ಪ್ರಭಾವತಿ ಎಸ್ ದೇಸಾಯಿ-ಗಜಲ್

ಕಾವ್ಯಸಂಗಾತಿ

ಗಜಲ್

ಪ್ರಭಾವತಿ ಎಸ್ ದೇಸಾಯಿ

ಮೊದಲ ರಾತ್ರಿಯಲಿ ಮೌನ ಮುರಿಯಲು ನೀ ಬರ ಬೇಕಾಗಿತ್ತು
ಸಂಜೆಯ ಕೆಂಪಲಿ ಹೆಜ್ಜೆ ಹಾಕಲು ನೀ ಬರ ಬೇಕಾಗಿತ್ತು

ಅನುರಾಗದ ಮಳೆಯಿಲ್ಲದೆ ಕುಸುಮಗಳು ಕಮರಿವೆ ಬಳ್ಳಿಯಲಿ
ಮುದ್ದಿಸಿ ಹೃದಯ ಸುಮವ ಅರಳಿಸಲು ನೀ ಬರ ಬೇಕಾಗಿತ್ತು

ಮಧುಮಾಸಕೆ ಬನದಲಿ ಕೇಳುತಿದೆ ಕೋಗಿಲೆಯ ಪಂಚಮ ದನಿ
ಪ್ರೀತಿಯಾ ಯುಗಳ ಗೀತೆ ಹಾಡಲು ನೀ ಬರ ಬೇಕಾಗಿತ್ತು

ಬಿರುಗಾಳಿಗೆ ಸಿಲುಕಿ ಬಾಳ ನೌಕೆ ಸುತ್ತುತಿದೆ ದಿಕ್ಕು ಕಾಣದೆ
ಬದುಕಿನ ದೋಣಿಯನು ದಡ ಸೇರಿಸಲು ನೀ ಬರ ಬೇಕಾಗಿತ್ತು

ಕಂಡ ಕನಸುಗಳು ನನಸಾಗದೆ ನರಳುತಿದೆ ಒಂಟಿ ಹಣತೆ
ಇರುಳಿನ ವಿರಹ ತಾಪ ಆರಿಸಲು ನೀ ಬರ ಬೇಕಾಗಿತ್ತು

ನಮ್ಮ ಪ್ರಣಯದ ಹೊತ್ತಿಗೆ ಬಿಕ್ಕುತಿದೆ ಮುನಿದು ಮೂಲೆಯಲಿ
ಎದೆ ಪುಟದಲಿ ಒಲವ ಓಲೆ ಬರೆಯಲು ನೀ ಬರ ಬೇಕಾಗಿತ್ತು

ವ್ಯಾವೋಹದ ಅಮಲಿನ ಕಿರಣಗಳ ಬಯಸುವ ಚಕೋರಿ ನಾನು
ಹಾಲ ಬೆಳದಿಂಗಳ “ಪ್ರಭೆ” ಹರಡಲು ನೀ ಬರ ಬೇಕಾಗಿತ್ತು


One thought on “ಪ್ರಭಾವತಿ ಎಸ್ ದೇಸಾಯಿ-ಗಜಲ್

Leave a Reply

Back To Top