Category: ಕಾವ್ಯಯಾನ

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾವಲಿಯಿಂದ_ಕೆಂಡಕ್ಕೆ ಲಕ್ಷ್ಮಿಕಾಂತಮಿರಜಕರ ಕಾವಲಿಯಿಂದ_ಕೆಂಡಕ್ಕೆ ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು ನಾಳೆಯೂ ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆಗೇನೂ ಸಬೂಬು ಹೇಳುವುದೆಂದು ಚಿಂತಾಮಗ್ನದಲ್ಲಿ ನಾವಿರುವಾಗ ನೀವಾಗಲೇ ಚಪ್ಪಾಳೆ ತಟ್ಟುವ ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ ನಿಮ್ಮ ನಿಮ್ಮ ಅರಮನೆಗಳ ಬಾಲ್ಕನಿಗಳಲ್ಲಿ ನಿಂತು ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ ಸಮವಲ್ಲ ಬಿಡಿ ನಮ್ಮ ಹಸಿದ ಹೊಟ್ಟೆಗಳ ತಾಳ ತಿಂಗಳಪೂರ್ತಿ ಸಾಕಾಗುವಷ್ಟು ದಿನಸಿಗೋದಾಮು ಪೇರಿಸಿಡಲು ನೀವು ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ ನಮ್ಮ ಬದುಕು ಪೇರಿಕಿತ್ತಿತ್ತು ಬಿಸಿಲಿಗೆ ಕಾದು ಬೆಂಕಿಯಾಗಿದ್ದ ರಸ್ತೆ ಮೇಲೆ ಹೊತ್ತು ತಲೆಮೇಲೊಂದು ಕೈಯಲ್ಲೊಂದು ಗಂಟುಮೂಟೆ ಸೋತಕಾಲುಗಳಿಗೆ ಸಾಂತ್ವನ ಹೇಳುತ್ತ ಭಾರವಾದ ಹೆಜ್ಜೆಗಳನ್ನು ಕಿತ್ತಿಡುತ್ತ ಹಲ್ಲಿಯ ಬಾಯಿಯ ಸಿಕ್ಕಿ ಬಿದ್ದಿದ್ದ ಕೀಟದಂತೆ ತಲೆಮೇಲಿಂದ ಆಗಷ್ಟೇ ಹಾರಿಹೋಗಿತ್ತು ದೂರದೇಶಗಳಿಂದ ರಾಜರಾಣಿಯರನ್ನು ಹೊತ್ತು ತಂದಿದ್ದ ವಿಶೇಷ ವಿಮಾನ ನಮ್ಮ ಬರಿಗಾಲುಗಳ ಮೆರವಣಿಗೆಯನ್ನು ಅಣುಕಿಸುತ್ತ ಇಡಿ ದೇಶಕ್ಕೆ ದೇಶವೇ ಮನೆ ಮುಂದೆ ದೀಪ ಬೆಳಗಿಸಿ ಸೆಲ್ಫಿ ತೆಗೆಸಿಕೊಳ್ಳುವ ಸಂಭ್ರಮದ ಮುಂದೆ ಹಸಿವಿನಿಂದ ರಸ್ತೆಬದಿಯಲ್ಲಿ ನಂದಿಹೋದ ಎಷ್ಟೋ ಬಡಜ್ಯೋತಿಗಳ ಪ್ರಾಣ ಯಾರಿಗೂ ಮಹತ್ವವೆನಿಸಲೇ ಇಲ್ಲ ಬೆನ್ನಿಗಂಟಿದ ಬಡತನದ ಶಾಪಕ್ಕೆ ಉಳ್ಳವರ ದೌರ್ಜನ್ಯ, ಅತ್ಯಾಚಾರದ ಕಾಟಕ್ಕೆ ಜಾತಿ ಶೋಷಣೆಯ ಅವಮಾನಕ್ಕೆ ಬೇಸತ್ತು ನಗರಕ್ಕೆ ಗುಳೆ ಬಂದಿದ್ದು ನಮ್ಮದೇ ತಪ್ಪು ಪುರಾತನ ಕಾಲದಿಂದಲೇ ನಮ್ಮಿಂದ ಅಂತರ ಕಾಪಾಡಿಕೊಂಡೇ ಬದುಕಿದ್ದ ದೇವಾನುದೇವತೆಗಳ ಮಕ್ಕಳು ನೀವು ಅಗೋಚರ ವೈರಾಣು ಕೃಪೆಯಿಂದ ನಮ್ಮ ನಡುವಿನ ಅಂತರಕ್ಕೆ ಈಗಂತೂ ಅಜಗಜಾಂತರ ವ್ಯತ್ಯಾಸ ನಿಮಗಷ್ಟೇ ಸಿಗಲಿ ಚಂದಿರನೂರಿನ ದಾರಿ ಜೊತೆಗೆ ಹರುಷ,ಸಂತೃಪ್ತಿ ಖುಷಿ,ಸುಗ್ಗಿ,ಸುಖದ ಸಂತೆಯೂ ನಮ್ಮೂರಿನ ಬತ್ತಿದ ಹೊಳೆಬದಿಯ ಮುಳ್ಳು ಕಂಟಿಗಳ ಜಾಗವೇ ನಮಗಿರಲಿ ಇದ್ದೇಇರುತ್ತವೆ ಜೊತೆಗೆ ಬೇಡವೆಂದರೂ ಕಷ್ಟ,ದುಃಖ, ನಿರಾಸೆ ನಿಲ್ಲದ ನಿಟ್ಟುಸಿರು,ಬಿಕ್ಕಳಿಕೆಯೂ ನಮಗೀಗ ಖಾತರಿಯಾಗಿದೆ ಬಡವರ ಬದುಕು ಕಾವಲಿಯಿಂದ ಕೆಂಡಕ್ಕೆ ಬಿದ್ದಿರುವುದು ********

ಕಾರ್ಮಿಕ ದಿನದ ವಿಶೇಷ-ಕವಿತೆ

ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ ಎಂದು ಬಿಡದವ ಕಾಯಕ ನಿಷ್ಠೆ! ವೃತ್ತಿ ಭೇದಗಳಿಲ್ಲ ನಾ ಮೇಲೆಂಬ ಭಾವವಿಲ್ಲ ಪ್ರಾಮಾಣಿಕತೆಯೆ ಇವನಿಗೆಲ್ಲ ದುಡಿದು ತಿಂದು ಬದುಕಾಗಿಸಿಕೊಂಡಿರುವ ಬೆಲ್ಲ! *******

ಕಾರ್ಮಿಕ ದಿನದ ವಿಶೇಷ-ಕವಿತೆ

ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ‌‌ ವಾರ ಮಾಸ ವರುಷ ದಿಟ್ಟ ದುಡಿಮೆ ವಿವಿಧ ಕಾರ್ಯ ಅನೇಕ‌ ಕ್ಷೇತ್ರದ ಹಿರಿಮೆ ಕಾರ್ಮಿಕರ ಬಲ ದಕ್ಷತೆ ದೇಶದ ಹೆಮ್ಮೆ ಶಕ್ತಿ ಯುಕ್ತಿ ಕಾರ್ಯದಿ ಇವರೇ ರಾಷ್ಟ್ರದ ಗರಿಮೆ ಮೇ ದಿನವು ಕಾರ್ಮಿಕರಿಗಾಗಿ ಒಂದು ದಿನ ಪ್ರತಿಯೊಬ್ಬರ ಶ್ರಮಕೆ ಈ ಕವನದಿ ಸನ್ಮಾನ *******

ಕಾರ್ಮಿಕ ದಿನದ ವಿಶೇಷ-ಕವಿತೆ

ಭರವಸೆಯ ಬದುಕು ಪ್ರತಿಭಾ ಹಳಿಂಗಳಿ ಭರವಸೆಯ ಬದುಕು ದುಡಿಯುವ ಕೈಗಳೇ ನಿವೇನು ಬೇಡುತಿರುವಿರಿ ಹೊತ್ತು, ಹೊತ್ತಿನ ಊಟ ಇರಲೊಂದು ನೆಲೆ ಇಷ್ಟು ಸಾಕಲ್ಲವೇ? ಇಲ್ಲ ಸಾಕಾಗಲಿಲ್ಲ ನಾವೇನು ಯಂತ್ರಗಳಲ್ಲ, ನಮ್ಮ ‌ದೇಹದಲ್ಲೂ ಹರಿದಾಡುತಿದೆ ರಕ್ತ ಅದು ಕೂಡ ಕೆಂಪಲ್ಲವೇ ನಿಮ್ಮೆಲ್ಲರ‌ ಹಾಗೆ. ಬೆವರು ಸುರಿಯುತಿಹೆ ನಮ್ಮ ಹಣೆಯ ಮೇಲೆ ಅದು ಯಾರದೋ ಸಂಪತ್ತಿನ ಬಂಡವಾಳವಂತೆ ಹಗಲು, ರಾತ್ರಿ ಶ್ರಮವಹಿಸಿ ಮೈಯೆಲ್ಲ ಹಣ್ಣಾಗಿಸಿ ದುಡಿಯುತಿರೆ ನಾವು ನೀವು ಕೊಡುವ ಕಾಸು ಧರ್ಮದ್ದೇನಲ್ಲ. ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ ಸಿಗದೆ ಹೋದರೆ ಕೆಲಸ ದಿನವೂ ಉಪವಾಸವೇ. ಯಾರಿಗೂ ತಿಳಿಯದು ಈ ತಳಮಳ ನಮ್ಮ ಬದುಕು ಎಂದಿಗೂ ಹಾದಿ,ಬೀದಿಯಲ್ಲಿಯೇ ಭರವಸೆ,ಭದ್ರತೆ ,ಕನಿಷ್ಠ ಗೌರವವು ಇಲ್ಲದೆ ನಡೆಯುತಿದೆ ನಮ್ಮ ಜೀವನ. ******

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಗಝಲ್ ಪ್ರತಿಮಾ ಕೋಮಾರ ಗಜಲ್ ಕರವೆರಡು ಕೊರಡಾದರೂ ಸೋಲುವುದಿಲ್ಲ  ಅವನು ಉಳಿ ಮೇಲೆ ಉಳಿ ಬಿದ್ದರೂ ಎದೆಗುಂದುವುದಿಲ್ಲ ಅವನು ಕತ್ತಲೇ ಮನೆಯಾದರೂ ಕೊರಗುವುದಿಲ್ಲ ಅವನು ಎಲ್ಲರಿಗೂ ಬೆಳಕನ್ನೇ ಹಂಚಿದರೂ ಬೀಗುವುದಿಲ್ಲ ಅವನು ಒಡಲಾಳದಲ್ಲಿ ಹರಿದರೂ ಲಾವಾ, ಹೇಳಿಕೊಳ್ಳುವುದಿಲ್ಲ ಅವನು ಉಳ್ಳವರು ತುಳಿಯುತ್ತಲಿದ್ದರೂ ಚಕಾರವೆತ್ತುವುದಿಲ್ಲ ಅವನು ಮಳೆ,ಬಿಸಿಲು ,ಚಳಿ ಏನೇ ಇದ್ದರೂ ಅಳುಕುವುದಿಲ್ಲ  ಅವನು ಕಾಯಕದಲ್ಲಿ ಮೇಲು ಕೀಳೆಂಬ ಭಾವ ತೋರುವುದಿಲ್ಲ ಅವನು ಆಲಸ್ಯದಿ ದುಡಿಯದೇ ಕುಳಿತು ಉಣ್ಣುವುದಿಲ್ಲ ಅವನು ಕಾಯಕವೇ ಕೈಲಾಸ ಎಂಬ ತತ್ವ ಮರೆಯುವುದಿಲ್ಲ ಅವನು ( ಶ್ರಮಿಕರಿಗೆ ನಮನ , ಮೇ ಕಾಮಿ೯ಕರ ದಿನ )

ಕಾರ್ಮಿಕ ದಿನದ ವಿಶೇಷ-ಕವಿತೆ

ನಾವು ಮತ್ತು ಅವರು ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ. ನಾವು ಮತ್ತು ಅವರು ಇಲಿ ಕೊರೆದ ಮನೆ ಗೋಡೆಗೆ ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ ಮಹಡಿ ಮನೆಗೆರಡು ಕಂಬ ಎಬ್ಬಿಸಲು ಅವರ ಮೈ ಬೆವರಿಗಷ್ಟು ಕೂಡಿಸಿ, ಕಳೆದು ಲೆಕ್ಕಹಾಕಿ ಕೂಲಿ ಕೊಡುವ ನಾವುಗಳು ನಮ್ಮ ಮೈ ಬೆವರನ್ನು ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ. ಸಂಜೆ ಮೀನು ಮತ್ತು ಮಾರುದ್ದ ಜಡೆಯ ಮಗಳಿಗೆರಡು ರಿಬ್ಬನ್ನು ಒಯ್ಯುವಾಗ ನಗುತ್ತವೆ ಅವರ ಕೈಯಲ್ಲಿ ನಾವೇ ಕೊಟ್ಟ ನೋಟುಗಳು ಇಲ್ಲಿನ ಬರಕತ್ತಿನ ಬದುಕ ಕಂಡು ಕೊನೆಗೂ ಕಂಡದ್ದೇನು ಇಲ್ಲಿ? ಮುಚ್ಚಿದ ಬಾಗಿಲ ಒಳಗಡೆ ಕೋರೈಸುವ ಗ್ಲಾಸು, ಹೊಳೆಯುವ ಟೆರೇಸು ಬಿಟ್ಟರೆ, ಹಸಿರ ಕೊಂದು ಜಾರುವ ನೆಲ ಹಾಸು ದುಡಿದು ರಾತ್ರಿ ಮನೆ ಸೇರಿದ ಅವರೋ.. ಜೋಗುಳ ಕೇಳಿಸಿಕೊಂಡಂತೆ ನಿದ್ದೆ ಹೋಗುತ್ತಾರೆ ಜೋಪಡಿಯಲ್ಲಿ ನಾವೋ… ದಿಂಬಿನ ಜೊತೆಗೆ, ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಇಲ್ಲಿ ಈ ಮಹಡಿ ಮನೆಯಲ್ಲಿ. *******

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾವು ಕಾರ್ಮಿಕರು ಸಾಯಬಣ್ಣ ಮಾದರ ನಾವು ಕಾರ್ಮಿಕರು ನಮ್ಮಗರಿವಿಲ್ಲದೆ ಹಗಲು ಇರುಳು ಚಲಿಸುತ್ತಿವೆ ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ ಮುಸುಕು ಹೊದ್ದು ಹಸುರನುಟ್ಟು ನಾಳೆ ಎಂಬುವುದು ಭಯವಿಲ್ಲದೆ! ತಲೆಯೊಡೆದು ಬದಕುವವರು ನಾವಲ್ಲ ಬರಿ ದುಡಿದು ತಿನ್ನುವರು ನಾವೆಲ್ಲ ! ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ ನಿಮ್ಮ ತೆವಳುವ ಕನಸುಗಳಿಗೆ ನಮ್ಮ ಸ್ವಪ್ನದೆಲೆಗಳಾಗಿ ಚಲಿಸುತ್ತಿದ್ದೇವೆ ಮಾಸಿದ ಬಣ್ಣ ಬಳಿದುಕೊಂಡು ನಿಮ್ಮ ಭಾಷೆ-ಭಾವಗಳು ನುಂಗಿ ಹಾಕಿವೆ ಎಷ್ಟೊಂದು ಜೀವಗಳು ಉಸಿರಿನ ಸಮಾಧಿಗಳ ಮೇಲೆ ಆಕಾಶದಲ್ಲಿ ಹಾರಾಡಿ ನೀರಿನಲ್ಲಿ ತೇಲಾಡಿ ಭೂಮಿಯಲ್ಲಿ ಹುಂಕರಿಸುವವರೆ ಕಣ ಕಣದ ಕೆಂಬಣ್ಣ ಸುರಿಸಿ ದೇಶ ಕಟ್ಟಲು ಜೀವ ತೆತ್ತವರು ನಾವು ! ಚಿಗುರಿದ ಹೂವ ಮಾಲೆ ಮಾಡಿಕೊಂಡವರು ನೀವು! ಮಲಹೊತ್ತು ಚಪ್ಲಿ ಹೊಲೆದು ಚರಂಡಿ ಬಳಿದು ರೋಡಿಗೆ ಟಾರು ಹೊತ್ತವರು ನಿಮ್ಮ ಶವಕ್ಕೆ ಮುಕ್ತಿದಾತರು ನಾವು ! ಬರಿ ಸ್ವಚ್ಛ ಭಾರತ ವಾರಸದಾರರು ನೀವು ಮಳೆ ಬಿಸಿಲಿಗೆ ಮೈಯೊಡ್ಡಿ ದಬ್ಬಾಳಿಕೆ ಅವಮಾನಕ್ಕೆ ಕಲ್ಲಾಗಿ ದುಡುಮೆಯೇ ದೇವರೆಂದು ಹೊಟ್ಟೆ ತುಂಬುವ ಕನಸಿಗಾಗಿ ಕಲ್ಲಿಗು ಕಣ್ಣೀರಾದ ಬದಕು ನಮ್ಮದು ಬೆನ್ನು ಬಾಗಿಸಿ ಕಣ್ಣು ಪಿಳುಕಿಸಿ ಚರ್ಮ ಸುಟ್ಟು ನೆರಿಗೆ ಬಿದ್ದವರು ಆಸೆಗೋಪುರ ಕಳಚಿ ಆಕಾಶವೆ ಚಪ್ಪರ ಹೊದ್ದು ಭೂಮಿಯೇ ಹಾಸಿಗೆ ಮಾಡಿಕೊಂಡು ಬದುಕುವ ನಮ್ಮ ಬಾಳೆ ಬೆಂಗಾಡು ನಾವು ಇರದಿದ್ದರೆ ನಿಮ್ಮ ಬಾಳು ಬರಿ ಗೋಳು !! ******

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ಕೂಗು ಈರಪ್ಪ ಬಿಜಲಿ ಕಾರ್ಮಿಕರ ಕೂಗು” ಚೋಟುದ್ದದ ಹೊಟ್ಟೆಚೀಲವ ತುಂಬಿಸಲು ಮನುಜ ಮಾಡುವನು ಕೂಲಿ ಕೆಲಸಗಳನು ಕಟ್ಟಡ,ಬಡಗಿತನ,ವೆಲ್ಡಿಂಗ್ ,ಪೈಪ್ಲೈನಗಳು ಪೇಂಟರ್,ಪೌರ,ಸಿಂಪಿಗಕಮ್ಮಾರಿಕೆ,ಅನೇಕ ಕರ್ಮಗಳು।।1।। ನಮ್ಮಿ ಕಾರ್ಮಿಕರಿಗಿಲ್ಲ ಜೀವನದ ಭದ್ರೆತೆ ಅವರ ಜೀವನವಿರುವುದು ಬಲು ವಿಭಿನ್ನತೆ ಬಂಡ್ವಾಳಷಾಹಿ,ಕಾರ್ಮಿಕರಲ್ಲಿನ ತಾರತಮ್ಯತೆ ದೂರಾಗಿ ಮೂಡಿಬರಲಿ ಎರಡೂಗುಂಪಲಿ ಸರಿಸಮಾತೆ।।2।। ಕಾರ್ಮಿಕರ ಕೂಗು ನೊಂದ ಮನಗಳ ಕೂಗು ಕೇಳುತ ಧನಿಕರು ಹಿಗ್ಗಿಸುವರು ತಮ್ಮಯ ಮೂಗು ಹೃದಯಸಿರಿವಂತಿಕೆಲಿ ಕಾರ್ಮಿಕರ ಮನಸ್ಸದು ಮಗು ವೇತನದ ದಿನದಂದು ಇವರ ಮುಖದಲಿ ಕಿಲಕಿಲ ನಗು।।3।। ಜೀವದ ಅಂಗುತೊರೆದು ಅವಿರತ ದುಡಿವವರು ನಿರ್ಭಯವಾಗಿ ಬಹುಅಂತಸ್ತಿನ ಕಟ್ಟಡಗಳ ಕಟ್ಟುವವರು। ನಗರದ ಕಾರ್ಮಿಕರ ಮಕ್ಕಳಿಗೆ ವಿದ್ಯೆಯಕೊರತೆ ಕಾರ್ಮಿಕರಿಗೆ ಶಾಶ್ವತವಾದ ಆಶ್ರಯಸ್ಥಳಗಳ ಕೊರತೆ ।।4। ಕೂಲಿಗಾಗಿ ವಲಸೆ ಹೋಗುವ ಕಾರ್ಮಿಕರು ಕೆಲಸದ ಮೇಲೆ ದುರ್ಘಟನೆಗೆ ತುತ್ತಾಗಿ ಬಲಿಯಾಗುವರು ಬಲಿಯಾಗುವ ಕುಟುಂಬಗಳಿಗೆ ದೊರಕಲಿ ಉತ್ತಮ ಪರಿಹಾರ ಧನಿಕರ ಮೂಲಕ ದೊರಕಿಸಲಿ ನಮ್ಮಿಘನ ಸರ್ಕಾರ।।5।। ***** ಕಟ್ಟಡ ಕೆಲಸಗಳ ಮಾಡುವ ನಮ್ಮೀ ಕಾರ್ಮಿಕರು ನವ ನಗರಗಳ ನಿರ್ಮಿಸುವ ಹೆಮ್ಮೆಯ ನಿರ್ಮಾಪಕರು। ಆಲಿಸಲಿ ಕಾರ್ಮಿಕರ ಕೂಗನು ಮಾಲೀಕರು ಹೃದಯವಂತಿಕೆಯನು ಮೆರೆವಂತಾಗಲಿ ಸಿರಿವಂತರು ।।6।।

ಕಾರ್ಮಿಕ ದಿನದ ವಿಶೇಷ -ಕವಿತೆ

ಕವಿತೆ ಬಿಸಿಲ ಹೂಗಳ ಬದುಕು ಲಕ್ಷ್ಮಿ ಪಾಟೀಲ್ ಬಿಸಿಲ ಹೂಗಳ ಬದುಕು ನನಗೆ ನೆರಳಿಗಿಂತಲೂ ಬಿಸಿಲೇ ಇಷ್ಟ ಒಳಗಿನ ಬೆಂಕಿ ಹೊರಗೆ ನೀರಾಗಿ ಹರಿಯುವ ವಿಸ್ಮಯಕ್ಕೆ ಕಾವುಗಳನ್ನೆಲ್ಲ ಕರಗಿಸಿ ನೀರಾಗುವುದನ್ನು ಕಲಿಸುತ್ತವಲ್ಲ ಅದೆಷ್ಟು ಸಲೀಸು… ಬಿಸಿಲನ್ನು ಹಾಸಿ ಹೊದೆದು, ಶ್ರಮದಲ್ಲಿ ಬೆವರಿಳಿಸಿ ಬಿಸಿಲ ಹಾಡುಗಳನ್ನು ಕಟ್ಟಿ ಜೀವನೋತ್ಸಾಹ ಹೇರಿಕೊಂಡು ಹೊರಟವರನ್ನು ಕಂಡು ನಾನೀಗ ದುಃಖಿಸುವುದಿಲ್ಲ ಭಾವಕೋಶಗಳನು ಅರಳಿಸಿ ಬಿಡುವ ಬಾಡದ ಹೂವಾಗಿ ಉಳಿದು ಬಿಡುವ ಬದುಕಿನರ್ಥಗಳನ್ನು ಹಿಗ್ಗಿಸುವ ಇವರನ್ನು ಕಂಡು ಹಿಗ್ಗುತ್ತೇನೆ ಬೆವೆರಿಳಿಸುವ ಕಸಬಿಗೆ ಜೀವ ತುಂಬುತ್ತೇನೆ… ತಮ್ಮಷ್ಟಕ್ಕೆ ತಾವು ತಣ್ಣಗೆ ಬದುಕುವ ಇವರು ಥೇಟ್ ಮಣ್ಣಿನ ಬಣ್ಣದವರು ನೋವುಗಳನ್ನೆಲ್ಲ ಧಗೆಯಲ್ಲಿ ಆವಿಯಾಗಿಸಲು ಅವರು ಬಿಸಿಲ್ಲನ್ನೇ ಪ್ರೀತಿಸುವರು ಉಪ್ಪು ನೀರಿನ ಕಡಲಾಗುವರು ಬೆವರುಬಸಿದು, ತಮ್ಮ ದಣಿವಿಗೆ ತಮ್ಮ ಸೋಲಿಗೆ ತಮ್ಮ ಉಪವಾಸಗಳಿಗೆ ತಣಿಸುವ ಪಾಠ ಕಲಿತುಕೊಂಡವರು… ಅನ್ಯರ ಹೊರೆ ಹೊತ್ತು ಭಾರವೆಂದು ನರಳದವರು ಹಡಗು ಕಟ್ಟಿಕೊಂಡು ಹಾಯಾಗಿರುವವರಿಗೆ ನಿತ್ಯ ತುತ್ತಾಗುವವರು ಈ ಪೊರೆವ ಜನಗಳೇ ಭೂಮಿಯ ತುಂಬಾ ಬಿಸಿಲ ಹೂವಾಗಿ ಅರಳಿ ನಿಲ್ಲುವರು….. ಇವರ ವಡಲ ವಡಬಾಗ್ನಿಯಲ್ಲಿ ತಮ್ಮ ಹಡಗು ತೇಲಿಸಿಕೊಂಡು ಅವರಲ್ಲಿ ಹಾಯಾಗಿ ಬದುಕುವರು ನೆರಳನ್ನೇ ಪ್ರೀತಿಸುವರು ನೆರಳಾದವರನ್ನು ಮರೆಯುವರು…. ಪಾಪಕ್ಕೆ ಪಕ್ಕಾಗಿ ಬಿಸಿಲಿಗೆ ಬಿದ್ದರೆ ಸತ್ತೇ ಹೋಗುವರು… ಅರಳದೆ ಅರಳಿಸದೆ ಮಣ್ಣಿನಲ್ಲಿ ಮಣ್ಣಾಗದೆ ಚಿತಾಗಾರದಲ್ಲಿ ಬೂದಿಯಾಗುತ್ತವೆ ಈ ಶವಗಳು ಹುಡುಕಿದರಲ್ಲಿಲ್ಲ ಜೀವಾಮೃತದ ಕಣಗಳು, ಬಿಸಿಲ ಹೂಗಳ ತಳಕೆ ಗೊಬ್ಬರವೆಂದು ಚೆಲ್ಲಲು…. *********

Back To Top