ಕಾವ್ಯ ಸಂಗಾತಿ
ಆದಪ್ಪ ಹೆಂಬಾ
“ಜಗದೊಡೆಯಮುನಿದರೇ….”


ಇನಿತು ಮುನಿಯದೆ
ಎನಿತು ದಣಿಯದೆ
ನಗುತಲಿಹನು ನೇಸರ
ಹೊನ್ನ ಬೆಳಕು
ಅರುಣ ಕಿರಣ
ಚೆಲ್ಲುತಿಹನು ದಿನಕರ||
ಮತಿಹೀನ ಮನುಜ
ಭೂಮಾತೆಯ ತನುಜ
ಅಮ್ಮನೆಂಬುದ ನೋಡದೇ
ಹೊನ್ನ ಮಣ್ಣನು ಅಗೆಯುತಲಿರುವೆ
ಹಸಿರು ವನಸಿರಿಯ ಬಗೆಯುತಲಿರುವೆ
ಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ||
ಜಗವ ಬೆಳಗುವ
ಅವನ ಕಣ್ಣಿಗೇ ಮಣ್ಣಂತೆ
ಕಾಣಲೊಲ್ಲದು ತಿಳಿಯಲೊಲ್ಲದು
ನಿಮ್ಮಗಳ ಕಪ್ಪು ರಂಗಿನಾಟ
ಕೊಂಚ ತಾಳಿ
ಪಾಪದ ಫಲ ಉಣ್ಣುವಿರಂತೆ||
ನೇಸರನೊಬ್ಬ
ಮಹಾ ಮರೆಗುಳಿ
ನಿತ್ಯ ಬರುವನು
ಎಲ್ಲವ ಮರೆತು
ಮತ್ತೆ ಮುಳುಗುವನು
ಬೇಸರದಿ ಮುನಿದು||
ಜಗದೊಡೆಯ ಮುನಿದರೆ
ಉಳಿಗಾಲ ನಮಗಿಲ್ಲ
ಯೋಚಿಸಿ ಮುಂದಡಿ ಇಡಿ
ಮಿಂಚಿ ಹೋದರೆ ಕಾಲ
ಚಿಂತಿಸಿಯೂ ಫಲವಿಲ್ಲ||
ಇಂದಿದೆಯೋ
ಮುಂದಿದೆಯೋ
ಎಂದಿದೆಯೋ
ಮನುಕುಲದ ಮಾರಿಹೋಮ
ತಿಳಿದೇಳು ಸಿಡಿದೇಳು ಕೂಗೇಳು
ತಡೆಯೋಣ ಭೂರಮೆಯ ನಾಶವನ್ನ||
ಆದಪ್ಪ ಹೆಂಬಾ



