ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಒಲವ ಪ್ರಶ್ನೆಗೆ ಉತ್ತರ ನೀಡಲು ಕವಿತೆಯ ಕರೆಯಿಸಿದೆಯಲ್ಲ ನೀನು
ಛಲದ ಪದಗಳ ಸೇರಿಸಿ ಸುಂದರ ಹಂದರದಿ ಬರೆಯಿಸಿದೆಯಲ್ಲ ನೀನು.
ಸಾಹಿತ್ಯದ ಹಂಬಲ ಜೀವನದ ಪ್ರೀತಿಯನ್ನು ಹೆಚ್ಚಿಸುತ್ತಾ ಸಾಗುತ್ತಿದೆಯಲ್ಲವೇ
ಹಿತದ ಬೆಂಬಲದಿ ದಿನವೂ ಅಕ್ಷರಮಾಲೆಯ ಕಟ್ಟುವ ಕಲೆ ಬೆರೆಯಿಸಿದೆಯಲ್ಲ ನೀನು
ಅನುರಾಗದ ಅಲೆಗಳ ಸುಳಿಗೆ ಸಿಲುಕಿ ಹೊರಬರಲು ಆಗುತ್ತಿಲ್ಲ ನೋಡು
ಸಾನುರಾಗದ ಹಾಡಿಗೆ ಮನವು ಮೌನವಾಗಿ ನರ್ತಿಸುತ ಮರೆಯಿಸಿದೆಯಲ್ಲ ನೀನು
ಆಕಾಶದೆತ್ತರಕ್ಕೆ ಚಿಮ್ಮುವ ಆಸೆಗಳ.ನನಸಾಗಿಸುವ ಹುಚ್ಚು ಸಾಹಸದಲಿರುವೆ.
ಅವಕಾಶ ಮೂಡಿಸಿ ಅದುಮಿದ ಕನಸುಗಳ ತೇಲುವ ವರಸೆ ತೆರೆಯಿಸಿದೆಯಲ್ಲ ನೀನು
ಸಂಗೀತ ಮಾಂತ್ರಿಕ ಶಕ್ತಿಗೆ ಜಯ ಸರಸದಿ ಒಲಿದು ಬರುವಳು ಗೆಳೆಯಾ
ಸಂಗಾತಿ ಯಾಂತ್ರಿಕ ಯುಗದಲಿ ಭರವಸೆಯ ಬೆಳಕು ಮೆರೆಯಿಸಿದೆಯಲ್ಲ ನೀನು