ಎನ್.ಆರ್.ರೂಪಶ್ರೀ ಅವರ “ಪ್ರೀತಿಯೆಂದರೆ” ಕಥಾ ಸಂಕಲನದ ಒಂದು ಅವಲೋಕನ ಡಿ.ಎಸ್.ನಾಯ್ಕ, ಶಿರಸಿ

[1
    ಸುಮಾರು ಮೂರುದಶಕಗಳಾಚೆ ಶಿರಸಿಯಲ್ಲಿ ಎನ್.ಆರ್.ರೂಪಶ್ರೀ ಅವರು  ಅಪ್ಪ ರಾಮನಾಥ ಭಟ್ಟರೊಡನೆ ಸಾಹಿತ್ಯ ವೇದಿಕೆಗಳಲ್ಲಿ ಕವನ ವಾಚಿಸುವ ಅವಕಾಶಕ್ಕಾಗಿ ಪಾದರಸದಂತೆ ಓಡಾಡುತ್ತಿದ್ದ ನೆನಪು. ಅಪ್ಪನದೂ ಅಷ್ಟೆ, ಮಗಳ ಪಾದ ನೋಯಿಸದ ಹೂವಿನ ಮನಸ್ಸು.  ಆದರೂ ಮಗಳ ಉತ್ಸಾಹಕ್ಕೆ ತಣ್ಣೀರು ಎರಚುವ ಮನೋಭಾವದವರಲ್ಲ.  ಅಂದಿನ ದಿನದ ಆ ಪುಟ್ಟಪೋರಿ  ಇಂದಿನ ದಿನದ ಕವಯತ್ರಿ, ಕಥೆಗಾರ್ಥಿ, ನಿರೂಪಕಿ… ಉಪನ್ಯಾಸಕಿಯಾಗಿ ಮೂರ್ತಗೊಂಡ ರೂಪಶ್ರೀ.  ಶಿರಸಿಯಲ್ಲಿ ಕವಿ-ಕಾವ್ಯ-ಬಳಗದ ರೂವಾರಿಗಳಲ್ಲಿ ಒಬ್ಬರಾಗಿ,  ಮೈಸೂರಿನಲ್ಲಿ ಕಾಲೇಜ್ ಒಂದರ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ಪ್ರವೃತ್ತಿಗಳೆರಡಲ್ಲೂ ಪ್ರೀತಿ ತುಂಬಿಸಿಕೊಂಡವರು.
ಕವನಗಳು, ಕಥೆಗಳು ಈಗಾಗಲೇ ಪುಸ್ತಕಗಳಾಗಿ ಬೆಳಕು ಕಂಡಿವೆ.  ಪ್ರಶಸ್ತಿ ಪುರಸ್ಕಾರಗಳೂ ದೊರಕಿವೆ.

     “ಪ್ರೀತಿಯೆಂದರೆ…..”  ಬದುಕಿನ  ಭಾವನೆಗಳನ್ನು ಹೃದಯ ತುಂಬಿಸಿಕೊಂಡ ಯುವ ಯುವತಿಯರ ಬಾಳ ಪಯಣದ ೨೨ ಕಥೆಗಳ ಸಂಕಲನವಿದು.  ಹೆಣ್ಣು ಗಂಡುಗಳ ಒಲವಿನ ಸೆಳೆತ, ಸಂಘರ್ಷ, ಹೃದಯ ಮಿಡಿತ, ಕಾಮನೆಯ ಸುಪ್ತ ಮನಸ್ಸಿನ ಹರಿದಾಟ ಈ ಎಲ್ಲವೂ ನಿಸರ್ಗದ ಆಟ ಎಂಬುದಕ್ಕೆ ಇಲ್ಲಿಯ ಪಾತ್ರಚಿತ್ರಣಗಳು ಸಾಕ್ಷಿಯಾಗಿವೆ.  ಪ್ರೀತಿಯ ಹುಚ್ಚು ಹೊಳೆಯಲ್ಲಿ ಈಜಿ ಗೆದ್ದವರಿದ್ದಾರೆ. ಕೊಚ್ಚಿಹೋಗಿ ರೊಚ್ಚಿಗೆದ್ದು ಹಟ ಸಾಧಿಸಿ ಗೆದ್ದವರೂ ಇದ್ದಾರೆ.  ಕಥಾ ನಿರೂಪಣೆ ಗದ್ಯದಲ್ಲಿದ್ದರೂ ಪದ್ಯದ ಸಾಲುಗಳಂತೆ ಹೃದ್ಯವಾಗಿ ಪ್ರೀತಿಯ ಬೆಚ್ಚನೆಯ ಅನುಭವವನ್ನುಂಟು ಮಾಡುತ್ತದೆ.

     ಹೆಣ್ಣು ಗಂಡುಗಳ ಆಕರ್ಷಣೆಯೇ ಇಲ್ಲಿಯ ಕಥೆಗಳ ಸಾರವಾಗಿದ್ದರೂ, ಯೌವನಾವಸ್ಥೆಯ ಚಲ್ಲಾಟವಾಗಿ ಕಂಡಿಲ್ಲ.  ಪ್ರೀತಿಸಿದವರನ್ನು ಬಿಟ್ಟು ಇನ್ನೊಬ್ಬರ ಬೆನ್ನು ಹತ್ತಿದ ಕಾಪುರುಷರ ಕಥೆಗಳಲ್ಲ.  ಪ್ರೀತಿ ಅದೊಂದು ಬದುಕಿನ ಆದರ್ಶ. ಭಾವ ಲಹರಿಯನ್ನು ಉಲ್ಲಸಿತಗೊಳಿಸುವ ಶಕ್ತಿ ಪ್ರೀತಿಗಿದೆ.  ಪ್ರೀತಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ- ತಮ್ಮಂದಿರನ್ನು ನೆನಪಿಸುತ್ತದೆ.  ಗೆಳಯ-ಗೆಳತಿಯರ ನೆನಪು ಹೃದಯವನ್ನು ಉಲ್ಲಸಿತಗೊಳಿಸುತ್ತದೆ.  ಪ್ರೀತಿ ಒಲಿದರೆ ಕೊರಡು ಕೊನರುತ್ತದೆ. “ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?” ರಾಷ್ಟ್ರಕವಿ ಜಿ‌.ಎಸ್.ಶಿವರುದ್ರಪ್ಪನವರ ಕಾವ್ಯದ ಸಾಲುಗಳನ್ನು ಕಥೆಗಳು ಜ್ಞಾಪಿಸುತ್ತವೆ.

    ಪ್ರೀತಿ ಪ್ರಕೃತಿಯ ಶಕ್ತಿ.  ಯಾವ ವ್ಯಕ್ತಿ ಏನನ್ನೂ, ತನ್ನನ್ನೂ ಪ್ರೀತಿಸಲಾರನೋ ಏಕಾಂಗಿ ಆಗಿ ಬಿಡುತ್ತಾನೆ. “ಪ್ರೀತಿ ಭಾವನೆಗಳಿಗಿರುವ ಶಕ್ತಿ.  ಪ್ರೇಮ- ಪ್ರಣಯ- ಕಾಮ… ಇವೆಲ್ಲ ಸಾಧನೆಯ ಶಿಖರದತ್ತ ಮಾನವನನ್ನು ಕೊಂಡೊಯ್ಯಬಲ್ಲ ಭಾವನೆಗಳು” ಎನ್ನುತ್ತಾರೆ ಮನೋವಿಶ್ಲೇಷಕರು‌.  ಹಾಗೆಯೇ ಇನ್ನೊಂದು ಮಾತನ್ನೂ ಜೋಡಿಸುತ್ತಾರೆ: ಪ್ರೀತಿ ಎನ್ನುವುದು  ಭ್ರಾಂತಿ ಕೂಡ.  ಬಂದಹಾಗೆಯೇ ಹೊರಟು ಹೋಗಿ ಬಿಡುತ್ತದೆ.  ಬಂದಾಗ ಅನುಭವಿಸಿ, ಹೊರಟು ಹೋದಾಗ ಚಿಂತೆ ಬಿಟ್ಟು ಬಿಡಿ. ಆಗ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ” ಎನ್ನುವುದನ್ನು ಮರೆಯುವುದಿಲ್ಲ.  ಆದರೆ ಇಲ್ಲಿಯ ಕಥೆಗಳಲ್ಲಿ ಪ್ರೀತಿ ಬದುಕಿನ ಆದರ್ಶವಾಗಿ ಮೂಡಿ ಬಂದಿದೆ.

     ಪ್ರೀತಿ ಎಂಬುದು ಒಂದು ವ್ಯಾವಹಾರಿಕ  ಒಪ್ಪಂದವಾಗಿ ಕಂಡಿಲ್ಲ.  ಅದು ಮನಸ್ಸು- ಹೃದಯಗಳ ಪಿಸುಮಾತು. ಬದುಕಿನ ಉದ್ದಕ್ಕೂ ಇರುವಂತಹದ್ದು.  ಸುಲಭವಾಗಿ ಕಳಚಿಕೊಳ್ಳುವಂತಹದ್ದು ಅಲ್ಲವೇ ಅಲ್ಲ.  ಪ್ರೀತಿಯ ನೆನಪಿನಲ್ಲೇ ಬಾಳಬಲ್ಲರು.  ಇದೊಂದು ರೀತಿಯ ಅರ್ಪಣಾ ಭಾವ ಎಂದರನೂ ಸರಿನೆ.  ಹಾಗಾಗಿ ಎಲ್ಲಾ ಕಥೆಗಳಲ್ಲಿ ಪ್ರೀತಿ ಮಾರ್ದನಿಸುವುದರಿಂದ ಓದಿದ್ದ ಕಥೆಯನ್ನೇ ಮತ್ತೆ ಮತ್ತೆ ಓದುತ್ತಿದ್ದೇವೋ ಎಂದೆನಿಸದೇ ಇರಲಾರದು.

    ಇಂಥ ಭಾವನೆಗೆಡೆ ಮಾಡಿಕೊಡುವ ಕೆಲವು ಕಥಾ  ತುಣುಕುಗಳನ್ನು ಗಮನಿಸಬಹುದು:
     ೧. “ನಾನು  ನಿನ್ನನ್ನು ಪ್ರೀತಿಸುತ್ತಿದ್ದೇನೆ‌‌.  ನೀನು ನನ್ನನ್ನು ಮದುವೆಯಾಗುತ್ತೀಯಾ?” ಆಕೆ ಕೇಳುತ್ತಾಳೆ. “ಕ್ಷಮಿಸು ನಿನ್ನ ಪ್ರೀತಿಗೆ ನಾನು ಅರ್ಹನಲ್ಲ” ಎಂದ ಆತ.  ಆಕೆ ಆಗಲೇ ಹಾರ ತಂದಾಗಿತ್ತು. ಇಬ್ಬರೂ ಮದುವೆಯಾದರು. ಸನ್ಮಾನ ನಡೆಯಿತು.
     ೨.ಆಕೆಯನ್ನು ಪ್ರೀತಿಸುವಾತ ಬೈಕ್ ನಲ್ಲಿ ಬಿದ್ದು ಒಂದು ಕೈಯನ್ನು ಕಳೆದುಕೊಂಡಿದ್ದ. ಅದನ್ನು ಆಕೆ ಗಮನಿಸಿದಳು‌. ಆತ ಒಲ್ಲೆಯೆಂದರೂ ಆತನನ್ನೇ ಮದುವೆಯಾದಳು‌.  
     ೩.ಆಕೆಯ ಮನಸ್ಸು ಆತನನ್ನು ಬಯಸುತ್ತಿತ್ತು. ಬೆಂಗಳೂರಿಗೆ ಹೋಗಲು ಸಿದ್ಧಳಾಗಿದ್ದಳು. ಆತ ತನ್ನ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ. ಆಕೆ ಜೀವನಪೂರ್ತಿ ನಿನ್ನೊಂದಿಗೆ ಬರುತ್ತೇನೆ ಅಂದಳು. ಅವಳನ್ನು ಕಾರಿನಲ್ಲಿ ಕೂರಿಸಿಕೊಂಡ. ಅವನ ಮುಖದಲ್ಲಿ ಜಗತ್ತನ್ನೇ ಗೆದ್ದ ಖುಷಿಯಾಯಿತು.
    ೪. ಕಂಪನಿಯ ಮಾಲೀಕಳಾದ ಆಕೆ ಅವನನ್ನು ಪ್ರೀತಿಸುತ್ತಿದ್ದಳು. ಈಕೆ ಹೇಳಿದಳು, “ನಾನು ಆತನನ್ನು ಮೊದಲೇ ಪ್ರೀತಿಸುತ್ತಿದ್ದೆ” ಆಕೆಗೆ ಕಣ್ಣೀರು ತುಂಬಿ ಬಂದಿತು. ಆ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡಳು.  ಪ್ರೀತಿಯನ್ನ ಒತ್ತಾಯದಿಂದ ಪಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾದಳು.
    ೫. ಆಕೆ ನಿನ್ನನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ ಅಂದಳು. ಅವನ ಕೈ ಹಿಡಿದಳು.  ಆತ ಆಕೆಯ ಹಣೆಗೊಂದು ಮುತ್ತನಿತ್ತ.
    ೬. ಆತ ನಿನ್ನ ಮನಸ್ಸಿನಾಳದ ಪ್ರೀತಿ ಬೇಕಾಗಿತ್ತು ಎಂದ‌.  ಆಕೆಯನ್ನು ತನ್ನ ಎದೆಗೆ ತಬ್ಬಿಕೊಂಡ.
    ೭. ತಾನು ಇಷ್ಟ ಪಡುವವನನ್ನೇ ಮದುವೆಯಾದಳು. ಆಕೆಯ ಮಾವನ ಮನಸ್ಸು ಬದಲಾಯಿತು.  ಕ್ಷಮಿಸು ಎಂದ.

    ಆದರೆ  ಪಾತ್ರಗಳಲ್ಲಿಯ ವಿಶಿಷ್ಟ ಮನಸ್ಸಿನ ಒಲವು ಮತ್ತು ಶೀಲ-ಸ್ವಭಾವಗಳು, ಗುಣಲಕ್ಷಣಗಳು ಕಥೆಗಳನ್ನು ಓದಿಸಿಕೊಂಡು ಹೋಗುತ್ತವೆ.  ಕಥೆಗಳು ಸೋತ ಕಡೆಗೆ ಪ್ರೀತಿ ಗೆಲುವಿನ ನಗೆ ಬೀರಿದೆ.  ಪ್ರೀತಿಯ ಹೆಜ್ಜೆ ಮೂಡಿದಲೆಲ್ಲ ಕಥೆಗಳು ಸದ್ದು ಮಾಡಿವೆ.  ಕಥೆಗಳ ಶಿರೋನಾಮೆಗಳೂ  ಪ್ರೀತಿಯಷ್ಟೇ ಮುದ್ದಾದುದು.  ಕಾಡಿನ ನಡುವೆಯೊಂದು ಪ್ರೀತಿಯ ಕಲರವ, ಒದ್ದೆ ಕಣ್ಣುಗಳ ಪ್ರೀತಿ, ಆಕೆ ಪ್ರೀತಿಸಿದ ರೀತಿ, ಸಪ್ತ ಸಾಗರದಾಚೆ ಪ್ರೀತಿಯ ಪಯಣ, ಪ್ರೀತಿಯೆಂದರೆ ಕನಸುಗಳ ಸಂತೆ, ಪ್ರೀತಿ ಅರಳಿತು,  ಬಾಳು ಬೆಳಗಿತು, ಪ್ರೀತಿಯೆಂಬ ಹಣತೆ ಹಚ್ಚಿ, ಹನಿ ಹನಿ ಇಬ್ಬನಿ ಮರದ ಹನಿ, ಜೀವನದ ಹಾದಿಯಲ್ಲಿ ಪ್ರೀತಿಯ ಹೆಜ್ಜೆ ಗುರುತು, ಪ್ರೀತಿಯೆಂದರೆ, ಮಳೆ ನಿಂತು ಹೋದ ಮೇಲೆ, ಪರಿವರ್ತನೆ ಜಗದ ನಿಯಮ,  ಹೋರಾಟದ ಹಾದಿಯಲ್ಲಿ, ಮಿನುಗು ತಾರೆ….  ಈ ಎಲ್ಲಾ ಕಥೆಗಳು ಪ್ರೀತಿಯ ಕನಸುಗಳ ಬಣ್ಣ ಕಟ್ಟಿಕೊಂಡು ಸಂಭ್ರಮಿಸುತ್ತವೆ.

     ಹೊಸತಾಯಿ ಕಥೆಯಲ್ಲಿ ಪ್ರೇಮಿ  ಪ್ರೀತಿಯಕಾಣಿಕೆಯನ್ನಿತ್ತು ಕೈ ಕೊಟ್ಟಿದ್ದಾನೆ.  ಅಬಾರ್ಷನ್ ಮಾಡಿಕೊಳ್ಳಲು ಆಕೆ ಗೆಳತಿ ಸೂಚಿಸುತ್ತಾಳೆ.  ತಾಯಿ ಕರುಳು ನಿರಾಕರಿಸುತ್ತದೆ. ಸುಮಂಗಲಾಶ್ರಮದಲ್ಲಿ  ಹೆರಿಗೆಯಾಗಿ ಗಂಡು ಮಗುವಿನ ತಾಯಿಯಾಗುತ್ತಾಳೆ. ತಾಯಿತನದಿಂದ ಬದುಕಿನಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಆದರೆ  ಕಾಯಿಲೆಯೊಂದಕ್ಕೆ ತುತ್ತಾಗಿ ಮಗು ವಿಧಿವಶವಾಗುತ್ತದೆ. ಮತ್ತೆ ಅನಾಥ ಪ್ರಜ್ಞೆ.  ತೊಟ್ಟಿಯಲ್ಲಿ ಎಸೆದು ಹೋದ ಮಗುವಿನ ಅಳು ಈ ತಾಯಿಯ ಕರುಳನ್ನು ಚುರುಕುಗೊಳಿಸುತ್ತದೆ.  ಆ ಮಗುವಿಗೆ ಈಗ ಇವಳೇ ಹೊಸತಾಯಿ.  ಆದರೆ ಕಾನೂನು ದೃಷ್ಟಿ ಗಮನಿಸುವುದೂ ಅಷ್ಟೇ ಅಗತ್ಯ ಎಂದೆನಿಸುತ್ತದೆ‌.

     ಪ್ರೀತಿಸಿದವ ಪಲಾಯನವಾದಿಯಾದರೂ ಪ್ರೀತಿ ನೆನಪಿನಲ್ಲೇ ಜೀವ ಸವೆಯುವ  ಹೆಣ್ಣೊಬ್ಬಳ ಕಥೆ ಮಳೆ ನಿಂತು ಹೋದ ಮೇಲೆ.  ಪಂಕಜಳಿಗೆ ಮೂವರೂ ಹೆಣ್ಣು ಮಕ್ಕಳೆ.  ನಾಲ್ಕನೆಯದೂ ಹೆಣ್ಣೆ. ಗಂಡನಿಗೆ ಮತ್ತು ಅತ್ತೆಯ ನಿರೀಕ್ಷೆ ಸುಳ್ಳಾಯಿತು. ಅವಳಿಗೆ ಮಾತ್ರ ನಾಲ್ಕೂ ಮಕ್ಕಳನ್ನು ಸಾಕಿ ಸಲಹುತ್ತೇನೆ ಎನ್ನುವ ಆತ್ಮ ವಿಶ್ವಾಸ. ಮಾತೆಯರಿಗೆ ಸ್ಫೂರ್ತಿಯ ಸೆಲೆಯಾದ ಕಥನವೇ ಹೊಂಬೆಳಕು.

    ಹೀಗೆ ಕಥೆಗಳಲ್ಲಿಯ ಪಾತ್ರಗಳು  ಪ್ರೀತಿಯೆಂಬ ಜೇನುಗೂಡಿಗೆ ಕೈಹಾಕಿ ಮಧುವನ್ನು ಸವಿದಿವೆ, ಕಚ್ಚಿಸಿಕೊಂಡು ನೋವನ್ನೂ ಅನುಭವಿಸಿವೆ.  ಗಂಡು- ಹೆಣ್ಣುಗಳ ಪ್ರೀತಿಯ ಸೆಳೆತವೇ ಕಥೆಗಳಲ್ಲಿ ಪ್ರತಿಧ್ವನಿಸುತ್ತವೆ.  ಪ್ರೀತಿಯ ಆವೇಶ ತುಸು ಹೆಚ್ಚು ಎಂದೆನಿಸಿದರೂ  ಪಾತ್ರಗಳ ವಯಸ್ಸೇ ಅಂತಹದ್ದು! ಭಾವಾವೇಶಗಳು ಅಭಿವ್ಯಕ್ತಿಗೊಳ್ಳುವ ಜೀವಶಕ್ತಿ ಎನ್ನುವ ಮಾತು ಇಲ್ಲಿಯ ಕಥೆಗಳಿಗೆ ಅನ್ವಯಿಸುತ್ತದೆ.

     ಪ್ರೀತಿಯ ವಿಫಲತೆ ಅನಂತರದ ಶೂನ್ಯತೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ ಒಟ್ಟಾರೆ ೨೨ ಕಥೆಗಳೂ  ಆಯಾ ವಯಸ್ಸಿನ ಆಜುಬಾಜುವಿನವರ ಕನಸುಗಳಿಗೆ ರೆಕ್ಕೆ ಮೂಡಿಸುವುದು ಪಕ್ಕವೆ.  ರಾಜು ಅಡಕಳ್ಳಿಯವರ ಮುನ್ನುಡಿ, ಸಂತೋಷಕುಮಾರ ಮೆಹೆಂದಳೆ ಅವರ ಬೆನ್ನುಡಿ ಕಥೆಗಳ ಅಂತಃಸತ್ವವನ್ನು ತೆರೆದಿಟ್ಟಿವೆ.

ಡಿ.ಎಸ್.ನಾಯ್ಕ, ಶಿರಸಿ

ಪ್ರೀತಿಯೆಂದರೆ…..
ಲೇಖಕಿ- ಎನ್.ಆರ್.ರೂಪಶ್ರೀ
ಪ್ರಕಾಶಕರು-  ಬೆನಕ ಬುಕ್ಸ್  ಬ್ಯಾಂಕ್, ಹೊಸನಗರ
ಪುಟಗಳು- ೧೩೦
ಬೆಲೆ-  ರೂ.೧೫೦/-


Leave a Reply

Back To Top