ಕನಸುಗಳು ಜನ್ಮತಾಳುವ, ಲಕ್ಷಾಂತರ ಆಶಯಗಳಿಗೆ ಬದುಕಿನ ಬೆಳಕು ತೋರುವ ಮಾಯಾನಗರಿ. ಈ ಚೈತನ್ಯಮಯ ನಗರವು ಕೇವಲ ಉದ್ಯಮ, ಚಿತ್ರರಂಗ ಅಥವಾ ಹಣಕಾಸಿನ ಕೇಂದ್ರವಷ್ಟೇ ಅಲ್ಲ; ಆತಿಥ್ಯ ಮತ್ತು ರುಚಿಯ ಸಾಂಸ್ಕೃತಿಕ ತಾಣವೂ ಹೌದು. ಮುಂಜಾನೆಯ ಮೊದಲ ಕಿರಣ ಮೂಡುವ‌ ಮೊದಲಿನಿಂದ ಹಿಡಿದು  ಮಧ್ಯರಾತ್ರಿಯವರೆಗೆ (೨೨-೨೩ ತಾಸುಗಳೆಂದರೂ ತಪ್ಪಿಲ್ಲ) ಕಡುಬಡವರಿಂದ ಅತಿ ಶ್ರೀಮಂತರವರೆಗೆ ಎಲ್ಲರಿಗೂ ವಿಭಿನ್ನ ,ರುಚಿಕರ ಆಹಾರ ನೀಡುವ ಈ ನಗರದಲ್ಲಿ, ಹೋಟೆಲ್ ಉದ್ಯಮವು ಜೀವಾಳವಾಗಿ ನಿಂತಿದೆ. ಸಣ್ಣ ಚಹಾ ಸ್ಟಾಲ್‌ನಿಂದ ಹಿಡಿದು ವಿಶ್ವದರ್ಜೆಯ ಐಷಾರಾಮಿ ಪಂಚತಾರಾ ಹೋಟೆಲ್‌ಗಳವರೆಗೆ, ಈ ಉದ್ಯಮವು ಮುಂಬಯಿಯ ವೈವಿಧ್ಯಮಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ.
ಹೋಟೆಲ್‌ಗಳೆಂದರೆ ಕೇವಲ ಅಡುಗೆಯ ಸ್ಥಳವಲ್ಲ; ಅದು ಮಾನವೀಯತೆಯ ಸುಗಂಧ, ಆತಿಥ್ಯದ ಮುಗುಳ್ನಗೆ, ಉತ್ತಮ ಸೇವೆಯ ಪರಂಪರೆ, ಮತ್ತು ತೃಪ್ತಿಯ ಭಾವ.. ಈ ಉದ್ಯಮವು ನಿರಂತರ ಸೇವೆಯೊಂದಿಗೆ ಜೀವನದ ಏಳು-ಬೀಳುಗಳಲ್ಲಿ ಎಲ್ಲರಿಗೂ ಆತ್ಮೀಯ ಆಸರೆಯಾಗಿದೆ. ಮುಂಬಯಿಯ ಹೋಟೆಲ್ ಲೋಕವು ಪ್ರತಿ ಕ್ಷಣವನ್ನೂ ಸಂತೋಷದಿಂದ ತುಂಬಿ, ಆತ್ಮಸಂತೃಪ್ತಿಯ ಒಡನಾಟವನ್ನು ನೀಡುತ್ತದೆ..
ಇಂದಿನ ಅಂಕಣದಲ್ಲಿ, ಮುಂಬಯಿಯ ಹೋಟೆಲ್ ಉದ್ಯಮದ ಬೆಳವಣಿಗೆ, ವಿನೂತನ ಶೈಲಿ ಮತ್ತು ಅದರ ಹಿಂದಿರುವ ಶ್ರಮದ ಹಿರಿಮೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇನೆ.ಈ ಪಯಣದಲ್ಲಿ, ಪರಿಶ್ರಮ,ಆತಿಥ್ಯಗಳ ಅಪೂರ್ವಕಥೆಯ ಅನಾವರಣವಿದೆ..

ಮುಂಬಯಿ, ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ, ಹೋಟೆಲ್ ಉದ್ಯಮದಲ್ಲಿ ಕನ್ನಡಿಗರ ಅಸ್ತಿತ್ವ 90% ಪ್ರಾಬಲ್ಯವನ್ನು ಕಾಣುತ್ತದೆ. ಚಿಕ್ಕ ಪುಟ್ಟ ಕೈ ಗಾಡಿಗಳಿಂದ ಹಿಡಿದು,ಬೇಕರಿಗಳು ದೊಡ್ಡ ಐಷಾರಾಮಿ ಪಂಚತಾರಾ ಹೋಟೆಲ್‌ಗಳವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಪರಿಶ್ರಮಿ, ಪ್ರತಿಭಾವಂತರು ಈ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಚೆನ್ನಾಗಿ  ಪ್ರದರ್ಶಿಸಿದ್ದಾರೆ..ಇವರ ಆತಿಥ್ಯ ಸಂಸ್ಕೃತಿಯು ಈ ಯಶಸ್ಸಿನ ಮೂಲವಾಗಿದೆ..ಎಷ್ಟೋ ದಶಕಗಳಿಂದ ಉಡುಪಿ, ಮಂಗಳೂರಿನ ಹೋಟೆಲಿಗರು ದೋಸೆ, ಇಡ್ಲಿಯಂತಹ ಖಾದ್ಯಗಳ ಮೂಲಕ “ಉಡುಪಿ ಹೋಟೆಲ್” ಬ್ರಾಂಡ್‌ನ್ನು ಅತ್ಯಂತ ಜನಪ್ರಿಯಗೊಳಿಸಿದ್ದಾರೆ, ಗ್ರಾಹಕರಿಗೆ ರುಚಿ, ಶುಚಿತ್ವ ಮತ್ತು ಆತ್ಮೀಯ ಸೇವೆಯನ್ನು ನೀಡಿದ್ದಾರೆ.ಭಾರತದ ಎಲ್ಲ ರಾಜ್ಯದ ಜನರಿಗೂ ಈ ಉಡುಪಿ ಹೋಟೆಲ್ ಗಳು ಅಚ್ಚುಮೆಚ್ಚಿನ ತಾಣಗಳಾಗಿವೆ..

ಉಡುಪಿ, ಮಂಗಳೂರು,ಕುಂದಾಪುರದ ಶೆಟ್ಟಿ ಜನಾಂಗದವರ ವ್ಯಾಪಾರ ಕೌಶಲ್ಯವು ಈ ಉದ್ಯಮಕ್ಕೆ ಶಕ್ತಿಯುತ ಆಯಾಮವನ್ನು ಒದಗಿಸಿದೆ. ಉದ್ಯಮಶೀಲತೆ, ಗ್ರಾಹಕ ಕೇಂದ್ರಿತ ದೃಷ್ಟಿಕೋನ ಮತ್ತು ಗುಣಮಟ್ಟದ ಬದ್ಧತೆಯೊಂದಿಗೆ, ಶೆಟ್ಟಿಯವರು ಸಣ್ಣ ಉಪಾಹಾರಗೃಹಗಳಿಂದ ದೊಡ್ಡ ರೆಸ್ಟೋರೆಂಟ್ ಶೃಂಖಲೆಗಳನ್ನು ಸ್ಥಾಪಿಸಿ, ಜಾಗತಿಕ ಗುರುತನ್ನು ಗಳಿಸಿದ್ದಾರೆ. ಕನ್ನಡಿಗರ ಶಿಸ್ತು, ಸಮರ್ಪಣೆ ಮತ್ತು ಸಮುದಾಯದ ಬೆಂಬಲವು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ನೆರವಾಗಿದೆ. ಈ ಕಾರ್ಮಿಕರು ಕರ್ನಾಟಕದ ಗ್ರಾಮೀಣ ಆರ್ಥಿಕತೆಗೆ ಆರ್ಥಿಕ ಸಹಾಯವನ್ನು ಕಳುಹಿಸಿ, ರಾಜ್ಯದ ಜೀವನಮಟ್ಟವನ್ನು ಉನ್ನತಗೊಳಿಸಿದ್ದಾರೆ.

ಕನ್ನಡಿಗರ ಈ ಅದ್ಭುತ ಸಾಧನೆಯು ಉಡುಪಿ,ಮಂಗಳೂರು,ಪ್ರಾಂತ್ಯದ ಆತಿಥ್ಯ ಸಂಸ್ಕೃತಿಗೆ ಸಾಕ್ಷಿಯಾಗಿದೆ.
ಶೆಟ್ಟಿ ಜನಾಂಗದವರ ವ್ಯಾಪಾರ ಚಾತುರ್ಯದೊಂದಿಗೆ, ಈ ಕೊಡುಗೆ ಭಾರತದ ಆರ್ಥಿಕತೆಗೂ ಅಮೂಲ್ಯವಾಗಿದೆ. ಇಂದಿನ ದಿನಗಳಲ್ಲಿ, ಕನ್ನಡಿಗರು ಈ ಪರಂಪರೆಯನ್ನು ಜಾಗತಿಕ ಗುಣಮಟ್ಟದವರೆಗೆ ಏರಿಸಿ ಮುಂಚೂಣಿಯಲ್ಲಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಒಂದು ಬಾಣಲೆ, ಎರಡು ಸೌಟು ಹಿಡಿದು ತಮ್ಮ ಊರಿನಿಂದ ಹೊರಟ ಶೆಟ್ಟಿ ಮತ್ತು ಭಟ್ಟರು ತಮ್ಮ ಕೈಚಳಕದಿಂದ, ರುಚಿಯ ರಾಸಾಯನಿಕ ಹೊಂದಾಣಿಕೆಯಿಂದ, ತಮ್ಮ ಆತಿಥ್ಯ ಕಲೆಯಿಂದ ವಿಶ್ವದ ಯಾವ ಮೂಲೆಯಲ್ಲಾದರೂ ಜಯವನ್ನು ಗಳಿಸ ಬಲ್ಲರು ಎಂಬ ಮಾತು ಶತಶಃ ಸತ್ಯ. ಭಾಷೆ, ಭೂಮಿ,‌ಅಡುಗೆ ಪದಾರ್ಥಗಳು, ಬದಲಾದರೂ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.
ಇವರು ತಯಾರಿಸುವ ವಿವಿಧ‌ ಪ್ರಕಾರದ ಇಡ್ಲಿ, ದೋಸೆಗಳಿಗೆ ಮಾರು ಹೋಗದವರು ಯಾರೂ‌ ಇರಲಿಕ್ಕಿಲ್ಲ.
ತಮ್ಮ ಹುಟ್ಟೂರಿನ ಅಡುಗೆಯ ಸೊಗಡಿನೊಂದಿಗೆ ದೇಶದ
ವಿಭಿನ್ನ ಪ್ರಾಂತ್ಯಗಳ ವಿಶೇಷ ಅಡುಗೆಗಳಲ್ಲೂ ಪರಿಣಿತಿ ‌ಪಡೆದಿರುವುದು ಇವರ ವಿಶೇಷತೆಯಾಗಿದೆ..ಮುಂಬಯಿನ ಸುಪ್ರಸಿದ್ಧ ಬಟಾಟ ವಡ, ಭೇಲ್ ಪುರಿ,ಪಾನಿಪುರಿ ಹೋಟೆಲ್ ಗಳು ನಮ್ಮ ಕನ್ನಡಿಗರವೇ ಆಗಿವೆ ಎನ್ನಲು‌ ನನಗೆ ಹೆಮ್ಮೆಯಾಗುತ್ತದೆ..

ನಮ್ಮ ದಕ್ಷಿಣದ ರಾಜಶೇಖರ ರೆಡ್ಡಿ ಎಂಬ ಭಾವುಕ ವ್ಯಕ್ತಿಯೊಬ್ಬರು ವಿಶೇಷ ಚೇತನರ ಜೀವನೋಪಾಯಕ್ಕಾಗಿ ವೃತ್ತಿಯನ್ನು ನೀಡಿ ಅವರ ಉತ್ಸಾಹ ಆತ್ಮವಿಶ್ವಾಸಗಳನ್ನು ಹೆಚ್ಚಿಸಲಿಕ್ಕಾಗಿಯೇ ಆರಂಭಿಸಿದ
ಈ ಹೋಟೆಲ್ ಇಂದು ಮುಂಬಯಿ ಮಹಾನಗರದ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾಗಿದೆ..ಮೂಗರು ಮತ್ತು ಶ್ರವಣ ದೋಷವಿರುವಂತಹ  ಯುವಕರಿಗಾಗಿಯೇ ಈ ಹೋಟೆಲನ್ನು ಆರಂಭಿಸಿದ ಶ್ರೀಯುತ ರೆಡ್ಡಿಯವರಿಗೆ ಶತಶತ ನಮನಗಳನ್ನು ಅರ್ಪಿಸಬೇಕು..

ಅಂಧೇರಿಯ ಹೃದಯಭಾಗದಲ್ಲಿರುವ ‘ಮಿರ್ಚಿ & ಮೈಮ್’ ಒಂದು ಸಾಮಾನ್ಯ ಹೋಟೆಲ್ ಅಲ್ಲ. ಇದು ನಿಜವಾದ ಮಾನವೀಯತೆಯ ಭಾವ ಸ್ಪಂದನೆ ನೀಡುವ ವಿಶಿಷ್ಟ ಆತಿಥ್ಯಕೇಂದ್ರ. ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಯೂ ಶ್ರವಣ ಹಾಗೂ ಮಾತಿನ ತೊಂದರೆಗಳನ್ನು ಹೊಂದಿದ್ದಾರೆ. ಆದರೆ, ಅವರ ನಗುಮುಖದ ಸೇವೆ, ಶ್ರದ್ಧೆಯ ಆತಿಥ್ಯ ಮತ್ತು ಮೌನದ ಸಂವಹನ ಕಲೆ ಗ್ರಾಹಕರ ಮನದಾಳವನ್ನು ಸ್ಪರ್ಶಿಸಿ ಮರೆಯಲಾಗದ ಅನುಭವವನ್ನು ನೀಡುತ್ತದೆ..

ಮೆನು ಕಾರ್ಡ್‌ನಲ್ಲಿರುವ ತಿನಿಸುಗಳ ಪಕ್ಕದಲ್ಲಿ ಸೈನ್ ಲ್ಯಾಂಗ್ವೇಜ್‌ನಲ್ಲಿ ತೋರಿಸಬಹುದಾದ ಕೈ ಚಿಹ್ನೆಗಳಿರುತ್ತವೆ. ನೀವು ಬಯಸುವ ತಿನಿಸನ್ನು ಆಯ್ಕೆಮಾಡಿ, ಆ ಚಿಹ್ನೆಗಳನ್ನು ಬಳಸಿ ಆರ್ಡರ್ ಮಾಡಬಹುದು. ಇದು ಒಂದೆಡೆ ವಿಶಿಷ್ಟ ಅನುಭವವನ್ನು ನೀಡುವುದಾದರೆ, ಮತ್ತೊಂದೆಡೆ ನಿಜವಾದ ಸಂವೇದನೆಯನ್ನೂ ನೀಡುತ್ತದೆ..ಚಿಕ್ಕ ದೊಡ್ಡ ಯಾವುದೇ ರೀತಿಯ ಆರ್ಡರ್ ಗಳನ್ನು ಮುಗುಳ್ನಗೆಯಿಂದ ಸ್ವೀಕರಿಸಿ ನಗುನಗುತ್ತಲೇ ಆತಿಥ್ಯ ನೀಡುವ ಈ ವಿಶೇಷ ಚೇತನ ಸಿಬ್ಬಂದಿಯನ್ನು ಅದೆಷ್ಟು ಶ್ಲಾಘಿಸಿದರೂ‌ ಕಡಿಮೆಯೇ ಎನ್ನಬಹುದು..

ಇಲ್ಲಿ “ಮಿರ್ಚಿ” ಅನ್ನುವುದು ರುಚಿಕರವಾದ ಖಾರದ ಅಡುಗೆಯ ಪ್ರತೀಕ..”ಮೈಮ್” ಎಂದರೆ ಕೈಸನ್ನೆ, ಮುಖದ ಹಾವಭಾವಗಳ ಮೂಲಕ ಭಾವನೆ ವ್ಯಕ್ತಪಡಿಸುವ ಕಲೆ.. ಈ ಎರಡೂ ಸೇರಿ ರೂಪುಗೊಂಡಿರುವ ‘ಮಿರ್ಚಿ & ಮೈಮ್’‌ ಹೋಟೆಲ್ ನಲ್ಲಿ  ಊಟ,ತಿಂಡಿಗಳು ಮಾತ್ರವಲ್ಲದೆ, ಸ್ಪೂರ್ತಿ ಪ್ರೇರಣೆಗಳ ವಿಶೇಷ, ವಿಶಿಷ್ಟ ಅನುಭವಗಳೂ ಸಿಗುತ್ತವೆ..

ಇಲ್ಲಿ ಲಭ್ಯವಿರುವ ತಿನಿಸುಗಳು ಭಾರತದ ವಿವಿಧ ಪ್ರಾಂತ್ಯಗಳ ರುಚಿಯನ್ನು ಪ್ರತಿಬಿಂಬಿಸುತ್ತವೆ. ಬೇರೆ ಹೋಟೆಲ್ ಗಳಲ್ಲಿ ಸಿಗಲಾರದ ವಿಭಿನ್ನ, ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳೊಂದಿಗೆ ಗ್ರಾಹಕರು ಒಂದು ಪಾಕಶೈಲಿಯ ಪಯಣವನ್ನೇ ಅನುಭವಿಸಲು ಸಾಧ್ಯವಿದೆ..

ಇಲ್ಲಿನ ಸಿಬ್ಬಂದಿಗೆ ಈ ಉದ್ಯೋಗ ಸ್ವಾಭಿಮಾನ ಮತ್ತು ಗೌರವವನ್ನು ತಂದಿದೆ. ಮೌನ‌,ಮುಗುಳ್ನಗೆಗಳೇ ಅವರ ಭಾಷೆಯಾಗಿದ್ದು, ಗ್ರಾಹಕರ ಆದರಾತಿಥ್ಯವೇ ಅವರ ಗುರಿ ಮತ್ತು ಗುರುತಾಗಿದೆ..ಅವರ ಮುಗ್ಧ ನಗುವಿನ ಹಿಂದೆ ಇರುವ ಆತ್ಮೀಯತೆಯ ಭಾವವನ್ನು ಗ್ರಾಹಕರು ಸ್ಪಷ್ಟವಾಗಿ ಅನುಭವಿಸಬಹುದಾಗಿದೆ..

‘ಮಿರ್ಚಿ & ಮೈಮ್’ ಅನ್ನುವುದು ಕೇವಲ ಊಟ ಮಾಡುವ ಸ್ಥಳವಲ್ಲ. ಅದು ಒಂದು ಜೀವನದ ಉತ್ತಮವಾದ ಪಾಠವನ್ನು ಕಲಿಸುವ ಶಾಲೆಯಾಗಿದೆ. ಮಾನವೀಯತೆಯ, ಸಮಾನತೆಯ, ಆತ್ಮವಿಶ್ವಾಸದ ಪಾಠಗಳನ್ನಿಲ್ಲಿ ನಾವು ನೋಡಬಹುದು.. ಒಂದು ಬಾರಿ ಇಲ್ಲಿಗೆ ಭೇಟಿ ನೀಡಿದರೆ, ಮೌನದಲ್ಲೂ ನೂರು ಮಾತುಗಳನಾಡುವ ಈ ಸುಂದರ ಜಗತ್ತು ನಮಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯಬಲ್ಲದು..

ಮಧು ವಸ್ತ್ರದ


Leave a Reply

Back To Top