ವಿಶೇಷ ಲೇಖನ ಗೊರೂರು ವಸಂತಿ ಮೂರ್ತಿ (ಕೆನಡ) “ನನ್ನ ಯೋಗಾಭ್ಯಾಸ ಪ್ರಾರಂಭ” ಮನುಷ್ಯ ಸುಖವಾಗಿ ಬಾಳಬೇಕಾದರೆ ಇರುವುದಕ್ಕೆ ಒಂದು ಮನೆ, ಉಡುವುದಕ್ಕೆ ಬಟ್ಟೆ, ಹೊಟ್ಟೆತುಂಬ ಊಟ ಮತ್ತು ಒಳ್ಳೆಯ ಆರೋಗ್ಯ ಅತ್ಯಗತ್ಯ. ಈ ಪಟ್ಟಿಯಲ್ಲಿ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಮನ್ನಣೆ ಕೊಡಲಾಗುತ್ತದೆ.. ಇದಕ್ಕೆ ಕಾರಣ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನೆ, ಬಟ್ಟೆ, ರುಚಿಕರವಾದ ಆಹಾರ, ಕಾರು ಒಡವೆಗಳಿಂದ ಸಂತೋಷ ಪಡೆಯಲು ಸಾಧ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವ ಐಶ್ವರ್ಯದಿಂದಲೂ ಪ್ರಯೋಜನವಿಲ್ಲ. ಅದರಿಂದಲೇ ಆರೋಗ್ಯವೇ ಭಾಗ್ಯ ಎಂಬ ಮಾತು ವಾಡಿಕೆಯಲ್ಲಿದೆ. “It is health that is real wealth and not pieces of gold and silver” ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ. ಆದ್ದರಿಂದ ಆರೋಗ್ಯ ಭಾಗ್ಯ ಮಿಕ್ಕೆಲ್ಲ ಭಾಗ್ಯಗಳಿಗಿಂತಲೂ ಹೆಚ್ಚು ಮುಖ್ಯ. ಇದು ನಾನು ಕಂಡುಹಿಡಿದ ಹೊಸ ವಿಷಯವೇನಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲೂ ತಿಳಿದಿರುವ ವಿಚಾರ. ಹಾಗಿರುವಾಗ ಪ್ರತಿವ್ಯಕ್ತಿಯೂ ತನ್ನ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು ಎಂಬುದು ಸರ್ವವಿದಿತವಾಗಿದೆ ತಾನೇ. ಹಾಗಿದ್ದೂ ವ್ಯಕ್ತಿ ತನ್ನ ಆರೋಗ್ಯದ ವಿಚಾರ ಯೋಚಿಸುವುದು ಅದು ಶರೀರದಲ್ಲಿ ಕಡಿಮೆಯಾಗಿ ತೊಂದರೆ ಶುರುವಾದಾಗ ಮಾತ್ರ. ಉದಾಹರಣೆಗೆ ನಮ್ಮ ಬಾಯಿನಲ್ಲಿ ಇರುವ ಹಲ್ಲನ್ನೇ ನೋಡೋಣ. ನಾವು ನಮ್ಮ ಬಾಯಿನಲ್ಲಿರುವ ಹಲ್ಲನ್ನು ಎಂದೂ ಗಮನಿಸಿದ್ದೇ ಇಲ್ಲ. ಆದರೂ ಅದು ನಾವು ಹುಟ್ಟಿದಾಗಿನಿಂದ ನಮ್ಮ ಬಾಯಲ್ಲಿದ್ದು ನಾವು ಯಾವ ತಿಂಡಿ, ಹಣ್ಣು, ಊಟ, ದೋಸೆ, ಚಪಾತಿ, ವಡೆ ಇಡ್ಲಿ ಸಾಂಬಾರ್ ಮೈಸೂರ್ ಪಾಕ್ ಹೀಗೆ ಏನೇ ಹಾಕಿದರೂ ಅದನ್ನು ಅಗಿದು. ಅದರ ರುಚಿ, ಘಮಗಳನ್ನು ನಮ್ಮ ಬಾಯಿನಲ್ಲಿ ಕುದುರಿಸಿ ನಮ್ಮ ರಸಾನುಭವವನ್ನು ಹೆಚ್ಚಿಸಿದೆ. ಆದರೂ ಹಲ್ಲಿಗೆ ನಾವು ಯಾವ ರೀತಿಯ ಮನ್ನಣೆ ಅಥವಾ ಕೃತಜ್ಞತೆಯನ್ನೂ ತೋರಿಸಿದ್ದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಹಲ್ಲು ನೋವು ಶುರುವಾದಾಗ ನಮಗೆ ಹಲ್ಲಿನ ಅಸ್ತಿತ್ವ ಬರುತ್ತದೆ. ಆಗ ನಾವು ಯಾವ ತಿಂಡಿಯನ್ನೂ ಬಯಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಪ್ರೀತಿಯ ತಿಂಡಿ ಎದುರಿಗೇ ಇದ್ದರೂ ಅದನ್ನು ಬಾಯಿಗೆ ಹಾಕಿಕೊಳ್ಳುವ ಇಚ್ಛೆ ಬರುವುದಿಲ್ಲ. ಹಲ್ಲುನೋವಿಗೆ ಏನು ಮಾಡಬೇಕು ಎಂದು ಕಂಡವರನ್ನೆಲ್ಲ ಕೇಳುತ್ತೇವೆ. ಕೆಲವರು ಉಪ್ಪು ನೀರು ಕುಪ್ಪಳಿಸಿ ಎನ್ನುತ್ತಾರೆ. ಇನ್ನೊಬ್ಬರು ಲವಂಗ ಬಾಯಿಗೆ ಹಾಕಿಕೊಳ್ಳಿ ಎನ್ನುತ್ತಾರೆ. ನಾವು ಏನುಮಾಡುವುದಕ್ಕೂ ತಯಾರಾಗುತ್ತೇವೆ. ದಂತವೈದ್ಯರನ್ನು ಹುಡುಕಿಕೊಂಡು ಭರಬಿದ್ದು ಓಡುತ್ತೇವೆ. ಆದ್ದರಿಂದ ನಾವು ನಮ್ಮ ಆರೋಗ್ಯಕ್ಕೆ ಗಮನ ಕೊಟ್ಟು ಅದನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕೆಲವು ಸುಲಭವಾದ ನಿಯಮಗಳನ್ನು ಪಾಲಿಸಬೇಕು. ಹಿತಮಿತವಾದ ಊಟ, ವ್ಯಾಯಾಮ ಇವು ಅತ್ಯಗತ್ಯ, ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಇಷ್ಟ ಬಂದದ್ದನ್ನು ತಿನ್ನುತ್ತಾ, ಕುಡಿಯುತ್ತಾ, ದಿನವೂ ಮದುವೆ, ಮುಂಜಿ, ತಿಥಿ, ಹಬ್ಬ, ಹರಿದಿನ, ಗ್ರಹಪ್ರವೇಶ, ದೇವರ ಸಮಾರಾಧನೆ ಹುಟ್ಟಿದ ಹಬ್ಬಗಳು, ಹೋಟೆಲ್ ಊಟಗಳು ಹೀಗೆ ಯಾವಯಾವ ನೆಪವನ್ನೂ ಹುಡುಕಿ ಮಿತಿಮೀರಿ ಊಟ ಮಾಡುತ್ತಾ, ತಮ್ಮ ಆರೋಗ್ಯವನ್ನು ಅಲಕ್ಷ್ಯಮಾಡುತ್ತಾರೆ. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಬೋಂಡಾ, ಚೆಕ್ಕುಲಿ, ಮಸಾಲವಡೆ ಇನ್ನೂ ಅನೇಕ ವಿಧವಾದ ಖಾದ್ಯ ಪದಾರ್ಥಗಳನ್ನು ಸದಾ ಮೇಯುತ್ತಾ ಮೈಗಳ್ಳರಾಗಿ ನಾನು ಕಲ್ಲನ್ನೂ ತಿಂದು ಅರಗಿಸಿಕೊಳ್ಳಬಲ್ಲೆ. ಆರೋಗ್ಯದಲ್ಲಿ ನನಗೆ ಸಮಾನವಾದವರು ಯಾರೂ ಇಲ್ಲವೇ ಇಲ್ಲ. ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ಚಿಕ್ಕವಯಸ್ಸಿನ ಯುವಕರಲ್ಲಿ ಈ ತರ್ಕ ನಡೆಯಬಹುದು. ಆದರೆ ಇದು ತಾತ್ಕಾಲಿಕ. ಕೆಲವೇ ವರ್ಷಗಳಲ್ಲಿ ಮೈಯ್ಯಲ್ಲಿ ತೂಕ ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ಜನರಿಗೆ ಅಷ್ಟು ಆರ್ಥಿಕ ಸೌಕರ್ಯ ಇರುತ್ತಿರಲಿಲ್ಲವಾಗಿ ಅವರು ಊಟ ತಿಂಡಿಗಳ ಬಗ್ಗೆ ಹಿತಮಿತವಾಗಿ ಇರುತ್ತಿದ್ದರು. ಊಟದಲ್ಲಿ ಅಷ್ಟು ತುಪ್ಪ, ಎಣ್ಣೆ, ಬೆಣ್ಣೆ ಸಕ್ಕರೆ, ಮೈದಾ ಇರುತ್ತಿರಲಿಲ್ಲ. ಈಗ ಹೆಚ್ಚು ಜನರ ಜೀವನ ಆರ್ಥಿಕವಾಗಿ ಸುಧಾರಿಸಿದೆ. ಇದು ಸಂತೋಷದ ವಿಚಾರ. ಇದನ್ನು ಜನ ತಮ್ಮ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದೂ ಅಲ್ಲದೆ ಆ ಕಾಲದಲ್ಲಿ ಬಸ್ಸು ಕಾರುಗಳ ಸೌಕರ್ಯ ಅಷ್ಟು ಇರಲಿಲ್ಲವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಮನೆಕೆಲಸ, ದನಕರುಗಳ ಪಾಲನೆ, ವ್ಯವಸಾಯ ಹೀಗೆ ಎಲ್ಲರಿಗೂ ಯಥೇಚ್ಛವಾಗಿ ವ್ಯಾಯಾಮ ಸಿಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆಗಳು ತುಂಬಾ ಸುಧಾರಿಸಿವೆ. ಪ್ರತಿಮನೆಯಲ್ಲೂ ಸ್ಕೂಟರ್, ಕಾರುಗಳಿದ್ದು, ಯಾರೂ ಕಾಲಿಗೆ ವ್ಯಾಯಾಮ ಕೊಡಬೇಕಾದ ಅವಶ್ಯಕತೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದರೆ ಮನೆಯ ಹೆಂಗಸರಿಗೆ ಕೆಲಸ ಜಾಸ್ತಿ ಯಾಗುತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಹೆಂಗಸರು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಇಷ್ಟ ಬಂದರೆ ಮಾಡಬಹುದು. ಇಲ್ಲದಿದ್ದರೆ ಬೇಕಿಲ್ಲ. ಅದರಲ್ಲೂ ಅನೇಕ ಹೆಂಗಸರು ಹೊರಗೆ ಉದ್ಯೋಗ ಮಾಡುತ್ತಾರೆ. ಅವರಿಗೆ ಮನೆ ಕೆಲಸ ಮಾಡುವುದಕ್ಕೆ ಖಂಡಿತ ಸಮಯ ಸಿಕ್ಕುವುದಿಲ್ಲ. ಈಗ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲೂ ರುಚಿ ರುಚಿಯಾದ ತಿಂಡಿ, ಊಟಗಳನ್ನೂ ತಯಾರಾಗಿ ಮಾರುವ ಅಂಗಡಿಗಳು ಇವೆ. ಅಲ್ಲಿಯೇ ಹೋಗಿ ಕುಳಿತು ತಿನ್ನಬಹುದು ಇಲ್ಲ ಮನೆಗೆ ಕಟ್ಟಿಸಿಕೊಂಡು ಬರಬಹುದು. ಸಿಹಿ ಪದಾರ್ಥಗಳನ್ನು ಮಾಡಿ ರೆಡಿಯಾಗಿ ಇಟ್ಟಿರುವ ಆಶಾ ಸ್ವೀಟ್ಸ್, ಕಾಂತಿಸ್ವೀಟ್ಸ್, ನಂದಿನಿ ಪಾರ್ಲರ್, ಹೋಳಿಗೆಮನೆ ಮುಂತಾದುವು ಬಹಳ ಜನಪ್ರಿಯವಾಗಿವೆ. ಹೀಗೆ ಕಷ್ಟಪಡದೇ ರುಚಿ ರುಚಿಯಾದ ಊಟ ಮಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಇದು ಬಹಳ ಮಜಾ ಎನ್ನಿಸುತ್ತದೆ. ಆದರೆ ಈ ಖುಷಿಗೆ ಬರುವ ಧಕ್ಕೆ ನಮ್ಮ ಶರೀರ ಸ್ಥೂಲವಾದಾಗ. ಇದ್ದಕ್ಕಿದ್ದಂತೆ ನಾನು ದಪ್ಪನಾಗುತ್ತಿದ್ದೇನೆ ಎನ್ನುವ ಒಳಧ್ವನಿ ಕೇಳಿಸಲು ಶುರುವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿಲ್ಲ. ಅಂಗಿ, ರವಿಕೆ ಬಿಗಿಯಾದ ಕಾರಣ ಏನು ಎಂದು ಹೊರಗಿನ ಕಾರಣ ಹುಡುಕುತ್ತೇವೆ. “ನೋಡು ಈ ಬ್ಲೌಸ್ ಒಂದು ಸಲ ನೀರಿಗೆ ಹಾಕಿದ ಕೂಡಲೇ ಶೃಂಕ್ ಆಗಿದೆ.” ಎನ್ನುತ್ತೇವೆ. ಆದರೆ ನೀರನ್ನೇ ಕಾಣದ ಪೆಟ್ಟಿಗೆಯಲ್ಲಿ ಮಡಿಸಿ ಇಟ್ಟಿರುವ ಸಿಲ್ಕ್ ರವಿಕೆ ಶೃಂಕ್ ಆಗುವುದಕ್ಕೆ ಏನು ಕಾರಣ? ಅದಕ್ಕೆ ಬಟ್ಟೆ ಹೊಲೆದ ದರ್ಜಿಯೇ ಕಾರಣ ಎಂದು ತೀರ್ಪು ಕೊಡುತ್ತೇವೆ. ಕರೆಕ್ಟ್ ಆಗಿರುವ ಅಳತೆ ಬ್ಲೌಸ್ ಕೊಟ್ಟಿದ್ದೆ. ಆದರೂ ಎಷ್ಟು ಬಿಗಿಯಾಗಿ ಹೊಲೆದಿದ್ದಾನೆ ನೋಡು. ಉಸಿರು ಬಿಡುವುದಕ್ಕೇ ಆಗುವುದಿಲ್ಲ ಎಂದು ನಿರಪರಾಧಿಯಾದ ದರ್ಜಿಯನ್ನೇ ಬೈಯುತ್ತೇವೆ. ಆದರೆ ನಮ್ಮ ಒಳಗುಟ್ಟು ನಮಗೇ ಗೊತ್ತಿದೆ. ನನ್ನ ದೇಹದ ತೂಕ ಜಾಸ್ತಿ ಆಗುತ್ತಿದೆ. ಊಟ ಕಡಿಮೆ ಮಾಡಬೇಕು. ದಿನವೂ ವಾಕಿಂಗ್ ಮಾಡಬೇಕು. ಯೋಗ ಕ್ಲಾಸ್ ಸೇರುವುದು ಒಳ್ಳೆಯದು ಎಂಬ ಯೋಚನೆ ಬರುತ್ತದೆ. ಆದರೆ ಶರೀರ ಸ್ಥೂಲವಾದಷ್ಟೂ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ನಡೆಯುವಾಗ ಏದುಸಿರು ಬರುತ್ತದೆ. ಅನೇಕರಿಗೆ ಡಾಕ್ಟರು ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗುತ್ತಿದೆ. ನೀವು ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಿ ಎಂದು ಬಹಳ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಕೇಳಿದಾಗ ನಮಗೆ ಡಾಕ್ಟರರ ಮೇಲೆಯೇ ಅಸಮಾಧಾನವಾಗುತ್ತದೆ. ಬ್ಲಡ್ ಪ್ರೆಷರ್ ವಿಚಾರ ಹೇಳುವಾಗ ನನಗೆ ನನ್ನ ಚಿಕ್ಕಪ್ಪ (ನನ್ನ ತಂದೆಯವರ ಸ್ವಂತ ತಮ್ಮ) ಪಂಡಿತ ನರಸಿಂಹಾಚಾರ್ ಅವರ ಜ್ನ್ಯಾಪಕ ಬರುತ್ತದೆ. ಅವರು ಬಹಳ ವೈದೀಕರು. ಶ್ರದ್ಧಾವಂತರು. ಸಂಸೃತ, ಕನ್ನಡ ಹಾಗೂ ಹಿಂದಿ ಪಂಡಿತರು. ಊಟ ತಿಂಡಿಗಳಲ್ಲಿ ಬಹಳ ನಿಯಮವಾಗಿ ಇರುವವರು. ಏಕಾದಶಿಯ ದಿನ ಸಂಪೂರ್ಣ ಉಪವಾಸ ಮಾಡುತ್ತಿದ್ದರು. ಅವರು ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ನಡೆದುಕೊಂಡೇ ಹೋಗುತ್ತಿದ್ದರು. ಆಟೋರಿಕ್ಷಾ ಹತ್ತಿದವರೇ ಅಲ್ಲ. ಅವರು ಪ್ರತಿವರ್ಷ ಚಾತುರ್ಮಾಸ್ಯ ಎಂಬ ವ್ರತವನ್ನು ಪಾಲಿಸುತ್ತಿದ್ದರು. ಅದು ಬಹಳ ಕಷ್ಟಕರವಾದ ವ್ರತ. ವರ್ಷದಲ್ಲಿ ನಾಲ್ಕು ತಿಂಗಳು, ಪ್ರತಿತಿಂಗಳೂ ನಿರ್ದಿಷ್ಠವಾದ ಪದಾರ್ಥಗಳನ್ನು ವರ್ಜಿಸಿ ಊಟ ಮಾಡಬೇಕು. ಕೊನೆಯ ತಿಂಗಳಿನಲ್ಲಿ ಉಪ್ಪಿಲ್ಲದೆ ಊಟಮಾಡಬೇಕು. ಇಂತಹ ಕಠಿಣ ವ್ರತವನ್ನು ಅನೇಕ ವರ್ಷಗಳ ಕಾಲ ಪಾಲಿಸಿ ಜಯಿಸಿದ ಅವರಿಗೆ ನಾವು ಸದಾಕಾಲವೂ ಮೇಯುತ್ತಿರುವುದನ್ನು ನೋಡಿ ಮನಸ್ಸಿಗೆ ಕಷ್ಟವಾಗಿದ್ದಿರಬೇಕು. ಅವರು ಯಾವುದನ್ನೂ ಖಡಾಖಂಡಿತವಾಗಿ ಹೇಳುವವರು. ಆದರೆ ಅವರ ಮನಸ್ಸು ಒಳ್ಳೆಯದು. ಅವರು ಮೃದುಹೃದಯದವರು. ಅವರ ಮಾತೇ ಗಡಸು. ಈ ಕಾರಣದಿಂದ ನಾವು ಚಿಕ್ಕಂದಿನಿಂದಲೂ ಅವರೊಡನೆ ಎಷ್ಟೋ ಅಷ್ಟೇ ಮಾತನಾಡುತ್ತಿದ್ದೆವು. ಒಮ್ಮೆ ನಾನು ಡಾಕ್ಟರ್ ಬಳಿ ಹೋಗಿ ವಾಪಸ್ಸು ಬಂದಾಗ ಅವರು ಕಾಳಜಿಯಿಂದ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸಿದರು. ಡಾಕ್ಟರ್ ನನಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಹೇಳಿದರು ಎಂದೆ. ಅವರು ನಿರ್ದಾಕ್ಷಿಣ್ಯವಾಗಿ “ಅದು ಬ್ಲಡ್ ಪ್ರೆಷರ್ ಅಲ್ಲ. ಫುಡ್ ಪ್ರೆಷರ್. ನಿನಗೆ ಬ್ಲಡ್ ಪ್ರೆಷರ್ ಹೆಚ್ಚಾಗಿರುವುದಕ್ಕೆ ಇಷ್ಟೇ ಕಾರಣ. ಆಹಾರ ಜಾಸ್ತಿ ಆಗಿದೆ. ನೀನು ಊಟ ತಿಂಡಿಗಳನ್ನು ತಿನ್ನುವುದು ಕಡಿಮೆ ಮಾಡಿಕೋ. ದಿನಾ ಒಂದುಘಂಟೆ ಕಾಲ ನಡೆಯುವ ಅಭ್ಯಾಸ ಇಟ್ಟುಕೋ. ನಿನ್ನ ಬ್ಲಡ್ ಪ್ರೆಷರ್ ತಾನಾಗಿಯೇ ಹತೋಟಿಗೆ ಬರುತ್ತದೆ.” ಎಂದು ತೀರ್ಮಾನ ಕೊಟ್ಟರು. ನಾನು ಅವರಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದೆ. ಅದರ ಬದಲು ಅವರ ಈ ನಿರ್ಣಯವನ್ನು ಕೇಳಿ ನನಗೆ ಸ್ವಲ್ಪ ಅಪಮಾನವಾದಂತಾಯಿತು. ಮುಖ ಪೆಚ್ಚಾಯಿತು. ಅಲ್ಲಿಯೇ ನಿಂತಿದ್ದ ಅವರ ಮಗಳು ಹೆಚ್ಚು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿದಳು. ಆಮೇಲೆ ಅಣ್ಣ ಹತ್ತಿರ ಯಾಕೆ ಹೇಳುವುದಕ್ಕೆ ಹೋದೆ. ಅವರಿಗೆ ಗೊತ್ತಿರುವುದು ತಲೆಗೆಲ್ಲಾ ಒಂದೇ ಮಂತ್ರ. “ಲಂಘನಮ್ ಪರಮೌಷಧಂ” ಎಂದು ನಕ್ಕಳು. ಆದರೆ ನನಗೆ ಮಾತ್ರ ಅವರು ಹೇಳಿದ್ದು ನೂರಕ್ಕೆ ನೂರು ನಿಜ ಎನ್ನಿಸಿತು. ನಮ್ಮ ತೂಕ ಹೆಚ್ಚಾಗಿರುವುದಕ್ಕೆ ಆಧುನಿಕ ಯುಗದಲ್ಲಿ ಅನೇಕ ಕಾರಣಗಳು ಇವೆ ಎಂದು ಹೇಳಿದೆನಷ್ಟೆ. ಸೃಷ್ಟಿಕರ್ತನ ತಪ್ಪೂ ಇದರಲ್ಲಿ ಇದೆ ಎನ್ನಿಸುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ದೇವರು ಮನುಷ್ಯನ ಶರೀರವನ್ನು ಸೃಷ್ಟಿಸಿದಾಗ ಪ್ರತಿಯೊಬ್ಬ ಜೀವಿಗೂ ಒಂದು ತಲೆ, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಎರಡು ಕೈ, ಎರಡು ಕಾಲು ಹೀಗೆ ನಿಗದಿಯಾಗಿ ಕೊಟ್ಟಿದ್ದಾನೆ. ಆದರೆ ನಮ್ಮ ಮೈಯ್ಯನ್ನು ಸುತ್ತಿರುವ ಚರ್ಮಕ್ಕೆ ಇಷ್ಟೇ ಎಂಬ ನಿಗದಿಯೇ ಇಲ್ಲ. ಅದು ನಾವು ದಪ್ಪನಾದಷ್ಟೂ ಹಿಗ್ಗುತ್ತಾ ಹೋಗುತ್ತದೆ. ಒಂದು ಪಕ್ಷ ಹಾಗಿಲ್ಲದೇ ನಾವು ತಿನ್ನುತ್ತಿರುವಾಗಲೇ ಆ ಕ್ಷಣದಲ್ಲೇ ನಮ್ಮ ಹೊಟ್ಟೆ ದಪ್ಪನಾಗಿ ಊದುತ್ತಾ ಚರ್ಮ ಬಿಗಿಯಾಗುತ್ತಾ ಪಟಾರ್ ಎಂದು ಹರಿದುಹೋಗಿ ನಾವು ತಿಂದಿದ್ದೆಲ್ಲ ಹೊರಕ್ಕೆ ಚೆಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂದು ಎಲ್ಲರಿಗೂ ಕಾಣಿಸುವಂತಾಗಿದ್ದರೆ ನಮಗೆ ಆಗುವ ಅವಮಾನವನ್ನು ಊಹಿಸಿಕೊಳ್ಳಿ. ತಕ್ಷಣವೇ ಹೊಟ್ಟೆಗೆ ತುರುಕುವುದನ್ನು ನಿಲ್ಲಿಸಬೇಕಾಗಿತ್ತಿತ್ತು. ಅದಕ್ಕೇ ದೇವರು ನಮ್ಮ ಮೇಲೆ ಕರುಣೆ ಇಟ್ಟು ಈ ವರವನ್ನು ಕರುಣಿಸಿದ್ದಾನೆ ಎನ್ನಿಸುತ್ತದೆ. ನಾನು ಮೊದಲೇ ಹೇಳಿದಂತೆ ಆರ್ಥಿಕವಾಗಿ ಸಮಾಜದಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಅನೇಕರು ಕಾರು, ಸ್ಕೂಟರ್ ಹೀಗೆ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಅನೇಕ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಅದೂ ಅಲ್ಲದೇ ಸಮಾಜದಲ್ಲಿ ಕಾರು ಇಟ್ಟುಕೊಂಡವರ ಘನತೆ ಗೌರವಗಳು ಹೆಚ್ಚು ಎನ್ನಿಸಿಕೊಳ್ಳುತ್ತದೆ. ಇದರಿಂದ ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲ ದೊಡ್ಡ ನಗರಗಳಲ್ಲಿ ಸ್ವಂತ ವಾಹನವಿಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಬಹಳ ಕಷ್ಟವಾಗುತ್ತದೆ. ಆಟೋ, ಬಸ್ಸು, ಊಬರ್ ಇವು ಯಾವುದೂ ಸಮರ್ಪಕವಾಗಿ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲಪಿಸುವುದಿಲ್ಲ. ಈ ಕಾರಣದಿಂದ ಯಾವ ಜಾಗಕ್ಕಾದರೂ ಹೋಗಬೇಕೆಂದರೆ ಹೆಚ್ಚು ಕಡಿಮೆ ಒಂದು ಇಡೀ ದಿನವನ್ನೇ ಮೀಸಲಾಗಿಡಬೇಕಾಗುತ್ತದೆ. ಇತ್ತೀಚೆಗೆ ನಮ್ಮ ಹಳ್ಳಿಯ