ಡಾ.ಮೀನಾಕ್ಷಿ ಪಾಟೀಲ ಲೇಖನ-ಜನನಿ ಜೊತೆ ಎರಡು ಮಾತು

ಲೇಖನ

ಡಾ.ಮೀನಾಕ್ಷಿ ಪಾಟೀಲ

ಜನನಿ ಜೊತೆ ಎರಡು ಮಾತು

” ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು “ಎಂಬ ಕವಿವಾಣಿಯಂತೆ— ಯಾವ ಮಗು ಜನನಿಯಿಂದ ಶಿಕ್ಷಣ ಸಂಸ್ಕಾರ ಸಂಸ್ಕೃತಿಯನ್ನು ಪಡೆಯುತ್ತದೆಯೋ ಅದೇ ಮಗು ಮುಂದೆ ಸತ್ಪ್ರಜೆ ಎನಿಸಿಕೊಳ್ಳುತ್ತಾನೆ. ರೂಪಿತ ವ್ಯಕ್ತಿತ್ವದ ನೆಪದಲ್ಲಿ ತಾಯಿಯೊಬ್ಬಳ ಪಾತ್ರ ಬಹುಮುಖ್ಯ ವಾಗಿರುತ್ತದೆ. ಮಗುವಿನ ಪ್ರತಿ ವರ್ತನೆಯ ಹಿಂದೆ ತಂದೆ-ತಾಯಿ ಮನೆಯ ಪರಿಸರ ಕಾರಣೀಭೂತವಾಗುತ್ತವೆ. ಕುಟುಂಬದ ವಾತಾವರಣ ಸದಸ್ಯರುಗಳ ವರ್ತನೆಯನ್ನು ಹೆತ್ತವರು ಬಹು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ, ಅದರಲ್ಲೂ ಮಗುವಿನ ಪ್ರಾರಂಭಿಕ ಬೆಳವಣಿಗೆ ಹಂತದಲ್ಲಿ ಅವರು ಸ್ವತಹ ಮಗುವಿನ ಜೊತೆಗೆ ಜಾಗರೂಕತೆಯಿಂದ ವರ್ತಿಸುವುದು ಅಗತ್ಯವಾಗಿದೆ. ಆದರೆ ವಿಷಾದದ ಸಂಗತಿಯೇನೆಂದರೆ ನಮ್ಮಲ್ಲಿ ಬಹುತೇಕರು ಈ ಮೂಲ ವಿಚಾರಗಳ ಕಡೆ ಲಕ್ಷ ಹರಿಸದೇ ಇರುವುದು. ಈ ಹಿನ್ನೆಲೆಯಲ್ಲಿ ಇಂದಿನ ಪಾಲಕರು ಮಕ್ಕಳ ವಿಷಯದಲ್ಲಿ ಮೊದಲಿನಿಂದಲೇ ದೂರದೃಷ್ಟಿ ಬೆಳೆಸಿಕೊಳ್ಳಬೇಕು.
          ಇಂದಿನ ದಿನಮಾನಗಳಲ್ಲಿ ಬಹುತೇಕ ಶ್ರೀಮಂತರು ತಮ್ಮ ಮಕ್ಕಳ ಭವಿಷ್ಯವನ್ನು ಹಣದಿಂದ ರೂಪಿಸಿಕೊಳ್ಳಲು ನೋಡುತ್ತಾರೆ. ಮಧ್ಯಮವರ್ಗದ ಜನರಲ್ಲಿ ಮಕ್ಕಳ ಭವಿಷ್ಯದ ವಿಷಯ ಪ್ರತಿಷ್ಠೆಯಾಗಿ ಬೆಳೆಯುತ್ತಿದೆ.ಬೇರೆ ಮನೆಯ ಮಕ್ಕಳು ದುಬಾರಿ ಶಾಲೆಗೆ ಹೋಗುವುದನ್ನು ನೋಡಿ ತನ್ನ ಮಗು ಕೂಡ ಅದೇ ಶಾಲೆಗೆ ಹೋಗಬೇಕೆನ್ನುವ ಹುಚ್ಚುಹಂಬಲ ಹಠವಾದಿತನ ಬೆಳೆದು ಹಣ ಗುಣ ಎರಡನ್ನು ಕಳೆದುಕೊಳ್ಳುವ ಪ್ರಸಂಗಗಳನ್ನು ನಾವು ನೋಡುತ್ತಿದ್ದೇವೆ. ಮನೆಯಲ್ಲಿ ಮೊಂಡು ವಾದಮಾಡಿ, ತಾನು ಮಾತ್ರ ನಿರಕ್ಷರಿಯಾಗಿದ್ದರೂ ಸಹ ಮನೆಪಾಠ ಹೇಳಿಸಿದರಾಯಿತು ಎಂಬ ಹುಂಬತನವನ್ನು ಪ್ರದರ್ಶಿಸುತ್ತಾರೆ. ಆದರೆ ಮಗುವಿಗೆ ಅಂತಹ ಶಾಲೆ ಹೊರೆಯಾಗಿ ತನ್ನ ಸಹಜ ಸ್ವಭಾವದ ಕಲಿಕೆಯನ್ನು ಕುಗ್ಗಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚು ಸಂಭವನೀಯ. ಇಂಥ ಸಾಮಾನ್ಯ ವಿಷಯಗಳನ್ನು ನಮ್ಮ ತಾಯಂದಿರು ಗಮನಿಸುತ್ತಿಲ್ಲ. ತಾಯಿನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುತ್ತಿಲ್ಲ. ಮಗುವಿಗೆ ಶಾಲೆಯಲ್ಲಿ ಹೇಳಿಕೊಡುವುದಕ್ಕಿಂತಲೂ  ಮನೆಯಲ್ಲಿ ಕಲಿಸಿಕೊಡುವ ಆಟ-ಪಾಠಗಳು ಪದ- ಪುಂಜಗಳು ಕಥೆಗಳಿಗೆ ಮಗು ಬಹುಬೇಗ ಸ್ಪಂದಿಸುತ್ತದೆ. ಇಂತಹ ಹಲವು ವಾಸ್ತವ ಸಂಗತಿಗಳಲ್ಲಿ ಪ್ರತಿಷ್ಠೆಗೆ ಜೋತು ಬೀಳದೆ ಅಂಧಾನುಕರಣೆಯಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.ಮಗುವಿಗೆ ತಾಯಿ ಆಡು ನುಡಿಯಲ್ಲಿ ಪೂರ್ವ ಶಿಕ್ಷಣ ಪ್ರಾರಂಭಿಸುವುದರಿಂದ ಕಂದನಿಗೆ ಪುಸ್ತಕದ ಪಾಠಗಳನ್ನು ಹೇಳಿ ಕೊಡಬಹುದಾಗಿದೆ.
             ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತು ಬಂದರೇನು ಕಲಿಕೆ ಉಂಟಾದ ಹಾಗಲ್ಲ. ಶಾಲೆ ಜ್ಞಾನ ಅನುಭವ ಹೊಂದಿರುವ ಸಮಚಿತ್ತ ಸ್ಥಳ . ಮನೆಯೇ ಶಾಲೆ ಆಗುವುದು ಇನ್ನು ಆರೋಗ್ಯಕರ. ಈ ಸಾಮಾನ್ಯ ತಿಳುವಳಿಕೆ ಎಲ್ಲ ತಾಯಂದಿರಿಗೂ ಇರುವುದು ಈಗಂತೂ ಅತಿ ಅಗತ್ಯವಾಗಿದೆ. ಮಮತೆ ವಾತ್ಸಲ್ಯಗಳ ಜೊತೆಗೆ ಮಾನಸಿಕ ರಕ್ಷಣೆ ಹಾಗೂ ಪ್ರಗತಿಗಳು ಮೊದಲ ಪಾಠಶಾಲೆ ಎಂಬ ಮನೆಯಿಂದ ಓದುವುದು ಅಪೇಕ್ಷಣೀಯ. ಇದನ್ನು ಪರಿಭಾವಿಸಿ ಪ್ರಾಥಮಿಕ ಹಂತದ ಬೋಧನೆಗೆ ಎಂದು ಗುರು ಮಾತೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಉಂಟು.
               ಕಾರಣ ಮಕ್ಕಳನ್ನು ಕಠಿಣ ಬಾಲವಾಡಿ ಗಳಿಗೆ ಕಳಿಸಿ ಹೆಚ್ಚು ವಂತಿಗೆ ವಸೂಲಿ ಮಾಡುವ ವ್ಯವಸ್ಥೆಗೆ ಬಲಿಯಾಗುವ ಪ್ರವೃತ್ತಿಗಳಿಗೆ ಕೊನೆ ಹೇಳಬೇಕು. ಕಲಿಕೆಗೆ ಬೇಕಾದ ಸನ್ನಿವೇಶವನ್ನು ನಿರ್ಮಿಸಬೇಕು.ಅಥವಾ ಸರಳ ಸಹಜ ಶಿಶುವಿಹಾರ ಗಳಿಗೆ ಕಳುಹಿಸಿ ಕೊಡುವುದು ಒಳ್ಳೆಯದು.
                  ಒಟ್ಟಿನಲ್ಲಿ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣವನ್ನು ರೂಪಿಸುವಲ್ಲಿ ತಾಯಂದಿರ ಶ್ರಮಿಸಬೇಕಾಗುತ್ತದೆ.ಅಂದಾಗ ಮಾತ್ರ ಅಪೇಕ್ಷಿಸಿದ ಬೆಳೆಯ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ


 ಡಾ. ಮೀನಾಕ್ಷಿ ಪಾಟೀಲ್ 

Leave a Reply

Back To Top