ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

ಲೇಖನ

ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

ಹಾರೋಹಳ್ಳಿ ರವೀಂದ್ರ

Bhimrao Ramji Ambedkar | Columbia Global Centers

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾಕಾರ ಹಾಗೂ ಮಹಾನ್ ಮಾನವತಾವಾದಿ. ಹೋರಾಟ ಮತ್ತು ಚಿಂತನೆಗಳ ಮೂಲಕ ದೇಶದ ನಾಯಕರಾಗಿದ್ದಲ್ಲದೆ ಜಗತ್ತಿನ ಗಮನ ಸೆಳೆದವರು. ಆದರೆ ಅಂಬೇಡ್ಕರ್ ಅವರಿಗಿಂತಲೂ ಮೂರು ದಶಕಗಳ ಪೂರ್ವದಲ್ಲಿಯೇ ಕೇರಳದಲ್ಲಿ ಅಯ್ಯನ್ ಕಾಳಿ ಎಂಬುವವರು ನಿಮ್ನ ವರ್ಗದ ಶಿಕ್ಷಣ, ಸಮಾನತೆ ಮತ್ತು ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೆ ಮಾಡಿದ್ದರು ಎಂಬುದು ನಿಜಕ್ಕೂ ರೋಚಕವಾದದ್ದು.

 ಅಯ್ಯನ್ ಕಾಳಿ 28 ಆಗಸ್ಟ್ 1863 ರಂದು ಕೇರಳದ ತಿರುವನಂತಪುರದಿಂದ 15 ಕಿ.ಮೀ ದೂರದಲ್ಲಿರುವ ವೆಂಗನೂರಿನಲ್ಲಿ ಹೊಲೆಯ (ಅಸ್ಪೃಶ್ಯ) ಜನಾಂಗದ ವ್ಯಕ್ತಿಯಾಗಿ ಜನಿಸಿದವರು. ತೀರಾ ಬಡತನದಲ್ಲಿದ್ದ ಇವರ ತಂದೆ ಪ್ರಬಲ ಭೂ ಮಾಲೀಕ ನಾಯರ್(ಬಿಲ್ಲವ) ಜನಾಂಗದ ಪರಮೇಶ್ವರನ್ ಪಿಳ್ಳೆ ಎಂಬುವವರ ಬಳಿ ಜೀತ ಮಾಡುತ್ತಿದ್ದರು. ಪರಮೆಶ್ವರನ್ ಪಿಳ್ಳೆ ಮಾನವೀಯ ಮನುಷ್ಯನಾಗಿರುವ ಕಾರಣ ಇವರ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಕಂಡು ಎಂಟು ಎಕರೆ ಕಾಡು ಪ್ರದೇಶವನ್ನು ಕಡಿದು ಸಾಗುವಳಿ ಜಮೀನಾಗಿ ಮಾಡಿ ಅದನ್ನು ಅಯ್ಯನ್ ಕಾಳಿ ಕುಟುಂಬಕ್ಕೆ ನೀಡಿದರು. ದಲಿತರಿಗೆ ಎಂಟು ಎಕರೆ ಜಮೀನು ಕೊಟ್ಟ ಪರಮೇಶ್ವರನ್ ಅವರ ವಿರುದ್ಧ ನಾಯರ್ ಸಮುದಾಯ ತಕರಾರು ತೆಗೆದು ಗಲಾಟೆ ಮಾಡಿತು. ಇದಕ್ಕೆಲ್ಲಾ ಅಂಜದೆ ಕುಟುಂಬಕ್ಕೆ ಜಮೀನನ್ನು ಹಸ್ತಾಂತರಿಸಿದರು. ಭೂಮಿಯನ್ನು ಸ್ವಂತಕ್ಕೆ ಕನಸಲ್ಲು ಊಹಿಸಲಾಗದ ಕಾಲದಲ್ಲಿ ಭೂಮಾಲೀಕತ್ವ ಸಿಕ್ಕಿದ್ದು ಕೂಡ ಒಂದು ಚಾರಿತ್ರಿಕ ದಾಖಲೆ.

ಕೇರಳದಲ್ಲಿ ಅದೊಂದು ಘನಘೋರ ಕಾಲ. ಅಯ್ಯನ್ ಕಾಳಿಗೆ ಆಗಿನ್ನು ಐದು ವರ್ಷ. ಓದಬೇಕೆನ್ನು ತುಡಿತ. ಆದರೆ ಅಲ್ಲಿ ದಲಿತರ್ಯಾರು ವಿದ್ಯೆ ಕಲಿಯುವಾಗಿಲ್ಲ. ಇದೊಂದು ಸವರ್ಣೀಯರಕಟ್ಟಪ್ಪಣೆ. ದಲಿತರೇನಿದ್ದರು ಮೇಲ್ಜಾತಿ ಮನೆಗಳಲ್ಲಿ ಜೀತ ಮಾಡುವುದನ್ನು ಬಿಟ್ಟು ಮತ್ಯಾವ ಉದ್ಯೋಗವನ್ನಾಗಲಿ, ಶಿಕ್ಷಣವನ್ನಾಗಲಿ ಊಹಿಸುವ ಸ್ವಾತಂತ್ರ್ಯವೂ ಇರಲಿಲ್ಲ. ದಲಿತರು ಅಲ್ಲಿ ಮಾರಾಟದ ವಸ್ತುವಾಗಿದ್ದರು. ಅಮೇರಿಕಾದವರು ಕಪ್ಪು ಜನರನ್ನು ಮಾರುಕಟ್ಟೆಯಲ್ಲಿ ಕೊಂಡು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರಲ್ಲ ಅಂತಹ ಒಂದು ಸ್ಥಿತಿ ಅಲ್ಲಿತ್ತು. ಕೇರಳಾದ ಕೊಟ್ಟಾಯಂ, ಅಂಬಾಲಪಝ, ಕಾಯಮ್ ಕುಲಮ್ ಮುಂತಾದ ಸ್ಥಳಗಳಲ್ಲಿ ದಲಿತರನ್ನು ತಂದು ಮಾರಾಟ ಮಾಡುತ್ತಿದ್ದರು. ಇಲ್ಲಿ ಪ್ರಬಲ ಭೂ ಮಾಲೀಕರು ಅಲ್ಲಿಬಂದು ಜೀತಕ್ಕಾಗಿ ಕೊಂಡುಕೊಳ್ಳುತ್ತಿದ್ದರು. ಈ ಮುಕ್ತ ಮಾರುಕಟೆ ವ್ಯವಸ್ಥೆಗೆ ಯೋರೋಪ್ ನ ಹಲವು ದೇಶಗಳು ಬಂದು ದಲಿತರನ್ನು ಕೊಂಡುಕೊಳ್ಳುವ ಪದ್ಧತಿ ಇತ್ತು. ಇಂತಹ ಕೆಟ್ಟ ಸಂದರ್ಭದಲ್ಲಿ ಅಯ್ಯನ್ ಕಾಳಿಯ ಶಿಕ್ಷಣ ಕನಸಿನ ಮಾತಾಗಿತ್ತು.

ಅಯ್ಯನ್ ಕಾಳಿಯವರು ಜಾತಿ ಕಾರಣಕ್ಕೆ ಶಿಕ್ಷಣ ಕಳೆದುಕೊಂಡಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಾರ್ವಜನಿಕ ತಾರತಮ್ಯ, ಇತರರೊಡನೆ ಆಟ ಅಡುವಾಗಿಲ್ಲ, ಸೇರುವಾಗಿಲ್ಲ. ಒಂದು ವೇಳೆ ಸೇರಿದರೆ ಅದಕ್ಕೆ ದಂಡ ವಿಧಿಸುವ ಸವರ್ಣೀಯ ಮನಸ್ಸು ಇವೆಲ್ಲವೂ ಮನಸಿನಲ್ಲಿ ಆಳವಗಿ ಹೆಪ್ಪುಗಟ್ಟಿದ್ದವು. ಇಂತಹ ಸಮಸ್ಯೆಗಳೆ ಅಯ್ಯನ್ ಕಾಳಿಯನ್ನು ಹೋರಾಟಕ್ಕೆ ಪ್ರೇರೇಪಿಸಿತು. ಅಯ್ಯನ್ ಕಾಳಿಯವರ ಮೊಟ್ಟ ಮೊದಲ ಹೋರಾಟ ವಿಲ್ಲುವಂಡಿ ಯಾತ್ರ (ಎತ್ತಿನ ಗಾಡಿ ಪ್ರಯಾಣ) ಸವರ್ಣೀಯ ಮನಸ್ಸುಗಳು ದಲಿತರು ಕೆಲ ರಸ್ತೆಗಳಲ್ಲಿ ಓಡಾಡಬಾರದೆಂದು ನಿಷೇಧ ಮಾಡಿದ್ದರು. 1893 ರಲ್ಲಿ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ರಸ್ತೆಯಲ್ಲೆಲ್ಲಾ ದಲಿತರು ಸಂಚರಿಸುವ ಮೂಲಕ ದೊಡ್ಡ ಆಂದೋಲನವನ್ನೆ ಸೃಷ್ಟಿ ಮಾಡಿದರು. ಇದರಿಂದ ಸವರ್ಣೀಯರು ಮತ್ತು ದಲಿತರೊಡನೆ ಹಿಂಸಾತ್ಮಕ ಕೃತ್ಯವೂ ನಡೆಯಿತು. ಆದರೂ ಅಯ್ಯನ್ ಕಾಳಿ ಗಟ್ಟಿಯಾಗಿ ನಿಂತು ಸವರ್ಣೀಯರನ್ನು ಎದುರಿಸಿ ರಸ್ತೆಯಲ್ಲಿ ಎಲ್ಲರೂ ಓಡಾಡುವಂತೆ ಮುಕ್ತಗೊಳಿಸಿದರು. ಈ ಚಳವಳಿಯ ನಂತರ ಅಯ್ಯನ್ ಕಾಳಿ ಕೇರಳಾದಲ್ಲಿ ದಲಿತ ನಾಯಕನಾಗಿ ಹೊರಹೊಮ್ಮಿದರು.

ವಿಲ್ಲುವಂಡಿ ಯಾತ್ರೆಯ ನಂತರ ನಡೆದಿದ್ದು ಚಾಲಿಯಾರ್ ದೊಂಬಿ. ಮಲಬಾರ್ ನಲ್ಲಿ ದಲಿತ ಹೆಣ್ಣು ಮಕ್ಕಳು ಎದೆಬಾಗ ಬಟ್ಟೆ ಧರಿಸುವಂತಿರಲಿಲ್ಲ. ಆದರೆ 1788 ರಲ್ಲಿ ಟಿಪ್ಪು ಸುಲ್ತಾನ್ ಮಹಿಳೆಯರು  ಎದೆಬಾಗ ಮುಚ್ಚಬೇಕು ಎಂದು ರಾಜಾಜ್ಞೆ ಹೊರಡಿಸಿದರು. ಆದರೆ ಟ್ರಾವಂಕೂರಿನ ರಾಣಿ ಗೌರಿಪಾರ್ವತಿ ಇದಕ್ಕೆ ವಿರುದ್ಧವಾಗಿದ್ದಳು. ಅಲ್ಲಿ ದಲಿತ ಮಹಿಳೆಯರಷ್ಟೆ ಅಲ್ಲದೆ ಬ್ರಾಹ್ಮಣ, ಬಿಲ್ಲವ ಹೀಗೆ ಸವರ್ಣೀಯ ಹೆಣ್ಣು ಮಕ್ಕಳು ಕೂಡ ಎದೆಯ ಭಾಗವನ್ನು ಮುಚ್ಚುವ ಆಗಿರಲಿಲ್ಲ. ಆ ಸಂದರ್ಭದಲ್ಲಿ ಬಿಲ್ಲವ ಜಾತಿಗೆ ಸೇರಿದ ಹೆಣ್ಣು ಮಗಳು ಯೂರೋಪ್ ನಿಂದ ಬಂದಿದ್ದಳು. ಜೊತೆಗೆ ಆಕೆ ರವಿಕೆ ಧರಿಸಿದ್ದಳು. ಈ ವಿಷಯ ತಿಳಿದ ರಾಣಿ ಆಕೆಯನ್ನು ಕರೆಯಿಸಿ ರಾಜಭಟರಿಂದ ಆಕೆಯ ಸ್ತನಗಳನ್ನು ಕೊಚ್ಚಿ ಹಾಕಿಸಿದ್ದಳು. ಟ್ರಾವಂಕೂರಿನ ಮಹಾರಾಣಿ ಒಂದು ಹೆಣ್ಣಾಗಿದ್ದುಕೊಂಡೇ ಹೆಣ್ಣು ಮಕ್ಕಳ ಮೇಲೆ ಇಂತಹ ಕ್ರೂರ ಪದ್ಧತಿಯನ್ನು ಜೀವಂತವಾಗಿಟ್ಟಿದ್ದಳು. ಹೀಗೆ ಟ್ರಾವಂಕೂರಿನ ಬಲರಾಮಪುರ ಸವರ್ಣೀಯರ ಬೀದಿಯಲ್ಲಿ ಜಾತ್ರೆ ನಡೆಯುತಿತ್ತು. ಆ ಜಾತ್ರೆಗೆ ದಲಿತ ಮಹಿಳೆಯೊಬ್ಬಳು ರವಿಕೆ ಧರಿಸಿ ಬಂದಿದ್ದಾಳೆಂದು ಅಕೆಯ ಮೇಲೆ ಅಕ್ರಮಣ ಮಾಡಿದ್ದರು. ಈ ವಿಷಯ ತಿಳಿದ ಅಯ್ಯನ್ ಕಾಳಿ ಸ್ಥಳಕ್ಕೆ ಧಾವಿಸಿ ಆ ಮಹಿಳೆಯ ಪರವಾಗಿ ನಿಂತ. ಇದರಿಂದ ದಲಿತರು ಮತ್ತು ಸವರ್ಣೀಯರೊಡನೆ ಘರ್ಷಣೆ ಪ್ರಾರಂಭವಾಗಿ ಅದು ದೊಂಬಿಗೆ ತಿರುಗಿತು. ಇದನ್ನೆ ಚಾಲಿಯರ್ ದೊಂಬಿ ಎಂದು ಕರೆಯುತ್ತಾರೆ. ಈ ದೊಂಬಿಯಲ್ಲಿ ರಕ್ತಪಾತ ನಡೆದು ಹಲವು ಜನರು ಹಿರಿತಕ್ಕೊಳಗಾಗಿದ್ದರು. ಆದರೂ ಛಲಬಿಡದೆ ಅಯ್ಯನ್ ಕಾಳಿ ಇದರಲ್ಲಿ ಯಶಸ್ವಿಯಾದರು.ಅಯ್ಯನ್ ಕಾಳಿಯ ಹೋರಾಟದ ಫಲವಾಗಿ ಟ್ರಾವಂಕೂರಿನಲ್ಲಿ ಎಲ್ಲಾ ಮಹಿಳೆಯರು ಎದೆಯಭಾಗ ಬಟ್ಟೆ ಧರಿಸುವಂತಾಯಿತು. ಅಯ್ಯನ್ ಕಾಳಿಯ ಪ್ರಬಲ ಹೋರಾಟದಿಂದ ಮಹಿಳೆಯರ ಮೇಲಿದ್ದ ಅನಿಷ್ಟ ಪದ್ದತಿ ನಿಷೇಧವಾದವು. ದಲಿತರಿಗೆ ರಸ್ತೆ, ಹೋಟೆಲ್ಲು, ಅಂಗಡಿ ಎಲ್ಲವೂ ಮುಕ್ತವಾದವು.

ಅಯ್ಯನ್ ಕಾಳಿಯು ಸಾಮಾಜಿಕ  ಹೋರಾಟದ ನಂತರ ಅವರು ಕೈ ಹಾಕಿದ್ದು ಶೈಕ್ಷಣಿಕ ಹೋರಾಟದ ಕಡೆ. ಸ್ವತಹ ತಾವೇ ಅನಕ್ಷರಸ್ಥರಾಗಿದ್ದರು ಸಹಿತ ಬೇರೆಯವರು ವಿದ್ಯಾಭ್ಯಾಸ ಮಾಡಬೇಕೆಂಬುದು ಅಯ್ಯನ್ ಕಾಳಿಯ ದೂರದೃಷ್ಟಿಯಾಗಿತ್ತು. ಅಯ್ಯನ್ ಕಾಳಿಯ ಕಾಲಘಟ್ಟದಲ್ಲಿ ಕೇರಳದ ಎಲ್ಲಿಯೂ ದಲಿತ ಮಕ್ಕಳಿಗೆ ಶಾಲೆ ಪ್ರವೇಶವಿರಲಿಲ್ಲ. ದಲಿತ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯತೆತನ್ನು ಮನಗಂಡು ಅದನ್ನು ಅನುಷ್ಠಾನಕ್ಕೆ ತಂದವರಲ್ಲಿ ಅಯ್ಯನ್ ಕಾಳಿ ಮೊದಲಿಗರು. ಅಯ್ಯನ್ ಕಾಳಿಯ ಎತ್ತಿನ ಗಾಡಿಯನ್ನು ಓಡಿಸುವ ವ್ಯಕ್ತಿಯ ಬಳಿ 4 ಎಕರೆ ಜಮೀನು ಇತ್ತು. ಅದರಲ್ಲಿ 18 ಗುಂಟೆ ಜಾಗವನ್ನು ಕ್ರಯಕ್ಕೆ ತೆಗೆದುಕೊಂಡು ಅಲ್ಲಿ ಶಾಲೆ ನಿರ್ಮಿಸಲು ಮುಂದಾದರು. ಸ್ನೇಹಿತರೊಡನೆ ಸೇರಿಕೊಂಡು ಮಣ್ಣು ಕಲಸಿ ಗೋಡೆಗಳನ್ನು ಕಟ್ಟಿ ತೆಂಗಿನ ಗರಿಯ ಮೂಲಕ ಚಾವಣಿ ಹಾಕುತಿದ್ದರು. ಬೆಳಗ್ಗಿನ ಸಂದರ್ಭದಲ್ಲಿ ಕಷ್ಟಪಟ್ಟು ಶಾಲೆ ನಿರ್ಮಾಣ ಮಾಡಿದರೆ ರಾತ್ರಿ ಆಗುತಿದ್ದಂತಯೇ ಸವರ್ಣೀಯರು ಬಂದು ಕೆಡುವಿ ಹಾಕುತಿದ್ದರು. ದಿನ ನಿತ್ಯವೂ ಇದೇ ಆಗುತಿತ್ತು.  ಅದು 1904 ರ ಸಂದರ್ಭ, ಶಾಲೆ ಉಳಿಸಬೇಕೆನ್ನುವುದು ಅಯ್ಯನ್ ಕಾಳಿಯ ಧ್ಯೇಯ. ಶಾಲೆಯನ್ನು ಯಾವುದೇ ಕಾರಣಕ್ಕು ತೆರೆಯಲು ಬಿಡಬಾರದೆಂಬುದು ಸವರ್ಣೀಯ ಮನಸುಗಳ ಅಜೆಂಡಾ. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ಎದ್ದು ಕೊಡಲಿ ಮಚ್ಚುಗಳಿಂದ ಹೊಡೆದಾಡಿ ರಕ್ತವನ್ನೆ ಹರಿಸಿದರು. ಅನಂತರ ಶಾಲೆಕಡೆ ತಲೆ ಹಾಕದೆ ಸವರ್ಣಿಯರು ಸುಮ್ಮನಾದರು. ಶಾಲೆ ಆರಂಭವಾಯಿತು ಮಕ್ಕಳಿಗೆ ಬರೆಯಲು ಸೀಮೆ ಸುಣ್ಣ ಮತ್ತು ಕಪ್ಪು ಹಲಗೆ ಇರದ ಕಾರಣ ಮರಳಿನಲ್ಲಿ ಬರೆಸುವ ಮೂಲಕ ದಲಿತ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಿದರು.

ಒಂದು ಶಾಲೆಯಿಂದ ಹೆಚ್ಚು ದಲಿತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಸಾಧ್ಯವಿಲ್ಲವೆಂದರಿತ ಅಯ್ಯನ್ ಕಾಳಿ ಸರ್ಕಾರದೊಡನೆ ಮಾತನಾಡಿ ಎಲ್ಲಾ ಕಡೆಯು ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ಮಂಜೂರು ಮಾಡುವಂತೆ ಕೇಳಿಕೊಂಡರು. ಇದನ್ನು ಮನಗಂಡ ಸರ್ಕಾರ ದಲಿತ ಮಕ್ಕಳಿಗೆ ಪ್ರತ್ಯೇಕವಾಗಿ ಶಾಲೆಗಳನ್ನು ಮಂಜೂರು ಮಾಡಿದರು.  ಆದರೆ ಶಾಲೆಗೆ ಮಕ್ಕಳನ್ನು ಜಮೀನ್ದಾರರಿಗೆ ಎದರಿ ಪೋಷಕರು ಕಳುಹಿಸುತ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋದರೆ ನಮ್ಮ ಜಮೀನಿನಲ್ಲಿ ಕೆಲಸ ಮಾಡುವವರು ಸಿಗುವುದಿಲ್ಲ ಎಂಬುದನ್ನು ಅರಿತ ಭೂ ಮಾಲೀಕರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದೆಂದು ತಾಕೀತು ಮಾಡಿದ್ದರು. ಆದ್ದರಿಂದ ಎದರಿ ಪೋಷಕರು ಕಳುಹಿಸುತ್ತಿರಲಿಲ್ಲ. ಇದನ್ನರಿತ ಅಯ್ಯನ್ ಕಾಳಿ ಪೋಷಕರ ಮನ ಹೊಲಿಸಿದರು. ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭೂ ಮಾಲೀಕರು ಒಪ್ಪದಿದ್ದರೆ ನೀವು ಅವರ ಕೆಲಸಕ್ಕೆ ಹೋಗದೆ ಅಸಹಾಕಾರ ಚಳವಳಿ ಮಾಡಿ ತಮ್ಮ ಜಮೀನಿನ ಕೆಲಸವನ್ನು ತಾವು ಮಾಡಿಕೊಳ್ಳಲಾಗದೆ ಅವರೇ ನಿಮ್ಮ ದಾರಿಗೆ ಬರುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅಯ್ಯನ್ ಕಾಳಿ ಹೇಳಿದಂತೆ ದಲಿತರು ಭೂ ಮಾಲೀಕರ ವಿರುದ್ಧ ಕೃಷಿ ಚಟುವಟಿಕೆಗೆ ಹೋಗದೆ ಅಸಹಾಕಾರ ಕೈಗೊಂಡರು. ಇದರಿಂದ ಎಲ್ಲಾ ಭೂ ಮಾಲೀಕರ ಜಮೀನುಗಳು ತಕ್ಕಲು ಬಿದ್ದವು. ಕೊನೆಗೆ ಭೂ ಮಾಲೀಕರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಲುಹಿಸಲು ಒಪ್ಪುತ್ತೇವೆ ದಯವಿಟ್ಟು ಕೆಲಸಕ್ಕೆ ಬನ್ನಿ ಎಂದು ಕರೆಯುವಂತಾಯಿತು. ಇದರಿಂದ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರು. ಮಕ್ಕಳುಗಳು ಶಾಲೆಗೇನು ಬಂದರು, ಆದರೆ ಅವರಿಗೆ ಪಾಠ ಹೇಳಿಕೊಡಲು ಯಾವ ಸವರ್ಣೀಯ ಶಿಕ್ಷಕರು ಒಪ್ಪಲಿಲ್ಲ. ಅಂದು ಉದಾರವಾದಿ ಹಾಗೂ ಪ್ರಗತಿಪರರು ಆಗಿದ್ದ ಬಿಲ್ಲವ ಜನಾಂಗದ ಪರಮೇಶ್ವರ್ ಪಿಳ್ಳೆ ಎಂಬುವವರೆ ಶಾಲಾ ಶಿಕ್ಷಕರಾಗಲು ಒಪ್ಪಿದರು. ಇದರಿಂದ ದಲಿತ ಮಕ್ಕಳು ವಿದ್ಯೆ ಕಲಿಯಲು ಪ್ರಾರಂಭ ಮಾಡಿದರು. ಇದು ಅಯ್ಯನ್ ಕಾಳಿಯು ಕೇರಳಾದಲ್ಲಿ ಮಾಡಿದ ಮಹೋನ್ನತ ಶಿಕ್ಷಣ ಕ್ರಾಂತಿ.

ಅಯ್ಯನ್ ಕಾಳಿ ನಡೆಸಿದ ಶಿಕ್ಷಣ ಕ್ರಾಂತಿಯ ನಂತರ ಕೈಗೆತ್ತಿಕೊಂಡ ಮಹತ್ತರವಾದ ಹೋರಾಟವೆಂದರೆ ವೈಕಂ ಸತ್ಯಾಗ್ರಹ.  ವೈಕಂ ನಲ್ಲಿ ಮಹಾದೇವ ಮಂದಿರವಿದೆ. ಈ ಮಂದಿರಕ್ಕೆ ದಲಿತರಿಗಾರಿಗೂ ಪ್ರವೇಶವೂ ಇರಲಿಲ್ಲ, ದೇವಸ್ಥಾನದ ಅಕ್ಕಪಕ್ಕದ ರಸ್ತೆಯಲ್ಲಿಯೂ ದಲಿತರು ಓಡಾಡುವಂತಿರಲಿಲ್ಲ. ಒಂದು ವೇಳೆ ಈ ಆಜ್ಞೆಯನ್ನು ಮೀರಿ ಓಡಾಡಿದರೆ ಅಂತವರ ತಲೆಗಳನ್ನು ಕಡಿಯಲಾಗುತಿತ್ತು. ಹೀಗೆ ಆಜ್ಞೆ ಮೀರಿ ಓಡಾಡಿದ ಅನೇಕ ದಲಿತರ ತಲೆ ಕಡಿದು ಪಕ್ಕದಲ್ಲಿರುವ ಹೊಂಡಕ್ಕೆ ಬಿಸಾಡಿರುವ ಅನೇಕ ಉದಾಹರಣೆಗಳು ಅಲ್ಲಿವೆ. 1925 ರಲ್ಲಿ ದೇವಾಲಯ ಪ್ರವೇಶ ಹೋರಾಟ ಅಯ್ಯನ್ ಕಾಳಿ ನೇತೃತ್ವದಲ್ಲಿ ಪ್ರಾರಂಭವಾಯಿತು. ಘೊಷಾವಾಕ್ಯದೊಂದಿಗೆ ಜನನಡಿಗೆಯ ಮೂಲಕ ದೇವಾಲಯ ಪ್ರವೇಶ ಮಾಡುವುದಾಗಿ ಹೋರಾಟದ ರೂಪುರೇಷೆಯಾಗಿತ್ತು. ಹೋರಾಟವನ್ನು ನಿಲ್ಲಿಸಬೇಕೆಂದು ಕೆಲವು ಸವಣರ್ೀಯರು ಸಿವಿಲ್ ನ್ಯಾಯಾಲಯದ ಮೊರೆ ಹೋದರು. ಇದರ ಪರಿಣಾಮ ಕೀಳು ಜಾತಿಯವರು ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾ ನ್ಯಾಯಾದೀಶರೆ ಹೋರಾಟಕ್ಕೆ ಅನುಮತಿ ನಿರಾಕರಿಸಿದರು ಆದ್ದರಿಂದ ಜನನಡಿಗೆಯ ಹೋರಾಟ ಸತ್ಯಾಗ್ರಹಕ್ಕೆ ಬದಲಾಯಿತು. ಈ ಸತ್ಯಾಗ್ರಹಕ್ಕೆ ಕಾಂಗ್ರೇಸ್ ನವರು ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬಾಗಿಯಾದರು. ಸತ್ಯಾಗ್ರಹ ತಾರಕ್ಕೇರಿತು. ಅನಂತರ ಗಾಂಧೀಜಿಯವರು ಮಧ್ಯಸ್ಥಿಕೆ ವಹಿಸಿ ಸವರ್ಣೀಯರ ಮನಹೊಲಿಸಿದ ನಂತರ ದೇವಾಲಯ ಪ್ರವೇಶಕ್ಕೆ ದಲಿತರಿಗೆ ಅನುಮತಿ ದೊರೆಯಿತು. ಅಯ್ಯನ್ ಕಾಳಿಯ ಇಂತಹ ಅನೇಕ ಹೋರಾಟಗಳ ಬಗೆ ಗಾಂಧೀಜಿಯವರು ಕೇಳಿ ಆ ಸಂದರ್ಭದಲ್ಲಿ ಪುಳಕಿತರಾಗಿದ್ದು ಉಂಟು.

ಈ ಎಲ್ಲಾ ಹೋರಾಟಗಳ ನಂತರ ತೀರಾ ಪ್ರಭಾವಿ ದಲಿತ ನಾಯಕನಾಗಿ ಬೆಳೆದ ಅಯ್ಯನ್ ಕಾಳಿಯು ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡರು, ಅನಂತರ ಪ್ರಜಾಪ್ರತಿನಿಧಿ ಸಭೆಯ ಚುನಾಯಿತ ಪ್ರತಿನಿಧಿಯಾದರು. ತನ್ನ ಹೊರಾಟದ ಮೂಲಕ ನಾಗರೀಕ ಹಕ್ಕುಗಳನ್ನು ದೊರಕಿಸಿಕೊಟ್ಟ ಅಯ್ಯನ್ ಕಾಳಿ ದಲಿತರಿಗೆ ಸ್ವಂತ ಜಮೀನುಗಳನ್ನು ಹೊಂದಿಲ್ಲ ಅವರಿಗೆ ಭೂ ಓಡೆತನ ಕೊಡಿಸಬೇಕೆಂಬ ಇನ್ನೊಂದು ಸಂಕಲ್ಪ ಅವರಲ್ಲಿ ಮನೆಮಾಡಿತು. ಚುನಾಯಿತ ಪ್ರತಿನಿಧಿಯಾಗಿದ್ದ ಅವರು ಶ್ರೀಮೂಲಂ ತಿರುನಾಳ್ ಮಹಾರಾಜರಾಗಿದ್ದ ಸಂದರ್ಭದಲ್ಲಿ ಅವರೊಡನೆ ಮಾತನಾಡಿ ಸರ್ಕಾರದ ವಶದಲ್ಲಿದ್ದ 500 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಟ್ಟರು. 500 ಕುಟುಂಬಗಳಿಗೆ ತಲಾ ಒಂದೊಂದು ಎಕರೆಯಂತೆ 500 ಎಕರೆಯನ್ನು ಹಂಚಿಸಿ ದಲಿತರಿಗೆ ಭೂ ಓಡೆತನ ಕೊಡಿಸಿದ ಅಯ್ಯನ್ ಕಾಳಿ ಅವರ ಹೋರಾಟ ಮತ್ತು ಪಾತ್ರ ಮಹತ್ವದ್ದಾಗಿತ್ತು.  ಇಂದಿಗೂ ಕೂಡ ಕೇರಳಾದಲ್ಲಿ ಅಯ್ಯನ್ ಕಾಳಿ ಎಂದರೆ ಮನೆಮಾತು. ಅವರನ್ನು ಅಲ್ಲಿನ ಜನತೆ  ಮಹಾತ್ಮ ಅಯ್ಯನ್ ಕಾಳಿ ಎಂದೇ ಕರೆಯುತ್ತಾರೆ. ಇಂದು ಅವರ 158ನೇ ಜನ್ಮದಿನದ ಸಂಭ್ರಮ. ಇಂತಹ ಸುದಿನದಲ್ಲಿ ಅವರ ವಿಚಾರ ಮತ್ತು ಕ್ರಾಂತಿಯನ್ನು ಮತ್ತಷ್ಟು ಮುನ್ನೆಲೆಗೆ ತರುವ ಹಾಗೂ ವಿಸ್ತರಿಸುವ ಅಗತ್ಯತೆಯಿಂದ ನಾವು ನೋಡಬೇಕಿದೆ

********************

One thought on “ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

Leave a Reply

Back To Top