ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಕೀಳರಿಮೆ

ಶಾಲೆಗೆ ಅನಿಯಮಿತವಾಗಿ ಹಾಜರಿರುತ್ತಿದ್ದ ಕುಮಾರನ ಪಾಲಕರು ಅವನನ್ನು ರಮಿಸಿ ಶಾಲೆಗೆ ಕಳಿಸಲು ಬರುತ್ತಿದ್ದರು.ಇವನು ಉಪಯೋಗಕ್ಕೆ ಬಾರದವ ಇವನ ಅಣ್ಣ ಇವನಿಗಿಂತ ತುಂಬಾ ಚುರುಕು.ಇವನು ಅವನಿಗಿಂತ ದಡ್ಡ.ಶಾಲೆ ಕಲಿಯದಿದ್ದರೆ ಇದ್ದ ಹೊಲವನ್ನು ನೋಡಿಕೊಳ್ಳಲಿ ಎಂದು ಜಾಣನಿದ್ದರೂ ಕಲಿಕೆಯಲ್ಲಿ ಹಿಂದುಳಿದ ಕುಮಾರನಿಗೆ ಎಲೊಲ ಮಕ್ಕಳೆದುರು ಹೀಯಾಳಿಸುತ್ತಿದ್ದರು.ಇದರಿಂದ ಬೇಸರಗೊಂಡ ಕುಮಾರ ತನಗೇನೂ ಬರುವದಿಲ್ಲ ತನ್ನಿಂದ ಕಲಿಯಲಾಗದು ಎಂಬ ಕೀಳರಿಮೆಗೆ ಒಳಗಾಗುವ ಸಂದರ್ಭ ಮಕ್ಕಳಲ್ಲಿ ಋಣಾತ್ಮಕ ಭಾವವನ್ನು ಹುಟ್ಟುಹಾಕುತ್ತದೆ.ಇದು ಅವನ ಬಾಲ್ಯ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.ನಿಜ ಎಷ್ಟೋ ಜನ ಪಾಲಕರು ತಮ್ಮ ಮಗ ಅಥವಾ ಮಗಳನ್ನು ತಮ್ಮ ಉಳಿದ ಮಕ್ಕಳ ಬುದ್ಧಿ ಶಕ್ತಿಗೆ ಹೋಲಿಕೆ ಮಾಡಿ ಅವರ ಆತ್ಮಸ್ದೈರ್ಯವನ್ನೇ ಕುಗ್ಗಿಸುತ್ತಾರೆ.
ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿ ಬಳಳ ಮಂದಿ ತಪ್ಪಾಗಿ ಸ್ವವ್ಯಕ್ತಿತ್ವ ಚಿತ್ರವನ್ನು ನಿರ್ಮಿಸಿಕೊಳ್ಳು ತ್ತಾರೆ.ತಮಗಿಂತ ವೇಗವಾಗಿ ಹಾಗೂ ಹೆಚ್ಚಿನ ವಿಷಯಗಳನ್ನು ಗ್ರಹಿಸುವ ತಮ್ಮ ಸಹಪಾಠಿಗಳೊಂದಿಗೆ ತಮ್ಮ ಶಕ್ತಿಯನ್ನು ಹೋಲಿಸಿಕೊಂಡು ತಾನೊಬ್ಬ ಅಪ್ರಯೋಜಕ, ಕಲಿಕೆಯಲ್ಲಿ ತುಂಬಾ ಹಿಂದಿರುವೆ ಎಂದು ತಿಳಿದುಕೊಳ್ಳಲು ಪ್ರಾರಂಭಿಸುತ್ತಾನೆ.ಆರಂಭದ ಚಿಕ್ಕಪುಟ್ಟ ಲೋಪದೋಷಗಳಾದಾಗ ತುಸು ಗದರಿ ಹೇಳಿದಾಗಲೂ ಅವರು ಯಾವ ಉದ್ದೇಶದಿಂದ ತನಗೆ ಹೀಗೆ ಮಾಡುತ್ತಾರೆಂದು ವಿಚಾರಿಸದೇ ತನಗೆ ಯಾರೂ ಚನ್ನಾಗಿ ಮಾತನಾಡುತ್ತಿಲ್ಲ, ಎಲ್ಲರಿಂದ ತಾನು ಹೇಳಿಸಿಕೊಳ್ಳುವದೇ ಆಯಿತು ಎಂಬ ವಿಚಾರವನ್ನೆ ಮನಸ್ಸಿನಲಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹೆತ್ತವರಿಗೆ ನನ್ನ ಮೇಲೆ ಪ್ರೀತಿ ಇಲ್ಲ
ಬರೀ ಅಣ್ಣ ಮಾತ್ರ ಜಾಣ ಎನ್ನುತ್ತಾರೆ. ತಾನು ಬರೀ ಅಭ್ಯಾಸದ ವಿಷಯಕ್ಕೆ ಬೈಸಿಕೊಳ್ಳುವದೇ ಆಯಿತು ಎಂದು ತಮ್ಮ ಬುದ್ಧಿಶಕ್ತಿ ಮತ್ತು ಅಧ್ಯಯವ ಸಾಮರ್ಥ್ಯದ ಬಗೆಗೆ ನಿಷೇಧಾತ್ಮಕವಾದ ಭಾವನೆಗಳನ್ನು ಮನದೊಳಗೆ ಹರಿಯಗೊಡುತ್ತಾರೆ.ಒಮ್ಮೆ ನಿಷೇಧಾತ್ಮಕವಾದ ಭಾವನೆಗಳು ಸೇರಿಕೊಂಡವೆಂದರೆ ಎಷ್ಟೇ ಪ್ರಯತ್ನ ಪಟ್ಟರೂ, ಹೋರಾಟ ನಡೆಸಿದರೂ ಯಶಸ್ಸು ದೊರಕದು. ಪಾಲಕರಾದವರೂ ತಮ್ಮ ಮಗುವಿಗೆ ಪ್ರೀತಿಯಿಂದ ‘ನೀನು ಜಾಣನಿದ್ದೀಯ, ಇನ್ನೂ ಸ್ವಲ್ಪ ಪ್ರಯತ್ನ ಪಟ್ಟರೆ ನಿನ್ನ ಅಣ್ಣನನ್ನು ಮೀರಿಸುತ್ತೀಯ..ನಿನ್ನಲ್ಲಿ ಆ ಶಕ್ತಿ ಇದೆ ಪ್ರಯತ್ನ ಪಡು, ಶ್ರದ್ಧೆಯಿಂದ ಮಾಡು’ ಎಂದು ಧನಾತ್ಮಕವಾಗಿ ಪ್ರೋತ್ಸಾಹಿಸಬೇಕು.ಯಾಕೆಂದರೆ ನಮ್ಮ ಕೈಯಲ್ಲಿ ಎಲೊಲ ಬೆರಳುಗಳು ಸಮ ಇಲ್ಲ ಅಲ್ಲವೇ?


ಹುಟ್ಟು ಆಶಾವಾದಿಗಳಾದ ಯುವಕರ ಮನಸ್ಸು ಸೋಲಿನಿಂದ ಎಷ್ಟೊಂದು ಸಂಕಟಗ್ರಸ್ತವಾಗುತ್ತದೆ ಎಂದರೆ ಹೇಳಲಾಗದು.ಆಗ ಬಹುಮಾನದ ಆಸೆ ತೋರಿಸಿದರೂ, ಧೈರ್ಯ ನೀಡಿದರೂ ಅವರಲ್ಲಿ ಬದಲಾವಣೆ ಸಾಧ್ಯವಿಲ್ಲ.’ನನಗೆ ಓದಃ ಬಾರದು,ನನ್ನ ಮನಸ್ಸಿಗೆ ಹಿಡಿಸುವದಿಲ್ಲ’ಎಂಬ ಮಾತಿನಲ್ಲಿ ಇನ್ನೂ ಓದಲು ಯತ್ನಿಸಿ ವಿಫಲನಾಗಿ ನಗೆಪಾಟಲಾಗಲು ಸಾಧ್ಯವಿಲ್ಲ’ಎಂಬ ನೋವೇ ಅಡಗಿರುತ್ತದೆ.
ನಡೆಯುವಾಗ ಎಡವಿ ಬಿದ್ದರೆ ನಡೆಯುವನೆಡುವದೇ ಕುಳಿತವರು ಎಡವುವರೆ? ಎಂಬಂತೆ ಅವರ ಭಾವನೆಗಳಿಗೆ ಚ್ಯುತಿ ಬರದಂತೆ ತಾಳ್ಮೆ ಹಾಗೂ ಪ್ರೀತಿಯಿಂದ ಮಾರ್ಗದರ್ಶನ aಮಾಡಬೇಕು.ಮೊದಲು ಸಣ್ಣಪುಟ್ಟ ಸಮಸ್ಯೆಗಳನ್ನು ಬಿಡಿಸಲು ಪ್ರೇರಣೆ ನೀಡಿ ಅದರಲ್ಲಿ ಜಯ,ದೊರಕುವಂತೆ ಮಾಡಬೇಕು.ಚಿಕ್ಕ ಜಯ ದೊರಕಿದಾಗಲೆಲ್ಲ ಪ್ರೋತ್ಸಾಹದ ಮಾತುಗಳನ್ನು ಹೇಳಬೇಕು.ಅಂಥ ನೂರಾರು ಸಣ್ಣ ಪುಟ್ಟ ವಿಜಯಗಳನ್ನು ಪಡೆಯುತ್ತಲೇ ದೀರ್ಘಕಾಲದಿಂದ ಮನೆಮಾಡಿಕೊಂಡಿದ್ದ ಅವರ ಅಪಜಯದ ನಿಷೇಧಾತ್ಮಕ ಭಾವನೆ ಮೆಲ್ಲನೆ ಮಾಯವಾಗತೊಡಗಿ ಕಾರ್ಮೋಡ ಕರಗಿದಂತೆ ಕೀಳರಿಮೆ ಆತ್ಮವಿಶ್ವಾಸದ ಮಳೆಯಲ್ಲಿ ಕೊಚ್ಚಿ ಸಾಧಿಸ ಬಲ್ಲೆನೆಂಬ ಆತ್ಮತೃಪ್ತಿ, ಶಾಂತತೆ ಮನವ ಮುದಗೊಳಿಸುತ್ತದೆ.


ತನ್ನ ಅನುಭವಗಳಿಂದ ಸ್ಥೀರಿಕೃತವಾದುದು ಅದನ್ನು ಇನ್ನಿತರ ರಚನಾತ್ಮಕ ಅನುಭವಗಳಿಂದ ಸರಿಪಡಿಸಲು ಸಾಧ್ಯವಾಗುತ್ತದೆ.
ಅಲ್ಪ್ರೆಡ್ ಆಡ್ಲರ ಅವರ ಪ್ರಕಾರ’ಕೀಳರಿಮೆಯ ಭಾವನೆಯನ್ನು ಬಾಲ್ಯದಲ್ಲಿ ಬೆಳೆಸುವ ಮೂಲಕ (ಒಡಹುಟ್ಟಿದವರಿಗೆ ಪ್ರತಿಕೂಲವಾಗಿ ಹೋಲಿಸುವ ಅಥವಾ ಕಡಿಮೆ ಸಾಮಾಜಿಕ ಸ್ಥಾನಮಾನದ ಅನುಭವಗಳುಇದನ್ನು .ಮನೋವೈಜ್ಞಾನಿಕ ಕೀಳರಿಮೆ ಸಂಕೀರ್ಣ ಎನ್ನುತ್ತಾರೆ.ಅಸಮರ್ಪಕತೆಯ ಭಾವನೆಗಳು, ಕಡಿಮೆ ಸ್ವಯಂ ಮೌಲ್ಯ,ಸ್ವಯಂ ಅನುಮಾನ ಮತ್ತು ಕೀಳರಿಮೆಯ ನೈಜ ಅಥವಾ ಕಲ್ಪಿತ ಪ್ರಜ್ಞೆಯಿಂದ ಉಂಟಾಗುವ ಆತ್ಮವಿಶ್ವಾಸದ ಕೊರತೆ ಎಂದು ವಿವರಿಸಬಹುದು.ಬೇರೆ ರೀತಿಯಲ್ಲಿ ಹೇಳುವದಾದರೆ ಇದು ದೀರ್ಘಕಾಲದ ಕಡಿಮೆ ಸ್ವಾಭಿಮಾನ ಎಂದರ್ಥ.ಕಡಿಮೆ ಸ್ವಾಭಿಮಾನವು ಮಗುವಿನ ಬಗ್ಗೆ ಪಾಲಕರು ಹೊಂದಿರುವ ನಕಾರಾತ್ಮಕ ಭಾವನೆಯನ್ನು ಪುಷ್ಠೀಕರಿಸುತ್ತದೆ.ಈ ನಿಟ್ಟಿನಲ್ಲಿ ಕೆಲವೊಮ್ಮೆ ಮಕ್ಕಳಿಗೆ ಮನೋವೈದ್ಯರಿಂದ ಸಮಾಲೋಚನೆ ನಡೆಸುವದನ್ನು ಚಿಕಿತ್ಸೆಯ ರೂಪದಲ್ಲಿ ಕೈಗೊಳ್ಳಬಹುದಾಗಿದೆ. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳನ್ನು ಉನ್ನತ ಶ್ರೇಣಿ ಪಡೆಯುವ ಮಕ್ಕಳೊಂದಿಗೆ ಹೋಲಿಸಿ ತೆಗಳುವದನ್ನು ಬಿಟ್ಟು ಮಕ್ಕಳ ಚಿಕ್ಕ ಸಾಧನೆಯನ್ನು ಅವರೊಂದಿಗೆ ಮನ ಬಿಚ್ಚಿ ಮಾತನಾಡಿ ಮುಂದಿನ ಸಾಧನೆಗೆ ಪ್ರೇರೆಪಿಸುವ ಜವಾಬ್ದಾರಿ ಪಾಲಕರ ಮೇಲಿದೆ.ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಮೇಲೆ ಒತ್ತಡ ತರಬಾರದು. ಮಕ್ಕಳ ಆಸಕ್ತಿ,ಅಭಿರುಚಿಯನ್ನು ಅರಿತು ಅವಕಾಶಗಳಿಂದ ವಂಚಿಸದೇ ಪ್ರೋತ್ಸಾಹ ನೀಡಿದಾಗ ಅವರ ಆತ್ಮವಿಶ್ವಾಸ ದ್ವಿಗುಣವಾಗುತ್ತದೆ. ಕೀಳರಿಮೆಯ ಪರಾಕಾಷ್ಠತೆ ಎಂದರೆ ಅದು ಖಿನ್ನತೆ ಇದು ಆತ್ಮಹತ್ಯೆಯಂತಹ ವಿಚಾರಗಳಿಗೆ ಕುಮ್ಮಕ್ಕು ನೀಡುತ್ತದೆ.ಕೇವಲ ಅಂಕಗಳಿಕೆಯ ಮೇಲೆ ಮಕ್ಕಳ ಬುದ್ಧಿಮಟ್ಟವನ್ನು ಅಳಿಯದೇ ಅವನು ತನ್ನ ದಿನನಿತ್ಯ ಜೀವನದಲ್ಲಿ ಉಂಟಾಗಃವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಸ್ವತಃ ಸರಿಯಾದ ನಿರ್ಧಾರ ತೆಗೆದುಕೊಳ್ಳುವ, ಸಮಾಜದೊಡನೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ವ್ಯವಹಾರಿಕ ಜ್ಞಾನವನ್ನು ಕಟ್ಟಿಕೊಡುವದು ಅವಶ್ಯಕವೂ ಅನಿವಾರ್ಯವೂ ಇದೆ.’ಓದು ಒಕ್ಕಾಲು, ಬುದ್ಧಿ ಮುಕ್ಕಾಲು’ ಎಂಬಂತೆ ಧೈರ್ಯದಿಂದ ತಾನು ಬದುಕಬಲ್ಲೆ ಸಮಾಜದ ಇತರರಿಗೆ ನೆರವಾಗಬಲ್ಲೆ ಎಂಬ ಛಲವನ್ನು ಬೆಳೆಸುವ ಅಡಿಪಾಯ ಮೊದಲ ಪಾಠಶಾಲೆಯಾದ ಮನೆಯಲ್ಲಿಯೇ ನಡೆಯುತ್ತಿದೆ.
“ಇರುವ ಭಾಗ್ಯವ ನೆನೆದು ಬಾರದೆಂಬುದನ್ನು ಬಿಡು, ಹರುಷಕ್ಕಿದೆ ದಾರಿ ಮಂಕುತಿಮ್ಮ” ಎಂಬ ಡಿ.ವಿ.ಗುಂಡಪ್ಪನವರ ಆಶಯದಂತೆ ಪ್ರೀತಿ, ವಿಶ್ವಾಸ, ಭರವಸೆಯನ್ನು ಮಕ್ಕಳ ಮನದಲ್ಲಿ ಬಿತ್ತುವ ಮೂಲಕ ಅವರ ಭವಿಷ್ಯದ ಚಿತ್ತಾರಕ್ಕೆ ರಂಗ ತುಂಬೋಣವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

  1. ಮೇಡಂ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ನಿರಾಶೆಯನ್ನು ಬಿಟ್ಟು ಸಮಾಜದಲ್ಲಿ ಒಳ್ಳೆಯ ಪ್ರಜೆಯಗಲು ಈ ನಿಮ್ಮ ಲೇಖನ ತುಂಬಾ ಸಹಾಯಕವಾಗುತ್ತದೆ.ಇಂತಹ ಲೇಖನಗಳು ನಿಮ್ಮಿಂದ ಹೊರಬರಲಿ ಎಂಬುದೇ ನಮ್ಮ ಆಶೆ….

Leave a Reply

Back To Top