ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ನೀನೊಂದು ಮುತ್ತು” ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖವು ಕಲ್ಪನಾ ಎಸ್ ಪಾಟೀಲ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ Read Post »

ಇತರೆ, ಜೀವನ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ

ಮನೋಸಂಗಾತಿ ಡಾ.ಸುಮತಿ ಪಿ. “ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಮನಸ್ಸು ಎಂಬುದು ಬಹಳ ಸೂಕ್ಷ್ಮವಾದದ್ದು, ಅದೊಂದು ವಿಶಿಷ್ಟವಾದ ಶಕ್ತಿ.ಮನಸ್ಸು ಬಹಳ ವೇಗವಾಗಿ ಸಂಚರಿಸುವ ಶಕ್ತಿಯಾಗಿದ್ದು, ಅದರ ಹಿಡಿತವನ್ನು ಸಾಧಿಸುವುದು  ಬಹಳ ಕಷ್ಟವಾಗುವುದು. ಮನಸ್ಸನ್ನು ಕೆಲವೊಮ್ಮೆ ಭಾವನೆಗಳ ಕೈಗೆ ಕೊಟ್ಟು, ಏನೇನೋ ಅನಾಹುತಗಳು ಆಗುವುದುಂಟು. ಮನಸ್ಸಿನ ಹಿಡಿತವಿದ್ದರೆ ಮಾತ್ರ ಮನಸ್ಸು ವಿಷಯವನ್ನು ಗ್ರಹಿಸಲು,ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಚಾರ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು ನಮ್ಮ ಆಲೋಚನೆಗಳು, ಕನಸುಗಳು ಮತ್ತು ಅನಿಸಿಕೆಗಳ ಸಂಕೀರ್ಣ ಪ್ರಕ್ರಿಯೆ.ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಉದಾತ್ತತೆಯಿಂದ ಮನಸ್ಸನ್ನು ನಿಯಂತ್ರಿಸುವುದರಿಂದ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿಗೆ ಅದು ಕಾರಣವಾಗುತ್ತದೆ. ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸಿದರೆ ಅದು ಜೀವನವನ್ನು ಅದ್ಭುತವಾಗಿಸಬಲ್ಲದು.ಸ್ಥಿರ ಮನಸ್ಥಿತಿ ಹೊಂದಿರುವವರು ಬದಲಾವಣೆಗೆ, ಬದಲಾವಣೆಯಿಂದ ಬೆಳವಣಿಗೆಯ ಮನಸ್ಥಿತಿಗೆ  ಪರಿವರ್ತನೆಗೊಳ್ಳಬೇಕಾಗುತ್ತದೆ. ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡರೂ, ನಾವು ಮನಸ್ಸು ಬದಲಾಯಿಸುವುದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ, ಎನ್ನುವುದಾದರೆ ನಾವು ಮನಸ್ಸು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಬಹುದು.ಅಂತಹ ಸಂದರ್ಭದಲ್ಲಿ ಮನಸ್ಸು ಬದಲಾಯಿಸುವುದು  ಯೋಗ್ಯವಾಗಿದೆ,ಅನಿವಾರ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಬದುಕಿನಲ್ಲಿ ಸ್ಥಿರಮನಸ್ಸಿನಿಂದಾಗಿ ಎಂತೆಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಸ್ಥಿರ ಮನಸ್ಸಿನಿಂದ ಒಳಿತಾಗುವುದೂ ಇದೆ.ಮನಸ್ಸು ಬದಲಾಯಿಸುವುದು  ನಮಗೆ ಕಷ್ಟ ಎನಿಸಬಹುದು. ಪರಿಸ್ಥಿತಿ ಯಾವಾಗ ನಮಗೆ ಕಷ್ಟವೆಸಿಸುತ್ತದೆಂದರೆ ನಮ್ಮ ಮನಸ್ಸು ಅದನ್ನು ಸ್ವೀಕರಿಸದಾಗ, ಅಥವಾ ಅದನ್ನು ಒಪ್ಪಿಕೊಳ್ಳದೆ ಇದ್ದಾಗ. ಹಾಗಾಗಿ ಕೆಲವೊಮ್ಮೆ ಇದ್ದ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾದಾಗ ನಮಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಒಂದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಬದಲಾವಣೆಗಳು ಉಂಟಾದಲ್ಲಿ ಮನಸ್ಸನ್ನು ತಕ್ಷಣ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಆದರೆ ನಿಧಾನವಾಗಿ ನಾವು ಅದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದಾಗ,  ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಮೊದಲು ಕಷ್ಟವೆನಿಸಿದ ಅದೇ ಪರಿಸ್ಥಿತಿ ಮತ್ತೆ ಸುಲಭವಾಗಲು ಹೇಗೆ ಸಾಧ್ಯ.? ಇಲ್ಲಿ ಇರುವುದು ವಿಚಾರ ಇಷ್ಟೆ. ಯಾವಾಗ ನಾವು ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾದ ಸಂದರ್ಭ ಬರುತ್ತದೋ ಆವಾಗ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಂದರೆ  ಬದಲಾವಣೆಯನ್ನು ಮನಸ್ಸು ಸ್ವೀಕರಿಸಲು ಒಪ್ಪುತ್ತದೆ. ಇಲ್ಲಿ ಕಷ್ಟದ ಪರಿಸ್ಥಿತಿ ನಮ್ಮ ಹೊಂದಾಣಿಕೆ ಇದ್ದಾಗ ಸುಲಭವಾಗಲು ಸಾಧ್ಯವಿದೆ. ಆದರೆ ಬುದ್ಧಿವಂತ ಜೀವಿಯಾದ ಮನುಷ್ಯರಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸುವಂತಹವರು ಇರುವುದು ಬಹಳ ಅಪರೂಪ. ಹೀಗಾಗಿಯೇ ಪರಸ್ಪರರಲ್ಲಿ ಸಿಟ್ಟು, ಕೋಪ,ದ್ವೇಷ, ರೋಷ , ಅಸೂಯೆ  ಮೂಡಿ ಬರುವುದು. ಮನುಷ್ಯ ಸಂಘಜೀವಿಯಾದ ಕಾರಣ ಸಾಮಾಜಿಕ ಜೀವನದಲ್ಲಿ, ಸಮಷ್ಟಿಯ ಒಳಿತಿನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸಮಾಜದ ಕೆಟ್ಟತನಕ್ಕೆ ಅಥವಾ ದುರ್ನನಡತೆಗೆ ತನ್ನ ಮನಸ್ಥಿತಿ ಕಾರಣವಾಗಬಾರದು ಎಂಬ ಎಚ್ಚರಿಕೆ ಮನುಷ್ಯನಲ್ಲಿ ಇರಬೇಕಾಗುತ್ತದೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಕೆಟ್ಟ ಪರಿಸ್ಥಿತಿಗೂ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನುಷ್ಯ ತನ್ನ ಮನೆಯಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕಾದರೆ ಸಾಮಾಜಿಕ ಮನಸ್ಥಿತಿಯನ್ನು ಅರಿತು, ಅದರಂತೆ ನನ್ನ ಮನಸ್ಸನ್ನು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಿ ಸಮಾಜ ಸುಸ್ಥಿತಿಯಲ್ಲಿ ನಡೆಯಬಹುದು. ‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗತ್ತದೆ’ ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನು ಕೊಡುವುದಾದರೆ ಒಂದು ಕುಟುಂಬದಲ್ಲಿನ ಹೆಣ್ಣು ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕೆನ್ನುವಾಗ, ಅವಳ ಮನೆಯವರ ಮನಸ್ಥಿತಿ ಅದಕ್ಕೆ ಒಪ್ಪದೇ ಇರಬಹುದು. ಏಕೆಂದರೆ ಸಮಾಜ ತಮ್ಮನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದು, ನಮ್ಮನ್ನು ಹೊರಗೆ ಇಡಬಹುದು, ಬೇರೆ ಜಾತಿಯ ಸಂಸ್ಕೃತಿ ,ಸಂಸ್ಕಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಅಂತರ್ಜಾತಿಯ ವಿವಾಹಕ್ಕೆ ಹೆತ್ತವರ ಮನಸ್ಸು ಒಪ್ಪದಿರಬಹುದು. ಅದೇ ರೀತಿಯಲ್ಲಿ ಪ್ರೀತಿಸಿದ ಹೆಣ್ಣು- ಗಂಡು ಒಬ್ಬರನ್ನೊಬ್ಬರು ಬಿಟ್ಟು ದೂರವಾಗಲು ಅವರ ಮನಸ್ಸೂ ಒಪ್ಪದಿರಬಹುದು. ಈ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಪರಿಸ್ಥಿತಿ ಬೀಗಡಾಯಿಸುತ್ತದೆ. ಆಗ ಒಂದೇ ಪ್ರೀತಿಸಿದವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ವಿಷಯವನ್ನು ಬಗೆಹರಿಸಬಹುದು ಅಥವಾ ತಂದೆ ತಾಯಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅಂತರ್ಜಾತೀಯ ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಬಹುದು. ಆಗ ಅಲ್ಲಿ ಬಿಗಡಾಯಿಸಿದಂತಹ ಪರಿಸ್ಥಿತಿ, ಶಾಂತವಾಗಿ ಎಲ್ಲವೂ ಸುಖಾಂತ್ಯವಾಗಬಹುದು. ಇದು ಒಂದು ಉದಾಹರಣೆ. ಹೀಗೆ ಮನಸ್ಥಿತಿ ಬದಲಾದರೆ ಪರಿಸ್ಥಿತಿಯು ಬದಲಾಗಬಹುದು ಎಂಬುದಕ್ಕೆ ನಮ್ಮ ದಿನನಿತ್ಯದ ಜೀವನದಿಂದ ಹಲವಾರು ರೀತಿಯ ಘಟನೆಗಳನ್ನು ಇಲ್ಲಿ ಉಲ್ಲೇಖ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಜನರ ಸ್ಥಿರ ಮನಸ್ಥಿತಿಯಿಂದಾಗಿ ಉಂಟಾಗುವ ಕೆಡುಕುಗಳ ಬಗ್ಗೆ  ಆಲೋಚನೆಯನ್ನೇ ಮಾಡುವುದಿಲ್ಲ. ಎಲ್ಲರಿಗೂ ಅವರವರ ,*ಈಗೊ* ಮುಖ್ಯವಾಗುವುದನ್ನು ನಾವು ಗಮನಿಸಿದ್ದೇವೆ.ಆದರೆ ಮನುಷ್ಯ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು, ತಾನು ಪರಿಸ್ಥಿತಿಯನ್ನು ದೂಷಿಸದೆ, ತನ್ನ ಮನಸ್ಸನ್ನು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ಅನಿವಾರ್ಯ .ಸಂಕಷ್ಟ ಕಾಲದಲ್ಲಿ ಬದಲಾವಣೆಗಾಗಿ ತಮ್ಮಮನಸ್ಥಿತಿಯನ್ನೇ  ಬದಲಾಯಿಸಿ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಎದುರಿಸಲು ಸಾಧ್ಯವಿದೆ. ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ. ಹಾಗಂತ ಎಲ್ಲಾ ರೀತಿಯ ಪರಿಸ್ಥಿತಿಯ ಬದಲಾವಣೆಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕೆಂದರ್ಥವಲ್ಲ. ಇನ್ನೊಬ್ಬರಿಗೆ ಒಳಿತಾಗುವುದಾದರೆ, ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಸಾಮೂಹಿಕ ಅಥವಾ ಸಮಾಜಕ್ಕೆ ಹಿತವಾಗುವುದಾದರೆ ನಾವೇಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬಾರದು? ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭಗಳು ಬರಬಹುದು. ಅಂದರೆ ಪರಿಸ್ಥಿತಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿ ನಾವು ಅದಕ್ಕೆ ಒಗ್ಗಿಕೊಂಡರೂ ಒಳಿತಾಗುವ ಬದಲು ಕೆಡುಕೇ ಉಂಟಾಗುವುದಾದರೆ, ನಮ್ಮ ಮನಸ್ಥಿತಿಯನ್ನು ನಾವು ಏಕೆ ಬದಲಾಯಿಸಬೇಕು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ಸಮಾಜದ ಹಿತಕ್ಕಾಗಿ ಬದಲಾಯಿಸಲು ನೋಡಬೇಕು. ಇಲ್ಲದಿದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ನಾವು ಸಿಲುಕದೆ ಅದರಿಂದ ಹೊರಗೆ ಬರಬೇಕು. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ- ಎಂಬುದಕ್ಕೆ ಈಗ ನಾನು ನೀಡುವ ಅರ್ಥ ನಿಮಗಾಗಿರಬಹುದು ಎಂದು ಭಾವಿಸುತ್ತೇನೆ. ಇಲ್ಲಿ ನಮ್ಮ ಮನಸ್ಥಿತಿ ಬದಲಾಯಿಸುವುದೆಂದರೆ, ನಮ್ಮ ‘ಅಹಂ’ ಅಥವಾ ‘ಇಗೊ’ ವನ್ನು ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಮಾಜದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುವುದು ಎಂದರ್ಥ. ಎಲ್ಲಿ ಸಮಾಜದಲ್ಲಿ ನಡೆಯುವ ಕೆಡುಕಿಗೆ ಅಥವಾ ಕೆಟ್ಟ ಪರಿಸ್ಥಿತಿಗೆ ನಮ್ಮ ಮನಸ್ಸು ಕಾರಣವಾಗುತ್ತದೊ ಅಂತಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿದರೆ, ಪರಿಸ್ಥಿತಿ ಸುಧಾರುತ್ತದೆ. ಹಾಗಾಗಿ ಕಷ್ಟದ ಪರಿಸ್ಥಿತಿಗೆ  ನಮ್ಮ ಮನಸ್ಸು ಅಥವಾ ಮನೋಭಾವ ಕಾರಣವಾಗುತ್ತದೆ ಎಂದಾದರೆ ನಾವು ಬದಲಾಗಬೇಕು.ಅದು ಅನಿವಾರ್ಯ ಕೂಡ.ನಮ್ಮ ಮನೋಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ,ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು.  ಮನುಷ್ಯನಾದವನು ತನ್ನ ಬದುಕಿನಲ್ಲಿ ಎದುರಾದ ಸಂಕಷ್ಟದ ಪರಿಸ್ಥಿತಿಯನ್ನರಿತು, ಅದರಿಂದ ಸಮಸ್ಯೆ ಬಗೆಹರಿದು, ಒಳಿತಾಗುವುದಾದರೆ ತನ್ನ  ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಆಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು. ಡಾ.ಸುಮತಿ ಪಿ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ Read Post »

ನಿಮ್ಮೊಂದಿಗೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ

ಪುಸ್ತಕ ಸಂಗಾತಿ. ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶ್ರೀ ಹರಿಹರ ಶಿವಕುಮಾರ್‌ “ಅನನ್ಯ ಅಲ್ಲಮ” ಅನನ್ಯ ಅಲ್ಲಮ ಉತ್ತಮ ಆಕರ ಗ್ರಂಥ ಲೇಖಕರು  ಶ್ರೀ ಹರಿಹರ ಶಿವಕುಮಾರಪ್ರಕಾಶಕರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರುಬೆಲೆ 180 ರೂಪಾಯಿವರ್ಷ 2026 ನಾಡಿನ ಹಿರಿಯ ಅನುಭಾವಿ ಚಿಂತಕರು ಸಾಹಿತಿಗಳೂ ಆದ ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾಶಕರ ಮೂಲಕ ಅನನ್ಯ ಅಲ್ಲಮ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಗ್ರಂಥ. ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು.ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.ಅನನ್ಯ ಅಲ್ಲಮ ಎಂಬ ಕೃತಿಯಲ್ಲಿ ಇವರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲಮರ ವಚನ ವಿಶ್ಲೇಷಣೆ ಚಿಂತನೆ ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಲೇಖಕರಿಗೂ ಅಲ್ಲಮರ ವಚನ ವಿಶ್ಲೇಷಣೆ ಒಂದು ಕಠಿಣ ಪರಿಶ್ರಮವೆಂದು ತಿಳಿದುಕೊಂಡು ತಮ್ಮದೇ ಆದ ಅನುಭವವನ್ನು ಸಂಕಲನದಲ್ಲಿಪದ ಅರ್ಥ ,ವಚನಾರ್ಥ, ಪದಪ್ರಯೋಗಾರ್ಥ ಎಂಬ ಮೂರು ಭಾಗಗಳಲ್ಲಿ ಮಾಡಿದ್ದು ವಾಚಾರ್ಥ ಗೂಢಾರ್ಥ ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಅಲ್ಲಮರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳಿಗೆ ಸಮಾನವಾದ ಅರ್ಥ ಹುಡುಕುವ ಪ್ರಯತ್ನ ಇವರದ್ದಾಗಿದೆ. ನಂತರ ಸಾಂದರ್ಭಿಕವಾಗಿ ಆ ಬೆಡಗಿನ ಪದಗಳ ಅರ್ಥವನ್ನು ಇಂದಿನ ಜಗತ್ತಿಗೆ ಅನುಗುಣವಾಗಿ ಸಮಯೋಚಿತವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ. ಇವರ ನಿರಂತರ ಪರಿಶ್ರಮ ಹಾಗೂ ಶೃದ್ಧೆ ಅಲ್ಲಮರ ಬೆಡಗಿನ ವಚನಗಳನ್ನು ಸರಳವಾಗಿ ಅರ್ಥೈಸಲು ಒಂದು ಸುಂದರ ಆಕರ ಪುಸ್ತಕ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಅಪರೂಪದ ಪ್ರಬುದ್ಧ ಕಾರ್ಯವೆಂದೆನಿಸುತ್ತದೆ.ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇನ್ನೂ ಹೆಚ್ಚಿನ ಸೊಗಡು ಎದ್ದು ಕಾಣುತಿತ್ತು. ಇದು ಶ್ರೀ ಶಿವಕುಮಾರ ಅವರ ಪ್ರಥಮ ಕೃತಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಹಾರೈಸುತ್ತೇನೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ Read Post »

ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-13 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಲೇ: ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *ಭಯವನು ಗೆದ್ದವರು ಇತಿಹಾಸವನ್ನು ರಚಿಸುವರು* ಅನ್ನುವ ಮಾತು ಸುಳ್ಳಾಗಲಿಲ್ಲ……!!! ಜಯದೇವಿ ತಾಯಿಯವರ  ನಿಜಾಮನಂಥ ಶಿಷ್ಟ ಆಳರಸನ ಆಜ್ಞೆಯನ್ನು ಉಲ್ಲಂಘಿಸಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನಲ್ಲಿ ಭಾಗವಹಿಸಿ ಜನಸ್ತೋಮದ ಸ್ಪೂರ್ತಿ ಉತ್ಸಾಹವನ್ನು ಉಲ್ಬಣಿಸಿದ್ದರು. ಇತಿಹಾಸವನ್ನು ರಚಿಸಿದರು.  * ಶರಣರ ಭೂಮ್ಯಾಗ ಮರಣವೆ ಲೇಸಂದು ಹರಣದ ಹಂಗ ತೊರೆದೇನ, ಕಲ್ಯಾಣದಶರಣರಿಗೆ ನೆನೆದೇನ ಮನದಾಗ * ಅಂತ ಹೇಳುತ್ತಾ ಹೈದರಾಬಾದಿನ ಜಹೇರಾಬಾದಿನಲ್ಲಿ ಗರ್ಜಿಸಿದ ಜಯದೇವಿ ತಾಯಿಯವರು ಕಲ್ಯಾಣ ಶರಣರ ಗಣಾಚಾರ ನೆನೆಯುತ ಕೆಚ್ಚದೆಯ ಧೈರ್ಯ ಸಾಹಸ ಮೇರೆದರು. ನಿಜಾಮನ ಫರ್ಮಾನ್‌ನ್ನು ಧಿಕ್ಕರಿಸಿ ಹೈದರಾಬಾದ್ ಮಣ್ಣಿಗೆ ಕಾಲಿಟ್ಟ ಜಯದೇವಿ ತಾಯಿಯವರ ಧೈರ್ಯ….. ಬ್ರಿಟಿಷರ ಗಮನ ಸೆಳೆದಿತ್ತು. ಆ ಸಮಯದಲ್ಲಿ ಎರಡನೇ ಮಹಾಯುದ್ಧ ಉಗ್ರವಾಗಿ ನಡೆಯುತ್ತಿತ್ತು.  ಯುದ್ಧದ ಹೊತ್ತಿನಲ್ಲಿ ತಮ್ಮ ಸೇನೆಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲು ಬ್ರಿಟಿಷರು ವಿವಿಧ ಸಮಾಜಗಳ ನಾಯಕರನ್ನು ಸಂಪರ್ಕಿಸುತ್ತಿದ್ದರು.ಜಯದೇವಿ ತಾಯಿಯವರನ್ನು ಭೇಟಿ ಮಾಡಿ ವಿನಂತಿಯ ರೂಪದಲ್ಲಿ ಒಂದು ಮಾತು ಹೇಳಿದರು…. “ನೀವು ಲಿಂಗಾಯತ ಸಮಾಜದಲ್ಲಿ ಪ್ರಭಾವ ಹೊಂದಿದ್ದೀರಿ. ನಮ್ಮ ಸೈನ್ಯಕ್ಕಾಗಿ ಲಿಂಗಾಯತ ಯುವಕರನ್ನು ಕೂಡಿಸಿ, ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿ. ದೇಶ ಸೇವೆಯ ಹೆಸರಿನಲ್ಲಿ ಇದು ದೊಡ್ಡ ಕಾರ್ಯವಾಗುತ್ತದೆ. ನಿಮ್ಮ ಸೇವೆಗೆ ನಾವು ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತೇವೆ.”ಎಂದರು ಆ ಮಾತು ಕೇಳಿದ ತಾಯಿಯವರು ಕ್ಷಣಕಾಲ ನಿಶ್ಶಬ್ದವಾಗಿ ನಿಂತರು.ಅವರು ನಿಧಾನವಾಗಿ ತಲೆಯನ್ನು ಎತ್ತಿ, ಕಣ್ಣಲ್ಲಿ ಸ್ಪಷ್ಟತೆ ಮತ್ತು ಧೈರ್ಯ ತುಂಬಿಸಿಕೊಂಡು ಹೇಳಿದರು….“ಇದು…. ದೇಶ ಸೇವೆಯೇ…..?? ನಮ್ಮ ಜನರನ್ನು ಪರರ ಯುದ್ಧಕ್ಕೆ ಒಪ್ಪಿಸುವ ದಾರಿ…..?”“ನನ್ನ ಜನರನ್ನು ನಿಮ್ಮ ಯುದ್ಧಕ್ಕಾಗಿ ಹುರಿದುಂಬಿಸಲಾದಿತ್ತೇ????…….  ನಾವೇಲ್ಲ ಈ ಮಣ್ಣಿನ ಮಕ್ಕಳು… ನಮ್ಮ ಶಕ್ತಿ, ನಮ್ಮ ಜೀವ…. ದೇಶದ ಸ್ವಾತಂತ್ರ್ಯಕ್ಕಾಗಿ  ಹೊರತು ವಿದೇಶಿಯರ ಯುದ್ಧಕ್ಕಾಗಿ ಅಲ್ಲ.” ಎಂದು ಸ್ಪಷ್ಟಪಡಿಸಿದರು. ಬ್ರಿಟಿಷರು ಮತ್ತೆ ಆಮಿಷಗಳನ್ನು ಮುಂದಿಟ್ಟರುಪ್ರಶಸ್ತಿ, ಕೀರ್ತಿ, ಸನ್ಮಾನ ಅಂತ……!!!ಆದರೆ ತಾಯಿಯವರ ಹೃದಯದಲ್ಲಿ ಅವುಗಳಿಗೆ ಯಾವುದೇ ಸ್ಥಳ ಇರಲಿಲ್ಲ.“ನನ್ನ ಜನರ ಭವಿಷ್ಯವನ್ನು ನಾನು ಮಾರುವುದಿಲ್ಲ,” ಎಂದು ಅವರು ದೃಢವಾಗಿ ಉತ್ತರಿಸಿದರು.  ಜಯದೇವಿ ತಾಯಿಯವರು ಪ್ರಶಸ್ತಿಗಳನ್ನು ಕೇವಲ ನಿರಾಕರಿಸಿದವರಲ್ಲ….*ಅವರು ತಮ್ಮ ಸಮುದಾಯದ ಗೌರವವನ್ನು, ದೇಶದ ಆತ್ಮಸಮ್ಮಾನವನ್ನು ಕಾಪಾಡಿದ ಮಹಾನ್ ನಾಯಕಿ ಆಗಿದ್ದರು.*ಅವರು ಹೇಳುವಂತೆ …. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಸ್ವದೇಶಿ ವಸ್ತ್ರವನ್ನು ಧರಿಸಿ ವಿದೇಶರಿಗೆ ಸಹಾಯ ಮಾಡುವುದೆಂದರೆ ದೇಶದ್ರೋಹವೇ ಸರಿ ಎಂದರು.ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಪಿತಮಹಾನೊಂದಿಗೆ ದೇಶ ಸೇವೆಗೆ ಕಂಕಣ ಬದ್ಧರಾಗಿ ನಿಂತರು.  ಆದರೆ ಮನೆಯಲ್ಲಿಯ ವಿರೋಧವನ್ನು ಎದುರಿಸಬೇಕಾಯಿತು ಏಕೆಂದರೆ ಬ್ರಿಟಿಷರು ಅವರ ಆಸ್ತಿಯ ಮೇಲೆ ತೆರಿಗೆಯ ಭಾರವನ್ನು ಹೇರಿದರು.  ಹೆಚ್ಚಿನ ಮೊತ್ತದ “ವಾರ್ ಫಂಡ್” ಜಯದೇವಿ ತಾಯಿಯವರು ಮನೆಯವರು ಕಟ್ಟಬೇಕಾಗಿ ಬಂತು. ತಾಯಿಯವರು ಸ್ವದೇಶಿ ಅರಿವೇ ಉಡಲು ಪ್ರಾರಂಭಿಸಿದರು.ಇದೇ ಸಮಯದಲ್ಲಿ. ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ* ಹಿಂದೂಸ್ತಾನಿ ಸೇವಾದಳ *ಸ್ಥಾಪನೆಯ ಸಂಕಲ್ಪವು ಎಲ್ಲೇಲ್ಲೂ ನಡೆದಿತ್ತು. ಆಗಿನ ಕಾರಾಗ್ರಹ ವಾಸವು ನರಕ ಸದೃಶವಾಗಿತ್ತು. ಕೆಲವು ಹಸಿಬಿಸಿ ತರುಣರು ಕಾರಾಗೃಹದಲ್ಲಿ ಇದ್ದಾಗ ಬ್ರಿಟಿಷರು ಕೊಡುತ್ತಿದ್ದ ಹಿಂಸೆಯ ತಾಳಲಾರದೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಸೆರೆಮನೆಯಿಂದ ಹೊರ ಬಂದರೆಂಬ ವಿಷಯ ಕಿವಿಗೆ ಬಿದ್ದು ಹರಡೇಕರ ಮಂಜಪ್ಪನವರು ಹಾಗೂ ಇನ್ನು ಕೆಲವು ಮುಖಂಡರು ಬಲು ನೊಂದುರು ….ವಿವೇಚನೆಯಿಂದ ದೇಶದಲ್ಲಿ ತರುಣ ಸಂಘಟನೆ ಮಾಡಿ ಅವರಿಗೆ ದೇಶ ಪ್ರೇಮದ ಕೆಚ್ಚು, ದೇಶಾಭಿಮಾನ , ಸ್ವಾಭಿಮಾನ,ಶಿಸ್ತು, ಸಂಯಮ, ಕಷ್ಟ ಸಹಿಷ್ಣತೆ, ಶರೀರ ಬಲ ವರ್ಧನೆ,  ಇವುಗಳೆಲ್ಲವನ್ನು ಮೇಳ್ಯಸಿ ವೀರ ಯುವಕರನ್ನು ನಿರ್ಮಾಣ ಮಾಡುವ ಸಂಘಟನೆಯನ್ನು ಕಟ್ಟಬೇಕೆಂದು ದೃಢ ನಿರ್ಧಾರವನ್ನು ಮಾಡಿ ಸೇವಾದಳ ಸ್ಥಾಪನೆಯನ್ನು ಅಲ್ಲಲ್ಲಿ ಮಾಡಲು ಪ್ರಾರಂಭಿಸಿದರು.  ಈ ಹಿನ್ನೆಲೆಯಿಂದಲೇ ಕರ್ನಾಟಕದಲಿ ಅತ್ಯಂತ ಭರದಲಿ ರಾಷ್ಟ್ರೀಯ ಸೇವಾದಳ ಸ್ಥಾಪನೆಗೆ ಚಾಲನೆ ದೊರಕಿತು..‌ ಇಂಥ ಸಂಘಟನೆ ಪ್ರಾರಂಭವಾದಾಗ ಇದು ಪುರುಷರಷ್ಟೇ ಪಾಲುಕೊಳ್ಳುತ್ತಿದ್ದರು. ರಾಷ್ಟ್ರ ಹಿತಕ್ಕೆ ಹೋರಾಡಲು ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟು ನಿಲ್ಲುವ ಸಂದರ್ಭಗಳು ಬಂದೊದಗಿತ್ತು. ಅದಕ್ಕಾಗಿ  ಮಹಿಳೆಯರಿಗಾಗಿ ನಿರ್ದಿಷ್ಟವಾದಂಥ ಸಂಘಟನೆ ಯಾವುದು ಇರಲಿಲ್ಲ ….ಹೀಗಾಗಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ರಾಷ್ಟ್ರೀಯ ಚಳುವಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು‌‌…. ಹಾಗೆ ಮಹಿಳೆಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೇರೆಪಿಸುತ ರಾಷ್ಟ್ರದ ಆಗೂ ಹೋಗುಗಳ ಅರಿವು ಮೂಡಿಸಿ… ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ೧೯೪೭ರಲ್ಲಿ ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ   *ಜಯದೇವಿ ತಾಯಿಯವರು ತಮ್ಮ ಮನೆಯಾದ *ಜಯನಿಕೇತನದಲ್ಲಿ *ರಾಷ್ಟ್ರೀಯ ಸೇವಾದಳ,*ಪ್ರೌಢ ಸ್ತ್ರೀ ಶಾಖೆ*ಯನ್ನು ಆರಂಭಿಸಿದರು.  ಸೊಲ್ಲಾಪುರದಲ್ಲಿ ಪ್ರಾಂತೀಯ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂಘವು ಅನುತಾಲಿಮಯೋ ಅವರಿಂದ ಉದ್ಘಾಟಿಸಲಾಯಿತು. ಇಲ್ಲಿ ಪ್ರತಿ ವಾರ ಸಭೆ ಸೇರಿ ರಾಷ್ಟ್ರೀಯ ಹಿತ ಚಿಂತನೆಗಾಗಿ ರಾಜಕೀಯ ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಹಿಳೆಯರ ಭೌಧಿಕ-ಭೌತಿಕ ಆರೊಗ್ಯಕರ ವಿಕಾಸದೊಂದಿಗೆ ದೇಶಪ್ರೇಮ ಹಾಗೂ ಮಹಾನ್ ಆದರ್ಶ ಪುರುಷರು-ಸ್ತ್ರೀಯರ ಬಗ್ಗೆ ಅನೇಕ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು. ಜಯದೇವಿ ತಾಯಿ ಮತ್ತು *ರಾಮಕೃಷ್ಣ ಜಾಜುಜಿ* ಅಂಥವರ ಭಾಷಣದಿಂದ ಹೆಣ್ಣು ಮಕ್ಕಳು ಪ್ರೇರಿತರಾಗುತ್ತಿದ್ದರು. ಇವರೊಂದಿಗೆ ಮಹಿಳಾ ಜ್ಞಾನ ಮಂದಿರದಿಂದಲೂ ಜಯದೇವಿ ತಾಯಿಯವರು ಹೆಣ್ಣು ಮಕ್ಕಳನ್ನು ಸಂಘಟಿಸುತ್ತಿದ್ದರು. ಮಹಿಳೆಯರಲ್ಲಿ ದೇಶ ಪ್ರೇಮ ಮೂಡಿಸಿ ಸಹಕರಿಸುತ್ತಿದ್ದರು. ಸ್ವಾತಂತ್ರದ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ರಾಷ್ಟ್ರೀಯ ನಾಡ ನುಡಿಯ ಜಾಗೃತಿಯನ್ನು ಮೂಡಿಸುತ್ತಿದ್ದರು. ೧೯೪೭ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸೂಚನೆ ಸಿಗಲಾರಂಬಿಸಿತ್ತು. ಜಯದೇವಿ ತಾಯಿಯವರು ಅಕ್ಕನ ಬಳಗ ಹಾಗೂ ಸರಸ್ವತಿ ವಿದ್ಯಾ ಮಂದಿರ, ಶ್ರಾವಿಕಾಶ್ರಮ ,ಸ್ತ್ರೀ ಶಕ್ತಿ ಹೋರಾಟಗಳು ಜೋರಾಗಿ ನಡೆಯಿತು . ಸ್ವಾತಂತ್ರ್ಯ ದೇಶದಲ್ಲಿ ಸ್ತ್ರೀಯರ ಕರ್ತವ್ಯಗಳು,  ಸ್ತ್ರೀ ಸ್ವಾವಲಂಬನೆ, ಸ್ತ್ರೀ ಆರ್ಥಿಕ ಸ್ಥಿರತೆ,ವರ್ತಮಾನ ಕಾಲದ ವೆಚ್ಚರಹಿತ ಸರಳ ವಿವಾಹಗಳ ಪದ್ಧತಿ, ಸಾಮಾಜಿಕವಾಗಿ ನಾರಿಯರು ಗೌರವದಿಂದ ಬದುಕುವ ವಿಧಾನವನ್ನು ಮುಂತಾದ ವಿಷಯಗಳ ಮೇಲೆ ವಿವಿಧ ಬಡಾವಣೆಗಳಲ್ಲಿ ಭಾಷಣ ವ್ಯಾಖ್ಯಾನ ಮಾಲೆಯನ್ನು ಏರ್ಪಡಿಸುತ್ತಿದ್ದರು ‌. ಸಂಸ್ಕೃತಿಕ ವಿದ್ಯಾವಂತ ಮಹಿಳೆಯರಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಯಿಯವರ ನಿಲುವಾಗಿತ್ತು. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ ,ದುಃಖಕ್ಕೆ ಕಾರಣವಾಗುವ  ಅಜ್ಞಾನ..ಬಡತನ ಮತ್ತು ವರ್ಗ ಕಲಹಗಳು ಕಾರಣವಾಗುತ್ತವೆಂದು…… ಈ ಅಜ್ಞಾನವನ್ನು ದೂರ ಮಾಡಬೇಕು ಕುಟುಂಬದ ಅನ್ಯಾಯವನ್ನು ದೂರ ಮಾಡಬೇಕಾದರೆ ಮುಖ್ಯವಾಗಿ ಮನೆಯ ಸ್ತ್ರೀ ತಾಯಿಯೂ ವಿದ್ಯಾವಂತಳು ಆಗಿರಲೇಬೇಕು  ಸ್ತ್ರೀ ಶಿಕ್ಷಣ ಅದರೊಂದರಿಂದಲೇ ಶಾಂತಿಭರಿತವಾದ‌ ಬದುಕು ಹಾಗೂ ಸಾಮಾಜಿಕೆ ಸಮಾನತೆಯ ಬೆಳವಣಿಗೆಗೆ ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. *ಅಸ್ಪೃಶ್ಯ ನಿವಾರಣೆ* ಅದೇ ಸಮಯದಲ್ಲಿ ಅಸ್ಪೃಶ್ಯರು ಎಂದು ಕರೆದ ಒಂದು ಜನ ಸಮುಹವನು‌ ಕಡೆಗಣಿಸುವ ಅತ್ಯಂತ ಹೀನ ರೀತಿಯಲ್ಲಿ ಅವರನ್ನು ನೋಡಿಕೊಳ್ಳುವ ಪದ್ಧತಿ ಸರಿ ಅಲ್ಲವೆಂದು ವಿರೋಧಿಸಿದ ಗಾಂಧೀಜಿಯವರ‌ ಕರೆಕೊಟ್ಟಂತೆ ಅಸ್ಪೃಶ್ಯರನ್ನು ಹರೀಜನರು ಎಂದು ಕರೆಯಲು ಜಯದೇವಿತಾಯಿಯವರು ಮುಂದಾದರು.ಅದೇ ರೀತಿ 12ನೇ ಶತಮಾನದ ಶರಣರು ಎಲ್ಲರಲ್ಲಿ ಸಮಾನತೆಯ ಮನಸ್ಸನ್ನು ಹುಟ್ಟು ಹಾಕಿದ್ದರು ಕಾಯಕದಿಂದ ಹುಟ್ಟಿದ ಜಾತಿಯನ್ನು ವ್ಯಯಕ್ತಿಕವಾಗಿ ಸಂಭಧ ಆರಂಭಿಸುವುದು, ಅವಮಾನ ಗೊಳಿಸುವುದು ಅಪಚಾರವೆದುಂದು ಹೇಳುತ್ತಿದ್ದರು.    ಶರಣ ಅಂಬಿಗರ ಚೌಡಯ್ಯ ಮಾದರ ಚೆನ್ನಯ್ಯರಂತೆ ಬದುಕನ್ನು ಅರಿತುಕೊಂಡ ಜಯದೇವಿ ತಾಯಿಯವರು ಶರಣರ ಆದರ್ಶವನ್ನು ಮನದಲ್ಲಿ ತುಂಬಿಕೊಂಡು ಗಾಂಧೀಜಿಯವರ ಹರೀಜನರ ಆಂದೋಲನಕೆ ಕೈಜೋಡಿಸಿದ್ದರು.ಪೂಜೆ ತೀರ್ಥ ಪ್ರಸಾದಗಳನ್ನು ಹರಿಜನರಿಗೆ ನಿರಾಕರಿಸಿದ್ದನ್ನು ಜಯದೇವಿ ತಾಯಿಯವರು ಗಾಢವಾಗಿ ವಿರೋಧಿಸುತ ಅನೇಕ ಕಡೆಭಾಷಣ ಮಾಡುತ್ತಿದ್ದರು. ಹಾಗೆ ಸ್ತ್ರೀಯರ ಆಧ್ಯ ಕರ್ತವ್ಯ ಅವರ ನಿಶ್ಚಲವಾದ ನಿರ್ಭಯತೆ ನಿರ್ಮಲತೆಯ…… ವಿಷಯಗಳ ಕುರಿತು ಕೇರಿಯ ಜನರಿಗೆ ತಿಳಿಹೇತ್ತಿದ್ದರು. ಸೊಲ್ಲಾಪುರ ಮತ್ತು ಬಾರ್ಷಿಗಳ ರಿಮೈಂಡ್ ಹೋಂ ಮತ್ತು ಹರಿಜನ ಸಂಘಗಳಿಗೆ, ಗಾಂಧಿ ಛತ್ರಾಲಯಗಳಿಗೆ ಜಯದೇವಿ ತಾಯಿಯವರು ಬೆಂಬಲ ಪ್ರೇರಣೆ ನೀಡಿದವರು. ಆಡಳಿತಗಾರರಿಗೆ ಭೇಟಿಯಾಗಿ  ಅವರ ಸಮಸ್ಯೆಗಳನ್ನು ತಿಳಿದುಕೊಂಡು ಧನ ಸಹಾಯವನ್ನು ತಕ್ಷಣವಾಗಿ ಒದಗಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ ಹಾಗೂ ಮಹಾಪುರುಷರ ವಿಷಯಗಳು ಹಾಗೂ ಧೀರ ಮಹಿಳೆಯರು ಹೋರಾಟಗಾರರ ಬಗ್ಗೆ ವಿಸ್ತೃತಗೊಳಿಸಿ ಅವರ ಜೀವನ ಚರಿತ್ರೆಯ ಬಗ್ಗೆ ಹರಿ ಜನರಿಗೆ ತಿಳಿ ಹೇಳುತ್ತಿದ್ದರು . ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಿದ್ದರು.ಇವರು ಆಗಾಗ ಹರಿಜನ ಕೇರಿಗೆ ಬರುವರೆಂದು ತಿಳಿದ ಕೇರಿಯವರು ಎಲ್ಲವನ್ನು ಸ್ವಚ್ಛ ಮಾಡಿ ಚಳಿ ಹೊಡೆದು ತರಿಳು ತೋರಣವನ್ನು ಕಟ್ಟಿ, ಆರತಿ ತುಂಬಿಕೊಂಡು ಜನರು ಸ್ವಾಗತಿಸುತ್ತಿದ್ದರು. ಅಸ್ಪೃಶ್ಯ ಕೇರಿಗೆ  ಇನ್ನಿತರ ಕಾರ್ಯಕ್ರಮದಲ್ಲಿ ಓಡಾಡುವ ಕಾರ್ಯಕರ್ತರು ಜಯದೇವಿ ತಾಯಿಯವರನ್ನು ಪರೀಕ್ಷಿಸಲು  ಜಯದೇವಿ ತಾಯಿಯವರನ್ನು ಅಲ್ಲಿ  ಬೋಜನೆ ಮಾಡಲು ಕೇಳಿಕೊಂಡರು …..ಅದಕ್ಕೆ ತಾಯಿಯವರು ಎಂದಿನಂತೆ ಅವರ ಪೂಜೆ ನಂತರವೇ ಪ್ರಸಾದ ತೆದುಕೊಳ್ಳುತ್ತಿದ್ದರು ಹೀಗಾಗಿ ಅವರು ತಮ್ಮ ಪೂಜೆಯನ್ನು ಮುಗಿಸಿ ಅಲ್ಲಿಗೆ ಬಂದು ಎಲ್ಲರೊಂದಿಗೆ ಪ್ರಸಾದವನ್ನು ತೆಗೆದುಕೊಂಡದ್ದು ಒಂದು ಇತಿಹಾಸವೇವಾಯಿತು.  ಹಾಗೆ ತಮ್ಮ  ಭಾಷಣ ಒಂದರಲ್ಲಿ ಹೀಗೆ ಹೇಳಿದ್ದರು ಇಂದು ನಮ್ಮಲ್ಲಿ ಬಹಳ ಜನರು ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ದುಡ್ಡು ದುಡಿಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ರೂಡಿ ಮಾಡಿಕೊಂಡಿದ್ದಾರೆ ನಮಗೆ ನಮ್ಮ ಅನ್ನವನ್ನು ತಿಂದು ಸಮಾಜ ಕಾರ್ಯ ಮಾಡುವ ಅಭ್ಯಾಸವಾಗಿದೆ ಅಂತ ಅಲ್ಲಿ ತಾಯಿಯವರನ್ನು ಸಂಘಟಿಕರಿಗೆ ಉತ್ತರ ನೀಡಿದ್ದರು. ಹೀಗೆ ತಾಯಿಯವರು ದೀನ,ದಲಿತ, ಶೋಷಿತ ಅಸ್ಪೃಶ್ಯರ ಸಲುವಾಗಿ ಅವರ ಜೀರ್ಣೋದ್ಧಾರದ ಸಲುವಾಗಿ ಶ್ರಮಿಸಿದರು. ಶರಣರು ತೋರಿದ ಸಮಾಜದ ಧಾರ್ಮಿಕ ಹಿನ್ನೆಲೆ ಅವರದಗಿತ್ತು. ಸೊಲ್ಲಾಪುರ ಬಾರ್ಸಿಗಳಲ್ಲಿದ್ದ ಹರಿಜನ ಕೇರಿಗಳಿಗೆ ಹರಿಜನ ಬೋರ್ಡಗಳಿಗೆ ಹೋಗಿ ಸಹಾಯ ಸಹಕಾರ ನೀಡುತ್ತಿದ್ದರು.ಹರಿಜನರಲ್ಲಿ ಸಾಕ್ಷರತೆ -ಸ್ವಾವಲಂಬನೆ- ಸ್ವಾಭಿಮಾನ ಮೂಡಿಬರುವಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಡಿದ ಘಟನೆಗಳನ್ನು ಜನರು ಇನ್ನೂ ಆದರೂ ನೆನೆಯುವಧನ್ನು ನೋಡಬಹುದು.ಜಯದೇವಿ ತಾಯಿಯವರಿಗೆ ಹರಿಜನರ ಬಗ್ಗೆ ಇದ್ದ ಕಳಕಳಿ ಅಪಾರವಾದದ್ದು ಎಂದು ಭಾಲ್ಕೀ  ಹಿರೇಮಠ್ ಪೂಜ್ಯ.ಚನ್ನಬಸವ ಪಟ್ಟದೇವರು, ಇಳಕಲ ಚಿತ್ತಗರಿ  ಸಂಸ್ಥಾನ ಮಠದ ಪೂಜ್ಯ ಮಹಾಂತ ಸ್ವಾಮಿಗಳು  ಮೆಚ್ಚಿಕೊಂಡು ಹರ್ಷವನ್ನು ವ್ಯಕ್ತಪಡಿಸುತಿದ್ದರು. ಅದೇರೀತಿ ಬೆಲ್ಲದಾಳ ಸಿದ್ದರಾಮ ಶರಣರನ್ನು (ಹರಿಜನ ಬಾಲಕ ವಿಠಲರು )ಶರಣನಾದದ್ದನ್ನು ಕಂಡು ಗೌರವಿಸುತ್ತಿದ್ದರು.. ಜಯದೇವಿ ತಾಯಿಯವರು ದಲಿತೋದ್ಧಾರ ಅಸ್ಪೃಶ್ಯೋದ್ಧಾರ ಬಗ್ಗೆ ಕಳಕಳಿಯಿಂದ ಕೇವಲ ಭಾಷಣ ಮಾಡಿದರೆ ಸಾಲದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಅವರ ಅನುಭವಿಸಿದ ನೋವನ್ನು ಕಡಿಮೆಗೊಳಿಸುವ ಪ್ರಯತ್ನದಲಿದ್ದ ತಾಯಿಯವರು ಬರಿತಾರೆ…. *ಕೀಳು  ಮೇಲುಗಳೆಂಬ ಕುಲಾಚಾರವಳಿದುಕೊಳೆ ತೊಳೆಯಲು ಕೂಡಿದರು ಸಾರುವದಕೆ ಇಳೆಯೊಳು ಮಾನವ -ಕುಲ ಒಂದೇ * *ಜಗವು ಒಂದಾಗಲಿ ನಗುತ ಕೈಗೂಡಿಸಿರಿಬಗೆಯಲಿ ಅಣ್ಣ ತಮ್ಮಂದಿರಂತೆ, ಲೋಕದಿಹಗೆಯಂಬ ಭಾವ ಅಳಿಯಲಿ*  ವಿಶ್ವವೇ ಒಂದುಗೂಡಿಸುವ ..‌ಸಾರ್ವತ್ರಿಕ ಸರ್ವಕಾಲಿಕ ವಿಶ್ವಮಾನವೀಯ ಮೌಲ್ಯಗಳ ಒಡ್ಡೋಲಗ ಎಲ್ಲೆಡೆಯೂ ಸ್ಥಾಪಿತವಾಗಲಿ ಎನ್ನುವ ಆಸೆಯ ಹೊತ್ತವರು. *ನಾನು ನೀನೆಂಬ ಭೇದ ನಮ್ಮವರಿಗಿಲ್ಲತನ್ನಂತೆ ಜಗವ ಕಂಡಾರ -ಶರಣರುಭಿನ್ನಲ್ಲ ಉನ್ನತಿ ಪಡೆದಾರ!!* ಎಂದರು ಜಯದೇವಿತಾಯಿಅವರು. ಸವಿತಾ ದೇಶಮುಖ

Read Post »

ಕಥಾಗುಚ್ಛ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ”

ಕಥಾ ಸಂಗಾತಿ ಸುಮಲತಾ ಗಡಿಯಪ್ಪನವರ “ಒಂಟಿತನ” ನಾರಾಯಣರಾಯರ ಮನೆಗೆ ಬೆಳಕು ಬರುವುದು ಸೂರ್ಯನಿಂದಲ್ಲ; ಅದು ನೆನಪುಗಳ ಮಿಡಿತದಿಂದ. ಮುಂಜಾನೆ ಕಿಟಕಿಯ ಅಂಚಿನಿಂದ ಸರಿದುಬರುವ ತಣ್ಣನೆಯ ಗಾಳಿ, ಅವರ ಕಿವಿಯಲ್ಲಿ ಲಕ್ಷ್ಮೀದೇವಿಯ ಧ್ವನಿಯಾಗಿ ಅರಳುತ್ತಿತ್ತು—“ಏಳಿ… ಕಾಫಿ ತಣ್ಣಗಾಗುತ್ತಿದೆ.” ಆದರೆ ಕಣ್ಣು ತೆರೆದ ಕ್ಷಣವೇ ಎದುರುಗೊಳ್ಳುವುದು ಖಾಲಿ ಹಾಸಿಗೆ. ಹತ್ತು ವರ್ಷಗಳ ಹಿಂದೆ ಶಾಶ್ವತ ನಿದ್ರೆಗೆ ಜಾರಿದ ಪತ್ನಿಯ ಕೊರತೆ, ಪ್ರತಿದಿನವೂ ಹೊಸ ಗಾಯದಂತೆ ಎದೆಯನ್ನು ಕೀಳುತ್ತಿತ್ತು. ಕಾಲ ಮುಂದಕ್ಕೆ ಓಡುತ್ತಿತ್ತು; ಅವರ ಮನಸ್ಸು ಮಾತ್ರ ಹಿಂದೆ ಉಳಿದಿತ್ತು. ಕನ್ನಡಿಯ ಮುಂದೆ ನಿಂತಾಗ ಅವರು ತಮ್ಮ ಪ್ರತಿಬಿಂಬವನ್ನೇ ಗುರುತಿಸಲಾರರು. ಒಮ್ಮೆ ಈ ಮನೆಯ ಆಧಾರವಾಗಿದ್ದ ಮುಖ ಈಗ ನೆರಳಿನಂತೆ ಕುಗ್ಗಿತ್ತು—ಬಿಳಿಬಿದ್ದ ಕೂದಲು, ಒಳಗೆ ಕುಸಿದ ಕಣ್ಣುಗಳು, ನಿಶ್ಯಬ್ದ ನಿಟ್ಟುಸಿರು. ಗೋಡೆಗಳಲ್ಲೂ ಒಂಟಿತನದ ವಾಸನೆ ಅಂಟಿಕೊಂಡಂತಿತ್ತು. ಅಡುಗೆಮನೆಯ ಪಾತ್ರೆಗಳು ನೆನಪಿನಲ್ಲಿ ಮಾತನಾಡುತ್ತಿದ್ದವು. ಲಕ್ಷ್ಮೀದೇವಿಯ ಕೈರೇಖೆಯ ರುಚಿ ಇನ್ನೂ ಅವುಗಳೊಳಗೆ ಉಳಿದಿತ್ತು; ಆದರೆ ಅನ್ನಕ್ಕೆ ರುಚಿ ಇರಲಿಲ್ಲ. ಆಗ ಅವರಿಗೆ ಅರಿವಾಯಿತು—ರುಚಿ ಅನ್ನದಲ್ಲಿರಲಿಲ್ಲ, ಜೊತೆಯಲ್ಲಿತ್ತು. ಮಕ್ಕಳು ಇದ್ದರು—ದೂರದ ನಗರಗಳಲ್ಲಿ. ದೊಡ್ಡ ಹುದ್ದೆ, ದೊಡ್ಡ ಮನೆ, ದೊಡ್ಡ ಕನಸುಗಳು. ಆದರೆ ಅಪ್ಪನ ಬದುಕು ಮಾತ್ರ ನಿಧಾನವಾಗಿ ಕರಗುತ್ತಿತ್ತು. ತಿಂಗಳಲ್ಲಿ ಒಮ್ಮೆ ಬರುವ ಫೋನ್ ಕರೆ—“ಅಪ್ಪ, ಆರೋಗ್ಯ ಹೇಗಿದೆ?” ಪ್ರಶ್ನೆಯಲ್ಲೇ ಮುಗಿದುಹೋಗುತ್ತಿತ್ತು. ಅವರು ಎಂದಿನಂತೆ “ಚೆನ್ನಾಗಿದ್ದೇನೆ” ಎನ್ನುತ್ತಿದ್ದರು. ಸಮಾಜ ಕಲಿಸಿದ ಪಾಠ—ಗಂಡಸು ಅಳಬಾರದು, ನೋವು ತೋರಿಸಬಾರದು—ಅವರ ನಾಲಿಗೆಯನ್ನು ಕಟ್ಟಿಹಾಕಿತ್ತು. ಸಂಜೆಯಾದರೆ ಮನೆ ಇನ್ನಷ್ಟು ಭಾರವಾಗುತ್ತಿತ್ತು. ಗೋಡಿಯ ಮೇಲಿನ ಲಕ್ಷ್ಮೀದೇವಿಯ ಫೋಟೋ ಮುಂದೆ ಕುಳಿತು ಅವರು ಮೃದುವಾಗಿ ಮಾತಾಡುತ್ತಿದ್ದರು:“ನೀನಿಲ್ಲದೆ ಮಾತಾಡೋದಕ್ಕೂ ಅರ್ಥವಿಲ್ಲ ಲಕ್ಷ್ಮೀ…” ಉತ್ತರ ಸಿಗುತ್ತಿರಲಿಲ್ಲ. ಮೌನ ಮಾತ್ರ ಉಸಿರಾಡುತ್ತಿತ್ತು. ಒಂದು ರಾತ್ರಿ ಎದೆನೋವು ಹಠಾತ್ತಾಗಿ ದಾಳಿ ಮಾಡಿತು. ಉಸಿರು ಭಾರ, ಕೈ ಕಾಲು ಜಡ. ಫೋನ್ ಪಕ್ಕದಲ್ಲೇ ಇತ್ತು; ಆದರೆ ಕರೆ ಮಾಡಲು ಮನಸ್ಸು ಒಪ್ಪಲಿಲ್ಲ—“ಮಕ್ಕಳಿಗೆ ತೊಂದರೆ ಕೊಡಬಾರದು.” ಆ ಕ್ಷಣದಲ್ಲಿ ಅವರಿಗೆ ಸಾವು ಭಯವಲ್ಲ; ಯಾರಿಗೂ ಗೊತ್ತಾಗದೆ ಸಾಯುವ ಭಯ ಹೆಚ್ಚಾಗಿತ್ತು. ವರ್ಷಗಳ ಕಾಲ ಒತ್ತಿಹಿಡಿದ ನೋವು ಒಮ್ಮೆಲೆ ಒಡೆದು ಹರಿಯಿತು. ಕಣ್ಣೀರು ಜಾರಿ ಬಿದ್ದಿತು. ಅವರು ತಮ್ಮೊಳಗೆ ನುಡಿಯಿದರು:“ನಾನು ಗಂಡಸು… ಆದರೂ ನನಗೂ ಭಯವಾಗುತ್ತೆ.” ಮರುದಿನ ಬೆಳಗ್ಗೆ ಪಕ್ಕದ ಮನೆಯ ಚಿಕ್ಕ ಹುಡುಗಿ ಹಾಲು ಕೊಡಲು ಬಂದಳು. ಬಾಗಿಲು ಅರ್ಧ ತೆರೆದಿತ್ತು. ಅವಳು ಒಳಗೆ ಬಂದು ಆತಂಕದಿಂದ ಹೇಳಿದಳು:“ಅಜ್ಜ, ನಿನ್ನೆ ನೀವು ಕಾಣಿಸಲಿಲ್ಲ… ನನಗೆ ಭಯ ಆಯ್ತು.” ಆ ಒಂದು ವಾಕ್ಯ ಅವರ ಒಳಗಿನ ಕತ್ತಲೆಗೆ ದೀಪ ಹಚ್ಚಿತು. ಯಾರೋ ತನ್ನ ನ್ನು ಗಮನಿಸಿದ್ದಾರೆ ಎಂಬ ಅರಿವು, ಅವರನ್ನು ಮತ್ತೆ ಬದುಕಿನ ಕಡೆ ತಿರುಗಿಸಿತು. ಆ ದಿನ ಅವರು ಮೊದಲ ಬಾರಿ ನಗುಸಹಿತ “ಬಾ ಮಗಳೇ, ಕುಡಿ ಕಾಫಿ” ಎಂದರು. ನಾರಾಯಣರಾಯರಿಗೆ ಸ್ಪಷ್ಟವಾಯಿತು—ಮನುಷ್ಯನಿಗೆ ಅನ್ನ, ನೀರು, ಔಷಧಿ ಮಾತ್ರ ಸಾಲದು; ಮಾತು, ಕಾಳಜಿ, ಜೊತೆಗಾರಿಕೆ ಬೇಕು.ಹಿರಿಯ ವಿಧುರನ ನೋವು ಕಣ್ಣಿಗೆ ಕಾಣುವುದಿಲ್ಲ.ಅವನು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ—ಮೌನವಾಗಿ ಕರಗುತ್ತಾನೆ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ” Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ಪ್ರೀತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಹೇಳದೆ ಉಳಿದಿಹ ಮಾತು…. ನೂರಿವೆ” ಅಮ್ಮ ನಿಮ್ಮ ಕಾಲದ ಜನರು ಅದೆಷ್ಟು ಅನ್ ರೋಮ್ಯಾಂಟಿಕ್ ಅಲ್ಲವೇ ? ತಬ್ಬಿಕೊಳ್ಳುವುದು ದೂರ ಬಿಡು..ಐ ಲವ್ ಯು ಅಂತ ಹೇಳಿ ಪ್ರೀತಿಯನ್ನು ಅಭಿವ್ಯಕ್ತ ಪಡಿಸುವುದು ಅವರಿಗೆ ಗೊತ್ತೇ ಇಲ್ಲ ಎಂದು ಮಗಳು ಕೇಳಿದಾಗ ತಾಯಿ ಮೆಲ್ಲನೆ ನಸುನಕ್ಕು ಸುಮ್ಮನಾದಳು.ಕಣ್ಣರಿಯದ ಮಾತನ್ನು ಕರುಳರಿಯುತ್ತದೆ ಎಂದು ಹೇಳುತ್ತಾರೆ ಅಲ್ಲವೇ… ಹಾಗೆಯೇ ಮಾತುಗಳಲ್ಲಿ ಹೇಳಲಾಗದ ನೂರೆಂಟು ಭಾವಗಳನ್ನು ತಮ್ಮ ವರ್ತನೆಯಲ್ಲಿ ತೋರುವ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದು ನಮ್ಮ ಹಿರಿಯರಿಗೆ ಸಿದ್ಧಿಸಿದ ಕಲೆ. ಅಲ್ಲಿ ಯಾವುದೇ ನಾಟಕೀಯ ಪ್ರದರ್ಶನವಿಲ್ಲ ನೈಜತೆಯೇ ಎಲ್ಲ. ಮನೆಯ ಹಿರಿಯರಲ್ಲಿ ನಸು ಮುನಿಸಿನ ಜಗಳಗಳನ್ನು ನೋಡಿದಾಗ ಈ ಕುರಿತು ನಮಗೆ ಅರಿವಾಗುತ್ತದೆ. ಊಟದ ಸಮಯಕ್ಕೆ ಸರಿಯಾಗಿ ಅಜ್ಜ ಊಟ ಮಾಡದೆ ಹೋದಾಗ ಮುನಿಯುವ ಅಜ್ಜಿಯ ಮನಸ್ಸಿನಲ್ಲಿ ತನ್ನ ಪತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲಿ ಎಂಬ ಆಶಯವಿರುತ್ತದೆ. ಆದರೆ ಅದೇ ಅಜ್ಜ ದಿನವಿಡೀ ಕೆಲಸ ಮಾಡಿದ್ದೀಯ! ಕೊಂಚ ಹೊತ್ತು ಕುಳಿತು ವಿಶ್ರಾಂತಿ ಮಾಡಲಿ. ತನ್ನ ವಯಸ್ಸಿನವರ ಜೊತೆ ಮನೆಯ ಕಟ್ಟೆಯ ಮೇಲೆ ಕುಳಿತು ಇಲ್ಲವೇ ದೇವಸ್ಥಾನದ ಆವರಣದಲ್ಲಿ ಕುಳಿತು ಹರಟೆ ಹೊಡೆದು ದಣಿವಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಕೆಯನ್ನು ದೂರದರ್ಶನದಲ್ಲಿ ಬರುವ ಯಾವುದೋ ಕಾರ್ಯಕ್ರಮವನ್ನು ನೋಡಲು ಕರೆಯುತ್ತಾರೆ ಇಲ್ಲವೇ ಸಾಯಂಕಾಲದ ಸಮಯದಲ್ಲಿ ಒಂದಷ್ಟು ವಾಕಿಂಗ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿ ಊರ ಹೊರಗಿನ ದೇವಸ್ಥಾನದ ಬಳಿಯೋ ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮಾತನಾಡಿ ವಾಪಸ್ ಕರೆ ತರುತ್ತಾರೆ…. ಇದೆಲ್ಲದರ ಹಿಂದೆ ಇರುವುದು ಅವರ ಅನನ್ಯವಾದ ಕಾಳಜಿ. ಇಲ್ಲಿ ಅವರಿಬ್ಬರೂ ಪರಸ್ಪರರ ಕಾಳಜಿ ಮಾಡುವುದರ ಹಿಂದೆ ಇರುವುದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ರೂಪ.ಇನ್ನು ತನ್ನ ಪತ್ನಿಯ ಇಷ್ಟದ ಬಣ್ಣದ ಉಡುಪನ್ನು, ಸೀರೆಯನ್ನು ಆಗಾಗ ಪತಿ ತರುತ್ತಾನೆ. ಹೂವನ್ನು, ಸಿಹಿತಿಂಡಿಯನ್ನು ತಂದುಕೊಡುವ ಪತಿ ಮನೆಗೆ ಬಂದ ಕೂಡಲೇ ಅದನ್ನು ಆಕೆಯ ಕೈಗಿಟ್ಟು ಬೇಗ ತಟ್ಟೆಯಲ್ಲಿ ಹಾಕಿ ತಗೊಂಡು ಬಾ ನಾವೆಲ್ಲರೂ ಸೇರಿ ತಿನ್ನೋಣ ಎನ್ನುವ ಮೂಲಕ ಆಕೆಯ ಕುರಿತು ಕಾಳಜಿ ವಹಿಸುತ್ತಾನೆ. ಹೊರಗಿನಿಂದ ದುಡಿದು ದಣಿದು ಬರುವ ಪತಿ ತನ್ನಿಷ್ಟದ ತಿಂಡಿ ತಿನಿಸುಗಳನ್ನು ತಂದು ಕೊಟ್ಟಾಗ ಪತ್ನಿ ಆತನ ಅವಸರದ ಕರೆಗೆ ಓಗೊಟ್ಟು ಗಂಡ ಮಕ್ಕಳೊಡನೆ ತಾನೂ ಕುಳಿತು ತಿಂದು ನಂತರ ಕಾಫಿ ಮಾಡಿಕೊಡುತ್ತಾಳೆ. ಇದು ಕೂಡ ಪ್ರೀತಿಯೇ ಅಲ್ಲವೇ ? ನಾಲ್ಕು ಜನರ ನಡುವೆ ಹೊರಗೆ ಓಡಾಡುವ ತನ್ನ ಪತಿ ಯಾವಾಗಲೂ ಇಸ್ತ್ರಿಯಾದ ಗರಿ ಗರಿ ಬಟ್ಟೆಗಳನ್ನು ಧರಿಸಿ ಲವಲವಿಕೆಯಿಂದ ಓಡಾಡಲಿ ಎಂದು ಪತ್ನಿ ಆಶಿಸಿದರೆ, ತನ್ನ ಇಡೀ ಕುಟುಂಬದ ನಿರ್ವಹಣೆ ಮಾಡುವ ಪತ್ನಿ ಚೆನ್ನಾಗಿ ತಿಂದುಂಡು ಆರೋಗ್ಯವಾಗಿರಲಿ ಎಂದು ಪತಿ ಆಶಿಸುತ್ತಾನೆ.ಹರೆಯದಲ್ಲಿ ಪತಿಯ ಹಿಂದೆ ಮುಂದೆ ಓಡಾಡಿ ಆತನ ಕೆಲಸಗಳನ್ನು ಮಾಡಿಕೊಡುವ ಪತ್ನಿಗೆ ಮಧ್ಯ ವಯಸ್ಸಿನಲ್ಲಿ ವಯೋ ಸಹಜವಾಗಿ ಉಂಟಾಗುವ ತಲೆನೋವು, ಸೊಂಟ ನೋವುಗಳಿಗೆ ಝಂಡು ಬಾಮ್ ಹಚ್ಚಿ ಮಾಲೀಶು ಮಾಡುವ ಪತಿಗಳನ್ನು ನಾವು ಕಾಣಬಹುದು… ಮತ್ತೆ ಕೆಲವರು ಅಷ್ಟೆಲ್ಲವನ್ನು ಮಾಡದೆ ಹೋದರೂ ತಮ್ಮದೇ ಧೋರಣೆಯ ದಾಟಿಯಲ್ಲಿ ‘ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದರೆ ಇನ್ನೇನಾದೀತು ಊಟ ಮಾಡಿ ಮಾತ್ರೆ ನುಂಗಿ ಮಲಗಿಕೋ ‘ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.‘ ಋಣಾನು ಬಂಧ ರೂಪೇಣ, ಪಶು ಪತ್ನಿ ಸುತಾಲಯ’ ಎಂದು ನಮ್ಮ ಹಿರಿಯರು ಹೇಳಿರುವುದು ಬಹುಶಃ ಇದೇ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ರಕ್ತ ಸಂಬಂಧವಲ್ಲದ ಆದರೂ ಕೂಡ ಋಣ ಮತ್ತು ಅನುಬಂಧದ ಕಾರಣದಿಂದಾಗಿ ಸತಿಪತಿಗಳಾಗಿ ಬದುಕುವ ಅವರಿಬ್ಬರೂ ತಾರುಣ್ಯದಲ್ಲಿ ವಯೋಸಹಜ ಪ್ರೇಮ ಕಾಮಗಳಲ್ಲಿ ಒಂದಾದರೂ ಮಧ್ಯ ವಯಸ್ಸಿಗೆ ಬಂದಾಗಲೂ ಕೂಡ ಮಕ್ಕಳ ಪಾಲನೆ ಪೋಷಣೆಯನ್ನು ಜೊತೆಯಾಗಿ ಮಾಡುವ ಮೂಲಕ ಕೌಟುಂಬಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ. ಇನ್ನು ವೃದ್ಧಾಪ್ಯದಲ್ಲಂತೂ ಕೇಳಲೇಬೇಡಿ ಅದುವರೆಗೂ ಅತ್ಯಂತ ಕಠಿಣ ವ್ಯಕ್ತಿ ಎಂದು ಎನಿಸಿಕೊಂಡಿರುವಾತ ಕೂಡ ತನ್ನ ಕುಟುಂಬದ ಮೂಲ ಸೆಲೆಯಾದ ತನ್ನ ಪತ್ನಿಯನ್ನು ಕಾಳಜಿ ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಹಿಂದೆ ಕೇಳಿದರೂ ತಂದುಕೊಡದ ತಾರುಣ್ಯದ ಮೈಮರೆವನ್ನು ಹೊತ್ತು ಮೆರೆಯುತ್ತಿದ್ದ ಆತ ಇದೀಗ ಆಕೆ ಕೇಳದೆಯೂ ಆಕೆಯ ಮನದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ. ಇನ್ನು ಆಕೆ ಏನು ಕಡಿಮೆಯೇ! ಆಕೆ ಕೂಡ ಆತನ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಆತನ ಒಳಿತು ಕೆಡುಕುಗಳಿಗೆ ತನ್ನನ್ನು ತಾನು ಜವಾಬ್ದಾರಿಯನ್ನಾಗಿಸಿಕೊಂಡು ಎಲ್ಲ ರೀತಿಯಲ್ಲಿಯೂ ಆತನ ಕಾಳಜಿ ಮಾಡುತ್ತಾಳೆ. . ಇದೀಗ ಕೇವಲ ಆಕೆ ಆತನ ಪ್ರೇಮದ ಕಾಮದ ಸಿಟ್ಟು ಸೆಡವನ್ನು ಹೊರುವ ಪತ್ನಿ ಮಾತ್ರವಲ್ಲ ಬದಲಾಗಿ ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಾಮಾತೆ. ಆತನ ಪಾಲಕರನ್ನು ಆದರಿಸಿ ಸತ್ಕರಿಸುವ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಮನೆ ಯಜಮಾನಿ. ಆತನ ಮಕ್ಕಳನ್ನು ಅತ್ಯುತ್ತಮ ಶಿಕ್ಷೆ ಮತ್ತು ರಕ್ಷೆಗಳ ಜೊತೆಯಲ್ಲಿ ಉತ್ತಮ ನಾಗರಿಕರನ್ನಾಗಿಸಿ ಬೆಳೆಸುವ ಮಮತಾಮಯಿ. ಹೀಗೆ ಅವರು ಪರಸ್ಪರರನ್ನು ದೂರುವ ಮೂಲಕ ಕಾಳಜಿ ಮಾಡಿಕೊಳ್ಳಲು ಹೇಳುವ ಮೂಲಕ ಖುದ್ದು ತಾವೇ ಕಾಳಜಿ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮಧ್ಯ ವಯಸ್ಸಿನಲ್ಲಿ ಮಕ್ಕಳ ಮುಂದೆ ಅವರ ಸಂಗಾತಿಯನ್ನು ತುಸು ದೂರುವುದು ಹೆಚ್ಚೇ ಆದರೂ ಅದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ಸ್ವರೂಪ.ಮಕ್ಕಳ ಮುಂದೆ ಪರಸ್ಪರರನ್ನು ದೂರಿದರು ಕೂಡ ಒಂದೊಮ್ಮೆ ಮಕ್ಕಳು ಅವರನ್ನು ತಮಾಷೆಯಾಗಿ ಅಂದು ಆಡಿದರೂ ಕೂಡ ಅದನ್ನು ಸಹಿಸದೆ ತಮ್ಮ ಸಂಗಾತಿಯನ್ನು ವಹಿಸಿಕೊಂಡು ಬರುವುದು ಹಾಗೂ ಅದಕ್ಕೂ ಮಿಗಿಲಾಗಿ ಮಕ್ಕಳು ತಮಾಷೆ ಮಾಡಿದರೆ ಅವರಿಬ್ಬರೂ ಒಂದು ಗುಂಪಾಗಿ ನಸು ಕೋಪವು ಉಗ್ರ ಕೋಪವಾಗಿ ಮಕ್ಕಳ ಮೇಲೆ ಹರಿಹಾಯುವುದು ಕೂಡ ಅವರ ಪ್ರೀತಿಯ ಮತ್ತೊಂದು ಸ್ವರೂಪ. ಆಗ ಮಕ್ಕಳು ಅಯ್ಯೋ! ಇವರಿಬ್ಬರ ಮಧ್ಯದಲ್ಲಿ ನಾವು ಸಿಲುಕಿ ಕೊಳ್ಳುವುದು ಬೇಡ ಎಂದು ತಮಾಷೆ ಮಾಡಿ ಹಿಂದೆ ಸರಿಯುವುದೂ ಉಂಟು. ಎಷ್ಟೋ ಬಾರಿ ದಂಪತಿಗಳು ಮದುವೆಯಾದ ಕೆಲ ವರ್ಷಗಳ ನಂತರ ಪರಸ್ಪರ ವಿಭಿನ್ನ ವ್ಯಕ್ತಿತ್ವಗಳು ಎಂಬಂತೆ ಕಂಡರೂ ಮುಂದಿನ ಕೆಲ ದಶಕಗಳ ಬದುಕಿನಲ್ಲಿ ಇವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಒಂದೇ ರೀತಿಯ ಮಾತುಕತೆ, ರೀತಿ ನೀತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ….. ಅವರಿಬ್ಬರೂ ಒಬ್ಬರಾಗುವ ಈ ಪ್ರಕ್ರಿಯೆಗೆ ಕಾರಣ ಹಲವಾರು ವರ್ಷಗಳ ಜೊತೆಯಾಗಿರುವಿಕೆ. ದೇಹವೆರಡು ಪ್ರಾಣ ಒಂದು, ಕಣ್ಣೆರಡು ನೋಟ ಒಂದು ಎಂಬಂತಿರುವ ಅವರ ಬದುಕುಇದಕ್ಕೆ ವ್ಯತಿರಿಕ್ತವಾಗಿಯೂ ಸಾಕಷ್ಟು ಜನ ಬದುಕಬಹುದು. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಪರಸ್ಪರ ಗೌರವದಿಂದ ದೂರ ಸರಿದಿರಬಹುದು. ಅಂತಹ ದೂರ ಸರಿದಿರುವ ದಂಪತಿಗಳು ಕೂಡ ತಮ್ಮ ಸಂಗಾತಿಯ ಮೇಲಿನ ನಿಜವಾದ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಹಾಗೂ ತಾವು ಆ ರೀತಿ ದೂರವಾದರೂ ಕೂಡ ಒಂದೊಳ್ಳೆಯ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಮೂಲಕ ಪರಸ್ಪರರನ್ನು ಗೌರವಿಸುತ್ತಾರೆ. ಇದು ಕೂಡ ಹೇಳದೆ ಉಳಿದಿಹ ಮಾತುಗಳಲ್ಲಿ ಒಂದಾಗಬಹುದು.ಇದಕ್ಕೆ ಉದಾಹರಣೆಯಾಗಿ ಕಿರಣ್ ಬೇಡಿ ಮತ್ತು ಆಕೆಯ ಪ್ರತಿ ಹಸ್ತ ಕಲೆಗಳ ಜನಕರು ಎಂದೆ ಹೆಸರಾದ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಆಕೆಯ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಾಲಿವುಡ್ ಚಲನಚಿತ್ರರಂಗದ ಅಶೀಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ, ಖ್ಯಾತ ಹಿಂದಿ ಚಲನಚಿತ್ರ ತಾರೆ ಅಮೀರ್ ಖಾನ್ ಮತ್ತು ಅವರ ಪತ್ನಿ ರೀನಾ, ಹೃತಿಕ್ ರೋಷನ್ ಹಾಗೂ ಅವರ ಪತ್ನಿ ಸುಸಾನೆ ಹೀಗೆ ಹತ್ತು ಹಲವು ಜನರನ್ನು ನಾವು ಉದಾಹರಿಸಬಹುದು….. ಆದರೆ ಇಂಥವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಪ್ರತಿ ಮಾತಿಗೂ ಐ ಲವ್ ಯು ಎಂದು ಹೇಳುವ, ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುವ ಭಾವ ಮಾತ್ರ ಪ್ರೀತಿಯಲ್ಲ ಬದಲಾಗಿ ಮಾತುಗಳಲ್ಲಿ ಹೇಳದೆ ಹೋದರು ತಮ್ಮ ಕೃತಿಯಲ್ಲಿ ವ್ಯಕ್ತಪಡಿಸುವ, ವರ್ತನೆಯ ಮೂಲಕ ಅರಿವು ಮೂಡಿಸುವ ಪ್ರೀತಿ ಎಷ್ಟೋ ಮೇಲು ಅಲ್ಲವೇ ? ವೀಣಾ ಹೇಮಂತಗೌಡ ಪಾಟೀಲ್

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಪುಸ್ತಕ ಸಂಗಾತಿ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ

ಪುಸ್ತಕ ಸಂಗಾತಿ ತಿಲಕಾ ನಾಗರಾಜ್ ಹಿರಿಯಡಕ ಡಾ| ಶ್ರುತಿ ಮಧುಸೂದನ್ “ಪೇರಳೆ ಕಾಕು” ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.           ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.  ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ  ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ,  ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.       ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ. ತಿಲಕಾ ನಾಗರಾಜ್ ಹಿರಿಯಡಕ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ Read Post »

ಇತರೆ, ಪರಿಸರ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ

ಪರಿಸರ ಸಂಗಾತಿ ಪೃಥ್ವಿರಾಜ್ ಟಿ ಬಿ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” (ಭೂತಾಯಿಯ ಮನದಾಳದ ಮಾತು) “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಮಾನವನ ಇತಿಹಾಸವನ್ನು ನಾವು ಓದಿದಾಗ, ಒಂದು ನೋವು ತುಂಬಿದ ಸತ್ಯ ನಮ್ಮ ಮುಂದೆ ಬರುತ್ತದೆ—ಅದು ಯುದ್ಧ. ಯುದ್ಧಗಳು ಕಾಲಕಾಲಕ್ಕೆ ರೂಪ ಬದಲಿಸಿಕೊಂಡರೂ, ಅದರ ಮೂಲ ಕಾರಣ ಒಂದೇ: ಸ್ವಾರ್ಥ, ಅಧಿಕಾರದ ಆಸೆ, ಸಂಪನ್ಮೂಲಗಳ ಮೇಲಿನ ಹಕ್ಕು. ಆದರೆ ಈ ಎಲ್ಲದಕ್ಕೂ ಮೌನ ಸಾಕ್ಷಿಯಾಗಿರುವಳು ಭೂತಾಯಿ. ಮಾನವನು ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಅದೇ ಪ್ರಯತ್ನದಲ್ಲಿ ಭೂತಾಯಿಯನ್ನೇ ಗಾಯಗೊಳಿಸುತ್ತಿರುವುದು ಅತ್ಯಂತ ದುಃಖದ ಸಂಗತಿ. “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಮಾತು ಭೂತಾಯಿಯ ಮನದಾಳದ ಕಿರುಚಾಟ. ಇದು ಕೇವಲ ಕಾವ್ಯಾತ್ಮಕ ವಾಕ್ಯವಲ್ಲ; ಇಂದಿನ ಜಗತ್ತಿನ ವಾಸ್ತವಿಕ ಚಿತ್ರಣ. ಯುದ್ಧಗಳ ಮೂಲ ಕಾರಣಗಳು ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳಿಗೆ ಹಲವಾರು ಕಾರಣಗಳಿವೆ. ಭೂಮಿಯ ಮೇಲಿನ ಹಕ್ಕು, ಖನಿಜ ಸಂಪನ್ಮೂಲಗಳ ಮೇಲಿನ ಹಿಡಿತ, ನೀರಿನ ಕೊರತೆ, ರಾಜಕೀಯ ಪ್ರಭಾವ—ಇವೆಲ್ಲವೂ ಯುದ್ಧಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ತೈಲ ಸಂಪತ್ತುಳ್ಳ ಪ್ರದೇಶಗಳಲ್ಲಿ ಯುದ್ಧಗಳು ಹೆಚ್ಚಾಗಿ ನಡೆಯುತ್ತವೆ. ಏಕೆಂದರೆ ಆ ಸಂಪತ್ತು ಆರ್ಥಿಕ ಶಕ್ತಿಯನ್ನು ನಿರ್ಧರಿಸುತ್ತದೆ. ಆದರೆ ಪ್ರಶ್ನೆ ಏನೆಂದರೆ: ಈ ಸಂಪತ್ತಿನಿಗಾಗಿ ಯುದ್ಧ ಮಾಡುತ್ತಿರುವವರು ಯಾರ ಮೇಲೆ ಯುದ್ಧ ಮಾಡುತ್ತಿದ್ದಾರೆ? ಉತ್ತರ ಸರಳ—ಅದೇ ಭೂಮಿಯ ಮೇಲೆ. ಅವರು ಪಡೆಯಲು ಬಯಸುತ್ತಿರುವುದು ಭೂಮಿಯ ಸಂಪತ್ತು; ಆದರೆ ಅದನ್ನೇ ಪಡೆಯಲು ಭೂಮಿಯನ್ನೇ ಹಾಳು ಮಾಡುತ್ತಿದ್ದಾರೆ. ಭೂತಾಯಿಯ ನೋವು ಯುದ್ಧವೆಂದರೆ ಕೇವಲ ಮನುಷ್ಯರ ನಾಶವಲ್ಲ. ಅದು ಪರಿಸರದ ನಾಶ. ಬಾಂಬ್ ಸ್ಫೋಟಗಳು, ರಾಸಾಯನಿಕ ದಾಳಿಗಳು, ಅಣ್ವಸ್ತ್ರಗಳ ಬಳಕೆ—ಇವುಗಳ ಪರಿಣಾಮವಾಗಿ ಮಣ್ಣು ವಿಷಕಾರಿ ಆಗುತ್ತದೆ, ನೀರು ಮಾಲಿನ್ಯಗೊಳ್ಳುತ್ತದೆ, ಗಾಳಿ ಕಲುಷಿತವಾಗುತ್ತದೆ. ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ನಡೆದ ಅಣುಬಾಂಬ್ ದಾಳಿಗಳ ಪರಿಣಾಮವಾಗಿ, ದಶಕಗಳವರೆಗೆ ಆ ಪ್ರದೇಶದಲ್ಲಿ ಜನರು ರೋಗಗಳಿಂದ ಬಳಲಿದರು. ಇದು ಕೇವಲ ಮಾನವೀಯ ನಷ್ಟವಲ್ಲ, ಪರಿಸರದ ಮೇಲಿನ ದೀರ್ಘಕಾಲದ ಪರಿಣಾಮವೂ ಆಗಿದೆ. ಯುದ್ಧ ನಡೆಯುವ ಪ್ರದೇಶಗಳಲ್ಲಿ ಅರಣ್ಯಗಳು ನಾಶವಾಗುತ್ತವೆ. ಮರಗಳು ಕಡಿದುಹಾಕಲ್ಪಡುತ್ತವೆ. ಪ್ರಾಣಿಗಳು ತಮ್ಮ ವಾಸಸ್ಥಾನ ಕಳೆದುಕೊಳ್ಳುತ್ತವೆ. ನದಿಗಳು ರಕ್ತದಿಂದ ಮತ್ತು ರಾಸಾಯನಿಕಗಳಿಂದ ಕಲುಷಿತವಾಗುತ್ತವೆ. ಇದು ಭೂತಾಯಿಯ ಹೃದಯಕ್ಕೆ ಬಿದ್ದ ಗಾಯಗಳಂತೆ. ಆಧುನಿಕ ಯುದ್ಧಗಳ ಭಯಾನಕತೆ ಇಂದಿನ ಯುದ್ಧಗಳು ತಂತ್ರಜ್ಞಾನದಿಂದ ತುಂಬಿವೆ. ಡ್ರೋನ್ ದಾಳಿಗಳು, ಕ್ಷಿಪಣಿಗಳು, ಸೈಬರ್ ಯುದ್ಧ—ಇವು ಎಲ್ಲವೂ ಆಧುನಿಕ ಯುದ್ಧದ ಭಾಗ. ಆದರೆ ಇದರ ಪರಿಣಾಮ ಇನ್ನೂ ಭೀಕರವಾಗಿದೆ. ಅಣ್ವಸ್ತ್ರಗಳು ಮಾನವಕುಲಕ್ಕೆ ಅತಿ ದೊಡ್ಡ ಅಪಾಯ. ಒಂದು ಅಣುಬಾಂಬ್ ಸ್ಫೋಟವೇ ಲಕ್ಷಾಂತರ ಜೀವಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಹುದು. ಅದರ ಪರಿಣಾಮವಾಗಿ ಭೂಮಿಯ ಮೇಲೆ ದೀರ್ಘಕಾಲದ ವಿಕಿರಣ ಉಂಟಾಗುತ್ತದೆ. ಇದರಿಂದ ಭೂತಾಯಿ ಪ್ರಶ್ನಿಸುತ್ತಾಳೆ: “ನೀವು ನನ್ನನ್ನು ಉಳಿಸಬೇಕೆಂದು ಹೇಳುತ್ತೀರಿ, ಆದರೆ ನನ್ನನ್ನೇ ನಾಶ ಮಾಡುತ್ತಿರುವಿರಿ. ಇದು ಯಾವ ನ್ಯಾಯ?” ಮಾನವನ ಸ್ವಾರ್ಥ ಮಾನವನು ತನ್ನ ಸೌಲಭ್ಯಕ್ಕಾಗಿ ಎಲ್ಲವನ್ನೂ ತ್ಯಜಿಸಲು ಸಿದ್ಧನಾಗಿದ್ದಾನೆ. ಆದರೆ ಈ ಸೌಲಭ್ಯಗಳು ಯಾವ ಬೆಲೆಗೆ ಬರುತ್ತಿವೆ? ಯುದ್ಧಗಳ ಮೂಲಕ ಸಿಕ್ಕ ಸಂಪತ್ತು ತಾತ್ಕಾಲಿಕ. ಆದರೆ ಅದರ ಪರಿಣಾಮ ಶಾಶ್ವತ. ಯುದ್ಧಗಳಿಂದ ದೇಶಗಳು ಆರ್ಥಿಕವಾಗಿ ಹಿನ್ನಡೆಯಾಗುತ್ತವೆ. ಜನರು ಮನೆ ಕಳೆದುಕೊಳ್ಳುತ್ತಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಆದರೆ ಇದಕ್ಕಿಂತಲೂ ದೊಡ್ಡ ನಷ್ಟವೆಂದರೆ, ಮಾನವೀಯತೆ ಕಳೆದುಹೋಗುವುದು. ಯುದ್ಧದಲ್ಲಿ ಗೆದ್ದವರು ಯಾರು? ಸೋತವರು ಯಾರು? ಕೊನೆಗೆ ನೋವು ಅನುಭವಿಸುವವರು ಎಲ್ಲರೂ. ಭೂತಾಯಿಯ ಕಿರುಚಾಟ ಭೂತಾಯಿ ಮೌನವಾಗಿದ್ದರೂ, ಅವಳ ನೋವು ಸ್ಪಷ್ಟವಾಗಿ ಕಾಣಿಸುತ್ತದೆ. ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್, ಪ್ರಕೃತಿ ವಿಕೋಪಗಳು—ಇವೆಲ್ಲವೂ ಭೂತಾಯಿಯ ಪ್ರತಿಕ್ರಿಯೆಗಳು. ಯುದ್ಧಗಳು ಈ ಸಮಸ್ಯೆಗಳನ್ನು ಇನ್ನಷ್ಟು ಗಂಭೀರವಾಗಿಸುತ್ತವೆ. ಕಾರ್ಬನ್ ಉತ್ಸರ್ಗ ಹೆಚ್ಚಾಗುತ್ತದೆ. ಪರಿಸರ ಸಮತೋಲನ ಹಾಳಾಗುತ್ತದೆ. ಭೂತಾಯಿ ಕೇಳುತ್ತಾಳೆ: “ನಾನು ನಿಮ್ಮ ಮನೆ. ನೀವು ನನ್ನನ್ನು ಏಕೆ ಹಾಳು ಮಾಡುತ್ತಿದ್ದೀರಿ?” ಶಾಂತಿಯ ಅಗತ್ಯತೆ ಈ ಎಲ್ಲ ಸಮಸ್ಯೆಗಳ ಪರಿಹಾರ ಒಂದೇ—ಶಾಂತಿ. ಯುದ್ಧವು ಯಾವ ಸಮಸ್ಯೆಯಿಗೂ ಶಾಶ್ವತ ಪರಿಹಾರ ನೀಡುವುದಿಲ್ಲ. ಸಂವಾದ, ಸಹಕಾರ, ಪರಸ್ಪರ ಗೌರವ—ಇವುಗಳ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಬಹುದು. ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳು ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣವು ಕೂಡ ಮಹತ್ವದ ಪಾತ್ರವಹಿಸುತ್ತದೆ. ಜನರಲ್ಲಿ ಶಾಂತಿ, ಸಹಾನುಭೂತಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಬೇಕು. ಭವಿಷ್ಯದ ಜವಾಬ್ದಾರಿ ಭವಿಷ್ಯ ನಮ್ಮ ಕೈಯಲ್ಲಿದೆ. ನಾವು ಯಾವ ರೀತಿಯ ಜಗತ್ತನ್ನು ಬಯಸುತ್ತೇವೆ? ಯುದ್ಧಗಳಿಂದ ತುಂಬಿದ ಜಗತ್ತಾ, ಅಥವಾ ಶಾಂತಿಯಿಂದ ಕೂಡಿದ ಜಗತ್ತಾ? ಪ್ರತಿ ವ್ಯಕ್ತಿಯೂ ತನ್ನ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಪರಿಸರವನ್ನು ಕಾಪಾಡಬೇಕು. ಯುದ್ಧದ ವಿರುದ್ಧ ಧ್ವನಿ ಎತ್ತಬೇಕು. ಶಾಂತಿಯ ಪರವಾಗಿ ನಿಲ್ಲಬೇಕು. ಸಮಾರೋಪ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಭೂತಾಯಿಯ ಮಾತು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ. ನಾವು ನಮ್ಮ ತಪ್ಪುಗಳನ್ನು ಅರಿತುಕೊಳ್ಳಬೇಕು. ಯುದ್ಧಗಳ ಮೂಲಕ ನಾವು ಯಾವುದನ್ನೂ ಪಡೆಯುವುದಿಲ್ಲ; ನಾವು ಕಳೆದುಕೊಳ್ಳುವುದೇ ಹೆಚ್ಚು. ಭೂತಾಯಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ. ನಾವು ಅವಳನ್ನು ರಕ್ಷಿಸಿದರೆ, ಅವಳು ನಮ್ಮನ್ನು ರಕ್ಷಿಸುತ್ತಾಳೆ. ಆದುದರಿಂದ, ಶಾಂತಿಯನ್ನು ಆರಿಸೋಣ. ಮಾನವೀಯತೆಯನ್ನು ಉಳಿಸೋಣ. ಭೂತಾಯಿಯ ಕಿರುಚಾಟವನ್ನು ಕೇಳೋಣ—ಮತ್ತು ಅದಕ್ಕೆ ಸ್ಪಂದಿಸೋಣ. ಇದು ಕೇವಲ ಲೇಖನವಲ್ಲ; ಇದು ಒಂದು ಕರೆ—ಬದುಕನ್ನು ಉಳಿಸುವ ಕರೆ. ಪೃಥ್ವಿರಾಜ್ ಟಿ ಬಿ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಯುದ್ದ ನಿರ್ನಾಮ” ಮಾನ ಉಳಿಸಿ ದ್ವೇಷಅಳಿಸಲು ಕಾಲವಿನ್ನು ಬೇಕೇನು?ಪ್ರಾಣ ಹುಡುಕಿ ಕೊಂದವರಿಗೆಅಣ್ವಸ್ತ್ರದ ಬಳಕೆಯ ಅಗತ್ಯವೇನು? ನೊಂದ ಆ ಜೀವಗಳು ಶಾಂತಿಬಯಸಿ ಪ್ರತಿಭಟಿಸಿದ್ದು ತಪ್ಪೇನು?ಕೊಂದ ಪಾಪವು, ನೊಂದ ಹೆತ್ತವರಮನಸ್ಸಿನಾಳದ ಘಾಸಿಯನು ಅಳಿಸಿತ್ತೇ? ಹೊಗೆ, ಶಬ್ದ, ಬೆಂಕಿ, ಸೈರನ್‌ದ್ರೋನ್ ಕ್ಷಿಪಣಿಗಳ ನರ್ತನ ನಿಲ್ಲಿಸಿ,ಹಗೆ ಹಳೆಯ ಬಿಟ್ಟು ನಗೆಯ ಸೂಸಿರಿ,ಕೈಯ ಕುಲುಕಿ, ಶಾಂತಿಯ ಮರು ಸ್ಥಾಪಿಸಿ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ‘ಗೊಗ್ಗಳೇಶ್ವರ’ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಕೇರಳದ ಅವಳೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಗುಗ್ಗಳ ಧೂಪ ಸಸ್ಯದ ಒಂದು ಪ್ರಕಾರದ ಅಂಟು. ಪೂಜೆ ಸಮಾರಂಭಗಳಲ್ಲಿ ಪರಿಮಳ ಸೂಸುವ ಕಾರ್ಯಕ್ಕೆ  ಬೆಂಕಿಯಲ್ಲಿ ಈ ಧೂಪದ ಪದಾರ್ಥವನ್ನು ಹಾಕಿ ವಾತಾವರಣವನ್ನು ಪ್ರಸನ್ನಗೊಳಿಸುವ ಕೆಲಸ ಕಾಯಕವಾಗಿತ್ತು. ಈಕೆಯ ವಚನಗಳ ಅಂಕಿತ ‘ನಾಸ್ತಿನಾಥಾ’. ಗೊಗ್ಗವ್ವೆ ಜನನ ೧೨ ನೆಯ ಶತಮಾನ ಅಂಕಿತನಾಮ ನಾಸ್ತಿನಾಥಾ ಒಟ್ಟು ವಚನಗಳು. ೬ ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ ಮುಂದಿಟ್ಟರು. ಆದರೆ ಇವರಿಗೆ ಮದುವೆಯ ವೈವಾಹಿಕ ಜೀವನ ಆಸಕ್ತಿ ಇಲ್ಲದಿರುವ ಕಾರಣ ಅವರೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಅಡಗಿ ಕುಳಿತಿದ್ದರಂತೆ.‌ ಮನೆಯವರು ಎಷ್ಟೇ ಕರೆದರು ಇವೆಲ್ಲವೂ ಬೇಡವೆಂದು ಆ ದೇವಾಲಯದಲ್ಲಿಯೇ ಶಿವನಿಗೆ ಪೂಜೆ ಕೈಂಕರ್ಯಗಳನ್ನು ಮಾಡತೊಡಗಿದರು. ಶಿವನಿಗೆ ದಿನಾಲು ಧೂಪ ಹಾಕುವ ಕಾಯಕವನ್ನು ಮಾಡುತಿದ್ದರಂತೆ. ಒಂದು ದಿನ ಸಾಕ್ಷಾತ್ ಪರಶಿವನೇ ಇವರನ್ನು ಪರೀಕ್ಷಿಸಲು ಬಂದಿದ್ದರಂತೆ. ಇವರ ಬಳಿ ಬಂದು ಕೈಲಾಸಕ್ಕೆ ಹೋಗುವ ದಾರಿಯನ್ನು ಕೇಳಿದ್ದರಂತೆ. ಇವರು ಗೊಗ್ಗವ್ವೆಯವರು ಶಿವನಿಗೆ ತಮ್ಮ ಧೂಪದ ಹೊಗೆಯ ಮೂಲಕ ಶಿವನಿಗೆ ಕೈಲಾಸದ ದಾರಿ ತೋರಿಸಿದರಂತೆ. ಇಂತಹ ಒಂದು ಪುರಾಣವು ಬಸವೋತ್ತರ ಕಾಲದಲ್ಲಿ ಸೃಷ್ಟಿಯಾಗಿದ್ದು ಕಂಡು ಬರುತ್ತದೆ.  ಧೂಪ ಹಾಕುವ ಕಾಯಕವನ್ನು  ಮುಂದುವರಿದಂತೆ ಇತ್ತ ಕಲ್ಯಾಣ ಕರ್ನಾಟಕದತ್ತ ಬಂದು ಅನುಭವ ಮಂಟಪದಲ್ಲಿ ಶರಣರೊಂದಿಗೆ  ನೆಲೆಸಿದಳು. ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ ಇವರು ಭಾಷೆ ಗಡಿಗೂ ಮೀರಿದ ಶಿವಶರಣೆಯಲ್ಲಿ ಒಬ್ಬರು. ಇಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ನೆಲೆಸಿ ಭಾಷೆ ಸಾಹಿತ್ಯವನ್ನು ಅರಿತು ವಚನಗಳನ್ನು ರಚಿಸಿದರೆಂದರೆ ಇವರ ಸಾಧನೆ ಕಾಯಕ ಅಮೋಘ ಕೊಡುಗೆ.       ಧೂಪದ ಗೊಗ್ಗವ್ವೆಯ ಆರು ವಚನಗಳು ಲಭ್ಯವಾಗಿವೆ. 1 ನೆಯ ವಚನ ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ? ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ? ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ ಪುಣ್ಯವುಂಟೇ ? ಹುಸಿ ನಾಸ್ತಿನಾಥಾ! 2  ವಚನ… ಉದ್ದವನೇರುವದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು, ಚಿದ್ರೋಪನರಿಯುವದಕ್ಕೆ,ಅರ್ಚನೆ,ಪೂಜೆ ನಿತ್ಯ ನಿಯಮವಿಲ್ಲದೆ ಕಾಣಬಾರದು.ಅದು ಸತ್ಯದಿಂದ ಮಾಡಿ,ಅಸತ್ಯವ ಮೆರೆದೆಡೆ ಅದೇ ಸತ್ಯವೆಂಬೆ ನಾಸ್ತಿನಾಥ॥॥ 3ನೇ ವಚನ ॥॥ ಗಂಡು ಮೋಹಿಸಿ,ಹೆಣ್ಣು ಹಿಡಿದೆಡೆ ಒಬ್ಬರ ಒಡವೆ ಎಂದರಿಯಬೇಕು.ಹೆಣ್ಣು ಮೊಹಿಸಿ,ಗಂಡು ಹಿಡಿದೆಡೆ ಉತ್ತರವಾವುದೆಂದರಿಯಬೇಕು.ಈ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲೆದು ನಾಸ್ತಿನಾಥನು ಪರಿಪೂರ್ಣನೆಂಬೆ॥॥ 4 ನೇ ವಚನ ಮಾರುತನಲ್ಲಿ ಬೆರೆದ ಗಂಧದಂತೆ,ಸುರತದಲ್ಲಿ ಬೆರೆದ ಸುಖದಂತೆ,ಮಚ್ಚಿನಲ್ಲಿ ಕೊಡುವ ಉಚಿತದಂತೆ ಭಕ್ತರಿಗದೆ ಹಾದಿಎಂಬೇ ನಾಸ್ತಿನಾಥ॥॥ 5 ನೇ ವಚನ ಭಕ್ತರು ಜಂಗಮರಲ್ಲಿ ಕಟ್ಟಿ ಹೋರಬೇಕೆ.. ಧೂಪದ ಹೊಗೆ ಎತ್ತೆ ಹೋದರು ಅದು ಸತ್ಯವೆಂಬೆ ನಾಸ್ತಿನಾಥ॥॥ 6 ನೇ ವಚನ ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಮಿಸೆ,ಕಾಸಿ ಬಂದೆಡೆ ಗಂಡೆಂಬರು ಈ ಎರಡು ಉಭಯವು ಹೆಣ್ಣೊ ಗಂಡೊ ಹುಸಿ ನಾಸ್ತಿನಾಥ॥॥  ಕಲ್ಯಾಣದ ಕ್ರಾಂತಿ ನಡೆದಾಗ ಎಲ್ಲ ಶಿವಶರಣರು ಚದುರಿ ಬೇರೆ ಬೇರೆ ಪ್ರದೇಶಗಳಿಗೆ ವಚನಗಳನ್ನು ಹೊತ್ತು ಹೋದರು. ಆದರೆ ಗೊಗ್ಗವ್ವೆ   ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪತಮಾಹಾಗಾಂವ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು. ಇದೆ ಕಾರಣಕ್ಕೆ  ಈ ಊರಿಗೆ  ಧೂಪತಮಾಹಾಗಂವ ಎಂಬ ಹೆಸರು  ಬರಲು ಇವರೇ ಕಾರಣ. ಐಕ್ಯ ಸ್ಥಳ  ಇವರು ಧೂಪ ಉರಿಸುತಿದ್ದ ಕಾರಣ  ಊರಿನ ಇದ್ದ ಹೆಸರನ್ನು ಬದಲಿಸಿ ಧೂಪತಮಾಹಾಗಂವ ಎಂದು ಮರುನಾಮಕರಣ ಮಾಡಿದ್ದರಂತೆ ಈ ಗ್ರಾಮಕ್ಕೆ ಉಲ್ಲೇಖವಿದೆ. ಇವರು ಐಕ್ಯವಾದ ಸ್ಥಳದಲ್ಲಿ ಒಂದು ದೇವಾಲಯವು ನಿರ್ಮಾಣವಾಗಿದೆ. ಇವಾಗ ಮತ್ತೆ ಆ ದೇವಾಲಯದಲ್ಲಿ ಭವ್ಯವಾದ ತೋಟವನ್ನು ನಿರ್ಮಿಸಿದ್ದಾರೆ. ಇಲ್ಲಿ ಗೊಗ್ಗವ್ವೆ ಕೆರೆ ಎಂತಲೂ ಕೂಡ ಇದೆ.  ತನ್ನ ವಚನಗಳಲ್ಲಿ ಸ್ತ್ರೀ ಸಂವೇದನೆ ಸಮಾನತೆಯ ಮೂಲಕ ಗಂಡು ಹೆಣ್ಣು ಸಮಾನರು ಎಂದು ಪ್ರತಿಪಾದಿಸಿದ ದಿಟ್ಟ ಮಹಿಳೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top