ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅಪರೂಪದ ಕನಸು ಕಂಡೆ
ಇಪ್ಪತ್ತೈದರ ಮುಂಜಾವಲಿ;
ಮಣ್ಣೆಣ್ಣೆ ದೀಪದ ಮಬ್ಬಿನಲಿ
ಆಲವೂ ಅತ್ತಿಯೂ ಚಿಗುರಿದ್ದವು,
ಒಂದೇ ಮಣ್ಣಿನ ಮಡಿಲಲಿ.

ಆಲದ ಕೆಳಗೆ ಭೀಮ ನಿಂತ,
ಬಾವಿಯ ಬಳಿ ಕೇರಿಯ ಮಗು;
ಬೊಗಸೆ ತುಂಬ ನೀರು ಕೊಟ್ಟಾಗ
ಮಗುವಿನ ಮುಖ ಅರಳಿತು
ನೀರೊಳಗೆ ಆಕಾಶವೂ ಅರಳಿತು.

ಅತ್ತಿಯ ಕೆಳಗೆ ದುರ್ಯೋಧನ,
ಮಡಿಲಲ್ಲಿ ಹಳೆಯ ಓಲೆ;
ಕೋಲ ತುದಿಯಿಂದ ನೆಲವ ಗೀರಿ
ಗೆರೆಯ ಮೇಲೆ ಗೆರೆ ಎಳೆದ
ಮಣ್ಣಿನ ಎದೆಯಲಿ ಗಾಯವಾಯಿತು.

ಆಲ ಮೆಲ್ಲಗೆ ಬೇರು ಚಾಚಿತು
ಕೇರಿಯಿಂದ ಬಾವಿಗೆ,
ಬಾವಿಯಿಂದ ಶಾಲೆಯ ಹೊಸ್ತಿಲಿಗೆ;
ಭೀಮ ಗದೆಯನ್ನು ನೆಲಕ್ಕಿಟ್ಟು
ಮಗುವಿನ ಕೈಗೆ ಸ್ಲೇಟು ಕೊಟ್ಟ.

ಅತ್ತಿಯ ಕೊಂಬೆ ಹಣ್ಣಾಯಿತು,
ಹಣ್ಣಿನೊಳಗೆ ಸಾವಿರ ಬೀಜ;
ದುರ್ಯೋಧನ ಬೇಲಿ ಕಟ್ಟಿದರೂ
ಹಕ್ಕಿಗಳು ಕೊಂಬೆಯಿಂದ ಹಾರಿದವು
ಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ.

ಒಂದು ಸಂಜೆ ಬೆಂಕಿ ಎದ್ದಿತು,
ಹಳೆಯ ಓಲೆ ಉರಿದು ಬೂದಿಯಾಯಿತು;
ಬೂದಿ ಗಾಳಿಯ ಜೊತೆಗೆ ಹಾರಿದಾಗ
ಆಲದ ಬರಿದ ಕೊಂಬೆಯ ತುದಿಯಲ್ಲಿ
ಹೊಸ ಚಿಗುರೊಂದು ನಗುತ್ತಿತ್ತು.

ಮಳೆ ಸುರಿಯಿತು, ಮಣ್ಣು ಘಮಿಸಿತು;
ಆಲದ ನೆರಳಿಗೆ ಕೇರಿ ಬಂತು,
ಕೇರಿಯ ಬೆನ್ನಿಗೆ ಊರೂ ಬಂತು;
ಒಂದೇ ಚಾಪೆಯ ಮೇಲೆ ಕೂತು
ಅಕ್ಷರದ ದೀಪ ಹಚ್ಚಿದರು.

ಅತ್ತಿಯ ಕೆಳಗೆ ದುರ್ಯೋಧನ
ರಾತ್ರಿಯಿಡೀ ನಿದ್ದೆಗೆಟ್ಟ
“ಎಲ್ಲರೂ ನೆಟ್ಟಗೆ ನಿಂತರೆ
ನನ್ನ ಸಿಂಹಾಸನದ ಎತ್ತರ
ಇನ್ನು ಯಾರಿಗೆ ಕಾಣುವುದು?”

ಬೆಳಕು ಹರಿಯಿತು
ಭೀಮನ ಗದೆ ಮಣ್ಣಲ್ಲೇ ಉಳಿಯಿತು;
ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತ
ಹೊಸ ಪುಸ್ತಕ ತೆರೆದುಕೊಂಡಿತು
ಅತ್ತಿಯ ನೆರಳು ಕಿರಿದಾಗುತ್ತಿತ್ತು.

ಎಚ್ಚರವಾದಾಗ
ಕಿಟಕಿಯಾಚೆ ಎರಡೂ ಮರಗಳಿದ್ದವು;
ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,
ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತು
ನಿನ್ನೆ ಎಳೆದ ಗೆರೆ
ಇಂದು ಮಣ್ಣಾಗುತ್ತಿತ್ತು.


About The Author

2 thoughts on “ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು””

Leave a Reply

You cannot copy content of this page

Scroll to Top