ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ

ಸಂತೆಯೊಳಗೆ ನಿಂತ ಕಬೀರ:

ಅಕ್ಷರ ಸಂತ ಹಾಜಬ್ಬ

  ಒಬ್ಬ ಮನುಷ್ಯ ಸಮಾಜಮುಖಿಯಾಗಿ ಚಿಂತಿಸಲು ಒಂದು ಕಾರಣ, ಘಟನೆ ಆತನೊಳಗೆ ಅಡಗಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶಿಕ್ಷಣವಂತನಾಗಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಿಕ್ಷಣಕ್ಕಾಗಿಯೇ ದುಡಿಯುತ್ತ ಅದರ ಸೇವೆಯಲ್ಲಿಯೇ ನಿರತರಾಗಿರುವ ಹರೇಕಳ ಹಾಜಬ್ಬರು ಸರ್ಕಾರಕ್ಕಲ್ಲದೆ ಜನ ಸಾಮಾನ್ಯರಿಗೂ ಮಾದರಿ.

ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದವರಾದ ಹಾಜಬ್ಬರು ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದವರು. ಬೀದಿಬದಿಯಲ್ಲಿ ಬುಟ್ಟಿಯೊತ್ತು ಕಿತ್ತಲೆ ಹಣ್ಣನ್ನು ಮಾರಿ ಅದರಿಂದಲೇ ತಮ್ಮ ಕುಟುಂಬದ ಜೀವನ ನಡೆಸುವ ಕಾಯಕ ಯೋಗಿ. ಔಪಚಾರಿಕವಾದ ಶಿಕ್ಷಣವನ್ನೆ ಹೊಂದಿರದ ಇವರು ತುಳು ಮತ್ತು ಬ್ಯಾರಿ ಭಾಷೆಗಳ ಬಗ್ಗೆ ಮಾತ್ರ ತಿಳುವಳಿಕೆಯುಳ್ಳವರು. ಹೀಗೆ ಒಂದು ದಿನ ಕಿತ್ತಲೆ ಮಾರುತ್ತ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಮತ್ತೊಂದು ಕೈಯಲ್ಲಿ ಕಿತ್ತಲೇ ಹಿಡಿದು ಮಾರುತ್ತ ಸಾಗುವಾಗ 68 ವರ್ಷದ ವೃದ್ಧ ಇಂಗ್ಲೀಷ್ ದಂಪತಿಗಳು ಕಿತ್ತಲೇ ಹಣ್ಣನ್ನು ಕೊಂಡುಕೊಳ್ಳಲು “How Much” ಎಂದು ಕೇಳುತ್ತಾರೆ. ವರ್ಷಾನುಗಟ್ಟಲೆ ವ್ಯಾಪಾರ ಮಾಡುತಿದ್ದರು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಮೂಲಕಾರಣ ನಾನು ಶಿಕ್ಷಣದಿಂದ ವಂಚಿತನಾಗಿರುವುದು ಎಂಬುದನ್ನು ಮನಗಾಣುತ್ತಾರೆ. ಈ ಘಟನೆಯೆ ಅವರ ಶಿಕ್ಷಣಕ್ರಾಂತಿಯ ತಿರುವು.

ಹಾಜಬ್ಬರ ಹರೇಕಳ ಗ್ರಾಮದಲ್ಲಿ ಶಾಲೆಯೆ ಇರಲಿಲ್ಲ. ಈ ಕಾರಣಕ್ಕಾಗಿಯೆ ಅವರು ಶಿಕ್ಷಣವನ್ನೆ ಕಾಣಲಿಲ್ಲ. ಅಲ್ಲದೆ ಹಾಜಬ್ಬರು ಆ ಊರಿಗೆ ಶಾಲೆ ತರುವ ತನಕ ಅಲ್ಲಿನ ಮಕ್ಕಳು ಶಿಕ್ಷಣವಿಲ್ಲದೆ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದರು. ನನಗಂತೂ ಶಿಕ್ಷಣ ಸಿಗಲಿಲ್ಲ, ಆದರೆ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆಂದು, ಆ ಕಡುಬಡತನ ಜೊತೆಗೆ ಕಿತ್ತಲೆ ಹಣ್ಣು ವ್ಯಾಪಾರದ ನಡುವೆ ಸರ್ಕಾರಿ ಕಛೇರಿ, ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಅಲೆದಾಡಿದರು. ಅವರ ಅಲೆದಾಟದ ಪರಿಶ್ರಮಕ್ಕೆ 17 ಜೂನ್ 2000 ನೇ ಇಸವಿಯಲ್ಲಿ ಹರೇಕಳಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು.  ಸರ್ಕಾರ ಶಾಲೆಯನ್ನೆನೊ ಮಂಜೂರು ಮಾಡಿದೆ, ಆದರೆ ಮಕ್ಕಳಿಗೆ ಪಾಠ ಮಾಡಲು ಕಟ್ಟಡವಿಲ್ಲ. ಹೀಗಿರುವಾಗ ಹಾಜಬ್ಬರು ತಾವು ಕಿತ್ತಲೆ ಹಣ್ಣು ಮಾರಿ ಉಳಿತಾಯ ಮಾಡಿದ್ದ 25.000 ರೂ ಜೊತೆಗೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ  ಮಕ್ಕಳಿಗೆ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಇದೀಗ ಆ ಶಾಲೆ ಪ್ರಾಥಮಿಕದೊಂದಿಗೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಇಂದಿಗೂ ಸಹ ತನಗೆ ಬರುವ ಲಕ್ಷಾಂತರ ರೂ ಪ್ರಶಸ್ತಿ ಮೊತ್ತವನ್ನು ತಮಗಾಗಿ ಬಳಸದೆ ಶಾಲೆ ಅಭಿವೃದ್ಧಿಗಾಗಿಯೇ ಬಳಸುತ್ತಾರೆ. ವಿವಿಧ ದಾನಿಗಳಿಂದ ಈ ವರೆವಿಗೂ 70 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಅದನ್ನು ಶಾಲೆಯ ಅಭಿವೃದ್ಧಿಗೆ ಬಳಸಿ ಯಶಸ್ವಿಯಾಗಿ ಅಕ್ಷರ ಸಂತನಾಗಿ ಜನಮಾಸದಲ್ಲಿ ನೆಲೆಸಿದ್ದಾರೆ.

ಅಕ್ಷರ ಸಂತ ಹಾಜಬ್ಬರ ಕುರಿತು ಇರ್ಸತ್ ಪಜೀರ್ ರವರು ‘ಹರಕೇಳ ಹಾಜಬ್ಬ ಜೀವನ ಚರಿತ್ರೆ’ ಎಂಬ ಪುಸ್ತಕವನ್ನು ಬರೆದರು. ಅನಂತರ ಹಾಬಜ್ಜರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯಕ್ರಮದಲ್ಲಿ ಸೇರಿಸಿತು. ಇವರ ಸಮಾಜ ಸೇವೆಯನ್ನು ಮೆಚ್ಚಿ ಬ್ರಿಟಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) 2012 ರಲ್ಲಿ ‘ಅಕ್ಷರವಿಲ್ಲದ ಹಣ್ಣು ಮಾರಾಟಗಾರನ ಭಾರತೀಯ ಶಿಕ್ಷಣ ಕನಸು’ ಎನ್ನುವ ಶೀರ್ಷಿಕೆಯಡಿ ಲೇಖನ ಪ್ರಕಟಿಸಿತು.  CNN, IBN ಮತ್ತು Relaince Foundation ನವರು ‘The Real Hero’ ಪ್ರಶಸ್ತಿ ನೀಡಿದರು.  ಇದೀಗ ಅವರಿಗೆ ಭಾರತೀಯ ಸರ್ಕಾರ ಕೊಡಮಾಡುವ 2020 ರ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಭಾಜನರಾಗಿದ್ದಾರೆ. ಪ್ರಶಸ್ತಿ ತೆಗೆದುಕೊಳ್ಳುವಾಗಲೂ ರಾಷ್ಟ್ರಪತಿ ಭವನಕ್ಕೆ ಬರಿಗಾಲಿನಲ್ಲಿಯೇ ತೆರಳಿ ಸ್ವೀಕರಿಸಿದ ಇವರು ಶಿಕ್ಷಣ ಕ್ರಾಂತಿಯ ಕಣ್ಣಂತೆಯೆ. 

ತಾನು ಒಂದಕ್ಷರವನ್ನು ಕಲಿಯದೆ ಈ ತಲೆಮಾರಿನ ಮಕ್ಕಳಿಗೆ ಅರಿವಿನ ದೀಪವನ್ನು ಬೆಳಗಿಸುತ್ತಲೆ, ತಾನು ಮಾತ್ರ ಎಡಗೈಯಲ್ಲಿ ಬುಟ್ಟಿಯೊತ್ತು ಬಲಗೈಯಲ್ಲಿ ಕಿತ್ತಲೆ ಹಣ್ಣಿಡಿದು ಶಾಲೆ ಮತ್ತು ಮಕ್ಕಳ ಓದಿನ ಬಗೆಯೆ ಧ್ಯಾನಿಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬರು ಈ ಕಾಲಮಾನದಲ್ಲಿ ಸಂತೆಯೊಳಗೆ ನಿಂತ ಕಬೀರ.


ಹಾರೋಹಳ್ಳಿ ರವೀಂದ್ರ

Leave a Reply

Back To Top