
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯ ವಚನ

ಅಕ್ಕಮಹಾದೇವಿ ಅವರ ವಚನ
___
ಹಣ್ಣ ಮೆದ್ದ ಬಳಿಕ ,ಆ ಮರನ ಆರು ತರಿದರೇನು ?
ಹೆಣ್ಣ ಬಿಟ್ಟ ಬಳಿಕ ಆಕೆಯನಾರು
ಕೂಡಿಕೊಂಡರೇನು ?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು ?
ಚೆನ್ನಮಲ್ಲಿಕಾರ್ಜುನನ ಅರಿದ ಬಳಿಕ
ಆ ಕಾಯವ ನಾಯಿ ತಿಂದರೇನು ?
ನೀರು ಕುಡಿದರೇನು ?
ಈ ಭೂಮಿಯ ಮೇಲೆ ನಾವು ನೀವುಗಳೆಲ್ಲ ಭಗವಂತನ ಕೃಪೆಯಿಂದ ಈ ಭೂಮಿಯ ಮೇಲೆ ಹುಟ್ಟಿ ಬಂದಿದ್ದೇವೆ . ಕೊನೆಗೆ ಭಗವಂತನ ಕೃಪೆ ಆದ ಮೇಲೆ ನಾವು ಈ ದೇಹದ ಮೇಲಿರುವ ಹಂಗನ್ನು ತೊರೆದು ಹೊರಡಲೇಬೇಕಾಗುತ್ತದೆ .ಯಾವುದೇ ಒಂದು ವಸ್ತು ಆಗಿರಬಹುದು ಕೆಲಸ ಆಗಿರಬಹುದು ಆ ಕೆಲಸ ಕಾರ್ಯಗಳು ನಮ್ಮಿಂದ ಪೂರ್ಣ ಗೊಂಡ ಬಳಿಕ ಆ ವಸ್ತುವಿನ ಮೇಲೆ ಇರುವ ಹಂಗಿಗೆ ನಾವು ಒಳಗಾಗಬೇಕಾಗಿಲ್ಲ .ಇದು ಸೃಷ್ಟಿಯ ನಿಯಮ.ಅದನ್ನೇ ಅಕ್ಕಾ ಈ ಒಂದು ವಚನದಲ್ಲಿ ಮೂರು ದೃಷ್ಟಾಂತಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ .
ಮೊದಲನೇ ದೃಷ್ಟಾಂತದಲ್ಲಿ
ಹಣ್ಣ ಮೆದ್ದ ಬಳಿಕ ಆ ಮರನ ಆರು ತರಿದರೇನು ?
ಹಣ್ಣು ಬಿಡುವುದು ಸಹಜ ಗುಣ .
ಹಣ್ಣು ಬಿಡುವ ಮರವನ್ನು ಚೆನ್ನಾಗಿ ಕಾಯುತ್ತೇವೆ .ಹಣ್ಣು ಬಿಟ್ಟ ಬಳಿಕವೂ ಚೆನ್ನಾಗಿ ಹೇಗೆ ಮಗುವನ್ನು ಜೋಪಾನ ಮಾಡುತ್ತೇವೆಯೋ ಹಾಗೆ ,
ಹಣ್ಣು ಬಿಟ್ಟ ನಂತರ ಅದರ ಹಣ್ಣು ಹರಿದು ತಿನ್ನುತ್ತೇವೆ .ಮತ್ತು ಹಣ್ಣನ್ನು ಮಾರುತ್ತೇವೆ..
ಕೊನೆಗೆ ಹಣ್ಣು ಬಿಡದೇ ಇರುವ ಮರದ ಕಡೆಗೆ ನಮಗೆ ಗಮನವೇ ಇರದಂತೆ ಆಗಿ ಬಿಡುತ್ತದೆ.ಆ ಮರವನ್ನು ಯಾರು ಕಡಿದರೇನು? ಅದರ ಎಲೆಗಳನ್ನು ಯಾರು ಹರಿದರೇನು? ಅದರ ಕೊಂಬೆಗಳನ್ನು ಯಾರು ಮುರಿದರೇನು ? ನಮಗೆ ಆದರೂ ಆಗಬಹುದು. ಹಣ್ಣು ತಿಂದ ಪ್ರಾಣಿ ಪಕ್ಷಿಗಳಿಗೆ ಆದರೂ ಆಗಿರಬಹುದು ಅದರ ಕಡೆಗೆ ಗಮನವೇ ಇಲ್ಲದ ಹಾಗೆ ಆಗಿ ಬಿಡುತ್ತದೆ.
ಹಣ್ಣು ತಿಂದ ಬಳಿಕ ಪ್ರಾಣಿ, ಪಕ್ಷಿಗಳಿಗೆ ಹಾಗೂ ಮನುಷ್ಯನಿಗೆ ಆ ಗಿಡದ ಹಂಗಿಗೆ ಒಳಗಾಗಬೇಕಾಗುವುದಿಲ್ಲ .
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿಕೊಂಡರೇನು?
ಹೆಣ್ಣಿಗೆ ಸಮಾಜದಲ್ಲಿ ಒಂದು ಗೌರವದ ಸ್ಥಾನ ಮಾನ ವಿದೆ.ಮನೆಯ ಸಂಸ್ಕೃತಿ ಸಂಸ್ಕಾರ ಆತಳಿಗೆ ರಕ್ತಗತವಾಗಿ ಬಂದಿರುತ್ತದೆ.
ಹೆಣ್ಣು ಬಾಲ್ಯದಲ್ಲಿ ತಂದೆ ತಾಯಿ ಗಳ ಆಶ್ರಯದಲ್ಲಿ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ,ಹಾಗೂ ಮುಪ್ಪಿನಲ್ಲಿ ತನ್ನ ಮಕ್ಕಳ ಆಶ್ರಯದಲ್ಲಿ ಇದ್ದು ಬದುಕು ಸಾಗಿಸುವ ಹೆಣ್ಣು. ಆಕೆಯನ್ನು ಸಮಾಜದಲ್ಲಿ ಬಾಳಿಸದೇ ನಿರಾಕರಿಸಿ ಮನೆಯಿಂದ ಕಳುಹಿಸಿದ ಮೇಲೆ ಅಂದರೆ
ತಂದೆ ತಾಯಿ,ಗಂಡ, ಹಾಗೂ ಮಕ್ಕಳ ಕುಟುಂಬವನ್ನು ಬಿಟ್ಟು ಹೋಗುವ ಹೆಣ್ಣು.ಯಾರನ್ನಾದರೂ ಕೂಡಿಕೊಂಡರೂ ಯಾರೂ ಚಿಂತಿಸರು .ಏಕೆಂದರೆ ಆಕೆ ತನ್ನ ಕುಟುಂಬದ ಸದಸ್ಯರೆಲ್ಲರನ್ನೂ ತೊರೆದು ಹೊರ ಹೊರಟು ಹೋದ ಹೆಣ್ಣಿನ ಬಗ್ಗೆ ಯಾರೂ ಕಳವಳಿಸಲಾರರು .ಯಾಕೆ ಯಾರನ್ನಾದರೂ ಕೂಡಿದರೇನು?
ಇನ್ನಾರನ್ನೋ ಮದುವೆ ಆದರೇನು ? ಬೇರೆಯವರ ಆಶ್ರಯದಲ್ಲಿ ಇದ್ದರೇನು ? ಹಿಂದೆ ಆ ಹೆಣ್ಣನ್ನು ಹೊರದಬ್ಬಿದ ಸಂಬಂಧಿಕರು ಆ ಹೆಣ್ಣಿನ ಬಗ್ಗೆ ಚಿಂತಿಸಬೇಕಾಗಿಲ್ಲ . ಯಾವುದೇ ಒಂದು ವಸ್ತುವನ್ನು ಇನ್ನೋಬ್ಬರಿಗೆ ಕೊಟ್ಟ ನಂತರ ಆ ವಸ್ತುವಿನ ಬಗ್ಗೆ ಚಿಂತಿಸಲಾರರು.
ಎನ್ನುವ ಅರ್ಥವನ್ನು ನಾನು ಇಲ್ಲಿ ಅರ್ಥಹಿಸಿರುವೆ .
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು ?
ಬಿತ್ತುವ ಹೊಲವನ್ನು ಮಾರಿದ ಬಳಿಕ ಆ ಹೊಲವನ್ನು ಯಾರು ಬಿತ್ತುವರು.ಯಾವ ಬೆಳೆಯನ್ನು ಬೆಳೆಯುವರು . ಎನ್ನುವ ಚಿಂತೆ ಇರಲಾರದು . ಏಕೆಂದರೆ ಆ ಹೊಲದ ಋಣ ತೀರಿದ ಬಳಿಕ, ಹೊಲವನ್ನು ಯಾರು ಬಿತ್ತಿದರೇನು? ಎನ್ನುವ ಅರ್ಥವನ್ನು ತಿಳಿಯಬಹುದಾಗಿದೆ .
ಚೆನ್ನಮಲ್ಲಿಕಾರ್ಜುನನನ್ನು ಅರಿಯದ ಕಾಯವ ನಾಯಿ ತಿಂದರೇನು ? ನೀರು ಕುಡಿದರೇನು ?
ಭಕ್ತಿ ಭಾವ ಇರುವ ಭಕ್ತರನ್ನು ಭಗವಂತ ಕಾಯುವನು.ಯಾರಲ್ಲಿ ಭಕ್ತಿ ಇಲ್ಲವೋ ಯಾರು ನನ್ನ ಚೆನ್ನಮಲ್ಲಿಕಾರ್ಜುನನನ್ನು ಅರಿಯರೋ, ಅಂಥಹ ವ್ಯಕ್ತಿಯ ಪೂಜೆಯು ವ್ಯರ್ಥವಾದುದು .ಆತನ ಕಾಯವನ್ನು ಕಚ್ಚಿ ತಿಂದರೇನು ? ನೀರು ಕುಡಿದರೇನು ? ಭಗವಂತನು ರಕ್ಷಿಸಲಾರನು ಎನ್ನುವರು ಅಕ್ಕ.
ಅಕ್ಕನಿಗೆ ಇರಬೇಕಾಗಿರುವುದು ಶುದ್ಧವಾದ ಭಕ್ತಿ.ಶುದ್ಧ ಇಲ್ಲದ ಭಕ್ತಿ ನಾಯಿ ಮುಟ್ಟಿದ ಮಡಿಕೆಯಂತೆ .ಸಮಾಜದಲ್ಲಿ ಅದಕ್ಕೆ ಒಳ್ಳೆಯ ಸ್ಥಾನ ಮಾನ ಸಿಗದು.ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಸಿಗಬೇಕಾದರೆ ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಭಕ್ತಿಯಿಂದ ಎರಗಿ ಮುಕ್ತಿ ಹೊಂದಿ ಎನ್ನುವ ಅರ್ಥವನ್ನು ಕಾಣಬಹುದು.
ಸಾವಿತ್ರಿ ಕಮಲಾಪೂರ

ಅಕ್ಕ ಮಹಾದೇವಿಯ ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ