ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ಉಸಿರು ಅರಸಿ ದಣಿದ ನಿಟ್ಟುಸಿರುಗಳಿವೆ ನನ್ನೊಂದಿಗೆಮನದ ಚೆಲುವ ಕಾಣದೆ ಸೋತ ಕಂಗಳಿವೆ ನನ್ನೊಂದಿಗೆ ಹಾದಿಯ ತುಂಬಾ ಕೆಂಗುಲಾಬಿಗಳಿವೆ ಎಂದು ಭ್ರಮಿಸಿದೆನಡೆದು ನಡೆದು ಕೆಂಪೇರಿದ ಪಾದಗಳಿವೆ ನನ್ನೊಂದಿಗೆ ಆಸೆ ಪಡಬೇಡ ಎಂಬ ಬುದ್ಧನ ಮಾತಿಗೆ ಕಿವಿಗೊಡಲಿಲ್ಲನಾನು ಇಷ್ಟವು ಕೈಗೂಡದೆ ಸಮಾಧಿಯಾದ ಕನಸುಗಳಿವೆ ನನ್ನೊಂದಿಗೆ ಲೋಕದ ಡೊಂಕಿಗೆ ಮನ ಕಳವಳಿಸಿ ತಲ್ಲಣಿಸಿದೆ ದೇವಾಕಣ್ಣಲಿ ಮನೆ ಮಾಡಿದ ಕಣ್ಣೀರ ಮೋಡಗಳಿವೆ ನನ್ನೊಂದಿಗೆ ನನ್ನವರಾರು ಪರರು ಯಾರೆಂದು ತಿಳಿಯುತಿಲ್ಲ ಭಾಗ್ಯಜನಿಸಿದ ಕ್ಷಣದಲ್ಲೆ ಮಸಣ ಸೇರಿದ ಭಾವಗಳಿವೆ ನನ್ನೊಂದಿಗೆ ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು”

ಕಾವ್ಯ ಸಂಗಾತಿ ಎಸ್.ವಿ.ಹೆಗಡೆ “ನಂಟು” ಒಂಟಿಕಾಲಲಿ ನಿಂತು ಬೇಟೆಗೆಕಾದು ಕುಳಿತ ಬಕಪಕ್ಷಿಗೆಯಾವುದೋ ಕೆರೆಯ ನಂಟುಸವೆದು ಹೋದ ಚಪ್ಪಲಿಗೆಬೀದಿನಾಯಿಯ ನಂಟುರೆಕ್ಕೆ ಬಿಚ್ಹಿ ನಲಿದಾಡುವ ನವಿಲಿಗೆಮೂಡಿ ಕಣ್ಮರೆಯಾಗುವಮೋಡದ ಚಿತ್ತಾರದ  ನಂಟುಕೊಕ್ಕು ಪುಕ್ಕವ ಕುಣಿಸಿಇಂಚರ ಹಾಡುವ ಹಕ್ಕಿಗಳಿಗೆವಿದ್ಯುತ್ ಸರಿಗೆಯ ನಂಟು ॥॥ಯಾರದೋ ತೋಟದಲಿ ಯಾರೋಬೆವರು ಸುರಿಸಿ ಬೆಳೆದ ದವಸ ದಾನ್ಯಕ್ಕೆತಂದು ತಿಂದವರ ನಂಟುಬೆಳೆವ ಬಸಲೆ ಬಳ್ಳಿಗೆ ಬೇಲಿ ಚಪ್ಪರದ ನಂಟು ಸುಡುಬಿಸಿಲ ಡಾಂಬರು ರಸ್ತೆಯಲಿಕೊಯ್ದು ಮಡಗಿದ ರಾಗಿಯ ತೆನೆಗಳಿಗೆಯಾರದೋ ವಾಹನದ ಟಾಯರಿನ ನಂಟು॥॥ ಆಡುವ ಮಾತು ಬೇರಾದರೇನು ಉಡುಗೆ ತೊಡುಗೆ ಊಟ ತಿಂಡಿ ಹಲವಾದರೇನುಸೂರ್ಯ ಸಂಜೆ ಸೇರುವ ಸಾಗರದ ತಳವೊ ಮಂಜು ಮುಸುಕಿದ ಕಾಡು ಶಿಖರವೋಯಾವುದೋ  ರೇಕಾಂಶ ಅಕ್ಷಾಂಶದಲಿ ಬಿದ್ದರವಿಯಕಿರಣಗಳ ಆಲಿಂಗನದ ನಂಟು .ರಕ್ತ ಸಂಬಂಧಕ್ಕೂ ಮೀರಿ ನೆರೆಯಾಗುವ ಮರೆಯಲಾಗದ  ಗೆಳೆತನದ ನಂಟು.  ॥॥ ಮದುವೆಯಾರಿದಾದರೇನು ಸತ್ತವರ ಆತ್ಮ ಎಲ್ಲಿ ಹೋದರೇನು. ಮೃಷ್ಠಾನ್ನ ಭೋಜನದನಂಟು ಹೋಗಿ ಉಂಡವರಿಗುಂಟು. ॥॥ ನಿಂತ ನೀರಿನ ಕೆಸರು ಕೊಳದೊಳಗೆ ತಾವರೆಯ  ನಂಟು. ಹರಿದು ಸಾಗರವ ಸೇರುವ ಹೊಳೆ ಹಳ್ಳಕ್ಕೆ ಕಲ್ಲುಬಂಡೆಗಳ ನಂಟು.ನನ್ನೊಳಗೆ ನಾ ಸೇರಿದರೆಜೀವಕ್ಕೆ ಆತ್ಮದ  ನಂಟು. ನಿನ್ನ ನೀ ಮರೆತಾಗ ಸಂಸಾರದ ನಂಟು॥॥ ಎಸ್ ವಿ ಹೆಗಡೆ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು” Read Post »

ಇತರೆ

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್

ವಿಶೇಷ ಸಂಗಾತಿ ಸವಿತಾ ಇನಾಮದಾರ್ “ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಎಂದರೆ ಕೇವಲ ಆಗಸ್ಟ್ ೧೫ರಂದು ಧ್ವಜಾರೋಹಣ ಮಾಡುವುದು, ರಾಷ್ಟ್ರಗೀತೆ ಹಾಡುವುದು ಅಥವಾ ಇತಿಹಾಸದ ಪುಸ್ತಕಗಳಲ್ಲಿ ಬರೆದಿರುವ ಘಟನೆಗಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ. ಅದು ನಮ್ಮ ರಕ್ತದಲ್ಲಿ, ನಮ್ಮ ಉಸಿರಿನಲ್ಲಿ, ನಮ್ಮ ಪ್ರತಿದಿನದ ನಡವಳಿಕೆಯಲ್ಲಿ ಜೀವಂತವಾಗಿರಬೇಕು. ಸ್ವತಂತ್ರ ಭಾರತದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಚಿಂತೆಯಿಲ್ಲದೆ ಆರಾಮವಾಗಿ ಉಸಿರಾಡಲು, ಮನಸಿಗೆ ಬಂದದ್ದನ್ನು ಮಾಡಲು ಕಾರಣ ದೇಶಾದ್ಯಂತ ಲಕ್ಷಾನುಗಟ್ಟಲೇ ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ, ಅದೆಷ್ಟೋ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸತತ ಹೋರಾಟ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವ ಅಹಿಂಸಾ ಸಂಗ್ರಾಮ. ಆ ಹೋರಾಟದಲ್ಲಿ ಅಸಂಖ್ಯಾತ ಜನರು ತಮ್ಮ ಜೀವವನ್ನೇ ಅರ್ಪಿಸಿದರು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ, ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವು. ಆ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಆ ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಶತ ಶತ ನಮನಗಳು. ನನ್ನ ಮಾವನವರಾದ ದಿ. ಶ್ರೀ. ಗುರುರಾವ್ ರಂಗರಾವ್ ಇನಾಮದಾರರು ಸಹ ಈ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರ ತಾಯಿ ತಮ್ಮ ಹಿರಿಯ ಮಗನ ಜೊತೆಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಇವರನ್ನೂ ಸಹ ವಿಜಯಾಪುರ ಜಿಲ್ಲೆಯ ನಮ್ಮ ಹಳ್ಳಿ ಗೊಣಶಿಗಿಯ ಸಮೀಪವಿರುವ ಅಥಣಿ ಎಂಬ ಸಣ್ಣ ಪಟ್ಟಣಕ್ಕೆ ಕಳಿಸಿದ್ದರು. ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದಾಗ ನಮ್ಮ ಮಾವನವರ ವಯಸ್ಸು ಕೇವಲ 10 ವರ್ಷ.ಒಂದು ದಿನ ಸಂಜೆ ಕೆಲವು ಸ್ವಾತಂತ್ರ್ಯ ಚಳುವಳಿಯ ನಾಯಕರಿಂದ ಹತ್ತಿರದ ಬಯಲು ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಭೆ ನಡೆಸುವವರಿದ್ದಾರೆ ಎಂದು ಈ ಇನಾಮದಾರ ಬಂಧುಗಳಿಗೆ ಗೊತ್ತಾಯಿತು. ಯಾವ ಹೆದರಿಕೆ ಅಥವಾ ಹಿಂಜರಿಕೆ ಇಲ್ಲದೆ ತಮ್ಮ ಅಣ್ಣನ ಜೊತೆ ಅವರೂ ಸಹ ಭಾಗವಹಿಸಲು ಒಂದು ನಿಗದಿತ ಸ್ಥಳಕ್ಕೆ ಹೋದರು. ಸಭೆಯ ನಡುವೆ ಪೊಲೀಸ್ ಪಡೆ ನುಗ್ಗಿತು. ಲಾಠಿ ಚಾರ್ಜ್ ಮಾಡಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವ ಮೊದಲ ಅಲ್ಲಿದ್ದವರನ್ನೆಲ್ಲ ಹಿಡಿದು ಹಿಂದೆ ಮುಂದೆ ನೋಡದೆ, ಪ್ರಾಣಿಗಳ ಹಾಗೆ ಪೋಲಿಸ್ ಗಾಡಿಗಳಲ್ಲಿ ತುಂಬಿಕೊಂಡು ಬೆಳಗಾವಿಯ ಹಿಂಡಲ್ಗಾ ಕೇಂದ್ರ ಕಾರಾಗೃಹದಲ್ಲಿ ಸೆರೆ ಹಾಕಿದರು. ಅಲ್ಲಿ 6 ತಿಂಗಳ ವರೆಗೆ ಬಂಧನದಲ್ಲಿ ಇದ್ದರು. ನಂತರ ಅಲ್ಲಿಂದ ಪುಣೆಯ ಯೆರವಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ 8ತಿಂಗಳ ಕಾಲ ಅವರನ್ನು ಇಟ್ಟಿದ್ದರಂತೆ.ಬಳಿಕ ಅಣ್ಣಾ- ತಮ್ಮ ಅಥಣಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜಿನಗೆ MSc ಮುಗಿಸಿ, ಭಾರತ ಸರಕಾರದ ಉದ್ಯೋಗ ಸಚಿವಾಲಯದಲ್ಲಿ ಮುಖ್ಯ ಸಲಹೆಗರಾಗಿ (Chief Industrial Advisor) ದೆಹಲಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಈ ನಡುವೆ ದೆಹಲಿ ಕರ್ನಾಟಕ ಸಂಘದ ಏಳಿಗೆಗೆ ಎಲೆಮರೆಯ ಕಾಯಿಯಂತೆ ಅನೇಕ ವರ್ಷಗಳವರೆಗೆ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಾವು ನೀಡಿದ ಸೇವೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ. ಹಾಗಾಗಿ ಅವರ ಫೋಟೋ ಹಳೆಯ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಆದರೆ ಅದೇನೋ ಅಂತಾರಲ್ಲ – ಒಳಿತನ್ನು ಮಾಡಿದವರು ಹೆಸರು ಅಳಿಸಲು ಸಾಧ್ಯವಿಲ್ಲ ಎಂಬಂತೆ ಅವರ ಈ ನಿಸ್ವಾರ್ಥ ಸೇವೆಗಳನ್ನು ನೆನೆದು, ದೆಹಲಿ ಕರ್ನಾಟಕ ಸಂಘದಲ್ಲಿ ದಿ. ನಾಗರಾಜ್ ಅವರ ಅಧ್ಯಕ್ಷತೆ ಮತ್ತು ಶ್ರೀ ಕೃಷ್ಣ ಭಟ್ ಅವರು ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ನಮ್ಮ ಮಾನವರಿಗೆ ಮಾನ್ಯ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರಿಂದ ಸನ್ಮಾನ ಮಾಡಲಾಗಿದೆ ಎಂದು ತಿಳಿಸಲು ತುಂಬಾ ಹೆಮ್ಮೆ ಎನಿಸುತ್ತದೆ.ಈ ಸಾಮಾಜಿಕ ಕಾರ್ಯಗಳ ಜೊತೆಗೆ ನಮ್ಮ ಹಳ್ಳಿಯ ಸುಧಾರಣೆಗಾಗಿಯೂ ದಾದಾ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮೊಮ್ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಜೈಲಿನಲ್ಲಿ ಕಳೆದ ಆ ದಿನಗಳನ್ನು ನೆನೆಯುತ್ತ, – “ನಿಮ್ಮ ಹಕ್ಕಿಗಾಗಿ ನೀವು ಹೋರಾಡಲೇ ಬೇಕು. ಯಾವತ್ತೂ ಯಾವುದಕ್ಕೂ ಹೆದರಬಾರದು. ಬಲಶಾಲಿಯಾಗಿರಿ, ಧೈರ್ಯಶಾಲಿಯಾಗಿರಿ, ಜನರಿಗೆ ಸಹಾಯ ಮಾಡಿರಿ ಮತ್ತು ನಮ್ಮ ಮನೆತನದ ಹೆಸರನ್ನು ಉಳಿಸಿರಿ” ಅಂತ ಹೇಳ್ತಾ ಇದ್ದದ್ದು ಇನ್ನೂ ನನಗೆ ನೆನಪಿದೆ.ಪ್ರೀತಿಯ ದಾದಾ ನಿಮ್ಮ ಬಗ್ಗೆ ನಮಗೆಲ್ಲಾ ತುಂಬಾ ಅಭಿಮಾನವಿದೆ. ನಿಮ್ಮ ಮಾರ್ಗದರ್ಶನ ಮತ್ತು ಹಿತವಚನಗಳು ನನ್ನ ಮಕ್ಕಳಿಗೆ ಶ್ರೀರಕ್ಷೆ ಇದ್ದಂತೆ.ಸ್ನೇಹಿತರೇ..ನಮ್ಮ ಮಾವನವರು, ಅಜ್ಜ-ಅಜ್ಜಿಯರು, ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸಂಕಟವನ್ನು ಅನುಭವಿಸಿ, ಜೀವವನ್ನು ಅರ್ಪಿಸಿ ನಮಗೆ ಈ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡಿದರು. ಅವರು ಕೇವಲ ಇತಿಹಾಸದ ಪುಟಗಳಲ್ಲಿ ಹೆಸರುಗಳಾಗಿ ಉಳಿಯಬಾರದು; ಅವರ ತ್ಯಾಗವು ನಮ್ಮ ಜೀವನದಲ್ಲಿ ಮುಂದುವರಿಯಬೇಕು.ಸ್ವಾತಂತ್ರ್ಯವೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಘನತೆ ಮತ್ತು ಸುರಕ್ಷತೆ ಇರುವುದು. ಅದು ಮಹಿಳೆಯರು ರಾತ್ರಿ ಹೊರಗೆ ಹೋಗುವಾಗ ಭಯವಿಲ್ಲದಿರುವುದು, ಮಕ್ಕಳು ಶಾಲೆಗೆ ಹೋಗುವಾಗ ಸುರಕ್ಷಿತರಾಗಿರುವುದು, ಬಡವರು ನ್ಯಾಯ ಪಡೆಯುವುದು, ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು. ಇಂದು ನಾವು ನೋಡುತ್ತಿರುವ ಅನೇಕ ಘಟನೆಗಳು—ಅನ್ಯಾಯ, ಶೋಷಣೆ, ಹಿಂಸೆ—ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತವೆ. ಸ್ವಾತಂತ್ರ್ಯವು ಕಾಗದದ ಮೇಲಿನ ಹಕ್ಕು ಮಾತ್ರವಾಗಿ ಉಳಿದರೆ, ಅದು ಅರ್ಥಹೀನವಾಗುತ್ತದೆ.ನಮ್ಮ ಹಿರಿಯರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದು ಕೇವಲ ವಿದೇಶಿ ಆಳ್ವಿಕೆಯನ್ನು ಕೊನೆಗೊಳಿಸಲು ಮಾತ್ರವಲ್ಲ. ಅವರು ನ್ಯಾಯ, ಸಮಾನತೆ ಮತ್ತು ಮಾನವೀಯತೆಯನ್ನು ಸ್ಥಾಪಿಸಲು ಹೋರಾಡಿದರು. ಆದ್ದರಿಂದ ನಾವು ಅವರನ್ನು ನೆನಪಿಸಿಕೊಳ್ಳುವಾಗ, ಕೇವಲ ಅವರ ಹೆಸರುಗಳನ್ನು ಪುಸ್ತಕಗಳಲ್ಲಿ ಓದುವುದಲ್ಲದೆ, ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಅನ್ಯಾಯವನ್ನು ನೋಡಿದಾಗ ಮೌನವಾಗಿರುವುದು, ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು, ಮಹಿಳೆ-ಮಕ್ಕಳ ಮೇಲಿನ ಹಿಂಸೆಯನ್ನು ನಿರ್ಲಕ್ಷಿಸುವುದು—ಇವೆಲ್ಲವೂ ಸ್ವಾತಂತ್ರ್ಯದ ಮೇಲಿನ ದ್ರೋಹ.ನಿಜವಾದ ಸ್ವಾತಂತ್ರ್ಯವು ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರುವಾಗ ಮಾತ್ರ ಸಾಧ್ಯ. ಅದು ನಮ್ಮ ಮತದಾನದಲ್ಲಿ, ನಮ್ಮ ಕೆಲಸದಲ್ಲಿ, ನಮ್ಮ ಮಾತುಗಳಲ್ಲಿ ಮತ್ತು ನಮ್ಮ ಕ್ರಿಯೆಗಳಲ್ಲಿ ಕಾಣಬೇಕು. ಇತಿಹಾಸವು ನಮಗೆ ಪಾಠ ಕಲಿಸುತ್ತದೆ, ಆದರೆ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಕೆಲಸ. ಸ್ವಾತಂತ್ರ್ಯವನ್ನು ಕೇವಲ ನೆನಪಿನಲ್ಲಿ ಇಡದೆ, ಅದನ್ನು ಪ್ರತಿದಿನ ಜೀವಂತವಾಗಿ ಇರಿಸೋಣ. ನಮ್ಮ ಮಕ್ಕಳು ಸ್ವಾತಂತ್ರ್ಯವನ್ನು ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ತಮ್ಮ ಜೀವನದಲ್ಲಿ ಅನುಭವಿಸುವಂತೆ ಮಾಡೋಣ. ನಮ್ಮ ಜೀವನದಲ್ಲಿ ಇಂತಹ ವಿಶೇಷ ವ್ಯಕ್ತಿಗಳೊಂದಿಗೆ ಹಂಚಿಕೊಂಡ ಸುಂದರಸವಿ ನೆನಪುಗಳು ಎಂದಿಗೂ ಮಾಸುವುದಿಲ್ಲ. ತಮ್ಮ ದೇಶಕ್ಕೆ ಮತ್ತು ತಮ್ಮ ಮುಂದಿನಪೀಳಿಗೆಗೆ ಸ್ವಾತಂತ್ರ್ಯವನ್ನು ತರಲು ಹಿಂಜರಿಯದೇ ಹೋರಾಡಿದ ಆ ಎಲ್ಲಾ ವೀರಚೇತನಗಳಿಗೆ ಹೃದಯಾಳದಿಂದ ನಮನಗಳು. ಜೈ ಹಿಂದ್ ಸವಿತಾ ಇನಾಮದಾರ್

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್ Read Post »

ಕಾವ್ಯಯಾನ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ

ಪುಸ್ತಕ ಸಂಗಾತಿ ಗಂಗಾ ಚಕ್ರಸಾಲಿ ಶ್ರೀ ಕಿರಣ ಗಣಾಚಾರಿ ಬೆಳಕಿನ ಹೊಳೆಯ ಪ್ರವಾಹ ಬದುಕಿನಪ್ರವಾಹದಲ್ಲಿಮಿಂದೆದ್ದ ಕವಿತೆಗಳು ಪುಸ್ತಕ: ಬೆಳಕಿನ ಹೊಳೆಯ ಪ್ರವಾಹಲೇಖಕರು: ಶ್ರೀ ಕಿರಣ ಗಣಾಚಾರಿಬೆಲೆ:೧೦೦ ರೂಪ್ರಕಾಶನ: ಸಂಭ್ರಮ ಫೌಂಡೇಶನ್ ಶ್ರೀ ಕಿರಣ ಗಣಾಚಾರಿಯವರ ಎರಡನೇ ಕವನ ಸಂಕಲನ ಬೆಳಕಿನ ಹೊಳೆಯ ಪ್ರವಾಹ. ಕವಿಯಾದವನು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಕಿವಿಯಾಗುತ್ತಾನೆ, ಕಣ್ಣಾಗುತ್ತಾನೆ ಕೊನೆಗೆ ವಿಮರ್ಶಕನೂ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ಐವತ್ತು ಕವಿತೆಗಳು ಪ್ರಸ್ತುತ ಸಮಾಜ, ರಾಜಕೀಯ, ಶೈಕ್ಷಣಿಕ, ಮಾನವೀಯ ಸಂಬಂಧಗಳ ನೆಲೆಯೊಳಗೆ ಓದುಗನಿಗೆ ಭಾವನಾತ್ಮಕವಾಗಿ ಪ್ರವಾಹವನ್ನೇ ಹರಿಸುತ್ತವೆ.ಹುಲಿಜೊತೆ ಚಿಗುರೆಯೊಂದು ಸಂವಾದಿಸಿದಂತೆಅಪ್ಪನೆಂದರೆ ಭಯದ ಬಕಾಸುರನಂತೆನಿಸಿದ್ದೇ ಹೆಚ್ಚುಅಪ್ಪನ ಕುರಿತಾದ ಭಯ, ನಡುಕ ೮೦- ೯೦ ರ ದಶಕದಲ್ಲಿ ತುಸು ಹೆಚ್ಚಾಗಿಯೇ ಇತ್ತು. ಅಪ್ಪನೆಂದರೆ ಅರ್ಥವಾಗದವನಾಗಿದ್ದನು. ಪ್ರತಿಯೊಂದು ಜವಾಬ್ದಾರಿಯೊಳಗೆ ಮುಳುಗೆದ್ದ ಅಪ್ಪ ಮೌನದ ಪರ್ವತವೇ ಆಗಿದ್ದ. ಆಗಾಗ ಒಂದೆರೆಡು ಮಾತುಗಳು ಗುಡುಗಿನಂತೆ ಸದ್ದಾದರೂ , ಅವನ ಹೃದಯದಲಿ ಪ್ರೀತಿ ಕಾಳಜಿಯ ತೊರೆಯು ಮಾತ್ರ ಬತ್ತುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಬಂದ ಈ ಕವಿತೆ ಓದುಗನನ್ನು ತನ್ನ ಬಾಲ್ಯಾವಸ್ಥೆಗೆ ಕರೆದೊಯ್ದು ಕಣ್ಣಹನಿ ಜಾರಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಭಾವಿಸುವವರೆಂದರೆ ಅಮ್ಮ, ಅಪ್ಪ, ಗೆಳೆಯ. ಈ ನೆಲೆಯೊಳಗೆ ಅಪ್ಪನೆಂಬ ಪ್ರಶ್ನೆಗಳ ಹುತ್ತ, ಪ್ಲೀಸ್…ಅಮ್ಮ, ಮುದ್ದು ಕಂದ, ಅವ್ವ ಮತ್ತು ಧೂಳು, ಗೆಳೆಯ ಬದಲಾಗಿದ್ದಾನೆ ಕವಿತೆಗಳು ಮನವನ್ನು ಕದಡುತ್ತವೆ.ವರ್ತಮಾನದಲ್ಲಿ ಬದುಕುತ್ತಿರುವ ನಾವುಗಳು ಅಂದು ಇಂದು ಎಂಬ ಪದಗಳ ಜರಡಿಯೊಳಗೆ ಸಮಾಜವನ್ನು ನೋಡುತ್ತೇವೆ. ಕವಿಯಾದವನು ತುಸು ಹೆಚ್ಚೇ ಈ ಬದಲಾವಣೆಗಳನ್ನು ಗಮನಿಸುತ್ತಾನೆ. ಈ ಬದಲಾವಣೆಯ ಪರದೆಯೊಳಗೆ ಹಲವು ಕವಿತೆಗಳು ಮೂಡಿಬಂದಿವೆ. ಎಂದಿನಂತೆ ನಾನಿಲ್ಲ, ಒಪ್ಪಿಕೊಳ್ಳಲಾರದ ವಾಸ್ತವ, ಬೆಳಕಿನ ಹೊಳೆಯ ಪ್ರವಾಹ, ಅಮವಾಸ್ಯೆ ಹೊದ್ದವರು, ಇಶಾರೆ, ಸೆರೆಯಾಗದ ಭಾವಚಿತ್ರ, ಹೇ! ಸಮಯವೇ…, ಕೊಡು ಕೊಳ್ಳುವಾಟ ಹೀಗೆ ಹಲವು ಕವಿತೆಗಳು ಇಂದಿನ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ ನಮ್ಮೊಳಗಿನ ನಮ್ಮತನವನ್ನು ಬಡಿದೆಬ್ಬಿಸುತ್ತವೆ. ಬೆಳಕಿನ ಹೊಳೆ ಹರಿಸುತ್ತಿದ್ದೇವೆಂದುಅದೆಷ್ಟು ಕಲ್ಲು ಮಣ್ಣು ಕಸ ಕಡ್ಡಿಹಾಕುತ್ತಿದ್ದೇವೆನೀವೇ ಹೇಳಿ…ನೋಡೋಣ ! ಈ ಪುಸ್ತಕದ ಶೀರ್ಷಿಕೆಯ ಈ ಕವಿತೆ ಇಂದಿನ ಮಾನವರ ಅತಿಯಾದ ಬಯಕೆ, ಅಹಮ್ಮಿನ ಫಲಶೃತಿಯನ್ನು ಕಣ್ಣಮುಂದೆ ತೆರೆದಿಡುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಸವೆದುಹೋದ, ಕ್ಲೀಷೆಗೊಳಗಾದ, ಜೀರ್ಣಗೊಂಡ, ಶಿಥಿಲಗೊಂಡ, ಸಡಿಲವಾದ ಬದುಕಿನ ಸಾಮಾನ್ಯ ಸಹಜ ನಿಯಮಗಳು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳದೆ, ಹೊಸ ಜಗತ್ತನ್ನು ಧ್ಯೇನಿಸುತ್ತಿರುವ ಸತ್ಯವನ್ನು ಹೊರಹೊಮ್ಮಿಸುತ್ತವೆ ಎಂಬ ಪ್ರೊ. ಎಸ್‌ ಎಂ ಗಂಗಾಧರಯ್ಯನವರ ಮುನ್ನುಡಿ ಮಾತು ಅರ್ಥಪೂರ್ಣವಾಗಿದೆ. ಹಳತಾದ ಬಣ್ಣಗೆಟ್ಟ ಗೋಡೆಗಳುನಮ್ಮ ಬದುಕ ಬಣ್ಣವಾಗಿಸಿವೆಹರಕಲು ಮುರುಕಲು ಮಾಳಿಗೆನಮ್ಮ ಬಾಳ ನೆಟ್ಟಗಾಗಿಸಿವೆ ಸರಕಾರಿ ಶಾಲೆ ಕವಿತೆಯಲ್ಲಿ ಮೂಡಿಬಂದ ಈ ಸಾಲುಗಳು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತವೆ. ಬಹುತೇಕರು ಆಗ ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ಬಹಳಷ್ಟು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಈ ಸಂದರ್ಭದಲ್ಲಿ ಅದರ ಮಹತ್ವ ಸಾರುವ ಈ ಕವನ ಸಕಾಲಿಕವಾಗಿದೆ. ಇದೇ ರೀತಿ ಶಾಲೆಗೆ ಸಂಬಂಧಿಸಿದಂತೆ ಬರೆದ ಇನ್ನಷ್ಟು ಕವಿತೆಗಳೆಂದರೆ ಪಾಟಿ ಚೀಲ , ಪುಸ್ತಕ ಮತ್ತು ನಿನಗೆ ಕಲಿಸಿದ ಮಾಸ್ತರ ಯಾರು? ಕವಿತೆಗಳು.ಇಂದು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಪರಿಸರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಪ್ರಕೃತಿಯಲ್ಲಿಯ ಹಸಿರು ನಾಶವಾಗಿ, ಜೀವಸಂಕುಲಗಳು ತೊಂದರೆಗೊಳಗಾಗಿವೆ. ಇಂತಹ ನೋಡಿದ ಕೇಳಿದ ಘಟನೆಗಳ ಹಿನ್ನೆಲೆಯಲ್ಲಿ ಹಲವು ಕವಿತೆಗಳು ಮೂಡಿಬಂದಿವೆ. ಈ ಜಾಗ ನಂದೈತಿ, ನಂಬಿಕೆ ಪಟ್ಟ ಕಟ್ಟಿದವರಾರು? , ಸಹಿಸಿಕೊಂಡಿರುವೆ ಕವನಗಳು ಆ ಚಿತ್ರಣವನ್ನು ಕಟ್ಟಿಕೊಡುತ್ತವೆ. ಸಖ್ಯ ಬೆಳೆಸಿಕೊ, ಸುಖ ನೀಡುವೆನಂಬು, ಇಂಬನೀಯುವೆಕಡೆಗಣಿಸಿದರೆ ನಡುಗಣ್ಣ ತೆರಯುವೆ .. ಇಂತಹ ಸಾಲುಗಳು ಮಾನವನಿಗೆ ತಿಳುವಳಿಕೆ ನೀಡುವ ಜೊತೆಗೆ ಮುಂದೆ ಆಗುವ ಆನಾಹುತವನ್ನು ತಿಳಿಸಿಕೊಡುತ್ತವೆ. ಕವಿಗಿರುವ ಪರಿಸರ ಪ್ರೇಮವನ್ನು ಅರಿಯಬಹುದಾಗಿದೆ. ಇಷ್ಟೇ ಅಲ್ಲದೇ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತಹ ಕವಿತೆಗಳು ಕನ್ನಡತನವನ್ನು ಜಾಗೃತಿಗೊಳಿಸುತ್ತವೆ. “ ಕನ್ನಡ ಭಾಷೆ ನಾಲಿಗೆಯಲಿ ಉಲಿಯದೆ ಗಂಟಲಲ್ಲಿ ಸಿಕ್ಕಾಕಿಕೊಂಡಂತಿರುವ ಭಯ “ ಈ ಸಾಲು ಅನ್ಯಭಾಷೆಯ ಹಾವಳಿಯನ್ನು ಸೂಚ್ಯವಾಗಿ ಹೇಳುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹಬ್ಬಗಳು ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬರೆದ ಹಲವು ಕವಿತೆಗಳು ಭೂತ ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುತ್ತವೆ.ಕವಿ ಎಂದರೆ ಭಾವತೀವ್ರ ವೇದನೆಗಳನು ಹೊರುವ, ಹೆರುವ ಸೃಜನಶೀಲ ಗರ್ಭಸ್ಥ ಸ್ಥಿತ ಪ್ರಜ್ಞ ಎಂದು ಹೇಳುವ ಕಿರಣ ಅವರ ಮಾತಿಗೆ ಪೂರಕವಾಗಿಯೇ ಹಲವು ಕವಿತೆಗಳು ಭಾವನೆಗಳನ್ನು ಹೊದ್ದು ನಿಂತಿವೆ. ಪ್ರತಿಯೊಂದು ಕವನಗಳನ್ನು ಓದುವಾಗಲೂ ಇಂದಿನ ನೋವು, ವೇದನೆಗಳ ಚಿತ್ರಣ ಕಣ್ಮುಂದೆ ಸುಳಿದು ಬದಲಾದ ಮನುಷ್ಯನ ವ್ಯಕ್ತಿತ್ವಗಳನ್ನು ತೋರಿಸುತ್ತವೆ. ಇವರ ಮೊದಲ ಕವನ ಸಂಕಲನಕ್ಕಿಂತ ಈ ಕವನ ಸಂಕಲನ ಸಂಪೂರ್ಣವಾಗಿ ಭಿನ್ನ ಸಂಗತಿಗಳನ್ನು ಓದುಗರಿಗೆ ತರೆದಿಡುತ್ತದೆ. ಕಾಲದ ಸುಳಿಯಲ್ಲಿ ಮಾಗಿದ ಕವಿತೆಗಳು ಈ ಬೆಳಕಿನ ಪ್ರವಾಹದಲ್ಲಿ ಮಿಂದೆದ್ದಿವೆ. ಇವರಿಂದ ಮತ್ತಷ್ಟು ಮತ್ತಷ್ಟು ಕವನಸಂಕಲನಗಳು ಹೊರ ಬರಲೆಂದು ಆಶಿಸುವೆ. ಗಂಗಾ ಚಕ್ರಸಾಲಿ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-36 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್‌ ಚೇತನ ಅಖಂಡ ಕರ್ನಾಟಕ ಹೋರಾಟ ಅಖಂಡ ಕರ್ನಾಟಕದ ಕನಸಿನ ತುಡಿತ ಹೆಚ್ಚುತಿದ್ದಂತಕನ್ನಡದ ಅಭಿಮಾನಿಗಳು, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಎತ್ತಿಕೊಂಡಿದ್ದ ಹೋರಾಟದ ಧ್ವನಿ ನಿಧಾನವಾಗಿ ರಾಜಕೀಯದ ಗಾಳಿಯಲ್ಲಿ ಸಿಲುಕಿ ದಿಕ್ಕು ತಪ್ಪಿದುದನ್ನು ಕಣ್ಣಾರೆ ಕಂಡರೂ, ಅದನ್ನು ತಡೆಯಲಾಗದ ಅಸಹಾಯಕ ಸ್ಥಿತಿಗೆ ಸಾಹಿತಿಗಳು, ಕನ್ನಡ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಬಂದು ತಲುಪಿದ್ದರು. ಅಖಂಡ ಕರ್ನಾಟಕ ಹೋರಾಟವು ಒಂದು ಭೌಗೋಳಿಕ ಪ್ರದೇಶವನ್ನು ಒಂದಾಗಿಸುವುದರ ಜೊತೆಗೆ ಕನ್ನಡಿಗರ ಹೃದಯಗಳನ್ನು ಒಂದಾಗಿಸುವ ಕನಸಾಗಿತ್ತು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಕರಾವಳಿಯಿಂದ ಮಲೆನಾಡಿನವರೆಗೆ……ಕನ್ನಡದ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಭಾವನೆ ನಮ್ಮನ್ನು ಒಂದೇ ನಾಡಿನ ಮಕ್ಕಳನ್ನಾಗಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು….. ಆದರೆ ಅಖಂಡ ಕರ್ನಾಟಕದ ಬದಲಾಗಿ ಕರ್ನಾಟಕವನ್ನು ವಿಭಜಿಸುವ ಮಾತುಗಳು ಬಲ ಪಡೆಯತೊಡಗಿದವು. ಜನರ ಮನದಾಳದಲ್ಲಿ ಬೆಳೆದಿದ್ದ ಏಕೀಕರಣದ ಆಶಯಕ್ಕಿಂತ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದವು. ಭಾಷಾವಾರು ರಾಜ್ಯಗಳ ರಚನೆಯ ಪರವಾಗಿ ದೇಶದ ರಾಷ್ಟ್ರೀಯ ನಾಯಕರು ಮುಂದುವರಿದಿದ್ದರೂ, ಕರ್ನಾಟಕ ಒಂದಾಗಬೇಕು ಎಂಬ ಜನಮನದ ಬಯಕೆಯನ್ನು ರಾಜಕೀಯ ನಾಯಕತ್ವ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಕೇಂದ್ರ ರಾಜಕಾರಣದ ಒತ್ತಡಗಳಿಗೆ ಕರ್ನಾಟಕದ ಅನೇಕ ರಾಜಕಾರಣಿಗಳು ಮಣಿದರು. ಹಿಂದೆ ಜನರಿಗೆ ನೀಡಿದ್ದ ಭರವಸೆಗಳು, ಆಡಿದ್ದ ಮಾತುಗಳು ಬದಲಾಗತೊಡಗಿದವು. ರಾಜಕೀಯ ಪಕ್ಷಗಳ ಹಿತಾಸಕ್ತಿಗಳು ಕನ್ನಡ ನಾಡಿನ ಒಗ್ಗಟ್ಟಿನ ಕನಸಿಗಿಂತ ದೊಡ್ಡದಾಗಿ ಕಾಣಿಸಿಕೊಂಡವು. ಹೋರಾಟದ ಉತ್ಸಾಹವೂ ಕ್ರಮೇಣ ಕುಗ್ಗತೊಡಗಿತು. ಇದನ್ನೆಲ್ಲ ಕಂಡ ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತಿಗಳ ಮನಸ್ಸಿನಲ್ಲಿ ನೋವು ಮಡುಗಟ್ಟಿತು. ಕನ್ನಡಕ್ಕಾಗಿ ಎತ್ತಿದ ಧ್ವನಿ ರಾಜಕೀಯದ ಗದ್ದಲದಲ್ಲಿ ಕೇಳಿಸದಂತಾಯಿತು. ಕನ್ನಡಿಗರ ಭಾವೈಕ್ಯತೆಯ ಕನಸು ಕಣ್ಣೆದುರೇ ಮಸುಕಾಗುತ್ತಿರುವುದನ್ನು ಕಂಡರೂ, ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ….. ಎಲ್ಲೆಲ್ಲಿ ಕನ್ನಡದ ನುಡಿ ಕೇಳಿಸುತ್ತದೆಯೋ, ಅಲ್ಲೆಲ್ಲ ಕನ್ನಡಿಗರ ಹೃದಯ ಒಂದೇ ಬಡಿತದಲ್ಲಿ ಮಿಡಿಯಬೇಕು. ಪ್ರಾದೇಶಿಕ ಭಿನ್ನತೆಗಳನ್ನು ಮೀರಿ, ರಾಜಕೀಯ ಗಡಿಗಳನ್ನು ದಾಟಿ, ಕನ್ನಡದ ಹೆಸರಿನಲ್ಲಿ ಎಲ್ಲರೂ ಒಂದಾಗಬೇಕು….ಎನ್ನುವ ಕರೆ ಕೊಟ್ಟರು  ಜಯದೇವಿ ತಾಯಿಯವರು ಜನತೆಗೆ ಕರೆಕೊಟ್ಟರು. ಕನ್ನಡದ ನೆಲ-ನುಡಿ-ಸಂಸ್ಕೃತಿಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿತ್ತು….ಅಖಂಡ ಕರ್ನಾಟಕವೆಂದರೆ ಒಂದು ನಾಡಿನ  ಕೋಟ್ಯಂತರ ಕನ್ನಡಿಗರ ಹೃದಯದ ಕನಸು. ಆ ಕನಸು ಉಳಿಯುವವರೆಗೂ ಕನ್ನಡದ ಏಕತೆಯ ಜ್ಯೋತಿ ಎಂದಿಗೂ ಆರದಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಟಕ್ಕಿ ನಿಂತು ಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರು ಹೆಜ್ಜೆ ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಮಾಡುವದಾಗಿತ್ತು.    ೧೯೫೩ರಲ್ಲಿ ಆರ್ ವಿ ಬೀಡಪ್ಪ ,ಭೀಮಣ್ಣ ಖಂಡ್ರೆ, ಪ್ರಭುರಾಜ ಕಂಬಳಿವಾಲೆ ಮೊದಲಾದವರು ಸೇರಿ *ಪ್ರಜಾ ಸೋಶಿಯಾಲಿಸ್ಟಿಕ*ಪಾರ್ಟಿಯನ್ನು ಸ್ಥಾಪಿಸಿದ್ದರು…… ಜಮದೇವಿ ತಾಯಿಯವರು ಅವರೊಂದಿಗೆ ಪಕ್ಷ ಸಂಘಟನೆ ತೊಡಗಿಕೊಂಡಿದ್ದರು. ಇವರ ಒಡನಾಟದೊಂದಿಗೆ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಈ ಮೂಲಕ ಒಬ್ಬ ಸಮಾಜವಾದಿಯಾಗಿ ಗುರುತಿಸಿಕೊಂಡರು ಮುಂದೆ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ(ಅ.ಕ.ರಾ.ನಿ) ಉಪಾಧ್ಯಕ್ಷವಾಗಿ ಕೆಲಸ ನಿರ್ವಹಿಸಿದರು. ೧೯-೪-೧೯೫೨ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿ ಸಭೆಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು ಅಂದೆ ಗಲಭೆಯು ನಡೆಯಿತು ಇದೆ ಹುಬ್ಬಳ್ಳಿಯ ಗಲಭೆ ಎಂದು ಹೆಸರಾಯಿತು. ಆಂಧ್ರದ ಹೋರಾಟಗಾರರಾದ ಪೊಟ್ಟು ಶ್ರೀರಾಮುಲು ಅವರ ಪ್ರೇರಣೆಯಿಂದ…. ಕರ್ನಾಟಕದ ಏಕೀಕರಣ ಆಗಲೇಬೇಕೆಂದು ಶಂಕರ ಗೌಡ ಪಾಟೀಲರು ಆ ಮರಣ ಉಪವಾಸ ಕುಳಿತದ್ದು ಈ ಉಪವಾಸವನ್ನು ನಿಲ್ಲಿಸಿ ಏಕೀಕರಣದ ಆಶಯವನ್ನು ಈಡೇರಿಸುವ ಕನಸು ಕಂಡಿದ್ದ ಜನತೆಗೆ ನಿರಾಸೆಗೊಳಿಸಿದ್ದು ಜಯದೇವಿ ತಾಯಿಯವರು ಮನನೋಯಿತು…. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿತು. ಕಾಂಗ್ರೆಸಿನ ಸಾಂಪ್ರದಾಯಿಕ ರಾಜಕಾರಣದಿಂದ ಹೊರಬಂದು, ಜನಪರವಾದ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಅವರು ಹೆಚ್ಚು ಒತ್ತು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಕರ್ನಾಟಕ ರಾಜ್ಯದ ನಿರ್ಮಾಣದ ಆಶಯ ಅವರ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.. ಈ ಹೊಸ ರಾಜಕೀಯ ವೇದಿಕೆ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿತು.ಜಯದೇವಿ ತಾಯಿಯವರು ಈ ನಾಯಕರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಗ್ರಾಮೀಣ ಪ್ರದೇಶಗಳ ಜನರು, ಮಹಿಳೆಯರು ಹಾಗೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು  ಸಮಾಜವಾದಿ ನಾಯಕರ ಪ್ರಭಾವಪ್ರಜಾ ಸೋಶಿಯಲಿಸ್ಟ್ ಪಕ್ಷದ ಸಂಘಟನಾ ಕಾರ್ಯದ ಸಂದರ್ಭದಲ್ಲಿ ಜಯದೇವಿ ತಾಯಿಯವರಿಗೆ ದೇಶದ ಪ್ರಮುಖ ಸಮಾಜವಾದಿ ನಾಯಕರ ಚಿಂತನೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಿತು.ವಿಶೇಷವಾಗಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮತ್ತು ಶಾಂತವೇರಿ ಗೋಪಾಲಗೌಡ ಅವರ ವಿಚಾರಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು.ಲೋಹಿಯಾ ಅವರ ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಪ್ರಗತಿ ಮತ್ತು ಅಧಿಕಾರದ ಕೇಂದ್ರೀಕರಣದ ವಿರೋಧದ ಚಿಂತನೆಗಳು ಜಯದೇವಿ ತಾಯಿಯವರನ್ನು ಆಕರ್ಷಿಸಿದವು. ಜಯಪ್ರಕಾಶ ನಾರಾಯಣ ಅವರ ಜನಪರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವರ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದವು.ಅದೇ ರೀತಿ ಶಾಂತವೇರಿ ಗೋಪಾಲಗೌಡರ ಸರಳ ಜೀವನ, ರೈತಪರ ನಿಲುವು, ಸಮಾಜವಾದಿ ಬದ್ಧತೆ ಮತ್ತು ಜನರೊಂದಿಗೆ ಬೆರೆತು ಹೋರಾಟ ನಡೆಸುವ ಗುಣಗಳು ಜಯದೇವಿ ತಾಯಿಯವರ ಮೇಲೆ ಪರಿಣಾಮ ಬೀರಿದವು. ಸಮಾಜವಾದಿಯಾಗಿ ರೂಪುಗೊಂಡ ಜಯದೇವಿ ತಾಯಿಯವರು ಸಮಾಜವಾದಿ ನಾಯಕರ ಒಡನಾಟ ಮತ್ತು ಅವರ ವಿಚಾರಧಾರೆಯ ಅಧ್ಯಯನದಿಂದ ಜಯದೇವಿ ತಾಯಿಯವರ ರಾಜಕೀಯ ವ್ಯಕ್ತಿತ್ವ ಹೊಸ ರೂಪ ಪಡೆದುಕೊಂಡಿತು. ರಾಜಕೀಯವೆಂದರೆ  ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಸಾಧನ ಎಂಬ ನಂಬಿಕೆ ಅವರಲ್ಲಿ ಗಟ್ಟಿಯಾಯಿತು. ಸಾಮಾಜಿಕ ಅಸಮಾನತೆ, ಶೋಷಣೆ, ಬಡತನ, ಮಹಿಳೆಯರ ಸಮಸ್ಯೆಗಳು ಮತ್ತು ಹಿಂದುಳಿದ ಜನಸಮುದಾಯಗಳ ಹಕ್ಕುಗಳಂತಹ ವಿಚಾರಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದರು. ಈ ಹಂತದಲ್ಲಿ ಅವರು ಒಬ್ಬ ಬದ್ಧ ಸಮಾಜವಾದಿ ನಾಯಕಿಯಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.ಅಖಂಡ ಕರ್ನಾಟಕದ ಆಶಯದೊಂದಿಗೆ ಸಮಾಜವಾದಿ ಚಿಂತನೆಜಯದೇವಿ ತಾಯಿಯವರ ರಾಜಕೀಯ ಚಿಂತನೆಗಳಲ್ಲಿ ಸಮಾಜವಾದ ಮತ್ತು ಅಖಂಡ ಕರ್ನಾಟಕದ ಹೋರಾಟ ಪರಸ್ಪರ ಬೆಸೆದುಕೊಂಡಿದ್ದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಬೇಕು ಎಂಬುದು ಅವರ ಪ್ರಮುಖ ಆಶಯವಾಗಿತ್ತು.ಅವರ ದೃಷ್ಟಿಯಲ್ಲಿ ಕರ್ನಾಟಕ ಏಕೀಕರಣವೆಂದರೆ ಕರ್ನಾಟಕದ ಪ್ರತಿಯೊಂದು ಭಾಗದ ಜನರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೊರೆಯಬೇಕು ಎಂಬುದೂ ಅದರ ಭಾಗವಾಗಿತ್ತು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನಲ್ಲಿ ಜವಾಬ್ದಾರಿ ಹಂತದಲ್ಲಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಅ.ಕ.ರಾ.ನಿ.) ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಇಂಥ ಸ್ಥಾನವು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿತ್ತು. ಈ ಹುದ್ದೆಯ ಮೂಲಕ ಅವರು ಅಖಂಡ ಕರ್ನಾಟಕದ ವಿಚಾರವನ್ನು ಜನರ ಮುಂದೆ ನಿರಂತರವಾಗಿ ಪ್ರಸ್ತಾಪಿಸಿದರು. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣ, ಕನ್ನಡಿಗರ ಹಕ್ಕುಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿದರು. ಹೋರಾಟ ಮತ್ತು ವಿಚಾರಧಾರೆಯ ಸಂಗಮಜಯದೇವಿ ತಾಯಿಯವರ ರಾಜಕೀಯ ಪಯಣವನ್ನು ಗಮನಿಸಿದಾಗ, ಅವರ ಬದುಕಿನಲ್ಲಿ ಕನ್ನಡದ ಮೇಲಿನ ಅಭಿಮಾನ, ಅಖಂಡ ಕರ್ನಾಟಕದ ಕನಸು ಮತ್ತು ಸಮಾಜವಾದಿ ವಿಚಾರಧಾರೆ ಒಂದಕ್ಕೊಂದು ಪೂರಕವಾಗಿ ಬೆಳೆದಿರುವುದು ಕಾಣಿಸುತ್ತದೆ.ಕಾಂಗ್ರೆಸ್‌ನಿಂದ ಹೊರಬಂದ ನಂತರ ಅವರು ಆಯ್ದುಕೊಂಡ ದಾರಿ ಸುಲಭವಾದದ್ದಾಗಿರಲಿಲ್ಲ. ಆದರೆ ಅಧಿಕಾರದ ರಾಜಕಾರಣಕ್ಕಿಂತ ತತ್ವ, ಜನಪರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ  ಬದುಕನ್ನು ಅವರು ಕಟ್ಟಿಕೊಂಡರು.ಹೀಗಾಗಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ಕನಸನ್ನು ಹೊತ್ತ ಕನ್ನಡತಿ, ಸಮಾಜವಾದಿ ಚಿಂತನೆಯ ಹೋರಾಟಗಾರ್ತಿ ಮತ್ತು ಜನಪರ  ಪ್ರತಿನಿಧಿಯಾಗಿ ಗುರುತಿಸುವುದು ಹೆಚ್ಚು ಸೂಕ್ತವಾಗಿದೆ. ಸವಿತಾ ದೇಶಮುಖ

Read Post »

ಕಾವ್ಯಯಾನ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ ನನಗೆಜಗತ್ತನ್ನೇ ಮರೆಯುವ ಆಸೆ ಎನಗೆಮೂಲೆ ಮೂಲೆಯಲ್ಲಿ ಪುಸ್ತಕಗಳ ರಾಶಿಅದರ ನಡುವೆ ನನ್ನದೇ ಒಂದು ಪ್ರಪಂಚ ಸೃಷ್ಟಿ. ಬೆರಳುಗಳು ಸೋಕಿದ ಪುಟಗಳ ಗಂಧಅದೆಷ್ಟೋ ಲೇಖಕರ ಉಸಿರಿನ ಸ್ಪಂದಕೆಲವು ಪುಟಗಳಲ್ಲಿ ಪ್ರೀತಿಯ ಕಥೆಕೆಲವುಗಳಲ್ಲಿ ಅದೆಷ್ಟೋ ಯುದ್ಧದ ವ್ಯಥೆ. ಕಿಟಕಿಯಿಂದ ಬೀಳುವ ಸಂಜೆಯ ಬೆಳಕುಧೂಳಿನ ಕಣಗಳಲ್ಲಿ ತೇಲುವ ಸಾಲು ಸಾಲುಸದ್ದು ಮಾಡದ ಮೌನದ ಮಾತುಗಳುಪುಸ್ತಕಗಳು ಆಡುವ ನಿಶ್ಯಬ್ದದ ಸವಿಗನಸುಗಳು. ಯಾರೂ ಹುಡುಕದ ಹಾಗೆ ಕಳೆದು ಹೋಗಬೇಕುನನಗೆ ನಾನೇ ಮತ್ತೆ ಸಿಗುವವರೆಗೆ ಹುಡುಕದಿರಿ ನನ್ನನುಒಂದು ಕವನದಿಂದ ಇನ್ನೊಂದು ಕವನಕ್ಕೆಒಂದು ಜೀವನದಿಂದ ಇನ್ನೊಂದು ಜೀವನಕ್ಕೆ. ಸಮಯ ಇಲ್ಲದ ಜಾಗ ಅದುಮುಚ್ಚಿದರೂ ತೆರೆದಿರುವ ಬಾಗಿಲದುಹೊರಗಿನ ಜಗತ್ತು ಕಾಯಲಿ ಸ್ವಲ್ಪ ಹೊತ್ತುನಾನು ಇಲ್ಲೇ ಇರ್ತೀನಿ ಈ ಅಕ್ಷರಗಳೆ ನನ್ನ ಸ್ವತ್ತು. ನಾವಾಗಿಯೇ ಕಳೆದು ಹೋಗಬೇಕಿದೆಮನಸ್ಸಿನಿಂದ ಮನೆಯೊಂದ ಮಾಡಬೇಕಿದೆನೀವು ಎಷ್ಟೊತ್ತಾದ್ರೂ ಇರಬಹುದು ಇಲ್ಲಿಪ್ರತಿ ಪುಸ್ತಕದಲ್ಲೂ ನಿಮ್ಮನ್ನು ನೀವು ಕಾಣಬಹುದು ಇಲ್ಲಿ. ನನಗೆ ಅತಿ ಇಷ್ಟದ ತಾನವಿದುಮನೆಯೊಳಗೊಂದು ಗ್ರಂಥಾಲಯ ಮಾಡುವುದುನನ್ನ ಬದುಕಿನ ಮಹದಾಸೆಯದುಮನ ನಿತ್ಯವೂ ಕಳೆದು ಹೋಗೆಂದಿಹುದು.. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ರಾಜಕೀಯ” ನಿನ್ನಕೈಯಲ್ಲಿದ್ದ ಕಲ್ಲಿಗೆಅಭಿವೃದ್ಧಿಯ ಫಲಕ ತೊಡಿಸಿದೆ! ನಿನ್ನಬಾಯಲ್ಲಿದ್ದ ಸುಳ್ಳಿಗೆಭರವಸೆ ಬಣ್ಣಗಳ ಬಳಿದೆ! ನಿನ್ನಜೇಬು ತುಂಬಿದ ಹಣಕ್ಕೆಜನಸೇವೆಯ ಹೆಸರು ನೀಡಿದೆ! ನಿನ್ನಕುರ್ಚಿಯ ಮೇಲಿನ ಮೋಹಕ್ಕೆಜನಹಿತದ ಮುಖವಾಡ ಹಾಕಿದೆ! ನಿನ್ನಜಾತಿಯ ಮೆಟ್ಟಿಲೇರಿ ನಿಂತುಸಮಾನತೆಯ ಭಾಷಣ ಮಾಡಿದೆ! ನಿನ್ನಧರ್ಮದ ಗೋಡೆ ಕಟ್ಟಿಕೊಂಡುಸೌಹಾರ್ದತೆಯ ಧ್ವಜ ಹಾರಿಸಿದೆ! ನಿನ್ನಚುನಾವಣೆಯ ಗೆಲುವಿಗೆಬಡವರ ಕಣ್ಣೀರಿಗೆ ಬೆಲೆ ಕಟ್ಟಿದೆ! ನಿನ್ನಮತ ಕೇಳುವ ಮನಸಿಗೆವರ್ಷಗಳ ಅಧಿಕಾರದ ಅಮಲಿದೆ! ನಿನ್ನವಿರೋಧಿಯಾದ ಮತಗಳಕುರ್ಚಿಯ ಆಮಿಷದಿ ಮಿತ್ರರಾಗಿಸಿದೆ! ನಿನ್ನಜನರು ಬದಲಾಗುತ್ತಾರೆಂದುಪ್ರತಿ ಚುನಾವಣೆಯಲ್ಲೂ ಹೇಳಿದೆ! ನಿನ್ನಜನ ಮತ್ತದೇ ಚುನಾವಣೆಯಲ್ಲಿಬದಲಾಯಿಸುತ್ತಾರೆಂಬುದ ಮರೆತೆ!ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬರೆಯಬೇಕು ಕವನ” ಬರೆಯಬೇಕು ಕವನನೋವು ಮರೆತು ನಲಿಯಲುಜೀವ-ಭಾವ ಬೆಸೆಯಲುಸ್ನೇಹ-ಪ್ರೀತಿ ಹಂಚಲುತನು-ಮನಗಳು ತಣಿಯಲುಸೃಷ್ಟಿ ಸೊಬಗ ಸವಿಯಲುಬಚ್ಚಿಟ್ಟ ಬಯಕೆ ಬಿಚ್ಚಿಡಲುಮಧುರ ಮಿಲನವಾಗಲುವಿಚಾರಧಾರೆ ಹರಿಸಲುಕನಸಗಳು ನನಸಾಗಲುಅಂತರಾಳವ ಅರಿಯಲುಅಭಿವ್ಯಕ್ತಿ ಅನಾವರಣವಾಗಲುಮನದಾಳದ ಮೌನ ಮಾತಾಗಲುತಲ್ಲಣಗಳ ಕೊನೆಗೊಳಿಸಲುವಿರಹ ವೇದನೆ ಮರೆಯಲುಭೇದ-ಭಾವ ಅಳಿಯಲುಅಜ್ಞಾನ ಅಂಧಕಾರ ಕಳೆಯಲುಸಮರಸ ಸಮಾಜ ಉಳಿಯಲುಸ್ವಾಸ್ಥ್ಯ ಸಾಹಿತ್ಯ ಸೃಷ್ಟಿಸಲುಸೃಜನಶೀಲತೆ ಬೆಳೆಸಲುಶಾಂತಿ ಸಮತೆ ಸಾರಲುಶಬ್ದಗಳ ಪೋಣಿಸಿ ಸಂಭ್ರಮಿಸಲುಬರವಸೆಯ ಬಾಳು ಬೆಳಗಲುಬರೆಯಬೇಕು ಕವನ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಶಿಕ್ಷಣ ಪ್ರವರ್ತಕ ರಾವ್ ಬಹಾದ್ದೂರ್ ಗಿಲಗಂಚಿ ಗುರುಸಿದ್ದಪ್ಪನವರು ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಎಂಬ ಉತ್ತರ ಕರ್ನಾಟಕದ ಧ್ರುವತಾರೆ ಸಮಾಜಸೇವಕ ಅಪ್ರತಿಮ ಸಮಾಜ ಚಿಂತಕರು.  ಇವರ ಸಂಕ್ಷಿಪ್ತ ಪರಿಚಯ ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಪ್ರಕಟ ಮಾಡುತ್ತಿದ್ದೇನೆ.  (1841–1891) ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಪ್ರವರ್ತಕರು, ಲಿಂಗಾಯತ ಧರ್ಮದ ಸಂಘಟಿಕರು, ಸಮಾಜ ಸುಧಾರಕರು ಮತ್ತು ಬ್ರಿಟಿಷ್ ಆಡಳಿತಾವಧಿಯಲ್ಲಿ ಧಾರವಾಡದ ಡೆಪ್ಯೂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಯಾಗಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯ ಮತ್ತು ಶೋಷಿತ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇವರು ನೀಡಿದ ಕೊಡುಗೆ ಅನನ್ಯವಾದದ್ದು. ಜನನ ಮತ್ತು ಶಿಕ್ಷಣ ಗಿಲಗಂಚಿ ಗುರುಸಿದ್ದಪ್ಪನವರು 1841 ರಂದು ಧಾರವಾಡದ ಲಿಂಗಾಯತ ನೇಕಾರ( ಹಟಗಾರ ) ಕುಟುಂಬದಲ್ಲಿ ಜನಿಸಿದರು. ಬಾಲಕ  ಗುರುಸಿದ್ದಪ್ಪನವರು ತುಂಬಾ ಚತುರ ಮತ್ತು ಬುದ್ಧಿವಂತನಾಗಿದ್ದನು. ಹೀಗಾಗಿ ಇವರ ತಂದೆ ವೀರಬಸಪ್ಪ ಇವರ ಶಿಕ್ಷಣಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ಅವರ ಪ್ರಮುಖ ಸಾಧನೆಗಳು ಮತ್ತು ಜೀವನದ ಮುಖ್ಯಾಂಶಗಳು : 1. ಶೈಕ್ಷಣಿಕ ಕ್ರಾಂತಿ ಮತ್ತು ಸಂಸ್ಥೆಗಳ ಸ್ಥಾಪನೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA): ಒಂದು ದಿನ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಆಪ್ತ ಮಿತ್ರರು ಇವರ ಜೊತೆಗೆ ಕೆಲಸ ನಿರ್ವಹಿಸುವ ಶ್ರೀ ಅರಟಾಳ ರುದ್ರಗೌಡರು ಮತ್ತು ಇತರ ಸ್ನೇಹಿತರೊಂದಿಗೆ ಒಂದು ದಿನ ಸಂಜೆ ಮೈಲಾರ ಗುಡ್ಡಕ್ಕೆ   ವಾಕಿಂಗ್ ವಸ್ತು ವಿಹಾರಕ್ಕೆ ಹೋಗುವಾಗ ಬೇರೆ ಬೇರೆ ವಿಷಯ ಮಾತನಾಡುತ್ತಾ ಲಿಂಗಾಯತರು ಏಕೆ ಹಿಂದುಳಿದಿದ್ದಾರೆ ಎಂದು ಚರ್ಚಿಸ ತೊಡಗಿದರು. ಇದಕ್ಕೆ ಮುಖ್ಯ ಕಾರಣ ಬಡತನ ಶಿಕ್ಷಣ ಇಲ್ಲದಿರುವುದು.   ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ ಇ ಎ ಲಿಂಗಾಯತ ಎಜ್ಯುಕೇಶನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು 1883 ರಲ್ಲಿ 215500 ರೂಪಾಯಿ ಹಣವನ್ನು ಡಿಪಾಸಿಟ್ ಮಾಡಿ ಅದರ ಬಡ್ಡಿಯಲ್ಲಿ ಲಾಕ್ ಲಿಂಗಾಯತ ಶಿಷ್ಯ ವೇತನ ಸ್ಕಾಲರ್ಶಿಪ್ ಫಂಡ್ ಬರುವಂತೆ ಯೋಜನೆಯನ್ನು ಜಾರಿಗೆ ತಂದರು.  ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡರು ಸೇರಿ 1883 ರಲ್ಲಿ ಧಾರವಾಡದಲ್ಲಿ Lingayat Education Association ಸಂಸ್ಥೆಯನ್ನು ಸ್ಥಾಪಿಸಿದರು. ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇದು ಪ್ರಮುಖ ಆಧಾರವಾಯಿತು. ಉತ್ತರ ಕರ್ನಾಟಕದ ಡಾ ಫ ಗು ಹಳಕಟ್ಟಿ ಅವರನ್ನೂ ಸೇರಿ ಅನೇಕ ಮಹನೀಯರು ಈ ಸಂಸ್ಥೆಯಿಂದ ಶಿಷ್ಯ ವೇತನ ಪಡೆದು ಬೆಳೆದವರು.  ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಲ್ಪಿ ಡಾ ಫ ಗು ಹಳಕಟ್ಟಿ ಇವರೂ ಸಹಿತ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಸ್ಥಾಪಿಸಿದ ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ತಮ್ಮ ಪದವಿ ಮತ್ತು ವಕೀಲಿ ಕೋರ್ಸ್ ಮಾಡಿದ್ದು. ಕೆ.ಎಲ್.ಇ ಸಂಸ್ಥೆಗೆ ಮುನ್ನುಡಿ:  ಇವರು ಸ್ಥಾಪಿಸಿದ್ದ ‘ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ಅಂದಿನ ಪ್ರಮುಖ ಸಪ್ತರ್ಷಿಗಳು ಪ್ರೊ ಶಿ ಶಿ ಬಸವನಾಳ ಪ್ರೊ ಎಂ ಆರ್ ಸಾಖರೆ ಬಿ ಎಸ್ ಹಂಚಿನಾಳ ಏಚ್ ಎಫ ಕಟ್ಟಿಮನಿ ಬಿ ಬಿ ಮಮದಾಪೂರ ಪಂಡಿತಪ್ಪ ಚಿಕ್ಕೋಡಿ  ಸರ್ದಾರ್ ವೀರನಗೌಡ ಪಾಟೀಲ   (ಏಳು ಜನ ಶಿಕ್ಷಕರು) ಉನ್ನತ ಶಿಕ್ಷಣ ಪಡೆದಿದ್ದರು. ಇದೇ ಪ್ರೇರಣೆಯಿಂದ ಮುಂದೆ ಪ್ರಸಿದ್ಧ KLE ಶಿಕ್ಷಣ ಸಂಸ್ಥೆ 1916 ರಲ್ಲಿ ಉದಯಿಸಲು ಸಾಧ್ಯವಾಯಿತು. 2. ಸಾಮಾಜಿಕ ಸೇವೆ ಮತ್ತು ಸಂಘಟನೆ ಅಖಿಲ ಭಾರತ ವೀರಶೈವ ಮಹಾಸಭೆ: ಸಮಾಜದ ಸುಧಾರಣೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಉದ್ದೇಶದಿಂದ ಸ್ಥಾಪನೆಯಾದ ವೀರಶೈವ ಮಹಾಸಭೆಯ ಆರಂಭಿಕ ದಿನಗಳಲ್ಲಿ ಅರಟಾಳ ರುದ್ರಗೌಡರು, ಸರ್ದಾರ್ ಬುಳ್ಳಪ್ಪ ಮಾಮಲೆದೇಸಾಯಿ ಮುಂತಾದ ಧೀಮಂತರು  ಸೇರಿ  ಸಮಾಜ ಸಂಘಟನೆಗೆ ಇವರು ಸ್ಪೂರ್ತಿಯಾದರು. ದೂರದೃಷ್ಟಿಯ ನಾಯಕತ್ವ: ಲಿಂಗಾಯತ  ಸಮಾಜ ಸುಶಿಕ್ಷಿತವಾಗಬೇಕೆಂಬ ಹಂಬಲದಿಂದ ತಮ್ಮ ಇಡೀ ಜೀವನ ಹಾಗೂ ಸಂಪತ್ತನ್ನು ಧಾರೆ ಎರೆದ ಇವರನ್ನು ಉತ್ತರ ಕರ್ನಾಟಕದ ಶೈಕ್ಷಣಿಕ ರಂಗದ ಪ್ರಾತಃಸ್ಮರಣೀಯರೆಂದು ಗೌರವಿಸಲಾಗುತ್ತದೆ. ಲಿಂಗಾಯತ ಸಮಾಜದಲ್ಲಿ ಮೊಟ್ಟ ಮೊದಲ ಡೆಪ್ಯುಟಿ ಕಮಿಷನರ್ ಆಗಿ ನೇಮಕ ಗೊಂಡ ಪ್ರಥಮರು  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಉದಾರತ್ವತನಕ್ಕೆ ಮಾದರಿ. 1884 ರಲ್ಲಿ ಪುಣೆಯಲ್ಲಿ ಓದುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ತಿಂಗಳಿಗೆ  80 ರೂಪಾಯಿಯಂತೆ ತಿಂಗಳಿಗೆ 320 ರೂಪಾಯಿಯನ್ನು ಐದು  ತಿಂಗಳು  ತಮ್ಮ ಸ್ವಂತ  ಹಣ ಕೊಡುತ್ತಿದ್ದರು.ಕಾರಣ ಲಿಂಗಾಯತ ವೆಲ್ ಫೇರ್ ಫಂಡ್ ಬಡ್ಡಿ ಜಮಾ ಆಗಿರದ ಕಾರಣ ತಮ್ಮ ಹಣವನ್ನು ಕೊಟ್ಟು ವಿದ್ಯಾರ್ಥಿಗಳನ್ನು ಕಲಿಸಿದರು.  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು 1890 ರಲ್ಲಿ ಒಂದು ದಿನ ಮಧ್ಯಾನ್ಹ ಊಟ ಮಾಡಿ ಪ್ರಾಂಗಣದಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಒಬ್ಬ ಬಡ ವಿದ್ಯಾರ್ಥಿ ಬಂದು ತನ್ನ ಕಾಲೇಜಿಗೆ ಫೀ ಕಟ್ಟಲು ಹಣ ಬೇಕೆಂದು ಕೇಳಿಕೊಂಡಾಗ  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಎದ್ದು ಗೂಟಕ್ಕೆ ನೇತು ಹಾಕಿದ್ದ ತಮ್ಮ ಕೋಟ್ ನ ಕಿಸೆಯಲ್ಲಿ ಕೈಹಾಕಿದಾಗ ಅಲ್ಲಿ ಒಂದು ಅಣೆ ಪೈಸೆ ದೊರೆಯಲಿಲ್ಲ . ಕಣ್ಣೀರು ಕೆನ್ನೆಯ ಮೇಲೆ ಹರಿದವು. ಅಸಹಾಯಕನಾಗಿ ದುಡ್ಡಿಲ್ಲ ಕ್ಷಮಿಸು ಎಂದು ಹೇಳಿ ಕಳುಹಿಸಿದರು. ವಿದ್ಯಾರ್ಥಿ ಮನೆಯ ಕಾಂಪೌಂಡ್ ದಾಟುವ ಮುನ್ನ ತಮ್ಮ ಎದೆಯ ಮೇಲಿನ ಬಂಗಾರದ  ಗುಂಡಗಡಗಿ ಕರಡಿಗೆ ತೆಗೆದು ಇಷ್ಟ ಲಿಂಗವನ್ನು ಕೈಯಲ್ಲಿ ಹಿಡಿದು ಬಿಳಿ ಬಟ್ಟೆಯಲ್ಲಿ ಕಟ್ಟಿ ಬಂಗಾರದ ಗುಂಡಗಡಗಿಯನ್ನು ಬಡ ವಿದ್ಯಾರ್ಥಿಗೆ ಕೊಟ್ಟು. ” ನೋಡು ಇದನ್ನು ಮಾರಿ ನಿನ್ನ ಇಡೀ ಶಿಕ್ಷಣವನ್ನು ಮುಗಿಸು ಎಂದು ಹರಸಿ ಕಳುಹಿಸಿದ ಮಹಾ ಮಾನವತಾವಾದಿ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಕೊನೆಯ ಸಂದೇಶ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಐವತ್ತನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವರನ್ನು ನೋಡಲು ಇವರ ಆಪ್ತ ಮಿತ್ರರು ಶ್ರೀ  ಅರಟಾಳ ರುದ್ರಗೌಡರು ಭೇಟಿಗೆ ಬಂದರು ” ರಾವ್ ಸಾಹೇಬ್ ಶ್ರೀ ಗುರುಸಿದ್ದಪ್ಪನವರೇ ನಮಗೆ ಏನಾದರೂ ತಮ್ಮ ಸಂದೇಶ ಮಾರ್ಗದರ್ಶನ ನೀಡುತ್ತೀರಾ ಎಂದು ಕೇಳಿದಾಗ ಮುಗುಳು ನಕ್ಕು. ರುದ್ರಗೌಡರೆ ನಾವಿಬ್ಬರೂ ಆರಂಭಿಸಿದ ಲಿಂಗಾಯತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA) ಎಲ್ಲಾ ಬಡ ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ಶಿಷ್ಯವೇತನ ನೀಡಿ. ಯಾರೂ ಶಿಕ್ಷಣ ವಂಚಿತರಾಗಬಾರದು. ಬಸವಾದಿ ಶರಣರ ಕಾಯಕ ದಾಸೋಹ ನಿಲ್ಲ ಬಾರದು ಎಂದು ಅವರಿಂದ ಪ್ರಮಾಣ ಮಾಡಿಸಿಕೊಂಡರು.  22ಜೂನ್ 1891 ರಂದು ಅವರು ಬಯಲಲ್ಲಿ ಬಯಲಾದರು. ಇಂತಹ ಅಪರೂಪದ ಮಹಾಶರಣ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ನಾಗರಿಕ ಸಮಾಜಕ್ಕೆ  ಲಿಂಗಾಯತ ಸಮಾಜದವರಿಗೆ ನಿತ್ಯ ಸ್ಮರಣೀಯರು ಸಾವಿಲ್ಲದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಕಾವ್ಯಯಾನ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ನಿಶಾ ಹೆಚ್ ಕಾಮತ್ “ನಿರಾಸೆ” ನನಸಾಗದ ಕನಸೆಂದು ತಿಳಿದೂ  ಮನದ ಮೂಲೆಯಲೊಂದು ಆಸೆನಾನೂ ಮನಸ ಬಳಿ ಮಾತನಾಡುವೆ  ಆಡದೇ ಯಾವುದೇ ಭಾಷೆ ಇಂದೋ ನಾಳೆಯೊ ತಿಳಿಯದ ಅಂತ್ಯಮಾಡಿದ್ದೆಲ್ಲವೂ ವ್ಯರ್ಥಕಣ್ಣೆದುರಲ್ಲೇ ಜೀವನ ಮರಣನಮ್ಮಲ್ಲೇಕಿದೆ ಸ್ವಾರ್ಥ ? ತಿಳಿಯದೆ ಏನೂ ವರ್ತಿಸುವುದೇಕೆತಿಳಿದವರಂತೆ ನಾವುತಿಳಿದರೆ ತಿಳಿಸಿ ತೆಗೆವುದು  ಹೇಗೆಮಾನವ ಕುಲದ ನೋವು? ಬೆಳೆಸಿದಿರೇಕೆ ಗಿಡವನು ಅಂದುಆಸೆಯ ಬೀಜವ ನೆಟ್ಟು?ಈ ದಿನ ನಾನು ತಡೆಯಲಿ ಹೇಗೆಜನಗಳ ಕೊಡಲಿಯ ಪೆಟ್ಟು ? ಗುರುತಿಸದಿದ್ದರೂ ನೋವಿರಲಿಲ್ಲನಾನು ಮಾಡಿದ ಸಾಧನೆತಿಳಿದು ಕೊಳ್ಳಲು ಪ್ರಯತ್ನಿಸಬಾರದೆನನ್ನ ಮನಸಿನ ಭಾವನೆ ನಿಶಾ ಹೆಚ್ ಕಾಮತ್ ಕಿನ್ನಿಗೋಳಿ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ” Read Post »

You cannot copy content of this page

Scroll to Top