Category: ಇತರೆ

ಇತರೆ

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ ತಾಯಿಯಾಗಿ, ಪ್ರೀತಿಯ ಸಹೋದರಿಯಾಗಿ, ಅತ್ತಾಗ ಸಾಂತ್ವನ ಹೇಳುವ ಗೆಳತಿಯಾಗಿ, ಮನೆಯಲ್ಲಿ ಎಲ್ಲರ ಪ್ರೀತಿಯ ಚಿಲುಮೆಯ ಮುದ್ದಿನ ಮಗಳಾಗಿ ಇಂದು ಮಹಿಳೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ದಾಪುಕಾಲನ್ನ ಹಾಕುತ್ತಾ ಜಗತ್ತಿನೆಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿರುವಾಗ, ಕಸಾಪನ ಅಧ್ಯಕ್ಷೀಯ ಪದವಿ ನೂರು ವರ್ಷಗಳಾದರೂ ಪಡೆಯದೇ ಇರುವುದು ತುಂಬಾ ವಿಷಾದನೀಯ ಹಾಗೆಯೇ ಮಹಿಳೆಯರಿಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು. ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ನಾನಿಲ್ಲಿ  ಕಸಾಪನ ಬಗ್ಗೆ ಹೇಳುತ್ತಿರುವುದರಿಂದ ಕೇವಲ ಸಾಹಿತ್ಯದ ಬಗ್ಗೆಯಷ್ಟೇ ಕೊಂಚ ಗಮನ ಹರಿಸೋಣ . ಬರಹಗಾರ್ತಿಯರ ಸಂಖ್ಯೆ ತುಂಬಾ ಕಡಿಮೆಯಿದ್ದ ಹಿಂದಿನ ಕಾಲದಲ್ಲಿ, ಪ್ರತಿನಿತ್ಯದ ತಮ್ಮೆಲ್ಲ ಕಷ್ಟ-ಕಾರ್ಪನ್ಯಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಹಾಡುಗಳನ್ನು ತಾವೇ ಕಟ್ಟಿ ರಾಗವಾಗಿ ಹಾಡುತ್ತಿದ್ದರು ಅವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನ ಹಿಂದೆ ಬಹುವಾಗಿ ರಚಿಸಿದವರೆಂದರೆ ಮಹಿಳೆಯರೇ. ಆ ಸೊಗಸಾದ ಸಾಹಿತ್ಯ ಆಕೆಯ ಕುಟುಂಬ,ನೋವು-ನಲಿವು, ಅವಳ ಒಂದಿಷ್ಟು ತಳಮಳಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಜಾನಪದ ಸಾಹಿತ್ಯದ ಸೊಗಡೇ ಅದ್ಬುತ. ಕವಿ ಮಹಲಿಂಗರಂಗರು ಹೇಳಿರುವಂತೆಯೇ “ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕನ್ನಡ ಸಾಹಿತ್ಯ”. ಈ ಜಾನಪದ ಸಾಹಿತ್ಯವೂ  ಹಾಗೆಯೇ ಅಷ್ಟೇ ಸುಲಭದ ಮತ್ತು ಓದುವಾಗ ಮನಸ್ಸಿಗೆ ತುಂಬಾ  ಮುದ ನೀಡುವಂತದ್ದು. ಜಾನಪದ ಸಾಹಿತ್ಯವನ್ನು ಆಗಲೇ ಗುರುತಿಸಿ ಪ್ರಶಂಸೆಯನ್ನು ನೀಡಿದ್ದೇ ಹೌದಾದರೆ ಮಹಿಳೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಲೋ ಏನೋ?ಯಾರಿಗೆ ಗೊತ್ತು. ಹಾಗೆಯೇ ಅಲ್ಲಿಂದ ಮಹಿಳಾ ಸಾಹಿತ್ಯದ ಉಲ್ಲೇಖದ ಬಗ್ಗೆ ಯೋಚಿಸುತ್ತಾ ಹೋದರೆ ಸಿಗುವುದು ವೈಭವದ ಸಾಮ್ರಾಜ್ಯವಾದ ವಿಜಯನಗರ ಕಾಲದಲ್ಲಿಯೇ ಗಂಗಾದೇವಿಯ” ವೀರ ಕಂಪಣರಾಯ ಚರಿತ” ಮತ್ತು ತಿರುಮಲಾಂಬ ಅವರು ರಚಿಸಿದಂತ “ವರದಾಂಬಿಕ ಪರಿಣಯಂ”. ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅದೆಷ್ಟು ಬಾರಿ ಬಣ್ಣಿಸಿದರೂ ಸಾಲದು!! ಆ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ!! ಅಂದು ಹಂಪಿ ಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ, “ವಜ್ರ, ಮುತ್ತು, ರೇಶ್ಮೆ, ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತದೆ” ಎಂದು ಸಾರಿ ಹೇಳಿದ್ದ!! ಚೈನಾ ದೇಶದ ಬೌದ್ಧ ಬಿಕ್ಷು ಹೂಯನ್ ತ್ಸಾಂಗ್, “ವಿಜಯನಗರದ ಜನರು ಬಹಳ ಸಂತೋಷದಿಂದಿರುವವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದಿದ್ದ!! ಎನ್ನುವ ವಿಷಯವನ್ನು ನಾವೆಲ್ಲ ಇತಿಹಾಸದಲ್ಲಿ ಓದಿಯೇ ಇರುತ್ತೇವೆ. ಈ ಎಲ್ಲ ವೈಭವದ ನಡುವೆ ಮಹಿಳಾ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಅವರೇ ಕೊಡಲಿಲ್ಲವೋ, ಮಹಿಳೆಯರೇ ತಮ್ಮ ಸುತ್ತಲಿನ ಪರಿಧಿಯನ್ನು ಬಿಟ್ಟು ಹೊರಗೆ ನುಸುಳಿ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಸಹ ಪುರುಷರ ಸಾಹಿತ್ಯದಷ್ಟು ಸ್ತ್ರೀ ಸಾಹಿತ್ಯ ಪ್ರಚಾರಕ್ಕೆ ಬರದೇ ಹೋಯಿತು. ಒಂದಿಷ್ಟು ಆಧುನಿಕ ಕನ್ನಡ ಸಾಹಿತ್ಯದ ಕಡೆ ಕಣ್ಣಾಡಿಸಿ ನೋಡಿದರೆ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಇಂದು ಮಹಿಳೆ ಪರಿಣಿತಳಾಗಿದ್ದಾಳೆ. ನನಗಂತೂ ದ್ವಿತೀಯ ಪಿಯುಸಿ ಓದುವಾಗ ಶ್ರೀಮತಿ ನೇಮಿಚಂದ್ರರು ಬರೆದ “ಆಯ್ಕೆ ಇದೆ ನಮ್ಮ ಕೈಯಲ್ಲಿ” ಎನ್ನುವ ಅನುಭವ ಕಥನವಂತೂ ನಾ ಓದಿದಾಗ ನನ್ನ ಮನಸನ್ನೇ ಸೂರೆ ಮಾಡಿತ್ತು. ನಿರಾಸೆಯ ಮಡಿಲಿಗೆ ಬೀಳದೇ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ, ಸಾಧಿಸುವ ತಾಳ್ಮೆ, ಸಹನೆಗಳ ಅಗತ್ಯವನ್ನು ತುಂಬಾ ಮನಮುಟ್ಟುವಂತೆ ಅಲ್ಲಿ ಬರೆದಿದ್ದಾರೆ. ಹೀಗೆ ಮಹಿಳಾ ಸಾಹಿತ್ಯವನ್ನು ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ ಸಾರ ಅಬೂಬಕ್ಕರ, ಮಾಲತಿ ಪಟ್ಟಣಶೆಟ್ಟಿ, ನೇಮಿಚಂದ್ರ, ಸುಧಾಮೂರ್ತಿ, ಟಿ. ಸುನಂದಮ್ಮ, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ, ಹೀಗೆ ಹೆಸರುಗಳ ಪಟ್ಟಿ ಒಂದರ ನಂತರ ಒಂದರಂತೆ ಬೆಳೆಯುತ್ತಲೇ ಹೋಗುತ್ತದೆ. ದ. ರಾ. ಬೇಂದ್ರೆಯವರು ತಮ್ಮ ಭಾವಗೀತೆಯಾದ “ಹಕ್ಕಿ ಹಾರುತಿದೆ ನೋಡಿದಿರಾ” ಇದರಲ್ಲಿ ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆ ಆಗುತ್ತಲೇ ಇರುತ್ತದೆ, ಇಂದು ಇದ್ದಂತೆ ಮುಂದೆ ಎಂದಿಗೂ ಇರಲಾರದು ಎನ್ನುವ ಮಾತಿನಂತೆ ಕಾಲಘಟ್ಟಗಳು ಬದಲಾದ ಹಾಗೆ ಮಹಿಳಾ ಸಾಹಿತ್ಯ ಲೋಕ ಕೂಡ ತುಂಬಾ ಮುಂದುವರಿದಿದೆ. ಪ್ರವಾಸ, ಕೃಷಿ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಹೀಗೆ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಪ್ರಬಲವಾಗಿದ್ದಾಳೆ. ಹೀಗಿರುವಾಗ ಅವಳಿಗೆ ಅಧ್ಯಕ್ಷೀಯ ಗದ್ದುಗೆ ಸಿಗಲೇ ಬೇಕು. “ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಇನ್ನೂ ಕಸಾಪನ ಅಧ್ಯಕ್ಷತೆಯ ಸ್ಥಾನದಲ್ಲಿ ಕೂರಲು ಆಕೆಗೆ ಅರ್ಹತೆ ಇಲ್ಲವೇನು?? ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವೆಂಬ ತೊರೆಗೆ ಸ್ತ್ರೀ ಮತ್ತು ಪುರುಷರೆಂಬ ಪ್ರತ್ಯೇಕ ಧಾರೆಗಳ ಹರಿವೇನಾದರು ಇದೆಯೇನು? ಅಧ್ಯಕ್ಷ ಪದವಿಯ ಆಯ್ಕೆಯಲ್ಲಿ ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಿ ಇನ್ನೂ ಹೆಚ್ಚಿನ ಉತ್ತೇಜನ ಅವರಿಗೆ ದೊರಕುವ ಮೂಲಕ ಸಾಹಿತ್ಯ ಲೋಕ ಅನೇಕಾನೇಕ ಮಹಿಳಾ ಸಾಹಿತ್ಯ ರತ್ನದ  ಮಣಿಗಳನ್ನು ಪಡೆದು ಸಾಹಿತ್ಯ ಕ್ಷೇತ್ರ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನದೊಂದು ಆಶಯ. “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ********************************** ಪೂಜಾ ನಾರಾಯಣ ನಾಯಕ್..

ಮೂವರು ವೃತ್ತಿ ಕಲಾವಿದರ ಕಣ್ಮರೆ

ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ ಕಲೆ. ಅಂಜಲಿದೇವಿಯ ಬಾಳಸಂಗಾತಿ ನೀಲಕಂಠಪ್ಪ ಹಾರ್ಮೋನಿಯಂ ನುಡಿಸುವಲ್ಲಿ, ರಾಗಸಂಯೋಜನೆ ಮಾಡುವಲ್ಲಿ ಸುಪ್ರಸಿದ್ಧರು. ಅಷ್ಟಕ್ಕೂ ಅವರೆಲ್ಲರೂ ವೀರೇಶ್ವರ ಪುಣ್ಯಾಶ್ರಮದ ಗರಡಿಯಲ್ಲಿ ಸಾಮು ತೆಗೆದವರು. ಅಂಜಲಿದೇವಿ ರಂಗಸೇವೆಗೈಯ್ದ ಪಡೇಸೂರ ಕಂಪನಿ, ಚಿತ್ತರಗಿ ಕಂಪನಿ, ಸುಳ್ಳದ ಕಂಪನಿ, ಅರಿಷಿಣಗೋಡಿ ಕಂಪನಿ, ಏಣಗಿ ಬಾಳಪ್ಪ ಕಂಪನಿ.. ಈ ಎಲ್ಲ ನಾಟಕ ಕಂಪನಿ ಹೆಸರುಗಳೇ ಅಭಿನೇತ್ರಿ ಅಂಜಲಿದೇವಿಯ ಔನ್ನತ್ಯಕ್ಕೆ ರಂಗಸಾಕ್ಷಿ. ಕೆಲಕಾಲ ನಾಟಕ ಕಂಪನಿ ಮಾಡಿ ಅಂಜಲಿದೇವಿ ಕೈ ಸುಟ್ಟುಕೊಂಡರು. ದ್ರೌಪದಿ ಪಾತ್ರಕ್ಕೆ ಮನ್ಸೂರು ಸುಭದ್ರಮ್ಮ ರಾಜ್ಯಮಟ್ಟದಲ್ಲಿ ಮಹೋನ್ನತಿ ಸಾಧಿಸಿದರೆ ಅಂಜಲಿದೇವಿ ಗದಗ ಸೀಮೆಯಲ್ಲಿ ಅಂತಹುದೇ ಹೆಸರು ಮಾಡಿದವರು. ಅಷ್ಟಕ್ಕೂ ಅವರದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬ. ಇಟಗಿ ಭೀಮಾಂಬಿಕೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಎಚ್.ಆರ್.ಜಿ. ಕ್ಯಾಂಪಲ್ಲಿ ಭೀಮಾಂಬಿಕೆ ದೇವಸ್ಥಾನವನ್ನೇ ಸ್ಥಾಪಿಸಿದರು. ಕಡೆಗೆ ಭೀಮಾಂಬಿಕೆಯ ಸನ್ನಿಧಿಯಲ್ಲೇ ರಂಗಸಾಯುಜ್ಯ ಕಾಣಬೇಕಾಯಿತು. ಸಿ. ರಮೇಶ ನಾಟಕ ಕಂಪನಿಗಳ ವಲಯದಲ್ಲಿ ದಾವಣಗೆರೆ ರಮೇಶ ಎಂತಲೇ ಚಿರಪರಿಚಿತ ಹೆಸರು. ಐವತ್ತೆರಡು, ಸಾಯುವ ವಯಸ್ಸಲ್ಲ. ಖಳನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಫೇಷಿಯಲ್ ಎಕ್ಸ್ ಪ್ರೆಸೆನ್ ಅಲ್ಲಲ್ಲ ಟ್ಯಾಲೆಂಟ್. ಕಣ್ಣು, ಹುಬ್ಬು, ಹಣೆ, ತಲೆಗೂದಲುಗಳಲ್ಲೇ ಅಭಿನಯದ ಅಮೋಘ ಚತುರತೆ ತೋರುವಲ್ಲಿ ರಮೇಶ ಪರಿಣತ. ಆತ ನಾಯಕ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಖಳನಾಯಕನದೇ ಖಾಸಾ ಕನಸು. ರಮೇಶ ಮಾಡುವ ಹಾಸ್ಯ ಪಾತ್ರದಲ್ಲೂ ವಿಲನ್ ಚಹರೆಗಳ ಹುಡುಕಾಟ ನಡೆಸುವಷ್ಟು ಪ್ರೇಕ್ಷಕರಲ್ಲಿ ಖಳನಾಯಕ ರಮೇಶ್ ಅಭಿನಯ ಪ್ರಭಾವದ ಬೇರುಗಳು. ಶರೀರ ಮತ್ತು ಶಾರೀರ ಎರಡಲ್ಲೂ ರಮೇಶ ಲಕ್ಷಣವಂತ. ಸಿನೆಮಾನಟ ಧೀರೇಂದ್ರ ಗೋಪಾಲ, ವಜ್ರಮುನಿ ಅವರನ್ನು ಆವಾಹಿಸಿಕೊಂಡು ರಮೇಶ ಅಭಿನಯಿಸುತ್ತಿದ್ದರೆ ಪ್ರೇಕ್ಷಕರಿಗೆ ಹಂಡೆಹಾಲು ಕುಡಿದ ಸಂಭ್ರಮ. ” ಅಂಣಾ ನನ್ನೊಳಗಿನ ಕಲಾವಿದ ರಮೇಶನಿಗಿಂತಲೂ ಸಿನಿಮಾ ನಟರನ್ನೇ ನನ್ನ ಮೂಲಕ ನೋಡುವಲ್ಲಿ ಪ್ರೇಕ್ಷಕರು ಇಷ್ಟ ಪಡುತ್ತಾರೆ. ನನಗೆ ಅನ್ನ ನೀಡುವ ಪ್ರೇಕ್ಷಕರು ಮುಖ್ಯ. ಅವರಿಗೆ ನನ್ನೊಳಗಿನ ನಾನು ಯಾವಾಗ ಬೇಕೆಂದು ಬಯಸುತ್ತಾರೋ ಆಗ ಕಲಾವಿದ ಅಪ್ಪಟ ರಮೇಶ ಅಭಿನಯಿಸುತ್ತಾನೆ.” ಹೀಗೆ ನನ್ನೊಂದಿಗೆ ಮಾತಾಡುವಾಗ ಅನೇಕ ಬಾರಿ ಹೇಳುತ್ತಿದ್ದ. ನಿಸ್ಸಂದೇಹವಾಗಿ ರಮೇಶ ಅನುಕರಣೆಯಿಂದಲೇ ಪ್ರಸಿದ್ದಿ ಪಡೆದವರಲ್ಲ. ಅವನೊಳಗೊಬ್ಬ ಅನನ್ಯತೆಯ ನಾಯಕ ನಟನಿದ್ದ. ಆರ್ದ್ರತೆ ತುಂಬಿದ, ಉಕ್ಕುವ ಸಂವೇದನೆಯ ಅಪ್ರತಿಮ ಕಲಾವಿದನಿದ್ದ. ಓರ್ವ ಸಹೃದಯಿ ಸನ್ಮಿತ್ರನಿದ್ದ. ಕಂಪನಿ ಸಾಂಗತ್ಯದ ರೂಢಿಗತ ನಡವಳಿಕೆಗಳನ್ನು ಮೀರದ ದುಃಸಾಧ್ಯತೆಗಳ ನಡುವೆ ರಂಗಕರ್ಮಿ ರಮೇಶನ ಅಕಾಲಿಕ ನಿರ್ಗಮನ ಕಂಪನಿ ನಾಟಕಗಳಿಗೆ ತುಂಬಲಾಗದ ನಷ್ಟವೇ ಸೈ. ಕೋಗಳಿ ಪಂಪಣ್ಣ ಈ ಹೆಸರಿನಲ್ಲೇ ಸಾರಸ್ವತದ ಫೀಲಿಂಗ್ಸ್. ಸಂಗೀತ ಮತ್ತು ಸಾಹಿತ್ಯ ಸಮೃದ್ಧಿಯ ತುಳುಕಾಟ. ಕೋಗಳಿ ಎಂಬುದು ಕೋಗಿಲೆಯ ಮತ್ತು ಪಂಪಣ್ಣ ಎಂಬುದು ಪಂಪಕವಿಯ ನೆನಪು ತರಿಸುತ್ತವೆ. ಹೌದು ಪಂಪಣ್ಣನ ರಂಗಬದುಕು ಈ ಮಾತಿಗೆ ಹೆಚ್ಚು ಹತ್ತಿರ. ಅಷ್ಟಕ್ಕೂ ಬಳ್ಳಾರಿ ಜಿಲ್ಲೆಯ ಕೋಗಳಿಯು ಮಹಾಕವಿ ಶಿವಕೋಟಾಚಾರ್ಯರ ಕಾಯಕಭೂಮಿ. ಹುಟ್ಟಿನಿಂದಲೇ ಪೌರಾಣಿಕ ನಾಟಕಗಳಿಗೆಂದೇ ಶರೀರ ಮತ್ತು ಶಾರೀರ ಕಟ್ಟಿಕೊಂಡೇ ಬಂದಂತಹ ರಂಗ ಸಂಪನ್ನತೆ ನಮ್ಮ ಪಂಪಣ್ಣನದು. ಹದಿನಾಲ್ಕನೇ ವಯಸಿಗೆ ಸೀತೆಯ ಪಾತ್ರ. ದಶಕಕಾಲ ಹಲವಾರು ಸ್ತ್ರೀ ಪಾತ್ರಗಳಲ್ಲಿ ಶಹಬ್ಬಾಶಗಿರಿ. ನಂತರ ಪೌರಾಣಿಕ ನಾಟಕಗಳಲ್ಲಿ ಮುನ್ನಡೆ ಸಾಧಿಸಿದ ಪಂಪಣ್ಣ ಹಿನ್ನಡೆಗೆ ತಿರುಗಲಿಲ್ಲ. ವೃತ್ತಿ ನಾಟಕಗಳ ಮೂಲಕ ಗ್ರಾಮೀಣ ರಂಗಭೂಮಿಯ ಭೂಮತ್ವ ಮೆರೆದ ಪಂಪಣ್ಣ ಆಧುನಿಕ ರಂಗಭೂಮಿಯ ಸಂಗ್ಯಬಾಳ್ಯ, ಅಂಗುಲಿಮಾಲ, ಆಮ್ರಪಾಲಿ ಮೊದಲಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಕೃಷ್ಣನ ಪಾತ್ರ ಹೊರತು ಪಡಿಸಿ ಬಾಕಿ ಎಲ್ಲ ಪುರುಷ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಗುರುಮುಖೇನ ಸಂಗೀತ ಕಲಿತು ಕಂದಪದ್ಯಗಳನ್ನು ತುಂಬಾ ಸೊಗಸಾಗಿ ಹಾಡುವಲ್ಲಿ ಪರಿಣಿತರು. ಇದು ಯಾರತಪ್ಪು? ಯಾರು ನನ್ನವರು? ಇವನು ಗೆಳೆಯನೇ? ಹೀಗೆ ಪ್ರಶ್ನಾರ್ಥಕ ಚಿಹ್ನೆಹೊತ್ತ ನಾಟಕಗಳ ಮತ್ತು ಗುರುಭಕ್ತಿ ಗೀತಾಂಜಲಿ ಎಂಬ ಕವನ ಸಂಕಲನದ ರಚಯಿತೃ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಮೋಘ ಅಭಿನಯ, ಮುನ್ನೂರಿಪ್ಪತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ಹೆಗ್ಗಳಿಕೆ ಪಂಪಣ್ಣರದು. ಲಾಲಿತ್ಯದ ಮಾತುಗಳ ಈ ವಾಗ್ಮಿ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರ. ತುಂಬಾ ತಡವಾಗಿ ಪತ್ತೆಯಾದ ಕ್ಯಾನ್ಸರ್ ನಿಂದ ಬಳಲಿ ಎಪ್ಪತ್ತಾರನೇ ಏರುವಯಸ್ಸಲ್ಲಿ ನಿಧನ. *************************************************************

ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ –ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ ಡಿ.ಯಶೋದಾ ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, ಮಹಿಳೆ ತನ್ನ ಚಿಂತನೆ, ಅನಿಸಿಕೆಯನ್ನು ಹಂಚಿಕೊ ಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಾಧನ ಬೇರೆ ಏನಿದೆ ಎಂದು ಪ್ರಶ್ನಿಸಿದರೆ. ಕೊರೋನಾ ಕಾರಣವಾಗಿ ಬಹಳಷ್ಟು ಮಂದಿ ಮನೆಯಲ್ಲಿ ಬಂಧಿ. ಆದರೆ ಮನಸ್ಸನ್ನು ಬಂಧಿಸಲು ಸಾಧ್ಯವೇ? ನಮ್ಮ ಕಲ್ಪನೆ, ಕನಸು,ಕ್ರಿಯಾಶೀಲತೆಯನ್ನು ಎಂದೂ ಬಂಧಿಸಲು ಸಾಧ್ಯವಿಲ್ಲ.ಕೊರೋನಾದಿಂದ ಒಂದು ರೀತಿಯಲ್ಲಿ ನಮಗೆ ನಿರ್ಬಂಧ ಉಂಟಾಗಿದ್ದರೂ ನಮ್ಮ ಹಲವಾರು ಚಟುವಟಿ ಕೆಗಳು ಸಮೃದ್ಧಿಗೊಳ್ಳುತ್ತಿವೆ. ಯಾರನ್ನೂ ಭೇಟಿಯಾಗದೆ, ಸಭೆ, ಸಮಾರಂಭಗಳು ನಡೆಯದೆ ಇರುವಂತಹ ಈ ಕಾಲದಲ್ಲಿ,ತಂತ್ರಜ್ಞಾನದ ಮೂಲಕ ಮನೆಯಲ್ಲಿಯೇ ಕೂತು ಜಗತ್ತನ್ನೇ ಸಂಚರಿಸುವ, ವೈವಿಧ್ಯಮಯ ಜನರನ್ನು ಭೇಟಿಯಾಗುವ, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ನಮ್ಮದು. ಕತೆ, ಕವನ, ವಚನಗಳ ಗೋಷ್ಠಿಗಳು, ವಿವಿಧ ವಿಚಾರಗಳ ಮಂಡನೆ, ಸ್ತ್ರೀ ವಾದಿ ಚಿಂತನೆಗಳ ಚರ್ಚೆಗಳು,ಪುಸ್ತಕ ಗಳ ಪರಿಚಯ, ಹಾಡು, ನೃತ್ಯ… ಒಂದೇ ಎರಡೇ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿವೆ. ನಮ್ಮ ನಮ್ಮ ವಿಷಯ ಮಂಡನೆಗಳಿಗೆ, ನಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ದೊಡ್ಡ ಸಮಾರಂಭಗಳೇ ಆಗಬೇಕೆಂ ದೇನಿಲ್ಲ,ನೂರಾರು ಜನರು ಸೇರಬೇಕು ಎಂದೂ ಇಲ್ಲ. ಫೇಸ್‌ಬುಕ್ ವೇದಿಕೆಯಲ್ಲಿ, ನಮ್ಮ ಚೌಕಟ್ಟಿನಲ್ಲಿ ಅಚ್ಚು ಕಟ್ಟಾಗಿ ಮನಮುಟ್ಟುವಂತಹ ಕಾರ್ಯಕ್ರಮಗಳು ಜರುಗು ತ್ತಿರುವುದು ಜಗಮೆಚ್ಚುಗೆಗೆ ಕಾರಣವಾಗಿದೆ.ಇಂದಿನ ಪರಿ ಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಂಡು ಬೆಂಗ ಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಲೇಖಕಿಯರ ಮೂಲಕ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಕ್ರಮ ಮಾಡಿದ್ದು ಸ್ಫೂರ್ತಿದಾಯಕವಾಗಿದೆ. ಲೇಖಿಕಾ ಸಾಹಿತ್ಯ ವೇದಿಕೆಯ ನನ್ನ ಮೆಚ್ಚಿನ ಪುಸ್ತಕ ಪರಿಚ ಯ ಸರಣಿ ಕಾರ್ಯಕ್ರಮ ಫೇಸ್‌ಬುಕ್ ಲೈವ್‌ನಲ್ಲಿ ಒಂ ದೂವರೆ ತಿಂಗಳ ಕಾಲ ಮೂಡಿ ಬಂದು ಜನಪ್ರಿಯಗೊಂ ಡಿದೆ. ಇದರ ಯಶಸ್ಸು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಎಲ್ಲ ಲೇಖಕಿಯರಿಗೆ ಸಲ್ಲುತ್ತದೆ. ಇಂತಹ ವಿನೂತನ ಕಾರ್ಯಕ್ರಮದ ರೂವಾರಿ ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಲೇಖಕಿ ಶೈಲಜಾ ಸುರೇಶ್ ಅವರು ವಿಶೇ ಷವಾಗಿ ಅಭಿನಂದನಾರ್ಹರು.ಈ ಕಾರ್ಯಕ್ರಮದ ಒಂದು ಗಮನಾರ್ಹ ಅಂಶವೆಂದರೆ ಈ ಫೇಸ್‌ಬುಕ್ ತಂತ್ರಜ್ಞಾನದ ಅರಿವಿಲ್ಲದವರು, ಅದಕ್ಕೆ  ತೊಡಗಿಕೊಳ್ಳದವರೂ ಸಹ ಇದರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡದ್ದು. ಫೇಸ್‌ಬಕ್ ಲೈವ್‌ನಲ್ಲಿ ಕೆಲವೊಮ್ಮೆ ಗೊಂದಲವಿದ್ದದ್ದು ನಿಜ, ಆದರೆ ಮಹಿಳೆಯರು ಗಲಿಬಿಲಿಯಾಗಲಿಲ್ಲ. ೨೫ ಲೇಖಕಿಯರು ೨೫ ಕೃತಿಗಳು,ಕಾರ್ಯಕ್ರಮದಲ್ಲಿ ೨೫ ಲೇಖಕಿಯರು ೨೫ ಕೃತಿಗಳು ಮತ್ತು ೨೫ ಕೃತಿಕಾರರನ್ನು ಪರಿಚಯಿಸಿದರು. ಭೈರಪ್ಪನವರ ಪರ್ವ ಕಾದಂಬರಿಯಿಂ ದ ಶುರುವಾಗಿ ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊ ತ್ತಾದಾಗ ಕೃತಿಯೊಂದಿಗೆ ಪುಸ್ತಕ ಪರಿಚಯ ಕಾರ್ಯಕ್ರಮ ಮುಕ್ತಾಯವಾಗುತ್ತದೆ.ಜೂನ್ ೧೯ರಂದು ಡಾ. ಜಯಂತಿ ಮನೋಹರ್  ಅವರು ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು  ಪರಿಚಯಿಸುವ ಮೂಲಕ ಲೇ ಖಿಕಾ ಸಾಹಿತ್ಯ ವೇದಿಕೆಯ ‘ನನ್ನ ಮೆಚ್ಚಿನ ಪುಸ್ತಕ ಪರಿಚ ಯ’ಸರಣಿ ಕಾರ್ಯಕ್ರಮದ ಪರ್ವವನ್ನು ಶುರುಮಾಡಿದ ರು. ನಂತರ ಮಾಲತಿ ಮುದಕವಿ ಅವರು ಶಂಕರ ಮೊಕಾ ಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಶೈಲಜಾ ಸುರೇಶ್ ಅವರು  ಡಾ. ಎಸ್.ಎಲ್. ಭೈರಪ್ಪ ಅವರ ಗೃಹ ಭಂಗ, ಪ್ರಜ್ಞಾ ಮತ್ತಿಹಳ್ಳಿ ಅವರು ಜಯಂತ್ ಕಾಯ್ಕಿಣಿ ಅವರ ಚಾರ್‌ಮಿನರ್, ಡಿ.ಎನ್.ಗೀತಾ ಅವರು ಗಿರಿಮನೆ ಶ್ಯಾಮರಾವ್ ಅವರ ಒಂದು ಆನೆಯ ಸುತ್ತಾ, ವಿಜಯಾ ಗುರುರಾಜ್ ಅವರು ಭಾಗ್ಯಲಕ್ಷ್ಮೀ ಅವರ ತರಗು, ಸಹನಾ ಪ್ರಸಾದ್ ಅವರು ಬಿ.ಯು. ಗೀತಾ ಅವರ ಕೈಹಿಡಿದು ನಡೆಸೆನ್ನನು,  ಎ. ಎಸ್. ವಸುಂಧರಾ ಅವರು ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಮಧುರಾ ಕರ್ಣಮ್ ಅವರು  ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ,  ಕೃಷ್ಣಬಾಯಿ ಹಾಗಲವಾಡಿ ಅವರು ಕಮಲಾ ಹಂಪನಾ ಅವರ ಬಲಾಕ, ಡಿ. ಯಶೋದಾ ಅವರು ಬೇಬಿ ಹಾಲ್ದಾರ್ ಅವರ  ನೋವು ತುಂಬಿದ ಬದುಕು, ಸುಮಾ ವೀಣಾ ಅವರು ಡಿವಿಜಿ ಅವರ ಅಂತಃಪುರ ಗೀತೆಗಳು, ವಿಭಾ ಪುರೋಹಿತ್ ಅವರು ಕೆಎಸ್ ನರಸಿಂಹಸ್ವಾಮಿ ಅವರ ತೆರೆದ ಬಾಗಿಲು,  ಶಾಂತಲಾ ಸುರೇಶ್ ಅವರು ಸೋನು ಅವರ ಸಂಶಯದ ಬಲೆ, ಎಂ. ವಾಣಿ ಅವರು ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ, ರತ್ನಾ ನಾಗರಾಜ್  ಅವರು ಮಾಣಿಕ್ ಬಂಡೋಪಾಧ್ಯಯ ಅವರ ಪ್ರಿಮಿವಾಲ್ ಮತ್ತು ಇತರ ಕತೆಗಳು, ಅರುಣಾ ಉದಯ ಭಾಸ್ಕರ್ ಅವರು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ,  ಶೈಲಜಾ ಪ್ರಸಾದ್ ಅವರು ನೇಮಿಚಂದ್ರ ಅವರ ಸಾವೇ ಬರುವುದಿದ್ದರೆ ನಾಳೆ ಬಾ,  ಲೇಖಿಕಾ ವೇದಿಕೆಯ ಹಿರಿಯ ಲೇಖಕಿ ಸತ್ಯವತಿ ರಾಮನಾ ಥ್ ಅವರು ಶ್ರೀ ಸಚ್ಚಿದಾನಂದ ಸರಸ್ವತಿ. ಸ್ವಾಮೀಜಿಯವರ  ಗೀತಾ ಶಾಸ್ತ್ರೋಪದೇಶ ಸೋಪಾನ ಪಂಕ್ತಿ, ಇಂದಿರಾ ಶರಣ್ ಜಮ್ಮಲದಿನ್ನಿ ಅವರು ವಿವೇಕ್ ಶಾನ್‌ಬಾಗ್ ಅವರ ಹುಲಿಸವಾರಿ,ಎಲ್.ಎಚ್.ಶಕುಂತಲಾ ಅವರು ಶಿವರಾಮ ಕಾರಂತರ ಅಳಿದ ಮೇಲೆ, ಸುಶೀಲಾ ಸೋಮಶೇಖರ್ ಅವರು ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಕೆ.ಎಸ್. ನರಸಿಂಹಸ್ವಾಮಿ, ಪರಿಣಿತಾ ರವಿ ಅವರು ಎ.ಆರ್. ಮಣಿಕಾಂತ ಅವರ ಅಪ್ಪನೆಂಬ ಆಕಾಶ,ನಾಗರ ತ್ನಾ ಮೂರ್ತಿ ಅವರು ಶತಾವಧಾನಿ ಆರ್. ಗಣೇಶ್ ಅವರ ಧೂಮದೂತ,ವಿನುತಾ ಹಂಚಿನಮನೆ ಅವರು ನೇಮಿಚಂ ದ್ರ ಅವರ ಯಾದ್ ವ ಶೇಮ್,  ಸವಿತಾ ನಾಗೇಶ್ ಅವರು  ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊತ್ತಾದಾಗ ಪುಸ್ತ ಕಗಳನ್ನು ಪರಿಚಯಿಸಿದರು. ಹಿರಿಯ ಲೇಖಕಿಯರ ಅವಲೋಕನ ಐದು ವಾರದ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ವಾರ ಐದು ಹಿರಿಯ ಲೇಖಕಿಯರಾದ ಬಿ.ಯು. ಗೀತಾ, ವನಮಾಲ ಸಂಪನ್ನ ಕುಮಾರ್, ಕಾನ್ಸೆಪ್ಟಾ ಫರ್ನಾಂಡಿಸ್, ಆರ್. ಪೂರ್ಣಿಮಾ ಹಾಗೂ ಶೈಲಜಾ ಸುರೇಶ್ ಅವರು ಅವಲೋಕನ ಮಾಡಿ ದ್ದು ವಿಶೇಷ. ಇದರ ಜೊತೆಗೆ ಪ್ರತಿ ಶುಕ್ರವಾರ ಪುಸ್ತಕ ಪರಿ ಚಯವಾದ ಮೇಲೆ ಒಂದು ವಾರದ ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಶೈಲಜಾ ಸು ರೇಶ್ ಅವರು ವ್ಯಕ್ತಪಡಿಸುತ್ತಿದ್ದರು. ಪುಸ್ತಕದ ಬಗ್ಗೆ ತಿಳಿಸುವಾಗ ಪುಸ್ತಕದ ಕತೆ ಹೇಳುವ ಅವ ಶ್ಯಕತೆ ಇಲ್ಲ, ಕೃತಿಕಾರರ ಶೈಲಿಯ ಬಗ್ಗೆ, ಕತೆಯನ್ನು ಬೆಳೆಸಿ ಕೊಂಡು ಹೋಗುವ ರೀತಿಯನ್ನು ಹೇಳಿದರೆ ಉತ್ತಮ ಎಂ ದು ಲೇಖಕಿ ಬಿ.ಯು. ಗೀತಾ ಅವರು ಸಲಹೆ ನೀಡಿದರು. ಓದು ನಾವು ಕಾಣದ ಪ್ರಪಂಚವನ್ನು ತೆರೆದಿಡುತ್ತದೆ ಹಾಗಾ ಗಿ ಹೆಚ್ಚು ಹೆಚ್ಚು  ಓದಬೇಕು ಎಂದೂ ಅವರು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾ ಲ ಸಂಪನ್ನಕುಮಾರ್ ಅವರು ಪುಸ್ತಕಗಳನ್ನು ಓದುವುದ ರಿಂದ ನಮ್ಮಲ್ಲಿ ಒಂದು ಗಟ್ಟಿತನ ಮೂಡುತ್ತದೆ. ಓದುವು ದರಿಂದ ಬರೆಯುವ ಹಂಬಲವೂ ಉಂಟಾಗುತ್ತದೆ ಎಂದ ರು. ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಪುಸ್ತಕಗಳನ್ನೇ ಪರಿ ಚಯಿಸುವುದು ಸೂಕ್ತ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಹೇಳಿದರು.  ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಪುಸ್ತಕಗಳು ಪರಿಗಣನೆಗೇ ಬರುವುದಿಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವರಿಗಷ್ಟೇ ಗೋಷ್ಟಿಗಳ ಅಧ್ಯಕ್ಷತೆ ಸಿಕ್ಕಿರುತ್ತದೆ. ಹಾಗಾಗಿ ನಮ್ಮದೇ ವೇದಿಕೆ ಇರುವಾಗ ನಾವು ನಮ್ಮದೇ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬಹುದು ಎಂದರು.ಒಂದು ಪುಸ್ತಕ ಓದಿದಾಗ ನಮಗೆ ಸಾಕಷ್ಟು ವಿಷಯ ತಿಳಿಯುತ್ತದೆ. ಆ ವಿಷಯಗಳನ್ನು ಬೇರೆಯ‌ವ ರೊಂದಿಗೆ ಹಂಚಿ ಕೊಂಡಾಗ ನಾವೂ ಕೂಡ ವಿಚಾರಗಳಲ್ಲಿ ಬೆಳೆಯುತ್ತವೆ, ಇನ್ನೊಬ್ಬರ ವಿಚಾರವೂ ತಿಳಿಯುತ್ತದೆ. ಇದು ಕೂಡ ಒಂದು ರೀತಿಯ ಓದು ಬರಹ ಎಂದು ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದವರು ಆರ್. ಪೂರ್ಣಿಮಾ‘ನಾನು ಕೇವಲ ಓದು ಬರಹ ಮಾಡಿ ಕೊಂಡು ಇರುತ್ತೇನೆ’ ಎಂದು ಯಾವ ಲೇಖಕಿಯೂ ಹೇಳ ಲಿಕ್ಕಾಗುವುದಿಲ್ಲ. ಯಾವುದೇ ಪುಸ್ತಕದಲ್ಲಿದ್ದರೂ ಅದು ಹೇಳಬೇಕಾದ ಸಾಮಾಜಿಕ ಸಂದೇಶ ಇರುತ್ತದೆ. ಅದನ್ನು ಗುರುತಿಸಿ, ಚರ್ಚಿಸಬೇಕು. ವಿವಿಧ ಆಯಾಮಗಳನ್ನು ಗಮನಿಸುವಂತಹ ಚರ್ಚಾ ಕಾರ್ಯಕ್ರಮಗಳು ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ದಿನ ಶೈಲಜಾ ಸುರೇಶ್ ಇಡೀ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ನಾವು ಬೆಳೆಯು ವುದರ ಜೊತೆಗೆ ನಮ್ಮ ಜೊತೆ ಇನ್ನಷ್ಟು ಜನರನ್ನು ಬೆಳೆಸು ವ ಆಸೆಯೇ ಈ ಕಾರ್ಯಕ್ರಮಕ್ಕೆ ಕಾರಣ ಎಂದ ಅವರು,  ಅವಕಾಶಗಳನ್ನು ಯಾರೂ ಬಂಗಾರದ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಮಹಿಳೆಯರಂತೂ ಒಂದೊಂದು ಅವಕಾ ಶವನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು.ಹಾಗೆ ಯೇ ನಮ್ಮ ನಮ್ಮ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಕೊಳ್ಳಬೇಕು ಎಂದರು.ಈ ಕಾರ್ಯಕ್ರಮದ ಆಧಾರದ ಮೇಲೆ ಬೆಂಗಳೂರು ಆಕಾಶವಾಣಿ ಸಹ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವುದಾಗಿ ಅವರು ಹೇಳಿದರು. ಲೇಖಿಕಾ ವೇದಿಕೆಯ ಪುಸ್ತಕ ಪರಿಚಯ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಕಷ್ಟು ಲೇಖಕಿಯರು ಇದರ ಸದಸ್ಯತ್ವ ಪಡೆಯಲು ಬಯಸಿದರೆ. ಈ ವೇದಿಕೆಗೆ ಬರಲು ಸಾಕಷ್ಟು ಪುರುಷರು ಸಹ ಆಸಕ್ತಿ ತೋರಿಸಿದ್ದಾರೆ, ಆದರೆ ಇದು ಮಹಿಳೆಯರಿಗಾಗಿ ಮಾತ್ರ ಎಂಬುದನ್ನು ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಪ್ರತಿಯೊಬ್ಬ ಲೇಖಕಿಗೂ ಚಿಕ್ಕಮಗಳೂರಿನಎಂ.ಜೆ. ನಾಗಲಕ್ಷ್ಮಿ ಅವರು ಪ್ರಶಂಸನಾ ಪತ್ರವನ್ನು ಮಾಡಿ ಕೊಟ್ಟಿ ದ್ದಾರೆ. ಇದರ ವಿಶೇಷ ಎಂದರೆ ಪ್ರತಿಯೊಬ್ಬರ ಹೆಸರಿನ ಒಂದೊಂದು ಅಕ್ಷ ರಗಳಿಗೂ ಒಂದೊಂದು ವಾಕ್ಯದ ಅರ್ಥ ವನ್ನು ಬರೆದಿರುವುದು. ತಿಂಗಳಿಗೊಬ್ಬ ಲೇಖಕಿ ಲೇಖಿಕಾ ಸಾಹಿತ್ಯ ವೇದಿಕೆಯ ಒಂದೊಂದು ತಿಂಗಳು ಒಬ್ಬೊಬ್ಬ ಲೇಖಕಿಯನ್ನು ಪರಿಚ ಯಿಸುವ ನನ್ನ ಮೆಚ್ಚಿನ ಲೇಖಕಿ ಎಂಬ ಮತ್ತೊಂದು ಸರಣಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು, ಈ ಮೂಲಕ ಆಗಸ್ಟ್ ತಿಂಗಳಲ್ಲಿ ಅನುಪಮಾ ನಿರಂಜನ,ಸೆಪ್ಟೆಂಬರ್‌ನಲ್ಲಿ ತ್ರಿವೇಣಿ, ಅಕ್ಟೋಬರ್‌ನಲ್ಲಿ ಎಂ.ಕೆ. ಇಂದಿರಾ, ನವೆಂಬರ್‌ ನಲ್ಲಿ ವಾಣಿ… ಹೀಗೆ ತಿಂಗಳಿಗೊಬ್ಬ ಲೇಖಕಿಯ ಬದುಕು- ಬರಹವನ್ನು ವಿವಿಧ ಲೇಖಕಿಯರಿಂದ ಪರಿಚಯಿಸಲಾಗು ವುದು. ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಇದರ ಜೊತೆ ಗೆ ಶೈಲಜಾ ಸುರೇಶ್ ಅವರು  ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಎಂಬ ಮತ್ತೊಂದು ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಸ್ನೇಹಲತಾ ದಿವಾ‌ ಕರ್, ರೂಪಾ ಜೋಷಿ ತಮ್ಮ ಕತೆಗಳನ್ನು ಓದಿದ್ದಾರೆ.ಆಸ ಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹು ದು **********************************************. ಡಿ.ಯಶೋದಾ

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ ಚಂದಕಚರ್ಲ ರಮೇಶ ಬಾಬು ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ ! ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ.  ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ತಾಳಿ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯಗಳ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ. ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿದವರಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೬ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನು ತಲೆ ಎತ್ತಿ  ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ  ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವುಗಳಾಗಿರಲಿಲ್ಲ. ಮತ್ತೂ ಈ ಥರದ ವೇದಂತ ಧೋರಣಿಯನ್ನು ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ. ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು.  ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು.  ನಮಗೆ ಆ ಪ್ರಶ್ನೋತ್ತರದ ತರಬೇತಿ ನೋಡಿಯೇ ಒಂಥರಾ ಕಳವಳ ಪ್ರಾರಂಭವಾಗಿತ್ತು. ಒಳ್ಳೆ ಪರೀಕ್ಷೆಗೆ ತಯಾರಿ ನಡೆಸಿದ ಹಾಗೆ ನಡೆದಿತ್ತು. ನಡುವಿನಲ್ಲಿ ನನ್ನ ಮಗಳ ಅಣಕು ಸಂದರ್ಶನ ಸಹ ನಡೆದಿತ್ತು.   ವೀಸಾ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ  ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ. ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಸರಿಯಾದ ಅಳತೆ, ಅವುಗಳ ಒಂದೊಂದರ ಭಾರ, ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ, ಮತ್ತೆ ಅಮೆರಿಕಾಗೆ ತರಬಾರದ ವಸ್ತುಗಳ ಬಗ್ಗೆ ನಮಗೆ ತಿಳಿಹೇಳುತ್ತಾ ಮಗಳು ಅಳಿಯ ನಮಗೆ  ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು, ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸರ್ತಿ ಸರಿ ನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ನಾವು ಹೈದರಾಬಾದಿನಿಂದ ಹೊರಟು ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು.  ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಹಸಗೊಂಡು ಕೂತು ಅವರು ಯಾವಾಗ ತಿನ್ನಲು ಕೊಡುತ್ತಾರೋ ಎಂದು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು  ಅಲ್ಲಿಯ ವಲಸೆ ಬರುವವರನ್ನು ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನು ಸಹಿಸಿ  ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದ ಕಡೆಗೆ  ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎನಿಸಿತ್ತು. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನು ತಮ್ಮ ಮಕ್ಕಳ ಸಲುವಾಗಿ ತಂದೇ ತರುತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊದೇ ಪೆಟ್ಟಿಗೆಯನ್ನ  ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನು ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದು ಬೆಕ್ಕಿನ ಮರಿಯನ್ನು ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನು ಸಮಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಿಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ. ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ?  ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮ್ಯಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರದಲ್ಲಿ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು. ನನ್ನ ಹೆಂಡತಿ “ ಅಯ್ಯೋ” ಎಂದಳು . “ಪಾಪೀ” ಎನ್ನುವ ಕೂಗು ಅವಳ ಕೊರಳಲ್ಲೇ ಹೂತುಹೋಗಿತ್ತು..  ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನು ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿಯಂತೂ  ಪ್ರಸಾದ ಕಸದ ಬುಟ್ಟಿಗೆ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಹೊಕ್ಕಾಗಿನಿಂದ ಮತ್ತೆ ಹೊರಗೆ ಬರುವವರೆಗೆನ  ಪ್ರಯಾಣ ನಮ್ಮ ಮಾನವ ಜನ್ಮದ ತರಾ. ಮನುಷ್ಯರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸಿರುತ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರುತ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮಪುಣ್ಯ. ಅಥವಾ ಪಾಪ  ಅಂತಿಟ್ಕೊಳ್ಳಿ. ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳ ಮೇಲೆ ಅವರ ನಿಶಿತ ದೃಷ್ಟಿ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಅಷ್ಟು ಬೆಳ್ಳಿ ಸಾಮಾನುಗಳನ್ನ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು, ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ. ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನು ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನು ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ”  ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.                                                 ******************************

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. ಸಾಮಾಜಿಕವಾಗಿ ,ರಾಜಕೀಯವಾಗಿ ,ಆರ್ಥಿಕವಾಗಿ, ಕೌಟುಂಬಿಕವಾಗಿ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ . ಸಾಧನೆ ಮಾಡಿದ ಮಹಿಳೆಯರನ್ನೆಲ್ಲ ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸಾಲು ಸಾಲುಗಳ ಪಟ್ಟಿಯೇ ಸಿಗುತ್ತದೆ. ಸಮಾಜ ಸೇವೆ ಎಂದ ತಕ್ಷಣ ನೆನಪಿಗೆ ಬರುವುದು ಮದರ ತೆರೇಸಾ . ಬಡವರ, ದಲಿತರ ,ಅನಾರೋಗ್ಯ ಮಕ್ಕಳ ಸೇವೆ ಮಾಡುತ್ತಾ ವಿಶ್ವದಲ್ಲೇ ಗುರುತಿಸಿಕೊಂಡವರು. ಹಾಗೆ ಮೊದಲ ಮಹಿಳಾ ಪ್ರಭಾವಿ ರಾಜಕಾರಣಿ ,ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ಇಂದಿರಾಗಾಂಧಿಯವರು , ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಎಲ್ಲಾ ಮಹಿಳೆಯವರಿಗೂ ಸ್ಫೂರ್ತಿದಾಯಕರಾದ ಕಿರಣ ಬೇಡಿಯವರು, ಈ ಸಂದರ್ಭದಲ್ಲಿ ನಾವು ನೆನೆಯಬಹುದು. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮೊದಲ ಮಹಿಳಾ ಭೂ ಸೇನಾ ಅಧಿಕಾರಿ ಮೇ ಪ್ರಿಯಾ ಝಿಂಗಲ್ ,ಮಹಿಳಾ ನ್ಯಾಯಾಧೀಶರು ಫಾತಿಮಾ ಬೀವಿ ಹೀಗೆ ಮಹಿಳೆಯರ ಕೊಡುಗೆ ಅಳತೆ ಮಾಡಲು ಸಾಧ್ಯವಿಲ್ಲ. ಹಿಂದಿನ ಕಾಲ ಘಟ್ಟವನ್ನು ಪರಿಗಣಿಸಿದರೆ ಕೆಳದಿ ಚೆನ್ನಮ್ಮ ,ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿ ರಾಜ್ಯ ,ದೇಶವೆಂದು ಹೋರಾಟ ನಡೆಸಿದ ಛಲಗಾರ್ತಿಯರು. ಇವರೆಲ್ಲ ತಮ್ಮನ್ನು ತಾವೇ ಜನಸೇವೆಗೆ ಒಪ್ಪಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾದವರು . ಮಹಿಳೆಯರ ಸಾಧನೆ ಹೀಗಿರಲು ನೂರು ವರ್ಷಗಳು ಕಳೆದರೂ ಒಂದು ಮಹಿಳೆಯು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ . ವಚನಕಾರ್ತಿಯರು ವಚನಗಳ ಮೂಲಕ ತಮ್ಮ ಸೇವೆಯನ್ನು ಅಕ್ಷರ ಲೋಕಕ್ಕೆ ನೀಡುತ್ತಾ ಬಂದಿದ್ದಾರೆ . ಅವುರುಗಳಲ್ಲಿ ಅಕ್ಕಮ್ಮ ,ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮರನ್ನು ನೋಡಬಹುದು. ಇಂದು ಗೀತಾ ನಾಗಭೂಷಣ್, ಡಾಕ್ಟರ್ ಅನುಪಮ ನಿರಂಜನ, ಎಂ.ಕೆ ಇಂದಿರಾ, ತ್ರಿವೇಣಿ , ವೈದೇಹಿ ಡಾಕ್ಟರ್ ಅನುಪಮಾ ಇವರೆಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದ್ದದು.ಏನೇ ಇರಲಿ ಯಾವುದೇ ಲಿಂಗ, ಮತ , ಜಾತಿ , ಧರ್ಮ, ಇನ್ನಿತರ ಪಂಗಡಕ್ಕೆ ಜೋತು ಬೀಳದೆ ಸಶಕ್ತವೆನಿಸಿದ ಮಹಿಳೆಯೊಬ್ಬಳು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ನಾವೆಲ್ಲ ಒಂದೇ ಮನಸ್ಸಿನಿಂದ ಪಣತೊಡಬೇಕು. ************************ ಎಂ.ಜಿ.ತಿಲೋತ್ತಮೆ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಡಾ. ಅಜಿತ್ ಹರೀಶಿ ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ. ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ! ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ ದಿನಮಾನಗಳಲ್ಲಿದೆ. ಅದು ಇವತ್ತಿನ ಕಾಲಘಟ್ಟದಲ್ಲಿ ಸಹಜ ಕೂಡ. ಒಂದು ಕ್ಷಣ ಮೈಮರೆತರೂ ಮೋಸ ನಿಶ್ಚಿತ. ಕೆಲವರು ಹಿಡನ್ ಅಜೆಂಡಾ ಹಿಡಿದು ಬಂದು ತಮ್ಮದನ್ನು ಸಾಧಿಸಿಕೊಂಡು ಮರೆಯಾಗುವವರು. ಇದೆಲ್ಲವನ್ನು ಗಮನಿಸಿದರೆ, ಮಹಿಳಾ ಅಧ್ಯಕ್ಷೆ ಅಂತ ಹೊರಟು, ಅದು ಬಲವಾಗುತ್ತಿದ್ದಂತೆ – ಜಾತಿ, ಧರ್ಮಗಳ ಮೇಲೆ ಒಡಕನ್ನು ತೋರಲೂಬಹುದು. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಇಲ್ಲಿ ಚುನಾವಣೆ ಬೇಡ ಎಂದು ಹೇಳುವುದು ತಪ್ಪಾದೀತು. ಯೋಗ್ಯರು ಎಂಬ ಪ್ರಶ್ನೆ ಬಂದಾಗ ತಕ್ಕಡಿ ಅವರವರದೇ ಆದೀತು. ಹಾಗಾಗಿ ಈಗಿನ ವ್ಯವಸ್ಥೆಯಲ್ಲಿ ಇರುವ ಲೇಖಕಿಯರ ಸಂಘ ಇತ್ಯಾದಿ ಸಂಸ್ಥೆಗಳು, ಸಂಘಟನೆಗಳು ಒಂದೆಡೆ ಕುಳಿತು ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಒಳಿತು. ಅದನ್ನು ಒಪ್ಪದವರಿಗೆ ಚುನಾವಣೆಯಂತೂ ಇದ್ದೇ ಇದೆ. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ ಬಹಳ ಹೋರಾಟಗಳು ಹೈಜಾಕ್ ಆಗಿವೆ. ಅದು ಇಲ್ಲಿ ಆಗದಿರಲಿ. ಇಲ್ಲಿ ಮತದಾರರು ಮುಖ್ಯರಾಗುವುದರಿಂದ ಸಂಘಟನೆಯ ಶಕ್ತಿಯಿರುವ ಮಹಿಳಾ ಸಾಹಿತಿಯೋರ್ವರನ್ನು ಸರ್ವಾನುಮತದಿಂದ ಕಸಾಪದ ಬಹುತೇಕ ಮುಂಚೂಣಿಯಲ್ಲಿರುವ ಮಹಿಳೆಯರು, ಹಿರಿಯರು ಅಭ್ಯರ್ಥಿ ಎಂದು ನಿರ್ಧರಿಸಲಿ. ಒಮ್ಮೆ ಒಮ್ಮತ ಮೂಡಿದರೆ ಮುಂದಿನ ಕೆಲಸ ಸುಲಭ. ಇದು ಕೇವಲ ರಾಜಕೀಯ ಉದ್ದೇಶವನ್ನು ಹೊಂದಿದ್ದರೆ, ಕೆಲವೇ ಜನರ ಪಾಲ್ಗೊಳ್ಳುವಿಕೆ ಇದ್ರೆ ಅಭ್ಯರ್ಥಿತನಕ್ಕೆ ಮೊದಲೇ ಮಕಾಡೆ ಮಲಗುತ್ತದೆ ಎಂಬುದು ನೆನಪಿರಲಿ. ಇನ್ನು ಹಿಂದೆ ಮಹಿಳಾ ಅಧ್ಯಕ್ಷರು ಇರಲಿಲ್ಲ ಎಂಬುದರ ಕುರಿತು ಹೇಳಬೇಕಾದರೆ – ಮೊದಲು ಸ್ಪಷ್ಟ ತಯಾರಿಯೊಂದಿಗೆ ಕಣಕ್ಕಿಳಿಯುವುದು ಮುಖ್ಯವಾಗುತ್ತದೆ. ಕಸಾಪದ ಮತದಾರರು ಪ್ರಬುದ್ಧರಿದ್ದಾರೆ. ಯೋಗ್ಯ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾದರೆ ಎಲ್ಲರಿಗೂ ಖುಷಿ. ವಿವಾದಿತರು ಅಭ್ಯರ್ಥಿಯಾದರೆ ಕೆಸರೆರಚಾಟ ಮತ್ತು ಚುನಾವಣೆ ನಿಶ್ಚಿತ. ಅಂತಹ ವಾತಾವರಣ ನಿರ್ಮಾಣವಾಗದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಉತ್ತಮ ಮಹಿಳಾ ಸಾಹಿತಿ ಕಸಾಪದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿ ಮತ್ತು ಅದಕ್ಕೆ ಶೋಭೆ ತರಲಿ ಎನ್ನುವುದು ಈ ಹೊತ್ತಿನ ಆಶಯ. ಡಾ. ಅಜಿತ್ ಹರೀಶಿ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ಹೆಣ್ಣು ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ , ಅಡುಗೆ ಮನೆ ಸೌಟು ಹಿಡಿದಿರಬಹುದಾದ ಹೆಣ್ಣು ತಾಯಿಯಾಗಿ ,ಸೋದರಿಯಾಗಿ ಪತ್ನಿಯಾಗಿ ಸಂಸಾರದ ಕಣ್ಣಾಗಿದ್ದಾಳೆ ,ಸಮಾಜದ ಎಲ್ಲ ರಂಗಗಳಲ್ಲಿ ಸಕ್ರಿಯಳಾಗಿ ಸೈ  ಎನಿಸಿಕೊಂಡಿರುವ ಆಕೆ ವೈದ್ಯಳಾಗಿ .ಯೋಧಳಾಗಿ .ಪ್ರಧಾನಿಯಾಗಿ,ರಾಷ್ಟ್ರಪತಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾಳೆ . ಅಲ್ಲದೆ ಪುರುಷರಿಗೆ ಸಮನಾಗಿ ಎಲ್ಲ ಸ್ತರಗಳಲ್ಲಿ ಕಾರ್ಯವೆಸಗುವುದರಲ್ಲಿ ಯಶಸ್ವಿಯಾಗಿದ್ದಾಳೆ. ಸಾಹಿತ್ಯಮತ್ತು ಸಂಸ್ಕಾರಕ್ಕೆ ಅವಳ ಕೊಡುಗೆ ಅಪಾರ,  ಹೆಣ್ಣು ಸಮಾಜದ ಕಣ್ಣು .   ಆದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಏಕೊ ಏನೋ ಆಕೆಯನ್ನು ತನ್ನ ಅಧ್ಯಕ್ಷೆಯನ್ನಾಗಿ ಸ್ವೀಕರಿಸಿಲ್ಲ.ಈ ಸಂಸ್ಥೆಯಲ್ಲಿ ಪುರುಷರದ್ದೇ ಪಾರಮ್ಯ.ಈವರೆಗೆ ಕನ್ನಡ ಸಾಹಿತ್ಯ ಪರಿಷತ್ ಗದ್ದಿಗೆ ಹಿಡಿದು ಮುನ್ನಡೆಸಿರುವ ಎಲ್ಲರೂ ಪುರುಷರೇ.    1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ದೂರದೃಷ್ಟಿ ಹಾಗೂ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ.ಅಭಿಮಾನದಿಂದಾಗಿ ಪ್ರಾರಂಭಗೊಂಡ ಈ ಸಂಸ್ಥೆ ,25 ಅಧ್ಯಕ್ಷರ ಆಡಳಿತದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದೆ .ಕ.ಸಾಪ ಅಧ್ಯಕ್ಷರಾಗಿ ಸಾಹಿತಿಗಳೇ ಮೇಲುಗೈ ಸಾಧಿಸಿದ್ದರೂ ಇತ್ತೀಚೆಗೆ ಹೊಟೆಲ್ ಉದ್ಯಮಿ.ಬ್ಯಾಂಕ್ ಉದ್ಯಮಿ ,ಹಾಗೂ ಆಡಳಿತ ಅನುಭವಿಗಳೂ ಸಾರಥ್ಯವಹಿಸಿದ್ದಾರೆ . ಪ್ರಾರಂಭದಿಂದ 2008 ರವರೆಗೆ ಸರ್ಕಾರದ  ಅನುದಾನವಿಲ್ಲದೆ ನೌಕರರಿಗೆ ಸಂಬಳಕೊಡಲೂ ಸಾಧ್ಯವಾಗದ ಕ.ಸಾ.ಪ ಸಮ್ಮೇಳನಗಳನ್ನು ಸಾರ್ವಜನಿಕರ ವಂತಿಗೆಯಿಂದ ನಡೆಸಬೇಕಾದ ಪರಿಸ್ಥಿತಿ ಇದ್ದಿತು .ಆದರೆ 2008 ರಿಂದ 2012 ರವರೆಗೆ ಕಾರ್ಯನಿರ್ವಹಿದ ಸಮಿತಿ ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ,ಎಸ್ ಯಡಿಯೂರಪ್ಪನವರನ್ನುಸಂಪರ್ಕಿಸಿ ಬೇಡಿಕೆ ಇಟ್ಟಾಗ ಬಡ್ಜೆಟ್ ತಯಾರಿಸುವಂತೆ  ತಿಳಿಸಿದರಲ್ಲದೆ ಕನ್ನಡ ಕಟ್ಟುವುದು ನನ್ನ ಆದ್ಯ ಕರ್ತವ್ಯವೆಂದು ಅನುದಾನ ಬಿಡುಗಡೆ ಮಾಡಿದರಲ್ಲದೆ ಕ.ಸಾ.ಪದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರನ್ನೂ ಖಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿಸಿದರು ,ಇದರಿಂದಾಗಿ ಸಮಿತಿಯ ತೀರ್ಮಾನದಂತೆ ತಾಲ್ಲೂಕು ಸಮ್ಮೇಳನಕ್ಕೆ ಒಂದು ಲಕ್ಷ .,ಎರಡು ದಿನದ ಜಿಲ್ಲಾ ಸಮ್ಮೇಳನಕ್ಕೆ ಐದು ಲಕ್ಷ ಮತ್ತು ಮೂರು ದಿವಸಗಳ ರಾಜ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ ಎಂದು ಅನುದಾನ ಪಡೆಯಲಾಯಿತು ಆ ಅವಧಿಯಲ್ಲಿ ನಾಲ್ಕು ರಾಜ್ಯ ಸಮ್ಮೇಳನಳು ,ಹಲವಾರು ಜಿಲ್ಲಾ ,ತಾಲ್ಲೂಕು ಸಮ್ಮೇಳನಗಳು ನಡೆದವು .ಆ ನಂತರ ಆಡಳಿತ ಗದ್ದುಗೆಗೇರಿದ ಬ್ಯಾಂಕ್ ಉದ್ಯಮಿ ಸರ್ಕಾರದ ಮನವೊಲಿಸಿ ಪ್ರತಿ ಸಮ್ಮೇಳನಕ್ಕೆ ಐದು ಕೋಟಿಗೂ ಹೆಚ್ಚು ಅನುದಾನದಿಂದ ಸಮ್ಮೇಳನ ನಡೆಸಿದರು .ನಂತರ ಆಯ್ಕೆಯಾಗಿ ಬಂದ ನಿವೃತ್ತ ಐ.ಎಎಸ್ ಅಧಿಕಾರಿ ಪ್ರತೀ ಸಮ್ಮೇಳನಕ್ಕೆ 10ಕೋಟಿಗೂ ಹೆಚ್ಚು ಹಣವನ್ನು ಪಡೆದು ಸಮ್ಮೇಳನ ನಡೆಸಿದುದು ನಮ್ಮ ಕಣ್ಣೆದುರು ಇದೆ .ಸರ್ಕಾರದ ಅನುದಾನವಲ್ಲದೆ ಸ್ಥಳೀಯ ದಾನಿಗಳು,ಸಂಘ ಸಂಸ್ಥೆಗಳು ಸರ್ಕಾರಿ ನೌಕಲರ ದೇಣಿಗೆ ಅಲ್ಲದೆ ಸ್ವಯಂಸೇವಕರ ಉಚಿತ ಸೇವೆ ಪಡೆದು ಸಮ್ಮೇಳನಗಳನ್ನು ನಡೆಸಲಾಗಿದೆ.ಕೇವಲ ಮೂರು ದಿವಸಗಳ ಸಮ್ಮೇಳನಕ್ಕೆ 15- 20 ಕೋಟಿಗಳ ದುಂದು ವೆಚ್ಚಮಾಡಲಾಗುತ್ತಿದೆ .ಈ ಬಗೆಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಬೇಕಾಗಿದೆ ,   ಅಧಿಕಾರ ಲಾಲಸೆ ಹಾಗೂ ಆಂತರಿಕ ಆಕಾಂಕ್ಷೆಗಳಿಂದಾಗಿ ದೀರ್ಘ ಕಾಲದಿಂದ ಬದಲಾಯಿಸದೆ ಉಳಿಸಿಕೊಂಡು ಬಂದಿದ್ದ ಮೂರು ವರ್ಷಗಳ ಅವದಿಯನ್ನು ಐದು ವರ್ಷಗಳ ಅವದಿಗೆ ವಿಸ್ತರಿಸಲಾಗಿದೆ .ಮುಂದಿನ ಚುನಾವಣೆಯ ನಂತರ ಈ ಅವಧಿ ಕಡಿಮೆ ಆಗುವ ಸಾಧ್ಯತೆ ಇದೆ.  ಕ,ಸಾ.ಪ,ಇಂದು ಒಂದೂವರೆ ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಒಳಗೊಂಡಿದೆ ..ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎಲ್ಲ ಸದಸ್ಯರನ್ನು ಖುದ್ದಾಗಿ ಭೇಟಿಯಾಗಿ ಮತ ಯಾಚನೆ ಮಾಡಲು ಸಾಧ್ಯವಾಗಲಾರದು,ಆದರೆ ಮನವಿಯನ್ನಾದರೂ ಮಾಡಿಕೊಳ್ಳಲೇ ಬೇಕು .ಮನವಿಪತ್ರ ಮುದ್ರಣ,ಅಂಚೆ ವೆಚ್ಚ ಇತ್ಯಾಧಿಗಳಿಗಾಗಿ ಕನಿಷ್ಟ ಒಂದು ಕೋಟಿ ರೂ.ಬೇಕಾಗಬಹುದು ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರಕ್ಕಾದರೂ ಭೇಟಿ ನೀಡಿ ಮನವಿ ಮಾಡಿಕೊಳ್ಳಬೇಕು.ಹತ್ತಾರು ಕಾರುಗಳನ್ನು ಬಾಡಿಗೆ ಹಿಡಿದು ರಾಜಕಾರಿಣಿಗಳಂತೆ ಮತಯಾಚನೆಗೆ ಕಳುಹಿಸಬೇಕು.ಜಿಲ್ಲಾಧ್ಯಕ್ಷರ ಚುನಾವಣೆ ಸಹ ಏಕ ಕಾಲದಲ್ಲಿ ನಡೆಯುವುದರಿಂದ ಅವರ ಸಹಕಾರ ಅಗತ್ಯ.ಕ.ಸಾಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವನು ಪ್ಲತಿಯೊಬ್ಬ ಸದಸ್ಯನ ಓಟನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುವುದರಿಂದ ಚುನಾವಣಾ ವೆಚ್ಚ ಹೆಚ್ಚಾಗುತ್ತದೆ . ವಿಧಾನ ಸಭೆ.ಮತ್ತು ಸಂಸತ್ ಚುನಾವಣೆಗಳಂತೆಯೇ ಬಿರುಸಿನಿಂದ ನಡೆಯುವ ಚುನಾವಣೆಯಲ್ಲಿ ಸ್ತ್ರೀಯರು ಭಾಗವಹಿಸಲು ಹಿಂಜರಿಯುತ್ತಿದ್ದಾರೆ.ವಹಿಳೆಯರು ನಾಲ್ಕು ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ .ಆದರೆ ಕ.ಸಾ.ಪ.ಅಧ್ಯಕ್ಷರಾಗಲು ಮುಂದೆ ಬರಲು ಸಾಧ್ಯವಾಗದಿರುವುದಕ್ಕೆ ಇವುಗಳು ಕಾರಣಗಳಾಗಿವೆ .ವಾಸ್ತವವಾಗಿ ಮಹಿಳೆಯರು ಅದ್ಯಕ್ಷರಾದರೆ ಸಾಹಿತ್ಯ ಪರಿಷತ್ತು ಮತ್ತಷ್ಟು ಸದೃಢವಾಗಬಹುದು ,ಆದರೆ ಅವರೊಟ್ಟಿಗೆ ಪ್ರಾಮಾಣಿಕವಾಗಿ ದುಡಿಯುವ ಸಾಹಿತ್ಯ ,ಸಂಸ್ಕೃತಿಯ ಅರಿವಿರುವ ಪುರುಷರ ಪ್ರವೇಶ ಅಗತ್ಯವಾಗಬಹುದು .ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ .ಧೈರ್ಯ.ಸ್ಥೈರ್ಯಗಳೊಂದಿಗೆ  ಗುರಿಯೂ ಇರಬೇಕಾಗುತ್ತದೆ . ಬದಲಾವಣೆಯನ್ನು ಬಯಸುವ ಸಾವಿರಾರು ಸಾಹಿತ್ಯಾಸಕ್ತರು ಸಾಹಿತ್ತಾಭಿಮಾನಿಗಳೂ ಆಜೀವ ಸದಸ್ಯರಿರುವುದರಿಂದ ಮಹಿಳೆಯರು ಸಂಘಟಿತರಾಗಿ  ಆಸಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಬೇಕಾಗಿದೆ . *************************** ಹೆಚ್,ಚಂದ್ರಪ್ಪ

ಮಹಿಳಾ ಅಧ್ಯಕ್ಷರು ಯಾಕಿಲ್ಲ… !

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915 ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಆಗಿನ ಮೈಸೂರಿನ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಲನೆಗೊಂಡಿತು. ನಂತರ 1938 ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿತು. ಉದ್ದೇಶ : ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು -ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಇದು ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹರಡಲು ಸಾಧ್ಯವಾಗಿದೆ. ಇದರ ಮೂಲ ಆಶಯ ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ ದನಿಯಾಗುವ ಹಂಬಲ. ನಂತರದಲ್ಲಿ ಈ ಆಶಯವನ್ಹೊತ್ತು ರೂಪುಗೊಂಡ ಸಂಸ್ಥೆಗಳು ಸಂಸ್ಕೃತಿ ಇಲಾಖೆ, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ… ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ಇಂದಿಗೂ ಪ್ರಸ್ತುತ. ಇಂತಹ ಮಹೋನ್ನತ ಗುರಿಯನ್ನಿಟ್ಟುಕೊಂಡು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರು ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವೇ ಸರಿ. ಇದರೊಂದಿಗೆ ಈ ನೂರು ವರ್ಷಗಳ ಇತಿಹಾಸದಲ್ಲೇ ಒಮ್ಮೆಯೂ ಮಹಿಳೆಯೊಬ್ಬಳು ಕ. ಸಾ. ಪ. ದ ಅಧ್ಯಕ್ಷರಾಗಿಲ್ಲವೆಂಬುದು ಕೂಡ ಅಷ್ಟೇ ವಿಷಾದನೀಯ ಸಂಗತಿಯೂ ಹೌದು. ಪ್ರತಿಭೆ, ಸೇವೆಗಳ ವಿಷಯದಲ್ಲಿ ಗಂಡು- ಹೆಣ್ಣುಎಂಬ ಭೇದವಿರದು. ಹೆಣ್ಣೊಬ್ಬಳು ನಾಲ್ಕು ಗೋಡೆಯೊಳಗಿನಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿರುವ ಈ ಯುಗದಲ್ಲಿ ನಮ್ಮ ನಾಡು -ನುಡಿ -ಸಂಸ್ಕೃತಿಯ ದಣಿಯಾಗಲೆಂದೇ ಸ್ಥಾಪಿತವಾಗಿರುವ ಕ. ಸಾ. ಪ. ದ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾಕೆ ಓರ್ವ ಮಹಿಳಾ ಅಭ್ಯರ್ಥಿಯೂ ಅಧ್ಯಕ್ಷರಾಗಿಲ್ಲ ಎಂಬುದು ಈಗ ಅವಶ್ಯವಾಗಿ ತರ್ಕಿಸಲೇಬೇಕಾದ ವಿಷಯ. ಹಲವು ಆಯಾಮಗಳಲ್ಲಿ ಕಾರಣಗಳನ್ನು ಹುಡುಕುತ್ತಾ ಹೊರಟರೆ ಕೆಲವು ನಮ್ಮ ಕಣ್ಣಿಗೆ ಗೋಚರಿಸಬಹುದು.. ಆದರೆ ಗೋಚರವಾಗದೆ ಉಳಿದಿರುವ, ಉಳಿಯುವ ಕಾರಣಗಳೂ ಹಲವು ಸಿಗಬಹುದು. ನಾವು ಒಮ್ಮೆ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಗಂಡಿನಷ್ಟೇ ಹೆಣ್ಣು ಕೂಡ ರಾಜಕೀಯವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಜ್ಞಾನಾತ್ಮಕವಾಗಿ, ವೈಜ್ಞಾನಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮವಾಗಿ ನಿಲ್ಲಬಲ್ಲಳು. ಅವಳಲ್ಲಿ ಸಂಘಟನಾ ಸಾಮರ್ಥ್ಯ ಹುಟ್ಟಿನಿಂದಲೇ ಬಂದ ಬಳುವಳಿ. ಮಾನವ ಸಂಘಜೀವಿ. ಪ್ರತಿ ಕುಟುಂಬದ ಹೆಣ್ಣುಮಗಳು ಕೂಡ ಒಬ್ಬ ಸಮರ್ಥ ಸಂಘಟಕಿಯಾಗಿರುತ್ತಾಳೆ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ. ಕಾರಣ ಒಂದು ಕುಟುಂಬದ ಸರ್ವಸದಸ್ಯರನ್ನು ನಿಯಂತ್ರಿಸುವ ಕಲೆ ಅವಳಿಗೆ ಸಿದ್ದಿಸಿರುತ್ತದೆ. ಇದರ ಜೊತೆಗೆ ಬಂಧು -ಬಳಗ, ನೆಂಟರಿಸ್ಟರು, ವೃತ್ತಿ, ಸಮಾಜ, ಸಮುದಾಯ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಹಿಳೆ ಎಲ್ಲಾ ವಲಯದಲ್ಲೂ ಪುರುಷರಿಗೆ ಸರಿಸಳಾಗಿಯೇ ಕೆಲಸ ನಿರ್ವಹಿಸಬಲ್ಲಳು. ಆದರೆ ಇದುವರೆಗಿನ ಅಧ್ಯಕ್ಷ ಸ್ಥಾನವನ್ನು ಇಂತಹ ಪ್ರಬುದ್ಧರ ಕ್ಷೇತ್ರದಲ್ಲೇ ಯಾವ ಮಹಿಳೆಯೂ ಏರಿಲ್ಲವೆಂಬುದಕ್ಕೆ ಸಾಧ್ಯತೆಗಳು ಏನಿರಬಹುದೆಂಬುದನ್ನು ಮನಗಂಡು ಕನ್ನಡದ ಸಾಹಿತಿಗಳು, ಕನ್ನಡಪರ ಮಹಿಳಾ ಸಂಘಟನೆಗಳೆಲ್ಲವೂ ಒಗ್ಗೂಡಿ ಚಿಂತನ -ಮಂಥನಗಳ ಮೂಲಕ ಸುಧಾರಿಸಿಕೊಳ್ಳುವ ತುರ್ತು ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಂತ ಲೇಖಕರಿರುವಂತೆಯೇ ಲೇಖಕಿಯರು ಕೂಡ ಇದ್ದಾರೆ.. ಹಲವಾರು ಮಹಿಳಾ ಸಂಘಟನೆಗಳು ಕೂಡ ಮುಂಚೂಣಿಯಲ್ಲಿವೆ. ಆದರೂ ಯಾಕೆ ಮಹಿಳೆಯರು ಅಧ್ಯಕ್ಷಗಿರಿಗೆ ಏರಲು ಸಾಧ್ಯವಾಗಿಲ್ಲ, ಆಕಾಂಕ್ಷಿಗಳ ಕೊರತೆಯೇ, ಒತ್ತಡಗಳ ಕಾರಣವೇ, ರಾಜಕೀಯ ಲಾಭಿಯ ಗೊಂದಲಗಳೇ, ಇಂದಿಗೂ ಲಿಂಗ ಅಸಮಾನತೆಯನ್ನು ಬಿಂಬಿಸುತ್ತಿದೆಯೇ, ಸಾಮಾಜಿಕ ಪರಿಸ್ಥಿತಿಗಳ ಕಾರಣವೇ? ಅಷ್ಟಕ್ಕೂ ಅಧ್ಯಕ್ಷ ಪದವಿಗೆ ಬೇಕಿರುವುದು ನಾಡು – ನುಡಿ – ಸಂಸ್ಕೃತಿಯನ್ನು ಕಟ್ಟಿ, ಬೆಳೆಸಿ, ಪೋಷಿಸುವಂತಹ ಒಬ್ಬ ಪ್ರಾಮಾಣಿಕ ಸಮರ್ಥರು ಸಾಕಲ್ಲವೇ.. ಅವರು ಗಂಡಾಗಲಿ, ಹೆಣ್ಣಾಗಲಿ… ಆಯ್ಕೆ ಸೂಕ್ತವಾಗಿರಬೇಕು. ಇದುವರೆಗೆ ಈ ಸ್ಥಾನವನ್ನು ನಿಭಾಯಿಸುವ ಒಬ್ಬ ಮಹಿಳೆಯೂ ಸಿಕ್ಕಿಲ್ಲವೇ ಎಂಬುದು ಮಾತ್ರ ಅಚ್ಚರಿ.. ರಾಜಕೀಯದಿಂದ ಹಿಡಿದು ಬಾಹ್ಯಾಕಾಶದವರೆಗೆ ಪುರುಷರ ಸಮಕ್ಕೆ ಹೆಜ್ಜೆ ಹಾಕಿದ ಮಹಿಳೆಗೆ ಕ. ಸಾ. ಪ. ದ ಅಧ್ಯಕ್ಷಗಿರಿ ಕಷ್ಟವೇ? ಅಥವಾ ಬೆವರು, ಸೇವೆಗಳಿಗೂ ಸಾಮಾಜಿಕ ಪಿಡುಗುಗಳ ಸ್ಪರ್ಶ ತಾಕಿ ಇಂಥದ್ದೊಂದು ಪರಿಸ್ಥಿತಿ ಬಂದೊದಗಿದೆಯೇ? ಇಂತಹ ನೂರಾರು ಪ್ರಶ್ನೆಗಳಿಗೆ ಪರಿಹಾರ ದೊರಕಿ ಎಲ್ಲಾ ಕನ್ನಡದ ಸಾಹಿತಿಗಳು, ಕನ್ನಡಪರ ಮತ್ತು ಮಹಿಳಾ ಸಂಘಟನೆಗಳು ಎಚ್ಛೆತ್ತುಕೊಂಡು ಮುಂದಾದರೂ ಅಧ್ಯಕ್ಷ ಸ್ಥಾನವು ಮಹಿಳೆಯರಿಂದ ಅಲಂಕರಿಸುವುದೇ.. ಕಾದು ನೋಡಬೇಕಿದೆ. ********************* ತೇಜೋವತಿ.ಹೆಚ್.ಡಿ.

ಕಸಾಪಗೆಮಹಿಳಾ ಅಧ್ಯಕ್ಷರು

ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಮಾತನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ ಕಲೆ ಇತ್ಯಾದಿಗಳು ಹೆಣ್ಣಿನ ಮನದಲ್ಲಿ ನೈಜವಾಗಿ ಹಾಸು ಹೊಕ್ಕಾಗಿರುತ್ತೆ. ಆದರೆ ಎಷ್ಷ್ಟೊ ಸಲ ಮಹಿಳೆ ತನ್ನ ಸಂಸಾರದ ಜವಾಬ್ದ್ದಾರಿ, ಇತರೆ ಕರ್ತವ್ಯಗಳಲ್ಲಿ ತನ್ನ ಪ್ರತಿಭೆಗೆ ಬೆನ್ನು ತೋರಿಸಿದ್ದೂ ಕಾಣುತ್ತೆವೆ. ಕಣ್ಣಿಗೆ ಕಾಣಿಸುವ ತನ್ಮ ಕೆಲಸ, ಮನೆಯವರನ್ನೆಲ್ಲ ತನ್ನ ಕರ್ತವ್ಯ ದಲ್ಲಿ ಚ್ಯುತಿ ಬರದಂತೆ, ಸಹನೆಯಿಂದ ದುಡಿಯುವದೊಂದೆ ತನ್ನ ಕಾಯಕ‌ ‌ಎಂದು ಕೊಂಡ ಮಹಿಳೆ ಈಗ ತನ್ನತನವನ್ನು‌ ಅರಿತು ಕಪ್ಪೆಚಿಪ್ಪಿನಿಂದ ಹೊರಬಂದು ಸಾಧನೆ ಮಾಡಿರುವದನ್ನು‌ ಕಾಣುತ್ತಾ ಜಗತ್ತಿನ ಬದಲಾವಣೆ ಗಮನಿಸುವಂತಾಗುದೆ. ಸೂಕ್ತ ಆಸಕ್ತಿ ಇದ್ದ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತರೆ ಯಾವದೇ ರಾಜಕೀಯ ಹಿತಾಸಕ್ತಿ, ವೈಯಕ್ತಿಕ ವೈಭವ , ಇರದೇ ಕೆಲಸ ಮಾಡಬಹುದಾಗಿದೆ ಸಾಹಿತ್ಯ ದ ಒಲುಮೆ ಇರುವ ನಿಜವಾದ ಅಕ್ಷರಸ್ಥ ಮಹಿಳೆಯನ್ನು ಈ ಸಾಹಿತ್ತ ಪರಿಷತ್ತಿನ ಅಧ್ಯಕ್ಷರಾಗಿ ಆರಿಸಿದರೆ ಮಹಿಳೆ ಕೂಡ ತನ್ನಲ್ಲಿ ರಕ್ತಗತವಾದ ಕಲಾಭಿಮಾನಿಯಾಗಿ, ಇತರರನ್ನೂ ಕಲೆಗೆ ಸೇರ್ಪಡಿಸಿ ಸಾಹಿತ್ಯ ವನ್ನು ಉತ್ತುಂಗಕ್ಕೆ ಏರಿಸಬಲ್ಲಳ ********************** ಡಾ.ವಿಜಯಲಕ್ಷ್ಮಿ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ತೊಟ್ಟಿಲು ತೂಗುವ ಕೈ ಜಗತ್ತನ್ನೂ ತೂಗಿದೆ. ದೇಶವನ್ನೂ ಆಳಿದೆ.ಸೌಟು ಹಿಡಿದ ಕೈ ಲೇಖನಿಯನ್ನೂ ಸಮರ್ಥವಾಗಿ ಬಳಸಿದೆ . ಅಡುಗೆ ಮನೆಯನ್ನು ಸಂಭಾಳಿಸುವ ಮಹಿಳೆ ಕನ್ನಡ ಸಾಹಿತ್ಯ ಪರಿಷತ್ತನ್ನು ನಿಭಾಯಿಸಲಾರಳೇ? ನಾನಿಲ್ಲಿ ಪುರುಷರು ಸರ್ವಾಧಿಕಾರಿಯಾಗಿದ್ದಾರೆ ಎಂದಾಗಲಿ, ಮಹಿಳೆಯರನ್ನು ತುಳಿದಿದ್ದಾರೆಂದಾಗಲಿ ಹೇಳುತ್ತಿಲ್ಲ. ಅಸಲಿಗೆ, ಮಹಿಳೆಯರೇ ಮನಸ್ಸು ಮಾಡಿರಲಿಕ್ಕಿಲ್ಲ ಎಂದು ಅನಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರರ ಮೇಲೆ ಆರು ವರುಷಗಳಾದರೂ ಇದುವರೆಗೆ ಅಧ್ಯಕ್ಷ ಸ್ಥಾನವನ್ನು ಒಬ್ಬ ಮಹಿಳೆ ವಹಿಸಿಲ್ಲ ಎನ್ನುವುದರ ಹಿಂದೆ ಪುರುಷರಿಗಿಂತ ಮಹಿಳೆಯರದೇ ಹೆಚ್ಚಿನ ಪಾಲಿದೆ. ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1974 ರಲ್ಲಿ ಜಯದೇವಿ ತಾಯಿ ಲಿಗಾಡೆ, 2000 ದಲ್ಲಿ ಶಾಂತಾದೇವಿ ಮಾಳವಾಡ, 2003 ರಲ್ಲಿ ಕಮಲಾ ಹಂಪನಾ, 2010 ರಲ್ಲಿ ಗೀತಾ ನಾಗಭೂಷಣ ವಹಿಸಿಕೊಂಡಿರುವುದು ಬಿಟ್ಟರೆ ಇನ್ನು ಉಳಿದ ಯಾವ ವರ್ಷವೂ ಮಹಿಳೆಯರ ಆಧ್ಯಕ್ಷತೆ ಇಲ್ಲ. 1915 ರಿಂದ 1940 ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.ಕಸಾಪ ಚುನಾವಣೆಗಳಲ್ಲಿ ಮಹಿಳೆಯರು ಯಾಕೆ ಪ್ರಬಲವಾಗಿ ಸ್ಪರ್ಧಿಸುತಿಲ್ಲ? ಅಥವಾ ಚುನಾವಣೆಯಲ್ಲಿ ಯಾಕೆ ಆಯ್ಕೆಯಾಗುತ್ತಿಲ್ಲ? ಎಂಬುದು ಪ್ರಶ್ನೆ. ಕನ್ನಡದ ಅನೇಕ ಹೆಸರಾಂತ ಮಹಿಳಾ ಸಾಹಿತಿಗಳು ಈ ಬಗ್ಗೆ ಯೋಚಿಸಬೇಕು.ಯೋಚಿಸಬೇಕು ಅನ್ನುವ ಮೊದಲು ಅಲ್ಲಿ ಮಹಿಳೆಯರು ಸ್ಪರ್ಧಿಸಲು ಆರೋಗ್ಯಕರ ವಾತಾವರಣ ಇದೆಯೇ ಗಮನಿಸಬೇಕಾಗುತ್ತದೆ. ಯಾವುದೇ ರಾಜಕೀಯ ಪ್ರಭಾವ, ಜಾತಿ ರಾಜಕಾರಣಗಳಿಂದ ಮುಕ್ತವಾಗಿ ಸಾಹಿತ್ಯದ ಬೆಳವಣಿಗೆ, ಭಾಷಾ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಕಸಾಪಕ್ಕೂ ಇದೆ. ಮಹಿಳೆಯರು ಅಧ್ಯಕ್ಷರಾಗಲಿ ಎಂದು ಮಹಿಳಾ ಮೀಸಲಾತಿಗೆ ಒತ್ತು ಕೊಡುವ ಬದಲು, ನಮ್ಮ ಮಹಿಳೆಯರು ಸಾಹಿತ್ಯದ ಪ್ರಬಲ ಹಿನ್ನೆಲೆಯಿಂದ ಗಂಡು ಹೆಣ್ಣೆಂಬ ಬೇಧವಿಲ್ಲದೇ ಬಹುಮತದಿಂದ ಆಯ್ಕೆಯಾಗಬೇಕು ಎನ್ನುವುದು ನನ್ನ ಆಶಯ. ಮುಂಬರುವ ಚುನಾವಣೆಯಲ್ಲಿ ಅಂತಹ ಅರ್ಹತೆ ಉಳ್ಳ ಮಹಿಳೆಯರೇ ಮುಂದೆ ಬಂದು ಸ್ಪರ್ಧಿಸಿ, ಅಧ್ಯಕ್ಷರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಿಸೋಣ. ********************** ಶೀಲಾ ಭಂಡಾರ್ಕರ್

Back To Top