ಅಂಕಣ ಸಂಗಾತಿ

ನೆನಪಿನದೋಣಿಯಲಿ

ಬೆಳದಿಂಗಳೂಟ 

ಹೆಸರು ಕೇಳಿದರೆ ಮನಸ್ಸು ಅಯಾಚಿತವಾಗಿ ಬಾಲ್ಯದ ನೆನಪುಗಳ ದಿಬ್ಬಣಕ್ಕೆ ಕರೆದೊಯ್ದುಬಿಡುತ್ತದೆ.  ಚಿಕ್ಕಂದಿನಲ್ಲಿ ರಜೆಯ ದಿನಗಳು ಬಂದಾಗ ಮನೆಗೆ ನೆಂಟರು ಬಂದಾಗ ಮಧ್ಯೆ ಹುಣ್ಣಿಮೆ ಬಂತೆಂದರೆ ಅಂದು ಬೆಳದಿಂಗಳೂಟ ಗ್ಯಾರಂಟಿ . ಸಾಮಾನ್ಯaವಾಗಿ ಬಿಸಿಬೇಳೆ ಬಾತ್ ಅಥವಾ ಬೇರೆ ಯಾವುದಾದರೂ ಕಲಸನ್ನ ಗಸಗಸೆ ಪಾಯಸ ಮೊಸರನ್ನ ಕಂಪಲ್ಸರಿ ಆಂಬೊಡೆ ಮದ್ದೂರು ವಡೆಯೋ ಬಜ್ಜಿಗಳೋ ಯಾವುದಾದರೂ 1. ಅಡುಗೆ ಮಾಡಿ 8ಗಂಟೆಯ ವೇಳೆಗೆ ಹಿತ್ತಲಲ್ಲಿ ಹಾಸಿದ ಜಮಖಾನದ ಮೇಲೆ ತೆಗೆದುಕೊಂಡು ಹೋಗಿ ಇಟ್ಟರೆ ಯಾವಾಗ ತಿನ್ನುವೆವು ಎಂಬ ಕಾತರ. 7ಗಂಟೆಯಿಂದಲೇ ಅಲ್ಲಿ ಬೀಡು ಬಿಟ್ಟಿರುತ್ತಿದ್ದ ನಾವುಗಳು ಅಂತ್ಯಾಕ್ಷರಿ  word building ಅಲ್ಲದೆ ಹಾಡುಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದು ಎಲ್ಲರೂ ಸೇರಿದ ನಂತರ ಕೈತುತ್ತು ಅಥವಾ ತಟ್ಟೆಗಳಲ್ಲಿ ಹಾಕಿಸಿಕೊಂಡು ತಿನ್ನುತ್ತಿದ್ದದ್ದು . ಮಾಮೂಲಿಗಿಂತ ಒಂದೆರಡು ತುತ್ತು ಹೆಚ್ಚೇ ಇಳಿಯುತ್ತಿತ್ತು ಬಿಡಿ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ಔತಣಕ್ಕೆ ಕರೆದಾಗ ಗರ್ಭಿಣಿ ಹೆಂಗಸರನ್ನು ಊಟಕ್ಕೆ ಕರೆದಾಗ ಕೆಲವೊಮ್ಮೆ ಹುಟ್ಟುಹಬ್ಬಗಳು ಹುಣ್ಣಿಮೆಯ ಆಸುಪಾಸಿನಲ್ಲೇ ಇದ್ದಾಗಲೆಲ್ಲ ಬೆಳದಿಂಗಳೂಟಕ್ಕೊಂದು ನೆಪ. ಹುಣ್ಣಿಮೆಯ ಹಿಂದಿನ 2ದಿನಗಳು ಹಾಗೂ ನಂತರದ 2ದಿನಗಳು ಸಹ ಇದಕ್ಕೆ ತುಂಬ ಪ್ರಶಸ್ತ ವಾಗಿದ್ದವು. 

ಇನ್ನು ಅಜ್ಜಿಯ ಮನೆಗೆ ಹೋದಾಗಲಂತೂ ದಿನರಾತ್ರಿ ಬಿಸಿಲುಮಚ್ಚಿನ ಊಟವೇ…ನಾವು ಮಕ್ಕಳಿಗೆ ಹಿರಿಯರು ಯಾರಾದರೊಬ್ಬರು ರಾತ್ರಿ ಕೈತುತ್ತು ಹಾಕುತ್ತಿದ್ದುದು ದಿನದ ಅಭ್ಯಾಸ.   ಈ ರೀತಿಯ ಬೆಳದಿಂಗಳೂಟಕ್ಕೆ ಹಿರಿಯರು ಭಾಗವಹಿಸುತ್ತಿದ್ದುದು ವಿಶೇಷ ಅಲ್ಲದೆ ದಿನ ನಿತ್ಯದ ಅಡುಗೆಯಲ್ಲದೆ ವಿಶೇಷ ಅಡಿಗೆ ಮತ್ತು ಸಿಹಿಗಳು ಇರುತ್ತಿದ್ದದ್ದು ಮತ್ತೊಂದು ವಿಶೇಷ . ಊಟವಾದ ನಂತರ ಎಷ್ಟೋ ಹೊತ್ತಿನವರೆಗೆ ಎಲೆಯಡಿಕೆ ಹಾಕಿಕೊಂಡು ಲೋಕಾಭಿರಾಮ ಪಟ್ಟಾಂಗ ದೊಡ್ಡವರು ಹೊಡೆಯುತ್ತಿದ್ದರೆ ನಾವು ಮಕ್ಕಳು ವಿವಿಧ ಆಟಗಳನ್ನಾಡುತ್ತ ಕಾಲಕಳೆಯುತ್ತಿದ್ದೆವು. ಅಂತೂ ನಿದ್ರೆ ಅವತ್ತು ಮಧ್ಯರಾತ್ರಿಯ ನಂತರವೇ .

ಮಹಡಿಯ ಮನೆ ಹಾಗೂ ತಾರಸಿಗಳು ಸ್ವಲ್ಪ ಅಪರೂಪವಾಗಿದ್ದವು ಆಗ ನಾವು ಚಾಮುಂಡಿಪುರಂನಲ್ಲಿ ನ ಬಾಡಿಗೆ ಮನೆಯಲ್ಲಿ ಇದ್ದ ಸಮಯ. ಮಠಾರದ ಮನೆ.  ತೀರಾ ಮಡಿಯವರನ್ನು ಬಿಟ್ಟರೆ ಮಿಕ್ಕವರೆಲ್ಲ ಸೇರಿ ಆಗಾಗ ಈ ರೀತಿಯ ಬೆಳದಿಂಗಳ ಊಟವನ್ನು ಆಯೋಜಿಸುತ್ತಿದ್ದದು ವಾಡಿಕೆ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಅಡುಗೆ ಮಾಡಿ ತಂದು ಹಂಚಿ ತಿನ್ನುತ್ತಿದ್ದ ಆ ಕಾಲದ ಸೊಗಸೇ ಬೇರೆ ಬಿಡಿ ಈಗ ಅದು “ಪಾಟ್ ಲಕ್” ಅನ್ನೋ ಹೆಸರಿನಲ್ಲಿ ಪ್ರಸಿದ್ಧ . 

ಇನ್ನು ತಾರಸಿ ಮನೆಗಳು ಇದ್ದರೂ ನಾವು ವಿಶ್ವೇಶ್ವರ ನಗರದಲ್ಲಿದ್ದಾಗ ಎಲ್ಲರ ಮನೆಗೂ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿರಲಿಲ್ಲ.ಒಬ್ಬರ ಮನೆಯಲ್ಲಿ ಮಾತ್ರ ಆ ಸೌಲಭ್ಯ. ಹಾಗಾಗಿ ಅವರ ಮನೆಯಲ್ಲೇ ಪ್ರತಿ ಬೆಳದಿಂಗಳೂಟ ಖಾಯಂ .ಎಲ್ಲರ ಮನೆಯಲ್ಲಿ ಬೇರೆ ಬೇರೆ ವಿವಿಧ ಅಡುಗೆಗಳನ್ನು ಮಾಡಿಕೊಂಡು ಹೋಗಿ ಅಲ್ಲಿ ಕುಳಿತು ಹಂಚಿ ತಿಂದು ನಂತರ ಎಲ್ಲರೂ ಸೇರಿ ಜಾಗವನ್ನು ಸ್ವಚ್ಛ ಮಾಡಿ ಕೊಟ್ಟು ಬರುತ್ತಿದ್ದ ನೆನಪು ಇನ್ನೂ ಹಚ್ಚ ಹಸಿರು.  ಅಲ್ಲಿಯೂ ಅಷ್ಟೇ ಬೇರೆಯವರ ಮನೆಯದನ್ನು ತಿನ್ನದಿದ್ದರೆ ಅವರ ಮನೆಯದನ್ನು ಮಾತ್ರ ತಿನ್ನುತ್ತಿದ್ದರು. ಆದರೆ ಹಂಚಿ ಜತೆಯಲ್ಲಿ ಎಲ್ಲರೊಡನೆ ಬೆರೆಯಲು ಮಾತ್ರ ಯಾವ ಅಡ್ಡಿ ಆತಂಕವೂ ಇರಲಿಲ್ಲ. ಎಲ್ಲರಿಗೂ ಏನೋ ಸಂಭ್ರಮ 2 ದಿನ ಮುಂಚಿನಿಂದಲೇ ಕಾತರದಿಂದ ಕಾಯುತ್ತಿದ್ದ ಕಾಲ ಅದು .     

ಪ್ರೇಮಿಗಳ ನವವಧುವರರ ಏಕಾಂತದ ಬೆಳದಿಂಗಳೂಟದ ಸವಿ ಬಲ್ಲವರೆ ಬಲ್ಲರು. ಪದಗಳಲ್ಲಿ ಅದನ್ನು ಹಿಡಿದಿಡಲಾಗೋಲ್ಲ !

ಬಾಯಿಗೆ ರುಚಿಯಾದ ತಿನಿಸು, ಪ್ರಿಯ ಬಂಧು ಮಿತ್ರರ ಒಡನಾಟದ ಸೊಗಸು ,ತುಂಬು ತಿಂಗಳನು ಮೊಗೆದು ಕುಡಿಯುವ ಮನಸ್ಸು

ಇವೆಲ್ಲಕ್ಕೂ ಬೆಳದಿಂಗಳೂಟ  ಒಂದೇ ಮಾರ್ಗ .

ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಈಗ ಬೆಳದಿಂಗಳೂಟದ ಪರಿಕಲ್ಪನೆ ಬರುತ್ತಿದೆಯಂತೆ. ಅಷ್ಟೊಂದು ಹಣ ಕೊಟ್ಟು ಅಲ್ಲಿ ಹೋಗುವ ಬದಲು ನಮ್ಮಳತೆಯಲ್ಲಿ ನಮ್ಮಿಷ್ಟದ ಬಂಧುಮಿತ್ರರ ಜೊತೆ ಹುಣ್ಣಿಮೆಯ ಚಂದ್ರನ ಸೊಬಗನ್ನು ಸವಿಯಲು ನಾವೇಕೆ  ಮನಸ್ಸು ಮಾಡಬಾರದು?

ಈಗ ಸಾಮಾನ್ಯ ಎಲ್ಲರ ಮನೆಗಳಲ್ಲೂ ಮಹಡಿ ಇರುತ್ತದೆ. ಬೆಳದಿಂಗಳು ಧಾರಾಳವಾಗಿ ಬಿದ್ದಿರುತ್ತದೆ . ಆದರೆ ಅದನ್ನು ಆಸ್ವಾದಿಸುತ್ತಾ ಬೆಳದಿಂಗಳೂಟ ಮಾಡುವ ಮನಸ್ಸು ವ್ಯವಧಾನ ಸಮಯ ಇಲ್ಲದೆ ಹೋಗುತ್ತಿದೆ . ಚಿಕ್ಕ ಚಿಕ್ಕ ವಿಷಯಗಳಲ್ಲೂ ಸಂತಸವನ್ನು ಕಾಣುವ ಬದುಕನ್ನು ಆಸ್ವಾದಿಸುವ ಕಲೆಯನ್ನು ನಮ್ಮ ಹಿರಿಯರು ಅರಿತಿದ್ದರು ಎಂಬುದಕ್ಕೆ ಈ  ಬೆಳದಿಂಗಳೂಟದ ಪದ್ಧತಿಯೇ ಸಾಕ್ಷಿ . ಒತ್ತಡ ಕೆಲಸ ಸಂಪಾದನೆಯ ಹಿಂದೆ ನಾಗಾಲೋಟ ಇವುಗಳ ಮಧ್ಯೆ ನಾವು ಜೀವನ ಕಲೆಯನ್ನು ಸೊಬಗನ್ನು ಅನುಭವಿಸುತ್ತಿಲ್ಲ . ಅದಕ್ಕೆ ಹಿಂದೆಯೇ ಕುವೆಂಪು ಅವರು ಹೇಳಿರುವುದು “ಸೊಬಗನಾಸ್ವಾದಿಸಲೆಮಗೆ ಸಮಯವಿಲ್ಲ”  ಎಂದು.

ಲೇಟ್ ನೈಟ್ ಪಾರ್ಟಿ ಎಂದು ಪಾನಗೋಷ್ಠಿಗಳನ್ನು ನಡೆಸುವ ಬದಲು ಇಡೀ ಕುಟುಂಬದವರು ಸೇರಿ ಮನೆಯಲ್ಲಿಯೇ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಳ್ಳಬಾರದೇಕೆ? ಇಂದಿನ ವೇಗದ ಬದುಕಿನಲ್ಲಿ ಎಲ್ಲರಿಗೂ ನಾವೇ ಅಡುಗೆ ಮಾಡಲು ಸಾಧ್ಯವಿಲ್ಲದಿದ್ದರೆ ಹೊರಗಿನಿಂದ ತರಿಸಬಹುದು ಇಲ್ಲ ಒಬ್ಬೊಬ್ಬರು ಒಂದೊಂದು ಬಗೆ ಮಾಡಿದರೆ ಯಾರಿಗೂ ಹೆಚ್ಚಿನ ಶ್ರಮ ಎನಿಸುವುದಿಲ್ಲ . ಆರೋಗ್ಯಕ್ಕೂ ಕಿಸೆಗೂ ಹಗುರ ತಾನೆ ? 

ಹಾಗಾದರೆ …ಇaನ್ನೇನು ಹುಣ್ಣಿಮೆ ಬಂತು ಯಾರ ಮನೆಯಲ್ಲಿ ಕಾರ್ಯಕ್ರಮ ಆಯೋಜನೆ? 

ಇಲ್ಲ ಎಲ್ಲರೂ ನಮ್ಮ ಮನೆಗೇ ಬಂದುಬಿಡಿ ಸ್ವಾಗತ ….


ಸುಜಾತಾ ರವೀಶ್  

Leave a Reply

Back To Top