ಹೇಳಬೇಡ ಅಂತ ಬಿಡಿಸಿದರು. ಅವರ ನಂತರ ಇವರು ಬುರ್ರಕಥೆಯ ಪರಂಪರೆ ಮುಂದುವರೆಸುತ್ತಾ ಬರುತ್ತಿದ್ದಾರೆ. ನಾಗಮ್ಮನಿಗೆ ಬರುವ ಕಥೆಗಳೆಲ್ಲವೂ ಇವರಿಗೆ ಬರುತ್ತವೆ. ನನ್ನ ತಾಯಿಯ ವಿದ್ಯೆಯನ್ನೇ ಯಥಾವತ್ತಾಗಿ ನಾನು ಕಲಿತುಕೊಂಡೆ ಎಂದು ಬಹು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇವರ ಹುಟ್ಟೂರು ನಿಖರವಾಗಿ ಇವರಿಗೆಯೇ ತಿಳಿದಿಲ್ಲ. 25 ವರ್ಷದ ಹಿಂದೆ ಇವರನ್ನು ಯಾರೋ ವಿದ್ವಾಂಸರು ಸಂದರ್ಶಿಸಿ ಇವರು ಹಾಡುವ ಹಾಡು, ಕೆಲ‌ಕಥನಗಳನ್ನು ರೆಕಾರ್ಡಿಸಿಕೊಂಡು ಹಣ ಬರುತ್ತೆ, ಕೊಡುತ್ತೇವೆಂದು ಹೇಳಿದವರು ಇಲ್ಲಿಯವರೆಗೂ ಅವರು ಪತ್ತೆಯೇ ಇಲ್ಲದಂತಾಗಿದೆ.

25 ವರ್ಷದ ಹಿಂದೆ ಸಾಕಷ್ಟು ಊರುಗಳಲ್ಲಿ ಬುರ್ರಕಥೆಗಳನ್ನು ಹೇಳಿದ್ದಾರೆ. ಈಗ ಕೇಳುವ ಅಥವಾ ಆಲಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆದದ್ದರಿಂದ ಆ ವಾತಾವರಣ ಇಲ್ಲ. ಈಗಲೂ ಯಾರಾದರೂ ಕಥೆ ಹೇಳಿ ಅಂದರೆ ಹೇಳುತ್ತಾರೆ.

ಆಗಿನ ಜನ ಇವರನ್ನು ಕರೆದು ಕಥೆ ಹೇಳಿ, ಹಾಡು ಹೇಳಲು ಬರ್ರೀ ಅಂತ ಮನೆಗೆ ಬಂದು ಕರೆದುಕೊಂಡು ಹೋಗಿ ತಮ್ಮ ಮನೆಮುಂದೆ ಕೂರಿಸಿಕೊಂಡು ಆಲಿಸುತ್ತಿದ್ದರು. ಇಂದು ಆ ಜನಗಳ‌ ಮನಸ್ಥಿತಿ ಇಲ್ಲದವರಂತಾಗಿದೆ. ಇಡೀ ರಾತ್ರಿ ಬುರ್ರಕಥೆ ಹೇಳಿದ್ರೆ ಆಗ ಮೂವತ್ತೈದು ರೂಪಾಯಿ ದುಡ್ಡು, ಮುಂಜಾನೆ ಮನೆಮನೆಗೆ ಹೋದ್ರೆ ಕಥೆ ಕೇಳಿದವರು ಉಡಿಹಕ್ಕಿ ಹಾಕಿ ದವಸ-ಧಾನ್ಯಗಳನ್ನು ಶೇರುಗಟ್ಟಲೇ ಕೊಡುತ್ತಿದ್ದರು.

ಇವರ ಕಾಯಕವೇ ಬುರ್ರಕಥೆ ಹೇಳುವುದು. ಬುರ್ರಕಥೆಯನ್ನು ಹೇಳಿದ್ರೆನೆ ಹೊಟ್ಟೆ ತುಂಬುವುದು. ಆಗಾಗಿ ಕಲೆಯೇ ಜೀವ, ಅದರಿಂದಲೇ ನಮ್ಮ ಜೀವನವೆಂಬ ಧ್ಯೇಯವಾಕ್ಯ ಇವರದಾಗಿದೆ. ಕಮಲಮ್ಮ ಮುಖ್ಯ ಹಾಡುಗಾರ್ತಿಯಾದರೆ, ಇವರ ಹಿಮ್ಮೇಳವಾಗಿ ದಿ.ಶಾಂತಮ್ಮಜ್ಜಿ, ಅತ್ತೆ ದಿ.ದೇವಮ್ಮ, ದುರುಗಮ್ಮ, ಲಿಂಗಮ್ಮ ಇರುತ್ತಿದ್ದರು. ಈಗ ದುರುಗಮ್ಮ, ಗಂಗಮ್ಮ, ಮಲ್ಲಮ್ಮ, ನಾಗಮ್ಮ ಹಿಮ್ಮೇಳವಾಗಿ ಇರುತ್ತಾರೆ. ಈ ಅದ್ಭುತ ಅನಕ್ಷರಸ್ಥೆ ಕಲಾವಿದೆಯ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥನಕಾವ್ಯಗಳು ಕಲಾ ರಸಿಕರನ್ನು ಮನಸೂರೆಗೊಳಿಸುತ್ತವೆ. ತಂಬೂರಿಯೊಂದಿಗೆ ಗಗ್ಗರ ಮತ್ತು ಡಕ್ಕೆಗಳನ್ನು ನುಡಿಸುತ್ತಾ ಮಹಾಕಾವ್ಯ ಹಾಡುತ್ತಾರೆ. ಇವರ ಅಕ್ಕಪಕ್ಕದಲ್ಲಿ ಶಿಷ್ಯರು ಕುಳಿತು ಹಿಮ್ಮೇಳ ಕೊಡುತ್ತಾರೆ. ಜನಪದ ಕಾವ್ಯ, ಕಥನಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿ ವಿಶೇಷವಾಗಿ ಆಕರ್ಷಿಸುತ್ತಾರೆ. ಈಕೆ ತನ್ನ ಕಂಚಿನ ಸುಮಧುರ ಕಂಠದಿಂದ ಬುರ್ರಕಥಾ ಮಹಾಕಾವ್ಯಗಳನ್ನು ಹಾಡಲಾರಂಭಿಸಿದರೆ ಎದೆ ತುಂಬಿ ಬರುತ್ತದೆ. ತಂಬೂರಿ, ಗಗ್ಗರಿ ಹಿಡಿದು “ತಂದಾನ,, ತಾನ ತಾನ,‌ ತಂದಾನ” ಎಂಬ ಪಲ್ಲವಿಯೊಂದಿಗೆ ಹಾಡಲು ನಿಂತರೆ ಪ್ರೇಕ್ಷಕರು ತಲೆದೂಗೋದಂತೂ ತಪ್ಪುವುದಿಲ್ಲ.

ಮೂಲತಃ ತನ್ನ ತಾಯಿ ಹಾಡುವ ಕಥನಗಳನ್ನು ಕಲಿತು ಇಂದಿಗೂ ಇವರು ಪ್ರಮುಖವಾಗಿ ಹಾಡುವ ಕಥೆಗಳೆಂದರೆ- ಬಾಲನಾಗಮ್ಮನ ಕಥೆ, ಏಳು ಮಕ್ಕಳ ತಾಯಿ ಭೂಲಕ್ಷ್ಮೀ ಕಥೆ, ಶರಬಂಧರಾಜ ಕಥೆ, ಬಾಲರಾಜ ಕಥೆ, ಚಿತ್ರಶೇಖರ-ಸೋಮಶೇಖರ ಕಥೆ, ಲಕ್ಷಪತಿರಾಜ ಕಥೆ, ಆದೋನಿ ತಿಕ್ಕಲಕ್ಷಮ್ಮ ಕಥೆ, ಸವಾರೆಮ್ಮ ಕಥೆ, ಹೇಮರೆಡ್ಡಿ ಮಲ್ಲಮ್ಮ ಕಥೆ, ಬಳ್ಳಾರಿ ಕೂಸಲಿಂಗ ಕಥೆ, ಕುಮಾರಸ್ವಾಮಿ ಕಥೆ ಇತ್ಯಾದಿ ಬುರ್ರಕಥಾಗಳನ್ನು ಹಾಡುತ್ತಾರೆ. ಈ ಕಥೆಗಳಲ್ಲಿ ಹೆಚ್ಚಿನವು ನಾನಾ ಕಾರಣಗಳಿಂದ ಕಥಾ ನಾಯಕ ಅಥವಾ ನಾಯಕಿ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ್ದೇ ಆಗಿರುತ್ತದೆ. ಈ ಕಥೆ ಕೇಳಿದ ಜನರು ಇಂಥ ಮಹಾತ್ಮರೇ ಕಷ್ಟಪಟ್ಟ ಮೇಲೆ ಸಾಮಾನ್ಯರಾದ ತಮ್ಮ ಕಷ್ಟ ದೊಡ್ಡದಲ್ಲ ಎಂದು ಭಾವಿಸುತ್ತಾರೆ.

ಒಂದೂರಲ್ಲಿ ಇದ್ದರೆಂದರೆ, ಗಂಡುಮಕ್ಕಳು ನಾಲ್ಕುದಿನ ಹಾರ್ಮೋನಿಯಂ, ತಬಲ, ಪರಿಕರಗಳನ್ನು ತೆಗೆದುಕೊಂಡು ಹಗಲುವೇಷ ಹಾಕಿ ಐದನೇ ದಿನಕ್ಕೆ ಪಾಲು ಇಟ್ಟು ಗೌರವಾರ್ಥವಾಗಿ ಮನೆಮನೆಗೆ ತೆರಳಿ ಹಣ, ದವಸ-ಧಾನ್ಯ, ಕಾಳುಕಡ್ಡಿ ಸ್ವೀಕರಿಸುತ್ತಿದ್ದರೆ, ಮಹಿಳೆಯರು ದಂಬಡಿ, ಡಕ್ಕೆ, ತಂಬೂರಿ,ಡುಮುಕಿ ತೆಗೆದುಕೊಂಡು ಬುರ್ರಕಥಾ, ಜನಪದ ಇತ್ಯಾದಿ ಪಾರಂಪರಿಕವಾಗಿ ಬಂದಂತಹ ಹಾಡುಗಳನ್ನು ಹಾಡುತ್ತಾ ದೇಣಿಗೆ ಸ್ವೀಕರಿಸುತ್ತಿದ್ದರು. ಆಗ ಬಂದಂತಹ  ಧಾನ್ಯಗಳನ್ನು ಹೀಗಿನಂತೆಯೇ ಮಾರುವುದು ತಿಳಿದಿರಲಿಲ್ಲ ಆಗ ಒಂದು ರೂ.ಗೆ ಜೋಳ ಸಿಗುತ್ತಿದ್ದವು. ಅವೆಲ್ಲವೂ ಆಗುವತನಕ ತಿಂದು ಮುಂದಿನ ಊರಿಗೆ ಅಲೆಮಾರಿಗಳಾಗಿ ಹೋಗುತ್ತಿದ್ದರು.

ಬಹಳ ಲೆಕ್ಕವಿಲ್ಲದಷ್ಟು ಜನಪದ, ಸೋಬಾನೆ ಪದ, ಜೋಗುಳ ಪದ, ಬೀಸುವ ಪದ, ಕುಟ್ಟುವ ಪದ, ತೊಟ್ಟಿಲು ಪದ, ಸೀಮಂತ ಕಾರ್ಯಕ್ರಮ, ಬಸವಣ್ಣ, ಇತ್ಯಾದಿ ದೇವರ ಮೇಲೆ ಪದ, ಹಬ್ಬ-ಹುಣ್ಣಿಮೆಗಳಲ್ಲಿ ಹತ್ತಿ ಬಿಡಿಸುವಾಗಿನ ಪದಗಳು, ಬಿತ್ತನೆ ಸಂದರ್ಭದ ಪದ, ಮದುವೆಯ ಅರಿಶಿಣದ ಪದಗಳನ್ನು, ಮೈನೆರೆದಾಗ ಕರೆದ್ರೆ ಅಲ್ಲೂ ಸಹ ಸಾಕಷ್ಟು ಹಾಡುಗಳನ್ನು ಹಾಡುತ್ತಾರೆ ಹಾಗೂ ಪರಂಪರಾಗತ ಹಾಡುಗಳ ಜೊತೆಗೆ ಬುರ್ರಕಥೆಗಳನ್ನೂ ಹೇಳುತ್ತಾರೆ. ತೆಲುಗು ಭಾಷೆಯಲ್ಲೂ ಸಹ ಆದೋನಿಯ ತಿಕ್ಕಲಕ್ಷ್ಮಮ್ಮನ ಕಥೆ, ಬಾಲನಾಗಮ್ಮ ಕಥೆ ಇತ್ಯಾದಿ ಮಹಾಕಾವ್ಯಗಳನ್ನು ಹಾಗೂ ಕೆಲ ಜನಪದ ಹಾಡುಗಳನ್ನೂ ಸಹ ಹಾಡುತ್ತಾರೆ. ಇವರಲ್ಲಿ ಜನಪದದ ಭಂಡಾರವೇ ಅಡಗಿದೆ. ಅದನ್ನು ಗುರುತಿಸುವ, ಸಂಪಾದಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಸಂರಕ್ಷಿಸಿ ಉಳಿಸಬೇಕಾದ ಕಾರ್ಯವಾಗಬೇಕಿದೆ.

ಇವರ ತಂದೆ ದಿ.ಬಸವಲಿಂಗಪ್ಪ, ತಾಯಿ ದಿ.ನಾಗಮ್ಮ. ಕಮಲಮ್ಮ ವಯಸ್ಕಳಾಗುತ್ತಿದ್ದಂತೆ ಲಿಂಗಸಗೂರು ತಾಲೂಕಿನ ಗುಂತಗೋಳದ ದಿ.ಶರಣಪ್ಪ ಅವರ ಮಗ ಹನುಮಂತನನ್ನು ವಿವಾಹವಾಗಿ ಹಟ್ಟಿ ಪಟ್ಟಣಕ್ಕೆ ಬಂದು ಸುಮಾರು 40-45 ವರ್ಷಗಳಿಂದಲೇ ಶಾಶ್ವತವಾಗಿ ಇಲ್ಲೆ ನೆಲೆಸಿದ್ದಾರೆ. ಇವರ ಮಾವ ದಿ.ಶರಣಪ್ಪ ಬಹುರೂಪಿ ಚೌಡಯ್ಯನಂತೆ ಕಲಾಕಾರ ಹಾಗಾಗಿ ಗುಂತಗೋಳ, ಗುರುಗುಂಟ, ಹಟ್ಟಿ ಸುತ್ತಮುತ್ತ ಕೆಲ ಹಳ್ಳಿಗಳಲ್ಲಿ ಈಗಲೂ ಚಿರಪರಿಚಿತ ವ್ಯಕ್ತಿ.

ಬಾಲ್ಯದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೂತು ಬೀಸೋಕೆ ಬಂದವರತ್ರ ಸ್ವಲ್ಪ-ಸ್ವಲ್ಪ ಹಿಟ್ಟನ್ನು ಪಡೆಯುತ್ತಿದ್ದರು.

ಈಚಿಲ ಚಾಪೆಯೂ ಹೆಣೆದಿದ್ದಾರೆ ಈಗಲೂ ಸಹ ಇದ್ರೆ ಹೆಣೆಯುತ್ತಾರೆ. ಮಣ್ಣಿನ ಕೊಡದಾಗ ನೀರು ಕುಡಿದು, ಮಣ್ಣಿನ ಗಡಿಗ್ಯಾಗ ಅಡುಗೆ ಮಾಡಿಕೊಂಡೂ ಮಣ್ಣಿನ ಹೆಂಚಿನ‌ ಮೇಲೆ ರೊಟ್ಟಿ ಮಾಡಿ ಅದು ಒತ್ತಟ್ಟಿಗೆ ಸುಟ್ಟರೆ, ಒತ್ತಟ್ಟಿಗೆ ಸುಡುತ್ತಿರಲಿಲ್ಲ ಹಸಿ-ಬಿಸಿ ಇದ್ದಿದ್ದಂಗೆ ಮಾಡ್ಕೊಂಡು ಹಾಗೆಯೇ ತಿನ್ನುತ್ತಿದ್ದರು.

ಆಗ ನೆಲ್ಲನ್ನು ಬೀಸಿ ಕುಟ್ಟಿ ಅಕ್ಕಿ ಮಾಡಿ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ನೆಲ್ಲು-ಸಜ್ಜೆ ಬೀಸುತ್ತ ಕುಟ್ಟಿದ್ದಾರೆ. ಆದರೆ ಈಗಿನವರು ಮಾಡಕ್ಕಾಗದ ಕೆಲಸವದು. ಕೂಲಿನಾಲಿ ಮಾಡಿ ಸಹ ತುಂಬಾ ಕಷ್ಟಪಟ್ಟು ಜೀವನ ಇಲ್ಲಿಯವರೆಗೆ ಸವೆಸಿದ್ದಾರೆ. ಈಗ ಇವರತ್ರ ಜಮೀನಿಲ್ಲ. ಮೂರು ರೂಪಾಯಿ ಕೂಲಿಗಾಗಿ ದಿನಪೂರ್ತಿ ಬೆನ್ನು ಮುರಿದುಕೊಂಡು ದುಡಿದಿದ್ದಾರೆ.

ನಾಲ್ಕು ರೂ.ಗೆ ಕೂಲಿಗೆ ಕಿವ್ಯಾಗ, ಮೂಗಿನ್ಯಾಗ ಮಣ್ಣು ಸೋರತಿತ್ತು. ಬರುವಾಗ ತೋಟದವರು ಪಂಪ್ ಸೆಟ್  ಚಾಲೂ ಮಾಡಿದ್ರೆನೆ ಜಳಕ ಮಾಡಿ ಮನೆಗೆ ಬರುವ ಸ್ಥಿತಿ ಇತ್ತು. ಆಗಿನ ಕಾಲಕ್ಕೆ ಇವರ ಒಂದು ತಿಂಗಳಿನ ಕೂಲಿಯ ಆದಾಯ ಲೆಕ್ಕ ಹಾಕಿದರೆ 25-30 ಮಾತ್ರ ಇರುತ್ತಿತ್ತು. ಬಾಲಕಾರ್ಮಿಕರಾಗಿ ಹೊಟ್ಟೆ ತುಂಬಿಸುವ ಅನಿವಾರ್ಯತೆಯ ಕಾಯಕದಲ್ಲಿ ಬೆಳೆದವರು. ಆ ದುಡ್ಡನ್ನು ಇವರ ತಂದೆ ತಲೆಗೆ ಟವೆಲ್ ಸುತ್ತಿಕೊಂಡು ಸುತ್ತಲಿನ ದೇವರಿಗೆಲ್ಲ ನಮಸ್ಕರಿಸಿ ಎಣಿಸುತ್ತಿದ್ದರೆಂದು ಮುಗುಳ್ನಗುತ್ತಾ, ನೆಲಕೋಳದ ತಳವಾರರ ಬಾವಿಯಲ್ಲಿ ಹೊಂಡು ತೆಗೆಯಲು ಎರಡೂವರೆ ರೂ. ಗೆ ಕೂಲಿ, ಕಾಚಾಪುರದ ಕರಾಳೆಪ್ಪರ ಹೊಲದಲ್ಲಿ ಕಸ, ಕಳೆವು ತೆಗೆಯಲು ಕೂಲಿಗೆ ಹೋಗಿದ್ದೇವೆಂದು ಹಿಂದಿನ ನೆನಪಿನ ಬುತ್ತಿಯನ್ನು ಎಳೆಎಳೆಯಾಗಿ ಕಣ್ಮುಂದೆ ನಡೆದಂತೆ ರೋಚಕವಾಗಿ ತಿಳಿಸುತ್ತಾರೆ.

ಪುರುಷರಿಗೆ ಹಗಲುವೇಷ, ಮಹಿಳೆಯರಿಗೆ ಬುರ್ರಕಥೆಯೇ ಇವರ ಕಾಯಕ. ಆಗ ಹಗಲುವೇಷ ಆಡಿದ್ರೆ ಒಬ್ಬೊಬ್ಬರಿಗೆ ಆದಾಯ ಕೇವಲ 40-50 ಅಷ್ಟೇ ಬರುತಿತ್ತು. ಇವರ ಕುಲವೃತ್ತಿಯೇ ಬುರ್ರಕಥೆ ಆಗಿರುವುದರಿಂದ ಆಗ ಬುರ್ರಕಥೆ ಅಂದ್ರೆನೇ ಇವರುಗಳಿಗೆ ತಿಳಿಯುತ್ತಿರಲಿಲ್ಲವಂತೆ. ಆಗ ಡುಮುಕಿ ಅಂದ್ರೆ ಮಾತ್ರ ಗೊತ್ತಾಗುತ್ತಿತ್ತು, ಆ ಕಾಲಕ್ಕೆ ಡುಮುಕಿ ಅಷ್ಟೊಂದು ಹೆಸರುವಾಸಿ ವಾದ್ಯ. ಈಗ ಇತ್ತೀಚಿಗೆ ಬರುಬರುತ್ತಾ ಅಕ್ಷರ ಬಲ್ಲವರಿಂದ ಈ ಕಲೆ ಬುರ್ರಕಥೆ ಅಂತ ಗೊತ್ತಾಗಿದೆ ಎಂದು ಹೇಳುತ್ತಾರೆ.

ನಾಡೋಜ ದರೋಜಿ ಈರಮ್ಮನವರ ಮೌಖಿಕ ಕಾವ್ಯಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಕ್ಷರರೂಪಕ್ಕೆ ಇಳಿಸಿದಂತೆ ಈ ಕಮಲಮ್ಮನ ಜನಪದ, ಬುರ್ರಕಥೆಗಳನ್ನೂ ಪುಸ್ತಕ ಮಾಡಲಿ ಎಂದು ಸ್ಥಳೀಯರ ಅಭಿಮತವಾಗಿದೆ.

ಬಡತನದಲ್ಲಿಯೇ ಅರಳಿದ ಪ್ರತಿಭೆ ಇವರು ಅನಕ್ಷರಸ್ಥರಾದರೂ ಬುರ್ರಕಥಾ, ಜನಪದ ಹೇಳುವುದರಲ್ಲಿ ಹಾಗೂ ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು ಹಾಗೂ ಎತ್ತಿದ ಕೈ ಅಂದರೆ ತಪ್ಪಾಗಲಾರದು. ಇವರು ಸೂಲಗಿತ್ತಿಯ ಪ್ರವೃತ್ತಿಯನ್ನ ಕಾಯಕ ಮಾಡಿಕೊಳ್ಳದೇ, ಬುರ್ರಕಥೆಯನ್ನು ಮಾತ್ರ ಕಾಯಕ ಮಾಡಿಕೊಂಡಿದ್ದಾರೆ. ಇವರಿಗೆ ಒಂಬತ್ತು ಜನ ಮಕ್ಕಳು. ಆರು ಗಂಡು, ಮೂರು ಹೆಣ್ಣು. ಎರಡು ಹೆಣ್ಣು ಒಂದು ಗಂಡು ತೀರಿ ಸದ್ಯ ಐದು ಗಂಡು-ಒಂದು ಹೆಣ್ಣು ಒಟ್ಟು ಆರು ಮಕ್ಕಳಿದ್ದಾರೆ. ಮೂರು ಗಂಡ್ಮಕ್ಕಳಿಗೆ ಮದುವೆಯೂ ಮಾಡಿದ್ದಾರೆ. ಕರ್ನಾಟಕದ ಬಯಲಾಟ, ಯಕ್ಷಗಾನಗಳ ರೀತಿಯಲ್ಲಿ ಬುರ್ರಕಥೆ ಆಂಧ್ರದಲ್ಲಿ ಹೆಚ್ಚು ಜನಪ್ರಿಯ ಜನಜನಿತವಾದ ಕಲೆ. ಆಧುನಿಕ ಜನಪ್ರಿಯ ಮನೋರಂಜನಾ ಮಾಧ್ಯಮಗಳು ಪ್ರಚಾರಕ್ಕೆ ಬರುವ ಪೂರ್ವದಲ್ಲಿ ಗ್ರಾಮೀಣ ಪರಿಸರದ ಮನೋರಂಜನಾ ಮಾಧ್ಯಮವಾಗಿದ್ದ ಕಲೆ ಇದು.

ಇವರಿಗೆ ಹೆರಿಗೆ ಆದ್ರೂ ಸಹ ಒಂದು ಗುಳಿಗೆಯಾಗಲಿ, ಸೂಜಿ ಸಹ ತೆಗೆದುಕೊಂಡಿಲ್ಲ. ಮನೆಯಲ್ಲಿಯೇ ಬಾಣಂತನ ಮಾಡಿಕೊಂಡಿದ್ದಾರೆ. ಇವರಿಗೆ ಹೆರಿಗೆ ಆದ್ರೂ ಸಹ ಪಕ್ಕದ ಮನೆಯವರೆಗೆ ಕಿಂಚಿತ್ತೂ ಸಹ ತಿಳಿಯುತ್ತಿರಲಿಲ್ಲ. ಹಂಗ ಬಾಣಂತನ ಮಾಡ್ಕೋತಿದ್ವಿ. ಈಗಿನವರದು ಸಿಜೇರಿಯನ್ ಅದೂ-ಇದೂ ಅಂತ ಆಗ್ತವೆ ಎಂದು ಮಗು ಹೊಟ್ಟೆಯಲ್ಲಿರುವಾಗ ಉರಿ ಕಟ್ಟು ಮಾಡಿ ಹೆಣ್ಮಕ್ಕಳು ಇಟ್ಟುಕೊಳ್ಳುವ ಕ್ಲಿಪ್ ನ್ನು ಇಡುತ್ತಾರೆ. ಒಬ್ಬೊಬ್ಬರು ಹಾ ಎಂದು ಗಾಬರಿಯಾದ್ರೆ ಎದೆಗೆ ತಾಗಿಕೊಂಡರೆ ಮರಣ ಹೊಂದುವ ಸಂಭವವೇ ಹೆಚ್ಚು. ಸೂಲಗಿತ್ತಿಯರು ಉರಿಯನ್ನು ಹೊರಗೆ ಬಂದಾಗಲೇ ಕಟ್ಮಾಡೋದು ಆದರೆ ಆಸ್ಪತ್ರೆಲಿ ಒಳಗಿರುವಾಗಲೇ ಕಟ್ಮಾಡಿ ಕ್ಲಿಪ್ ಹಚ್ಚಿ ಅಥವಾ ಕತ್ತರಿಸಿ ಬಿಟ್ಟು ಬಿಡುತ್ತಾರೆ. ಹಾಗಾಗಿ ಬಾಣಂತಿಗೆ ತ್ರಾಸಾಗೋದು ಸರ್ವೇ ಸಾಮಾನ್ಯ. ಚೊಲೋ ಬಾಣಂತನ ಆದ್ರೂ ಸಹ ದಾರಿ ಇಲ್ಲ. ಅದಿಲ್ಲ-ಇದಿಲ್ಲ ಅಂತ ಮುಗ್ಗುಲ-ಮುಗ್ಗುಲು ಮಾಡಿ ಕಳಿಸುತ್ತಾರೆಂದು ಸೂಲಗಿತ್ತಿಯ ಕಾರ್ಯ, ಆಯಾಮಗಳನ್ನು ತಿಳಿಸುತ್ತಾರೆ.

ಗರ್ಭೀಣಿಯರು ಬ್ಯಾನಿ ತಿಂದ್ರೆ, ಮಗು ಅಡ್ಡಲಾಗಿದ್ರೆ ಸೀದಾ ಮಾಡ್ಕೋತ್ತಾರೆ. ಗಂಡಾಗಿದ್ರೆ ಎಡಕ್ಕಿರುತ್ತೆ, ಹೆಣ್ಣಾಗಿದ್ರೆ ಬಲಕ್ಕಿರುತ್ತೆ. ಆದರೆ ಈಗ ಆಧುನಿಕ ಆಹಾರ ಪದ್ಧತಿಗಳಿಂದ ತಾಯಿ ಹೊಟ್ಟೆಲಿ ಮಗು ಅತ್ತಂದಿತ್ತ ತಿರುಗುವುದರಿಂದ ನಿಖರವಾಗಿ ಹೇಳಲು ಅಸಾಧ್ಯ. ಕೈಯಾಡಿಸಿ ಒಬ್ಬೊಬ್ಬ ಹೆಂಗಸಿಗೆ ಪಕ್ಕೆಗೆ, ಎದಿಮ್ಯಾಲೆ, ಅಡ್ಡಲೂ ಇರ್ತದೆ ಆದ್ರೂ ಸಹ ಹೆಣ್ಣೋ-ಗಂಡು ಅಂತ ನೋಡುತ್ತಾರೆ. ಒಳ್ಳೆಣ್ಣೆ ಹೊಕ್ಕಳ ಬುಡ್ಡಿ ಮೇಲೆ ಬಿಟ್ಟು ಯಾಕಂದ್ರೆ, ಬೆವರು ಬಂದಿದ್ರೆ ಸರಿಯಾಗಿ ಇದೇ ಸಮಯಕ್ಕೆ ಪಕ್ಕಾ ಹಡೆಯುತ್ತಾಳೆಂದು ಖಾತ್ರಿಯಾಗುತ್ತಿತ್ತು. ಕೆಲವರು ತಂಗಳ ಆಹಾರ ತಿಂದಿದ್ರೆ ಬ್ಯಾನಿಯಿದ್ರೆ ಇನ್ನೂ ತಡ ಆಗುತ್ತದೆ ಅಂತ ನಿಟ್ಟುಸಿರು ಬಿಟ್ಟು ನಿರ್ಭಯದಿಂದ ಇರುತ್ತಿದ್ದರು.

ಇವರ ತಾಯಂದಿರಿಗೆ ಹೆರಿಗೆ ಆದ್ರೆ ಊರಿನ ಮನೆಗಳಿಗೆ ತೆರಳಿ ಅಮ್ಮಾ, ಹರಿಬಿ (ಬಟ್ಟೆ), ಕಟ್ಟಿಗೆ ಕೊಡು. ಮಾಸು ಇಳಿಸೋಕೆ ಮಣ್ಣಿನ ಮಗಿ ಕೊಡು, ಸ್ವಲ್ಪ ಕುಳ್ಳು ಕೊಡಮ್ಮಾ ಬಾಣಂತಿ ಇದಾಳೆಮ್ಮ ಉಟ್ಕೊಳ್ಳಲಿಕ್ಕೆ ಬಟ್ಟೆಯಿಲ್ಲ. ಸೀರಿ ಕೊಡು ತಾಯಿ, ಕೂಸಿಗೊಂದು ಬಟ್ಟೆ ಕೊಡು ತಾಯಿ ಅಂತ ಕೇಳುವವರು. ಎರಡು ಸೀರೆ ಕೊಟ್ಟಿದ್ರೆ ಒಂದು ಹರಿದು ಕೂಸಿಗೆ ತುಂಡು ತುಂಡು ಹಾಕಿ ಅವರದೇ ಊಟ, ಬಟ್ಟೆ ತಿಂದು ಒಂದೈದು ದಿನವಾದರೆ ಹೆರಿಗೆ ಮುಗಿಯಿತು. ಮತ್ತೊಂದು ಊರಿಗೆ ತಲೆಮೇಲೆ ಹೊತ್ತುಕೊಂಡು ಊರೂರಿಗೆ ಜೀವನ ಮಾಡ್ತಾ ಹೋಗುವವರು. ಭಾರವಾದ ವಸ್ತುಗಳಿದ್ರೆ ಆಕಳ ಮೇಲೆ ಹಾಕೋರು.

ಸುಮಾರು ಐದುನೂರು ಹೆರಿಗೆ ಮಾಡಿಸಿರಬಹುದು. ತಾಯಿ ನಾಗಮ್ಮನಿಂದ ಸೂಲಗಿತ್ತಿ, ತಂದೆ-ತಾಯಿಯಿಂದ ಔಷಧಿಗಳನ್ನು ಕೊಡುವುದು ಕಲಿತಿದ್ದಾರೆ. ಈಗಲೂ ಪರಿಚಯಸ್ಥರು, ಸಮುದಾಯದವರು ಮಕ್ಕಳಿಗಾಗಲಿ, ತಮಗಾಗಲಿ ಔಷಧಿಗಾಗಿ ಬರುತ್ತಾರೆ. ಬಹುತೇಕ ಔಷಧಿಗಳನ್ನು ಅಡವಿಯಿಂದಲೇ ತರುತ್ತಾರೆ. ಇವರ ಕೈಯಿಂದ ಗುಣವಾದವರು ಇವರಿಗೆ ಹೃತ್ಪೂರ್ವಕವಾಗಿ ಧನ್ಯತಾಭಾವದಿಂದ ನಮಸ್ಕರಿಸುತ್ತಾರೆ. ಈಗಲೂ ಇವರ ಮಕ್ಕಳಿಗೆ ಜ್ವರ ಇತ್ಯಾದಿ ಏನಾಗಿದ್ದರೂ ಸಹ ಇವರೇ ಮೊದಲ ವೈದ್ಯರು ಬೇಗ ಗುಣಪಡಿಸಲು ಎತ್ತಿದ ಕೈ. ತಾಯಿಯ ತಾಯಿ ಸೂಲಗಿತ್ತಿ ಮಾಡುತ್ತಿದ್ದಳು. ಇವರು ಚಿಕ್ಕ ಮಕ್ಕಳ ತರ ಮುಂದೆ ಹೋಗಿ ನೋಡುತ್ತಾ ನಿಲ್ತಿದ್ದರು. ತಾಯಿ ನಾಗಮ್ಮ ಜೊತೆ ಸೂಲಗಿತ್ತಿಯ ಸಹಾಯಕಳಾಗಿ ಅವರಿಂದೆ ಬುರ್ರಕಥಾ, ಜನಪದ ಹಾಡುಗಳೂ ಸಹ ಹೇಳುತ್ತಿದ್ದಕ್ಕಾಗಿ ಆಗ ನೀನು ಹುಷಾರಿದ್ದಿ ಮಾ, ಸ್ವಲ್ಪ ಹೆರಿಗೆ ಮಾಡೋದು ಕಲಿತ್ಕೋ ಅಂತ ಬಾಣಂತನದ ಆಯಾಮಗಳನ್ನು ಹಿಂಗ-ಹಿಂಗ ಅಂತ ನಾಗಮ್ಮ ತೋರಿಸಿ ಕಲಿಸಿಕೊಟ್ಟಿದ್ದಾರೆ.

ಅಡ್ಡ-ಗಿಡ್ಡ ಮಗು ಇದ್ರೆ ನಮ್ಮ ಮನೆಮನೆಯೊಳಗೆ, ಸಮುದಾಯದಲ್ಲೂ ಭಯವಿಲ್ಲದೇ ಹೆರಿಗೆಯನ್ನು ಮಾಡ್ಕೋತಿವಿ. ಆದ್ರೆ ಬೇರೆ ಜನಗಳಿಗಾದ್ರೆ ಹೀಗಿದೆ ಮಾಡು ಅಂದ್ರೆ ಮಾಡ್ತೇವೆ, ಇಲ್ಲದಿದ್ದರೆ ದವಾಖಾನೆಗೆ ಹೋಗಿ ಅಂತ ಮುಲಾಜಿಲ್ಲದೇ ಹೇಳುತ್ತೇವೆ. ಈಗ ಹೆದರಿಕೊಂಡು ಮಾಡಿದ್ರೂ ಕೂಡ ಭಯವಿದೆ. ಆದ್ರೂ ಮಾಡುತ್ತೇನೆ. ಈಗಲೂ ತಂಗಿ ಮಕ್ಳಿಗೆ ಸರಿಸುಮಾರು ಹತ್ತು ಹೆರಿಗೆ ತಪ್ಪದೇ ನಾನೇ ಮಾಡಿರುವೆ. ಅವರಿಗೆ ಆಶಾಕಾರ್ಯಕರ್ತೆಯರು ದಿನಾಲೂ ಬಂದ್ಬಂದು ಬೈದು ಹೋಗಿದ್ದಾರೆಂದು ತಿಳಿಸುತ್ತಾರೆ.

ಕಾಮಿಣಿ (ಬಿಳಿ, ಹಸಿರು), ಮುಟ್ದೋಸಿ, ತಟ್ಟು, ಕುರುಹು, ಗಡ್ಡೆ, ವಾಂತಿ ಭೇದಿ, ವಿಶೇಷ ಗುಣ ಎಂಬಂತೆ ಚಿಕ್ಕ ಮಕ್ಕಳಿಗೆ ಬೇಗ ಗುಣಪಡಿಸುವುದು ಕರಗತವಾಗಿದೆ. ಪಕ್ಕೆ ಬಡಕೊಂಡ್ರೆ ಔಷಧಿ, ಕಾಮಿಣಿಗೆ ಕೊರಳಲ್ಲಿ ಔಷಧಿ ಕಟ್ಟುತ್ತಾರೆ. ಮೈಲಿಗೆ, ಗಣಿಜಿಲಿ ಇತ್ಯಾದಿ ರೋಗಗಳನ್ನು ಬಹುಬೇಗ ಕಂಡುಹಿಡಿದು ಔಷಧಿಯೂ ಸಹ ನೀಡುತ್ತಾರೆ.

ಕನ್ನಡ ಕಥಾಗುಚ್ಛ ಬರಹಗಳ ಕೈಪಿಡಿ ಫೇಸ್‌ಬುಕ್ ಬಳಗದ ಹೇಸರೇಳಲು ಇಚ್ಛಿಸದ ಕಲಾಪೋಷಕ ಸದಸ್ಯರೊಬ್ಬರು ಮೊದಲಿಗೆ ಐದು ಸಾವಿರ ರೂ. ಗೌರವಧನ ಕೊಟ್ಟು ಅಮ್ಮನ ಕಲೆಯನ್ನು ಪೋಷಿಸಿದ್ದಾರೆ. ಆ ಹಣವನ್ನು ಶ್ರೀಮತಿ ಲತಾ ಜೋಶಿ ಬ್ಯಾಡಗಿಯವರು ತಲುಪಿಸಿದ್ದಾರೆ. ಬೆಳಕು ಸಂಸ್ಥೆಯು ಬೆಳಕು ಕನ್ನಡ ರಾಜ್ಯೋತ್ಸವ, ಕರ್ನಾಟಕ ಜಾನಪದ ಪರಿಷತ್ತು ರಾಯಚೂರು ಜಾನಪದ ಶ್ರೀ ಪ್ರಶಸ್ತಿ, ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿಯನ್ನು, ಪ್ರಗತಿ ಸಾಹಿತ್ಯ ವೇದಿಕೆ ವಿಜಯಪುರ ವತಿಯಿಂದ ಸನ್ಮಾನಿಸಿ, ಗೌರವಿಸಿದ್ದರು.

ಎಲೆಮರೆಯ ಕಾಯಂತೆ ಇವರ ಅಮೂಲ್ಯ ಕಂಠಶ್ರೀಯಿಂದ ಗ್ರಾಮೀಣರಿಗೆ ನೀತಿಬೋಧೆ ಮಾಡುವ ಬುರ್ರಕಥಾ ಕಲೆಯ ಅಪರೂಪದ ಇವರಿಗೆ ಕರ್ನಾಟಕ ಸರ್ಕಾರವು ಈ ಸಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಮಾನವೀಯತೆಯ ಜನಪದದ ವೈದ್ಯೆಯ ಸೇವೆ ಹಾಗೂ ಸಾಂಸ್ಕೃತಿಕ ಸೇವೆಯು ಅನನ್ಯವಾಗಿದೆ. ಜನಪದದ ವೈಶಿಷ್ಟ್ಯ ಎಂಬಂತೆ ಬುರ್ರಕಥೆ ಕಲೆ ಹೇಗೋ ಕನ್ನಡದಲ್ಲೂ ಆಕಾರ ಪಡೆದು ಇತ್ತೀಚಿಗೆ ಕರ್ನಾಟಕದಲ್ಲಿ ಜನಪ್ರಿಯವಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಬುರ್ರಕಥಾ ಕಮಲಮ್ಮ ಹೆಸರಿನಲ್ಲಿ ಇವರ ಸೇವೆ ಮತ್ತು ಹಾಡುಗಳು ಲಭ್ಯವಾಗುತ್ತವೆ. ಹಟ್ಟಿಯ ವರದಿಗಾರರಾದ ಶ್ರೀ ಬಲಭೀಮರಾವ್ ಕುಲಕರ್ಣಿ ನಮ್ಮೂರ ನಮ್ಮೋರು ಎಂಬ ವಿಜಯವಾಣಿ ಸಾಧಕರ ಪಟ್ಟಿಯ ವಿಶೇಷ ಅಂಕಣ ಇವರ ಬಗ್ಗೆ ಬರೆದಿದ್ದು, ಇವರ ಜಾನಪದ ಕ್ಷೇತ್ರದ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದ ಕರ್ನಾಟಕ ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮಹೇಂದ್ರ ಡಿ ಅವರು ಸರ್ಕಾರದ ಗಮನಕ್ಕೆ ತಂದ ಕೀರ್ತಿ ಮಾತ್ರ ಇವರಿಗೆ ಮತ್ತು ಸಹಕರಿಸಿದ ರಾಯಚೂರಿನ ಶ್ರೀ ಶರಣಪ್ಪ ಗೋನಾಳ ಹಾಗೂ ಶ್ರೀ ಬಲಭೀಮರಾವ ಕುಲಕರ್ಣಿ ಪತ್ರಕರ್ತ ಅವರಿಗೆ ಸಲ್ಲಬೇಕಾದದ್ದು ಎಂದು ಕುಟುಂಬದವರು ತಿಳಿಸುತ್ತಾರೆ.

ಬುರ್ರಕಥೆ ಹಾಡುವವರು ಬಹುಪಾಲು ತಮ್ಮ ಹೊಟ್ಟೆ ತುಂಬಿಸುವುದಕ್ಕೆ ವೃತ್ತಿಗಾಯಕರಾದವರು. ಪರಂಪರೆಯಿಂದ ಕೆಲವು ನಿರ್ದಿಷ್ಟ ವೀರಗಾಥೆಗಳನ್ನು ಮಾತ್ರ ಕಂಠಸ್ಥ ಮಾಡಿಕೊಂಡು ಅದನ್ನು ಕನ್ನಡೀಕರಿಸಿ ಪ್ರಾದೇಶಿಕ ಎಲ್ಲೆಯನ್ನು ದಾಟಿ ಭಾಷಾ ಬಾಂಧ್ಯವ್ಯಕ್ಕೆ ಇವರು ಸೇತುವೆಯಾಗಿದ್ದಾರೆ. ಇವರಿಗೆ ಭಾಷಾಭಿಮಾನಕ್ಕಿಂತ ಬದುಕು ದೊಡ್ಡದಾಗಿದೆ. ವಿದ್ಯಾವಂತರೆಂದು ಕರೆಸಿಕೊಳ್ಳುವ ನಮಗೆ ಮಾತ್ರ ಭಾಷೆಯ ಪ್ರಾಚೀನತೆ, ಶ್ರೇಷ್ಠತೆಯ ಪ್ರಜ್ಞೆ ಕಾಡುತ್ತದೆ.

ನೀವೂ, ಈ ತಾಯಿಯನ್ನ ಮಾತನಾಡಿಸಬೇಕೆ ಕರೆಮಾಡಿ, ಅಭಿನಂದನೆ ತಿಳಿಸಿ: 9972684402

ವಿಶೇಷ ಲೇಖನ

ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!

ಪ್ರಚಾರಪ್ರಿಯರಲ್ಲದ, ಪ್ರಚಾರವನ್ನೇ ಬಯಸದ ಎಲೆಮರೆಕಾಯಿಯ ಸಾಧಕಿ ಸಕಲಕಲವಲ್ಲಭೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ

ಶಿವರಾಜ್ ಮೋತಿ

Leave a Reply

Back To Top