ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ವಿಶೇಷ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಸುನಾಮಿ ಎಂದರೇನು ಎಂಬುದು ನಮಗೆ ಅರಿವಿರಲಿಲ್ಲ.ನಟ್ಟ ನಡಾ ಕಡಲು ಉಕ್ಕೇರಿ ದಂಡೆಗಿರುವುದೆಲ್ಲವನು ನೆಕ್ಕುವುದೆಂದು ಗೊತ್ತಿರಲಿಲ್ಲ.ಹಾಗೆಯೆ ಕರೋನಾ ಕಾಲಘಟ್ಟದಲ್ಲಿ ಅದೆಷ್ಟು ದಿನಗಳವರೆಗೆ ಮೌನವನೊತ್ತು ಹಾಗೇ ಸುಮ್ಮನೆ ಮನೆಯಲ್ಲಿ ಮನೆಯ, ಮನದ ಕದವನ್ನು ಮುಚ್ಚಿಕೊಂಡಿದ್ದೆವು.ಇಡೀ ಜಗತ್ತಿಗೆ ಉಸಿರು ಕಟ್ಟಿ ಬಿಟ್ಟಿತ್ತು.ಒಂದು ಬಾರಿ ಕರೆಂಟು ಹೋದರೆ ಜೀವ  ಸಂಕಟಪಡುತ್ತಿತ್ತು. ವಿದ್ಯುತ್ ಇಲಾಖೆಯವರು ಅದೆಷ್ಟು ವೇಗದಲ್ಲಿ ದುರಸ್ತಿ ಕಾರ್ಯ ಕೈಗೊಂಡರು.ಒಂದಿನಿತು ಗಾಳಿಯಾಡದಿದ್ದರೆಹೃದಯ ತಲ್ಲಣಗೊಳ್ಳುತ್ತಿತ್ತು.ಯಾರಾದರೂ ಮನೆಯ ಮುಂದೆ ಬಂದು ಕೂಗಿ ಕರೆದರೆ ಎದೆ ಜಲ್ಲೆನ್ನುತಿತ್ತು.ಯಾರೋ ಸತ್ತರೋ…ಯಾರಿಗೇನು  ಉಸಿರು ಕಟ್ಟಿತೋ…..ಸಹಾಯಕ್ಕಾಗಿ ಕರೆಯುತ್ತಿದ್ದಾರೋ….ಎಂಬ ಭಯದಿಂದ ಮನೆಯ ಬಾಗಿಲನ್ನು ತೆರೆಯದೆ ಮುಚ್ಚಿಕೊಂಡು ಬಿಡುವುದೆಂದರೆ ಎಂತಹ ವಿಪರ್ಯಾಸ! ಯಾವಾವುದೋ ಕಾರಣ ಹೇಳಿಕೊಂಡು ಆಸ್ಪತ್ರೆಯ ಸಿಬ್ಬಂದಿಗಳು   ವಿನಾಕಾರಣ ಇಲ್ಲಸಲ್ಲದ ಸಲಹೆಗಳನ್ನು ಹೇಳುತ್ತಾ  ಉಸಿರು ಕಟ್ಟಿಸಿ ಹೋಗುತ್ತಿದ್ದರು. ಟಿ.ವಿ.ಯಲ್ಲೂ ಭಯಾನಕ ಘಟನೆಗಳು.ನೋಡ ನೋಡುತ್ತಲೆ ನೂರಾರು ಹೆಣಗಳನ್ನು ಒಮ್ಮೆಲೆ ಮಣ್ಣಿನೊಳಗೆ ಮುಚ್ಚುವ ಜೆಸಿಬಿಯ ರೌದ್ರಾವತಾರ ಅದೆಷ್ಟು ಕ್ರೂರ!ಹೀಗೆ………?ಸಾಗಿ….ಬಿಟ್ಟಿತು ಪ್ರಪಂಚದ ನಡುಕ.ಆ ದಿನಗಳು ಏಕಾಏಕಿ ಅತ್ಯಂತ  ಕೆಟ್ಟ ಗಳಿಗೆಯಲ್ಲಿ ಏನೇನೋ..‌‌ನಡೆದುಹೋಯಿತು.ಏನೂ ಮಾಡದ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಆದರೇನು ಮಾಡುವುದು? ಗಾಳಿಯ ತೊಯ್ದಾಟದ ರೋಗವು ಯಾರ ನಿಯಂತ್ರಣದಲ್ಲಿ ಇರಲಿಲ್ಲ.ತಕ್ಷಣಕ್ಕೆ ಮೂಗಿಗೆ ಕವಚ ಕಟ್ಟಿಕೊಳ್ಳುವುದೇ ಏಕೈಕ  ಮಾರ್ಗವಾಗಿತ್ತು. ನಮ್ಮ ದೇಶದ ಸುದೈವವೆ ಸರಿ.ಮತ್ತೇ ಹೊಸ ಗಾಳಿ ಬೀಸಿ ಬಂತು.ಎಲ್ಲವನೂ ಮರೆತು, ಮುಕ್ತವಾಗಿ ತಿರುಗಿದೆವು.ಮುಚ್ಚಿದ ಮನದ ಬಾಗಿಲನ್ನು ತೆರೆದಿಟ್ಟೆವು.ತಂಗಾಳಿ ಬೀಸಿ ತೀಡಿತು.ನಾವೆಲ್ಲರೂ ಉಳಿದೆವು.  ಕಷ್ಟ ಅಥವಾ ವಿಪತ್ತು ಬಂದಾಗ ಎಲ್ಲರೂ ಸಮಾನರು, ಅಲ್ಲಿ ಮೇಲು-ಕೀಳು ಎಂಬ ಭೇದಭಾವ ಇರುವುದಿಲ್ಲ  ನೂರಾರು ವರ್ಷಗಳ ಅನುಭವದ ನಿಷ್ಠುರ ಸತ್ಯಗಳು ಇಂತಹ ಪುಟ್ಟ ಸಾಹಿತ್ಯಿಕ ರೂಪಗಳಲ್ಲಿ ಅಡಕವಾಗಿರುತ್ತವೆ. ಆ ಸಾಲಿನಲ್ಲಿ ಅತ್ಯಂತ ಪ್ರಮುಖವಾದುದು “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ನಾಣ್ನುಡಿ.​ಇಲ್ಲಿ ‘ಆಕಾಶ ಬೀಳುವುದು’ ಎಂದರೆ ಜಗತ್ತಿಗೆ ಬರುವ ಮಹಾ ವಿಪತ್ತು, ಪ್ರಕೃತಿ ವಿಕೋಪ ಅಥವಾ ಅನಿವಾರ್ಯವಾದ ಸಂಕಷ್ಟ ಎಂದರ್ಥ. ಅಂತಹ ಬೃಹತ್ ಸಂಕಷ್ಟ ಎದುರಾದಾಗ ಶ್ರೀಮಂತ-ಬಡವ, ಜಾತಿ-ಮತ, ಬಲಿಷ್ಠ-ದುರ್ಬಲ ಎಂಬ ಭೇದಭಾವಗಳೆಲ್ಲವೂ ಮರೆತುಹೋಗುತ್ತವೆ. ಪ್ರಕೃತಿಯ ಅಥವಾ ಕಾಲದ ನಿಯಮದ ಮುಂದೆ ಎಲ್ಲ ಮಾನವರೂ ಒಂದೇ ಆಗಿಬಿಡುತ್ತಾರೆ ಎಂಬ ನಗ್ನ ಸತ್ಯವನ್ನು ಈ ಮಾತು ನಮಗೆ ನೆನಪಿಸುತ್ತದೆ. ಅಹಂಕಾರದ ವಿನಾಶ​ಮಾನವನು ತನ್ನ ದೈನಂದಿನ ಜೀವನದಲ್ಲಿ ಅಧಿಕಾರ, ಸಂಪತ್ತು, ಅಂತಸ್ತು ಮತ್ತು ರೂಪದ ಮದದಿಂದ ಅಹಂಕಾರಿಯಾಗುತ್ತಾನೆ. “ನಾನು ಎಲ್ಲರಿಗಿಂತ ಶ್ರೇಷ್ಠ” ಎಂಬ ಭ್ರಮೆಯಲ್ಲಿ ಬದುಕುತ್ತಾನೆ. ಆದರೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ, ಈ ಬ್ರಹ್ಮಾಂಡದ ಸೃಷ್ಟಿಯ ಮುಂದೆ ಮನುಷ್ಯ ತೀರ ಅತ್ಯಲ್ಪ ಜೀವಿ.​ಯಾವಾಗ ಕಾಲ ಅಥವಾ ಪ್ರಕೃತಿ ತನ್ನ ರೌದ್ರರೂಪವನ್ನು ಪ್ರದರ್ಶಿಸುತ್ತದೆಯೋ, ಆಗ ಮನುಷ್ಯನ ಅಹಂಕಾರವೆಲ್ಲ ಧೂಳೀಪಟವಾಗುತ್ತದೆ. ಮೃತ್ಯು ಅಥವಾ ಮಹಾ ವಿಪತ್ತು ಬಂದಾಗ ರಾಜನಿಗೂ ಒಂದೇ ನ್ಯಾಯ, ಭಿಕ್ಷುಕನಿಗೂ ಒಂದೇ ನ್ಯಾಯ. ಆಕಾಶವು ಯಾರಿಗೂ ತಾರತಮ್ಯ ಮಾಡದೆ ಎಲ್ಲರ ಮೇಲೂ ಒಟ್ಟಿಗೆ ಉರುಳಿ ಬೀಳುತ್ತದೆ. ಅಂತಿಮವಾಗಿ ನಾವೆಲ್ಲರೂ ಬರಿಗೈಲಿ ಬಂದು ಬರಿಗೈಲಿ ಹೋಗುವ ಸಾಮಾನ್ಯ ಮರ್ತ್ಯರು ಎಂಬುದನ್ನು ಈ ಮಾತು  ಧ್ರಡೀಕರಿಸುತ್ತದೆ.​ ಪ್ರಕೃತಿ ವಿಕೋಪಗಳು ಮತ್ತು ನೈಜ ಉದಾಹರಣೆಗಳು ಬಹಳಷ್ಟಿವೆ.​ಈ ಮೇಲಿನ ಮಾತಿಗೆ ಅತ್ಯಂತ ಸೂಕ್ತವಾದ ಪ್ರಾಯೋಗಿಕ ಉದಾಹರಣೆ ಎಂದರೆ ಪ್ರಕೃತಿ ವಿಕೋಪಗಳು.​ಭೂಕಂಪಗಳು ಮತ್ತು ಸುನಾಮಿಗಳು ಕೋವಿಡ್ ಕರೋನಾ ,ಭೂಮಿ ನಡುಗಿದಾಗ ಅಥವಾ ಸುನಾಮಿ ಅಪ್ಪಳಿಸಿದಾಗ, ಅದು ಶ್ರೀಮಂತರ ಬಂಗಲೆಯನ್ನಾಗಲಿ ಅಥವಾ ಬಡವರ ಗುಡಿಸಲನ್ನಾಗಲಿ ನೋಡುವುದಿಲ್ಲ. ಪ್ರಕೃತಿಯ ಮುನಿಸಿಗೆ ಎಲ್ಲವೂ ಕ್ಷಣಾರ್ಧದಲ್ಲಿ ನೆಲಸಮವಾಗುತ್ತವೆ.​ಮಹಾ ಪೆಡಂಭೂತಗಳಲ್ಲಿ ಒಂದಾದ ಈ  ಜಗತ್ತನ್ನು ಕಾಡಿದ ಕೋವಿಡ್-19 (ಕೊರೊನಾ) ಮಹಾಮಾರಿಯನ್ನೇ ಉದಾಹರಣೆಯಾಗಿ ಮೇಲೆ ತಿಳಿಸಿದಂತೆ  ಆ ವೈರಸ್ ಶ್ರೀಮಂತ ರಾಷ್ಟ್ರಗಳ ಪ್ರಧಾನ ಮಂತ್ರಿಗಳಿಗೂ ತಗುಲಿತು, ಬೀದಿಯಲ್ಲಿದ್ದ ಸಾಮಾನ್ಯ ಜನರಿಗೂ ತಗುಲಿತು. ಲಾಕ್‌ಡೌನ್ ಆದಾಗ ಮತ್ತು ಆಮ್ಲಜನಕದ ಕೊರತೆಯಾದಾಗ ಪ್ರತಿಯೊಬ್ಬರೂ ಜೀವ ಉಳಿಸಿಕೊಳ್ಳಲು ಹೆಣಗಾಡಿದರು. ಅಲ್ಲಿ ಹಣವಂತನ ಕಾರ್ಡ್ ಕೆಲಸ ಮಾಡಲಿಲ್ಲ, ಬಡವನ ಅಸಹಾಯಕತೆಯೂ ಮುಚ್ಚಿಹೋಗಲಿಲ್ಲ. ಎಲ್ಲರೂ ಸಾವಿನ ಭಯದಲ್ಲಿ ಒಂದೇ ತಟ್ಟೆಯ ದಾಸರಾದರು.  ಸಮಾನತೆಯ ಸಂದೇಶವು​ನಮ್ಮ ಸಮಾಜದಲ್ಲಿ ಜಾತಿ, ಧರ್ಮ, ವರ್ಗ ಮತ್ತು ಲಿಂಗದ ಆಧಾರದ ಮೇಲೆ ಹಲವಾರು ಕೃತಕ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮನುಷ್ಯ ಮನುಷ್ಯನನ್ನೇ ದೂರ ಇಡುವ ಅಸ್ಪೃಶ್ಯತೆ, ಮೇಲು-ಕೀಳು ಎಂಬ ಭಾವನೆಗಳು ಇಂದಿಗೂ ಜೀವಂತವಾಗಿವೆ. ಆದರೆ ಈ ಮಾತಿನ  ಸಾಮಾಜಿಕ ಸಮಾನತೆಯ ಅತ್ಯುನ್ನತ ಪಾಠವನ್ನು ಬೋಧಿಸುತ್ತದೆ.​ಮಹಾ ಪ್ರವಾಹ ಬಂದಾಗ ಜನರು ತಮ್ಮ ಜಾತಿ ಯಾವುದು ಎಂದು ಕೇಳಿ ಜೀವ ಉಳಿಸಿಕೊಳ್ಳುವುದಿಲ್ಲ. ತೇಲಿ ಹೋಗುವಾಗ ಸಿಕ್ಕ ಪ್ರತಿಯೊಂದು ಕೈಯೂ ದೇವರೆಂದೇ ಭಾವಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಶತ್ರುಗಳೂ ಒಂದಾಗುತ್ತಾರೆ, ಭೇದ ಭಾವದ ಗೋಡೆಗಳು ಕುಸಿದು ಬೀಳುತ್ತವೆ. ವಿಪತ್ತುಗಳು ಮನುಷ್ಯನಿಗೆ ತನ್ನ ನೈಜ ಸಾಮಾಜಿಕ ಜವಾಬ್ದಾರಿಯನ್ನು ಮತ್ತು “ನಾವೆಲ್ಲರೂ ಒಂದೇ” ಎಂಬ ವಿಶ್ವಮಾನವ ತತ್ವವನ್ನು ನೆನಪಿಸಿಕೊಡುತ್ತವೆ. ​ರಾಜಕೀಯ ಮತ್ತು ಜಾಗತಿಕ ಆಯಾಮದ ದೃಷ್ಟಿಯಿಂದ ನೋಡುವುದಾದರೆ ಯುದ್ಧ ಮತ್ತು ಆರ್ಥಿಕ ಕುಸಿತಗಳು​ಜಾಗತಿಕ ಮಟ್ಟದಲ್ಲಿ ದೇಶಗಳು ತಾವೇ ಬಲಿಷ್ಠ ಎಂದು ಅಣುಬಾಂಬುಗಳನ್ನು ಹಿಡಿದು ಮೆರೆಯುತ್ತವೆ. ಆದರೆ ಮಹಾ ಯುದ್ಧಗಳು ಜರುಗಿದಾಗ ಅಥವಾ ಜಾಗತಿಕ ಆರ್ಥಿಕ ಕುಸಿತ  ಉಂಟಾದಾಗ ಅದರ ಬಿಸಿ ಕೇವಲ ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ.  ಮಹಾಯುದ್ಧಗಳು ನಡೆದಾಗ ಬಾಂಬ್‌ಗಳು ಕೇವಲ ಸೈನಿಕರ ಮೇಲೆ ಬೀಳುವುದಿಲ್ಲ, ನಾಗರಿಕರ ಮೇಲೂ ಬೀಳುತ್ತವೆ. ಹಸಿವು ಮತ್ತು ಸಾವು ಎಲ್ಲರನ್ನೂ ಸಮಾನವಾಗಿ ಕಾಡುತ್ತದೆ. ​ ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯವು ಕೇವಲ ಬಡ ದೇಶಗಳ ಸಮಸ್ಯೆಯಲ್ಲ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಓಝೋನ್ ಪದರದ ನಾಶ ಇಡೀ ಭೂಮಂಡಲದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಆಕಾಶ ಬಿರುಕು ಬಿಟ್ಟರೆ ಶ್ರೀಮಂತ ದೇಶಗಳೂ ಬದುಕುಳಿಯಲಾರವು. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಇದು ತೋರಿಸುತ್ತದೆ.​ಮಾನಸಿಕ ಮತ್ತು ವೈಯಕ್ತಿಕ ಜೀವನದ ಅನ್ವಯದೊಳಗೆ​ವೈಯಕ್ತಿಕ ಜೀವನದಲ್ಲಿ ಮನುಷ್ಯನಿಗೆ ದುಃಖ, ನಿರಾಸೆ, ಕಾಯಿಲೆ ಅಥವಾ ಸಾವು ಬಂದಾಗ ಆತನ ಮಾನಸಿಕ ಸ್ಥಿತಿ ಎಲ್ಲರಂತೆಯೇ ಇರುತ್ತದೆ. ಕೋಟ್ಯಧಿಪತಿಗೂ ಮನಸ್ಸಿನ ನೆಮ್ಮದಿ ಕೆಟ್ಟರೆ ನಿದ್ರೆ ಬರುವುದಿಲ್ಲ, ಬಡವನಿಗೂ ಅದೇ ಪರಿಸ್ಥಿತಿ.ನಮ್ಮ ವೈಯಕ್ತಿಕ ಜೀವನದಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಮ್ಮನ್ನು ಮಣ್ಣಿಗೆ ತರುತ್ತವೆ. ಸೋಲು ಎಲ್ಲರಿಗೂ ಒಂದೇ ರೀತಿಯ ನೋವನ್ನು ನೀಡುತ್ತದೆ. ಆದ್ದರಿಂದ ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರೂ ಕೂಡ ತಲೆಕೊಬ್ಬಿನಿಂದ ವರ್ತಿಸಬಾರದು, ಏಕೆಂದರೆ ಕಾಲದ ಚಕ್ರ ಉರುಳಿದಾಗ ಎಲ್ಲರೂ ಒಂದೇ ಮಟ್ಟಕ್ಕೆ ಬರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ನಾಣ್ನುಡಿ ನೀಡುತ್ತದೆ.​​ಒಟ್ಟಿನಲ್ಲಿ  ಹೇಳುವುದಾದರೆ, “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ಮಾತು ಕೇವಲ ಒಂದು ಎಚ್ಚರಿಕೆಯಲ್ಲ, ಅದು ಮಾನವ ಕುಲಕ್ಕೆ ಪ್ರಕೃತಿ ನೀಡುವ ಮಹತ್ತರವಾದ ಸಂದೇಶ. ನಾವು ಸೃಷ್ಟಿಸಿಕೊಂಡಿರುವ ಕೃತಕ ಭಿನ್ನಾಭಿಪ್ರಾಯಗಳು, ಗಡಿಗಳು ಮತ್ತು ಅಹಂಕಾರಗಳು ಕೇವಲ ತಾತ್ಕಾಲಿಕ. ಪ್ರಕೃತಿಯ ನಿಯಮದ ಮುಂದೆ ನಾವೆಲ್ಲರೂ ಕೇವಲ ಸಹಪ್ರಯಾಣಿಕರು.​ವಿಪತ್ತು ಬಂದಾಗ ಒಂದಾಗುವುದಕ್ಕಿಂತ ಮುಂಚಿತವಾಗಿಯೇ, ಸುಸ್ಥಿತಿಯಲ್ಲಿರುವಾಗಲೇ ನಾವೆಲ್ಲರೂ ಪರಸ್ಪರ ಗೌರವದಿಂದ, ಪ್ರೀತಿಯಿಂದ ಮತ್ತು ಸಮಾನತೆಯಿಂದ ಬಾಳಲು ಕಲಿಯಬೇಕು. ಈ ಗಾದೆಯ ಆಳವಾದ ಅರ್ಥವನ್ನು ಅರಿತು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಲು ಸಾಧ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನುನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವುನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನುನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ. ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ ” ಒಳ ಸುಳಿವು” ಮೌನಮರೆಯಲಿ ಮಾತೊಂದು ಮೊಳಗುವುದುಮನದಾಳದ ನೋವು ಕಣ್ಣಲಿ ಕರಗುವುದು;ನಗುವಿನ ಹಿಂದೆ ಅಡಗಿದ ಕಣ್ಣೀರ ಹನಿಯೇ,ಬದುಕಿನ ಸತ್ಯಕ್ಕೆ ನೀಡುವ ಒಳ ಸುಳಿವೇ. ಹೊರಗಿನ ಬೆಳಕಿಗೆ ನೆರಳೊಂದು ಜೊತೆಯಲಿ,ಒಳಗಿನ ಕತ್ತಲೆಗೆ ದೀಪವೊಂದು ಹೃದಯದಲಿ;ಕಳೆದುಹೋದ ದಾರಿಯ ಹೆಜ್ಜೆ ಗುರುತಿನಲಿ,ನಾಳೆಯ ಪಯಣದ ಸುಳಿವಿದೆ ಆತ್ಮದಲಿ. ಕಾಣದ ಕನಸೊಂದು ಕಣ್ಣೊಳಗೆ ನಿಲ್ಲುವುದುಹೇಳದ ಭಾವ ಉಸಿರಾಗಿ ಹರಿಯುವುದುಪದಗಳಿಗಿಂತ ಮೌನವೇ ಸತ್ಯ ಹೇಳುವಾಗಮನವೇ ಮನಸ್ಸಿಗೆ ಕನ್ನಡಿ ಹಿಡಿಯುವಾಗ ಜಗವನು ಅರಿಯಲು ಮೊದಲು ನಿನ್ನನು ಅರಿತು ಒಳಗಿನ ಧ್ವನಿಯನು ಕೇಳು ಕ್ಷಣವೊಂದು ನಿಂತು ಹೊರಗೆ ಹುಡುಕಿದ ಸತ್ಯ ಒಳಗೇ ಹೊಳೆಯುವುದು ನೀನೇ ನಿನ್ನ ದಾರಿ ಎಂದು ಒಳ ಸುಳಿವು ನೀಡುವುದು. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು” Read Post »

ಕಾವ್ಯಯಾನ

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ತ್ರಿವರ್ಣದ ನೆರಳಿನಲ್ಲಿ” 140  ವರುಷಗಳ ಹಿಂದೆಹೊತ್ತಿ ಉರಿದಿತ್ತು ಒಂದು ಕನಸು,ಬಂಧನದ ಕತ್ತಲೆಯನ್ನು ಸೀಳಿಬೆಳಕಾಗಿತ್ತು  ಸ್ವಾತಂತ್ರ್ಯದ ಬೆಳಗು. ತಾಯ್ನಾಡಿನ ಮಣ್ಣಿಗಾಗಿನಡೆದವು ಮೋಹನದಾಸ್ ಕರಮಚಂದ ಗಾಂಧಿ ಜೊತೆಗೆ ಸಾವಿರ ಹೆಜ್ಜೆಗಳು,ತ್ಯಾಗದ ದಾರಿಯಲ್ಲಿ ಮೂಡಿದವುಅಸಂಖ್ಯಾತ ವೀರರ ಹೆಜ್ಜೆ ಗುರುತುಗಳು. ಗಾಂಧಿ ಕೈಯಲ್ಲಿ ಆಯುಧವಿರಲಿಲ್ಲ,ಹೃದಯದಲ್ಲಿ ಮಾತ್ರ ಧೈರ್ಯವಿತ್ತು;ತುಟಿಯಲ್ಲಿ  ಅಜಾದಿಯ  ಹಂಬಲ ;ಕಣ್ಣಿನಲ್ಲಿ ಭಾರತವಿತ್ತು. ಜೈಲಿನ ಕತ್ತಲ ಕೋಣೆಗಳಲ್ಲೂ ನೆಹರು ಅವರಸ್ವಾತಂತ್ರ್ಯದ ಹಾಡು ಮೊಳಗಿತು,ತಾಯಿಯ ಮಡಿಲು ತೊರೆದ ಮಗನಹೆಜ್ಜೆ ದೇಶದ ದಾರಿಯಾಯಿತು. ಆ ದಿನದ ತ್ಯಾಗದ ಹನಿಗಳುಇಂದು ನಮ್ಮ ಧ್ವಜದ ಬಣ್ಣಗಳಾಗಿವೆ;ಆ ವೀರರ ಕನಸುಗಳೇಇಂದು ನಮ್ಮ ಸ್ವತಂತ್ರ ಉಸಿರಾಗಿವೆ. ನೂರಾಮೂವತ್ತು  ವರ್ಷಗಳು ಕಳೆದುಹೋದರೂಆ ನೆನಪುಗಳುಕ್ವಿಟ್ ಇಂಡಿಯಾ ಚಳುವಳಿ ಹಳೆಯದಲ್ಲ,ಪ್ರತಿ ಆಗಸ್ಟ್‌ನ ಗಾಳಿಯಲ್ಲೂಅವರ ತ್ಯಾಗದ ಸುಗಂಧ ಕಡಿಮೆಯಾಗದು. ತ್ರಿವರ್ಣ ಧ್ವಜ ಹಾರುವಾಗಮನದೊಳೊಂದು ಪ್ರಶ್ನೆ ಮೂಡಲಿ—“ನಾವು ಪಡೆದ ಸ್ವಾತಂತ್ರ್ಯವನ್ನುಮುಂದಿನ ಪೀಳಿಗೆಗೆ ಹೇಗೆ ನೀಡಲಿ?” ಸ್ವಾತಂತ್ರ್ಯವೆಂದರೆ ಕೇವಲ ಹಬ್ಬವಲ್ಲ,ಅದು ಹೊಣೆಗಾರಿಕೆಯ ಬೆಳಕು;ದೇಶದ ಮಣ್ಣನ್ನು ಪ್ರೀತಿಸುವಪ್ರತಿಯೊಬ್ಬ ಹೃದಯದ ಸಂಕಲ್ಪ. ವೀರರ ಕನಸುಗಳು ನಗುವಂತೆ,ಭಾರತದ ಭವಿಷ್ಯ ಬೆಳಗುವಂತೆ,ಎಂಭತ್ತು ವರ್ಷಗಳ ನೆನಪಿನ ಮುಂದೆನಾವು ತಲೆಬಾಗಿ ಪ್ರತಿಜ್ಞೆ ಮಾಡೋಣ. “ನೆಲದ ಜನ  ಮೊದಲು,  ನಂತರ, ವಿವಿಧತೆಯಲ್ಲಿಏಕತೆ ನಮ್ಮ ಶಕ್ತಿ,ಸ್ವಾತಂತ್ರ್ಯ ನಮ್ಮ ಉಸಿರು,ಭಾರತ ನಮ್ಮ ಹೆಮ್ಮೆ! ಎನ್.ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್ Read Post »

ಕಾವ್ಯಯಾನ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು”

ಕಾವ್ಯ ಸಂಗಾತಿ ಶಿವರಾಜ ಅರಳಿ “ಮಾಸದ ಹೊಸ್ತಿಲು” ಎದೆಯ ತಿದಿಯೊತ್ತಿ ಗಿರಕಿಸುವಸಂಕಟದ ಆಂತಯು೯ದ್ಧಕ್ಕೆವಿರಾಮದ ಮುಲಾಮುಕೇವಲ ನೆಪ ಮಾತ್ರಆಗಾಗ ಬೆನ್ನಹುರಿಯಿಂದಿಳಿದುಹೊಕ್ಕಳು ಬಳ್ಳಿ ಸುತ್ತುವಋತುವಿನ ಆಟಕ್ಕೇನು ಗೊತ್ತುಹಸಿ ಕಣ್ಣ ಹೆಂಗಳೆಯರಚೀತ್ಕಾರದ ಆತ೯ನಾದ. ಮಾಸದ ಹೊಸ್ತಿಲಲಿಕಾದು ಕೆಂಡವಾದ ಬೇನೆಕನಸುಗಳನ್ನು ಜೀವಂತ ಸುಡುತ್ತದೆಎದೆಯ ಭಾವಗಳುಸ್ರಾವದ ಹರಿವಿನ ತೀವ್ರತೆಗೆಕೊಚ್ಚಿ ಹೋಗುವುದೊಂದೇ ಬಾಕಿಇಲ್ಲಿ ಹೃದಯದ ಭಾಷೆಒಮ್ಮೊಮ್ಮೆ ತಣ್ಣಗೆ ಮಲಗುತ್ತದೆವಿಧಿಯಿಲ್ಲದೆ… ಬಂಧಿಸಿಟ್ಟ ಗೂಡು ಹಕ್ಕಿಗೆಬೇಲಿಯ ದದಿ೯ಲ್ಲನಿಷಿದ್ಧ ನೆತ್ತಿಗೆನೆರಳ ಚಾಚುವ ಕೈಗಳಿಲ್ಲಹಳತು ಹೊಸತಾಗುವ ಜೀವ ಭಾವಹಗಲು ದಾಟಿದರೂಇರುಳು ಸರಿದರೂಮಾಸಕ್ಕೊಮ್ಮೆ ಮೊಳೆತುನೋವ ಹೊರಬೇಕು ಆವತ೯ದಲ್ಲಿ ಶಿವರಾಜ ಅರಳಿ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-42 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅಪ್ಪನ ಅಶ್ವ, ಮಗನ ಸವಾಲು ಮಡದಿಯನ್ನು ಕಾಡಿಗಟ್ಟಿದ್ದ ರಾಮನನ್ನು ಈಗ ರಾವಣವಧೆಯದು ಬ್ರಹ್ಮಹತ್ಯೆಯೆನಿಸಿ ಕಾಡಲಾರಂಭಿಸಿತ್ತು. ರಾವಣನೆಂಬ ಮಹಾಬ್ರಾಹ್ಮಣನನ್ನು ಕೊಂದ ದುರಿತ ತನ್ನದಾಯಿತಲ್ಲಾ! ಎಂದು ಚಿಂತಿಸತೊಡಗಿದ ಶ್ರೀರಾಮ. ಪರಿಹಾರವನ್ನು ಕೇಳಿದ್ದು ವಸಿಷ್ಠರಲ್ಲಿ. ಅವರು ಸೂಚಿಸಿದ್ದು ಅಶ್ವಮೇಧ ಯಾಗವನ್ನು. ಆದರೆ ಯಾಗ ನಡೆಯುವ ಸಮಯದಲ್ಲಿ ಪತ್ನಿ ಸೀತೆ ರಾಮನೊಡನೆಯೇ ಇರಬೇಕಿತ್ತು. ಚಿನ್ನದಿಂದ ನಿರ್ಮಿಸಲಾದ ಸೀತೆಯ ವಿಗ್ರಹವನ್ನಿಟ್ಟುಕೊಂಡು ಯಜ್ಞ ನಡೆಸುವೆನೆಂದ ಶ್ರೀರಾಮ. ಮುನಿಗಳ ಒಪ್ಪಿಗೆ ದೊರಕಿತು.ದೀಕ್ಷಾಬದ್ಧನಾದ ದಶರಥಸುತ. ಪೂಜೆ ನಡೆಯಿತು ಕುದುರೆಯದ್ದು, ಕೌಸಲ್ಯಾತನಯನಿಂದ. ಶ್ರೀರಾಮ ಶ್ರೇಷ್ಠತೆಯನ್ನು ಸಾರಿಹೇಳುವ ಬರಹವಿದ್ದ ಪತ್ರಿಕೆಯನ್ನು ಅಶ್ವದ ಹಣೆಗೆ ಅಳವಡಿಸಲಾಯಿತು. ಮೂರು ಅಕ್ಷೆÆÃಹಿಣಿ ಸೇನೆ ಹೊರಟಿತು ಯಜ್ಞಾಶ್ವ ರಕ್ಷಣೆಗೆ. ಆ ಸೇನೆಯ ಮುಂದಾಳತ್ವವದು ಶತ್ರುಘ್ನನಿಗೆ. ದಿಕ್ಕುದಿಕ್ಕಿಗೆ ಚಲಿಸಿತು ಕುದುರೆ. ಹಲವು ಅರಸರು ಮಣಿದರು ಅಯೋಧ್ಯಾಪತಿಯ ಹೆಸರನ್ನು ಕೇಳಿ.ಚಲಿಸುತ್ತಾ ಬಂದ ಕುದುರೆ ಈಗ ಸೇರಿದ್ದು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಸೇರಿದ್ದ ಉಪವನವನ್ನು. ಅಲ್ಲಿದ್ದ ಹಸಿಹಸಿರು ಹುಲ್ಲನ್ನು ಹೊಟ್ಟೆಗಿಳಿಸಿಕೊಳ್ಳುವ ಹುರುಪಿತ್ತು ಆ ಅಶ್ವಕ್ಕೆ. ಆ ಉಪವನದ ಕಾವಲಿಗಿದ್ದವನು ಲವ. ಬಿಲ್ಲನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಆತ ಕುದುರೆಯನ್ನು ಕಂಡ. ವಾಲ್ಮೀಕಿ ಋಷಿಗಳೇ ಆ ಉಪವನದ ಕಾವಲು ಕಾಯುವ ಹೊಣೆಯನ್ನು ಅವನಿಗೆ ವಹಿಸಿ ವರುಣನ ಭೇಟಿಗಾಗಿ ಹೋಗಿದ್ದರು. ಈ ಕುದುರೆ ಉಪವನವನ್ನು ಹಾಳುಗೆಡಹಿದರೆ ವಾಲ್ಮೀಕಿ ಮುನಿಗಳು ಬೈದಾರು ತನ್ನನ್ನು ಎಂದುಕೊAಡ ಲವ.ಕುದುರೆಯ ಬಳಿಬಂದ. ಅದರ ಹಣೆಯಲ್ಲಿದ್ದ ಲೇಖವನ್ನು ಓದಿದ. ಅದರಲ್ಲಿದ್ದ ಪರಾಕ್ರಮವನ್ನು ಕೆರಳಿಸುವ ಅಕ್ಷರಗಳು ಲವನ ಸಾಹಸ ಪ್ರವೃತ್ತಿಯನ್ನು ಪ್ರಚೋದಿಸಿತು. ಇದನ್ನು ಕಟ್ಟಿಹಾಕದಿದ್ದರೆ ತನ್ನ ಈ ತೋಳುಗಳು ಇರುವುದಾದರೂ ಏಕೆ ಎಂದು ತೋರಿತು ಅವನಿಗೆ. ತನ್ನ ಹೆಗಲ ಮೇಲಿನ ಶಾಲನ್ನು ತೆಗೆದ ಲವ ಅದರಿಂದಲೇ ಕಟ್ಟಿಹಾಕಿದ ಕುದುರೆಯನ್ನು, ಬಳಿಯಲ್ಲಿದ್ದ ಬಾಳೆಯ ಗಿಡಕ್ಕೆ.ಅವನ ಜೊತೆಗಿದ್ದವರು ಕೆಲವು ಬ್ರಾಹ್ಮಣ ಹುಡುಗರು. ಹೆದರಿದರು. ಬೇರೆಯವರ ಕುದುರೆಯನ್ನು ಕಟ್ಟುವುದು ಸರಿಯಲ್ಲ ಎಂದರು. ಆದರೆ ಲವನಲ್ಲಿದ್ದ ಕ್ಷಾತ್ರಭಾವವದು ಅಳುಕಲಿಲ್ಲ; ಮಣಿಯಲಿಲ್ಲ.ಕುದುರೆಯ ಕಾವಲಿಗಿದ್ದ ಸೈನಿಕರು ಅದೇ ಸಮಯದಲ್ಲಿ ಬಂದರು ಅಲ್ಲಿಗೆ. ಬಾಳೆಯ ಗಿಡಕ್ಕೆ ಕಟ್ಟಿದ್ದ ಕುದುರೆಯನ್ನು ಕಂಡರು. ಎದುರು ಕಂಡ ಬ್ರಾಹ್ಮಣ ಬಾಲಕರನ್ನು ದಿಟ್ಟಿಸಿ “ಕುದುರೆಯನ್ನು ಕಟ್ಟಿದವರಾರು?” ಎಂದು ಕೇಳಿದರು. ಬಾಲಕರ ಕೈಗಳು ಚಾಚಿದ್ದು ಲವನ ಕಡೆಗೆ. ಕಿರಿದು ಪ್ರಾಯದ ಹುಡುಗ ಅರಿವಿರದೆ ತುರಗವನ್ನು ಕಟ್ಟಿಹಾಕಿದ್ದಾನೆ ಎಂದು ತೋರಿತು ಅವರಿಗೆ. ಬಿಟ್ಟುಬಿಡು ಎಂದರು ಅಸಡ್ಡೆಯಿಂದ.“ಕುದುರೆಯನ್ನು ಬಿಡುವುದಿಲ್ಲ. ಬಿಡಿಸುವುದಕ್ಕೆ ಹೋದವರ ಕರಗಳನ್ನು ಕತ್ತರಿಸದೆ ಇರಲಾರೆ” ಎಂಬ ಶೌರ್ಯದ ನುಡಿ ಹೊಮ್ಮಿತು ಲವನಿಂದ. ಸೈನಿಕರಿಗೆ ಹಠ ಮೂಡಿತು. ತಮ್ಮಂತಹ ಪರಾಕ್ರಮಿಗಳಿಗೆ ಪುಟ್ಟ ಪೋರನ ಸವಾಲೇ! ಎಂದು ತೋರಿತು. ಕುದುರೆಯನ್ನು ಬಿಡಿಸಲು ಮುಂದಾದರು. ಆ ಕ್ಷಣವೇ ಬಾಣ ಪ್ರಯೋಗಿಸಿದ ಲವ ಅವರ ಕೈಗಳನ್ನು ಕತ್ತರಿಸಿಹಾಕಿದ. ಮುನ್ನುಗ್ಗಿಬಂದ ಸೇನೆಯ ಮೇಲೆ ಬಾಣಗಳ ಮಳೆಯನ್ನೇ ಹರಿಸಿದ. ಸೈನಿಕರು ಬಿಟ್ಟ ಬಾಣಗಳನ್ನೆಲ್ಲವನ್ನೂ ಕತ್ತರಿಸಿ, ಸಂಖ್ಯೆಗಳನ್ನೆಣಿಸದೆಯೇ ಸೈನಿಕರ ಶಿರಗಳನ್ನು ಕತ್ತರಿಸುತ್ತಲೇ ಹೋದ ಲವ.ರಾಮಸುತನ ಈ ಬಗೆಯ ದಿಟ್ಟಹೋರಾಟ ಕಾಣಿಸಿದ್ದು ಕುದುರೆಯ ರಕ್ಷಣೆಗೆಂದು ಬಂದಿದ್ದ ರಾಮಸೋದರ ಶತ್ರುಘ್ನನಿಗೆ. ಚತುರಂಗ ಬಲವನ್ನು ಕೂಡಿಕೊಂಡು ಲವನನ್ನು ಎದುರಿಸುವುದಕ್ಕೆ ಹೋದ ಆತ. ಶತ್ರುಘ್ನ ಆರ್ಭಟಿಸುತ್ತಾ ಬರುತ್ತಿರುವುದನ್ನು ಕಂಡ ಲವ ಶಿವನ ಮಂತ್ರವನ್ನು ಸ್ಮರಿಸಿದ.“ನೀನಿನ್ನೂ ಶಿಶು. ಸಾಯದಿರು ನನ್ನ ಕೈಯ್ಯಲ್ಲಿ. ಕುದುರೆಯನ್ನು ಬಿಟ್ಟು ಹೋಗು” ಎಂಬ ರಾಮಸೋದರನ ಅಬ್ಬರದ ನುಡಿ ಅಳುಕಿಸದಾಯಿತು ಸೀತಾಸುತನನ್ನು. ಶತ್ರುಘ್ನ ಶರವನ್ನು ಕ್ಷಿಪ್ರವಾಗಿ ತುಂಡರಿಸಿ ಗೆಲುವಿನ ನಗು ಬೀರಿದ ಲವ.ಕೆರಳಿದ ಶತ್ರುಘ್ನ. ಮೂರು ಬಾಣಗಳನ್ನು ಒಂದೇ ಬಾರಿಗೆ ಪ್ರಯೋಗಿಸಿದ. “ನನ್ನ ಪಾಲಿಗೆ ಪರಿಮಳದ ಕುಸುಮ ಬಾಣಗಳಿವು” ಎಂದು ನಗುತ್ತಾ ಬಾಣತ್ರಯಗಳನ್ನು ತುಂಡರಿಸಿದ ಲವನೆಂಬ ತರಳ.‘ಇವನು ಪೋರನಲ್ಲ; ಬಾಣಗಳ ಪ್ರಾಣ ತೆಗೆಯುವ ಅಸಹಾಯ ಶೂರ’ ಎನ್ನುವುದು ಮನದಟ್ಟಾಯಿತು ಶತ್ರುಘ್ನನಿಗೆ. ಅಮೋಘವಾದ ಬಾಣವನ್ನೇ ಪ್ರಯೋಗಿಸಿದ. ಶಿವನ ಹಣೆಗಣ್ಣಿಂದ ಹೊರಬರುವ ಉರಿಯ ತೆರದಲ್ಲಿ ಭೀಕರವಾಗಿತ್ತು ಆ ಬಾಣ. ಮಂದಸ್ಮಿತ ಮೊಗದಿಂದಲೇ ಆ ಬಾಣವನ್ನು ಅರ್ಧರ್ಧವಾಗಿಸಿದ ರಾಮತನಯ. ಈಗಲೂ ಗೆಲುವು ತನ್ನದೇ ಎಂದುಕೊAಡು ಬೀಗಿದ. ಆದರೆ ಅದರಲ್ಲಿ ಒಂದರ್ಧ ನೆಲವನ್ನು ಸೇರಿಕೊಂಡಿದ್ದರೆ, ಇನ್ನೊಂದರ್ಧ ಮೇಲ್ಮುಖವಾಗಿ ಚಲಿಸಿ ಲವನ ಎದೆಗೆ ಆಘಾತವನ್ನು ಉಂಟುಮಾಡಿತು. ಪ್ರಜ್ಞಾಶೂನ್ಯನಾದ.ನೆಲದ ಮೇಲೆ ಬಿದ್ದಿದ್ದ ಲವನ ಮುಖವದು ಶ್ರೀರಾಮನ ನೆನಪನ್ನು ಮೂಡಿಸಿತು ಶತ್ರುಘ್ನನಿಗೆ. ಮೋಹಭಾವದಿಂದ ಅವನ ಪ್ರಜ್ಞಾಶೂನ್ಯ ದೇಹವನ್ನು ತನ್ನ ರಥದ ಮೇಲಿರಿಸಿಕೊಂಡ. ಕುದುರೆಯನ್ನು ಬಿಡಿಸಿ, ಸೈನ್ಯದ ಜೊತೆಗೆ ನಗರದತ್ತ ಮುಖಮಾಡಿ ಪಯಣಿಸಿದ.ಲವನ ಜೊತೆಗಿದ್ದ ಬ್ರಾಹ್ಮಣ ಹುಡುಗರು ವಿಚಾರವನ್ನು ಬಂದು ಅರುಹಿದರು ಸೀತೆಗೆ. ಮಗನಿಗೆದುರಾದ ಸ್ಥಿತಿಯನ್ನು ನೆನೆದು ಅತೀವ ದುಃಖಕ್ಕೊಳಗಾದಳು ಅವನಿಸುತೆ. ಏನಾಗಿಹೋಯಿತೋ ತನ್ನ ಮಗನಿಗೆ! ರಥದಲ್ಲಿ ಕೊಂಡೊಯ್ದವ ಅವನಿಗೆ ಅದಾವ ನೋವನ್ನಿತ್ತನೋ! ಎಂದೆಲ್ಲಾ ಭಾವಿಸಿ ರೋಧಿಸಿದಳು ಸೀತೆ. ಆಗಲೇ ಕುಶ ಅಲ್ಲಿಗೆ ಬಂದ.***      ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಅವರ ಗಜಲ್ ಹುಸಿ ಕೋಪ ಮರೆತು ಎಲ್ಲರೊಂದಿಗೆ ಬೆರೆಯುವುದೇ ಮಾತು.ತುಸು ದೂರ ಇದ್ದವರ ಹತ್ತಿರ ಕರೆಯುವುದೇ ಮಾತು. ಸುಮ್ಮನೇ ಜಗಳ ಮಾಡಿ ದ್ವೇಷ ಸಾಧಿಸುವುದು ಸರಿಯೇ.ಬಿಮ್ಮನೆ ಮುಖ ಊದಿಸಿದರೆ ಅಗಲಿ ತೊರೆಯುವದೇ ಮಾತು. ಸಿಹಿಯ ‌ದ್ವನಿ ಕೇಳುಗನ ಮನ ತಣಿಸುವುದು ನೋಡು.ಕಹಿಯ ಕಂಠ ನೋವ ನೀಡುತ ಕೊರೆಯುವುದೇ ಮಾತು. ಒಂದಾಗಿ ಚಂದದಿ ಬಾಳುತ ಸಾಗುವುದೇ ರಸಮಯ ಜೀವನ.ಬಂಧನದಿ ಭುವಿಗೆ ಹೊಂದಿಕೊಳ್ಳದಿರೆ ವಿಷ ಎರೆಯುವುದೇ ಮಾತು ಹೃದಯ ಪರಸ್ಪರ ಮಿಡಿದರೆ ಒಲವಿನ ಜಯ ಸಿಗುವುದುಮಧುರ ಬಾಂಧವ್ಯ ಬೆಸೆದರೆ ಸಂಕಟ ಮರೆಯುವುದೇ ಮಾತು ಜಯಶ್ರೀ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ನಿಮ್ಮೊಂದಿಗೆ

ವೈ .ಎಸ್.ಹರಗಿ ಅವರ ಕೃತಿ “ಇಮಾಮ್ ಸಾಹೇಬರ ಕುದುರೆ” ಒಂದು ಅವಲೋಕನ,‌ ಸಂಗೀತ ರವಿರಾಜ್

ಪುಸ್ತಕ ಸಂಗಾತಿ ಸಂಗೀತ ರವಿರಾಜ್ ವೈ .ಎಸ್.ಹರಗಿ “ಇಮಾಮ್ ಸಾಹೇಬರ ಕುದುರೆ” ದಂಗುಬಡಿಸುವಂತಹ ಭಾಷಾ ಸಂಪತ್ತು,ನೂರಾರು ಗಾದೆಗಳು,ಲೋಕೋಕ್ತಿಗಳು, ಗ್ರಾಮ್ಯ ಭಾಷೆಯ ಸೊಗಡು  ಇವೆಲ್ಲವೂ ಮೇಳೈಸಿದ ಒಂದು ವಿಶಿಷ್ಟವಾದ ನಿರೂಪಣೆಯ ಕಾದಂಬರಿ ” ಇಮಾಮ್ ಸಾಹೇಬರ ಕುದುರೆ ” . ವೈ. ಎಸ್. ಹರಗಿ ವಿರಚಿತ, ಇಮಾಮ್ ಸಾಹೇಬರ ಕುದುರೆ ಕಾದಂಬರಿ ಇಪ್ಪಂತೊoಭತ್ತು ಆಸಕ್ತಿದಾಯಕ ಶೀರ್ಷಿಕೆಗಳ ಅಧ್ಯಾಯಗಳನ್ನು ಹೊಂದಿ ಓದುಗರಿಗೆ ಹೊಸ ಅನುಭೂತಿಯನ್ನು ಕೊಡುತ್ತದೆ.          ಈ ಕಾದಂಬರಿಯ ಕೊನೆಯ ಸಾಲುಗಳು “ನೀವು ಜಾತಿ,ಮತ,ಧರ್ಮಗಳ ಒಳಸುಳಿಯಲ್ಲಿ ಮನುಷ್ಯನ ಹುಟ್ಟನ್ನು ಹಿಡಿದಿಡಬಹುದು. ಆದರೆ ಸಾವನ್ನು ಮಾತ್ರ ಹಿಡಿದಿಡಲು ಸಾಧ್ಯವಿಲ್ಲ. ಮರಣದ ಮೂಲಕ ವ್ಯಕ್ತಿಯು ವಿಶ್ವಮಾನವತೆಯ ಪರಿಧಿಗೆ ಸೇರಿ ಪಂಚಮಹಾಭೂತಗಳಲ್ಲಿ ಲೀನವಾದಾಗ ಅವನನ್ನು ಹಿಂಬಾಲಿಸಿದ ನಿಮ್ಮ ಶ್ರೇಷ್ಠತೆಯ ಜಾತಿ,ಮತ ಧರ್ಮಗಳು ಸಾವಿನ ಎದುರು ಅನಾಥವಾಗುತ್ತವೆ.  ಪ್ರಯೋಜನವಿಲ್ಲದ ನಿಷ್ಪ್ರಯೋಜಕ ಕೊರಡುಗಳಾಗುತ್ತದೆ! ”  ಈ ಮಾತುಗಳು ಸಂಪೂರ್ಣ ಕಾದಂಬರಿಗೆ ಹಿಡಿದ ಕೈಗನ್ನಡಿಯಾಗಿದೆ.  ಮಹಾಮಡಿವಂತರಾದ ಗಣಾಚಾರರು ಹಳ್ಳದಲ್ಲಿ ಬಿದ್ದು ಸಾಯುವಾಗ ಹೆಣ ಬಾತು ಭಾರವಾಗಿ ಹೆಗಲು ಕೊಡಲು ಪ್ರಯಾಸಪಟ್ಟವರು ಜೀವಂತವಿದ್ದಾಗ ಅವರನ್ನು ಮುಟ್ಟಬಾರದ ಜನರು ! ಇಂತಹ ವಿಪರ್ಯಾಸದ ನಿದರ್ಶನಗಳು ಕಾದಂಬರಿಯುದ್ದಕ್ಕೂ  ನಮಗೆ ಸಿಗುತ್ತವೆ. ಹಾಗೂ ಇವೆಲ್ಲ ನಮ್ಮನ್ನು ನಾವು ಅರಿಯಲು ಇರುವಂತಹ ಓದುಗರು ಮೆಚ್ಚುವಂತಹ ಕಾದಂಬರಿಯ ಅಂಶಗಳು.        ಗ್ರಾಮೀಣ ಬದುಕೆಂದರೆ ಅದೊಂದು ಅನುಭವಗಳ ಕಣಜ ಮತ್ತು ಜೀವನದ ವಿಶ್ವಕೋಶ. ಬಗೆದಷ್ಟು ಅನುಭವಗಳ ಮೂಟೆ,  ಜೀವನ ಪಾಠ ನಮಗಿಲ್ಲಿ ಲಭ್ಯ. ಲೇಖಕರು ಹಳ್ಳಿಯಲ್ಲಿ ಬೆಳೆದಿದ್ದರ ಪರಿಣಾಮ ಮಾತ್ರವಲ್ಲದೆ, ಹಳ್ಳಿಯ ಜೀವನವನ್ನು ಅಪಾರವಾಗಿ ಪ್ರೀತಿಸಿದ್ದರಿಂದ ಇಂತಹ ಹಳ್ಳಿಯ ಚಿತ್ರಣದ, ಕನ್ನಡದ ಒಂದು ಉಪಭಾಷೆಯ ಶಬ್ದಗಳಿರುವ ಕಾದಂಬರಿ  ಇವರಿಂದ ಮೂಡಿಬಂದಿದೆ ಎಂಬುದಾಗಿ ನಿಚ್ಚಳವಾಗಿ ಹೇಳಬಹುದು.  ಕಾದಂಬರಿಯ ನನ್ನ ಮಾತುವಿನಲ್ಲಿ ಅವರೇ ಹೇಳಿಕೊಂಡಂತೆ,  ” ಬಹುಶಃ ನಾನು ಹುಲ್ಲೂರಿನಂತಹ ಕುಗ್ರಾಮದಲ್ಲಿ ಹುಟ್ಟದೆ ಇದ್ದಿದ್ದರೆ ಅಥವಾ ಹಳ್ಳಿಯ ಸೂಕ್ಷ್ಮ ಬದುಕಿನ ಹಳವಂಡಗಳು,ಜೀವ ವಿರೋಧಿ ಸೈತಾನಿಗಳ ಶೋಷಣೆ, ಮನೋವಿಕಾರದ ಠೇಂಕಾರ,  ಶೋಷಿತರ ಚೀತ್ಕಾರಗಳು, ಸಾಮಾಜಿಕ ಸ್ಥಿತಿ ಬಿಂಬಗಳು ನನ್ನ ಅರಿವಿಗೆ ಬಾರದೆ ಇದ್ದರೆ ಈ ಗ್ರಾಮೀಣ ಬದುಕಿನ ಕೃತಿಯನ್ನು ಬರೆಯಲು ಆಗುತ್ತಿರಲಿಲ್ಲವೇನೋ”  ಎಂದಿದ್ದಾರೆ.         ಕಾದಂಬರಿಯಲ್ಲಿ ಹಳ್ಳಿಯ ವ್ಯಕ್ತಿ ಚಿತ್ರಣಗಳು ಮತ್ತು ಹಳ್ಳಿಯ ಬಹುತೇಕ ಅಕ್ಷರಸ್ಥರಲ್ಲದ ಕಾಲದ ಹಳ್ಳಿಯ ಸಮಾಜದ ಅನುಭವಗಳನ್ನು ಲೇಖಕರು ಗ್ರಹಿಸಿರುವುದು ಮಾತ್ರ ಅಭೂತಪೂರ್ವವಾಗಿದೆ.  ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಯ ಯಾವುದೇ ಕೆಲಸವನ್ನು ಮಾಡಲಾಗದೆ ಅತಂತ್ರ ಸ್ಥಿತಿಗೆ ಒಬ್ಬ ಉತ್ತಮ ಆಡಳಿತಗಾರನನ್ನು ತಳ್ಳುವಂತಹ ವ್ಯವಸ್ಥೆ ನಮ್ಮನ್ನೆಲ್ಲ ಇಲ್ಲಿ ಕಾಡುತ್ತದೆ.  ಇಂತಹ ಮಹತ್ವದ ಕೃತಿ ಬರೆಯಲು ಇಂತಹ ರಾಜಕೀಯವು ಇವರಿಗೆ ಸ್ಫೂರ್ತಿ   ಆಗಿದ್ದಿರಬಹುದು ಎಂದರು ತಪ್ಪಲ್ಲ.  ಸಂಸ್ಕೃತ ಕವಿವಿಶಾಖದತ್ತನ್ನು ಹೇಳುವಂತೆ, “ರಾಜಕಾರಣಿಯ ನೀತಿಗಳು ಅವನಲ್ಲಿ ತಲುಪುವ ಗುರಿಯಿಂದ ತಿಳಿಯುತ್ತದೆ ವಿನಃ ಅವನ ಮಾತಿನಿಂದಲ್ಲ”  ಎಂಬುದಕ್ಕೆ ಕಾದಂಬರಿಯ ರಾಜಕಾರಣಿ ದೇವರಾಯಪ್ಪನನ್ನು ಲೇಖಕರು ಚಿತ್ರಿಸಿರುವುದು ವಿಭಿನ್ನವಾಗಿ ಮೂಡಿಬಂದಿದೆ.          ಮಲ ಹೊರುವಂತಹ ಪದ್ಧತಿಯ ಆಯಗಾರರ ಕಥಾಹಂದರ ಹೊಂದಿರುವ ಈ ಕಾದಂಬರಿ ಎಷ್ಟೋ ದಶಕಗಳ ಹಿಂದಿನ ವಿಚಾರವಾದರೂ,ಲೇಖಕರ ಸೃಜನಶೀಲ ಚಿಂತಿಸುವಿಕೆಯ ಕಾರಣದಿಂದ ಹೊಸತನದಿಂದ ಮೂಡಿ ಬಂದಿದೆ.  ಆಯಗಾರರ ಜನರ ತಲ್ಲಣಗಳನ್ನು ಅರ್ಥೈಸಿಕೊಂಡ ಲೇಖಕರು ಈ ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಕಾದಂಬರಿಯಲ್ಲಿ ಬಹಳ ಹೆಣಗಾಡಿದ್ದಾರೆ ಅಂದರೆ, ಆ ಕಾಲದಲ್ಲಿ ಸಮಾಜದ ದುಸ್ಥಿತಿ ಹೇಗಿರಬಹುದೆಂದು ನಾವು ಊಹಿಸಿಕೊಳ್ಳಬಹುದು.  ಕೊನೆಗೂ ಅಂತಹ ಜಾತಿಗೊಂದು ಇದ್ದ ಕೆಟ್ಟ ಕಸುಬನ್ನು ಹೋಗಲಾಡಿಸುವಲ್ಲಿ ಮಾತ್ರ ಲೇಖಕರು ಗೆದ್ದಿದ್ದಾರೆ ಎನ್ನಬಹುದು. ಉಳಿದಂತೆ ಧರ್ಮ, ಜಾತಿಗಳ ಕೆಟ್ಟ ರಾಜಕೀಯದ ವ್ಯವಸ್ಥೆಗೆ ಜನಸಾಮಾನ್ಯರು ಶರಣಾಗುವ, ಬಲಿಯಾಗುವ ಹುಂಬತನವನ್ನು ಗೆಲ್ಲಲು ಆ ಕಾಲದಲ್ಲೂ, ಈ ಕಾಲದಲ್ಲೂ ಸಾಧ್ಯವಿಲ್ಲ ಎಂಬುದನ್ನು ಮನಗಾಣಿಸಿದ್ದಾರೆ. ಪರಸ್ಪರ ಮಾನವೀಯತೆ,ಪ್ರೀತಿ ಇಲ್ಲದೆ ಎರಡು ಧರ್ಮದವರು ವಿನಾಕಾರಣ ಸತ್ತಿರುವುದು ಕಾದಂಬರಿಯ ವಿಪರ್ಯಾಸವಾದರೂ ಧರ್ಮ,  ಜಾತಿಗಳ ಜಗಳದ ವಿರುದ್ಧ ಹೋರಾಟ ಬೇಕು ಎನ್ನುವ ಸಂದೇಶ ಕಾದಂಬರಿಯಲ್ಲಿದೆ.         ಇಮಾಮ್ ಸಾಹೇಬರಿಗೂ ಗೋಕುಲಾಷ್ಟಮಿಗು ಏನು ಸಂಬಂಧ?  ಎನ್ನುವ ಗಾದೆಯನ್ನು  ಹಲವಾರು ಸಂದರ್ಭದಲ್ಲಿ ನಾವು ಕೇಳಿಕೊಂಡು ಬಂದಿದ್ದೇವೆ. ಈ ಗಾದೆಯ ಹುಟ್ಟು ಮತ್ತು  ತಾತ್ಪರ್ಯ ನಮಗಿಲ್ಲಿ ಗೋಚರಿಸುತ್ತದೆ.  ನೂರು ವರ್ಷಗಳ ಕಾಲ ಬಾಳಿ ಬದುಕಿದ ಸಾಮರಸ್ಯದ ಕೊಂಡಿಯಾಗಿದ್ದ ಪವಾಡ ಪುರುಷನೆಂದು ಹೆಸರುವಾಸಿಯಾಗಿದ್ದ ಇಮಾಮ್ ಸಾಹೇಬರ ಸಮಾಧಿ ಸರ್ವ ಜನಾಂಗದ ಪೂಜನೀಯ ದರ್ಗವಾಗಿ ಉಳಿದುಕೊಂಡಿದೆ.  ಅದಕ್ಕೆ ಕಾರಣ ಹಿರೇಮಠದ ಗುರುಲಿಂಗೇಶ್ವರ ದೇವರ ಗದ್ದುಗೆಗೆ  ರುದ್ರಾಭಿಷೇಕ,ಬಿಲ್ವಾರ್ಚನೆ ಆಗಿ ದೇವರ ಮೆರವಣಿಗೆ ಮಾಡುತ್ತಾ ಊರಿನ ರಾಜಭೀದಿಯಲ್ಲಿ ಬಂದು ಇಮಾಮ್ ಸಾಹೇಬರ ಸಮಾಧಿ ಸ್ಥಳಕ್ಕೆ ಬರುತ್ತಾರೆ.  ಸ್ವತಃ ಇಮಾಮ ಸಾಹೇಬರು ಕ್ರಿಸ್ತ ಶಕ  1811ರಲ್ಲಿ ಪೈಗಂಬರ ವಾಸಿಯಾದ ನಂತರ ಇದು ಹೀಗೆ ಮುಂದುವರೆದುಕೊಂಡು ಬಂದಿದೆ. ಇಮಾಮ್ ಸಾಹೇಬರಿಗೆ ಬ್ರಿಟಿಷ್ ಅಧಿಕಾರಿ ಹರಕೆ ರೂಪದಲ್ಲಿ ಕುದುರೆಯನ್ನು ನೀಡಿರುವುದೇ ಗ್ರಾಮದಲ್ಲಿ ದರ್ಗಾಕ್ಕೆ ಕುದುರೆ ಬಿಡುವ ರೂಡಿಗೆ ಬಂದಿರುವ ಹಿನ್ನೆಲೆಯಾಗಿದೆ. ಕಾದಂಬರಿಯ ಹಳ್ಳಿ ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು.  ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಯವರೆಗು ಬಂದು,  ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ. ಇಂತಹ ವಿಪರ್ಯಾಸಗಳ ವೈರುಧ್ಯಗಳು ಪ್ರಾರಂಭವಾದ ಹಂತದ ಜನರ ಮನಸ್ಥಿತಿ ಕಾದಂಬರಿಯಲ್ಲಿ ಕಾಣಸಿಗುತ್ತದೆ.        ಹಿಂದಿನ ತಲೆಮಾರಿನಲ್ಲಿ ಇದ್ದಂತಹ ಧರ್ಮ, ಜಾತಿಯ ಅನ್ಯೋನತೆ ಹಂತ ಹಂತವಾಗಿ ಮುಂದಿನ ತಲೆಮಾರಿನವರಲ್ಲಿ ಹೇಗೆ ಮತ್ತು ಏಕೆ ಬದಲಾಗುತ್ತಾ ಹೋಯಿತು ಎನ್ನುವ ಚಿತ್ರಣವಿದೆ.  ಶಾಂತಿಪುರದ ನೂರು ವರ್ಷದ ಮುಗ್ಧ ಮನಸ್ಸಿನ ಗಡ್ಡಜ್ಜನ ಪಾತ್ರ ಮಾತ್ರ ಮಾರ್ಮಿಕವಾಗಿ ಮೂಡಿಬಂದಿದೆ. ಶಾಂತಿಪುರದ ಕಪ್ಪು ಬೆಳಕಿನ ಇತಿಹಾಸ ಪೂರ್ಣ ಪ್ರಮಾಣದಲ್ಲಿ ಗೊತ್ತಿದ್ದರೂ ಸಾಮರಸ್ಯ ಮರೆತ ಊರಿನ ಜನರಿಂದ ಆತನ ಮನಸ್ಸು ಘಾಸಿಯಾಗಿತ್ತು. ಹೊಲೆ ಮಾದಿಗರು ಇನ್ನಾದರೂ ಆಯಗಾರಕಿ ಬಿಡಬೇಕೆಂದು ಸರಕಾರ ಹೊಸ ಕಾಯಿದೆ ಮಾಡಿದರು, ಊರು ಅವರನ್ನು ಬಿಡಿಸಲು ಒಪ್ಪುತ್ತಿಲ್ಲ.  ಪ್ರಕಾಶನಂತಹ ಕ್ರಾಂತಿಕಾರಿಯ ಹುಟ್ಟು ಕೇರಿಯಿಂದ ಹೊರಬಂದಿರುವುದು ಒಂದು ವಿಶೇಷವಾದರೂ ಆತನ ಹಿರಿಯರೇ ವ್ಯವಸ್ಥೆಯ ಪರವಾಗಿದ್ದರು. ಹೀಗೆ ಊರಿನ ಪಟ್ಟಭದ್ರ ಹಿತಾಸಕ್ತಿಗಳ ಕೈ ಗೊಂಬೆಗಳಾಗಿರುವ ಜನರು ಒಳಿತು ಕೆಡುಕುಗಳ ಮಾನಸಿಕ ತುಮುಲಗಳಲ್ಲಿ  ತೊಯ್ದಾಡುವುದನ್ನು ನಿಬ್ಬೆರಗಾಗುವಂತೆ ಲೇಖಕರು ಚಿತ್ರಿಸಿದ್ದಾರೆ.  ಕಾದಂಬರಿಯಲ್ಲಿ ವಿಭಿನ್ನವಾಗಿ ನಿಲ್ಲುವ ಗುರಯ್ಯ ಗಾಂಧಿ ಅಜ್ಜ ಅವರು ಮಾನವೀಯ ಮೌಲ್ಯಗಳ ಮಾರಣ ಹೋಮ ನೋಡಿ ಹೊರಗಿನ ಕಾಡಿನ ಗುಡಿಗೆ ಹೋಗಿ ವಾಸ ಮಾಡಲು ಪ್ರಾರಂಭ ಮಾಡಿರುವುದು ನೋಡಿದರೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಮೂಡುವುದು ಸಹಜ.ಕಾದಂಬರಿಯುದ್ಧಕ್ಕೂ ನಮಗೆ ಲೇಖಕರ ಸೂಕ್ಷ್ಮ ಗ್ರಹಿಕೆಯ ಗುಣ ಪರಿಣಾಮಕಾರಿಯಾಗಿ ಮೂಡಿ ಬಂದಿರುವುದು ಸ್ಪಷ್ಟವಾಗುತ್ತದೆ. ತನ್ನ ಸುತ್ತಲೂ ನಡೆಯುತ್ತಿರುವ ಅಸ್ಪೃಶ್ಯತೆ, ಅನ್ಯಾಯ, ಗಾಳಿ ಸುದ್ದಿಗಳನ್ನು ಹಬ್ಬಿಸುವುದು, ಹೆಣ್ಣನ್ನು ಕೀಳಾಗಿ ನೋಡುವುದು ರಾಜಕಾರಣಿಗಳ ಭ್ರಷ್ಟಾಚಾರ ಇವುಗಳನೆಲ್ಲ ನೋಡಿ ಲೇಖಕರು ಖಂಡಿತ ಕಣ್ಣು ಮುಚ್ಚಿ ಕುಳಿತಿಲ್ಲ.  ಎಷ್ಟೋ ಹಳೆಯ ರಾಜಕೀಯ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಿಸಿದರು ಈಗಲೂ ನಮ್ಮ ರಾಜಕೀಯ ಹಾಗೆ ಇರುವುದು ವಿಪರ್ಯಾಸ.  ಎಲ್ಲಾ ಕೆಟ್ಟ ವ್ಯವಸ್ಥೆಗಳನ್ನು ಹಂತ ಹಂತವಾಗಿ ಕಾದಂಬರಿಯಲ್ಲಿ ಸರಿ ಮಾಡುತ್ತಾ ಹೋಗಲು ಪ್ರಯತ್ನಿಸಿರುವುದು ಕಾದಂಬರಿಯ ಹೆಚ್ಚುಗಾರಿಕೆ.  ಆದರೆ ಪ್ರಮುಖವಾಗಿ ಗುರಯ್ಯ ಗಾಂಧಿ ಒಬ್ಬರೇ ಜಾತ್ಯಾತೀತ ನಿಲುವಿನ ಆದರ್ಶನಾಗಿ ಸಮಾಜವನ್ನು ಬದಲಾಯಿಸಲು ನೋಡುತ್ತಾ ಹೋಗುತ್ತಾರೆ. ಆದರೆ ಒಬ್ಬರಿಂದ ಏನು ಸಾಧ್ಯ ಈಗಲೂ ಕೆಲವು ಹಳ್ಳಿಗಳಲ್ಲಿ ಧಾರ್ಮಿಕ ಭೇದವಿಲ್ಲದೆ ಜನರು ಬದುಕುತ್ತಿರುವ ಉದಾಹರಣೆಗಳು ನಮಗೆ ಸಿಗುತ್ತವೆ. ಒಟ್ಟಿನಲ್ಲಿ ಕಾದಂಬರಿ ಓದುವಾಗ ಮಾನವೀಯತೆ ಮಾತ್ರ ಮುಖ್ಯ ಉಳಿದದ್ದೆಲ್ಲ ನಗಣ್ಯ ಎನ್ನುವ ವಿಷಯನಮಗೂ ಮನವರಿಕೆಯಾಗುತ್ತದೆ.ಇದುವೇ ಕಾದಂಬರಿಯ ಉತ್ತಮ ಸಂದೇಶವು ಆಗಿದೆ.           ಲೇಖಕರು ಕಾದಂಬರಿಯಲ್ಲಿ ಬಳಸಿರುವ ಕನ್ನಡದ ಉಪಭಾಷೆಗಳ ಶಬ್ದಗಳು ಇಸಿ, ಚಿಟಬಿಲ್ಲಿ, ಹಸೇ ತಂಬಾಕ, ಹರಗುಣೀ, ಕೊರಿ ಚುಟ್ಟ, ಚಿಟ  ಬುರಸಿ, ವತ್ತೊಟ್ಟಿಗೆ, ಕಪ್ಪೂ ಬಸಿ, ಜುಲ್ಮಾನೆ, ಈಚೀ ಕಡಸೆ, ಒದರು ಇತ್ಯಾದಿ ಶಬ್ದಗಳು ತೇಜೋಹಾರಿಯಾಗಿದ್ದು  ಓದುಗರನ್ನು ಆಕರ್ಷಕವಾಗಿ  ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.  ಇದರೊಂದಿಗೆ ಅಪರೂಪದ ಗಾದೆ ಮಾತುಗಳು ನಮ್ಮೆಲ್ಲರ ಮನಸ್ಸನ್ನು ಪ್ರಮುಖವಾಗಿ ಗೆಲ್ಲುತ್ತದೆ.  ಹಳ್ಳಿಯಲ್ಲಿ ಆಗಿಂದಾಗೆ ಹುಟ್ಟಿದೆಯೇನೋ ಎನಿಸುವಂತಹ ಗಾದೆ ಮಾತುಗಳು ಬಲು ಚೆನ್ನಾಗಿವೆ. “ಖರ್ಜೂರ ಗಿಡದಾಗ ಹಣ್ಣು ಆದಾಗ ಕಾಗಿ ಬಾಯಿಗೆ ಹುಣ್ಣು”  ” ಚೆಲುವು ಚರ್ಮ ಇರುವ ತನಕ,ಗುಣ ಜೀವ ಇರೋ ತನಕ ” ಅಡೂರಾಗ  ಒಂದು ಗುಡೂರು ಅಂದಂಗ”  ”  ಬೆಕ್ಕಿಲ್ಲದ ಮನೆಯಾಗ ಇಲಿ ಲಗಾಟ ಹೊಡಿತಂತ  ಹಂಗಾತು,   ”  ಇಸ  ಕುಡಿದೇನಂದ್ರ ಕೈಯಾಗ ನಯಾ ಪೈಸೆ ಇಲ್ಲ ” ಇತ್ಯಾದಿಗಳು ತೇಜೋಹರಿಯಾಗಿದ್ದು ನಮ್ಮನ್ನು ಓದಲು ಪ್ರೇರೇಪಿಸುತ್ತವೆ.       ಕಾದಂಬರಿಯಲ್ಲಿ ತನ್ನದೇ ಆದ ಒಂದು ಸತ್ವ ಇದೆ. ಅಂದರೆ ಲೇಖಕರು ತನ್ನದೇ ನೆಲವನ್ನು ಧನ್ಯತಾ ಭಾವದಿಂದ ಸ್ಮರಿಸಿಕೊಂಡಿದ್ದಾರೇನೋ ಎನ್ನುವ ಒಳದನಿ ನಮ್ಮನ್ನು ಇಲ್ಲಿ ತಟ್ಟುತ್ತದೆ.  ಹಿಂದಿನ ಹಳ್ಳಿಯೊಂದರ ಚಿತ್ರಣಕ್ಕೆ ಸಾಕ್ಷಿ ಪ್ರಜ್ಞೆಯಾದ ಲೇಖಕರ ಧೋರಣೆಯನ್ನು ಇನ್ನು ಮುಂದೆಯೂ ಸಮಾಜ ಅಳವಡಿಸಿಕೊಂಡು ಹೋದರೆ ಇಮಾಮ್ ಸಾಹೇಬರ ಕುದುರೆ ಕೃತಿ ಸಾರ್ಥಕತೆ ಪಡೆದುಕೊಳ್ಳುತ್ತದೆ.  ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಲಭಿಸಿದೆ. ವೈ ಎಸ್ ಹರಗಿ ಅವರ ಈ ಕೃತಿ ಶಿರಸಿಯ ಶ್ರೀಗಂಗಾ ಪ್ರಕಾಶನದಿಂದ ಹೊರಬಂದಿದೆ.ಖ್ಯಾತನಾಮರಾದ ಡಾ. ಅಮರೇಶ ನುಗಡೋಣಿ, ಡಾ.  ಮಲ್ಲಿಕಾ ಘಂಟಿ ಇವರ ಮುನ್ನುಡಿಗಳೊಂದಿಗೆ,  ಅಪಾರ ರಘು ಇವರ ಮುಖಪುಟ ವಿನ್ಯಾಸದೊಂದಿಗೆ ತುಂಬಾ ಅಚ್ಚುಕಟ್ಟಾಗಿ ಹೊರಬಂದಿದೆ. ಈಗಾಗಲೇ ಅತ್ಯುತ್ತಮ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಇವರ ಮುಂದಿನ ಬರಹಗಳಿಗೆ ನಮ್ಮ ಶುಭಹಾರೈಕೆಗಳು.     ಸಂಗೀತ ರವಿರಾಜ್, ಚೆಂಬು.  

ವೈ .ಎಸ್.ಹರಗಿ ಅವರ ಕೃತಿ “ಇಮಾಮ್ ಸಾಹೇಬರ ಕುದುರೆ” ಒಂದು ಅವಲೋಕನ,‌ ಸಂಗೀತ ರವಿರಾಜ್ Read Post »

ಇತರೆ

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ.

ಕಾವ್ಯ ಸಂಗಾತಿ ದಯಾನ೦ದ ಎಂ ಪಾಟೀಲ. “ಹೆಗಲಿಗೆ ಹೆಗಲಾದ ನಮ್ಮಪ್ಪ.” ಅಪ್ಪ ತಾತ್ಯಾ ದಾದಾ ಡ್ಯಾಡ ಹೆಸರುಗಳಿಂದ ಕೂಡಿದ ತ೦ದೆ ಸ್ಟಾಭಿಮಾನಿ ಹಾಗೂ ನಿಸ್ವಾರ್ಥ ಪರೋಪಕಾರಿ ಜೀವಿಯೆ೦ದರೆ ತಪ್ಪಗಲಾರದು. ಹಗಲು ರಾತ್ರಿಯೆನ್ನದೇ ತನ್ನ ಕುಟುಂಬ ಗೋಸ್ಕರ ದುಡಿಯುತ್ತಾನೆ.ಬೇನೆ ಬಾಸರಿಕೆ ಇದ್ದರೂ ಕೂಡ ತನ್ನ ಮಕ್ಕಳು ಉಪವಾಸವನವಾಸ ಇರಬಾರದು ತಾನು ಉಪವಾಸ ಇದ್ದರೂ ಕೂಡ ಹೆ೦ಡತಿ ಮಕ್ಕಳಿಗೆ ಪ್ರತಿ ನಿತ್ಯ ಅವಶ್ಯಕತೆ ಪೂರೈಕೆ ಮಾಡುತ್ತಾನೆ. ತಾನು ಹರಿದ ಬಟ್ಟೆ ತೊಟ್ಟಿದ್ದರೂ ತನ್ನ ಮಕ್ಕಳು ಹೊಸ ಹೊಸ ಬಟ್ಟೆ ತೊಡಬೇಕು ತನ್ನ ಹತ್ತಿರ ಸಾದಾ ಪೋನ ಇದ್ದರೂ ಮಕ್ಕಳ ಹತ್ತಿರ IPOne ಇರಬೇಕು ತಾನು ಹಳಸಿದ ಅನ್ನ ತಿ೦ದರೂ ತನ್ನ ಮಕ್ಕಳು ಒಳ್ಳೆಯ ಆಹಾರ ತಿನ್ನಬೇಕು. ಪ್ರತಿಯೊಂದು ಕಾರಣಕ್ಕೂ ಒ೦ದೊಂದು ಕಣ್ಣೀರು ಕಥೆ ಇದೆ.ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ತಂದೆ ಹಿಮಾಲಯ ಪರ್ವತ ಇದ್ದ೦ತೆ ಇಡೀ ಕುಟುಂಬವನ್ನು ಕಾಪಾಡುವನು ಅವನೇ ಹೊಲದಲ್ಲಿ ಕಾರ್ಮಿಕರಿಂದ ಹಿಡಿದು ನಾನಾ ತರಹದ ಉದ್ಯೋಗ ಪತಿಗಳು ಸರ್ಕಾರಿ ನೌಕರರು ಹಿಡಿದು ಉನ್ನತ ಸ್ಥಾನಮಾನದಲ್ಲಿ ಅಧಿಕಾರಿಗಳು ಇಡೀ ಕುಟುಂಬದ ಜವಾಬ್ದಾರಿ ಹೊರುವ ತಂದೆ ಆಗಿರುತ್ತಾರೆ. ತ೦ದೆಯಾದವನು ಜೀವನ ಪಾತ್ರವನ್ನು ನಿರ್ವಹಣೆ ಮಾಡುತ್ತಾ ಇರುತ್ತಾನೆ. ಶಾಲೆ ಅಥವಾ ಪದವಿ ಶಿಕ್ಷಣಗೆ ಕಳಿಸಿ ಬರುವ ವೆಚ್ಚ ನಷ್ಟ ಬರಿಸುತ್ತಾ ಮಕ್ಕಳು ಶಿಕ್ಷಣ ಮುಗಿಸಿದ ಬಳಿಕ ಸ್ವಂತ ಸ್ವಾಲಂಬನೆ ಸಾಧಿಸುತ್ತಾರೆ. ಮಕ್ಕಳು ಸಹ ತಂದೆ ತಾಯಿಯ ಕಷ್ಟಕ್ಕೆ ಆಗುವುದು ಇಲ್ಲ ಚಿಕಿತ್ಸೆಗೆ ದಿನ ನಿತ್ಯ ದಿನಸಿಗೆ ಹಣ ಕೊಡುವುದೇ ಇಲ್ಲ. ಮಕ್ಕಳ ಕಷ್ಟಕ್ಕೆ ನೆರವು ನೀಡುವ ಅಪ್ಪ ಅದೇ ಮಕ್ಕಳು ಅಪ್ಪನಿಗೆ ಸಹಾಯ ಮಾಡುವುದು ಇಲ್ಲ.ನಯಾ ಪೈಸೆ ಕೊಡುವುದು ಇಲ್ಲ ಅಪ್ಪಂದಿರು ಜೀವನ ಪರ್ಯಾಂತ ಮಕ್ಕಳ ಗೋಸ್ಕರ ಜೀವ ಹಾಗೂ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ತಂದೆಯ ಕಣ್ಣೀರು ಒರಿಸುವುದು ಇಲ್ಲವೇ ಇಲ್ಲ ಇಂತಹ ಮಕ್ಕಳು ಜಾಲಿ ಮರಕ್ಕೆ ಸಮ. ಅಪ್ಪ ಯೆಂದರೆ ಹಠವಾದಿ ಸ್ವಾಭಿಮಾನಿ ಹೊರಗಿನ ಕಡೆ. ಸಾಲ ಮಾಡದೇ ಅಭಿಮಾನದಿಂದ ಜೀವನ ಮಾಡುವ ಅಪ್ಪನಿಂದ ಕಲಿಯಬೇಕಾಗಿದೆ. ಸಿಟ್ಟು ಏಕೆ? ಬರುತ್ತೆ ಗೊತ್ತೆ? ತನ್ನ ಮೇಲೆ ಶೋಷಣೆ ಅನ್ಯಾಯ ಮೋಸ ದಬ್ಬಾಳಿಕೆ ನಡೆದಾಗ ಹೋರಾಟ ಮಾಡುತ್ತಾನೆ. ಮಕ್ಕಳು ಸಹ ಚನ್ನಾಗಿ ನೋಡಿಕೊಳ್ಳಬೇಕು. ಕಣ್ಣಿನ ರಪ್ಪೆಯ0ತೆ ಕಾಪಾಡಬೇಕುಅಪ್ಪ ಎಂಬವಸ್ತು ಕಳೆದು ಹೋದರೆ ಮತ್ತೆ ಸಿಗುವುದೇಇಲ್ಲ. ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನುಮನೆಯಿಂದ ಹೊರಗೆ ಹಾಕುವಕೆಟ್ಟ ಚಾಳಿ ಹೆಚ್ಚಾಗುವುದು ವಿಷಾದನೀಯ ಹಾಗೂ ಖಂಡನೀಯ ಇಡೀ ಮಾನವಕುಲ ತಲೆ ತೆಗಿಸುವ೦ತಅನೇಕ ಘಟನೆಗಳು ದೇಶದ ಅನೇಕ ಭಾಗದಲ್ಲಿ ನಡೆದಿವೆ ನಡೆಯುತ್ತಿವೆ. ನೋಡಿದಾಗ ಸಮಾಜ ಯತ್ತ ಸಾಗಿದೆ ಒಮ್ಮೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ. ಇದು ಹೆಚ್ಚಾಗಿ ವಿದ್ಯಾವಂತರಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಕಣ್ಣಾರೆ ನೋಡುತ್ತಿದ್ದೇವೆ. ಹಣ ಆಸ್ತಿ ಹೆಂ ಡರು ಮಕ್ಕಳು ಅಷ್ಟೆ ತಂದೆ ತಾಯಿ ಸಂಬಂಧಿಕರು ಬೇಡವೇ ಬೇಡ…ದಾರಿಗೆದಾರಿಯಾಗಿ ಕತ್ತಲಿನಿಂದ ಬೆಳಕು ತೋರಿಸಿದನಿವೃತ ಶಿಕ್ಷಕರಾದ ಮಲ್ಲಪ್ಪಾ ಬಿರಾದಾರ ಪಾಟೀಲಯವರಿಗೆ ಈ ಪುಟ್ಟ ಕವನ ಅರ್ಪಣೆ.ನನ್ನಪ್ಪ…ಗಾಳಿ ಬಿರುಗಾಳಿಯಲ್ಲಿ ಮಿ೦ಚು ಸಿಡಿಲಿನಂತೆ ಬೆರೆತು ಹೋದ ನನ್ನಪ್ಪ.ಹೆಜ್ಜೆ ಹೆಜ್ಜೆಯಲ್ಲಿ ಕಣ ಕಣದಲ್ಲಿ ಬೆರೆತು ಹೋದ ನನ್ನಪ್ಪ..ನಾಡಿನಾಡಿಯಲ್ಲಿ ಹೃದಯ ಹೃದಯದಲ್ಲಿ ಬೆರೆತು ಹೋದ ನನ್ನಪ್ಪ..ಜೀವ ಜೀವದಲ್ಲಿ ಮನ ಮನದಲ್ಲಿ ಬೆರೆತು ಹೋದ ನನ್ನಪ್ಪ…ದುಡಿಮೆಯಲ್ಲಿ ತ್ಯಾಗದ ಜೊತೆ ಬೆರೆತು ಹೋದ ನನ್ನಪ್ಪ..ಉಸಿರು ಉಸಿರಲ್ಲಿ ನೋವು ಸಂತೋಷದಲ್ಲಿ ಬೆರೆತು ಹೋದ ನನ್ನಪ್ಪ..ಆಕಾಶದಲ್ಲಿ ಕಾಣುವ ನಕ್ಷತ್ರದಂತೆ ಹುಣ್ಣಿಮೆಯ ಚಂದ್ರನಂತೆ ಬೆರೆತು ಹೋದ ನನ್ನಪ್ಪ..ಅಕ್ಷರಗಳು ನೂರಾರು ಸಾಲುಗಳು ಸಾವಿರಾರು ಸಾಲಿನಲ್ಲಿ ಬೆರೆತು ಹೋದ ನನ್ನಪ್ಪ…ತ್ಯಾಗದಲ್ಲಿ ಕರ್ಣನಂತೆ ಕಾಯಕದಲ್ಲಿ ಬೆರೆತು ಹೋದ ನನ್ನಪ್ಪ..ಭೂ ತಾಯಿಯ ಮಡಿಲಲ್ಲಿ ಮಣ್ಣಾದನನ್ನಪ್ಪಇ೦ಥ ಸ್ವಾರ್ಥ ಜೀವನ ಹೆಚ್ಚಾಗಿರುವುದು ಅಪ್ಪನ ಅಸ್ತಿ ಬೇಕು ಆದರೆ ತಂದೆ ತಾಯಿ ಬೇಡ ಇಂಥೆಂಥ ಮಕ್ಕಳು ಇದ್ದಾವೆ ನೋಡಿ. ಕಳೆದ 20 ವರುಷಗಳ ಹಿಂದಿನ ಅವಲೋಕನ ನೋಡಿದಾಗ ತಂದೆಗೆ ಒಳ್ಳೆಯ ಸ್ಥಾನಮಾನ ನೀಡಿದ್ದರು. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರು. ಹಿರಿಯರು ಕಿರಿಯರು ಭೇದ ಭಾವ ಇರುತ್ತಿರಲಿಲ್ಲ ಮದುವೆ ಮುಂಜಿ ಕಾರ್ಯಕ್ರಮ ಹಿರಿಯರ ಮುಂದಾಳುತನದಲ್ಲಿ ಮಾಡುತ್ತಿದ್ದರು. ಹೀಗೆ ಹಿಂದಿನ ಹಾಗೂ ಇಂದಿನ ಇತಿಹಾಸ ನೋಡಿದರೆ ಅಜಜಾಂತರ.ಮಠಾಧಿಪತಿಗಳು ತಿದ್ದುವ ಕಾಯ೯ ಮಾಡಬೇಕಾಗಿದೆ… ಲೇಖಕರು. ದಯಾನ೦ದ ಎಂ ಪಾಟೀಲ.ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ. Read Post »

ಇತರೆ, ಜೀವನ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್

ಅನುಭವ ಸಂಗಾತಿ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ ಕವಿತಾ ಶ್ರೀನಿವಾಸ್‌ ನಾಯಕ್ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ  ನಾನು ಲೇಖಕಿಯಾಗಿ ನನ್ನ ಕ್ಯಾನ್ಸರ್ ಚಿಕಿತ್ಸೆಯ ಅನುಭವವನ್ನು ನಾನೇ ಬರೆಯುವ ಪರಿಸ್ಥಿತಿ. ನನ್ನ ಕ್ಯಾನ್ಸರ್ ಪಯಣದಲ್ಲಿ ಸಾಕಷ್ಟು ಅನುಭವಗಳಾಗಿವೆ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.ಮೊದಲಿಗೆ ಕಿಮೋಥೆರಪಿ, ನಂತರ ಶಸ್ತ್ರಚಿಕಿತ್ಸೆ. ತದನಂತರ ಬಂದದ್ದು ರೆಡಿಯೇಷನ್ ಥೆರಪಿ.ನನಗೆ ಮೊದಲು ರೆಡಿಯೇಷನ್ ಥೆರಪಿ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ವೈದ್ಯರು ರೆಡಿಯೇಷನ್ ಥೆರಪಿ ಮಾಡಬೇಕೆಂದು ಹೇಳಿದಾಗ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಯೂಟ್ಯೂಬ್‌ನಲ್ಲಿ ಹುಡುಕಿದೆ. ಅಲ್ಲಿ ಸ್ವಲ್ಪಮಟ್ಟಿನ ಮಾಹಿತಿ ಸಿಕ್ಕಿತು. ಆದರೆ ನಿಜವಾದ ಅನುಭವ ಚಿಕಿತ್ಸೆ ಪಡೆಯಲು ಹೋದಾಗಲೇ ತಿಳಿಯಿತು.ಮೊದಲು ಸಿಟಿ ಸ್ಕ್ಯಾನ್ ಮಾಡಿ, ವೈದ್ಯರು ನಿಗದಿಪಡಿಸಿದ ದಿನಕ್ಕೆ ರೆಡಿಯೇಷನ್ ಥೆರಪಿಗಾಗಿ ಹೋದೆ. ಮೊದಲ ದಿನ ಸ್ವಲ್ಪ ಸಮಯ ಕಾಯಬೇಕಾಯಿತು. ನನ್ನ ಸರದಿ ಬಂದಾಗ ಅವರು ನೀಡಿದ ವಸ್ತ್ರ ಧರಿಸಿ ರೆಡಿಯೇಷನ್ ಕೊಠಡಿಗೆ ಹೋದೆ.ಅದು ವಿಶಾಲವಾದ, ಎಸಿ ಇರುವ ಕೊಠಡಿ. ಮಧ್ಯದಲ್ಲಿ ರೆಡಿಯೇಷನ್ ಯಂತ್ರ. ಮೊದಲ ಬಾರಿ ನೋಡಿದಾಗ, ಯಾವುದೋ ಹೊಸ ಲೋಕಕ್ಕೆ ಬಂದಂತಾಯಿತು!ಚಳಿಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ಬೆಡ್‌ಶೀಟ್ ನೀಡಿದರು. ಮೊದಲ ದಿನ ವೈದ್ಯರು, ದಾದಿಯರು ಹಾಗೂ ರೆಡಿಯೇಷನ್ ಸಿಬ್ಬಂದಿ ನನ್ನ ರೆಡಿಯೇಷನ್ ನೀಡಬೇಕಾದ ಭಾಗವನ್ನು ಪರಿಶೀಲಿಸಿ, ಎಲ್ಲವನ್ನೂ ಸರಿಯಾಗಿ ಹೊಂದಿಸಿದರು. ನಂತರ ರೆಡಿಯೇಷನ್ ಯಂತ್ರ ತಿರುಗಲು ಆರಂಭಿಸಿತು.ಆ ಸಮಯದಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ನೋವು ಅಥವಾ ವಿಶೇಷ ಅನುಭವವಾಗುವುದಿಲ್ಲ. ಆರಾಮವಾಗಿ ಮಲಗಿಕೊಂಡೇ ಇರಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯೂ ಬರಬಹುದು. ಆದರೆ ರೆಡಿಯೇಷನ್ ನಡೆಯುವ ಸಂದರ್ಭದಲ್ಲಿ ನಮ್ಮ ದೇಹವನ್ನು ಅಲುಗಾಡಿಸದೆ ಸ್ಥಿರವಾಗಿರಬೇಕು.ಸಕಾರಾತ್ಮಕವಾಗಿ ಹೇಳಬೇಕೆಂದರೆ, ನಾನು ಆ ಸಮಯವನ್ನೂ ಒಳ್ಳೆಯ ರೀತಿಯಲ್ಲಿಯೇ ಕಳೆದಿದ್ದೇನೆ. ರೆಡಿಯೇಷನ್ — ಕ್ಯಾನ್ಸರ್ ಹೋರಾಟಗಾರರ ಮಿತ್ರರೆಡಿಯೇಷನ್ ಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ. ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರೆಡಿಯೇಷನ್ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯ ಭಾಗವಾಗಿರಬಹುದು; ಕೆಲವೊಮ್ಮೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಬಳಸಲಾಗುತ್ತದೆ.ನನ್ನ ಅನುಭವದಲ್ಲಿ ರೆಡಿಯೇಷನ್ ಪಡೆಯುವ ಸಂದರ್ಭದಲ್ಲಿ ಯಾವುದೇ ವಿಶೇಷ ಸಮಸ್ಯೆಯಾಗಲಿಲ್ಲ. ಅಲ್ಲಿನ ವೈದ್ಯರು ಹಾಗೂ ರೆಡಿಯೇಷನ್ ಸಿಬ್ಬಂದಿ ಬಹಳ ಅಕ್ಕರೆಯಿಂದ ಪ್ರತಿಯೊಂದನ್ನೂ ಮಾಡುತ್ತಿದ್ದರು. ಅವರ ಮಾತು, ಕಾಳಜಿ ಮತ್ತು ಧೈರ್ಯ ತುಂಬುವ ರೀತಿಯೇ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿತ್ತು.ನಾನು ಚಿಕಿತ್ಸೆ ಪಡೆಯುವುದರ ಜೊತೆಗೆ ಅಲ್ಲಿಗೆ ಬರುವ ಇತರ ಕ್ಯಾನ್ಸರ್ ಚಿಕಿತ್ಸಕರಿಗೂ, “ರೆಡಿಯೇಷನ್ ಬಗ್ಗೆ ಭಯಪಡಬೇಡಿ. ಧೈರ್ಯವಾಗಿ ಬನ್ನಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಮಾತನಾಡಿ ಅವರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ.ರೆಡಿಯೇಷನ್ ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ವೈದ್ಯರು ಮೊದಲೇ ವಿವರವಾಗಿ ತಿಳಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಚಿಕಿತ್ಸೆ ನೀಡುವ ಭಾಗ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಗನುಗುಣವಾಗಿ ಅನುಭವ ಬದಲಾಗಬಹುದು.ನನ್ನದು ಸ್ತನ ಕ್ಯಾನ್ಸರ್ ಆಗಿದ್ದರಿಂದ ನನ್ನ ಗಂಟಲಿನವರೆಗೂ ರೆಡಿಯೇಷನ್ ಚಿಕಿತ್ಸೆ ನೀಡಬೇಕಾಯಿತು. ಅದರ ಪರಿಣಾಮವಾಗಿ ನನಗೆ ಸುಮಾರು ಎರಡು ತಿಂಗಳು ಗಂಟಲು ನೋವಿನ ಸಮಸ್ಯೆ ಇತ್ತು. ಆ ಸಮಯದಲ್ಲಿ ನೀರಾಹಾರ ಸೇವಿಸುತ್ತಿದ್ದೆ. ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳು ಇರಲಿಲ್ಲ.ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಚಿಕಿತ್ಸೆಯ ಅನುಭವವೂ ವಿಭಿನ್ನವಾಗಿರಬಹುದು. ಆದ್ದರಿಂದ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.ಭಯ ಬೇಡ… ಧೈರ್ಯದಿಂದ ಮುಂದೆ ಸಾಗೋಣಕ್ಯಾನ್ಸರ್ ಎಂಬ ಪದ ಕೇಳಿದಾಗ ಭಯ ಸಹಜ. ರೆಡಿಯೇಷನ್ ಥೆರಪಿ ಎಂದಾಗಲೂ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಆದರೆ ತಿಳುವಳಿಕೆ, ವೈದ್ಯರ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ಭಯವನ್ನು ಕಡಿಮೆ ಮಾಡಬಹುದು.ನನ್ನ ಅನುಭವದಲ್ಲಿ ರೆಡಿಯೇಷನ್ ಥೆರಪಿ ನನಗೆ ಭಯ ಹುಟ್ಟಿಸಿದ ಚಿಕಿತ್ಸೆಯಾಗಿರಲಿಲ್ಲ. ಅದು ನನ್ನ ಕ್ಯಾನ್ಸರ್ ಹೋರಾಟದ ಮತ್ತೊಂದು ಪ್ರಮುಖ ಹಂತವಾಗಿತ್ತು.ಆದ್ದರಿಂದ ರೆಡಿಯೇಷನ್ ಥೆರಪಿ ಪಡೆಯಬೇಕಾದ ಪ್ರತಿಯೊಬ್ಬ ಕ್ಯಾನ್ಸರ್ ಹೋರಾಟಗಾರರಿಗೂ ನನ್ನ ಒಂದೇ ಮಾತು—ಭಯಪಡಬೇಡಿ… ಧೈರ್ಯದಿಂದ ಮುಂದೆ ಬನ್ನಿ.ವೈದ್ಯರ ಮಾತು ಕೇಳಿ, ಚಿಕಿತ್ಸೆಯ ಮೇಲೆ ನಂಬಿಕೆ ಇಡಿ.ಪ್ರತಿಯೊಂದು ದಿನವೂ ನಾವು ಗೆಲುವಿನತ್ತ ಇಡುವ ಮತ್ತೊಂದು ಹೆಜ್ಜೆ ಎಂದು ಭಾವಿಸಿ.ಕ್ಯಾನ್ಸರ್ ಪಯಣ ಕಷ್ಟವಾದರೂ, ಧೈರ್ಯ, ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ದೊಡ್ಡ ಶಕ್ತಿ.  ಕವಿತಾ ಶ್ರೀನಿವಾಸ ನಾಯಕ್ರೇಡಿಯೇಷನ್ ಥೆರಪಿ: ನನ್ನ ಅನುಭವ ಕಾರ್ಕಳ, ಉಡುಪಿ ಜಿಲ್ಲೆ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್ Read Post »

You cannot copy content of this page

Scroll to Top