ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ
ಬೆಳಕಿನ ಸಂತ ಶಿವಶಂಕರ ಸೀಗೆಹಟ್ಟಿ. ಊರೂರು ಸುತ್ತಿದ ಬಿಕ್ಕುಪಾತ್ರೆ ನನ್ನ ಮುಂದೆಯೇ ಬಂದು ನಿಂತಿದೆ ಪಾತ್ರೆಗೆ ಬೀಳುವ ಎಲ್ಲವೂ ನನ್ನೊಳಗೆ ಅಕ್ಷಯವಾಗುತ್ತಿವೆ ಅಚ್ಚರಿಯೆನಿಸಿತು ನಾನು ಕತ್ತಲನು ಸುರಿದಾಗ ಬೆಳದಿಂಗಳು ನನ್ನ ಕಣ್ಣೆದುರಿಗಿತ್ತು ಊರೂರು ತಿರುಗಿದ ಬೆಳಕು ಮನವೆಂಬ ಗುಡಿಸಲಿಗೂ ಬಂದು ಬೆಳಕು ಕೊಟ್ಟಿದೆ ಬೆಳಕು ಪಡೆಯುವ ತವಕದ ಬಯಕೆಯಲ್ಲಿ ಗಾಳಿ ತಾಗಬಹುದೆಂದು ಬದುಕ ಅಡ್ಡಗಟ್ಟಿದ್ದೇನೆ ಹೆಗಲ ಜೋಳಿಗೆಯಲ್ಲಿ ಬಯಲೆಂಬ ಸಿರಿಯು ಬದುಕುಗಟ್ಟಿದೆ ಬಾಚಿ ತಬ್ಬುವ ತವಕದಲ್ಲಿ ಬೆನ್ನ ಹಿಂದೆಯೇ ಸಾವರಿಸಿ ನಡೆಯುತಿದ್ದೇನೆ ಆಸೆ ಅತಿಯಾಗಬಾರದೆಂಬ ಬುದ್ದಗುರುವಿನ ಮಾತುಗಳನು ನೆನೆದು ಅರಿವಿನ ಮರದ ಬಳಿ ದಾರಿ ಕಾಯುತ್ತಿದ್ದೇನೆ. ಮನದ ಕೊಳೆ ತೊಳೆದ ಅರಿವಿನ ಸಂತನಿಗೆ ಕಾರುಣ್ಯದ ಬತ್ತಿಯನು ಜೀವರಸವೆಂಬ ನೂಲಿನಲದ್ದಿ ಬೆಳಕೆಂಬ ಬೆಳಕಿಗೆ ಪೂಜಿತನಾಗಿದ್ದೇನೆ ಆತನೊ ಜಂಗಮಕೆ ನಡೆನಡೆದು ಜಗದ ಗುರುವೆನಿಸಿದನು ನಾನು ಬಯಲಲ್ಲಿ ಮೈತ್ರಿಯನಂಚಿ ಆನಂದಿತನಾದೆನು. ******
ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ
ವೈಶಾಖ ಹುಣ್ಣಿಮೆ ರಾತ್ರಿ ಶಾಲಿನಿ ಆರ್. ಮನುಕುಲದ ಭಾಗ್ಯ ನಮ್ಮ ಸರ್ವಾಥ ಸಿದ್ಧ/ ಲೋಕದ ಜನರ ದುಃಖ ನಿವಾರಿಸಲರಿತು ಎದ್ದ// ವೈಶಾಖ ಹುಣ್ಣಿಮೆಯ ರಾತ್ರಿ ಹಳೆನೆನಪುಗಳ ಕಳಚಿತು/ ದಿವ್ಯಚಕ್ಷುವಿನಿಂದಾದ ಯೋಗ ಜ್ಞಾನಜ್ಯೋತಿ ಬೆಳಗಿತು// ದೇದೀಪ್ಯಮಾನ ಬೆಳಗದು ಮನುಕುಲದ ತಮವ ಕಳಚಿತು/ ಧ್ಯಾನದೊಳಿದ್ದರು ಎಚ್ಚರವಾಗಿರುವ ಮನದ ನೇತ್ರ ಅರಳಿತು// ಬಿಂದುವೊಂದು ಸಿಂಧುವಾದ ಆನಂದದಾ ಮೊಗ/ ಅನಿರ್ವಚನೀಯ ಕಲ್ಮಷರಹಿತ ಪರಮಾನಂದದಾ ಯೋಗ// ಮಾನವ ಕುಲ ಒಂದು ಆಸೆಯೇ ದುಃಖಕ್ಕೆ ಕಾರಣ ಎಂದ/ ಸಮ್ಯಕ್ ಬೋಧಿ’ ಸಿದ ಅಷ್ಟಾಂಗ ಮಾರ್ಗ ಅರುಹಿದ// ಬಹುಜನ ಹಿತಾಯ ಬಹುಜನ ಸುಖಾಯ ಬೋಧಿಸಿದ / ಮರಣ ಜನನದ ಅನಿವಾರ್ಯವೆಂದು ನಿರ್ವಣದ ದಾರಿ ತೋರಿಸಿದ// ಜಗದ ಅಮರಜ್ಯೋತಿಯಾಗಿ ಅಮೃತಧಾರೆ ಹರಿಸಿದ/ ಧನ್ಯನಾದ ಗುರು ನಮ್ಮ ಸರ್ವಾಥಸಿದ್ಧ ಬುದ್ಧನಾದ// ******
ಬುದ್ಧ ಪೂರ್ಣಿಮೆ ವಿಶೇಷ-ಕವಿತೆ
ಬೆಳಕಿಗೊಂದು ಮುನ್ನುಡಿ ಅರಸುತ. ಪೂರ್ಣಿಮಾ ಸುರೇಶ್ ವಿಶ್ವವೆಲ್ಲವನು ಕಪ್ಪು ಕವಿದಾವರಿಸಿದ ವೇಳೆ ಸೃಷ್ಟಿಯಖಿಲದ ಜೀವಜಾತಗಳಿಗೆಲ್ಲ. ನಿದ್ರೆಯ ಮಾಯೆ ಮುಸುಕಿರುವ ವೇಳೆ ಸೊಬಗಿನೈಸಿರಿಯೆ ಸಾಕಾರಗೊಂಡಂತೆ ಪಕ್ಕದಲಿ ಪವಡಿಸಿದ ಸುಕೋಮಲೆಯ. ಘನವಾದ ಕಟ್ಟಕ್ಕರೆಯ ಚೆಂಬೆಳಕ ಲೆಕ್ಕಿಸದೆ ಹೊರಟೇಬಿಟ್ಟ ಪುಣ್ಯಾತ್ಮ. ಹೊಸ ಬೆಳಕಿನ ಮೂರ್ತತೆಯ ಹುಡುಕಾಟದಲ್ಲಿ ಬದುಕಿನರ್ಥವ ಬಗೆವ ಬೆದಕು ನೋಟದಲ್ಲಿ ನನ್ನೊಳಗೂ ಆಗಾಗ್ಗೆ ತುಂಬಿಕೊಳ್ಳುವ. ಕಪ್ಪಿಗೆ ಕಪ್ಪ ಸಲ್ಲಿಸುತ್ತಲೇ ಬಂದಿರುವೆ. ಆದರೀಗ ಕಪ್ಪಿನೆದೆಯನ್ನಿರಿದು ಆಚೆ ಹೆಜ್ಜೆ ಹಾಕಿರುವೆ. ಅವ್ಯಕ್ತದೆಡೆಗೆ ಅವನಂತೆ ಒಬ್ಬಂಟಿ- ಕೆಮ್ಮಣ್ಣ ಮಾದಕ ಕಂಪನ್ನು ಮೂಸಿ ಮುಟ್ಟಿರುವೆನವನ ಸಂಪ್ರೀತಿ ದಡವ ಅವನ ಕಣ್ಣುಗಳ ಒಳಪುಟಗಳಲ್ಲಿ ಅಚ್ಚಾದ ನಲ್ಗವಿತೆಯನ್ನು ಕದ್ದು ನನ್ನೆದೆಯ ತಂತಿಯಿಂದದನು ಶ್ರುತಿಗೊಳಿಸಿ ದನಿ ನೀಡಿ ನಯವಾಗಿ ಹರ್ಷಿಸಿರುವೆ ತುಂತುರು ತುಂತುರಾಗಿ ಜಿನುಗುವ ನಾದದ ಬೆಳಕನ್ನು ಬೊಗಸೆಯಲ್ಲಿ ಹಿಡಿದಿಡುವ ಸಾಹಸದ ಆಟ ನನಗೆ; ಹಂಬಲದ ಅರಗಿಣಿಯ ರಮಣೀಯ ರೆಕ್ಕೆಗಳ ವಿವಿಧ ವರ್ಣಗಳ ಚೆಂದನೆಯ ಗರಿಗಳಿಂದ ಅಲಂಕರಿಸಿ, ಸೊಬಗ ಸವಿಯುತ ನನ್ನ ಮೈಯನು ಮರೆತು ಮಹದಾನಂದಕ್ಕೆ ಚೊಕ್ಕ ಮುನ್ನುಡಿ ಬರೆವಾಸೆ ನನಗೆ. ಕೊನೆಗೆ, ನಟ್ಟಿರುಳಿನಲ್ಲಿ ಏಕಾಏಕಿ ಅರಮನೆ ತೊರೆದವನ. ಶಾಂತ ವದನದ ಕಾಂತಿಯುಕ್ತ ತೇಜಸ್ಸಿನಲಿ ಮಿಂದೆದ್ದು, ಶುಚಿಗೊಳುವ. ಅದಮ್ಯ ಸಾರ್ಥಕ್ಯದಾಸೆ ನನಗೆ. *********
ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ
ಬುದ್ದಂ ಶರಣಂ! ಚೈತ್ರಾ ಶಿವಯೋಗಿಮಠ ನಿನ್ನಲ್ಲಿ ನನ್ನಲ್ಲಿ ಎಲ್ಲೆಲ್ಲಿಯೂ ದೇವರ ಕಂಡೆ ಅಂತಹದರಲ್ಲಿ ನನ್ನನೇ ನೀನು ದೇವರ ಮಾಡಿಕೊಂಡೆ ದೀಪವ ಮುಡಿಸಿ, ಧೂಪವ ಹಾಕಿದೆ ಮೂರ್ತಿ ಮಾಡಿ ಒಳಗಿನ ದೀಪವ ಬೆಳಗಲಾರೆಯ ಮನದ ಸೊಡರಿಗೆ ಕಿಡಿ ನೀಡಿ? ಅನ್ನವ ಬೇಯಿಸಿ, ಹಿಸುಕಿ ಪರೀಕ್ಷಿಸಿ ಬೆಂದನ್ನವ ಸಮರ್ಪಿಸಿದೆ ಎಡೆಯೆಂದು ಮನದ ಗಡಿಗೆಯಲಿ ಭಾವದನ್ನವ ಬೇಯಿಸಲಾರೆಯ ನೀನಿಂದು? ನಾನು ದೇವರಲ್ಲ, ನಿನ್ನೊಳಗಿನ ಪ್ರಾಂಜಲ ದೈವತ್ವ! ದೇವರಾಗಿಸದೆ, ಮರೆಯದೆ ಮೆರೆಸಿದರೆ ಸಾಕು ಮನುಷ್ಯತ್ವ! ಇನ್ನಾದರೂ ನಿನ್ನೊಳಗಿರುವ ನನ್ನ ಕೂಗನ್ನ ಕೇಳು ಮಲಗಿದ್ದು ಸಾಕು ಬಿಡು.ನಡಿ ಬೆಳದಿಂಗಳ ದಾರಿ ಹಿಡಿ ,ಏಳು. ********
ಕಾವ್ಯಯಾನ
ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ ಮಾತ್ತೆಲ್ಲವೂ ಮುಗಿದು ಎರಡೂ ಬದಿಯಿಂದ ಬರಿದೇ ಮತ್ತೆ ಎಂಬ ಶಬ್ಧ ಪುನರಾವರ್ತನೆಯಾಗುವ ವಿಕ್ಷಿಪ್ತ ಹೊತ್ತಲ್ಲಿ ನಾನು ನಿಟ್ಟುಸಿರಿಡುತ್ತ ಮಾತು ಮುಗಿಸುವ ಮಾತನಾಡುವಾಗಲೇ ಅತ್ತ ಕಡೆಯಿಂದ ತೇಲಿ ಬರುತ್ತದೆ ‘ಈ ದಿಗ್ಬಂಧನವೆಲ್ಲ ಮುಗಿದು ಸಿಗುವುದಾದರೂ ಯಾವಾಗ ನೀನು ಒಮ್ಮೆ ನನ್ನತೋಳಿಗೆ ? ಅದೆಷ್ಟು ತಿಂಗಳು ಕಾಯಬೇಕು ನಾನು , ನಿನ್ನದೊಂದು ಮೈಮರೆಸುವ ಅಪ್ಪುಗೆಗೆ ನಶೆಯೇರಿಸುವ ಮುತ್ತಿಗೆ?’ ಮುಗಿಯುತ್ತ ಬಂದ ಮಾತುಗಳಲ್ಲೀಗ ತುಳುಕುತಿದೆ ಹೊಸ ಹರೆಯ ದೂರದಲ್ಲೆಲ್ಲೋ ಕೂಗುವ ಕೋಗಿಲೆ ಅನುರಣಿಸಿ ಇಬ್ಬರ ಫೋನಿನಲ್ಲೂ ಜೊತೆಗಿರುವ ಭರವಸೆ ತುಂಬುತಿದೆ ———– ದಿಗ್ಭಂದನ ಮುಗಿಯುವಾಗ ನಾಗಾಲೋಟದಿಂದ ಓಡುತ್ತಿದ್ದ ದಿನಗಳೀಗ ಬಸವನಹುಳದಂತೆ ತೆವಳುತಿದೆ ನಿಮಿಷಗಳೆಲ್ಲ ಗಂಟೆಗಳಾಗಿ ಸೆಕೆಂಡುಗಳೂ ಇನ್ನೇನು ಗಂಟೆಗಳಾಗುವ ಈ ದುರಂಧರ ಸಮಯದಲ್ಲಿ ಇಬ್ಬರ ಮುಖದಲ್ಲೂ ಪ್ರತಿಫಲಿಸುವ ಪೇಲವ ನಗೆಗೆ ಅಂತರ ಮುರಿಯುವ ಶಕ್ತಿಯಿಲ್ಲ ದೇಶ ದೇಶಗಳಾದಿಯಾಗಿ ರಾಜ್ಯ, ಜಿಲ್ಲೆ ತಾಲೂಕು ಗ್ರಾಮಗಳ ಮಾತು ಬಿಡಿ ಶಹರ, ಹಳ್ಳಿಗಳ ಒಂದೊಂದು ಗಲ್ಲಿ, ಓಣಿಯೂ ದಿಗ್ಬಂಧನ ಹಾಕಿಸಿಕೊಂಡು ಜೈಲಿನಲ್ಲಿರುವ ಏಕಾಂಗಿ ಕೈದಿಯಂತಾಗಿ ವಿಲವಿಲನೆ ಒದ್ದಾಡುತ್ತಿರುವಾಗ ನಮ್ಮದೇನು ಹೆಚ್ಚುಗಾರಿಕೆಯಿಲ್ಲ ಬಿಡು ಅತ್ತ ತಿರುಗಿದರೂ ಕಿರುಗುಡುವ ಜೋಡಿಮಂಚ ಇತ್ತ ತಿರುಗಿದರೂ ಸದ್ದು ಮಾಡುವುದನು ಕೇಳಿಯೂ ಒಂದೊಂದು ತುದಿಗೆ ಒಬ್ಬೊಬ್ಬರು ನಿಟ್ಟುಸಿರಿಡುತ್ತಲೇ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಅರಿವಿದೆ ನಮ್ಮಿಬ್ಬರಿಗೂ ಮುಂಜಾನೆ ಬೇಗನೆದ್ದು ಚಹಾಕ್ಕೆ ನೀರಿಡುವ ಮೊದಲೇ ಗೀಜರ್’ನ ಬಟನ್ ಒತ್ತಿ ಎಲ್ಲಕ್ಕಿಂತ ಮೊದಲು ಆಗಿಬಿಡಲಿ ಸ್ನಾನವೇ ಎಂದು ಗೊಣಗಿ ತಲೆಗೆರೆದುಕೊಂಡು, ಹಣೆಗೆ ಬಿಂದಿ ಇಡಲು ಕನ್ನಡಿ ಎದುರು ನಿಂತಾಗಲೇ ಕಾಣುತ್ತದೆ ಅಂತರ ಮುಗಿದ ಸೂಚನೆಗೆ ಇನ್ನೂ ಹಾಸಿಗೆ ಬಿಟ್ಟೇಳದ ನಿನ್ನ ಮುಖದಲ್ಲಿ ಅರಳುವ ಮುಗುಳ್ನಗೆ **********
ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ
ಬುದ್ಧನಾಗಲಾರೆ…. ನಾಗರಾಜ ಹರಪನಹಳ್ಳಿ ಗಾಳಿಯ ಮುಗಿಲಲ್ಲಿ ತೇಲಿದ ಮೋಡಗಳು ಒಲವಿನ ಸರಿಗಮ ಹಾಡಿದವು ದೂರದಲ್ಲಿದ್ದು ನೀನಾಡಿದ ಮಾತುಗಳು ಮನದಲ್ಲಿ ಪ್ರೇಮ ಪಲ್ಲವಿಯಾದವು ಸಿದ್ಧಾರ್ಥನಾಗಿಯೇ ಉಳಿಯುವೆ ಬುದ್ಧನಾಗಲಾರೆ…. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷದ ಬೆನ್ನು ಹತ್ತಲಾರೆ ಬುದ್ಧನಾಗಲಾರೆ ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!! ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡುವುದೆಂದರೇನು? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ ಬೆಳೆದಂತೆ ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ? ಮೋಕ್ಷದ ಬೆನ್ನು ಹತ್ತಲಾರೆ ಪ್ರೀತಿಯ ಹುಡುಕುತ್ತ… ******* …..
ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ
ವಿಶ್ವವೇ….ಶರಣು.. ಶಿವಲೀಲಾ ಹುಣಸಗಿ ಯಾವ ಅಮೃತ ಗಳಿಗೆಯೋ ನಾ ಕಾಣೇ.. ಅರಿವಿನ ಕ್ಷೀತಿಜದೊಳು… ಶಶಿಯುದಯಿಸಿದಾ ಕ್ಷಣದೊಳು ಹೊಸದೊಂದು ಹುರುಪು,ನವೋಲ್ಲಾಸದ ಸುಖ ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು.. ಬಯಸಿದ್ದೊಂದು…ಆಗುವುದೊಂದು.. ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು ಮುಳ್ಳಿನ ಸೊಲ್ಲುಗಳಿಗೊಂದಂದು ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು.. ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ.. ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ.. ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ.. ಯ್ಯಾರು ಕರೆದರೋ…? ಯ್ಯಾರು ಬಂದರೋ.? ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.? ಎದೆಗಂಟಿದ ಬೆವರಹನಿಗಳು. ಮಾಯವಾಯಿತೇ.. ರೋಧಿಸಲಾರಿಲ್ಲದಾ ಗಳಿಗೆ….ಚಿರನಿದ್ರೆ..ಆವರಿಸಿದೆ..! ಮೋಹಬಂಧನವ ಕಳಚಿದಾಗ ಮೌನ ಮಡುಗಟ್ಟಿದೆ. ಜ್ಞಾನ ದಾಹದ ತೀರಕೆ..ಕರೆಬಂದಿದೆಯೆಂಬಂತೆ.. ಹೋರಟಿತೊಂದು ಆತ್ಮದ ಮೆರವಣಿಗೆ…… ಅಷ್ಟಾಂಗಿಮಾರ್ಗದ ನೆರಳಿನೊಳು.. ಕಷ್ಟಕಾರ್ಪಣ್ಯದ ಹೊಂಗಿರಣದೊಳು.. ಬೋಧಿವೃಕ್ಷದ ದಿವ್ಯಾನುಭದೊಳು ಲೋಕವ ಬೆಳಗಿಸುವ ಸಂಕಲ್ಪದೊಳು.. ಪ್ರಜ್ಞೆಯ ವಾಸ್ತವದಲಿ ಮನಸರಳಿ ಶೀಲ ಚಾರಿತ್ರ್ಯದ ಮೇರು ಪರ್ವತವಾಗಿ.. ಸಮಾಧಾನದ ಸಮಾಧಿ ಸ್ಥಿತಿಯೋಳು ಆಸೆಯೇ ದುಃಖಕ್ಕೆ ಮೂಲವೆಂಬಾಮೃತವ ಸಾರಿ… ಹುಣ್ಣಿಮೆಯ ಚಂದಿರನ ನಿರ್ಲಿಪ್ತ ಭಾವದೊಳು ಜ್ಞಾನ ಜ್ಯೋತಿಯಾಗಿ ಮುಕ್ತಿ ಮಾರ್ಗದ ಬೆಳಕಿನೊಳು ಭವ ಸಂಕಟವ ಕರಗಿಸುವ ಸರಳಮಾಂತ್ರಿಕನೊಳು ವಿಶ್ವವೇ …ಶರಣಾಗಿಹುದು ಧ್ಯಾನದೊಳು….. ******
ಬುದ್ಧ ಪೂರ್ಣಿಮಾ ವಿಶೇಷ-ಕವಿತೆ
ಬುದ್ಧನಾಗದೇ ನಿನ್ನ ಗ್ರಹಿಸಲಾರೆ ಡಾ.ಗೋವಿಂದ ಹೆಗಡೆ ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ ದೈವಿಕತೆಯನ್ನು ಹುಡುಕುತ್ತಿಲ್ಲ, ದಿವಿಜರೇ ಆಗಿದ್ದು ಮಾನುಷ ಅನುಭವ -ವನ್ನು ಹಾಯುತ್ತಿದ್ದೇವೆ’ ಎಂಬ ಮತವೂ ಇದೆ ನನಗೆ ಎರಡೂ ಅರಿವಿಗೆ ದಕ್ಕದೆ… ನೀನು ದೈವತ್ವದ ಕುರಿತು ಉಸಿರೆತ್ತಲಿಲ್ಲ ಕೇವಲ ಮನುಜನ ಬಿಡುಗಡೆಯ ಮಾತಾಡಿದೆ ಸದ್ವಿಚಾರ, ಸನ್ನಡತೆ, ಸತ್ಕರ್ಮಗಳ ಮೂಲಕ ಯಾತನೆಯಿಂದ ಬಿಡುಗಡೆಯ ಮಾತನಾಡಿದೆ ನಿನ್ನ ಮಾತನ್ನು ಅರಿಯಬಲ್ಲೆ ಮೌನವನ್ನು ಹೇಗೆ ಗ್ರಹಿಸುವೆ ನಿನ್ನನರಿಯಲು ನಾನು-ನೀನೇ ಆಗಬೇಕೇ ? •• ಗೋವಿಂದ ಹೆಗಡೆ
ಬುದ್ಧ ಪೂರ್ಣಿಮಾ ವಿಶೇಷ-ಕವಿತೆ
ಅರಿವೇ ಅಷ್ಟಾಂಗ ಶೃತಿ ಮೇಲುಸೀಮೆ ಅಜ್ಞಾನದ ಅಂಧಕಾರದಲ್ಲೊಂದು ಅರಿವಿನ ಅಂಕುರ ಅಮ್ಮನ ಕನಸಿನಲ್ಲೇ ಕರಿಯ ಹೂ ಮಾಲೆಯ ಪುರಸ್ಕಾರ ಅಶಿತ ಮುನಿಯ ಕಂಬನಿಯ ಕುಂಚ ಅಪ್ಪನ ಆಂತರಿಕ ತುಮುಲತೆಯ ಶುದ್ಧ ವೈಶಾಖದ ಪೂರ್ಣಮಿಯಲಿ ಅರಳಿದ ಅರಮನೆಯ ಕಮಲ ಯಶೋಧರೆಯ ಮ್ಲಾಮತೆ ರಾಹುಲನ ಪಿತ ಚೆನ್ನನ ಮಾಲೀಕ ಕಂಥಕನ ಕಾಂತಿಮತಿ ಈ ಸಿದ್ದಾರ್ಥ ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು ಸತ್ಯ ಅನ್ವೇಷಣೆಯ ಪರಿತ್ಯಾಗಿ ಜ್ಞಾನಕ್ಕಾಗಿ ಪರಿತಪಿತ ವಿವೇಕಿ ಜಗಕೆ ಶಾಂತಿ ಬೋಧಿಸಿದ ಯೋಗಿ ಶುದ್ಧ ಚಾರಿತ್ರ್ಯದ ಮೂರ್ತಿ ಮಂದಸ್ಮಿತದ ವದನದ ಕ್ರಾಂತಿ ಧ್ಯಾನ, ಮೌನ, ಜೀವನ ಪ್ರೀತಿಯ ಪ್ರತೀಕ ಅಷ್ಟಾಂಗ ಮಾರ್ಗದ ದರ್ಶಕ ಮತ್ತೊಮ್ಮೆ ಕುದರೆಯೇರಿ ಆಸೆ ,ಅಹಂಕಾರ ಮೀರಿ ಹಿಂದಣ ಮುಂದಣ ಭಾವ ಸೀಳಿ ಎಲ್ಲರ ಮನವ ಗೆಲ್ಲಲು ನೀ ಬಾ ನಮ್ಮ ಬುದ್ಧ *****
ಬುದ್ಧ ಪೂಣಿಮಾ ವಿಶೇಷ-ಕವಿತೆ
ಯಶೋಧರೆಯ ಸ್ವಗತ ಶೋಭಾ ನಾಯ್ಕ ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ ನಿನ್ನ ಪ್ರೀತಿಗೆ ಎಂದು ಕಂದನ ಕೈಗಿತ್ತವ ನೀನು ಜೊತೆ ಇರುವೆನೆಂದು ಜೊತೆ ಹೆಜ್ಜೆ ಇಟ್ಟು ನಕ್ಷತ್ರಗಳ ಜಾತ್ರೆಯನ್ನೆಲ್ಲ ಸುತ್ತಿಸಿ ಬಂದವ ನೀನು ಬದುಕ ಸಿಹಿ ಕಡಲಿನಲ್ಲಿ ಈಜಾಡಿಸಿ ದಡ ಸೇರುವುದರೊಳಗೆ ಹೊರಟು ಹೋದೆಯಲ್ಲಾ ? ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ ನನ್ನನ್ನೇ ಜರಿದಂತೆ ಭಾಸವಾಗುತ್ತದೆ! ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ ಯಾರ ಬಳಿ ಹೇಳಲಿ ನನ್ನೊಡಲ ನೋವ? ಮಗನೀಗ ಕಲಿತು ಕಥೆ ಕೇಳುತ್ತಿದ್ದಾನೆ! ಯಾರ ಕಥೆ ಹೇಳಲಿ ರಾತ್ರೋರಾತ್ರಿ ಎದ್ದುಹೋದ ನಿನ್ನದೋ? ನಿದ್ದೆಯಿರದ ನನ್ನದೋ?
