ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ‘ಅಣ್ಣನ ನೆನಪು ‘ನನ್ನ ಓದಿಗೆ ನಿಲುಕಿದ್ದು…ಸುಧಾ ಹಡಿನಬಾಳ

ಕನ್ನಡಕ್ಕೊಬ್ಬರೇ ಕುವೆಂಪು ; ಕನ್ನಡದ ಕಟ್ಟಾಳು , ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚಿಂತಕ ಸಾಹಿತ್ಯ ಲೋಕದ ಮಿನುಗುತಾರೆ ಕುವೆಂಪು ಅವರು  ಇಂದಿಗೂ ನನ್ನಂಥ ಓರ್ವ ಸಾಮಾನ್ಯ ಲೇಖಕಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ  ಮೇರು   ಪ್ರತಿಭೆ.  ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ  ಯಾವ ಗಂಧ ಗಾಳಿಯೂ ಇಲ್ಲದ ವಾತಾವರಣದಲ್ಲಿ ಬೆಳೆದ ನನಗೆ ಕುವೆಂಪು ಬೇಂದ್ರೆಯಂತಹ ಮಹಾನ್ ಸಾಹಿತಿಗಳೆಂದರೆ  ಆಕಾಶದೆತ್ತರದಲ್ಲಿ ಮಿನುಗು ನಕ್ಷತ್ರಗಳಂತೆ ಕಾಣುತ್ತಿದ್ದವು. ಸಾಹಿತಿಯಾಗಬೇಕೆಂದಾಗಲಿ ಯಾವ ಕನಸು,  ಕನವರಿಕೆ ಇಲ್ಲದ   ನನಗೆ ನನ್ನ  ಶಿಕ್ಷಕ ವೃತ್ತಿ ,ಓದುವ ಹವ್ಯಾಸ ಓರ್ವ ಬರಹಗಾರ್ತಿಯನ್ನಾಗಿ ರೂಪಿಸಿದ್ದು ವಿಶೇಷ!  ಹಾಡ್ತಾ  ಹಾಡ್ತಾ ರಾಗ ಎನ್ನುವ ಹಾಗೆ ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟ ನಂತರದಲ್ಲಿ ಕುವೆಂಪು ಅವರ ವೈಚಾರಿಕ ನಿಲುವುಗಳು ಅವರ ಕಾದಂಬರಿಗಳನ್ನು ಓದಿದ ನಂತರದಲ್ಲೂ  ಶಿವಮೊಗ್ಗದ ತೀರ್ಥಹಳ್ಳಿಯಂತ ಗೊಂಡಾರಣ್ಯ ಪ್ರದೇಶದಲ್ಲಿ ಹುಟ್ಟಿ ಬೆಳೆದ ಪುಟ್ಟಪ್ಪನೆಂಬ ಬಾಲಕ  ಕುವೆಂಪು ಆಗಿ ವಿಶ್ವ ಮಾನವನಾಗಿ ಗುರುತಿಸಲ್ಪಟ್ಟಿದ್ದು ಸೋಜಿಗವಾಗಿಯೇ ಕಾಡುತ್ತಿದೆ. ‘ ಕವಿಶೈಲ’ ಕಿವಿಯ ಮೇಲೆ ಬಿದ್ದಾಗಲೆಲ್ಲ ಒಮ್ಮೆ ಕುವೆಂಪು ಅವರು ನಡೆದಾಡಿದ ನೆಲ,  ಮಣ್ಣು ಮನೆ ನೋಡಬೇಕೆಂಬ ಹಂಬಲ.  ಈ ಬಾರಿ 2024ರ ವರ್ಷಾಂತ್ಯದಲ್ಲಿ ಅಳಿದುಳಿದ ಕೆಲವು ಸಾಂದರ್ಭಿಕ ರಜೆಗಳನ್ನು ಬಳಸಿಕೊಂಡು ಶಿವಮೊಗ್ಗದಲ್ಲಿರುವ ಸಹೋದರನ ಮನೆಗೆ  ಕವಿಶೈಲವನ್ನು ನೋಡಬೇಕೆಂಬ ಉದ್ದೇಶದಿಂದಲೇ ಹೊರಟಂತಿತ್ತು .ಅಂತೆಯೇ ಮುಂಜಾನೆಯೇ ಕುಟುಂಬ ಸಮೇತರಾಗಿ ಕವಿಶೈಲಕ್ಕೆ ಹೊರಟ ನಮ್ಮ ತಂಡ ಸೂರ್ಯನ ಹೊಂಗಿರಣಗಳು ನೆತ್ತಿಯನ್ನು ಸೋಕುವ ಹೊತ್ತಿಗೆ ಕವಿಶೈಲದ ಕಲ್ಲು ಪದರದ ಮೇಲೆ ನಡೆಯುತ್ತಿದ್ದೆವು. ಅಲ್ಲಿನ ಬಂಡೆ ಬಂಡೆಗಳು ಸಾರಿ ಹೇಳುತ್ತಿದ್ದ ಕುವೆಂಪು ಸಂದೇಶಗಳು, ದಟ್ಟ ಕಾನನದ ನಡುವೆ ಬಿ ಎಂ ಶ್ರೀ ಮುಂತಾದ   ಮಹನೀಯರುಗಳೆಲ್ಲ ಕುಳಿತು ಚರ್ಚಿಸಿದಂತಿದ್ದ ಕಲ್ಲು ಬಂಡೆಗಳ ಮೇಲೆ ಕುಳಿತು ಪುಳಕಿತರಾಗಿ ಮುಂದೆ ಸಾಗಿ ‘ ಉದಯ ರವಿ’ಯ ಒಳಹೊಕ್ಕಂತೆ ಅದೊಂದು ಮಹಾ ಅಕ್ಷರ ಧಾಮದಂತಿತ್ತು!  ಒಳಗೊಳಗೆ ಕುವೆಂಪು ಅವರ ಸಮಗ್ರ ಬದುಕಿನ ಚಿತ್ರಣವನ್ನು ಸಾರಬಹುದಾದ ಭಾವಚಿತ್ರಗಳು, ಕೌಟುಂಬಿಕ ಚಿತ್ರಗಳು, ಪ್ರಶಸ್ತಿ ಫಲಕಗಳು,  ಒಳಗೊಳಗೆ ಸುಳಿ ಸುಳಿಯಾಗಿ ಇರುವ  ಮನೆಯ ಆಕಾರ,  ಮಾಳಿಗೆಗಳು ಎಲ್ಲವೂ ಸೋಜಿಗದೊಳಗೊಂದು ಸೋಜಿಗ!  ತುಸು ಅವಸರದಲ್ಲಿಯೂ ಅಲ್ಲೆಲ್ಲಾ ಓಡಾಡಿ ಫೋಟೋ ಕ್ಲಿಕ್ಕಿಸಿಕೊಂಡು, ನಾಲ್ಕು  ಸಾಲು ಅಭಿಪ್ರಾಯ ದಾಖಲಿಸಿ ಒಂದೆರಡು ಪುಸ್ತಕಗಳನ್ನು ಕೊಳ್ಳುವ ಹೊತ್ತಿಗೆ ನೆನಪಾಗಿದ್ದು ತೇಜಸ್ವಿಯವರು ಬರೆದ ‘ಅಣ್ಣನ ನೆನಪು ‘ ಕೃತಿ .ಓದಲು ಆರಂಭಿಸಿದ್ದು ತಂದ ಮರುದಿನವೇ ಆದರರೂ  ಮುಗಿಸಿದ್ದು  ತುಸು ತಡವಾಗಿಯೇ.

 ಕುವೆಂಪು ಅವರ ಬದುಕು ಬರಹದ ಕುರಿತಾದ ತುಸು ಕಡಿಮೆ ಎನ್ನಬಹುದಾದ ವಿವರಗಳಿದ್ದರೂ ಕುವೆಂಪು ಅವರ ಅನೇಕ ದೃಷ್ಟಿಕೋನಗಳು, ವೈಚಾರಿಕ ನಿಲುವುಗಳು 70ರ ದಶಕದ ಶೀತಲ ಸಮರಗಳನ್ನು ನಿದರ್ಶನಗಳೊಂದಿಗೆ ತೇಜಸ್ವಿಯವರು ಅಲ್ಲಲ್ಲಿ ಸಹಜವಾಗಿ ನಿರೂಪಿಸಿದ್ದಾರೆ .

ತೇಜಸ್ವಿಯವರೇ ಹೇಳುವಂತೆ ಅಣ್ಣನ ನೆನಪು ಕೃತಿಯಲ್ಲಿ ತುಂಬಾ ಗಂಭೀರವಾದ ಕುವೆಂಪು ಅವರ ವ್ಯಕ್ತಿತ್ವವನ್ನು ಬಿತ್ತರಿಸುವಂತಹ ವಿಚಾರಧಾರೆಗಳಿಲ್ಲ;  ಅವರ ಸಾಹಿತ್ಕ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
 ಬಹುತೇಕವಾಗಿ ಈ ಕೃತಿಯ ಬಗೆಗೆ ತೇಜಸ್ವಿಯವರೇ ಹೇಳುವಂತೆ ತೇಜಸ್ವಿಯವರ ಬಾಲ್ಯ ಯೌವ್ವನದ ತುಂಟಾಟ, ಕಿತಾಪತಿ , ಕಾಲೇಜು ದಿನಗಳ ಪುಂಡಾಟಗಳೆ ಹೆಚ್ಚಾಗಿ ವರ್ಣನೆಗೊಳಗಾಗಿವೆ. ಅದರ ಜೊತೆ ಜೊತೆಗೆ ಕುವೆಂಪು ಅವರ ನೆನಪು ವಿಚಾರಗಳನ್ನು ಬೆಸೆದು ಒಂದು ಗಂಭೀರವಾದ ಚಿಂತನೆಯನ್ನೂ‌ ಹುಟ್ಟಿ ಹಾಕಿದ್ದಾರೆ.

ಈ ಕೃತಿಯ ಆರಂಭವೇ ಮೈಸೂರಿನ ಪಡುವಾರಳ್ಳಿಯ ಒಂಟಿಕೊಪ್ಪಲ ಹಳ್ಳಿಯಲ್ಲಿ ತೇಜಸ್ವಿ ತಮ್ಮ ಬಾಲ್ಯ ದಿನಗಳನ್ನು ಕಳೆದ ನೆನಪುಗಳೊಂದಿಗೆ ಆರಂಭವಾಗುತ್ತವೆ. ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ  ವಾಯ್ಸ್ ಚಾನ್ಸಲರ್ ಆಗಿದ್ದಂತಹ ಸಂದರ್ಭಗಳಲ್ಲಿಯೂ ಒಬ್ಬ ಸಾಮಾನ್ಯ ಮನುಷ್ಯನಂತೆ ಬದುಕಿದ್ದು ತುಸು ಮೌನಿಯಾಗಿ ತನ್ನಷ್ಟಕ್ಕೆ ಓದು ಬರಹದಲ್ಲಿ ತೊಡಗಿಕೊಂಡಿರುವುದು  ಅಲ್ಲಲ್ಲಿ ಪ್ರಸ್ತಾಪಗೊಳ್ಳುತ್ತವೆ.

ತೇಜಸ್ವೀ ತಮ್ಮ ಮತ್ತು  ತಮ್ಮ ಗೆಳೆಯರ ಶಾಲಾ ಕಾಲೇಜು ದಿನಗಳ ರಂಪ, ರಾಮಾಯಣ ಕಿತಾಪತಿ ಇವುಗಳ ಬಗೆಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ ಅಂತೆನಿಸಿದರೂ ಅವುಗಳೊಟ್ಟಿಗೆ ಕುವೆಂಪು ಅವರ ವೈಚಾರಿಕ ನಿಲುವುಗಳು ಅನೇಕ  ನಿದರ್ಶನಗೊಳೊಂದಿಗೆ ಬಿತ್ತರಗೊಳ್ಳುತ್ತ  ಹೋಗುತ್ತವೆ.
ಉದಾಹರಿಸುವುದಾದರೆ ತೇಜಸ್ವಿಯವರು ಮಿಡಲ್ ಸ್ಕೂಲ್ ನಲ್ಲಿ ಓದುತ್ತಿರುವಾಗ  ಒಮ್ಮೆ ಅವರಿಗೆ ಪಾಠ ಮಾಡುತ್ತಿದ್ದ ಗುರುಗಳು ಕುವೆಂಪು ಅವರ ಕುರಿತಾಗಿ’  ನಿಮ್ಮ ತಂದೆಯವರು ಕಾವ್ಯ ರಚನೆ ಮಾಡುವಾಗ ಮಡಿ ಉಟ್ಟು ಕಾವ್ಯ ರಚಿಸುತ್ತಾರೆ’  ಎಂದೆಲ್ಲಾ ಸುಖಾ ಸುಮ್ಮನೆ  ಸುಳ್ಳು ಬೊಗಳೆ ಬಿಡುತ್ತಿದ್ದುದು,  ಇದನ್ನು ಕುವೆಂಪು ಅವರ ಗಮನಕ್ಕೆ ತಂದಾಗ ಸಾರಾಸಗಟಾಗಿ ಧಿಕ್ಕರಿಸುತ್ತಾ ‘ ಇಂತಹ ಮಡಿ ಮನಸ್ಸಿನ ಹೆಂಗಸರಂತಹ ಗುರುಗಳು ಏನನ್ನು ತಾನೇ ಕಲಿಸಲು ಸಾಧ್ಯ?  ಇಂಥವರಿಂದ ಹಿಂದೂ ಧರ್ಮದ ಉದ್ಧಾರ ಹೇಗೆ ಸಾಧ್ಯ??’  ಎಂದು ಕೋಪೋದ್ರಿಕ್ತರಾಗಿ ನುಡಿದಿದ್ದರು ಹಾಗೆಯೇ ಮನೆಗೆ ತರಿಸುತ್ತಿದ್ದ ಪತ್ರಿಕೆಗಳ ಬಗೆಗೂ ಅವರಲ್ಲಿ ಸಾತ್ವಿಕವಾದ ಆಕ್ರೋಶವಿರುತ್ತಿತ್ತು. ತಿಂಗಳಿಗೊಮ್ಮೆ 15 ದಿನಕ್ಕೊಮ್ಮೆ ಪತ್ರಿಕೆಗಳನ್ನು ಬದಲಾಯಿಸುತ್ತ ಒಮ್ಮೊಮ್ಮೆ ತಮ್ಮ ಅಸಹನೆಯನ್ನು ಪೇಪರ್ ಹಾಕುತ್ತಿದ್ದ ಹುಡುಗನ ಮೇಲೆ ತೀರಿಸಿಕೊಳ್ಳುತ್ತಿದ್ದರು. ಎಲ್ಲಾ ಪತ್ರಿಕೆಗಳಲ್ಲೂ ದಪ್ಪ ದಪ್ಪ ಅಕ್ಷರಗಳಲ್ಲಿ   ಅಡ್ಡ ಪಲ್ಲಕ್ಕಿ ಉತ್ಸವ,  ಮಠ ಮಂದಿರಗಳ ಉದ್ಘಾಟನೆ, ಹೋಮ , ಪಾದಪೂಜೆ ಅಂತಹ ವರದಿಗಳನ್ನು ಓದಿದಾಗ ಆ ಪತ್ರಿಕೆಯನ್ನೇ ತರಿಸುವುದನ್ನು ನಿಲ್ಲಿಸಿ  ಬೇರೊಂದನ್ನು ತರಿಸುತ್ತಿದ್ದರು. ಕೆಲವೊಮ್ಮೆ ಪತ್ರಿಕೆಗಳನ್ನೇ ಓದುವುದನ್ನು ನಿಲ್ಲಿಸಿಯೂ ಬಿಡುತ್ತಿದ್ದರು .  ಹಿಂದೆಂದಿಗಿಂತ ಹೆಚ್ಚಾಗಿ ಇಂದಿನ ಹೆಚ್ಚಿನ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಇಂತಹ  ವಿಚಾರಗಳು, ವಿಷಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು. ವಿಷಾದನೀಯ ಕೂಡ.

ಕುವೆಂಪು ಅವರ ದಿನಚರಿಯ ಕೆಲವು ಸಣ್ಣ ಸಣ್ಣ ವಿಷಯಗಳನ್ನು ಕೂಡ ಅತ್ಯಂತ ಮನೋಜ್ಞವಾಗಿ ದಾಖಲಿಸುತ್ತಾರೆ.ಒಂದೆಡೆ ‘ ಕುವೆಂಪು ಜಿಪುಣರಾಗಿರಲಿಲ್ಲ ಆದರೆ ಹಣ ಮಾಡುವ  ಮಾರ್ಗಗಳನ್ನು  ಹಿಡಿಯದೆ ಕಷ್ಟಪಟ್ಟು ಸಂಪಾದಿಸಿದರು .ಹಾಗಾಗಿ ಹಣವನ್ನು ಹಗುರವಾಗಿ ಪರಿಗಣಿಸಿ ವೆಚ್ಚ ಮಾಡುವುದು ಅವರಿಂದ ಸಾಧ್ಯವೇ ಇರಲಿಲ್ಲ. ಕ್ಷೌರ ಮಾಡಿಕೊಳ್ಳುವ ಬ್ಲೇಡುಗಳ ಕಾಗದದ ಕವರಿನ ಮೇಲೆ ಸಹ ಅದರಲ್ಲಿ ಕ್ಷೌರ ಆರಂಭಿಸಿದ ದಿನಾಂಕ ಬರೆದಿಡುತ್ತಿದ್ದರು!  ಒಂದೊಂದು ಬ್ಲೇಡನ್ನು ಇಂತಿಷ್ಟು ದಿನ ಉಪಯೋಗಿಸಲೇಬೇಕೆಂದು ತೀರ್ಮಾನಿಸಿರುತ್ತಿದ್ದರು . ಹಣದ ಬೆಲೆ, ಕಾಲದ ಬೆಲೆ ,ಮನುಷ್ಯನ ಆತ್ಮ ಗೌರವಕ್ಕೆ ಬೆಲೆ ಇವೆಲ್ಲ ಅಣ್ಣನ ಒಂದೇ ದ್ರಷ್ಟಿ ಕೋನದ ವಿವಿಧ ಅಭಿವ್ಯಕ್ತಿಗಳಾಗಿದ್ದವು’  ಎಂಬುದನ್ನು ತೇಜಸ್ವಿ  ದಾಖಲಿಸಿದ್ದಾರೆ

ಜೊತೆಗೆ 70ರ ದಶಕದ ಸಾಹಿತ್ಯ ಕ್ಷೇತ್ರದಲ್ಲಿನ ಶೀತಲ ಸಮರವನ್ನು ಎಳೆ ಎಳೆಯಾಗಿ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ.  ಬಹುಶಹ ಆ ದಿನಗಳಲ್ಲಿ ಕುವೆಂಪು ಅವರೊಬ್ಬರೇ ಬ್ರಾಹ್ಮಣೇತರ ಮುಂಚೂಣಿ ಸಾಹಿತಿ ಆಗಿದ್ದರಿಂದ ಅವ್ಯಾಹತವಾಗಿ ಕುವೆಂಪು ಅವರ ಬರವಣಿಗೆ ಅವರ ವೈಚಾರಿಕತೆಯನ್ನು ಟೀಕಿಸಲಾಗುತ್ತಿತ್ತು . ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಮೇಲ್ವರ್ಗದ ಅನೇಕ ಸಾಹಿತಿಗಳಿಂದ ಟೀಕೆ ಟಿಪ್ಪಣಿಗಳು ಮೊನಚು ಮಾತುಗಳು ಕೇಳಿ ಬಂದವು. ಕುವೆಂಪು ಅಭಿಮಾನಿ ಬಳಗ ಮತ್ತು ಅಡಿಗ , ಕುರ್ತಕೋಟಿ ಅವರ ಬಳಗದ ಕೆಸರೆರಚಾಟ, ಇದರಿಂದ ಆಗ ತಾನೇ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ಹೊಸ ತಲೆಮಾರಿನ ತೇಜಸ್ವಿ  ಅವರನ್ನೂ ಒಳಗೊಂಡ ಒಂದು ಗುಂಪು ಇವೆಲ್ಲವುಗಳಿಂದ ಬೇಸತ್ತು ಸಾಹಿತ್ಯದಿಂದ ಗಾವುದ ದೂರವೇ ಉಳಿದಿತ್ತು ಎಂಬುದನ್ನು ತೆರೆದಿಟ್ಟಿದ್ದಾರೆ.

ಜೊತೆಗೆ ಕುವೆಂಪು ಅವರ ವ್ಯಕ್ತಿತ್ವದಲ್ಲಿನ ಕೆಲವು ಮುಗ್ಧ‌ ನಿಲುವುಗಳ ಬಗೆಗೂ ವಿವರಗಳಿವೆ.  ಯಂತ್ರಗಳನ್ನು ಸಹ ವ್ಯಕ್ತಿತ್ವದ ಒಂದು ಭಾಗವನ್ನಾಗಿ ನೋಡುತ್ತಿದ್ದುದು,  ಇನ್ನಿತರ  ಕೆಲವು ವಿಷಯಗಳಲ್ಲಿ ಕುವೆಂಪು ಮತ್ತು ತೇಜಸ್ವಿಯವರ ನಡುವೆ ಅನೇಕ ಭಿನ್ನ ನಿಲುವುಗಳಿದ್ದವು.  ತೇಜಸ್ವಿ ಎಲ್ಲವನ್ನು ಪರೀಕ್ಷಕ , ಚಿಕಿತ್ಸಕ ದೃಷ್ಟಿಕೋನದಿಂದ ನೋಡುತ್ತಾ  ಸರಿಯಾಗಿದ್ದ ಸ್ಕೂಟರನ್ನೇ ಬಿಚ್ಚಿ ಬಿಡಿಬಿಡಿಯಾಗಿ ಮಾಡಿ ಮತ್ತೆ ಇಡಿಯಾಗಿ ಜೋಡಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರೆ ಕುವೆಂಪು ಇದನ್ನು ತುಂಬಾ ಆತಂಕದಿಂದ ಮಗನ ಈ ಪರಿಯ ಕಾರ್ಯವೈಖರಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.  ಹೊಸದಾಗಿ ಕಾರು ಕೊಂಡ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಸಂಜೆ ಹೊತ್ತಿನಲ್ಲಿ ಹೊರಹೋದ ಕುವೆಂಪು ಅವರಿಗೆ ಕತ್ತಲಾಗುತ್ತಿದ್ದಂತೆ ಗಾಡಿ ಓಡಿಸಲಾಗದೆ ಹೆಡ್ ಲೈಟ್ ಸ್ವಿಚ್ ಬೋರ್ಡ್ ಎಲ್ಲಿದೆ ಎಂಬುದೂ  ಸಹ ಗೊತ್ತಾಗದೆ, ಲೈಟ್  ಡಿಮ್ ಆಗಿದ್ದರೂ ಸ್ವಿಚ್ಚನ್ನು ಆಚೀಚೆ ತಿರುಗಿಸದೆ  ಬ್ಯಾಟ್ರಿಯೇ ಹೋಗಿದೆ ಎಂಬ ನಿರ್ಧಾರಕ್ಕೆ ಬಂದು .ತಡಕಾಡಿದ ಸಂದರ್ಭವನ್ನು ಮತ್ತು ಈ ಸಂದರ್ಭ ಕುವೆಂಪು ಅವರಿಗೆ ಸ್ವಲ್ಪವೂ ಯಂತ್ರಜ್ಞಾನ ಇಲ್ಲದಿದ್ದರೆ ಅವು ತೊಂದರೆ ಕೊಟ್ಟಾಗ ನಾವು ಹೇಗೆ ನಿಸ್ಸಹಾಯಕರಾಗುತ್ತೇವೆ ಎಂಬುದನ್ನು ಮನವರಿಕೆ ಮಾಡಿತು ಎಂದು ದಾಖಲಿಸುತ್ತಾರೆ.

ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಿನ್ಸಿಪಾಲರಾಗಿ,  ವೈಸ್ ಚಾನ್ಸಲರ್ ಆಗಿಯೂ ಕೆಲಸ ಮಾಡಿದ ಸಂದರ್ಭದಲ್ಲಿ ಗಂಭೀರವಾದ ಯಾವುದೇ ಪ್ರಕಾರದ ಸಾಹಿತ್ಯವನ್ನು ಕೂಡ ರಚಿಸಲು ಸಾಧ್ಯವಾಗುತ್ತಿರಲಿಲ್ಲ ಸದಾ ಫೈಲ್ಸ್, ಮೀಟಿಂಗ್ , ಜನಜಂಗುಳಿ ಇವುಗಳಿಂದಲೇ ಸುತ್ತುವರಿಯಲ್ಪಡುತ್ತಿದ್ದರು  ಒಮ್ಮೆ ನಿಜಲಿಂಗಪ್ಪನವರು ಕುವೆಂಪು  ಮನೆಗೆ ಬಂದು ಪದ್ಮಭೂಷಣ ಕೊಡಲು  ಕೇಂದ್ರ ಸರ್ಕಾರ ಶಿಫಾರಸು ಮಾಡಿದ್ದರಿಂದ ಅದನ್ನು ಕುವೆಂಪು ಅವರಿಗೆ ಮೊದಲೇ ತಿಳಿಸಿ ಅದನ್ನು ನಿರಾಕರಿಸದಂತೆ ಹೇಳಲು ಬಂದಿದ್ದರು . ಛಾನ್ಸಲರ್  ಹುದ್ದೆ ಹೇಗಿದೆ ಎಂದು ಕೇಳಿದ್ದಕ್ಕೆ ಕುವೆಂಪು ಅವರು ಖಿನ್ನ ಮನಸ್ಕಕರಾಗಿ’  ವೈಸ್ ಛಾನ್ಸಲರ್ ಹುದ್ದೆ ಎಂದರೆ ನನ್ನ ಮಟ್ಟಿಗೆ ಪೈಲ್ಸ್ ಮತ್ತು ಫೈಲ್ಸ್ ‘  ಎಂದಿದ್ದರು ( ಏಕೆಂದರೆ ಛಾನ್ಸಲರ್ ಹುದ್ದೆಯಲ್ಲಿ ಕೆಲಸ ಮಾಡುವಾಗ ಬಹುಕಾಲ ಕುಳಿತೇ ಕೆಲಸ ಮಾಡಬೇಕಾದ್ದರಿಂದ ಕುವೆಂಪು ಅವರು ಪೈಲ್ಸ್ ಸಮಸ್ಯೆಯಿಂದಲೂ ಬಳಲುತ್ತಿದ್ದರು) ಈ ಅವಧಿಯಲ್ಲಿ ಆಡಳಿತಾತ್ಮಕವಾಗಿ ಅನೇಕ ಸುಧಾರಣೆಗಳನ್ನು ಕನ್ನಡದ  ಏಳಿಗೆಗಾಗಿ ಅನೇಕ ಹೊಸ ಕ್ರಿಯಾ ಯೋಜನೆಗಳನ್ನು, ಕ್ರಮಗಳನ್ನು ಕೈಗೊಂಡಿದ್ದರಿಂದ ಇಡೀ ಗಂಗೋತ್ರಿಯೇ ಕುವೆಂಪು ಅವರ ಕಲ್ಪನಾ ಶಕ್ತಿಗೂ, ಕ್ರಿಯಾಶೀಲತೆಗೂ ಸಾಕ್ಷಿ ಆಗುವಂತೆ ಬೆಳೆದಿತ್ತು. ಅವರಲ್ಲಿ ಆಡಳಿತಾತ್ಮಕವಾಗಿ ಯಾವುದೇ ಕೊರತೆ ಇಲ್ಲದಿದ್ದರೂ ಒಳಗೊಳಗೆ ದ್ವೇಷ ಮತ್ಸರ ,ಚಿಲ್ಲರೆ ರಾಜಕಾರಣಗಳು ಬೆಳೆಯುತ್ತಿರುವುದು ಅವರ ಗಮನಕ್ಕೂ ಬಂದಿತ್ತು .ಇದೇ ಸಂದರ್ಭದಲ್ಲಿ ಅಟೆಂಡೆನ್ಸ್ ಕೊರತೆಯಿಂದ ಪರೀಕ್ಷೆಗೆ ಕುಳಿತುಕೊಳ್ಳಲಾಗದ ಕೆಲವು ವಿದ್ಯಾರ್ಥಿಗಳು ಕೀಳು ರಾಜಕಾರಣಕ್ಕಿಳಿದು, ಹಿಂಸಾ ಕೃತ್ಯಕ್ಕೂ ಹೇಸದೆ ಕುವೆಂಪು ಅವರ ಅಸಾಧಾರಣ ವ್ಯಕ್ತಿತ್ವವನ್ನು ಗುರುತಿಸದೇ ಅವರ ಮನೆಗೆ ನುಗ್ಗಿ ಅವರನ್ನು ಏಕವಚನದಲ್ಲೆಲ್ಲಾ ಕೂಗಾಡಿ ‘ಉದಯ ರವಿ’ಯ ಮೇಲೆ ಹಲ್ಲೆ ಮಾಡಿ ಧಿಕ್ಕಾರ ಕೂಗುತ್ತಾ ಮನೆಯ ಮುಂದಿನ ಕಿಟಕಿಯ ಗಾಜು,  ಹೂಕುಂಡಗಳನ್ನು ಒಡೆದು ಹಾಕಿದ್ದು ಕುವೆಂಪು ಅವರಿಗೆ ಅಗಾಧವಾದ ಮಾನಸಿಕ ನೋವುಂಟು ಮಾಡಿತು ಜೊತೆಗೆ ಕುವೆಂಪು ಮಾನವೀಯ ಮೌಲ್ಯಗಳ ಬಗ್ಗೆ ಇಟ್ಟಿದ್ದ ಗಾಢ ನಂಬಿಕೆಯನ್ನು ಅರೆ ಕ್ಷಣದಲ್ಲಿ ಕಲಕಿ ಬಿಟ್ಟಿತ್ತು!!

ಕನ್ನಡದ ಬಗೆಗೆ ಅಪಾರವಾದ ಅಭಿಮಾನ ಕನ್ನಡದ ಪರವಾಗಿ ಯಾವಾಗಲೂ ಅಭಿಪ್ರಾಯ ರೂಪಿಸುತ್ತಿದ್ದ ಕುವೆಂಪು ಅವರು ಅಖಂಡ ಕರ್ನಾಟಕ ನಿರ್ಮಾಣ ಸಂದರ್ಭದಲ್ಲಿ  ಬೂಟಾಟಿಕೆಯ ಕನ್ನಡಪರ ಹೋರಾಟಗಾರರನ್ನು ತಿರಸ್ಕರಿಸುತ್ತಿದ್ದರು.  ಸಮಾಜವಾದಿ ಧೋರಣೆಯ  ಜೆ ಎಚ್ ಪಟೇಲರು ಪಾರ್ಲಿಮೆಂಟನಲ್ಲಿ ಕನ್ನಡದಲ್ಲಿ ಮಾತನಾಡಿದಾಗ ಅತ್ಯಂತ ಸಂಭ್ರಮಿಸಿದ್ದರು. ಈ ಸಮಾಚಾರ ರೇಡಿಯೋದಲ್ಲಿ ಪ್ರಸಾರವಾದಾಗ ಮಗ ತೇಜಸ್ವಿಯವರಿಗೆ ‘ ಕೇಳಿದೆಯೇನೋ ಪಾರ್ಲಿಮೆಂಟ್ ನಲ್ಲಿ ಸಮಾಜವಾದಿ ಪಕ್ಷದ ಜೆ ಎಚ್ ಪಟೇಲ್ ಕನ್ನಡದಲ್ಲಿ ಭಾಷಣ ಮಾಡಿದ ವಾರ್ತೆ?  ಇಷ್ಟು ದಿನ ಆಯ್ತು ಈ ಕಾಂಗ್ರೆಸ್ ರಾಜಕಾರಣಿಗಳಿಗೆ ನೆಹರು ಎದುರು ತಮ್ಮ ಮಾತೃಭಾಷೆಯಲ್ಲಿ ಮಾತನಾಡುವಷ್ಟು ಧೈರ್ಯ ಇರಲಿಲ್ಲ;  ಪಟೇಲರು ಕನ್ನಡದಲ್ಲಿ ಮಾತನಾಡಿ ನಾನು ತಲೆ ಎತ್ತಿಕೊಂಡು ತಿರುಗುವ ಹಾಗೆ ಮಾಡಿದರು’  ಎಂದು ಪಟೇಲರನ್ನು ಕೊಂಡಾಡಿದರು ಹಾಗೆಯೇ ಮುಂದಿನ ದಿನಗಳಲ್ಲಿ ಗಾಂಧಿ ಪ್ರತಿಷ್ಠಾನದ ಅವ್ಯವಹಾರ ಅದ್ವಾನಗಳ ಬಗ್ಗೆ ಪತ್ರಿಕೆಗಳಲ್ಲಿ ಟೀಕೆಗಳು ಪ್ರಕಟವಾದಾಗ ಕುವೆಂಪು ಅವರು’ ನಮ್ಮ ದೇಶದಲ್ಲಿ ಈಗ ಬದುಕಿರುವ ನಿಜವಾದ ಗಾಂಧಿವಾದಿಗಳೆಂದರೆ  ಮೂವರು:  ಲೋಹಿಯಾ, ಜೆ ಪಿ , ವಿನೋಬಾ ಭಾವೆ ‘  ಎಂದು ಹೇಳುತ್ತಿದ್ದರು.

70ರ ದಶಕದಲ್ಲಿ ಜಾತಿ ವಿಚಾರದ ಕುರಿತಾಗಿ ಮಾತನಾಡುವುದೇ ಮಹಾ ಅಪರಾಧ ಎಂಬಂತಿತ್ತು. ಇಂತಹ ಸಂದರ್ಭದಲ್ಲಿ ಯುವತಲೆ ಮಾರಿನ  ತೇಜಸ್ವಿಯವರನ್ನು ಒಳಗೊಂಡಂತೆ  ನಡೆಸುತ್ತಿದ್ದ ಜಾತಿ ವಿನಾಶದ ಸಾಮಾಜಿಕ ,ಕ್ರಾಂತಿಕಾರಿ ಚಟುವಟಿಕೆಗಳು, ಹೇಳಿಕೆಗಳು, ನಿರ್ಧಾರಗಳು, ಪ್ರತಿಭಟನೆಗಳು ಒಮ್ಮೊಮ್ಮೆ ಅದಕ್ಕೆ ಬರುತ್ತಿದ್ದ ತೀವ್ರವಾದ ವಿರೋಧ ಕುವೆಂಪು ಅವರನ್ನು ಚಿಂತಾಕ್ರಾಂತರನ್ನಾಗಿ ಮಾಡುತ್ತಿತ್ತು. ಸಾವಿರಾರು ವರ್ಷದ ಜಾತಿ ಪದ್ಧತಿಯ ದೆಸೆಯಿಂದ ಬೌದ್ಧಿಕ ಗುಲಾಮಗಿರಿ ರಕ್ತಗತವಾಗಿ ಹೋಗಿದ್ದ ಶೂದ್ರರ ವಿಚಾರ ದಾರಿದ್ರ್ಯವನ್ನು ಕುವೆಂಪು ಅವರಷ್ಟು ಉಗ್ರವಾಗಿ ಯಾವ ಸನಾತನಿಯು ಟೀಸುತ್ತಿರಲಿಲ್ಲ.  40 ವರ್ಷಗಳ ಕಾಲ ಅವರಿಗೆ ವಿವೇಕ ಬೋಧೆ ಮಾಡಿ ಕುವೆಂಪು ರೋಸಿ ಹೋಗಿದ್ದರು.   ನಮ್ಮೆಲ್ಲ ಯುವಕ ಯುವತಿಯರು ತಮ್ಮ ತತ್ವಾದರ್ಷಗಳಿಗೆ ತಿಲಾಂಜಲಿ ಇತ್ತು ಅಂತಿಮವಾಗಿ ಗೊಡ್ಡು ಕಂದಾಚಾರಗಳಿಗೂ , ಸನಾತನ ಸಂಪ್ರದಾಯಗಳಿಗೂ ಶರಣಾಗುವುದು ವಿವಾಹ ಸಂದರ್ಭದಲ್ಲಿ ಎಂಬುದನ್ನು ಕುವೆಂಪು ಚೆನ್ನಾಗಿ ಅರಿತಿದ್ದರು ಅದಕ್ಕಾಗಿ ಯುವ ಸಮುದಾಯಕ್ಕೆ ‘ ನೀವು ಲೋಕವನ್ನಾಗಲಿ, ಸಮಾಜವನ್ನಾಗಲಿ, ಪುರೋಹಿತಶಾಹಿಯನ್ನಾಗಿ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ ; ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ;  ನಿಮ್ಮಲ್ಲಿ ಪ್ರಾಮಾಣಿಕತೆ ಏನಾದರೂ ಇದ್ದರೆ ನಾನು ಹೇಳುವ ಒಂದು ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ ; ನಿಮ್ಮ ಮದುವೆಯನ್ನು ನೀವು ವರದಕ್ಷಣೆ ತಗೊಳ್ಳದೆ, ಶಾಸ್ತ್ರಾಚಾರಗಳಿಗೆ ಕಟ್ಟು ಬೀಳದೆ,  ನಿಮ್ಮ ಅಂತಸ್ತಿನ ಪ್ರದರ್ಶನ ಮಾಡಲು ದುಂದು ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ,  ಇದಾವ ಮಹಾ ಕ್ರಾಂತಿ ಎಂದು ನಿಮಗನ್ನಿಸಬಹುದು!  ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ನೀವು ನಂಬಿದ ಆದರ್ಶಗಳ, ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ ,ಆನಂದ ಏನೆಂದಾದರೂ ನಿಮಗೆ ಗೊತ್ತಾಗುತ್ತದೆ ! ಆದರ್ಶಗಳು ನಾವು ದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ;  ಅವು ನಮ್ಮ ಜೀವನದ ಉಸಿರು ‘ ಎಂದು ಹೇಳಿ ತಮ್ಮ ಜೀವನದುದ್ದಕ್ಕೂ ತಮ್ಮ ಮನೆ ಮಕ್ಕಳ , ತಮ್ಮ ಬಳಿ ಬಂದ ಅನೇಕ ಯುವಕರಿಗೆ ಈ ಪರ್ಯಾಯ ಸಂದೇಶ  ನೀಡುವುದರೊಂದಿಗೆ ನಡೆದು ತೋರಿಸಿದರು .ಇಂತಹ ಆದರ್ಶಗಳು ಸಾರ್ವಕಾಲಿಕವಾದ ಮಹೋನ್ನತ ಸರಳ ಸಾಮಾಜಿಕ ಚಿಂತನೆಗಳಾಗಿದ್ದು ಭವಿಷ್ಯದ ಭಾರತಕ್ಕೆ ಅತ್ಯಂತ ಸಕಾಲಿಕವಾಗಿವೆ ಎಂದೆನ್ನಿಸದೇ ಇರದು.  ಅಂದಿನಿಂದ ಇಂದಿನವರೆಗೂ ಕುವೆಂಪು ಪರಿಚಯಿಸಿದ ಸರಳ ‘ಮಂತ್ರ ಮಾಂಗಲ್ಯ ‘ ವಿವಾಹವನ್ನು ನಡೆಸಿಕೊಂಡು ಬರುತ್ತಿರುವ ಒಂದು  ಸಮುದಾಯವೇ ಇದೆ .ಇದು ಕುವೆಂಪು ಭಾರತದ ಸಾಮಾಜಿಕ ಉದ್ಧಾರಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಎನ್ನಬಹುದು .
ಹೀಗೆ ‘ ಅಣ್ಣನ ನೆನಪು’ ಕೃತಿ ತೇಜಸ್ವಿಯವರು ತಮ್ಮ ಆತ್ಮಕಥನವೊ  ಎಂಬ ಪರಿಭಾಷೆಯಲ್ಲಿ ಅತ್ಯಂತ ಸರಳವಾಗಿ ತಮ್ಮ ಬಾಲ್ಯದಿಂದ ಯವ್ವನದ ಹೊಸ್ತಿಲಿನ  ಅನೇಕ ಘಟನೆಗಳನ್ನು ವಿಸ್ತೃತವಾಗಿ ಬರೆಯುತ್ತಾ ಕುವೆಂಪು ಅವರ ವೈಚಾರಿಕತೆಯನ್ನು   ಆ ಕಾಲದ ಅನೇಕ ಘಟನಾವಳಿಗಳನ್ನು  ದಾಖಲಿಸುತ್ತಾ ಕೆಲವರ ಕೆಂಗಣ್ಣಿಗೂ ಕೂಡ ಗುರಿಯಾಗಿದ್ದಾರೆ. ಹಲವರು ತನ್ನ ಕುರಿತಾಗಿ ಮಾತ್ರ ಬರೆಯಬೇಡ;  ನೀನೇನು ಕುವೆಂಪು ಅವರ ಕುರಿತಾಗಿ ಬರೆಯುತ್ತಿದ್ದೀಯೋ, ನಿನ್ನ ಪುರಾಣಗಳನ್ನು ಬರೆಯುತ್ತಿದ್ದೀಯೋ ?’ಎಂದು ಪ್ರಶ್ನಿಸಿದವರೂ ಇದ್ದಾರೆ  ಎಂದು ತೇಜಸ್ವಿಯವರೇ ದಾಖಲಿಸಿದಂತೆ    ಕುವೆಂಪು ಅವರ ಸರಳ ಸಾತ್ವಿಕ ಜೊತೆಗೆ ಬಹುರೂಪಿ ವ್ಯಕ್ತಿತ್ವದ ಮುನ್ನೋಟವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿ ಕೊಡುವುದರಲ್ಲಿ ಈ ಕೃತಿ ತುಂಬಾ ಯಶಸ್ವಿಯಾಗಿದೆ .ಕೃತಿಯನ್ನು ಓದುತ್ತಾ ಕುವೆಂಪು ಅವರ ಬಗೆಗಿನ ಅಭಿಮಾನ,  ಕುತೂಹಲ ಇನ್ನಷ್ಟು ಮತ್ತಷ್ಟು ನನ್ನಲ್ಲಿ ನೂರ್ಮಡಿಸಿದೆ….


3 thoughts on “ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ‘ಅಣ್ಣನ ನೆನಪು ‘ನನ್ನ ಓದಿಗೆ ನಿಲುಕಿದ್ದು…ಸುಧಾ ಹಡಿನಬಾಳ

  1. ಚೆನ್ನಾಗಿ ವಿಮರ್ಶಿಸಿದರೆ ಮೇಡಂ ಧನ್ಯವಾದಗಳು

Leave a Reply

Back To Top