ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್                                            ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ ದುಂಬಿ ಯಾಗಿ ಅವಳ ಒಡಲೊಳಗೆ ಪರಾಗ ತುಂಬೀನಿ ನಾನು ಅವಳ ವ್ಯಾಮೋಹದ ಬಲೆಯಲಿ ಸಿಲುಕಿರುವೆ ನೋಡುಹೊಳೆವ ಅವಳ ಕಪೋಲದ ಮೇಲೆ ಪ್ರೇಮದುಂಗುರ ಒತ್ತೀನಿ ಬೆಳದಿಂಗಳ ಇರುಳು ಅರಳಿದ ಪಾರಿಜಾತದ ಘಮಲು ಹರಡಿದೆಅನುರಾಗದ ಕಡಲಿಂದ ಪ್ರಭೆಯ ಹೃದಯದ ಮುತ್ತನು ಕದ್ದೀನಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಅನುವಾದ

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್

ಅನುವಾದ ಸಂಗಾತಿ ಜೆನ್ ಜಿ (Gen Z) ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ  ಮುರಳೀಮೋಹನ್ ಎಲ್ಲಾ ತಲೆಮಾರುಗಳೂಗಾಣದ ಎತ್ತುಗಳಂತೆ ಕಾಲವನ್ನು ಹೊರಲೊಲ್ಲವುಅವು ಜಿರಳೆಗಳೇ ಆಗಿರಬಹುದು;ಆದರೆಒಂದೇ ಕಡೆ ಗುಂಪಾದರೆಭೂಕಂಪದ ಕಂಪನಗಳೇ!ಒಂದು ತಲೆಮಾರು ತರ್ಕಿಸಿಒಮ್ಮತಕ್ಕೆ ಬಂದಿತೆಂದರೆ,ಹಿಂದಿನ ಕಾಲದ  ಮೌಲ್ಯಗಳೆಲ್ಲಾತಲೆಕೆಳಗಾಗುವುದು ಖಂಡಿತ!ಜನತಂತ್ರವುಅಪಾಯಕ್ಕೆ ಸಿಲುಕಿದಾಗ,ಒಂದು ಇನ್‌ಸ್ಟಾಗ್ರಾಮ್ ಸಾಕುಸರಣಿ ಬಿರುಗಾಳಿಗಳನ್ನುಎಬ್ಬಿಸಲು!ಬಲಿಷ್ಠ ಕೈಗಳು ಇನ್ನು ಮುಂದೆಉಗುರು ಕಚ್ಚುತ್ತಾ ಕೂರುತ್ತವೆಂಬಭ್ರಮೆ ಬೇಡ,ಅವು ಅಡಿಪಾಯವನ್ನೇ ಅಗೆದು ನೋಡುತ್ತವೆ.ಕೈಯಲ್ಲಿನ ಮೊಬೈಲ್‌ಗಳುಎಲ್ಲರನ್ನೂ ಒಂದಾಗಿಸುತ್ತವೆ!ಒಂದೇ ಒಂದು ಕರೆ ಸಾಕು,ಮೇಡಿಹಣ್ಣಿನಂತಿರುವಓ ಜನತಂತ್ರವೇ,ನಿನ್ನ ಗುಪ್ತ ತಂತುಗಳನ್ನು ಕಿತ್ತು,ಬೆಂಕಿಯ ಜ್ವಾಲೆಗಳನ್ನು ಹಚ್ಚಲು!ದೇಶದ ಬೆನ್ನೆಲುಬುಗಳುನೆಟ್ಟಗೆ ನಿಲ್ಲಲು ಯತ್ನಿಸುತ್ತಿರುವಾಗ,ಬದುಕಲಾರದೆ ಬದುಕು ತಳ್ಳುತ್ತಿರುವಹಿರಿಯ ತಲೆಮಾರೇ,ಎದ್ದು ಚಪ್ಪಾಳೆ ತಟ್ಟಲೇಬೇಕು!! ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್ Read Post »

ಇತರೆ, ಜೀವನ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಇರದುದರ ಬಗೆಗೆ ಧೇನಿಸುವ ಬದಲು?! ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು  ಬಂಗಾರದ ಸೂಜಿಯೆಂದು ಅದನ್ನು  ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ  ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು. ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ,  ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು  ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ.  ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ. ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ  ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ.  ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ. ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ  ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ. ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ  ಪ್ರಯತ್ನಿಸಿ. ಸ್ವಯಂ ಗೌರವ   ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ  ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ. ಪ್ರಾರ್ಥಿಸಿ ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ  ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು  ಕೂಡ ಉಪಯೋಗಿಸದೇ ಹೋದರೆ ಅದರ  ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ  ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ. ಜಯಶ್ರೀ.ಜೆ. ಅಬ್ಬಿಗೇರಿ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ Read Post »

ಆರೋಗ್ಯ, ಇತರೆ

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ

ವೈದ್ಯ ಸಂಗಾತಿ ಡಾ.ಸೌಮ್ಯ ಕೆ.ವಿ. “ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ  ಪ್ರತಿ ವರ್ಷ ಜುಲೈ 1 ಬಂತೆಂದರೆ ಸಾಕು, ಮೊಬೈಲ್‌ನಲ್ಲಿ ‘ಹ್ಯಾಪಿ ಡಾಕ್ಟರ್ಸ್ ಡೇ’ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತದೆ. ಅನೇಕ ವರ್ಷಗಳ ಹಿಂದೆ ಇದೇ ದಿನ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..        ಪಿಯುಸಿ ಮುಗಿದಾಗ ನನ್ನೆದುರು ಎರಡು  ದಾರಿಗಳಿದ್ದವು—ಒಂದು ಇಂಜಿನಿಯರಿಂಗ್, ಮತ್ತೊಂದು ವೈದ್ಯಕೀಯ. ಏನೋ ಒಂದು ಸಾಧನೆ ಮಾಡಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ನಾನು ಆರಿಸಿಕೊಂಡಿದ್ದು ಬಿಳಿ ಕೋಟಿನ ವೈದ್ಯಕೀಯ ವೃತ್ತಿಯನ್ನು. ಆದರೆ ವಾಸ್ತವದ ದಿನಗಳು ಆರಂಭವಾದಾಗ ಹೋಲಿಕೆಯೆಂಬ ಭೂತ ಕಾಡತೊಡಗಿತು. ನನ್ನ ಜೊತೆಯಲ್ಲೇ ಇಂಜಿನಿಯರಿಂಗ್ ಆರಿಸಿಕೊಂಡ ಗೆಳೆಯರೆಲ್ಲಾ ನಾಲ್ಕೇ ವರ್ಷಕ್ಕೆ ಓದು ಮುಗಿಸಿ, ಕೈತುಂಬಾ ಸಂಬಳ ಗಳಿಸುತ್ತಾ, ಕಾರು-ಬಂಗಲೆ ಎಂದು ಸೆಟಲ್ ಆಗಿಬಿಟ್ಟಿದ್ದರು. ಇತ್ತ ನಾನೋ ಐದೂವರೆ ವರ್ಷದ ಎಂಬಿಬಿಎಸ್, ಆಮೇಲೆ ಪೋಸ್ಟ್ ಗ್ರಾಜುಯೇಷನ್, ಹಗಲು-ರಾತ್ರಿ ಎನ್ನದೆ ಡ್ಯೂಟಿ, ಎಕ್ಸಾಮ್ಸ್… ಹೀಗೆ ಜೀವನದ ಅಮೂಲ್ಯ ದಿನಗಳನ್ನು ಪುಸ್ತಕಗಳ ಮಧ್ಯೆಯೇ ಕಳೆದುಬಿಟ್ಟಿದ್ದೆ. ಗೆಳೆಯರು ಗಳಿಕೆಯನ್ನು ಎಣಿಸುತ್ತಿದ್ದರೆ, ನಾನು ಇನ್ನೂ ಕರಿಯರ್ ರೂಪಿಸಿಕೊಳ್ಳುವ ಹೋರಾಟದಲ್ಲಿದ್ದೆ. ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಮೂಡಿಬಿಡುತ್ತಿತ್ತು—”ಅಯ್ಯೋ… ನಾನೇಕೆ ವೈದ್ಯಳಾದೆ?!”          ಒಮ್ಮೆ ವೈದ್ಯರ ದಿನದ ಪ್ರಯುಕ್ತ ನನ್ನ ಇಂಜಿನಿಯರಿಂಗ್ ಗೆಳತಿ ಟ್ರೀಟ್ ಕೊಡಿಸೆಂದು ಒತ್ತಾಯ ಮಾಡಿದಳು. ಅವಳಂತೆ ಐಷಾರಾಮಿ ಹೋಟೆಲ್ ನಲ್ಲಿ ಟ್ರೀಟ್ ಕೊಡುವಷ್ಟು ನನ್ನ ಪರ್ಸ್ ಭಾರವಿರಲಿಲ್ಲ. ಹೀಗಾಗಿ ಚಾಟ್ಸ್ ತಿನ್ನಲು ಬೀದಿ ಬದಿಯ ಗಾಡಿಯೊಂದರ ಬಳಿ ಹೋಗಿದ್ದೆವು.  ತಿನ್ನುತ್ತಿರುವಾಗ, ಆ ಚಾಟ್ಸ್ ಅಂಗಡಿಯಾತ ನನ್ನನ್ನು ಗುರುತಿಸಿ ಅತ್ಯಂತ ಪ್ರೀತಿ, ಗೌರವದಿಂದ ಮಾತನಾಡಿಸಿದ. ಅಷ್ಟೇ ಅಲ್ಲ, ಕೊನೆಯಲ್ಲಿ ಹಣ ನೀಡಲು ಹೋದಾಗ ಕೈಮುಗಿದು, “ಬೇಡ ಮೇಡಂ, ದುಡ್ಡು ತಗೋಳಲ್ಲ” ಎಂದ. ನಾನು ಆಶ್ಚರ್ಯದಿಂದ ನೋಡಿದಾಗ, ಕೃತಜ್ಞತೆಯ ಕಣ್ಣುಗಳಿಂದ ಅವನು ನೆನಪಿಸಿದ—”ಅಂದು ಮಧ್ಯರಾತ್ರಿ ನನ್ನ ಮಗನಿಗೆ ತಲೆಗೆ ಬಲವಾದ ಗಾಯವಾಗಿ ರಕ್ತ ಸುರಿಯುತ್ತಿದ್ದಾಗ, ನೀವೇ  ಹೊಲಿಗೆ ಹಾಕಿ ಗುಣಪಡಿಸಿದ್ರಿ . ಆ ಉಪಕಾರಕ್ಕೆ ಬೆಲೆ ಕಟ್ಟೋಕಾಗುತ್ತಾ?”        ಅವನ ಕಣ್ಣಲ್ಲಿದ್ದ ಆ ದೈವಿಕ ಕೃತಜ್ಞತೆಯನ್ನು ನೋಡಿ ನನ್ನ ಪಕ್ಕದಲ್ಲಿದ್ದ ಇಂಜಿನಿಯರಿಂಗ್ ಗೆಳತಿ ಸಂಪೂರ್ಣ ಆಶ್ಚರ್ಯಚಕಿತಳಾಗಿ ಮೂಕವಿಸ್ಮಿತಳಾದಳು. ಹಣದಿಂದ ಕೊಳ್ಳಲಾಗದ ಕೋಟಿ ರೂಪಾಯಿಯ ಗೌರವ ಅದಾಗಿತ್ತು.       ಆ ಕ್ಷಣ ನನ್ನ ಕಣ್ಣುಗಳು ತೇವಗೊಂಡವು. ಇಂಜಿನಿಯರಿಂಗ್ ಗೆಳೆಯರು ಗಳಿಸಿದ್ದು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದರೆ, ಒಬ್ಬ ವೈದ್ಯಳಾಗಿ ನಾನು ಗಳಿಸಿದ್ದು ಜನರ ಅಭಿಮಾನ, ಪ್ರೀತಿ ಮತ್ತು ಕೋಟ್ಯಂತರ ರೂಪಾಯಿ ಕೊಟ್ಟರೂ ಸಿಗದ ಆಶೀರ್ವಾದ. ಆ ಕ್ಷಣವೇ ನನ್ನೊಳಗಿನ ವಿಷಾದ ಮಾಯವಾಗಿ, ಹೆಮ್ಮೆಯಿಂದ ಹೃದಯ ಹೇಳಿತು—”ನಾನು ವೈದ್ಯಳಾಗಿದ್ದು ವ್ಯರ್ಥವಾಗಲಿಲ್ಲ!” -ಡಾ ಸೌಮ್ಯ ಕೆ.ವಿ.

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ಈ ಪ್ರಪಂಚದಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯ.ಹಾಗೆಂದು ಕೆಟ್ಟದ್ದನ್ನು ಮಾಡುವುದು ಸರಿಯಲ್ಲ.ನಾವುಗಳು, ನಾವಾಗಿ ಜೀವಿಸಲು ಕೆಲವು ಸುಲಭ ಸುಲಲಿತ ಮಾರ್ಗಗಳಿವೆ.ಒಳ್ಳೆಯ ಮಾರ್ಗವನ್ನಾರಿಸಿಕೊಂಡು ನಮ್ಮ ದುಡಿತದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಇವತ್ತಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿರಲಿ,ಕಂಪನಿ ಕೆಲಸಗಾರರಿರಲಿ,ಅಥವಾ ಕಾರ್ಮಿಕ ಕೆಲಸಗಾರರಿರಲಿ,ರೈತರೇ ಇರಲಿ.ರಾಜಕಾರಣಿಯಿರಲಿ,ಅಥವಾ ಇನ್ನಾರಾದರೂ ಇರಲಿ,ಬಾಳಿನ ದೋಣಿ ಸಾಗಿಸಲು ಒಂದು ದುಡಿಮೆಯಂತೂ ಬೇಕು.ತುಸು ತಡವಾದರೂ ಸರಿಯಾದ ರೀತಿಯಲ್ಲಿ ಪರಿಶ್ರಮಪಟ್ಟು ದುಡಿಮೆಯಲ್ಲಿ ತೃಪ್ತಿ ಕಾಣಬೇಕಾಗುತ್ತದೆ.‌ ಮಾಡುವ ಕೆಲಸದಲ್ಲಿ ಸುಖ,ಆನಂದವನ್ನು ಅನುಭವಿಸಿ, ಸನ್ಮಾರ್ಗದೊಂದಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿ  ನಿರಂತರವಾಗಿರಬೇಕು.ಒಮ್ಮೆಲೆ ದುಡಿದು ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ.ದುಡಿತದಲ್ಲಿ  ನಾವೆಷ್ಟು  ಆತುರಾತುರ ಮಾಡಿದರೂ ಕೋಳಿ ಕೂಗುವುದಿಲ್ಲ.ಬೆಳಕರಿಯುವುದಿಲ್ಲ.ಮಾಗಬೇಕು,ಕಾಯಬೇಕು,ಸಹನೆಯಂತೂ ತುಂಬಾನೆ ಬೇಕು.ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರ ಅಧೀನದಲ್ಲಿ ದುಡಿಯುತ್ತೇವೆಂದರೆ ಯಾವಾಗಲೂ ಯಾರಾದರೂ,ಯಾವುದೇ ಕೆಲಸದಲ್ಲಿ  ಯಜಮಾನರು,ಕೆಲಸ ನೀಡಿದ ಸಂಸ್ಥೆಯವರು,ಹಿರಿಯ ಅಧಿಕಾರಿಗಳು ಬೈಯುತ್ತಾರೆ ಎಂದರೆ ಅವರಿಗೂ ಒತ್ತಡವಿರಬಹುದು?  ಅವರು ಬೈದಾಡುತ್ತಾರೆ ಎಂದರೆ ನಾವೂ ಸಹ ಎದುರು ವಾದಿಸ ಬಾರದು.ಆ ಕೆಲಸದ ಬಗ್ಗೆ ಚರ್ಚೆ ಮಾಡಬೇಕಷ್ಟೆ.ಅದನ್ನು ಬಿಟ್ಟು ಏರು ದನಿಯಲ್ಲಿ ಎದುರುತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಬಾರದು. ಅನಾಹುತ,ಅನರ್ಥಗಳಾಗುತ್ತವೆ.ನಮ್ಮ ಸ್ವಾರ್ಥವೆ ಗೆಲ್ಲಬೇಕು ಎನ್ನುವುದು ನಮ್ಮದೇ  ತಪ್ಪು.ಏಕೆಂದರೆ ನಮಗೆ ವಹಿಸಿದ ಕೆಲಸವೇ ಬಹು ಮುಖ್ಯ.ಪ್ರತಿಯೊಬ್ಬರಿಗೂ ಅವರದೆಯಾದ ವಿಚಾರ ಸರಣಿ,ಸಹಾನುಭೂತಿ,ಸಹಾಯ ಸಹಕಾರ ಇದ್ದೇ  ಇರುತ್ತದೆ.ಅದಕ್ಕಾಗಿ ನಮ್ಮ ನಮ್ಮ ಕೆಲಸ ಮಾಡಲು,ಮತ್ತೊಬ್ಬರಿಂದ ಹೇಳಿಸಿಕೊಳ್ಳಬಾರದು.ಅವರು ಹೇಳುವತನಕ ಕೆಲಸ ಮಾಡದೆ ಇರೋದು ನಮ್ಮದೇ ಖಂಡಿತ ತಪ್ಪಾಗುತ್ತದೆ.ನಮ್ಮ ಕೆಲಸ ಕಾರ್ಯಗಳಲ್ಲಿ ಸಹಜತೆ,ದಕ್ಷತೆ , ಪ್ರಾಮಾಣಿಕತೆ, ಪ್ರಬುದ್ಧತೆ,ಮತ್ತು ಸ್ಪಷ್ಟತೆ ಇರಬೇಕು.ಹಾಗಿದ್ದರೆ ಮಾತ್ರ ಬಹು ದಿನಗಳವರೆಗೆ ದುಡಿಮೆಲ್ಲಿರುತ್ತೇವೆ.*ಮಾತು ಬೆಳ್ಳಿ,ಮೌನ ಬಂಗಾರ* ಎಂಬಂತೆ,ಮಾತು ಕಡಿಮೆ ಮಾಡಿ,ಹೆಚ್ಚಿನ ಮೌನದಲ್ಲಿದ್ದರೆ ಮನಸ್ಸಿಗೆ ಒಳ್ಳೆಯದು.ಮನೆಗೂ ಒಳ್ಳೆಯದು,ಸಮಾಜಕ್ಕೂ ಒಳ್ಳೆಯದು.ಆದರೆ ನಾವು ಮಾಡುವ ಕೆಲಸಕ್ಕಿಂತ ಮಾತಿಗೇ ಮೊದಲ ಸ್ಥಾನ ಕೊಟ್ಟರೆ, ಕಚೇರಿ ಎಂಬುದು ಸೋಮಾರಿತನದ  ತಾಣವಾಗುವುದು.ಮಾತು ಅಧಿಕವಾದಷ್ಟು ನಮ್ಮೊಳಗೆ ಅಲ್ಪತನ ಹೊರಬರುತ್ತದೆ.ನಮ್ಮ ಕಚೇರಿಯಲ್ಲಿ ನಮ್ಮ ನಮ್ಮ ಸಿಬ್ಬಂಧಿಯವರು ಸಣ್ಣ ಸಣ್ಣ ವಿಷಯಕ್ಕೆ ಅಹಂಕಾರ ತೋರಿದರೆ ಅದಕ್ಕೆ ಹುಂಬತನ ಎನ್ನಬಹುದು.ಆದರೆ ಕಾಲು ಕೆದರಿ ವಾದಕ್ಕಿಳಿದರೆ…..? ಕೋಪದಿ ಬೈದಾಡಿ ಜೋರು ಮಾಡಿ ಕದನಕ್ಕಿಳಿದರೆ..?ಮೌನವಾಗಿರಬೇಕು. ಇಂತಹ ವಿಷಯಗಳು ಪ್ರತಿ ಸಂಸ್ಥೆಗಳಲ್ಲಿ,ಪ್ರತಿ ಕಚೇರಿಯಲ್ಲಿ ನಡೆದಿರುತ್ತವೆ.ಎಂದಿಗೂ ಬಗೆಹರಿಯುವುದಿಲ್ಲ.ಇಂತವರ ಜೊತೆ ಮಾತಿನ ಕಾಳಗ,ವಿವಾದ, ವಿಚಾರಣೆ,ಮಾಡುವುದರಲ್ಲಿ ಯಾವ ಅರ್ಥವಿಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದೆಷ್ಟೋ ಮಾತುಗಳಿಗೆ ಮೌನವೆ ಸಮಾಧಾನವಾಗುವುದು.ಸಂದಾನವೂ ಆಗಬಲ್ಲದು.​ಈ ಮೇಲಿನ ಮಾತು  ಕೇವಲ ಜಲಚರಗಳ ಬಗೆಗಿನ ಮಾತಲ್ಲ; ಇದು ಮನುಷ್ಯ ಸಮಾಜ, ರಾಜಕೀಯ, ಉದ್ಯೋಗ,ಕೃಷಿ  ಹಾಗೂ ದೈನಂದಿನ ಜೀವನದ ಅಸ್ತಿತ್ವದ ಹೋರಾಟವನ್ನು ಕುರಿತು ಹೇಳುವ ಅತ್ಯಂತ ಶ್ರೇಷ್ಠವಾದ ತತ್ತ್ವವಾಗಿದೆ.​ಯಾವುದಾದರೂ  ಒಂದು ಮಾತನ್ನು  ಅರ್ಥಮಾಡಿಕೊಳ್ಳಲು ಮೊದಲು ಅದರ ಬಾಹ್ಯ ರೂಪವನ್ನು ನೋಡಬೇಕು. ಈ ಉಕ್ತಿಯು ಪ್ರಕೃತಿಯ ಸಹಜ ನಿಯಮವೊಂದನ್ನು ನಮಗೆ ಪರಿಚಯಿಸುತ್ತದೆ.ನೀರಿನಲ್ಲಿನರುವ ಜಲಚರಗಳಾದ ಮೀನು, ಕಪ್ಪೆ ,ಏಡಿ,ಅಥವಾ ಯಾವುದೇ ಸಣ್ಣ ಜಲಚರಗಳಿಗೆ ನೀರೇ ಆಸರೆ, ನೀರೇ ಜೀವನ. ನೀರನ್ನು ಬಿಟ್ಟು ಅವು ಕ್ಷಣಕಾಲವೂ ಬದುಕಲಾರವು.​ಅತೀ ಬಲಶಾಲಿ ಜಲಚರಗಳಿದ್ದರೂ ಅವುಗಳೂ  ಬದುಕುತ್ತಿವೆ. ನೀರಿನಲ್ಲಿ ಮೊಸಳೆಯೂ ವಾಸಿಸುತ್ತದೆ. ಮೊಸಳೆಯನ್ನು ‘ಜಲರಾಜ’ ಎನ್ನಬಹುದು. ನೀರಿನೊಳಗೆ ಮೊಸಳೆಗೆ ಸಿಗುವಷ್ಟು ದೈಹಿಕ ಶಕ್ತಿ ಮತ್ತು ಹಿಡಿತ ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ‘ಆನೆ ಬಿದ್ದರೂ ಕುದುರೆ ಬಿದ್ದರೂ ಮೊಸಳೆಗೆ ನೀರೇ ಬಲ’ ಎಂಬ ಇನ್ನೊಂದು ಗಾದೆಯೂ ಇದೆ.​ ನೀರಿನಲ್ಲೇ ಬದುಕಬೇಕಾದ ಸಣ್ಣ ಜೀವಿಯೊಂದು ಅದೇ ನೀರಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮೊಸಳೆಯೊಂದಿಗೆ ಹಗೆತನ ಸಾಧಿಸಿದರೆ ಏನಾಗಬಹುದು? ಅದರ ಜೀವಕ್ಕೆ ಗಂಡಾಂತರ ಬರುವುದು ನಿಶ್ಚಿತ. ತನಗಿಂತ ನೂರು ಪಟ್ಟು ಬಲಶಾಲಿಯಾದ ಶತ್ರುವಿನ ಜಾಗದಲ್ಲೇ ಇದ್ದುಕೊಂಡು, ಅವನೊಂದಿಗೇ ದ್ವೇಷ ಸಾಧಿಸುವುದು ಆತ್ಮಹತ್ಯೆಗೆ ಸಮಾನ ಎಂಬುದು ಇದರ ನೇರ ಅರ್ಥ.​ಈ ಮಾತಿನ ಹಿಂದೆ ಒಂದು ಶ್ರೇಷ್ಠವಾದ ಆಧ್ಯಾತ್ಮಿಕ ಚಿಂತನೆಯೂ ಅಡಗಿದೆ. ಇಲ್ಲಿ ‘ನೀರು’ ಎನ್ನುವುದನ್ನು ಈ ಜಗತ್ತು ಅಥವಾ ಸಂಸಾರಕ್ಕೆ ಹೋಲಿಸಬಹುದು. ‘ಮೊಸಳೆ’ ಎನ್ನುವುದನ್ನು ಪ್ರಕೃತಿಯ ನಿಯಮಗಳು, ಕಾಲ ಅಥವಾ ಭಗವಂತನ ಶಕ್ತಿಗೆ ಹೋಲಿಸಬಹುದು.​”ನಾವು ಪ್ರಕೃತಿಯ ಮಡಿಲಲ್ಲಿ ಬದುಕುತ್ತಾ, ಪ್ರಕೃತಿಯ ನಿಯಮಗಳನ್ನೇ ಉಲ್ಲಂಘಿಸಿ ಬಾಳಲು ಸಾಧ್ಯವಿಲ್ಲ.”​ಮನುಷ್ಯನು ಈ ಭೂಮಿಯ ಮೇಲೆ ಹುಟ್ಟಿದ್ದಾನೆ (ನೀರಲ್ಲಿ ವಾಸ). ಈ ಸೃಷ್ಟಿಯನ್ನು ನಿಯಂತ್ರಿಸುವ ಕೆಲವು ಅದೃಶ್ಯ ಶಕ್ತಿಗಳು, ಕರ್ಮ ಸಿದ್ಧಾಂತಗಳು ಮತ್ತು ಪ್ರಕೃತಿಯ ನಿಯಮಗಳಿವೆ (ಮೊಸಳೆ). ಮನುಷ್ಯ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಪ್ರಕೃತಿಯ ವಿರುದ್ಧ ತಿರುಗಿಬಿದ್ದರೆ, ಅಂತಿಮವಾಗಿ ವಿನಾಶ ಹೊಂದುವುದು ಅವನೇ. ಆದ್ದರಿಂದ, ನಾವು ಬಾಳುವ ಪರಿಸರ ಮತ್ತು ನಮ್ಮನ್ನು ಸಲಹುವ ಶಕ್ತಿಗಳೊಂದಿಗೆ ದ್ವೇಷ ಸಾಧಿಸದೆ, ಸಾಮರಸ್ಯದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವಿದು.​ಮಾನವ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಗಾದೆ ಮಾತುಗಳು ದಿಕ್ಸೂಚಿಯಾಗಿವೆ. ಮನುಷ್ಯ ಸಂಘಜೀವಿ. ಅವನು ಸಮಾಜ ಅಥವಾ ಕುಟುಂಬವನ್ನು ಬಿಟ್ಟು ಒಂಟಿಯಾಗಿ ಬಾಳಲಾರನು.​ನಾವು ಒಂದು ಹಳ್ಳಿಯಲ್ಲೋ ಅಥವಾ ನಗರದ ಗಲ್ಲಿಯಲ್ಲೋ ವಾಸಿಸುವಾಗ, ಸುತ್ತಮುತ್ತಲಿನ ಜನರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳೊಂದಿಗೆ,ರಾಜಕಾರಣಿಯೊಂದಿಗೆ, ಅನಗತ್ಯ ದ್ವೇಷ ಕಟ್ಟಿಕೊಂಡರೆ, ಕಷ್ಟಕಾಲದಲ್ಲಿ ನಮಗೆ ಯಾರೂ ನೆರವಾಗುವುದಿಲ್ಲ.ಒಂದು ಜಂಟಿ ಕುಟುಂಬದಲ್ಲಿ ವಾಸಿಸುವಾಗ, ಮನೆಯ ಯಜಮಾನ ಅಥವಾ ಪ್ರಮುಖ ರಾಜಕಾರಣಿ,ಅಧಿಕಾರಿ,ಅಥವಾ ಪುಡಿ ಗುಂಡಾಗಿ ರಿ  ವ್ಯಕ್ತಿಯೊಂದಿಗೆ ಸದಾ ಕಲಹ ಹೂಡುತ್ತಿದ್ದರೆ ಆ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮನೆಯಲ್ಲೇ ವಾಸಿಸುತ್ತಾ, ಮನೆಯ ಮುಖ್ಯಸ್ಥನನ್ನೇ ದ್ವೇಷಿಸುವುದು ಸಂಸಾರದ ನೆಮ್ಮದಿಯನ್ನು ಕೆಡಿಸುತ್ತದೆ.​ಆಧುನಿಕ ಜಗತ್ತಿನಲ್ಲಿ,ಈ ಮೋಬೈಲ್ ಕಾಲದಲ್ಲಿ ಒಳ್ಳೆಯ ಮಾತನ್ನು ತಿಳಿವಳಿಕೆಗಾಗಿ ಹೇಳಿದರೆ ನಗಾಡುವ ಪಟ್ಟೆ ಹುಡುಗರಿದ್ದಾರೆ.ಮೇಲಿನ ಮಾತು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾದ ಪಾಠವನ್ನು ಕಲಿಸುತ್ತದೆ. ಕಛೇರಿಗಳಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳಗಳಲ್ಲಿ ಇದನ್ನು ನಾವು ಪ್ರತಿದಿನ ನೋಡಬಹುದು.​ಮೇಲಾಧಿಕಾರಿಗಳೊಂದಿಗೆ ಸಂಬಂಧವನ್ನು ನಮ್ರತೆಯಿಂದ ಇಟ್ಟುಕೊಂಡಿರಬೇಕು.ನಾವು ಕೆಲಸ ಮಾಡುವ ಸಂಸ್ಥೆಯೇ ನಮಗೆ ಜೀವನೋಪಾಯ ಅಲ್ಲಿರುವ ನಮ್ಮ ಬಾಸ್ ಅಥವಾ ಮ್ಯಾನೇಜರ್ (ಮೊಸಳೆ) ಅಧಿಕಾರ ಹೊಂದಿರುವ ವ್ಯಕ್ತಿ.​ಬುದ್ಧಿವಂತಿಕೆಯ ನಡವಳಿಕೆಯಿಂದ ತಲೆಬಾಗಿರಬೇಕಾಗುತ್ತದೆ. ಉದ್ಯೋಗದಲ್ಲಿರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದೇ ಸಂಸ್ಥೆಯಲ್ಲಿ ಸಂಬಳ ಪಡೆಯುತ್ತಾ, ಸಂಸ್ಥೆಯ ಮುಖ್ಯಸ್ಥರೊಂದಿಗೆ ನೇರ ಹಗೆತನ ಬೆಳೆಸಿಕೊಂಡರೆ ವೃತ್ತಿಜೀವನ ಹಾಳಾಗುತ್ತದೆ. ಇಲ್ಲಿ ಶರಣಾಗತಿ ಮುಖ್ಯವಲ್ಲ, ಬದಲಿಗೆ ‘ಸಮಯಪ್ರಜ್ಞೆ’ ಜಾಣತನ,ನಯವಿನಯತೆ, ಮತ್ತು ‘ರಾಜತಾಂತ್ರಿಕತೆ’ ಮುಖ್ಯವಾಗುತ್ತದೆ. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿವೇಕ ಇರಬೇಕೇ ಹೊರತು ಕೇವಲ ಆವೇಶವಲ್ಲ. ​ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಈ ಗಾದೆಯನ್ನು ಪಾಲಿಸದ ರಾಜರುಗಳು ಹೇಗೆ ನಾಶವಾದರು ಮತ್ತು ಹೇಗೆ ಪಾಲಿಸಿದರು, ಹೇಗೆ ಉಳಿದುಕೊಂಡರು ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಬಲಿಷ್ಠ ಸಾಮ್ರಾಜ್ಯಗಳ ಪಕ್ಕದಲ್ಲಿದ್ದ ಸಣ್ಣ ಪುಟ್ಟ ಸಂಸ್ಥಾನಗಳು, ಆ ಬಲಿಷ್ಠ ರಾಜರೊಂದಿಗೆ ಅನಗತ್ಯವಾಗಿ ಯುದ್ಧ ಸಾರಿದಾಗ ಧೂಳೀಪಟವಾದವು. ಆದರೆ, ಯಾರು ತಮ್ಮ ಮಿತಿಯನ್ನು ಅರಿತು, ಬಲಿಷ್ಠರೊಂದಿಗೆ ಸ್ನೇಹ ಹಸ್ತ ಚಾಚಿದರೋ ಅಥವಾ ತಂತ್ರಗಾರಿಕೆಯಿಂದ ವರ್ತಿಸಿದರೋ ಅವರು ತಮ್ಮ ಪ್ರಜೆಗಳನ್ನು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಂಡರು.​ಅಂತರರಾಷ್ಟ್ರೀಯ ರಾಜಕೀಯದಲ್ಲಿ ಇಂದು ಜಾಗತಿಕ ಮಟ್ಟದಲ್ಲೂ ಅಷ್ಟೇ, ಒಂದು ಸಣ್ಣ ದೇಶವು ತನ್ನ ಪಕ್ಕದಲ್ಲೇ ಇರುವ ಸೂಪರ್ ಪವರ್ ದೇಶದೊಂದಿಗೆ ವೈರತ್ವ ಬೆಳೆಸಿಕೊಂಡರೆ ಆ ದೇಶದ ಆರ್ಥಿಕತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.*ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ* ಎಂಬ ಗಂಭೀರ ಮಾತು ನಮಗೆ ಹೇಡಿತನವನ್ನು ಕಲಿಸುವುದಿಲ್ಲ, ಬದಲಿಗೆ ಬದುಕುವ ಕಲೆಯಾದ ‘ವಿವೇಕ’ವನ್ನು ಕಲಿಸುತ್ತದೆ.ಶತ್ರು ಬಲಶಾಲಿಯಾಗಿದ್ದಾಗ ಆವೇಶದಿಂದ ಹೋರಾಡುವುದಕ್ಕಿಂತ, ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಬಲಹೀನನಾದವನು ಬಲಿಷ್ಠನ ಎದುರು ಜಾಣ್ಮೆಯಿಂದ ವರ್ತಿಸಬೇಕು.​ನಾವು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಪ್ರಭಾವಿ ಶಕ್ತಿಗಳೊಂದಿಗೆ ಅನಗತ್ಯ ಘರ್ಷಣೆಗೆ ಇಳಿಯಬಾರದು. ಬೆಂಕಿಯ ಒಟ್ಟಿಗೆ ಇದ್ದು ಸುಟ್ಟುಕೊಳ್ಳುವುದಕ್ಕಿಂತ, ಅದರ ಶಾಖವನ್ನು ಬಳಸಿಕೊಂಡು ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವವರೆ ನಿಜವಾದ ಜಾಣರು ಎಂಬುದೇ ಈ ಶ್ರೇಷ್ಠ ಗಾದೆಯ ಪರಮ ತಾತ್ಪರ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

ನಿಮ್ಮೊಂದಿಗೆ

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು “ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಹಾಸನ ನಗರ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್ ಅವರು   ತಮ್ಮ ಹೊಸ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಆರ್ಥಿಕ ನೆರವಿಲ್ಲದೇ ಅವರು ಕಲಾ ಪ್ರದರ್ಶನ ಮಾಡುತ್ತಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬಂದಿದ್ದಾರೆ. ಈ ಮೊದಲು  ಹಾಸನದ ಶಾಂತಲಾ ಚಿತ್ರಕಲಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಈಗ  ಆಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಗುರುತಿಸಿ ಹಾಸನ ಜಿಲ್ಲಾಡಳಿತ  ಐದಾರು ವರ್ಷಗಳ ಹಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಸಂತ್ ಅವರು ಪ್ರತಿವರ್ಷ  ವಿಶ್ವ ಪರಿಸರ ದಿನ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಏರ್ಪಡಿಸುವುದು ಮಕ್ಕಳಿಗೆ ಸ್ಫರ್ಧೆ ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡುವುದು ರೂಢಿಸಿಕೊಂಡಿದ್ದಾರೆ. ಇದು  ಹತ್ತು ವರ್ಷಗಳಿಂದ ನಿರಂತರ ನಡೆದು ಬಂದಿದೆ.  ಈ ವರ್ಷ ಇವರ ೩೫  ಸೃಜನಾತ್ಮಕ  ಕಲಾಕೃತಿಗಳು ವೀಕ್ಷಕರ ಮನ ಸೆಳೆದವು.  ಇವರ ಪರಿಸರ ಕಾಳಜಿಯ ಪ್ರಕೃತಿ ಚಿತ್ರಗಳು ಆಕರ್ಷಣೀಯವಾಗಿವೆ. ಅರಸೀಕೆರೆ ಹುಳಿಯಾರ್ ಮಾರ್ಗದಲ್ಲಿ ಸಿಗುವ ಮರಗಳು ರಸ್ತೆಯ ಪ್ರಕೃತಿ ಚಿತ್ರವು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಅದ್ಭುತವಾಗಿ ಮರುಸೃಷ್ಟಿಗೊಂಡಿದೆ.  ಬರ್ಡ್ ಸೀರಿಸ್‌ನ ೧೫ ಪಕ್ಷಿ ಚಿತ್ರಗಳು ತೈಲವರ್ಣದಲ್ಲಿ ರೂಪು ತೆಳೆದು ಹಾರಾಡಿವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಪರಿಸರದಲ್ಲಿ ಪೋಟೋಗ್ರಫಿ ಮಾಡಿದ್ದ ರಮ್ಯ ದೃಶ್ಯಾವಳಿಗಳು, ೧೫ವರ್ಷಗಳ ಹಿಂದೆ ಪ್ರವಾಸ ಮಾಡಿದ್ದ ಎರ್ನಾಕುಲಂನ ಪ್ರಕೃತಿ ದೃಶ್ಯಗಳು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್ ನಲ್ಲಿ ಮರುಸೃಷ್ಟಿಯಾಗಿ  ಜೀವಂತಿಕೆ ತಾಳಿವೆ. ಬಹುಶ: ಈಗ ಆ ಸೀನ್ಸ್ ಕಣ್ಮರೆಯಾಗಿರಬಹುದು. ಆದರೆ ವಸಂತಕುಮಾರ್ ಅವರ ಕಣ್ಣುಗಳಿಂದ ಮರೆಯಾಗಿಲ್ಲ.   ತಮ್ಮ  ಪೋಟೋಗಪ್ರಿಯಲ್ಲಿ ಸೆರೆ ಹಿಡಿದು ಈಗ ಸೃಷ್ಟಿಸಿರುವುದು ವಿಶೇಷವಾಗಿದೆ. ನಾವು ಕತೆಗಾರರು  ಬಾಲ್ಯದ ಘಟನೆಗಳನ್ನು, ಪ್ರವಾಸಿ ಅನುಭವಗಳನ್ನು ನೆನಪಿಸಿಕೊಂಡು ಬರಹದಲ್ಲಿ ಬರೆದಂತೆ ವಸಂತಕುಮಾರ್ ಚಿತ್ರ ಜೀವಂತಿಕೆ ನೀಡಿದ್ದಾರೆ. ಬಾಗೇಶಪುರದ ಲೋಕೇಶನ್, ಹಾರುತ್ತಿರುವ ಗಿಡುಗ, ನೆಗೆಯುತ್ತಿರುವ ಕುದುರೆ ಎಲ್ಲವೂ ಕ್ರಿಯಾಶೀಲತೆ ಸಾಕ್ಷೀಕರಿಸಿವೆ. ದೇಶದ ಮಾಜಿ ಪ್ರಧಾನಿಗಳ ಬಾವಚಿತ್ರವು ಚಾರ್ಕೋಲ್ ಪೆನ್ಸಿಲ್ ವರ್ಕ್ ನಲ್ಲಿ ಅವರಿಗೆ ಸಲ್ಲಿಸದ ಗೌರವವಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರಗಳನ್ನು ವೀಕ್ಷಿಸಿ ಭೇಷ್ ಎಂದಿರುವುದು ವಸಂತಕುಮಾರ್ ಅವರಿಗೆ ಖುಷಿ ನೀಡಿದೆ.   ಕಲಾವಿದರಿಗೆ ಇಂತಹ ಮೆಚ್ಚುಗೆಯ  ಮಾತೇ  ಸ್ಫೂರ್ತಿ ತಾನೇ..!   -ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧,

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು Read Post »

ಕಾವ್ಯಯಾನ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು”

ಕಾವ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಹತ್ತು‌ ಕವಿತೆ ಚೂರು” ೧ಅವ್ವ ಕಾಯುತ್ತಾಳೆಕಣ್ಣಾಗಿ ಜಗವಬುದ್ಧನಂತೆ ೨ಅಪ್ಪನ‌ ನೇಗಿಲಕುಳಕ್ಕೆ ಬೇಸರವೆಂಬುದಿಲ್ಲಬರಿ ಹಸಿರು ಬಿತ್ತುತ್ತದೆ ೩ಲೋಕ ನಿದ್ದೆಗಣ್ಣಲ್ಲಿದೆಎಚ್ಚರಿಸ ಬೇಕಾದ ದೈವಮರೆತು‌ ಮಲಗಿದೆ ೪ಯುದ್ಧ ನಿಲ್ಲದುಎದೆಯಲ್ಲಿ ಶಾಂತಿ ತೋಟಬೆಳೆಯುವವರೆಗೆ ೫ಕೈಯ ಕೋವಿಗೂಕ್ಷಮಿಸುವ ಶಕ್ತಿಕೊಟ್ಟಾಗ ಬುದ್ಧ ನಗುತ್ತಾನೆ ೬ನಮ್ಮ‌ಕೇರಿಯತುಂಬ ಹೂವು ಚೆಲ್ಲಿವೆರಂಜಾನ್,ಯುಗಾದಿ ಕೂಡಿ ನಡೆದಿವೆ೭ಅವ್ವ  ತಟ್ಟುವರೊಟ್ಟಿಗೆ ಜಗದ ಹಸಿವುನೀಗಿಸೊ ತಾಕತ್ತಿದೆ ೮ಬರೆದು ಸೋಲುತ್ತೇನೆಆಕೆ ಮಹಾಜಾಣೆಕಣ್ಣೊಳಗೇ ಓದಿ ನಗುತ್ತಾಳೆ ೯ನಾನು ಅಕ್ಷರ ಜೀವಅವಳು‌ ಪ್ರೇಮದ ಅರ್ಥಬಲ್ಲವಳು ಸಾಂಗತ್ಯ ಸಸಾರ ೧೦ಪ್ರೀತಿಯ ಬಾವಿಬತ್ತಿದ ದಿನಸಂಸಾರ ಸತ್ತು ಹೋಗಿರುತ್ತದೆ ಡಾ.ವೈ.ಎಂ.ಯಾಕೊಳ್ಳಿ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು” Read Post »

ಇತರೆ

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್ 

ಸಾಮಾಜಿಕ ಸಂಗಾತಿ “ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  ಕಳೆದ ವಾರ ಜೂನ್ 18ರಂದು ಇಡೀ ದೇಶವನ್ನು ಬೆಕ್ಕಸ ಮಕ್ಕಳಬೆರಗಾಗಿಸಿದ, ನೋವಿನಲ್ಲಿ ಅದ್ದಿದ ಘಟನೆಯೊಂದು ಮಹಾರಾಷ್ಟ್ರ ರಾಜ್ಯದ ಪುಣೆಯ ಹೊರವಲಯದಲ್ಲಿ ನಡೆಯಿತು. ಇನ್ನೇನು ಕೆಲವೇ ತಿಂಗಳಲ್ಲಿ ತಾನು ಮದುವೆಯಾಗುವ ನಿಶ್ಚಿತ ವರ ಕೇತನ್ ಅಗರವಾಲ್ ನನ್ನು ಆತನ ನಿಶ್ಚಿತ ವಧು ಸಿಯಾ ಗೋಯಲ್ ನಾನೂರು ಅಡಿ ಎತ್ತರದ ಕೋಟೆಯ ಮೇಲಿನಿಂದ ತಳ್ಳಿ ಸಾಯಿಸಿದ ಘಟನೆಯ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ  ನೋಡಿದ್ದೇವೆ.ನಿಖರ ಮಾಹಿತಿಗಳ ಪ್ರಕಾರ ಕೇತನ್ ಅಗರವಾಲ್ ಎಂಬ600 ಕೋಟಿ ಬೆಲೆ ಬಾಳುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ ಶ್ರೀಮಂತ ಯುವಕನ ಕೊಲೆಯನ್ನು ಆತನ ಬಾವಿಪತ್ನಿಯೇ ಮಾಡಿದ್ದಾಳೆ… ಹಾಗೆ ಆತನನ್ನು ಕೊಲ್ಲಲು ಆಕೆ ನೀಡಿದ ಕಾರಣ ಆತ ಬಕ್ಕ ತಲೆಯವನಾಗಿದ್ದ ಎಂದು. ಜೊತೆಗೆ ಆಕೆಯ ಪ್ರೇಮಿಯ ಕುಮ್ಮಕ್ಕು ಕೂಡ ಈ ಕೃತ್ಯದ ಹಿಂದೆ ಇತ್ತು…. ಹಾಗೂ ಇದನ್ನು ಅವರಿಬ್ಬರೂ ಸೇರಿ ಸಂಚು ಮಾಡಿದ್ದರು. ಆದರೆ ಮನೋವಿಜ್ಞಾನ ಹೇಳುವುದು ಹೀಗೆ… ಯಾವುದೇ ಒಬ್ಬ ವ್ಯಕ್ತಿಯು ಕೇವಲ ಒಂದು ದಿನದಲ್ಲಿ ಮೋಸ ಮಾಡುವ, ಸತ್ಯವನ್ನು ಮುಚ್ಚಿಡುವ, ಕುತಂತ್ರ ಮಾಡುವುದನ್ನು ಕಲಿಯುವುದಿಲ್ಲ.ಈ ರೀತಿಯ ಒಂದು ಕಲಿಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ. ಇದೊಂದು ಮನೋ ದೈಹಿಕ ಸಾಮರ್ಥ್ಯವಾಗಿದ್ದು ಇದನ್ನು ಕಲಿಯಲು ಸಾಕಷ್ಟು ಗ್ರಹಿಕೆಯ, ಸಮಯದ, ಅನುಭವದ ಅವಶ್ಯಕತೆ ಇರುತ್ತದೆ.ತನ್ನ ಹುಟ್ಟು ಹಬ್ಬವನ್ನು ಆಚರಿಸಲು ಪುಣೆಯ  ಹತ್ತಿರದ ಲೋಹಗಢ ಕೋಟೆಗೆ ತನ್ನ ನಿಶ್ಚಿತ ವರನನ್ನು ಕರೆದೊಯ್ದ ಆಕೆ ಫೋಟೋಶೂಟ್ ಮಾಡುವ ನೆಪದಲ್ಲಿ  ಆತನನ್ನು ನ 400 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ್ದಾಳೆ.ನಂತರ ತಾನೇ ಖುದ್ದಾಗಿ ಪೊಲೀಸರಿಗೆ ಫೋನ್ ಮಾಡಿದ ಆಕೆ  ಮಾಹಿತಿಯನ್ನು ನೀಡಿದ್ದಾಳೆ. ಘಟನೆಯ ನಂತರ ಮುಂದುವರೆದ ಬೆಳವಣಿಗೆಯಲ್ಲಿ ಯುವಕನ ಅಂತ್ಯಕ್ರಿಯೆಯ ಎರಡು ದಿನಗಳ ನಂತರ ಕೇತನ್ ಅಗರವಾಲನ ಮನೆಗೆ ಆಕೆ ಭೇಟಿ ನೀಡಿದ್ದಾಳೆ. ಈ ಕುರಿತು ಪ್ರಶ್ನಿಸಿದಾಗ ಆಕೆಯ ವಿಭಿನ್ನ ಉತ್ತರಗಳನ್ನು ಆಲಿಸಿದ ಯುವಕನ ಸಹೋದರಿಗೆ ಅನುಮಾನ ಉದ್ಭವಿಸಿದೆ.ಅಂತೆಯೇ ತನ್ನ ಅನುಮಾನವನ್ನು ಆಕೆ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದು ನಂತರ ಕುಟುಂಬದ ಸದಸ್ಯರೆಲ್ಲರೂ ಈ ಕುರಿತು ಮಾತನಾಡಿಕೊಂಡಿದ್ದಾರೆ.ಕೇಸನ್ನು ಪುನರ್ ಪರಿಶೀಲಿಸಲು ಯುವಕನ ತಾಯಿ ಪೊಲೀಸರಲ್ಲಿ  ದೂರನ್ನು ನೀಡಿದರು. ಈಗಾಗಲೇ ಈ ಕೇಸಿನ ಕುರಿತು  ಕೊಂಚ ಗುಮಾನಿಯನ್ನು ಹೊಂದಿದ್ದ ಪೊಲೀಸರಿಗೆ ಈ ದೂರಿನಿಂದ ಮತ್ತಷ್ಟು ಪುಷ್ಟಿ ದೊರೆಯಿತು. ಸಿ ಸಿ ಟಿವಿಗಳ ಮೂಲಕ ಘಟನೆಯನ್ನು ಪುನರ್ ಪರಿಶೀಲಿಸಿದ ಪೊಲೀಸರು ಬಿರು ಬೇಸಿಗೆಯ ಸಮಯದಲ್ಲಿಯೂ ಹೂಡಿ ಧರಿಸಿ ಓಡಾಡುತ್ತಿದ್ದ ಓರ್ವ ಯುವಕನನ್ನು ಗುರುತಿಸಿದ್ದಾರೆ. ಸಿಯಾಳನ್ನು ಈ ಕುರಿತು ಪ್ರಶ್ನಿಸಿದಾಗ ಆಕೆ ತಡಬಡಾಯಿಸಿದ್ದನ್ನು ಕಂಡು ಅನುಮಾನದಿಂದ ವಿಚಾರಣೆ ನಡೆಸಿದರು.  ಸಿಯಾ ಹಾಗೂ ಆಕೆಯ ಪ್ರಿಯಕರನ ನಡುವಿನ ಸರಿ ಸುಮಾರು 2000 ಫೋನ್ ಕರೆಗಳನ್ನು, ವಾಟ್ಸಾಪ್ ಸಂದೇಶಗಳನ್ನು  ಪರಿಶೀಲಿಸಿದ ನಂತರ ಆರೋಪಿಯಾಗಿ ಸಿಯಾ ಮತ್ತು ಆಕೆಯ ಪ್ರಿಯಕರನನ್ನು  ಬಂಧಿಸಿದರು.ಆರಂಭದಲ್ಲಿ ತನ್ನ ಮೇಲೆ ಬಂದ ಎಲ್ಲ ಅಪವಾದಗಳನ್ನು ತಿರಸ್ಕರಿಸಿದ ಆಕೆ ಅಂತಿಮವಾಗಿ ತನ್ನ ಪ್ರಿಯಕರನ ಒತ್ತಾಯ ಹಾಗೂ ಹೇಳಿಕೆಯ ಮೇರೆಗೆ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡರು.ಮರಣ ಹೊಂದಿದ ತನ್ನ ಮಗನ ಮುಖದ ಭಾಗವು180 ಡಿಗ್ರಿಯಷ್ಟು ತಿರುಚಿಕೊಂಡಿದ್ದು  ಬೆನ್ನಿನ ಭಾಗದಲ್ಲಿ ಮುಖ ಜಜ್ಜಿದಂತೆ ತೋರುತ್ತಿತ್ತು. ಬೇಡವಾದರೆ ಬಿಡಬೇಕಿತ್ತು… ಈಗ ನನ್ನ ಮಗನನ್ನು ಯಾರು ತಂದು ಕೊಡುತ್ತಾರೆ ಎಂದು ಅಳುವ ತಾಯಿಯ ಆಕ್ರಂದನ, ನನ್ನನ್ನು ಕಾಳಜಿ ಮಾಡಬೇಕಾದ ನನ್ನ ಮಗ ಇನ್ನಿಲ್ಲವಾಗಿ ಹೋದ.. ಅದೂ ಕುತಂತ್ರದಿಂದ ಎಂಬ ನೋವನ್ನು ಬದುಕಿನ ಕೊನೆಯವರೆಗೂ ಭರಿಸಬೇಕಾದ ತಂದೆಯ ಅಳಲು, ಸೋದರನನ್ನು ಕಳೆದುಕೊಂಡು ತಬ್ಬಲಿತನದ ಭಾವವನ್ನು ಹೊಂದಿರುವ ಸಹೋದರಿಯ ದುಃಖಭರಿತ ಆಕ್ರೋಶ ಒಂದೆಡೆ ಕಂಡರೆ, ಮತ್ತೊಂದೆಡೆ ತಮ್ಮ ಮಗಳ ಕೃತ್ಯದಿಂದ ಮನನೊಂದಿರುವ ತಂದೆ ತಾಯಿಯರು ಆಕೆಯನ್ನು ಕೂಡ ಅದೇ 400 ಅಡಿ ಎತ್ತರದ ಪರ್ವತದಿಂದ ನೂಕಿ ಸಾಯಿಸಿ ಬಿಡಬೇಕು ಎಂದು ತಮ್ಮ ನೋವನ್ನು ಆಕೆಯ ಪಾಲಕರು ಹೊರ ಹಾಕಿದ್ದಾರೆ. ಈ ಕುರಿತು ಆಳವಾಗಿ ಪ್ರಶ್ನಿಸಿದರೆ ಆಕೆ ಎಂದೂ ತನಗೆ ಈ ಸಂಬಂಧ ಇಷ್ಟವಿಲ್ಲ ಎಂದು ತೋರ್ಪಡಿಸಿರಲಿಲ್ಲ ಎಂದು ಹೇಳುತ್ತಾರೆ. ವಿವಾಹದ ಕುರಿತು ಅತ್ಯಂತ ಸಂತಸವನ್ನೆ ತೋರಿದ್ದಳು…. ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇರುವ ಸಂಗತಿ ಕೂಡ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದಿನ ಕಾನೂನಾತ್ಮಕ ಪರಿಣಾಮಗಳು ಏನೇ ಇರಲಿ ಆದರೆ ಮಾನವಿಕ ಮನೋವಿಜ್ಞಾನವನ್ನು ಸ್ವಲ್ಪವಾದರೂ ಓದಿಕೊಂಡಿರುವವರಿಗೆ ಬರುವ ಮೊದಲ ಪ್ರಶ್ನೆ…. ಎರಡು ವಿಭಿನ್ನ ಬದುಕುಗಳನ್ನು ಓರ್ವ ಹರೆಯದ ವ್ಯಕ್ತಿ ಅದು ಹೇಗೆ ಬದುಕುತ್ತಿದ್ದ ಎಂಬುದು ?ನಿಶ್ಚಿತಾರ್ಥದಲ್ಲಿ ನಗು ನಗುತ್ತಾ ಪಾಲ್ಗೊಂಡ ಯುವತಿ, ತನ್ನ ಮುಂದಿನ ಬದುಕನ್ನು ಜೊತೆಯಾಗಿ ಕಳೆಯುವ ಭಾವಿ ಪತಿಯ ಮನೆಯವರೊಂದಿಗೆ ಹಬ್ಬ ಉತ್ಸವಗಳಲ್ಲಿ ಪಾಲ್ಗೊಂಡಿರುವ, ಅವರ ಪ್ರೀತಿ, ನಂಬಿಕೆ ವಿಶ್ವಾಸ, ಆಶೀರ್ವಾದಗಳನ್ನು ಪಡೆದುಕೊಂಡಿರುವ, ಮದುವೆಯ ಪೂರ್ವಭಾವಿ ತಯಾರಿಯಲ್ಲಿ ತೊಡಗಿಕೊಂಡಿರುವ, ನಿಶ್ಚಿತ ವರನೊಂದಿಗೆ  ವಿವಾಹ ಪೂರ್ವ ಫೋಟೋ ಶೂಟ್ನಲ್ಲಿ ಭಾಗವಹಿಸಿರುವ ಬದುಕಿನ ಒಂದು ಮುಖ  ಇದ್ದರೆ, ಇದಕ್ಕೆ ತದ್ವಿರುದ್ಧವಾಗಿ ಬೇರೊಬ್ಬ ಯುವಕನೊಂದಿಗೆ ಪ್ರೀತಿಯನ್ನು ಹೊಂದಿದ್ದು,  ಆ ಪ್ರೀತಿಯನ್ನು ಯಾರಿಗೂ ಜಾಹೀರು ಮಾಡದೆ ಹೋದರೂ ಕೂಡ ಅದೇ ವ್ಯಕ್ತಿಯೊಂದಿಗೆ ಸೇರಿ ತಾನು ಮದುವೆಯಾಗಲಿರುವ ಯುವಕನನ್ನು ಕೊಲೆಗೈಯುವ ಸಂಚನ್ನು ಹೂಡಿ ಅದರಲ್ಲಿ ಯಶಸ್ವಿಯಾಗಿ ಎಲ್ಲರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ ಮತ್ತೊಂದು ಹೇಯ ಮುಖ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ.ಪ್ರಶ್ನೆ ಇರುವುದು ತಪ್ಪು ಯಾರದು?  ಯಾಕೆ ಹೀಗಾಯ್ತು ? ಎಂದು ಕೇಳಿಕೊಳ್ಳುವುದರಲ್ಲಿಲ್ಲ… ಬದಲಾಗಿ ಇಂತಹ ತಪ್ಪುಗಳು ಆಗಲು ಕಾರಣವೇನು? ಎಂಬುದನ್ನು ಅರಿತು ಮುಂದೆ ಈ ರೀತಿಯ ತಪ್ಪುಗಳು ಆಗದೇ ಇರಲು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಅರಿಯೋಣ.ಯಾವುದೇ ಮಕ್ಕಳಾದರೂ ಹುಟ್ಟಿನಿಂದಲೇ ಆಗಲಿ, ಇಲ್ಲವೇ ಚಿಕ್ಕಂದಿನಿಂದಲೇ ಆಗಲಿ ಇತರರನ್ನು ನೋಯಿಸುವ, ಮೋಸ ಮಾಡುವ,, ಕುತಂತ್ರಗಳನ್ನು ಬಳಸುವ, ತಪ್ಪಿಸಿಕೊಳ್ಳುವ ತಂತ್ರಗಳನ್ನು ಕಲಿತಿರುವುದಿಲ್ಲ.ಬಹಳಷ್ಟು ಬಾರಿ ಮನೆಯಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸುವುದನ್ನೇ ಕಲಿಯದ ಮಕ್ಕಳು ತಾವು ನೋಡಿರುವುದನ್ನು, ಗ್ರಹಿಸಿರುವುದನ್ನು …ಮತ್ತಿತರ ಸಾಮಾಜಿಕ ಸಿದ್ಧ ಮಾದರಿಗಳನ್ನು ನೋಡಿ ಕಲಿಯುತ್ತಾರೆ. * ನಮ್ಮ ಮಕ್ಕಳು ನಮ್ಮನ್ನು ಪ್ರತಿದಿನ ಪ್ರತಿ ಕ್ಷಣ ಗಮನಿಸುತ್ತಿರುತ್ತಾರೆ.*ನಾವು ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸುತ್ತೇವೆ, *ಕಠಿಣ ಪರಿಸ್ಥಿತಿಗಳಲ್ಲಿ ಯಾವ ರೀತಿ ವರ್ತಿಸುತ್ತೇವೆ ಎಂಬುದು ಅವರ ಗಮನದಲ್ಲಿ ಸದಾ ಇರುತ್ತದೆ. *ಅನಿವಾರ್ಯ ಪರಿಸ್ಥಿತಿಯಲ್ಲಿಯು ನಾವು ಸತ್ಯವನ್ನೇ ಮಾತನಾಡುತ್ತೇವೆಯೇ ಎಂಬುದನ್ನು ಅವರು ನೋಡುತ್ತಿರುತ್ತಾರೆ.* ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆಯೇ? ಇಲ್ಲವೇ? ಎಂಬುದನ್ನು ಅವರು ಗಮನಿಸುತ್ತಿರುತ್ತಾರೆ. * ನಾವು ಮಾಡುವ ತಪ್ಪುಗಳು, ಅದಕ್ಕಾಗಿ ನಾವು ಕೊಡುವ ಸುಳ್ಳು ನೆಪಗಳು ಇಲ್ಲವೇ ಸಮರ್ಥನೆಗಳು, ವಿಷಯವನ್ನು ಮುಚ್ಚಿಡುವುದು, ತಮ್ಮ ಮೇಲೆ ಬರಬಹುದಾದ ತಪ್ಪನ್ನು ಬೇರೆಯವರ ಮೇಲೆ ನಿರ್ಧಾಕ್ಷಿಣ್ಯವಾಗಿ ಹಾಕುವುದು ಹಾಗೂ ಮುಖ್ಯವಾಗಿ ಸಮಯವು ಎಲ್ಲವನ್ನು ಮುಚ್ಚಿ ಹಾಕುತ್ತದೆ ಎಂದು ನಂಬುವುದು ಮಕ್ಕಳ ವಿಕಲ ಮಾನಸಿಕತೆಯನ್ನು ತೋರುತ್ತದೆ. ಮಕ್ಕಳು ಕೇವಲ ತಮ್ಮ ಪಾಲಕರ ವಂಶವಾಹಿಗಳನ್ನು ಹಾಗೂ ಸ್ವಭಾವಗಳನ್ನು ಮಾತ್ರ ತಮ್ಮೊಂದಿಗೆ ಮುಂದುವರೆಸಿಕೊಂಡು ಹೋಗುವುದಿಲ್ಲ… ಬದಲಾಗಿ ಅವರು ತಮ್ಮ ಪಾಲಕರು ಬದುಕುವ ರೀತಿ ನೀತಿಗಳನ್ನು ತಮ್ಮದಾಗಿಸಿಕೊಂಡು ನಡೆಯುತ್ತಾರೆ. ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆಗಳಲ್ಲಿ ಯಾವುದನ್ನು ಹೆಚ್ಚಾಗಿ ತಮ್ಮ ಪಾಲಕರು  ಹೊಂದಿರುತ್ತಾರೆ ಎಂಬುದನ್ನು ಅವರು ತಮ್ಮ ಪಾಲಕರ ಅರಿವಿಗೆ ಬಾರದಂತೆ  ಸದಾ ಗಮನಿಸುತ್ತಿರುತ್ತಾರೆ.ಇಲ್ಲಿ ಆ ಯುವತಿ ತನಗೆ ಇಷ್ಟವಿಲ್ಲದ ಈ ಸಂಬಂಧವನ್ನು ನಿರಾಕರಿಸಬಹುದಿತ್ತು… ಹಾಗೆ ಹೇಳುವ ಮೂಲಕ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೇ ಯುವಕನ ಪ್ರಾಣವನ್ನು ಕೂಡ ಉಳಿಸಬಹುದಾಗಿತ್ತು. ಒಂದು ಇಡೀ ಕುಟುಂಬವನ್ನು ನೋವಿಗೆ ತಳ್ಳುವುದರ ಜೊತೆಗೆ  ತನ್ನದೇ ಕುಟುಂಬದ ಘನತೆ ಗೌರವಗಳನ್ನು ಬೀದಿ ಪಾಲು ಮಾಡುವುದನ್ನು ತಪ್ಪಿಸಬಹುದಿತ್ತು. ಈ ಸಂಬಂಧ ತನ್ನನ್ನು ಸಂತೋಷಗೊಳಿಸಿದೆ ಎಂದು ಎಲ್ಲರ ಮುಂದೆ ಹುಸಿ ನಗುವುದರ ಬದಲು ಇರುವ ವಿಷಯವನ್ನು ತನ್ನ ಕುಟುಂಬಕ್ಕೆ, ತನ್ನ ಭಾವಿ ಪತಿಗೆ ಹೇಳಿ  ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಪಾಲಕರಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ಬಹಳಷ್ಟು ಜಾಗರೂಕತೆಯನ್ನು ವಹಿಸಬೇಕು. ನಮ್ಮ ಮಕ್ಕಳಿಗೆ ಉನ್ನತ ಅಂಕಗಳನ್ನು ಗಳಿಸಬೇಕು ಎಂದು ಹೇಳುವ ಹೆಮ್ಮೆಯ ಪಾಲಕರು ನಾವಾದರೆ ಸಾಲದು. ಗೌರವಾನ್ವಿತ ನೌಕರಿ ಪಡೆಯುವ/ ಒಳ್ಳೆಯ ಕುಟುಂಬದ ವ್ಯಕ್ತಿಯನ್ನು ಸಂಗಾತಿಯಾಗಿ ಪಡೆಯುವ ಕುರಿತು ಮಾತ್ರ ಕಲಿಸಿದರೆ ಸಾಲದು. ಮಕ್ಕಳು ತಮ್ಮ ಒಳ್ಳೆಯ ಮೌಲ್ಯಗಳನ್ನು ಮಾತ್ರ ಬಿಂಬಿಸಿದರೆ ಸಾಲದು… ಬದಲಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದನ್ನು ಕಲಿಸಲೇಬೇಕು. ತಮ್ಮ ಆಯ್ಕೆಯ ಕುರಿತು ಪುನರ್ ಪರಿಶೀಲನೆ ಮಾಡುವುದನ್ನು, ತಮಗಿಷ್ಟವಿಲ್ಲದ ವಿಷಯವನ್ನು ಬೇಡ ಎಂದು ತಳ್ಳಿ ಹಾಕುವ ಧೈರ್ಯವನ್ನು, ತಮಗೆ ಒಗ್ಗದ ಆಹಾರವನ್ನು ಬೇಡ ಎಂದು ತಳ್ಳುವಷ್ಟೇ ಧೈರ್ಯದಿಂದ ತಮಗಿಷ್ಟವಿಲ್ಲದ ವೈವಾಹಿಕ ಸಂಬಂಧದಿಂದ ಹೊರಟು ಹೋಗುವ ದಾಸ್ಟಿಕತೆಯನ್ನು ಪ್ರದರ್ಶಿಸಬೇಕು.ಹೊಣೆಗಾರಿಕೆ ಎಂಬುದು ಇಪ್ಪತ್ತನೇ ವರ್ಷದಲ್ಲಿ ಬರುವುದಲ್ಲ ಹುಟ್ಟಿದ ಮಗು ತನ್ನ ಐದನೇ ವರ್ಷದಿಂದಲೇ ತನ್ನ ವೈಯಕ್ತಿಕ ನಿಲುವುಗಳನ್ನು, ಸಾಮಾಜಿಕ ಬದ್ಧತೆಯನ್ನು, ಮೌಲ್ಯದ ಬದುಕನ್ನು ರೂಡಿಸಿಕೊಳ್ಳಲು ಪಾಲಕರು ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಬೇಕು ಸಾಮಾಜಿಕ ಹೊಣೆಗಾರಿಕೆಯು ಮಗುವಿಗೆ ಐದನೇ ವರ್ಷದಲ್ಲಿ  ಕಲಿಕೆಯ ಭಾಗವಾಗಿ ದೊರೆತರೆ ಹತ್ತನೇ ವಯಸ್ಸಿನಲ್ಲಿ ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ಹದಿಹರೆಯದ ಸಮಯದಲ್ಲಿ ಅವರ ಸಾಮಾಜಿಕ ಬದ್ಧತೆಯು ವಿಭಿನ್ನ ಹಂತಗಳಲ್ಲಿ ಪರೀಕ್ಷಿಸಲ್ಪಡುತ್ತದೆ ಮತ್ತೆ 20ನೇ ವಯಸ್ಸಿನ ಹೊತ್ತಿಗೆ ಅವರ ಬದುಕಿನ ಮೌಲ್ಯವನ್ನು ಮಾಪನ ಮಾಡಲಾಗುತ್ತದೆ.ಮನುಷ್ಯನ ಬದುಕಿನ ಕಲಿಕೆಗಳು ನಾವಂದುಕೊಂಡಷ್ಟು ಸರಳವಾಗಿಲ್ಲ ನಿಜ… ಆದರೆ ಅತ್ಯಂತ ಸಂಕೀರ್ಣವಾಗಬಾರದು ಎಂಬ ತಿಳುವಳಿಕೆ ಪಾಲಕರಾದ ನಮಗಿರಲೇಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲ ವಾತಾವರಣಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ಹೊಣೆಗಾರಿಕೆ ಆತನಂತೆ ಆಗಿದ್ದು, ಎಷ್ಟೋ ಬಾರಿ ನಮ್ಮ ಬದುಕಿನ ಆಯ್ಕೆಗಳು ನಮ್ಮನ್ನು ರೂಪಿಸುತ್ತದೆ. ನಮ್ಮ ಮನದ ಭಾವಗಳು ಕನ್ನಡಿಯ ಪ್ರತಿಬಿಂಬದಂತೆ ನಮ್ಮನ್ನು ಈ ಸಮಾಜಕ್ಕೆ ತೋರುತ್ತವೆ.ನಾವು ಹೊಂದಿರುವ ಸ್ನೇಹಿತರು ಸಂಬಂಧಗಳು ನಮ್ಮ ವ್ಯಕ್ತಿತ್ವ ನಮ್ಮ ಬದುಕಿನ ಕುರಿತಾದ ನಮಗಿರುವ ಅವಗಾಹನೆಗಳು ಮತ್ತಿತರ ಹಲವಾರು ವಿಷಯಗಳು ಮನುಷ್ಯನ ವರ್ತನೆ ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸದಾ ನಿಮ್ಮನ್ನು ಗಮನಿಸುವ ಎರಡು ಜೋಡಿ ಕಣ್ಣುಗಳು ನಿಮ್ಮನ್ನೇ ಪ್ರತಿಬಿಂಬಿಸುತ್ತವೆ ಹಾಗೂ ಹಾಗೆ ಪ್ರತಿಬಿಂಬಿಸುವ ಕಣ್ಣುಗಳು ನಿಮ್ಮ ಮಕ್ಕಳದ್ದೇ ಆಗಿರುತ್ತವೆ. ನಿಮ್ಮ ಮಕ್ಕಳು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ನೀವು ಮಾತ್ರ ಜವಾಬ್ದಾರರು ಎಂದು ತಿಳಿದುಕೊಳ್ಳುವ ಮುನ್ನ ಬದುಕಿನಲ್ಲಿ ಸರಿ ಮತ್ತು ತಪ್ಪು ಎಂಬ ಎರಡು ಕವಲು ದಾರಿಗಳ ನಡುವೆ ನಿಮ್ಮ ಮಗು ಸಿಲುಕಿಕೊಂಡಾಗ ಮೌಲ್ಯವನ್ನು ತಮ್ಮದಾಗಿಸಿಕೊಂಡ ಮಕ್ಕಳು ಕಷ್ಟವಾದರೂ ಸರಿ, ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ತಪ್ಪು ಹಾದಿಯಲ್ಲಿ ನಡೆಯುವ ಆಯ್ಕೆಯನ್ನು ತಮ್ಮದಾಗಿಸಿಕೊಂಡವರು ಆರಂಭದಲ್ಲಿ ಸುಖವನ್ನೇ ಸೂರೆಗೊಂಡರೂ ಕೂಡ ಅನಿಶ್ಚಿತತೆಯ ಬದುಕು ಅವರದ್ದಾಗುತ್ತದೆ. ನಿಮ್ಮ ಮಕ್ಕಳ ಬದುಕನ್ನು  ಮೌಲ್ಯಗಳಿಂದ ತುಂಬ ಬೇಕೇ ಹೊರತು ಭಯದಿಂದಲ್ಲ.ಒಂದು ಪ್ರಾಮಾಣಿಕ ಸಂಭಾಷಣೆ, ಚರ್ಚೆಯು ಸಂಬಂಧವನ್ನು ಉಳಿಸಬಲ್ಲದು …. ಆದರೆ ಒಂದು ಸುಳ್ಳು ಎಲ್ಲವನ್ನು ನಾಶಪಡಿಸಬಲ್ಲದು. ಒಬ್ಬ ವ್ಯಕ್ತಿಯ ತಪ್ಪು ನಿರ್ಧಾರ ಸಾಕಷ್ಟು ಜೀವಿಗಳ ಬದುಕಿನಲ್ಲಿ ಬಿರುಗಾಳಿಯನ್ನು ಎಬ್ಬಿಸಬಲ್ಲದು. ಆದ್ದರಿಂದ ಪಾಲಕರೇ…. ನಿಮ್ಮ ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಡಿ… ಬದಲಾಗಿ ನಿಮ್ಮ ಮಕ್ಕಳು ಭಾವನಾತ್ಮಕವಾಗಿ ಪ್ರಾಮಾಣಿಕವಾಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆಯೇ ? ತಮ್ಮ ಆಯ್ಕೆಯ ಪರಿಣಾಮಗಳ ಹೊಣೆಯನ್ನು ಹೊರುತ್ತಾರೆಯೇ  ಎಂದು ಪ್ರಶ್ನಿಸಿಕೊಳ್ಳಿ. ಬಹುಶಹ ಆಸ್ತಿ ಅಂತಸ್ತುಗಳಿಗಿಂತ ಹೆಚ್ಚಿನದಾಗಿ ನಾವು ನಮ್ಮ ಮಕ್ಕಳಿಗೆ ಕೊಡಬೇಕಾದದ್ದು ಮೌಲ್ಯಗಳು ಎಂಬ ತಲೆತಲಾಂತರವಾಗಿ  ಮುಂದುವರಿಸಲಾಗುವ ಆಸ್ತಿ.ನಾವು ನಮ್ಮ ಮಕ್ಕಳಿಗೆ ಕೇವಲ ಓದು, ಯಶಸ್ಸು, ವಿಧೇಯತೆಗಳನ್ನು ಮಾತ್ರ ಕಲಿಸಿದರೆ ಸಾಲದು ಧೈರ್ಯದಿಂದ ಬದುಕುವ,

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ವಚನ ಸಂಗಾತಿ “ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರುಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು.ಅಷ್ಟವಿಧಾರ್ಚನೆ ಷೋಢಶೋಪಚಾರಎಂಬರಲ್ಲದೆತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆಕೂಡಲ ಚೆನ್ನ ಸಂಗಮ ದೇವಾ –  ಚೆನ್ನ ಬಸವಣ್ಣ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಭವಿ ನಾಲ್ಕು ಜಾವ ಅಂದರೆ ದಿನದ ಹನ್ನೆರಡು ಗಂಟೆಗಳ ಕಾಲ ತನ್ನ ಹೊಟ್ಟೆ ಉಪಜೀವನ ಬಗ್ಗೆ ಚಿಂತಿಸುತ್ತಾನೆ . ಆಹಾರ ಸಂಗ್ರಹ ಹಣ ಧನ ಕನಕ ಕ್ರೋಢೀಕರಿಸುವುದು  ,ಮನೆ ಕಟ್ಟುವುದು ಆಸ್ತಿ ಮಾಡುವುದು ಮಕ್ಕಳ ಮಡದಿಯ ಸೌಖ್ಯವನ್ನು ಬಯಸುವುದು .ತನ್ನ ಇಂದ್ರಿಯ ಚಾಪಲ್ಯಕ್ಕೆ ಮಾರು ಹೋಗಿ ಅದಕ್ಕೆ ಬೇಕಾದ ವಸ್ತು ವಿಷಯಗಳನ್ನು ಅನುಭವವಿಸಲು ಪರಿ ತಪಿಸುತ್ತಾನೆ  . ಭವಿಯು ಪ್ರಾಪಂಚಿಕ ವಿಷಯಾದಿಗಳಲ್ಲಿ ತನ್ನ ಮೂಲ ಬೌದ್ಧಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ.ಕೇವಲ ತನ್ನ ಹೊಟ್ಟೆ ಹೊರೆಗೆ ಐಹಿಕ ಸುಖಕ್ಕೆ ಕುದಿಯುತ್ತಾನೆ ಚಡಪಡಿಸುತ್ತಾನೆ. *ಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು ಹಗಲಿನಲ್ಲಿ ಸಂಪಾದಿಸಿದ ಹಣ ಧನ ಆಸ್ತಿ ಹೇಗೆ ವ್ಯಯ ಮಾಡಬೇಕು ಎಂಬ ಲೆಕ್ಕದಲ್ಲಿ ಸದಾ ವಿಚಾರಿಸುವ ಭವಿ ,ರಾತ್ರಿಯಿಡಿ ವ್ಯಸನಕ್ಕೆ ಜಾರುತ್ತಾನೆ ಕನಸಿನಲ್ಲಿಯೂ ಕೂಡ ತಾನು ಪಡೆಯಬಹುದಾದ ಪದಾರ್ಥಿಕ ಸಂಗ್ರಹಣೆ ಆಸ್ತಿ ಅವುಗಳನ್ನು ಪಡೆಯುವ ತಂತ್ರಗಾರಿಕೆ ಬಗ್ಗೆ   ರಾತ್ರಿ ನಾಲ್ಕು ಜಾವ ಅಂದರೆ ಒಂದು ಜಾವಕ್ಕೆ ನಾಲ್ಕು ಗಂಟೆ ಸಮಯ ನಿಗಧಿಯಾಗಿರುತ್ತದೆ .ಸಂಪಾದಿಸಿದ ಆಸ್ತಿಯನ್ನು ವ್ಯಸನದಲ್ಲಿ ಕಳೆಯುವದರಲ್ಲಿ ಕುದಿಯುತ್ತಿರುವ ಮನುಷ್ಯ ತನ್ನ ನೆಮ್ಮದಿ ಶಾಂತಿ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ .ವ್ಯಸನ ದುರಾಭ್ಯಾಸದಲ್ಲಿ ತೊಡಗಿರುವ ಭವಿ ತಾನು ಗಳಿಸಿದ ಸಂಪತ್ತು ಆಸ್ತಿ ಎಲ್ಲಿ ತನ್ನ ಬಿಟ್ಟು ಹೋಗುತ್ತದೆ ಎಂದು ಸದಾ ಚಿಂತಿಸುತ್ತಾನೆ.ಆಗ ಮನುಷ್ಯ ತಾನು ಹಗಲು ಇರುಳು ವ್ಯಾಕುಲಕ್ಕೆ   ಒಳಗಾಗುತ್ತಾನೆ .ಹಗಲಿನಲ್ಲಿಯೂ ಹಂಬಲಿಸುವ ಮನ ರಾತ್ರಿಯಿಡಿ ಮತ್ತೆ ಚಿಂತಾಕ್ರಾಂತನಾಗುತ್ತಾನೆ . *ಅಷ್ಟವಿಧಾರ್ಚನೆ ಷೋಢಶೋಪಚಾರ ಎಂಬರಲ್ಲದೆ*   ಅನ್ಯ ಮಾರ್ಗದಿಂದ ಗಳಿಸಿದ ಆಸ್ತಿ ಹಣ ಸಂಪತ್ತು ಅವುಗಳ ಪಡೆದ ವಾಮ ಮಾರ್ಗಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿ ಸಮಾಧಾನ ಹೊಂದಲು ಬಾಹ್ಯದಲ್ಲಿ ಅಷ್ಟವಿಧಾರ್ಚನೆ   ಹಾಗೂ ಅರ್ಘ್ಯ ಪಾದ್ಯ ದೂಪ ದೀಪ ನೈವೆದ್ಯ ಮುಂತಾದ ಷೋಢಶೋಪಚಾರ ಮುಂತಾದ ಒಣ ಆಚರಣೆಯಿಂದ ಭವಿ ಸಮಾಧಾನಪಡಲು ಯತ್ನಿಸುತ್ತಾನೆ. ತನ್ನ ಪ್ರತಿಷ್ಠೆಗೆ   ಆಡಂಭರದ ಪೂಜೆಯಲ್ಲಿ ತೊಡಗುತ್ತಾನೆ. ಇಂದು ಅನೇಕ ಶ್ರೀಮಂತರು ಸಂಸ್ಕಾರವಿಲ್ಲದಿದ್ದರೂ ಲಿಂಗಕ್ಕೆ ಸಮಾಜಕ್ಕೆ ಅನೇಕ ರೀತಿಯ ಆಚರಣೆಯ ಮೂಲಕ ತಮ್ಮ ಸ್ವಾಮ್ಯತ್ವವನ್ನು ಹೊಂದುತ್ತಾರೆ.ಪೂಜೆ ಪ್ರವಚನ ಕೀರ್ತನೆ ಸಾಮೂಹಿಕ ಪ್ರಸಾದ ಇದು ಹೊರಗೆ ಡಾಂಭಿಕವಾಗಿ ತೋರುವ ಇಂತಹ ಆಚರಣೆಗಳು ಲಿಂಗಕ್ಕೆ ಹೊರಗೆ .  *ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ  ಕೂಡಲ ಚೆನ್ನ ಸಂಗಮ ದೇವಾ* ಸಂಸ್ಕಾರ ರಹಿತ ಭಾವ ಶುದ್ಧವಿಲ್ಲದವನ ಗಳಿಕೆ ಕಿಲ್ಬಿಷ ಉಂಟು ಮಾಡುತ್ತದೆ. ತನ್ನ ಚೈತನ್ಯವನ್ನು ನಂಬಿ ಸಮಷ್ಟಿಯ ನಿರಂತರ ಅಭಿವೃದ್ಧಿಗೆ ಸ್ವಾನುಭವ ಮಾಡುವ ಭಕ್ತ ಶ್ರೇಷ್ಠನಾಗುತ್ತಾನೆ. ಅಂತೆಯೇ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂದಿದ್ದಾರೆ ಚೆನ್ನ ಬಸವಣ್ಣನವರು. ತನ್ನದೆನ್ನುವುದು  ಸತ್ಯ ಸಮತೆ ಶಾಂತಿ ತರ್ಕ ವೈಚಾರಿಕತೆ ಎಂಬ ಪ್ರಾಮಾಣಿಕ ಪ್ರಜ್ಞೆ ಅದುವೇ ನಿಜವಾದ ಆಸ್ತಿ ಖನಿಜ . ಉತ್ತಮ ಭಾವಗಳನ್ನು ಹೊಂದಿದ ಭಕ್ತನು ತನ್ನ ಉತ್ತಮ ಗುಣಗಳನ್ನು ಒತ್ತೆಯಿಟ್ಟು ನೆಮ್ಮದಿ ಶಾಂತಿ ಸಂತಸ ಎಂಬ   ನಿಧಾನವನ್ನು ಆಸ್ತಿಯನ್ನು ಗಳಿಸುವನು ,ಆದರೆ ಅಂತಹ ವ್ಯಕ್ತಿಗಳನ್ನು ಲಿಂಗ ಸಾಕ್ಷಿಯಾಗಿ ನಾನು ಕಾಣಲಾರೆನು ಎಂದು ಚೆನ್ನ ಬಸವಣ್ಣನವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಸಮಾಜದಲ್ಲಿ ಒಳ್ಳೆಯ ನಡತೆ ಸಚ್ಚಾರಿತ್ರ್ಯಕ್ಕೆ ಬೆಲೆಕೊಡುವವರು ಕಡಿಮೆಯಾಗಿದ್ದಾರೆ ಲಾಂಛನ ಆಡಂಭರದ ಪೂಜೆ ಶ್ರೀಮಂತರ ಅಟ್ಟಹಾಸದಲ್ಲಿ ಲಿಂಗ ತತ್ವಮಸುಕಾಗುತ್ತಿದೆ ಎಂದೆನ್ನುವ ಭೀತಿ ಶರಣ ಚೆನ್ನ ಬಸವಣ್ಣನವ ವಚನದಲ್ಲಿ ಕಾಣಬಹುದು. ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು.  ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು.  ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ.  ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.

Read Post »

You cannot copy content of this page

Scroll to Top