ಮಕ್ಕಳು ಓದಿದ ಟೀಚರ್ ಡೈರಿ

ಪುಸ್ತಕ ಸಂಗಾತಿ

ಮಕ್ಕಳು ಓದಿದ ಟೀಚರ್ ಡೈರಿ

ಲೇ:ವೈ. ಜಿ. ಭಗವತಿ

ಪುಸ್ತಕದ ಹೆಸರು: ಮಕ್ಕಳು ಓದಿದ ಟೀಚರ್ ಡೈರಿ
ಪುಸ್ತಕದ ಪ್ರಕಾರ: ಮಕ್ಕಳ ಸಾಹಿತ್ಯ
ಲೇಖಕರು: ವೈ. ಜಿ. ಭಗವತಿ
ಪ್ರಕಾಶನ: ವಿಜಯಾ ಪ್ರಕಾಶನ ಕಲಘಟಗಿ
ಪ್ರಕಟವಾದ ವರ್ಷ: 2021
ಪುಟಗಳ ಸಂಖ್ಯೆ: 114
ಬೆಲೆ: 110 ರೂ.
ಸಂಪರ್ಕ ಮೊ. ಸಂಖ್ಯೆ: 9448961199
ಗೂಗಲ್ ಪೇ/ಫೋನ್ ಪೇ ಮೂಲಕ ಪುಸ್ತಕ ಪಡೆದುಕೊಳ್ಳಬಹುದು.

ವೈ. ಜಿ. ಭಗವತಿಯವರು ರಚಿಸಿರುವ ಮಕ್ಕಳು ಓದಿದ ಟೀಚರ್ ಡೈರಿ ಎಂಬ ಮಕ್ಕಳ ಕಾದಂಬರಿಯು ಶಾಲಿನಿ ಎಂಬ ಹಳ್ಳಿಯ ಸಾಮಾನ್ಯ ಕುಟುಂಬದ ಹುಡುಗಿಯ ಜೀವನ ವಸ್ತುವನ್ನಾಗಿಟ್ಟುಕೊಂಡು ಬೆನ್ನಟ್ಟಿದ ಕಥನವಾಗಿದೆ. ಬಯಲುನಾಡಾದ ಬೀಳಗಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರ ಗ್ರಾಮಕ್ಕೆ ಶಿಕ್ಷಕಿಯಾಗಿ ಬಂದಂತಹ ಶಾಲಿನಿ ಟೀಚರ್ ರಜೆ ಸಿಕ್ಕಾಗಲೆಲ್ಲಾ ತನ್ನೂರಾದ ಬೀಳಗಿಗೆ ಹೋಗಿಬರುತ್ತಿದ್ದರು. ಹೀಗೆ ಒಮ್ಮೆ ಟೀಚರ್ ಊರಿಗೆ ಹೋದಾಗ ಟೀಚರನ ಅಣತಿಯಂತೆ ರೂಮ್ ಸ್ವಚ್ಛ ಮಾಡಲು ಬಂದಿದ್ದ ಮಕ್ಕಳು ಟೀಚರಗೆ ಗೊತ್ತಿರದ ಹಾಗೆ ಅವರ ಡೈರಿ ಓದಿದ್ದೇ “ಮಕ್ಕಳು ಓದಿದ ಟೀಚರ್ ಡೈರಿ” ಕಾದಂಬರಿಯ ವಸ್ತು. ಈಗಾಗಲೇ ಈ ಕಾದಂಬರಿ 2021ರ “ಜಿ. ಬಿ. ಹೊಂಬಳ” ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಪುಸ್ತಕ ಪ್ರಶಸ್ತಿ ಪಡೆದುಕೊಂಡಿದೆ.
ಮಕ್ಕಳ ಹೃದಯ ತಟ್ಟುವಂತೆ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಈ ಕಾರ್ಯ ವೈ. ಜಿ. ಭಗವತಿಯವರು ಅತ್ಯಂತ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಒಂದು ಸಾಮಾನ್ಯ ವಿಷಯವನ್ನು ಅತ್ಯಂತ ಗಾಂಭೀರ್ಯತೆ ಸೃಷ್ಟಿಸಿ ಸನ್ನಿವೇಶಗಳನ್ನು ಮತ್ತೆ ಸರಳಿಕರಣಗೊಳಿಸುವ ಕಲೆ ಶ್ರೀಯುತರಿಗೆ ಕರಗತವಾಗಿದೆ ಎಂಬುದನ್ನು ಕಾದಂಬರಿ ಸ್ಪಷ್ಟ ಪಡಿಸುತ್ತದೆ.
ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದ ಸಂಬಂಧವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿನ ಸಂಬಂಧ ಒಂದೇಜ್ಜೆ ಮುಂದೆನೆ ಅಂತ ಹೇಳಬಹುದು. ಅಲ್ಲಿ ಗುರು ಶಿಷ್ಯರ ಸಂಬಂಧ ಕೇವಲ ಪಾಠಗಳಿಗೆ ಮಾತ್ರ ಸೀಮಿತವಾಗಿರದೆ ಶಿಕ್ಷಕರ ಮನೆಕೆಲಸಗಳಲ್ಲಿಯೂ ಸಹಾಯ ಮಾಡುವುದು ಸಾಮಾನ್ಯ. ಅಂತಹ ಪ್ರದೇಶಗಳಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಬಹುಶಃ ಅನುಭವಿಸಿದವರೇ ಅದರ ಆನಂದದ ಆಳ ಹೇಳಬಲ್ಲರು.
ಪ್ರಸ್ತುತ ಕಾದಂಬರಿಯಲ್ಲಿ ಭಗವತಿಯವರು ಮಕ್ಕಳು ಡೈರಿ ಓದಿದ ಪರಿ ವಿನೂತನವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಮಕ್ಕಳಿಗೆ ಡೈರಿ ಸಿಕ್ಕಾಗ ಅವರಿಗಿದ್ದ ಕುತೂಹಲ, ಗಾಂಭೀರ್ಯ ಅತ್ಯಂತ ಸೊಗಸಾಗಿ ಸೃಷ್ಟಿಸಿಕೊಂಡಿದ್ದಾರೆ. ಬಯಲುನಾಡಿನ ಗ್ರಾಮೀಣ ಭಾಗದ ಟೀಚರ್ ಅಲ್ಲಿ ನೀರಿಗಾಗಿ ಪರದಾಡಿದ್ದು, ಜಗಳವಾಡಿದ್ದು, ಇದ್ದ ಒಂದು ಬೋರವೆಲ್ ಒಂದುವೇಳೆ ಕೆಟ್ಟರೆ ನೀರಿಗಾಗಿ ಊರಿನಲ್ಲಿ ಹಾಹಾಕಾರ, ನೀರಿಗಾಗಿ ಗ್ರಾಮ ಪಂಚಾಯ್ತಿಗೆ ಹೋಗಿ ಮನವಿ ಸಲ್ಲಿಸುವ ಪರಿ ಹೀಗೆ ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆಗಳು ಲೇಖಕರು ಅತ್ಯಂತ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ.
ಬಾಲ್ಯದಲ್ಲಿ ಶಾಲಿನಿ ಶಾಲೆ ಕಲಿಯುವಾಗ ರುಸ್ತುಂ ಸರ್ ಅವಳಿಗೆ ಸಹಾಯ ಮಾಡಿದ್ದು ಮತ್ತು ಅತ್ಯಂತ ಕಷ್ಟದಲ್ಲಿ ಶಾಲೆ ಕಲಿತು ಡಿ. ಎಡ್ ಪಾಸಾಗಿ ಶಿಕ್ಷಕರ ಪರೀಕ್ಷೆ ಬರೆದಿದ್ದ ಶಾಲಿನಿಗೆ ಒಂದಿನ ಏಕಾಏಕಿ ನೌಕರಿಯ ಆರ್ಡರ್ ಕಾಫಿ ಬಂದಾಗ ಅವಳಿಗೆ ಮತ್ತು ಅವರ ಕುಟುಂಬಕ್ಕೆ ಆಗುವ ಸಂತೋಷ, ಸಾರ್ಥಕಭಾವ, ಜಗತ್ತೇ ಗೆದ್ದಷ್ಟು ಸಂಭ್ರಮಿಸಿದ ಪರಿ ಕಾದಂಬರಿಯಲ್ಲಿ ಲೇಖಕರು ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕ ಮಕ್ಕಳ ಹೃದಯ ತಟ್ಟಿ ನಾವೂ ಹೀಗೇ ಬದುಕಬೇಕೆನ್ನುವ ಛಲ ಹುಟ್ಟಿಸುತ್ತದೆ. ಶಾಲಿನಿ ಪುಸ್ತಕದ ಹುಳು ಅಷ್ಟೇ ಆಗಿರದೆ ತನ್ನಿಂದ ದೂರ ಇರುವ ಖೋ.. ಖೋ.. ಆಟದಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಭೇಷ್ ಎನಿಸಿಕೊಳ್ಳುತ್ತಾಳೆ. ಶಾಲಿನಿ ಪ್ರೀತಿಯಿಂದ ಪಪ್ಪಾ ಎಂದು ಕರೆಯುವ ರುಸ್ತುಂ ಸರ್ ಕೂಡ ಒಬ್ಬ ಶಿಕ್ಷಕರಾಗಿದ್ದು ಶಾಲಿನಿ ಜೀವನಕ್ಕೆ ಬೇಕಾದ ಖರ್ಚುವೆಚ್ಚ ಅವರೇ ಬರಿಸುತಿದ್ದರು. ರುಸ್ತುಂ ಸರ್ ಕೂಡಾ ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಉಂಡವರು. ಅನೇಕ ಸಮಸ್ಯೆಗಳನ್ನು ಎದುರಿಸಿದವರು. ಅದಕ್ಕಾಗಿಯೇ ಅವರು ತನ್ನ ತಮ್ಮಂದಿರ, ತಂಗಿಯರ ಮದುವೆ ಮಾಡಿ ತಾವು ಕೊನೆಯವರೆಗೂ ಮದುವೆ ಆಗದೆ ಉಳಿದುಕೊಂಡಿದ್ದರು. ಅವರು ಶಾಲಿನಿಯ ತಂದೆತಾಯಿಗಳೊಂದಿಗೆ ಹೊರರಾಜ್ಯವಾದ ಮಹಾರಾಷ್ಟ್ರದ ಇಚ್ಚಲಕರಂಜಿಗೆ ದುಡಿಮೆಗಾಗಿ ವಲಸೆ ಹೋಗಿದ್ದರು. ಸಾಕಷ್ಟು ಓದಿದ ಅವರಿಗೆ ಅಲ್ಲಿ ಇದ್ದಾಗ ಶಿಕ್ಷಕ ವೃತ್ತಿ ಅರಸಿ ಬರುತ್ತದೆ. ರುಸ್ತುಂ ಸರ್ ಶಿಕ್ಷಕರಾದರೂ ಶಾಲಿನಿಯ ಕುಟುಬದ ಜೊತೆ ಅನನ್ಯವಾದ ಸಂಬಂಧ ಇಟ್ಟಿಕೊಂಡಿದ್ದು ನಾನೊಬ್ಬ ಸರ್ಕಾರಿ ನೌಕರನೆಂದು ಅವರಿಗೆಂದು ಅಹಂಭಾವ ಬರಲೇ ಇಲ್ಲ.
ಒಂದು ದಿನ ರುಸ್ತುಂ ಸರ್ ಮತ್ತು ಶಾಲಿನಿಯ ಕುಟುಂಬ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ರುಸ್ತುಂ ಸರ್ ಅವರ ಕೈಯಲ್ಲಿ ಒಬ್ಬಳು ಹೆಂಗಸು ಒಂದು ಮಗು ಕೊಟ್ಟು ದೇವರ ದರ್ಶನ ಪಡೆದು ಬರುವೆ ಸ್ವಲ್ಪ ಸಮಯ ನೋಡಿಕೊಳ್ಳಿ ಎಂದು ಹೇಳಿ ಹೋದವಳು ಮರಳಿ ಬರಲೇ ಇಲ್ಲಾ. ಆಗ ರುಸ್ತುಂ ಸರ್ ಅವರ ಜೊತೆಗಿದ್ದ ಕುಟುಂಬ ಸಾಕಿಕೊಂಡ ಮಗುವೇ ಶಾಲಿನಿ.
ಒಂದು ದಿನ ಆಕಸ್ಮಿಕವಾಗಿ ಶಾಲಿನಿಗೆ ತನಗೆ ಷೋಸಿಸುವಂತವರು ನನ್ನ ಹಡೆದ ತಂದೆತಾಯಿಗಳಲ್ಲ ಎಂದು ಗೊತ್ತಾಗುತ್ತದೆ. ಈ ಸನ್ನಿವೇಶ ಓದಿದ ಎಂತಹವರಿಗೂ ಮೂಕವಿಸ್ಮಿತನನ್ನಾಗಿ ಮಾಡುವಂತೆ ಶ್ರೀಯುತರು ಅತ್ಯಂತ ಸುಂದರವಾಗಿ ಕಟ್ಟಿದ್ದಾರೆ.
ಮಕ್ಕಳು ಓದಿದ ಟೀಚರ್ ಡೈರಿ ಕಾದಂಬರಿಯು ಪ್ರಸ್ತುತ ಸಮಾಜಕ್ಕೆ ಪಿಡುಗಾಗಿ ಕಾಡುತ್ತಿರುವ ಕೋಮುವಾದಕ್ಕೆ ಔಷಧಿಯಂತಿದೆ. ಅದರಲ್ಲಿ ಹಿಂದೂ ಮುಸ್ಲಿಂ ಕುಟುಂಬದ ಭಾವೈಕ್ಯತೆಗೆ ಕನ್ನಡಿಯಂತೆ ಪಾತ್ರಗಳ ಸೃಷ್ಟಿ, ಭಾವಬೆಸುಗೆಗಳು ಚೆನ್ನಾಗಿ ಮೂಡಿಬಂದಿವೆ. ಜೊತೆಗೆ ಹಸಿರೇ ಕಾಣದ ಬಯಲುನಾಡಿನ ಶಾಲಿನಿ ಟೀಚರ್ ತಾನು ಕೆಲಸ ಮಾಡುವ ಇಂದೂರ ಗ್ರಾಮದ ಹಸಿರು ಪರಿಸರ, ಅಲ್ಲಿನ ಸುಂದರ ಕಾಡು, ರಸ್ತೆಗಳ ವರ್ಣನೆ ಅತ್ಯಂತ ಸುಂದರವಾಗಿ ತಮ್ಮ ಡೈರಿಯಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ದೈಹಿಕವಾಗಿ ಬೆಳೆದರೂ ಮಾನಸಿಕವಾಗಿ ಬೆಳೆಯದ ಫಕ್ಕೀರ ಎಂಬ ವಿದ್ಯಾರ್ಥಿಗೆ ಶಾಲೆಯ ಎಲ್ಲಾ ಶಿಕ್ಷಕರು ತಿರಸ್ಕರಿಸಿದ್ದರೂ ಶಾಲಿನಿ ಟೀಚರ್ ಆ ಮಗುವಿಗೆ ಬಹಳಷ್ಟು ಕಾಳಜಿ ವಹಿಸಿ ಅವನನ್ನು ಬದಲಿಸುತ್ತಾರೆ. ಕೊನೆಯಲ್ಲಿ ಮಕ್ಕಳು ಟೀಚರ್ ಡೈರಿ ಕದ್ದು ಓದಿದ್ದು ಟೀಚರಗೆ ಗೊತ್ತಾಗುತ್ತದೆ. ಮಕ್ಕಳು ಟೀಚರ್ ಹತ್ತಿರ ಕ್ಷಮೆ ಕೇಳುತ್ತಾರೆ. ಶಾಲಿನಿ ಟೀಚರ್ ಆ ಮಕ್ಕಳಿಗೆ ಕ್ಷಮಿಸುವುದರೊಂದಿಗೆ ಮತ್ತು ಫಕ್ಕಿರನ ಬಾಳಲ್ಲಿ ಬೆಳಕಾಗುವುದರೊಂದಿಗೆ ಈ ಕಾದಂಬರಿ ಸುಖಾಂತ್ಯ ಕಾಣುತ್ತದೆ.


ರೆಹಮಾನ್ ಗೋಲಳ್ಳಿ

Leave a Reply

Back To Top