ಅಪ್ಪಟ ಕನ್ನಡದ ವಿನಯ

ಅಪ್ಪಟ ಕನ್ನಡದ ವಿನಯ

Amazon.in: Buy Dr Rajkumar Movies Set (204 Movies) DVD, Blu-ray ...

ಮಲ್ಲಿಕಾರ್ಜುನ ಕಡಕೋಳ

.

ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ
ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ.

ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು ಬಡತನ. ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಂದ ಬಳುವಳಿಯಾಗಿ ಬಂದುದು ಅಭಿಜಾತ ಅಭಿನಯ. ಗುಬ್ಬಿ ಕಂಪನಿಯಲ್ಲಿ ತಂದೆಯ ಪಾತ್ರಾಭಿನಯ ಕಂಡು, ಕಲಿತು ಕೃಷ್ಣಲೀಲೆ ನಾಟಕದ ಬಾಲಪಾತ್ರದೊಂದಿಗೆ ರಂಗಭೂಮಿ ಪ್ರವೇಶ. ಗುಬ್ಬಿಕಂಪನಿ, ಸುಬ್ಬಯ್ಯನಾಯ್ಡು ಕಂಪನಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ರಂಗಾಭಿನಯ ತಿಳಿನೀರು ಕುಡಿದಂತೆ ಒಲಿದು ಬಂದುದು. ಮೇರುನಟನಾಗಿ ಬದುಕಿನುದ್ದಕ್ಕೂ ಡಾ. ರಾಜ್ ಬಾಳಿದ್ದು ವಿನಯವಂತಿಕೆ. ಅದು ಕನ್ನಡದ ವಿನಯ ಮತ್ತು ಅನನ್ಯತೆಯ ಅನುಸಂಧಾನ.

ಸಿನೆಮಾದಲ್ಲಿ ಯಥೇಚ್ಛ ಅವಕಾಶಗಳಿದ್ದಾಗಲೂ ವೃತ್ತಿ ಕಂಪನಿ ನಾಟಕಗಳನ್ನು ರಾಜಕುಮಾರ ಮರೆಯಲಿಲ್ಲ. ಬನಶಂಕರಿ ಜಾತ್ರೆಯಲ್ಲಿ ಸಾಹುಕಾರ, ಬೇಡರ ಕಣ್ಣಪ್ಪ ನಾಟಕಗಳ ಪ್ರದರ್ಶನ. ಬನಶಂಕರಿಯಲ್ಲಿ ರಾಜಕುಮಾರ ಜತೆಗೆ ಚಿತ್ರಬ್ರಹ್ಮ ನಾಮಾಂಕಿತ ಜಿ. ವಿ. ಅಯ್ಯರ್, ಹಾಸ್ಯರಸಋಷಿ ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಮೈನಾವತಿ, ಹೀಗೆ ಅನೇಕ ರಂಗದಿಗ್ಗಜರು ಸೇರಿ ಮದ್ರಾಸ ಚಲನಚಿತ್ರ ಕಲಾವಿದರ ಸಂಘದಿಂದ ನಾಟಕಗಳ ಪ್ರದರ್ಶನ. ಆ ಕಾಲದಲ್ಲಿ ರಾಮಸಾಗರದ ಹನುಮಂತಪ್ಪ, ಡಾವಣಗೇರಿಯ ಆರ್. ಜಿ. ಶಿವಕುಮಾರ್ ಬನಶಂಕರಿ ಜಾತ್ರೆಯಲ್ಲಿ ಗುತ್ತಿಗೆ ಮೇಲೆ ಕ್ಯಾಂಪ್ ಮಾಡಿಸುತ್ತಿದ್ದರು. ನೆನಪಿರಲಿ ಈಗಿನ ಗುತ್ತಿಗೆದಾರರ ಕಲ್ಚರಲ್ ಮಾಫಿಯಾ ಅವರದಾಗಿರಲಿಲ್ಲ.

ಅಭಿಮಾನಿಗಳನ್ನು ದೇವರೆಂದು ಕರೆದ ಕನ್ನಡದರತ್ನ ಡಾ. ರಾಜಕುಮಾರ ಅವರಂತಹ ಮಹಾನ್ ರಂಗಚೇತನ ಕನ್ನಡ ವೃತ್ತಿರಂಗಭೂಮಿಯಿಂದ ಬಂದವರೆಂಬ ಹೆಮ್ಮೆನಮ್ಮದು. ಅಂಥವರು ಬದುಕಿದ ರಂಗಭೂಮಿಯ ಆತ್ಮಗೌರವ ಕಟ್ಟುನಿಟ್ಟಾಗಿ ಕಾಪಾಡೋಣ ಎಂಬ ರಂಗಸಂಕಲ್ಪ ಅವರ ಜನ್ಮದಿನದಂದು ಮಾಡೋಣ.

***********

Leave a Reply

Back To Top