ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ”

ಕಾವ್ಯ ಸಂಗಾತಿ ಅರುಣಾ ನರೇಂದ್ರ /ವೈ.ಎಂ.ಯಾಕೊಳ್ಳಿ “ಗಜಲ್‌ ಜುಗಲ್‌ ಬಂದಿ”. ಅವಳನ್ನು ಸದಾ ಮೆಚ್ಚಿಸುವ ಸಾಲುಗಳ ಎಲ್ಲಿಂದ ತರಲಿಅವಳ ಚಿತ್ತ ನನ್ನತ್ತ ಹೊರಳಿಸುವ ಮಾತುಗಳ ಎಲ್ಲಿಂದ ತರಲಿ ನುಡಿಯುವ ವೀಣೆಯ ತಂತಿಗಳು ಹರಿದು ಜಖಂಗೊಂಡಿವೆಒಲವ ಆಲಾಪ ಹೊರಹೊಮ್ಮಿಸುವ ರಾಗಗಳ ಎಲ್ಲಿಂದ ತರಲಿ ಅವಳು ನನ್ನ ನೋಡಿಯೂ ನೋಡದಂತೆ ನಡೆದಿದ್ದಾಳೆತಡೆದು ನಿಲ್ಲಿಸಿ ನಗಿಸುವ ಚಟಾಕಿಗಳ ಎಲ್ಲಿಂದ ತರಲಿ ಶತಮಾನದ ವಿರಹ ಎದೆಯನ್ನೇ ಸುಡುತಿದೆ ಹೇಳಲಿ ಹೇಗೆಅವಳನ್ನು ನಂಬಿಸುವ ನೂರು ದಾಖಲೆಗಳ ಎಲ್ಲಿಂದ ತರಲಿ ಜೋಗಿ ತನಗಾಗಿ ಹಂಬಲಿಸುತ್ತಾನೆಂದು ಅವಳಿಗೂ ಗೊತ್ತಿದೆಅವಳನು ಮಂಜಂತೆ ಕರಗಿ ನೀರಾಗಿಸುವ ಚಳಕಗಳ ಎಲ್ಲಿಂದ ತರಲಿ ವೈ ಎಂ ಯಾಕೊಳ್ಳಿ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತೆಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾ ಕೊರಗುತ್ತಾಳೆಂದು ಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ              

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ” Read Post »

ಕಥಾಗುಚ್ಛ

ಸರಸ್ವತಿ ಕೆ ನಾಗರಾಜ್ ಅವರಕಥೆ “ಪರಿವರ್ತನೆ”

ಕಥಾ ಸಂಗಾತಿ ಸರಸ್ವತಿ ಕೆ ನಾಗರಾಜ್ “ಪರಿವರ್ತನೆ” ಒಂದು ಹಳ್ಳಿಯಲ್ಲಿ ರಾಹುಲ್ ಎಂಬ ಹುಡುಗನಿದ್ದ. ಅವನು ಯಾವಾಗಲೂ ತನ್ನ ಅದೃಷ್ಟವನ್ನು ದೂಷಿಸುತ್ತಿದ್ದ. “ನನಗೆ ಅವಕಾಶಗಳು ಸಿಗುವುದೇ ಇಲ್ಲ” ಎಂದು ಬೇಸರಪಡುತ್ತಿದ್ದ.ಒಂದು ದಿನ ಅವನು ತೋಟದಲ್ಲಿ ನಡೆಯುತ್ತಿದ್ದಾಗ ಒಂದು ಸಣ್ಣ ಮರಿಹುಳವನ್ನು ಕಂಡನು. ಅದು ನಿಧಾನವಾಗಿ ಎಲೆಗಳ ಮೇಲೆ ಹತ್ತುತ್ತಿತ್ತು. ಕೆಲವು ದಿನಗಳ ನಂತರ ಅದೇ ಹುಳು ತನ್ನನ್ನು ತಾನು ಗೂಡಿನೊಳಗೆ ಸುತ್ತಿಕೊಂಡಿತು.ರಾಹುಲ್ ಪ್ರತಿದಿನ ಅದನ್ನು ನೋಡುತ್ತಿದ್ದ. “ಇದು ಈಗ ಏನೂ ಮಾಡುತ್ತಿಲ್ಲ” ಎಂದುಕೊಂಡನು. ಆದರೆ ಕೆಲ ದಿನಗಳ ನಂತರ ಆ ಗೂಡು ಒಡೆದು, ಅದರಿಂದ ಬಣ್ಣಬಣ್ಣದ ಸುಂದರ ಚಿಟ್ಟೆ ಹೊರಬಂತು.ಆ ಚಿಟ್ಟೆ ಆಕಾಶದಲ್ಲಿ ಹಾರಾಡುವುದನ್ನು ಕಂಡ ರಾಹುಲ್ ಆಶ್ಚರ್ಯಪಟ್ಟ. ಆಗ ಅವನಿಗೆ ಒಂದು ಸತ್ಯ ಅರ್ಥವಾಯಿತು. ಪರಿವರ್ತನೆಗೆ ಸಮಯ, ಸಹನೆ ಮತ್ತು ಪ್ರಯತ್ನ ಬೇಕು. ಹೊರಗೆ ಏನೂ ನಡೆಯದಂತೆ ಕಂಡರೂ, ಒಳಗೆ ದೊಡ್ಡ ಬದಲಾವಣೆಗಳು ನಡೆಯುತ್ತಿರುತ್ತವೆ.ಆ ದಿನದಿಂದ ರಾಹುಲ್ ತನ್ನನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ. ದೂರು ಹೇಳುವುದನ್ನು ಬಿಟ್ಟು, ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡತೊಡಗಿದ. ಕೆಲವು ತಿಂಗಳುಗಳ ನಂತರ ಅವನು ತನ್ನ ಓದಿನಲ್ಲಿ, ನಡತೆಯಲ್ಲಿ ಮತ್ತು ಜೀವನದಲ್ಲಿ ದೊಡ್ಡ ಯಶಸ್ಸನ್ನು ಕಂಡನು.ರಾಹುಲನ ಜೀವನದಲ್ಲಿ ಬಂದ ಆ ಬದಲಾವಣೆ ನಿಧಾನವಾಗಿದ್ದರೂ, ಅದು ತುಂಬಾ ಗಟ್ಟಿಯಾಗಿತ್ತು. ಈಗ ಅವನು ಪ್ರತಿಯೊಂದು ಸಮಸ್ಯೆಯನ್ನು ಸೋಲಾಗಿ ನೋಡದೆ, ಹೊಸ ಪಾಠವಾಗಿ ಸ್ವೀಕರಿಸುತ್ತಿದ್ದ.ಒಂದು ದಿನ ಹಳ್ಳಿಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಹಿಂದೆಂದೂ ಜನರ ಮುಂದೆ ಮಾತನಾಡಲು ಹೆದರುತ್ತಿದ್ದ ರಾಹುಲ್, ಈ ಬಾರಿ ಧೈರ್ಯದಿಂದ ವೇದಿಕೆಯ ಮೇಲೆ ನಿಂತ. ತನ್ನ ಅನುಭವಗಳನ್ನು ಹಂಚಿಕೊಂಡಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.ಅವನ ಯಶಸ್ಸನ್ನು ನೋಡಿ ಅನೇಕ ಯುವಕರು ಪ್ರೇರಣೆ ಪಡೆದರು. “ಬದಲಾವಣೆ ಸಾಧ್ಯ” ಎಂಬ ನಂಬಿಕೆ ಅವರಲ್ಲೂ ಮೂಡಿತು. ರಾಹುಲ್ ಅವರಿಗೆ ಒಂದು ಮಾತು ಹೇಳುತ್ತಿದ್ದ:“ಚಿಟ್ಟೆಯಾಗುವ ಮೊದಲು ಹುಳವೂ ಅನೇಕ ಕಷ್ಟಗಳನ್ನು ಎದುರಿಸಿತ್ತು. ಆದ್ದರಿಂದ ಕಷ್ಟ ಬಂದಾಗ ಹೆದರಬೇಡಿ; ಅದು ನಿಮ್ಮ ಪರಿವರ್ತನೆಯ ಆರಂಭವಾಗಿರಬಹುದು.”ವರ್ಷಗಳು ಕಳೆದವು. ಒಮ್ಮೆ ತನ್ನ ಅದೃಷ್ಟವನ್ನು ದೂಷಿಸುತ್ತಿದ್ದ ರಾಹುಲ್, ಈಗ ಇತರರಿಗೆ ಆಶಾಕಿರಣವಾಗಿದ್ದ. ಅವನ ಜೀವನವೇ ಒಂದು ಸಂದೇಶವಾಗಿ ಮಾರ್ಪಟ್ಟಿತು —“ಪರಿಸ್ಥಿತಿಗಳು ನಮ್ಮನ್ನು ಬದಲಾಯಿಸುವುದಿಲ್ಲ; ನಾವು ಬದಲಾಗಲು ತೆಗೆದುಕೊಳ್ಳುವ ನಿರ್ಧಾರವೇ ನಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ.ಕಾಲ ಮುಂದೆ ಸಾಗುತ್ತಲೇ ಇತ್ತು. ರಾಹುಲನ ಹೆಸರು ಈಗ ಹಳ್ಳಿಯ ಗಡಿಯನ್ನು ದಾಟಿ ಸುತ್ತಮುತ್ತಲಿನ ಊರುಗಳಲ್ಲಿಯೂ ಕೇಳಿಬರುತ್ತಿತ್ತು. ಆದರೆ ಅವನ ಯಶಸ್ಸು ಅವನನ್ನು ಅಹಂಕಾರಿಯಾಗಿಸಲಿಲ್ಲ. ಅವನು ಇನ್ನೂ ಅದೇ ಸರಳತೆ ಮತ್ತು ವಿನಯವನ್ನು ಉಳಿಸಿಕೊಂಡಿದ್ದ.ಒಂದು ದಿನ ಒಬ್ಬ ಯುವಕ ಅವನ ಬಳಿಗೆ ಬಂದು ಕೇಳಿದ, “ಅಣ್ಣಾ, ನೀವು ಇಷ್ಟು ಬದಲಾಗಲು ಕಾರಣವೇನು?”ರಾಹುಲ್ ಮುಗುಳ್ನಗುತ್ತಾ ಉತ್ತರಿಸಿದ, “ನನ್ನ ಜೀವನವನ್ನು ಬದಲಿಸಿದುದು ದೊಡ್ಡ ಅವಕಾಶಗಳಲ್ಲ, ಪ್ರತಿದಿನ ನಾನು ತೆಗೆದುಕೊಂಡ ಸಣ್ಣ ನಿರ್ಧಾರಗಳು.”ಆ ಮಾತು ಯುವಕನ ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿತು. ಅವನೂ ತನ್ನ ಜೀವನವನ್ನು ಹೊಸದಾಗಿ ಆರಂಭಿಸಿದ.ಹೀಗೆ ಒಂದು ಕಾಲದಲ್ಲಿ ತನ್ನೊಳಗಿನ ಬೆಳಕನ್ನು ಹುಡುಕುತ್ತಿದ್ದ ರಾಹುಲ್, ಈಗ ನೂರಾರು ಜನರ ಬದುಕಿನಲ್ಲಿ ಬೆಳಕನ್ನು ಹಚ್ಚುವ ದೀಪವಾಗಿದ್ದ. ಅವನ ಕಥೆ ಎಲ್ಲರಿಗೂ ಒಂದು ಸತ್ಯವನ್ನು ನೆನಪಿಸುತ್ತಿತ್ತು:“ಬೀಜವು ಮಣ್ಣಿನೊಳಗೆ ಹೂತುಹೋಗುವುದು ಅದರ ಅಂತ್ಯವಲ್ಲ; ಅದು ಹೊಸ ಬದುಕಿನ ಆರಂಭ. ಹಾಗೆಯೇ ಜೀವನದ ಕಷ್ಟಗಳೂ ನಮ್ಮನ್ನು ಮುರಿಯಲು ಅಲ್ಲ, ಬೆಳೆಸಲು ಬರುತ್ತವೆ.”ಆ ದಿನದಿಂದ ಹಳ್ಳಿಯ ಜನರು ಒಂದು ಮಾತನ್ನು ಆಗಾಗ ಹೇಳುತ್ತಿದ್ದರು:“ಪರಿವರ್ತನೆ ಎಂಬುದು ರೂಪ ಬದಲಾವಣೆಯಲ್ಲ; ಮನಸ್ಸು ಅರಳುವ ಪಯಣ.” ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಅವರಕಥೆ “ಪರಿವರ್ತನೆ” Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-25 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ನೇತ್ರ ಚಿಕಿತ್ಸೆ ಶಿಬಿರ ೧೯೫೦ ಮತ್ತು೧೯೫೧ ರ ಸಮಯ…….ಈ ಅವಧಿಯಲ್ಲಿ ಜಯದೇವಿ ತಾಯಿಯವರು ಕೈಗೊಂಡ ನೇತ್ರ ಚಿಕಿತ್ಸಾ ಶಿಬಿರಗಳು ಆ ಕಾಲದ ಸಾಮಾಜಿಕ ಸೇವೆಯ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿದವು.  ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದ ಸಾವಿರಾರು ಬಡಜನರಿಗೆ ಚಿಕಿತ್ಸೆ ದೊರೆಯುವುದು ಅತ್ಯಂತ ಕಷ್ಟಕರವಾಗಿದ್ದ ಸಮಯ ಅಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಪ್ರಸಿದ್ಧ ನೇತ್ರತಜ್ಞರಾದ ಡಾ.ಎಮ.ಸಿ.ಮೋದಿ ಅವರನ್ನು ಆಹ್ವಾನಿಸಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದರು. ಆ ಕಾಲದಲ್ಲಿ ಕಾಚಬಿಂದು, ಮೇಲ್ವಿಂದು, ಕಣ್ಣಿನ ಸೋಂಕುಗಳು, ಓರೆಕಣ್ಣು ಹಾಗೂ ಇತರ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರು ಚಿಕಿತ್ಸೆಯ ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ನೋವನ್ನು ಅರಿತ ಜಯದೇವಿ ತಾಯಿಯವರು *ಜನಸೇವೆಯೇ ದೇವಸೇವೆ* ಎಂಬ ಧ್ಯೇಯದೊಂದಿಗೆ ಈ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದರು. ಒಂದು ವಾರ ಕಾಲ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು ,೩000 ಜನರಿಗೆ ಕಾಚಬಿಂದು, ಮೇಲ್ವಿಂದು, ಹೂತುಂಬುವಿಕೆ ಹಾಗೂ ಓರೆಕಣ್ಣು ಸರಿಪಡಿಸುವಂತಹ ಚಿಕಿತ್ಸೆಗಳು ನೀಡಲಾಯಿತು. ಅಲ್ಲದೆ ೨,000ಕ್ಕೂ ಹೆಚ್ಚು ಜನರಿಗೆ ನೇತ್ರ ಪರೀಕ್ಷೆ, ಔಷಧೋಪಚಾರ ಮತ್ತು ಸಲಹೆಗಳನ್ನು ಒದಗಿಸಲಾಯಿತು. ಕಣ್ಣಿನ ತೊಂದರೆಗಳಿಂದ ನರಳುತ್ತಿದ್ದ ಜನರಿಗೆ ಈ ಶಿಬಿರ ಹೊಸ ಆಶಾಕಿರಣವಾಗಿ ಪರಿಣಮಿಸಿತು. ತೀವ್ರ ಸಮಸ್ಯೆ ಹೊಂದಿದ್ದ ೪೫ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಷ್ಟೇ ಅಲ್ಲದೆ ೩೭೫ ಜನರಿಗೆ ವಿವಿಧ ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆಗಳೂ ನೆರವೇರಿಸಲ್ಪಟ್ಟವು. ಆ ಕಾಲದ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸಾ ಕಾರ್ಯ ನಡೆಯುವುದು ನಿಜಕ್ಕೂ ಅಸಾಧಾರಣ ಸಾಧನೆಯಾಗಿತ್ತು.ಈ ಮಹತ್ಕಾರ್ಯದಲ್ಲಿ ಶ್ರೀ ಎಂ.ಪಿ. ಪಾಟೀಲರು ಹಾಗೂ ಶ್ರೀ ಪಠಣೆ ಅವರು ಜಯದೇವಿ ತಾಯಿಯವರೊಂದಿಗೆ ಕೈಜೋಡಿಸಿದರು. ಶಿಬಿರಕ್ಕೆ ಆಗಮಿಸಿದ ರೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಒಟ್ಟು ೫೭೮೦ ಜನರಿಗೆ ಹಾಸಿಗೆ, ಹೊದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು.  ದೂರದ ಊರುಗಳಿಂದ ಬಂದ ಜನರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಅದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಯಾವುದೇ ಕೊರತೆ ಉಂಟಾಗದಂತೆ ಜಯದೇವಿ ತಾಯಿಯವರು ಸ್ವತಃ ಮೇಲ್ವಿಚಾರಣೆ ವಹಿಸಿದ್ದರು. ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಆಹಾರ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಸೇವಾಭಾವ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿಯ ಅಪೂರ್ವ ಉದಾಹರಣೆಯಾಗಿ ಈ ಶಿಬಿರಗಳು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವು.  ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸಾವಿರಾರು ಜನರು ಮತ್ತೆ ಬೆಳಕನ್ನು ಕಂಡರು. ಅನೇಕರ ಜೀವನದಲ್ಲಿ ಹೊಸ ಆಶಾಭರವೂ ಮೂಡಿತು. ಜಯದೇವಿ ತಾಯಿಯವರ ಜನಪರ ಕಾಳಜಿ, ದಯೆ ಮತ್ತು ಸೇವಾ ಮನೋಭಾವದ ಜೀವಂತ ಸಾಕ್ಷಿಯಾಗಿ ಈ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ. (ಸಹಕಾರ ಚಳುವಳಿ)೧೯೫೧ರ ಸಮಯದಲಿ‌‌… ಇನ್ನೊಂದಡೆ ಭಾರತವು ಸ್ವಾತಂತ್ರ್ಯವಾಗಿ   ರಾಜಕೀಯವಾಗಿ ಸ್ವತಂತ್ರವಾಗಿದ್ದರೂ, ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಭಾಷೆ, ಧರ್ಮ, ಜಾತಿ, ವೃತ್ತಿ ಹಾಗೂ ಪ್ರಾಂತಗಳ ಆಧಾರದ ಮೇಲೆ ಜನರು ವಿಭಜಿತರಾಗಿದ್ದರು. ಒಂದೇ ದೇಶದ ಪ್ರಜೆಗಳಾಗಿದ್ದರೂ ಪರಸ್ಪರ ಭಿನ್ನಾಭಿಪ್ರಾಯಗಳು, ಪ್ರಾಂತೀಯತೆ ಮತ್ತು ಮತೀಯ ಭಾವನೆಗಳು ಸಮಾಜದಲ್ಲಿ ಬೇರೂರಿದ್ದವು. ಇಂತಹ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಮರಸ್ಯ ಅತ್ಯಗತ್ಯ ಎಂಬುದನ್ನು ಜಯದೇವಿ ತಾಯಿಯವರು ಮನಗಂಡರು.ಈ ಹಿನ್ನೆಲೆಯಲ್ಲಿ ಅವರು *ಸಹಕಾರ ಚಳುವಳಿ* ಯನ್ನು ಜನಜಾಗೃತಿಯ ಸಾಧನವಾಗಿ ಬಳಸಿದರು. “ನಾವು ಮೊದಲು ಭಾರತೀಯರು, ನಂತರ ಭಾಷಿಕರು, ಮತೀಯರು ಅಥವಾ ಪ್ರಾಂತೀಯರು” ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿದರು. ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಸಂವಾದಗಳನ್ನು ನಡೆಸಿದರು. *ಸಹಕಾರವಿರೆ ಮನೆಯು | ಸಹಕಾರವಿದೆ ಮಠವುಸಹಕಾರವಿದೆ ಬದುಕು ಬಾಳುವೆ – ತಿಳಿಯಣ್ಣ,ಸಹಕಾರದಿಂದಲೇ ಸರ್ಕಾರವು.||* ಈ ಅರ್ಥಪೂರ್ಣ ವಚನವನ್ನು ಜಯದೇವಿ ತಾಯಿಯವರು ತಮ್ಮ ಜೀವನದ ಆದರ್ಶವನ್ನಾಗಿಸಿಕೊಂಡಿದ್ದರು. ಮನುಷ್ಯನ ಬದುಕಿನಲ್ಲಿ ಸಹಕಾರಕ್ಕೆ ಪರ್ಯಾಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಒಂದು ಕುಟುಂಬ ಸುಖವಾಗಿ ನೆಮ್ಮದಿಯಿಂದ ಇರಬೇಕಾದರೆ ಪರಸ್ಪರ ಸಹಕಾರ ಅಗತ್ಯ. ಒಂದು ಮಠ, ಸಂಘ ಅಥವಾ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ನಡುವೆ ಅನ್ಯೋನ್ಯತೆ ಮತ್ತು ಒಗ್ಗಟ್ಟು ಇರಬೇಕು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರ ಸಹಕಾರ, ಪರಸ್ಪರ ವಿಶ್ವಾಸ ಮತ್ತು ಒಮ್ಮತದ ಮೇಲೆ ನಿಂತಿರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಿತನಾಗಿ, ಪ್ರಾಮಾಣಿಕನಾಗಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದರು. ವ್ಯಕ್ತಿಯ ಉದಾತ್ತ ಗುಣಗಳೇ ಸಂಘಟನೆಗಳ ಶಕ್ತಿಯಾಗುತ್ತವೆ ಎಂದು ಅವರು ನಂಬಿದ್ದರು. ಅಹಂಕಾರ, ಸ್ವಾರ್ಥ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಕೈಜೋಡಿಸಿದಾಗ ಮಾತ್ರ ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವೆಂದು ತಿಳಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಅದು ಹೃದಯಗಳನ್ನು ಜೋಡಿಸುವ ಮಾನವೀಯ ಮೌಲ್ಯ. ಒಬ್ಬರ ದುಃಖದಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆನ್ನೆಲುಬಾಗುವುದು, ಸಮಾಜದ ಹಿತಕ್ಕಾಗಿ ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು…. ಇವೆಲ್ಲವೂ ಸಹಕಾರದ ನಿಜವಾದ ರೂಪಗಳೆಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ಅವರು ಸಹಕಾರ ಚಳವಳಿಯ ಬೆಳವಣಿಗೆಯನ್ನು ಕಂಡು ಹರ್ಷಿಸುತ್ತಾ, *”ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ,ನೂರಕ್ಕೆ ಸಾವಿರಾರು ಸಹಕಾರದ ಬಳ್ಳಿ ಹಬ್ಬಲಿ!* ಎಂದು ಹೃದಯಪೂರ್ವಕವಾಗಿ ಹಾರೈಸುತ್ತಿದ್ದರು. ಸಹಕಾರದ ಬೀಜವು ಪ್ರತಿಯೊಂದು ಮನಸ್ಸಿನಲ್ಲಿ ಮೊಳಕೆಯೊಡೆದು, ಅದರ ಬಳ್ಳಿ ಊರುಗಳಿಂದ ನಗರಗಳಿಗೆ, ಕುಟುಂಬಗಳಿಂದ ಸಮಾಜಕ್ಕೆ, ಸಮಾಜದಿಂದ ರಾಷ್ಟ್ರದವರೆಗೆ ವ್ಯಾಪಿಸಲಿ ಎಂಬುದು ಅವರ ಕನಸಾಗಿತ್ತು. ಒಗ್ಗಟ್ಟು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದಲೇ ಸಮೃದ್ಧ ಸಮಾಜ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಹಕಾರ ಸಂಘಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕೆಂದು ಒತ್ತಿಹೇಳಿದರು.ಆ ಸಮಯದಲ್ಲಿ ದೇಶದ ಗಡಿಭಾಗಗಳ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿದ್ದವು. ಆದ್ದರಿಂದ ತಾಯಿಯವರು ಜನರಿಗೆ, “ಮೊದಲು ದೇಶದ ಗಡಿಗಳನ್ನು ಭದ್ರಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸೋಣ. ನಂತರ ಭಾಷಿಕ ಪ್ರಾಂತಗಳ ಬೇಡಿಕೆಗಳನ್ನು ಶಾಂತಿಯುತವಾಗಿ ಚರ್ಚಿಸೋಣ” ಎಂದು ಕರೆ ನೀಡಿದರು. ಭಾಷೆಯ ಹೆಸರಿನಲ್ಲಿ ಸಂಘರ್ಷ ಮಾಡುವುದಕ್ಕಿಂತ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದು ತಿಳಿಸಿದರು.ಅವರು ನಡೆಸಿದ ಸಭೆಗಳಲ್ಲಿ ಕನ್ನಡಿಗರು, ಮರಾಠಿಗರು, ತೆಲುಗಿಗರು, ಉರ್ದು ಭಾಷಿಕರು ಸೇರಿದಂತೆ ವಿವಿಧ ಸಮುದಾಯದ ಜನರು ಭಾಗವಹಿಸುತ್ತಿದ್ದರು. ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೋಧಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದರು. ಸಹಕಾರ ಸಂಘಗಳ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ, ಸಮುದಾಯದ ಸಮಸ್ಯೆಗಳನ್ನು ಸಮೂಹವಾಗಿ ಪರಿಹರಿಸುವ ಮಾರ್ಗವನ್ನು ತೋರಿಸಿದರು. ಜಯದೇವಿ ತಾಯಿಯವರ ಈ ಪ್ರಯತ್ನಗಳು   ರಾಷ್ಟ್ರ ನಿರ್ಮಾಣದ ಕಾರ್ಯವಾಗಿತ್ತು. ವಿಭಜನೆಯತ್ತ ಸಾಗುತ್ತಿದ್ದ ಸಮಾಜವನ್ನು ಒಗ್ಗಟ್ಟಿನ ದಾರಿಯಲ್ಲಿ ನಡೆಸುವ ಅವರ ಸಂಕಲ್ಪವು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಭಾಷೆ, ಧರ್ಮ ಮತ್ತು ಜಾತಿಯ ಭೇದಗಳನ್ನು ಮೀರಿ ಮಾನವೀಯತೆ ಹಾಗೂ ರಾಷ್ಟ್ರೀಯತೆಯ ಭಾವನೆಗಳನ್ನು ಬಲಪಡಿಸಿದ ಅವರ ಸೇವೆ ಇಂದಿಗೂ ಆದರ್ಶಪ್ರಾಯವಾಗಿದೆ. “ಹಾಗೆಯೇ ಅವರಿಗೆ ತಾಯಿ ಭಾಷೆಯ ಮೇಲಿನ ಪ್ರೇಮವೂ ಅಪಾರವಾಗಿತ್ತು. ವಿಶೇಷವಾಗಿ ಕನ್ನಡದ ಮೇಲಿನ ಅವರ ಅಭಿಮಾನ ಮತ್ತು ತಾಯ್ನುನುಡಿ ಮೇಲಿನ ಗೌರವ ಅಚಲವಾಗಿತ್ತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಅವರು ನಂಬಿದ್ದರು. ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.  ಕನ್ನಡವೆಂದರೆ ಅವರಿಗೆ ಜೀವದಷ್ಟೇ ಪ್ರೀತಿ. ಕನ್ನಡದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಅವರ ಹೃದಯದಲ್ಲಿ ಸದಾ ಜಾಗೃತವಾಗಿತ್ತು. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ ಎಂಬ ದೃಢ ನಂಬಿಕೆಯೊಂದಿಗೆ ಅವರು ಭಾಷಾ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. *ಜಯದೇವಿ ತಾಯಿಯವರಿಗೆ ಕನ್ನಡ ಅವರ ಉಸಿರಾಗಿದ್ದರೆ, ಇತರ ಭಾಷೆಗಳು ಅವರ ಹೃದಯದ ಆತ್ಮೀಯ ಅತಿಥಿಗಳಾಗಿದ್ದವು.* ಕನ್ನಡವನ್ನು ಅವರು ಎಷ್ಟು ಪ್ರೀತಿಸುತ್ತಿದ್ದರೋ, ಅಷ್ಟೇ ಗೌರವ ಮತ್ತು ಆದರವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ನೀಡುತ್ತಿದ್ದರು. ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ಅವುಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಆಸ್ವಾದಿಸುತ್ತಿದ್ದರು. ಆದರೆ ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ತಿರಸ್ಕರಿಸುವುದಲ್ಲ ಎಂಬುದನ್ನು ಅವರು ಸದಾ ಹೇಳುತ್ತಿದ್ದರು. ‘ಪ್ರತಿಯೊಬ್ಬರಿಗೂ ಅವರ ತಾಯಿಭಾಷೆ ತಾಯಿಯಂತೆಯೇ. ಕನ್ನಡಿಗನಿಗೆ ಕನ್ನಡ ಹೇಗೆ ಅಮೂಲ್ಯವೋ, ಮರಾಠಿಗನಿಗೆ ಮರಾಠಿ, ಹಿಂದಿ ಭಾಷಿಕನಿಗೆ ಹಿಂದಿಯೂ ಅಷ್ಟೇ ಅಮೂಲ್ಯ. ತಮ್ಮ ತಾಯಿಭಾಷೆಯನ್ನು ಗೌರವಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅವರು ಪ್ರೀತಿಯಿಂದ ತಿಳಿಸುತ್ತಿದ್ದರು. *ಭಾಷೆಗಳು ಮನುಷ್ಯರನ್ನು ಬೇರ್ಪಡಿಸಲು ಅಲ್ಲ, ಹೃದಯಗಳನ್ನು ಜೋಡಿಸಲು* ಎಂಬುದು ಅವರ ನಂಬಿಕೆಯಾಗಿತ್ತು. ನುಡಿ ಭಾಷೆಯ ಮೇಲೆ ಹೆಮ್ಮೆ ಇಟ್ಟುಕೊಂಡು, ಇತರರ ತಾಯ್ನುಡಿಯನ್ನು ಸಹ ಗೌರವಿಸುವ ವಿಶಾಲ ಮನೋಭಾವವನ್ನು ಅವರು ಜೀವನದುದ್ದಕ್ಕೂ ಪಾಲಿಸಿದರು. ಭಾಷೆಗಳ ನಡುವೆ ಗೋಡೆಗಳನ್ನು ಕಟ್ಟದೆ, ಪ್ರೀತಿ ಮತ್ತು ಪರಸ್ಪರ ಗೌರವದ ಸೇತುವೆಗಳನ್ನು ನಿರ್ಮಿಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು.( ಮುಂದುವರೆಯುವುದು) ಸವಿತಾ ದೇಶಮುಖ

Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬಾಳ ಸಂತೆಯೊಳಗೆ ಭಾವಗಳನ್ನು ಬಿಕರಿಗಿಡಲಾಗಿದೆಮೋಸ ಹೋದ ಹೃದಯಗಳನ್ನು ಹರಾಜಿಗಿಡಲಾಗಿದೆ ಪ್ರೀತಿ ಪ್ರೇಮಗಳೆಲ್ಲವೂ ಸಹಿತ ಆಟದ ವಸ್ತುಗಳಾಗಿವೆಹಾರೋ ಹಕ್ಕಿಗಳ ಪಂಜರದೊಳಗೆ ಬಂಧಿಸಿಡಲಾಗಿದೆ ದೂರಾದವರ ಬಗ್ಗೆ ದೂರನು ಕೊಡವುದಾದರೂ ಹೇಗೆ?ಸುತ್ತಿದ ಗಿಡಮರ ಬೆಟ್ಟಗುಡ್ಡದ ಸಾಕ್ಷಿ ನಿರಾಕರಿಸಲಾಗಿದೆ ಮುಖಕ್ಕಷ್ಟೇ ಅಲ್ಲ ಮನಸಿಗೂ ಬಣ್ಣವ ಬಳಿಯಲಾಗಿದೆದೋಸೆಯಷ್ಟೇ ಸಲೀಸಾಗಿ ಮಾತನು ತಿರುಚಿಡಲಾಗಿದೆ ಕುಂಬಾರನ ಎದೆಕಲಶದ ತುಂಬಾ ಪರಿಶುದ್ಧ ಪ್ರೀತಿಯಿದೆಸುಖಾಸುಮ್ಮನೆ ಅನುಮಾನದ ಬೀಜ ಎದೆಗಿಳಿಸಲಾಗಿದೆ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ “ಸ್ಪಂದನ” ಮುಂಜಾನೆಯ ಮಂಜಿನಲಿ ಪ್ರಕೃತಿನಾಟ್ಯವಾಡುತ ಬಂದಳೇಅಂಜುತ್ತಾ ಅಳುಕುತ್ತಾ ಇಳೆಯಸೌಂದರ್ಯ ನೋಡಿ ನಿಂದಳೇ ಜೀವನದ ಅನಿತ್ಯತೆ ಅರೆಕ್ಷಣ ಬಂದುಹೋಗುವ ಮಿಂಚಿನಂತೆಕವಿಹೃದಯ ಮಿಡಿಯುತಿದೆ ಮೆಲ್ಲನೆಎದೆಯ ಸಂವಹನದಂತೆ ಕೊಳಲ ಕರೆಯಲಿ ಅದೆಂತಹ ಉತ್ಕೃಷ್ಟಪ್ರೇಮದ ಉತ್ಕಟತೆಕೇಳಿದಷ್ಟೂ ತಳಮಳ ಅಂತರಾಳದಲಿಬೇಕಿದೆ ಕ್ಷಮತೆ ಮಿಲನದ ಹೂರಣ ತುಂಬಿಟ್ಟೆ ಮನದಿಸವಿಯುವ ಆಕಾಂಕ್ಷೆಸಲಿಲದ ಬಿಂದುವಾಗಿ ಹರಿಯುತಬೇಡುವೆ ಒಲವ ಬಿಕ್ಷೆ ಬಚ್ಚಿಟ್ಟ ಭಾವದ ಪೆಟ್ಟಿಗೆಯ ಕಾಯುತ್ತಾಕುಳಿತಿರುವೆ ತೆರೆಯಲುಮುಚ್ಚಿಟ್ಟ ಬೆಚ್ಚನೆಯ ಮಾತುಗಳ ನಿರೀಕ್ಷೆಒಲುಮೆಯ ಎರೆಯಲು ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ” Read Post »

ಇತರೆ, ಜೀವನ

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ

ಕಾವ್ಯ ಸಂಗಾತಿ ವನಜಾ ಮಹಾಲಿಂಗಯ್ಯ “ಹಳ್ಳಿಗಳಲ್ಲು ಸಂಬಂಧಗಳ ಬಿರುಕು” “ಒಂದೇ ಹೊಟ್ಟೆಯಲ್ಲಿ ಹುಟ್ಟಿದರೂ  ಒಂದೇ ಮನಸ್ಥಿತಿಇಲ್ಲ” ಎನ್ನುವ ಮಾತು ಇಂದು ಹಳ್ಳಿಯ ಪ್ರತಿ ಕೇರಿಯಲ್ಲೂ ಕೇಳಿಬರುತ್ತಿದೆ. ಅಣ್ಣ-ತಮ್ಮಂದಿರು ಮುಖ ನೋಡದಂತೆ ಆಗಿದ್ದಾರೆ, ಅಕ್ಕಪಕ್ಕದ ಮನೆಯವರು ಬೇಲಿ ಮೇಲೆ ಜಗಳಕ್ಕೆ ನಿಲ್ಲುತ್ತಾರೆ. ಹಿಂದೆ ಕಷ್ಟ ಬಂದಾಗ ಊರೇ ಒಂದಾಗಿ ನಿಲ್ಲುತ್ತಿದ್ದ ಕಾಲ ಈಗ ಕಥೆಯಾಗಿದೆ. ಯಾಕೆ ಹೀಗಾಯ್ತು? 1. ಹಿಂದಿನ ಹಳ್ಳಿ:  ಒಂದು ಕುಟುಂಬದಂತೆ  50 ವರ್ಷಗಳ ಹಿಂದೆ ಹಳ್ಳಿ ಎಂದರೆ ದೊಡ್ಡ ಅವಿಭಕ್ತ ಕುಟುಂಬ. ಜಮೀನು ಹೆಚ್ಚಿತ್ತು, ಆಸೆ ಕಡಿಮೆ ಇತ್ತು. ಸುಗ್ಗಿ ಬಂತೆಂದರೆ ಎಲ್ಲರೂ ಸೇರಿ ಕೆಲಸ. ಮದುವೆ-ಮುಂಜಿ ಊರ ಹಬ್ಬ. “ನನ್ನದು” ಎನ್ನುವುದಕ್ಕಿಂತ “ನಮ್ಮದು” ಎನ್ನುವ ಭಾವನೆ ಗಟ್ಟಿಯಾಗಿತ್ತು. ಅಣ್ಣ ದೊಡ್ಡವನು, ತಮ್ಮ ಚಿಕ್ಕವನು – ಹಿರಿತನಕ್ಕೆ ಬೆಲೆ ಇತ್ತು. ಮನೆಯಲ್ಲಿ ಸಾಂಬಾರ್ ಮುಗಿದರೆ “ಒಂದು ಲೋಟ ಸಾಂಬಾರ್ ಕೊಡಮ್ಮ”  ಬೆಂಕಿಕಡ್ಡಿ ಖಾಲಿಯಾದರೆ ಒಂದೆರಡು ಬೆಂಕಿಕಡ್ಡಿ ಕೊಡಮ್ಮ ಅಂತ ಪಕ್ಕದ ಮನೆಯಲ್ಲಿ ಕೇಳಲು  ನಾಚಿಕೆ ಇರಲಿಲ್ಲ. ಏಕೆಂದರೆ ನಾಳೆ ಅವರಿಗೂ ಬೇಕಾಗಬಹುದು ಎನ್ನುವ ವಾಸ್ತವ ಅರಿವಿತ್ತು. ಕಷ್ಟ-ಸುಖ ಹಂಚಿಕೊಂಡರೆ ಹಗುರವಾಗುತ್ತದೆ ಎನ್ನುವ ಜೀವನಪಾಠವನ್ನು ಹೆತ್ತವರು ಹೇಳಿಕೊಡುತ್ತಿದ್ದರು. 2. ಬಿರುಕು ಬಿಡಲು ಕಾರಣವೇನು?  ಭೂಮಿ ಸಣ್ಣದಾಯ್ತು, ಆಸೆ ದೊಡ್ಡದಾಯ್ತು  10 ಎಕರೆ 4 ಮಕ್ಕಳಿಗೆ ಹಂಚಿದರೆ ತಲಾ 2.5 ಎಕರೆ. ಈಗ ಅದೇ 2.5 ಎಕರೆ 3 ಮೊಮ್ಮಕ್ಕಳಿಗೆ ಹಂಚಬೇಕು. ಭೂಮಿ ತುಂಡಾದಂತೆ ಮನಸ್ಸುಗಳೂ ತುಂಡಾಗುತ್ತಿವೆ. “ಅವನಿಗೆ ರಸ್ತೆ ಬದಿ ಜಾಗ ಕೊಟ್ಟರು, ನನಗೆ ಬಂಜರು” ಎನ್ನುವ ಲೆಕ್ಕಾಚಾರ ಶುರುವಾಯ್ತು. * ದುಡ್ಡು ಬಂತು, ದುರಹಂಕಾರ ತಂದಿತು  ಒಬ್ಬ ಮಗ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ ಲಕ್ಷ ಸಂಪಾದಿಸಿದರೆ, ಹಳ್ಳಿಯಲ್ಲಿರುವ ತಮ್ಮನಿಗೆ ಕೀಳರಿಮೆ. “ನಾನು ಮಣ್ಣಲ್ಲಿ ದುಡಿದರೆ ಅವನು ಫ್ಯಾನ್ ಕೆಳಗೆ” ಎನ್ನುವ ಹೊಟ್ಟೆಕಿಚ್ಚು. ಹಬ್ಬಕ್ಕೆ ಬಂದವನು ಕಾರು ತೊಳೆಯುವಾಗ ಅಣ್ಣನ ಟ್ರ್ಯಾಕ್ಟರ್ ಮೂಲೆ ಸೇರುತ್ತದೆ. * ಮೂರನೇ ದನಿ ಜೋರಾಯ್ತು  ಹಿಂದೆ ಮನೆಯ ತೀರ್ಮಾನವನ್ನು ಹಿರಿಯರು ಮಾಡುತ್ತಿದ್ದರು. ಈಗ ಸೊಸೆ-ಅಳಿಯಂದಿರ ಮಾತು ಮನೆಯೊಳಗೆ ಬೆಂಕಿ ಹಚ್ಚುತ್ತದೆ. “ನಿಮ್ಮ ತಮ್ಮನ ಹೆಂಡತಿ ಹಾಗಂದ್ಲು”  ಅತ್ತೆ ಮಾವ ಅವಳನ್ನು ಮಾತ್ರ ಪ್ರೀತಿಯಿಂದ ಮಾತನಾಡಿಸುತ್ತಾರೆ,ಎಂಬ ಒಂದು ಚಾಡಿ ಮಾತು 40 ವರ್ಷದ ಸಂಬಂಧವನ್ನು ಮುರಿಯುತ್ತದೆ. *  ಕಾಲವಿಲ್ಲ, ಕ್ಷಮೆಯೂ ಇಲ್ಲ  ಮೊದಲು ಸಂಜೆ ಎಲ್ಲರೂ ಕಟ್ಟೆಯ ಮೇಲೆ ಸೇರುತ್ತಿದ್ದರು. ಮಾತುಕತೆಯಲ್ಲಿ ತಪ್ಪು ತಿಳುವಳಿಕೆ ಕರಗುತ್ತಿತ್ತು. ಈಗ ಎಲ್ಲರ ಕೈಯಲ್ಲಿ ಮೊಬೈಲ್. ಪಕ್ಕದ ಮನೆಯಲ್ಲಿ ಸಾವು ಆದರೆ ಸ್ಟೇಟಸ್ ಹಾಕಿ ಸುಮ್ಮನಾಗುತ್ತೇವೆ, ಹೆಗಲು ಕೊಡಲು ಸಮಯವಿಲ್ಲ. 3. ಕಳೆದುಕೊಂಡಿದ್ದೇನು?  ನಾವು ಬರೀ ಸಂಬಂಧ ಕಳೆದುಕೊಳ್ಳಲಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡೆವು. ಕೋರ್ಟ್-ಕಚೇರಿ ಅಲೆದು ದುಡ್ಡು, ಆರೋಗ್ಯ ಎರಡೂ ಹಾಳು. ಮಕ್ಕಳಿಗೆ “ಚಿಕ್ಕಪ್ಪ” ಎಂದರೆ ಕೋರ್ಟ್‌ನಲ್ಲಿ ಕಾಣುವ ಶತ್ರು ಎನ್ನುವ ಚಿತ್ರಣ ಕೊಡುತ್ತಿದ್ದೇವೆ. ಹಬ್ಬ ಬಂದರೂ ಅಡುಗೆ ಮನೆಗೆ 4 ಜನ ಸೇರುವುದಿಲ್ಲ. 4. ಮತ್ತೆ ಒಂದು ಮಾಡುವುದು ಹೇಗೆ?  ಬದಲಾವಣೆ ಸರ್ಕಾರದಿಂದ ಬರಲ್ಲ, ನಮ್ಮ ಮನೆಯ ಒಳಗಿಂದಲೇ ಬರಬೇಕು.   ವಾರಕ್ಕೊಮ್ಮೆ 1 ಗಂಟೆ ಫೋನ್ ದೂರ ಇಟ್ಟು ಮನೆಯವರೆಲ್ಲ ಕೂತು ಮಾತಾಡಿ.   ತಂದೆ-ತಾಯಿ ಇದ್ದಾಗ ಅವರ ಮಾತೇ ಅಂತಿಮವಾಗಿರಬೇಕು. ಅವರು ಹೋದ ಮೇಲೆಅಣ್ಣನ ಸ್ಥಾನ ದೊಡ್ಡದು.  ಪಾರದರ್ಶಕತೆ ಇರಬೇಕು.ಆಸ್ತಿ, ದುಡ್ಡಿನ ವಿಷಯದಲ್ಲಿ ಮುಚ್ಚುಮರೆ ಬೇಡ. ಎಲ್ಲರೂ ಕೂತು ಬರೆದಿಟ್ಟುಕೊಳ್ಳಿ.  ಯಾರಿಂದಲಾದರೂ ತಪ್ಪಾದಾಗ “ಅವನೇ ಮೊದಲು ಬರಲಿ” ಎನ್ನುವ ಅಹಂ ಬಿಡಿ. ನೀವು ಒಂದು ಹೆಜ್ಜೆ ಇಟ್ಟರೆ ಅವನು 2 ಹೆಜ್ಜೆ ಇಡುತ್ತಾನೆ.  ಅಪ್ಪ ಅಮ್ಮಮಕ್ಕಳಿಗೆ ಮಾದರಿ ನಾವು ಅಣ್ಣ-ತಮ್ಮಂದಿರು ಜಗಳವಾಡಿದರೆ ನಾಳೆ ನಮ್ಮ ಮಕ್ಕಳೂ ಹಾಗೇ ಆಗುತ್ತಾರೆ.   ಕೊನೆಯ ಮಾತು  ಹಳ್ಳಿ ಎಂದರೆ ಮಣ್ಣಿನ ವಾಸನೆ ಮಾತ್ರವಲ್ಲ, ಮನುಷ್ಯತ್ವದ ವಾಸನೆಯೂ ಹೌದು. ಬೇಲಿ ಹಾಕಿಕೊಳ್ಳುವುದು ಸುಲಭ, ಪ್ರೀತಿಯ ಸೇತುವೆ ಕಟ್ಟುವುದು ಕಷ್ಟ. ಆದರೆ ಆ ಸೇತುವೆ ಒಮ್ಮೆ ಕಟ್ಟಿದರೆ 7 ತಲೆಮಾರು ನೆಮ್ಮದಿಯಿಂದ ದಾಟಬಹುದು. “ಕೆರೆಗೆ ಹನಿ ನೀರು” ಎನ್ನುವಂತೆ, ಬದಲಾವಣೆ ನಮ್ಮ ಒಂದು ನಗುವಿನಿಂದ, ಒಂದು ಕ್ಷಮೆಯಿಂದ ಶುರುವಾಗಲಿ. ಏಕೆಂದರೆ ಕೊನೆಗೆ ಉಳಿಯುವುದು ಆಸ್ತಿಯಲ್ಲ, ಅನುಬಂಧ. ಅಣ್ಣ-ತಮ್ಮ, ಅಕ್ಕ -ತಂಗಿ, ಅಕ್ಕಪಕ್ಕ – ಇವರೇ ನಮ್ಮ ಮೊದಲ ಮತ್ತು ಕೊನೆಯ ಸಂಬಂಧ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾoತ್ರಿಕತೆಯಿಂದ ಸ್ವಲ್ಪ ದೂರವಿರೋಣ.  ವನಜ ಮಹಾಲಿಂಗಯ್ಯ.           

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾಕೊರಗುತ್ತಾಳೆಂದುಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ನಿಮ್ಮೊಂದಿಗೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ

ಪುಸ್ತಕ ಸಂಗಾತಿ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರುರವರು ಸನ್ 2025ನೇ ಸಾಲಿನ ಪುಸ್ತಕ ಸೊಗಸು ಮುದ್ರಣ ಸೊಗಸು ಯೋಜನೆ ಅಡಿಯಲ್ಲಿ ಪುಸ್ತಕ ಗಳನ್ನು ಆಯ್ಕೆ ಮಾಡಲಾಗಿದ್ದು. ಹಿರಿಯ ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನದ ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.               ನಿರಂತರ ಪ್ರಕಾಶನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿ ಗಳನ್ನು ನೀಡಿದ ಮಕಾನದಾರ ಅವರ ಅಕ್ಕಡಿ ಸಾಲು ಮತ್ತು ಪ್ಯಾರಿ ಪದ್ಯ ಸಂಕಲನಗಳ ಕವಿತೆಗಳು  ಆರು ಭಾಷೆಗಳಿಗೆ ತರ್ಜುಮೆಗೊಂಡಿದ್ದು. ಕುವೆಂಪು ವಿಶ್ವ ವಿದ್ಯಾಲಯ, ವಿಜಯ ನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ ಹಾಗೂ ಪುಣ್ಯ ಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯಗಳಿಗೆ ಗಜಲ್ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಗೊಂಡಿವೆ.           ಬೀದರ್ ಜಿಲ್ಲೆ ಬೇಲೂರ್ ಉರಿಲಿಂಗ ಪೆದ್ದಿ ಸಂಸ್ಕೃತಿ ಕ ವೇದಿಕೆ ಯ ರಾಜ್ಯಮಟ್ಟದ ಅತ್ಯುತ್ತಮ ಪ್ರಕಾಶನ ಪುರಸ್ಕಾರ ನಿರಂತರ ಪ್ರಕಾಶನಕ್ಕೆ ಲಭಿಸಿದ್ದನ್ನಿಲ್ಲಿ ಸ್ಮರಿಸ ಬಹುದು ದರ್ವೇಶಿ ಪದ್ಯ ಒಡಲ ಸಂಕಟದ ಆಯ್ದ ಪದಗಳ ಕಟ್ಟು ಸಂಕಲನದ ಮುಖಪುಟ ಚಿತ್ರ ಕಲಾವಿದ ಈಶ್ವರ. ಬಡಿಗೇರ್ ಅವರು ರಚಿಸಿದ್ದು ನಿರಂತರ ಪ್ರಕಾಶನದಿಂದ ಪ್ರಕಟಣೆಯಾಗಿದೆ. ಸಾಹಿತಿ ಎ ಎಸ್. ಮಕಾನದಾರ ಮತ್ತು ಚಿತ್ರ ಕಲಾವಿದ ಈಶ್ವರ್ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾರಸ್ವತ ಲೋಕದ ಗೆಳೆಯರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ Read Post »

ಕಾವ್ಯಯಾನ, ಗಝಲ್

ಡಾ.ರೇಖಾಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾಉದಯ್‌ ಗಜಲ್ ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ. ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡುದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ ಡಾ.ರೇಖಾಉದಯ್

ಡಾ.ರೇಖಾಉದಯ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ ಕ್ರಾಂತಿಕಾರಿ ಕವಿ ಸರ್ವಜ್ಞ ಸರ್ವಜ್ಞ ಕವಿ 16ನೇ  ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು.  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ. ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ.  ಜನನ ಮತ್ತು ಬಾಲ್ಯ ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು. ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ. ತಂದೆ ತಾಯಿ : ತಂದೆ ಕುಂಬಾರ ಮಲ್ಲ  ಮತ್ತು ತಾಯಿ ಮಾಳೆ (ಮಾಳಲಾದೇವಿ). ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ ಬಂದ ಚಂದ್ರಶೇಖರ ನಾನು ಸರ್ವಜ್ಞ  ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ. ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು. ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ.  ಪ್ರಸಿದ್ಧ ವಚನ (ತ್ರಿಪದಿ) ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ:  “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ”  ( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ. ಸರ್ವಜ್ಞನು ಕಂಡ ಬಸವಣ್ಣ ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ. ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ.  ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು ೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ | ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ | ಬಸವಣ್ಣನೆ ಕರ್ತೃ ಸರ್ವಜ್ಞ ||  ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ.  ೨. ಬಸವ ನಾಮಸ್ಮರಣೆಯ ಮಹಿಮೆ ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು | ಬಸವನ ಪಾದವ ನಂಬಿದ ಭಕ್ತರು | ಹಸನಾದರಯ್ಯ ಸರ್ವಜ್ಞ ||  ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ.  ೩. ಬಸವಣ್ಣನೇ ಜಗದ ಗುರು ಬಸವನೆ ಜಗದಾದಿ ಬಸವನೆ ಜಗದೀಶ | ಬಸವನೇ ಜಗದ ಗುರುಪ್ರಣವವೆಂದರಿದು | ಬಸವನನು ಜಪಿಸು ಸರ್ವಜ್ಞ ||   ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು.  ೪. ಮಂತ್ರಸಿದ್ಧ ಬಸವಣ್ಣ ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ | ಮಂತ್ರಸಿದ್ದನು ಬಸವಣ್ಣನ ಪಾದಕ್ಕ | ಶರಣೆನ್ನಿರೆಲ್ಲ ಸರ್ವಜ್ಞ  ಕಾಮವನ್ನು ಗೆದ್ದವನು ಬಸವಣ್ಣ. ಭಕ್ತರ ಚಿಂತೆಗಳನ್ನು ಪರಿಹರಿಸುವವನು ಬಸವಣ್ಣ. ಆಧ್ಯಾತ್ಮಿಕ ಮಂತ್ರಸಿದ್ಧಿಯನ್ನು ಹೊಂದಿರುವ ಆ ಬಸವಣ್ಣನ ಪಾದಗಳಿಗೆ ನಾವೆಲ್ಲರೂ ಭಕ್ತಿಯಿಂದ ಶರಣಾಗಬೇಕು. ೫. ಶಂಭುವಿನ ಕರುಣೆ ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ | ಶಂಭುವಿನ ಕರುಣ ನಿನಗುಂಟ ನಾನಿಮ್ಮ | ನಂಬಿ ಹೇಳಿದೆನು ಸರ್ವಜ್ಞ  ಬಸವಣ್ಣನೇ, ನಿನ್ನ ಅಪಾರವಾದ ಮಹಿಮೆಯನ್ನು ನಾನು ಪೂರ್ಣವಾಗಿ ನಂಬಿ ಹೇಳುತ್ತಿದ್ದೇನೆ. ಸಾಕ್ಷಾತ್ ಶಿವನ (ಶಂಭುವಿನ) ಸಂಪೂರ್ಣ ಕೃಪೆ ನಿನ್ನ ಮೇಲಿದೆ ಎಂಬುದನ್ನು ನಾನು ದೃಢವಾಗಿ ನಂಬಿ ಜಗತ್ತಿಗೆ ಸಾರುತ್ತಿದ್ದೇನೆ ಎಂದು ಹೇಳಿದ್ದಾರೆ.  ೬ ಲೋಕಕ್ಕೆ ಬಸವಣ್ಣನೇ ಮುದ್ದು ಹಸಿದೊಡಂಬಲಿ  ಮುದ್ದು ಬಿಸಿಲಿಗೆ ಕೊಡೆ ಮುದ್ದು ಬಸುರಿಗೆ ಶಿಶು ಮುದ್ದು ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ. ಬೇಸಿಗೆಯ ಬಳಲಿಕೆಗೆ ಅಂಬಲಿ ಕೊಟ್ಟಾಗ ಹೊಟ್ಟೆಗೆ ಹಿತವಾಗಿರುತ್ತದೆ. ಹಸಿದ ಹೊಟ್ಟೆ ತಣ್ಣಗೆ ಮಾಡುವ ಅಂಬಲಿ ಆರೋಗ್ಯಕ್ಕೂ ಒಳ್ಳೆಯದು. ಬಿಸಿಲಿಗೆ ಒಂದು ಕೊಡೆ ಇದ್ದರೆ ಅದಕ್ಕಿಂತ ಹೆಚ್ಚಿನ ಆನಂದ ಇನ್ನೊಂದಿಲ್ಲ. ಬಸುರಿ ಹೆಣ್ಣು ಮಗಳು ಓಣಿಯಲ್ಲಿ ಆಡುವ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತಾಳೆ ಬಸುರಿ. ೭ ಬಸವ ಪೀಠವು ಎದ್ದು ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು,ಧರೆಯವಗೆ  ವಶವಾಗದಿಹುದೆ  ಸರ್ವಜ್ಞ ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪವು ಒಂದು ಪ್ರಬಲ ಪ್ರಜಾಪ್ರಭುತ್ವದ ಅಂಗವಾಗಿ ಹೊರ ಹೊಮ್ಮಿತು.ಅದನ್ನೇ ಸರ್ವಜ್ಞ ಬಸವ ಪೀಠವು ಎದ್ದು ಜಾಗೃತಗೊಂಡು ಹೊಸ ನಾಣ್ಯಗಳು ಚಲಾವಣೆಗಾಗಿ ಹುಟ್ಟಿ ಕೊಂಡು ಆ ಚಲಾವಣೆಗೊಳ್ಳುವ ನಾಣ್ಯಗಳ ಮೇಲೆ ಬಸವನ. ಮುದ್ರೆ ನಾಡಲ್ಲಿ ಮೆರೆಯುವಾಗ ಬೆಳಕಿಗೆ ಬರುವಾಗ. ಇಡೀ ಜಗತ್ತು ಅವನಿಗೆ ವಶವಾಗಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾನೆ. ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ. ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ  ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ. ಜಯಂತಿ: ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ.  ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top