ಅಂಕಣ ಸಂಗಾತಿ

ನೆನಪಿನದೋಣಿಯಲಿ

ಅಳಿಸದ ಅನುಬಂಧ

ಆಕಾಶವಾಣಿ 

ಮನಗಳಿಗೆ ಹಿತ ನೀಡುತಲಿ

ಮುದ ತರುವುದೀ ಬಾನುಲಿ

ಜ್ಞಾನ ಸುದ್ದಿ ರಂಜನೆಗಳಲಿ 

ಎಲ್ಲರಿಗೂ ಪ್ರಿಯ ಆಕಾಶವಾಣಿ 

ಮೊನ್ನೆ ಸೆಪ್ಟೆಂಬರ್ 2ನೆಯ ತಾರೀಕು ಕನಸೊಂದು ನನಸಾದ ದಿನ.  ಮಹಿಳಾ ರಂಗ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಮೈಸೂರು ಆಕಾಶವಾಣಿಗೆ ಭೇಟಿ ಕೊಟ್ಟ ಸಮಯ. ಆಕಾಶವಾಣಿಯೊಂದಿಗೆ ಜೀವನವಿಡೀ ಅನುಬಂಧ ಬೆಳೆಸಿಕೊಂಡು ಬಂದಿರುವ ನನಗಂತೂ ಮೈ ಪುಳಕ ತಂದ, ಬಹು ಅಪೇಕ್ಷಿತ, ಬಹುದಿನದ ನಿರೀಕ್ಷೆ ನಿಜವಾಗಿ ಹೇಳಲಾಗದಷ್ಟು ಸಂತೋಷ .ಆ ಸಂದರ್ಶನ ಮೊದಲು ಮೈಸೂರು ಆಕಾಶವಾಣಿಯಲ್ಲಿ ನಂತರ ವನಿತಾ ವಿಹಾರ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಎಲ್ಲಾ ಬಾನುಲಿ ಕೇಂದ್ರ ಗಳಲ್ಲೂ ಪ್ರಸಾರವಾದಾ ಗಲಂತೂ ಅಸದಳ ಸಂಭ್ರಮ. ಬರೀ ಕೇಂದ್ರವನ್ನು ನೋಡಿ ಕಣ್ತುಂಬಿ ಬರಬೇಕೆಂದಿದ್ದ ವಳಿಗೆ ಆಹ್ವಾನ ಪಡೆದು ಸಂದರ್ಶನ ಕೊಟ್ಟು ಸಂಭಾವನೆಯನ್ನು ಸ್ವೀಕರಿಸಿದಾಗ ಎರಡೆರಡು “ಲಡ್ಡು” ಬಂದು ಬಾಯಿಗೆ ಬಿದ್ದಂತಾಯಿತು.

ರೇಡಿಯೋ ಆಕಾಶವಾಣಿ _  ಸ್ಕೂಲು ಪಾಠ ಆಟ ಊಟಗಳಂತೆ ಬಾಲ್ಯದ ನೆನಪುಗಳ ಜೊತೆ ಅದೆಷ್ಟು ಬೆಸೆದುಕೊಂಡಿದೆ ಎಂದರೆ ರೇಡಿಯೋ ಇರದ ಬಾಲ್ಯದ ನೆನಪುಗಳೇ ಇಲ್ಲ ಅನ್ನಿಸುವಷ್ಟು. ಮೊದಲು ಎದ್ದ ಅಮ್ಮ ರೇಡಿಯೋ ಹಾಕಿದಾಗ ಪ್ರಸಾರ ಶುರುವಾಗಲು ಸ್ವಲ್ಪ ಸಮಯ ಬಾಕಿ ಇದ್ದು 1ತರಹ ವಿಶಿಷ್ಟ ಸದ್ದು. ನಂತರ ಇದು ಮೈಸೂರು ಆಕಾಶವಾಣಿ ತರಂಗಾಂತರ…. ಎಂದು ಉದ್ಘೋಷಕರು ಘೋಷಿಸಿದಾಗ ನಮ್ಮನ್ನು ಏಳಿಸಲು ಶುರು. ವಂದೇ ಮಾತರಂ ಮುಗಿದು ನಂದನದ ಭಕ್ತಿಗೀತೆಗಳು ಅದರಲ್ಲೂ ಶನಿವಾರ ವೆಂಕಟೇಶ್ವರ ಸುಪ್ರಭಾತ ನಂತರ ಎಂಎಸ್ ಸುಬ್ಬುಲಕ್ಷ್ಮಿ ಅವರು ಹಾಡಿದ ರಂಗಪುರವಿಹಾರ ಭಾವಯಾಮಿ ರಘುರಾಮಂ ಕೀರ್ತನೆಗಳು ದಿನದ ಸುಪ್ರಭಾತಕ್ಕೆ ಸ್ಫೂರ್ತಿ ನೀಡುತ್ತಾ ಕಳೆ ಒದಗಿಸುತ್ತಿದ್ದವು. ನಂತರ ರೈತರಿಗೆ ಸಲಹೆ . ಸಂಸ್ಕೃತ ವಾರ್ತೆಯನ್ನಂತೂ ಕೂತೇ ಕೇಳಬೇಕು. ಹೈಸ್ಕೂಲಿನಲ್ಲಿ ಸಂಸ್ಕೃತ ಮೊದಲ ಭಾಷೆ ತೆಗೆದುಕೊಂಡ ಮೇಲಿಂದ ಚೆನ್ನಾಗಿ ಅರ್ಥವಾಗತೊಡಗಿತು . ಬಲದೇವಾನಂದ ಸಾಗರಃ ಅಂತ ಒಬ್ಬರು ಓದುತ್ತಿದ್ದ ನೆನಪು.  ಪ್ರದೇಶ ಸಮಾಚಾರವನ್ನು ಎಂ ರಂಗರಾವ್ ನಾಗಮಣಿ ಎಸ್ ರಾವ್ ಮುಂತಾದವರು ಓದುತ್ತಿದ್ದರು. ಶುಕ್ರವಾರದ ಗಾಂಧಿಸ್ಮೃತಿ ಮೀರಾಭಜನ್ ಕೇಳುವ ಅವಕಾಶ ಕಲ್ಪಿಸುತ್ತಿತ್ತು. “ವೈಷ್ಣವ ಜನತೋ ತೇನೇ ಕಹಿಯೆ” ಅಂತೂ ಬಾಯಿಪಾಠವಾಗಿತ್ತು. ೭_೩೫ ರ ಕನ್ನಡ ವಾರ್ತೆ ಸುದ್ದಿಗೆ ತುಂಬಾ ಉತ್ತಮ ಮಾರ್ಗವಾಗಿತ್ತು. 7 ಮುಕ್ಕಾಲರಿಂದ ಎಂಟರವರೆಗೆ ಕನ್ನಡ ಚಿತ್ರಗೀತೆ. ನಾವು ಕಾತರದಿಂದ ಕಾಯುತ್ತಿದ್ದ ಕಾಲ. ಮೊದಮೊದಲು 3 ಹಾಡು ಕೆಲವು ಸಲ ನಾಲ್ಕನೆಯದು ಅರ್ದಂಬರ್ಧ ವೂ ಬರುತ್ತಿತ್ತು .ಬರುಬರುತ್ತಾ ವಾಣಿಜ್ಯ ಪ್ರಕಟಣೆಗಳು ಆರಂಭವಾಗಿ 2 ಹಾಡಿಗೆ ನಿಲ್ಲಿಸುತ್ತಿದ್ದರು. ಟೇಪ್ ರೆಕಾರ್ಡರ್ ಇನ್ನೂ ಚಾಲ್ತಿಗೆ ಬರದಿದ್ದ ಆ ಕಾಲದಲ್ಲಿ ಸಿನಿಮಾ ಹಾಡು ಭಕ್ತಿಗೀತೆ ಜಾನಪದ ಗೀತೆಗಳನ್ನು ಕೇಳಲು ಕಲಿಯಲು ಹಾಗೂ ಬರೆದಿಟ್ಟುಕೊಳ್ಳಲು ರೇಡಿಯೋ ಒಂದೇ ನಮಗೆ ಆಪದ್ಬಾಂಧವ. ಕಾರ್ಡುಗಳನ್ನು ಬರೆದು ನಮ್ಮ ಮೆಚ್ಚಿನ ಹಾಡನ್ನು ಪ್ರಸಾರ ಮಾಡಲು ಕೋರಿಕೊಂಡು ಆ ಪಟ್ಟಿಯಲ್ಲಿ ನಮ್ಮ ಹೆಸರು ಕೇಳಿಸಿದಾಗ ಹಿಗ್ಗುತ್ತಿದ್ದೆವು . ಬಹಳ ದಿನಗಳ ಮೇಲೆ ನನ್ನ ಹೆಸರು ಈಗ ರೇಡಿಯೋದಲ್ಲಿ ಬಂದಾಗ ಮತ್ತೆ ಅದೇ ಹಳೆಯ ನೆನಪುಗಳಲ್ಲಿ ತೇಲಿಹೋದೆ.   ಸಿನಿಮಾ ಹಾಡುಗಳಿಗೆ ಚೂರುಪಾರು ಹಿಂದೆ ಕಥೆ ಸಂದರ್ಭಗಳನ್ನು ಸೇರಿಸಿ ಬರೀ ಹಾಡುಗಳ “ನಂದನ” ಅಂತ 1ಕಾರ್ಯಕ್ರಮ ಬರುತ್ತಿತ್ತು ಒಂದೆರಡು ಆ ರೀತಿಯ ಸ್ಕ್ರಿಪ್ಟ್ ಸಹ ಬರೆದಿದ್ದೆ. ಹೇಗೆ ಕಳಿಸುವುದು ತಿಳಿಯದೆ ಸುಮ್ಮನಾಗಿ ಬಿಟ್ಟಿದ್ದೆ . ಅದೇಕೋ ಬರೆದದ್ದನ್ನೆಲ್ಲ ಮುಚ್ಚಿಟ್ಟುಕೊಳ್ಳುವ ಬುದ್ದಿ ಆಗ. ಅದನ್ನು ಸೇರಿಸಿ ಈಗ ಜಗಜ್ಜಾಹೀರು ಮಾಡ್ತಿದೀನಿ ಬಿಡಿ .

File:Akashwani beed.JPG - Wikimedia Commons

ಬೆಳಿಗ್ಗೆ 9ಗಂಟೆಗೆ ಹಿಂದಿ ಇಂಗ್ಲಿಷ್ ಅಥವಾ ಸಂಸ್ಕೃತ ಪಾಠ ಗಳು ಇರುತ್ತಿದ್ದವು ಪ್ರಾರಂಭ  ಅಷ್ಟೆ ಕೇಳಿ ಶಾಲೆಗೆ ಹೊರಟು ಬಿಡುತ್ತಿದ್ದೆವು. ರಜೆಯ ದಿನಗಳಲ್ಲಿ ಮಧ್ಯಾಹ್ನದ ಇಂಗ್ಲಿಷ್ ವಾರ್ತೆಯ ನಂತರದ ಚಿತ್ರಗೀತೆ, 1ಗಂಟೆಯ ಭಾವಗೀತೆ, ಹನ್ನೆರಡು ಮೂವತ್ತರ ವನಿತಾ ವಿಹಾರ ಸದಾಕಾಲ ಆನ್ ಪಾಪ! ಬಿಡುವೇ ಇರುತ್ತಿರಲ್ಲಿಲ್ಲ.  ಮಧ್ಯೆ ಮಧ್ಯೆ ಹೀಟ್ ಅಗಬಾರದೆಂದು ಒಂದೈದು ನಿಮಿಷ ಆರಿಸುತ್ತಿದ್ದೆವೇನೋ…. ಸಂಜೆ ಕಾರ್ಮಿಕರ ಕಾರ್ಯಕ್ರಮ, ಕೃಷಿ ರಂಗದಲ್ಲಿ ಪ್ರಸಾರ ಮಾಡುತ್ತಿದ್ದ 1ಭಕ್ತಿಗೀತೆ ಅಥವಾ ಜಾನಪದ ಗೀತೆ ಅದನ್ನು ಸಹ ಕೇಳುತ್ತಿದ್ದೆವು .ಶಾಸ್ತ್ರೀಯ ಸಂಗೀತ ನಾಟಕಗಳು ಎಲ್ಲವೂ ಪ್ರಿಯ.  ಅದೇಕೋ ಹಿಂದೂಸ್ತಾನಿ ಸಂಗೀತ ಕೇಳಲು ಇಷ್ಟವಾಗುತ್ತಿರಲಿಲ್ಲ. ರಾತ್ರಿ ಮಲಗುವಾಗ ಅಣ್ಣಾ ಹಾಕಿರುತ್ತಿದ್ದ ರೇಡಿಯೋ ಸಿಲೋನ್ ನ ಹಳೆಯ ಹಿಂದಿ ಹಾಡುಗಳು ನಿದ್ರೆ ಬರುವವರೆಗೂ ಒಳ್ಳೆ ಲಾಲಿ ಹಾಡುತ್ತಿದ್ದವು. ಈಗಲೂ ಮಲಗಿದಾಗ ದೂರದಲ್ಲೆಲ್ಲೋ ಹಿಂದಿ ಹಾಡು ಕೇಳಿದರೆ ಮನ  ಟಕ್ಕಂಥ ಅಂದಿನ ದಿನಗಳಿಗೆ ಜಾರಿಕೊಂಡು ಬಿಡುತ್ತದೆ . 

ಭಾನುವಾರಗಳಲ್ಲಿ ಬೆಳಗ್ಗೆ ನವಸುಮ ಅಂತ ತಿಂಗಳಿಗೊಂದು ಹೊಸ ಹಾಡು ಬರ್ತಿತ್ತು.  ಮಕ್ಕಳಿಗೆ ಬೇರೆ ಬೇರೆ ಭಾಷೆಯ ಹಾಡು ಹೇಳಿಕೊಡುತ್ತಿದ್ದರು. ಕಾರ್ಯಕ್ರಮದ ಹೆಸರು ಮರೆತುಹೋಗಿದೆ ತಮಿಳಿನ “ಕೂಡಿ ವಿಳೆಯಾಡು ಪಾಪ” ಹಾಡು ಕಲಿತದ್ದು ಆಗಲೇ.  ಪಕ್ಷಿನೋಟ ವಾರದ ಕಾರ್ಯಕ್ರಮಗಳ ಪರಿಚಯ ಕೇಳಿ ಕೇಳಲೇಬೇಕಾದ ಕಾರ್ಯಕ್ರಮಗಳ ಪಟ್ಟಿ ಮಾಡ್ಕೊತಿದ್ದೆವು. ಬಾಲಜಗತ್ ಕಾರ್ಯಕ್ರಮಕ್ಕೆ ಕಾತರದಿಂದ ಕಾಯುತ್ತಿದ್ದನ್ನು  ನೆನೆಸಿಕೊಂಡರೆ ಎಷ್ಟು ಚಿಕ್ಕ ವಿಷಯಗಳಲ್ಲೂ ಸಂಭ್ರಮ ಕಾಣುತ್ತಿದ್ದೇವಲ್ಲ ಆಗ ಅನ್ನಿಸುತ್ತೆ . ಮಧ್ಯಾಹ್ನದ ಹೊತ್ತು ಚಲನಚಿತ್ರ ಧ್ವನಿವಾಹಿನಿ ಸೌಂಡ್ ಟ್ರ್ಯಾಕ್ ಆಗ ಊಟ ಮುಗಿಸಿ ರೇಡಿಯೋ ಇಟ್ಟ ಷೆಲ್ಫಿನ ಮುಂದೆಯೇ ಪಟ್ಟಾಂಗ.  ಕೇಳಿದ್ದೆವ ಕೇಳಿದರೂ ಬೇಸರವಿಲ್ಲ. ವರ್ಷದ ಕೊನೆಯಲ್ಲಿ ಅವಲೋಕನ ಅಂಥ ಕೆಲವು ಕಾರ್ಯಕ್ರಮಗಳ ಝಲಕ್. ಮತ್ತೆ ಮುಂದಿನ ವರ್ಷದ ಮುಖ್ಯ ಕಾರ್ಯಕ್ರಮಗಳ ವಿವರ ಹೇಳುತ್ತಿದ್ದರು. ಪ್ರತಿಯೊಂದರಲ್ಲೂ ಆಸಕ್ತಿ ಈಗ ಜಾಹೀರಾತು ಅಂದರೆ ಮೂಗು ಮುರಿಯುತ್ತೇವೆ ಅಲ್ಲ ಆಗ ಆಕಾಶವಾಣಿಯ ಜಾಹೀರಾತುಗಳೆಲ್ಲ ಬಾಯಿಪಾಠವಾಗಿ ಬಿಟ್ಟಿದ್ದವು.  ಅದೂ ಒಂಥರಾ ಆಕರ್ಷಣೆ.  

ಸಮಯ ಪರಿಪಾಲನೆಯಲ್ಲಿ ಆಕಾಶವಾಣಿಯನ್ನು ಬಿಟ್ಟರಿಲ್ಲ . ಅಲರಾಂ ಗಡಿಯಾರವಿರಲಿ ಕೀ ಕೊಡುವ ಗೋಡೆ ಗಡಿಯಾರ, ಕೈಗಡಿಯಾರವಿರಲಿ ಆಗೆಲ್ಲ ರೇಡಿಯೋ ಕಾರ್ಯಕ್ರಮದ ಆಧಾರದ ಮೇಲೆಯೇ ಗಂಟೆ ಸರಿಯಾಗಿ ಸೆಟ್ ಮಾಡ್ತಿದ್ದುದು.  ದಾರಿಯಲ್ಲಿ ನಡೆಯುವಾಗ ಯಾವುದೋ ಅಂಗಡಿಯಿಂದಲೋ ಯಾರ ಮನೆಯಿಂದಲೋ ರೇಡಿಯೋ ಕಾರ್ಯಕ್ರಮ ಕೇಳಿ ಬಂದರೆ ಆ ಕಾರ್ಯಕ್ರಮ ಬರ್ತಿದೆ ಸಮಯ ಎಷ್ಟಾಗಿದೆ ಅಂತ ಅನ್ಕೊಳ್ತಿದ್ದುದು. 1ರೀತಿಯ ಆಡಿಯೊ ಗಡಿಯಾರ ಆಗ ನಮಗೆ ರೇಡಿಯೋ. 

ಕೆಲವೊಮ್ಮೆ ಗಣ್ಯರ ಸತ್ತು ರಾಷ್ಟ್ರೀಯ ಶೋಕ ಶೋಕ ಆಚರಿಸಿದರೆ ಯಾವುದೇ ಮನ ರಂಜನೆಯ ಕಾರ್ಯಕ್ರಮವಿಲ್ಲದೆ ನಮಗೂ ಸಾಂಸ್ಕೃತಿಕ ಉಪವಾಸ. ಸಖತ್ ಬೇಜಾರಾಗ್ತಿತ್ತು. 

ಆಕಾಶವಾಣಿ ಎಂಬ ಹೆಸರು ಕೊಟ್ಟು ಭಾರತದ ಪ್ರಪ್ರಥಮ ಖಾಸಗಿ ರೇಡಿಯೋ ವಾಹಿನಿ ಆರಂಭವಾದದ್ದು ಮೈಸೂರಿನಲ್ಲಿಯೇ ಮನಃಶಾಸ್ತ್ರ ಪ್ರೊಫೆಸರ್ ಎಂ ವಿ ಗೋಪಾಲಸ್ವಾಮಿಯವರ ಕೆ ಆರ್ ಎಸ್ ರಸ್ತೆಯ ವಿಠಲ ವಿಹಾರ ಮನೆಯಲ್ಲಿಯೇ ಎಂದ ಮೇಲೆ ನಮ್ಮ ಆಕಾಶವಾಣಿಯನ್ನು ಪ್ರೀತಿಸದೇ ಇರಲು ಸಾಧ್ಯವೇ?

ನನಗೆ ತಿಳಿವು ಬಂದಾಗ ನಮ್ಮ ಮನೆಯಲ್ಲಿದ್ದುದು ಕಂಪ್ಯೂಟರ್ ಸೈಝಿನ ಆದರೆ ಆಯತಾಕಾರದ ರೇಡಿಯೋ ಮರ್ಫಿ ಕಂಪೆನಿಯದು. ಅದಕ್ಕೆ ಗೋಡೆಗೆ ಮೊಳೆ ಹೊಡೆದು ಇಟ್ಟ ಮಣೆಯ ಸ್ಟಾಂಡ್.  ಮೊದಮೊದಲು ಏರಿಯಲ್ ಅಂತ ಜೇಡರ ಬಲೆಯ ಹಗ್ಗದಂತ್ತಿದ್ದುದನ್ನು ಕಟ್ಟುತ್ತಿದ್ದ ನೆನಪು. ಅಲ್ಲದೆ ಪೋಸ್ಟಾಫೀಸಿಗೆ ಹೋಗಿ ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡಬೇಕಿತ್ತಂತೆ. ದಪ್ಪದಪ್ಪಗೆ ಬಿರುಡೆ. ಎರಡೂ ತಿರುಗಿಸುತ್ತಿದ್ದರೆ ನಿಲಯಗಳು ಕ್ಯಾಚ್ ಆಗುತ್ತಿತ್ತು. ಮಧ್ಯೆ ಬೇರೆಯದನಿ ಕೇಳದಂತೆ ಸ್ಪುಟವಾಗಿ ಕೇಳಿಸುವಂತೆ ಅಜೆಸ್ಟ್ ಮಾಡುವುದೂ 1ಕಲೆ. ಸ್ವಲ್ಪಮಟ್ಟಿಗೆ ಪರಿಣತಿ ಇತ್ತು ನನಗೆ. ಅಲ್ಲದೆ ರೇಡಿಯೋಗಿದ್ದ ಏರಿಯಲ್ ಎತ್ತಿಹಿಡಿದು ಬೇರೆ ಬೇರೆ ದಿಕ್ಕಿಗೆ ತಿರುಗಿಸಿ ದುರ್ಲಭವಾಗಿದ್ದ ಧಾರವಾಡ ನಿಲಯ ಹಾಕಿ ಚಿತ್ರಗೀತೆ ಕೇಳ್ತಿದ್ದೆ.  ಆಗ ಅಕ್ಕಪಕ್ಕದ ಮನೆಯವರು ನನ್ನ ಕರೆಸಿ ಸ್ಟೇಶನ್ ಸರಿ ಮಾಡಿಸಿಕೊಳ್ತಿದ್ದರು. ಆಮೇಲೆ ನಮ್ಮ ಮನೆಗೆ ಬಂದದ್ದು ಕರಿಬಣ್ಣದ ಪುಸ್ತಕದ ಸೈಜಿನ ಟ್ರಾನ್ಸಿಸ್ಟರ್ ಅದು ಫಿಲಿಪ್ಸ್ ಕಂಪನಿಯದು ಅಂತ ನೆನಪು . ಅದನ್ನು ತಂದಾಗ ಅಣ್ಣಾ ಕರೆಂಟು ಇರದಿದ್ದರೂ ಇದರಲ್ಲಿ ಕೇಳಬಹುದು ಅಂತ ಹೇಳಿದ್ದು ಕೇಳಿ ಖುಷಿಯಾಗಿತ್ತು. ನಂತರದಲ್ಲಿ ಪ್ಯಾಕೇಟ್ ಟ್ರಾನ್ಸಿಸ್ಟರ್. ಹೆಸರೇ ಹೇಳುವಂತೆ ಜೋಬಿನಲ್ಲಿ ಹಿಡಿಸುವಷ್ಟು ಪುಟ್ಟದು . ಕಾಲೇಜಿಗೆ ಬರುವಷ್ಟರಲ್ಲಿ ಟೂ ಇನ್ ಒನ್ ಟೇಪ್ರೆಕಾರ್ಡರುಗಳು ಬಂದಿದ್ದರೂ ನನಗಂತೂ ಓದಲಿಕ್ಕೆ ಜೊತೆ ರೇಡಿಯೋ ಹಾಕಲೇ ಬೇಕಿತ್ತು.  ಬೇರೆಯವರಿಗೆ ಡಿಸ್ಟರ್ಬ್ ಆದರೆ ನನಗೆ ಓದಲಿಕ್ಕೆ ರೇಡಿಯೋನೇ ಸ್ಪೂರ್ತಿ.

ರೇಡಿಯೋ ಮತ್ತು ಕ್ರಿಕೆಟ್  ಬಿಡಿಸಲಾರದ ನಂಟು ರೀ…. ಅಪಾರ ಕ್ರಿಕೆಟ್ ಹುಚ್ಚಿನ ನಮ್ಮಪ್ಪ 5 ದಿನಗಳ ಮ್ಯಾಚ್ ಗಳ ಪ್ರಿಯ.  ವಂಶಪಾರಂಪರ್ಯ ಈ ಕ್ರಿಕೆಟ್ ಹುಚ್ಚು ನಮ್ಮ ರಕ್ತದಲ್ಲಿಯೂ ಹರಿಯುತ್ತಿದೆ. ಆಗ ಸರ್ಫ್ ಕಂಪನಿಯ ಪ್ಯಾಕೆಟ್ ನಲ್ಲಿ ಕ್ರಿಕೆಟ್ ನ ಜಾಗಗಳ ಬಗ್ಗೆ ವಿವರಣೆ ಇರುವ ಫೋಟೋ ಇತ್ತು. ಅದನ್ನು  ನೋಡಿಕೊಂಡು ಸಿಲ್ಲಿಪಾಯಿಂಟ್ ಕವರ ವಿಕೆಟ್ ಬೌಂಡರಿ ಅವುಗಳ ಬಗ್ಗೆ ಎಲ್ಲ ಕಲಿತದ್ದು. ಪ್ರಾಯೋಗಿಕ ಅನುಭವ ಇಲ್ಲ ಬಿಡಿ . ನಂತರ ಈ ಕ್ರಿಕೆಟ್ ಹುಚ್ಚು ಒನ್ ಡೇಗೂ ತಿರುಗಿತ್ತು .ಟ್ವಿಂಟಿ ಟ್ವೆಂಟಿ ಆರಂಭವಾದಾಗ ಅಯ್ಯೋ ಬೇಗ ಮುಗಿಯುತ್ತೆ ನೋಡಿದ ಹಾಗೆ ಆಗಲ್ಲ ಅಂತ ಬೇಜಾರು ಮಾಡಿಕೊಳ್ಳುತ್ತಿದ್ದರು ನಮ್ಮಪ್ಪ . 5ದಿನದ ಮ್ಯಾಚ್  ಟೀ ಸಮಯದಲ್ಲಿ ಹಳೆ ಹಿಂದಿ ಹಾಡು ಆಗಲೂ ಆರಿಸುತ್ತಿರಲಿಲ್ಲ. ಲಂಚ್ ಸಮಯದ ಆರಿಸಿ ಮತ್ತೆ ರೇಡಿಯೋ ಕಿವಿ ಹಿಂಡುವುದು. ಮ್ಯಾಚ್ ಬರುವಾಗ ಕರೆಂಟ್ ಹೋದರೆ ಟ್ರಾನ್ಸಿಸ್ಟರ್ ಆನ್. ಅದರ ಬ್ಯಾಟರಿ ನೋಡಿಕೊಂಡು ಸದಾ ಸುಸ್ಥಿತಿಯಲ್ಲಿಡುತ್ತಿದ್ದರು

 ಪ್ಯಾಕೆಟ್ ಟ್ರಾನ್ಸಿಸ್ಟರ್ ಅಂತೂ ಕ್ರಿಕೆಟ್ ಸಮಯದಲ್ಲಿ ಅಣ್ಣನ ಜೇಬಲ್ಲೇ.  ಹೀಗೆ 1ಬಾರಿ ಅಣ್ಣ ಬೆಂಗಳೂರಿಗೆ ಹೋಗಿದ್ರಾ… ಇಲ್ಲಿ ಇನ್ನೂ 1 ತಮಾಷೆ ವಿಷಯ ಹೇಳ್ತೀನಿ.  ದೊಡ್ಡ ರೇಡಿಯೊಗೆ ದೊಡ್ಡಣ್ಣ, ಟ್ರಾನ್ಸಿಸ್ಟರ್ಗೆ ಪುಟಾಣಿ, ಪ್ಯಾಕೆಟ್ ಟ್ರಾನ್ಸಿಸ್ಟರ್ ಗೆ ಚಿಂಟು ಇವು ನಾವಿಟ್ಟಿದ್ದ ಹೆಸರುಗಳು. ಅಣ್ಣಾ ಚಿಂಟುನ  ಮರೆತು ಬಿಟ್ಟುಹೋಗಿದ್ದರು. ಮೊದಲ ಪಿಯುಸಿ ಆಗ ನಾನು ಕಪಿಲ್ ದೇವ್ ಫ್ಯಾನ್. ಐದನೇ ದಿನದ ಮ್ಯಾಚಿನ ಕಡೆಯ ದಿನ ಇಂಗ್ಲೆಂಡ್ ವಿರುದ್ಧ ಅಂತ ನೆನಪು ಅಮ್ಮ ಕಾಲೇಜಿಗೆ ತಗಂಡು ಹೋಗ್ತೀನಿ ಅಂತ ಒಪ್ಪಿಸಿ ಬ್ಯಾಗ್ ನಲ್ಲಿಟ್ಟು ಹೊರಟೆ. 1ಪೀರಿಯಡ್ ಲೆಕ್ಚರರ್ ಹೋಗಿ ಮತ್ತೊಬ್ಬರು ಬರುವ ಸಮಯದಲ್ಲಿ ಹಾಕಿ ಸ್ಕೋರ್ ಕೇಳಿಕೊಳ್ಳೋದು. ಅವತ್ತು ಹುಡುಗರೂ ಸಹ ಮಾತನಾಡಿಸಿ ಸ್ಕೋರ್ ಕೇಳ್ತಿದ್ರು. ಈ ಗಲಾಟೆಯಲ್ಲಿ ನಮ್ಮ ಎಕನಾಮಿಕ್ಸ್ ಲೆಕ್ಚರರ್ ಬಂದಿದ್ದೇ ಗೊತ್ತಾಗಲಿಲ್ಲ. ಆಮೇಲೆ ಆಫ್ ಮಾಡಿದೆ. “ಯಾರು ಟ್ರಾನ್ ಸಿಸ್ಟರ್ ಹಾಕಿದ್ದು” ಅಂತ ಕೇಳಿದರು. ಕ್ಲಾಸಿಡೀ ಗಪ್ ಚಿಪ್.  ಎಂದೂ ಹೀಗೆ ಎದ್ದು ನಿಲ್ಲದ ನಾನು ಅಳು ತಡೆಯುತ್ತಾ ಎದ್ದುನಿಂತೆ. 

“ಎಷ್ಟಾಗಿತ್ತು ಸ್ಕೋರು ಯಾರು ಬ್ಯಾಟಿಂಗೂ” ಅಂತ ಕೇಳೋದೇ… ನನಗಿಂತ ಮುಂಚೆ ಹತ್ತಾರು ಸ್ವರಗಳು ಉತ್ತರಿಸಿದ್ದವು . “ಬದುಕಿದೆಯಾ ಬಡಜೀವವೇ”  ಅಂತ ಕುಕ್ಕರಿಸಿದೆ. ಮೂವತ್ತೈದು ವರ್ಷದ ನಂತರ ಸುಮಾರು ಜನ ಪತ್ತೆಯಾಗಿ ಪಿಯುಸಿ ಸಹಪಾಠಿಗಳು ವಾಟ್ಸ್ ಆ್ಯಪ್ ಗುಂಪು ಮಾಡಿಕೊಂಡಿದ್ದೇವೆ. ಕೆಲವರು ಆ ಘಟನೆ ನೆನಪಿಸಿದರು . 

ಅಲ್ಲದೆ ಆಗೆಲ್ಲ ದೊಡ್ಡ ದೊಡ್ಡ ಪಾರ್ಕ್ ಗಳಲ್ಲಿ ರೇಡಿಯೋವನ್ನು ಇಟ್ಟು ಅದನ್ನು ಧ್ವನಿವರ್ಧಕಗಳಿಗೆ ಸೇರಿಸಿರುತ್ತಿದ್ದರು.  ಪಾರ್ಕಿಡೀ ರೇಡಿಯೋ ಕಾರ್ಯಕ್ರಮ ಕೇಳುತ್ತಿತ್ತು. ವಾರ್ತೆ ಬರುವಾಗ ನಾವು ಮಕ್ಕಳು ಜೋರಾಗಿ ಗಲಾಟೆ ಮಾಡುತ್ತಿದ್ದರೆ ಅಲ್ಲಿ ಕುಳಿತು ಕೇಳುತ್ತಿದ್ದ ತಾತಂದಿರು ರೇಗುತ್ತಿದ್ದುದು ಇನ್ನೂ ನೆನಪಿನಲ್ಲಿವೆ. 

ಮೊನ್ನೆ ರೇಡಿಯೋ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪವಾಯಿತಾ? ಸಂದರ್ಶಕಿ ಲಸಿತಾ ಮೇಡಂ ಈಗ ರೇಡಿಯೋ ಆಲಿಸುವಿಕೆ ಏಕೆ ಕಡಿಮೆ ಆಗ್ತಿದೆ ಅಂಥ ಕಷ್ಟದ ಪ್ರಶ್ನೆ ಹಾಕಿದ್ರು. ಆಗ ಏನೋ ಹೇಳ್ಬಿಟ್ಟು ಬಚಾವಾದೆ.  ಆದರೆ ನಮಗೆ ಆಗಿದ್ದ ಮನರಂಜನೆಗಳು ಓದು ಮತ್ತು ರೇಡಿಯೋ. ಓದದವರಿಗೂ ಸುಲಭವಾಗಿ ಜ್ಞಾನ ಸಂತಸ ಹಂಚ್ತಾ ಇದ್ದಿದ್ದು ರೇಡಿಯೋ 1ರೀತಿಯಲ್ಲಿ ದೈನಂದಿನ ಕೆಲಸ ಕಾರ್ಯ ಮಾಡ್ತಾನೆ ಕೇಳಬಹುದು ದೂರದರ್ಶನ ಓದುಗಳ ಹಾಗೆ ಪೂರ್ತಿ ಅದಕ್ಕೆ ಸಮಯ ಕೊಟ್ಟು ಓಲೈಸಬೇಕಿಲ್ಲ ನನ್ನಂಥವರು ಪಾಠ ಓದುತ್ತಾ ಲೆಕ್ಕ ಮಾಡುತ್ತಾ  ರೇಡಿಯೋ ಕೇಳ್ತೀವಿ. ಹಾಗಾಗಿಯೇ ಇದು ತುಂಬಾ ಉಪಯುಕ್ತ ಮಾಧ್ಯಮ .ಸುದ್ದಿ ಸಮಾಚಾರ ವಿಷಯ ಸಂಗ್ರಹಣೆಗಾಗಲ ಅಥವಾ ಭರಪೂರ ಮನರಂಜನೆಗಾಗಲಿ ಈಗ ಸಹಸ್ರಾರು ದಾರಿಗಳು. “ಪುರಾಣಮಿತ್ಯೇವ ನ ಸಾಧುಸರ್ವಂ” ಎಂಬುದು ಈಗಿನವರ ತಾರಕಮಂತ್ರ. ಹೀಗಾಗಿ ಸ್ವಲ್ಪ ತನ್ನ ಜನಪ್ರಿಯತೆಯ ಮಾನದಂಡದಲ್ಲಿ ಕೆಳಗಿಳಿದರೂ ರೇಡಿಯೋ ಅಪ್ಪುವ ಒಪ್ಪುವ ಬಳಗವೂ ಅಷ್ಟೇ ದೊಡ್ಡದಿದೆ ಎಂಬುದು ಸತ್ಯ. ಎಪ್ಪತ್ತರ ದಶಕಗಳಲ್ಲಿನ ಏಕೈಕ ಮನರಂಜನೆಯಾಗಿ ಅನಭಿಷಿಕ್ತ ಸಾಮ್ರಾಟನಾಗಿ ಮೆರೆದದ್ದು ರೇಡಿಯೋ. ಸಮಕಾಲೀನತೆಗೆ ಸ್ಪಂದಿಸಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಆಕಾಶವಾಣಿ ಎಂದೂ ಅಪ್ರಸ್ತುತವಾಗಲು ಸಾಧ್ಯವೇ ಇಲ್ಲ. ಈಗ ಒಂಚೂರು ಗ್ರಹಣ ಕವಿದಿದ್ದರೂ ನಂತರ ಮತ್ತಷ್ಟು ಹೊಳಪಾಗಿ ಪ್ರಜ್ವಲಿಸುವುದಂತೂ ಖಂಡಿತಾ .

ಈಗಲೂ ಬೆಳಿಗ್ಗೆ ಸಂಜೆ ವಾಯುವಿಹಾರ ಹೋಗುವವರು ಪುಟ್ಟ ಟ್ರಾನ್ಸಿಸ್ಟರ್ ಅಥವಾ ಮೊಬೈಲಲ್ಲಿ ರೇಡಿಯೋ ಆ್ಯಪ್ ಹಿಡಿದು ಕೇಳುತ್ತಾ ಹೋಗುವುದು ಆಕಾಶವಾಣಿ ಕಾರ್ಯಕ್ರಮಗಳನ್ನೇ.  ಅದಕ್ಕೆ ನಾನೂ ಹೊರತಲ್ಲ. ಅಲ್ಲದೆ ಅಡಿಗೆ ಮನೆಯಲ್ಲಿ ಸದಾ ರೇಡಿಯೋ ಇದ್ದರೆ ನನಗೆ ಅಡಿಗೆ ಮಾಡಲು ಸ್ಫೂರ್ತಿ . ಹೀಗಿದೆ ನನ್ನ ರೇಡಿಯೋವಿನ ಅಳಿಸದ ಅನುಬಂಧ ಬಿಡಿಸದ ಬಂಧ .

ಮೊನ್ನೆ ಮೊನ್ನೆಯವರೆಗೂ ಅಮ್ಮನ ಮನೆಯ ಅಟ್ಟದ ಮೇಲೆ ಸೇರಿದ್ದ ದೊಡ್ಡಣ್ಣ ಪುಟಾಣಿ ಚಿಂಟು ಗಳನ್ನು ಹಳೆ ಸಾಮಾನಿನವನಿಗೆ ಹಾಕುವಾಗ ನಿಜಕ್ಕೂ ಕಣ್ಣುಗಳು ತುಂಬಿಕೊಂಡಿದ್ದವು. 


ಸುಜಾತಾ ರವೀಶ್ 

Leave a Reply

Back To Top