ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-36 ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ ಅರ್ಜುನ ಉವಾಚ ದಶರಥಸುತ ದಮನಿಸಿದ ದಶಕಂಠನನ್ನು   ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು…      ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ

Read Post »

ಪುಸ್ತಕ ಸಂಗಾತಿ

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ

ಪುಸ್ತಕ ಸಂಗಾತಿ ಎ.ಹೇಮಗಂಗಾ ವನಜಾ ಜೋಶಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ *ಮನಸಿಗೆ ಮುದ ತಂದ ವನಸುಮದ ಕಂಪು* *ಶೀರ್ಷಿಕೆ: ನಕ್ಕುಬಿಡು ಬಾನಕ್ಕಿ* ( ಗಜಲ್ ಸಂಕಲನ )*ಕವಯಿತ್ರಿ : ಶ್ರೀಮತಿ ವನಜಾ ಜೋಶಿ**ಚರವಾಣಿ: 99012 39477**ಪ್ರಕಾಶಕರು : ಸಂಸ್ಕೃತಿ ಬುಕ್ ಏಜೆನ್ಸೀಸ್, ಮೈಸೂರು**ಪ್ರಥಮ ಮುದ್ರಣ: 2025*ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿರುವ, ಸೆಳೆಯುತ್ತಲೇ ಇರುವ ‘ ಕಾವ್ಯದ ರಾಣಿ ‘ ಗಜಲ್ ನ ರಚನೆಯಲ್ಲಿ ತೊಡಗಿರುವ ಕವಿ, ಕವಯಿತ್ರಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚೆಂಬುದು ತಿಳಿದು ಬಂದಿದೆ. ವೃತ್ತಿಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಈಗ ನಿವೃತ್ತ ಜೀವನವನ್ನು ತಮ್ಮ ಆಸಕ್ತಿಯ ಓದು ಹಾಗೂ ಬರವಣಿಗೆಯ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಶ್ರೀಮತಿ ವನಜಾ ಜೋಶಿಯವರು ಸಾಮಾಜಿಕ ಜಾಲತಾಣದ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ‘ ವನಸುಮ ‘ ಎಂಬ ತಖಲ್ಲುಸ್ ನಿಂದ ಗಜಲ್ ಕವಯಿತ್ರಿಯಾಗಿ ಪರಿಚಿತರಾಗಿದ್ದಾರೆ. ಅಂತೆಯೇ, ತಮ್ಮ ರಚನೆಗಳಿಂದ ಇತರರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪ್ರೌಢ ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿದ್ದು ಕಾಲಕ್ರಮೇಣ ಪ್ರಬುದ್ಧ ಕವಯಿತ್ರಿಯಾಗಿ ಗುರುತಿಸಿಕೊಂಡ ಇವರಿಗೆ ಛಂದೋಬದ್ಧವಾದ ಮುಕ್ತಕ ಮತ್ತು ಷಟ್ಪದಿಗಳ ರಚನೆಯ ಕಲೆಯೂ ಒಲಿದಿದೆ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ವನಜಾ ಜೋಶಿಯವರು 2025 ರಲ್ಲಿ ಪ್ರಕಟಿಸಿದ ‘ ನಕ್ಕುಬಿಡು ಬಾನಕ್ಕಿ ‘ ಗಜಲ್ ಸಂಕಲನವು ತನ್ನ ಶೀರ್ಷಿಕೆ , ಸುಂದರ ಮುಖಪುಟ ಹಾಗೂ ಉತ್ತಮ ಮುದ್ರಣದಿಂದ ಮೊದಲ ನೋಟಕ್ಕೇ ಎಲ್ಲರ ಮನಗಳನ್ನು ಸೆಳೆಯುತ್ತದೆ. ಕೃತಿಯನ್ನು ವಿದ್ಯೆಯೆಂಬ ಅಮೃತವನ್ನಿತ್ತು ಅರಿವು ಮೂಡಿಸಿ ಬೆಳೆಸಿದ, ಹರಸಿದ ಎಲ್ಲ ಗುರುಗಳಿಗೆ ಅರ್ಪಿಸಿದ್ದಾರೆ. ಖ್ಯಾತ ಗಜಲ್ ಕವಿ, ಕನ್ನಡ ಪ್ರಾಧ್ಯಾಪಕ ಮತ್ತು ವಿಮರ್ಶಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರ ಮುನ್ನುಡಿಯ ಜೊತೆಗೆ ಗಜಲ್ ಕಾವ್ಯದ ಮೂಲ, ಬೆಳವಣಿಗೆ ಹಾಗೂ ರಚನೆಯ ನಿಯಮಗಳ ಬಗ್ಗೆ ಬೆಳಕು ಚೆಲ್ಲುವ ಅವರದೇ ಲೇಖನವೂ ಇರುವುದೊಂದು ವಿಶೇಷ. ಪ್ರಸಿದ್ಧ ಕಲಾವಿದ , ಸಂಶೋಧಕ ಮತ್ತು ಯಕ್ಷಗಾನ ಕ್ಷೇತ್ರದ ವಿಮರ್ಶಕರಾದ ಡಾ.ಎಂ. ಪ್ರಭಾಕರ ಜೋಶಿಯವರ ಬೆನ್ನುಡಿ ಕೃತಿಯ ಮೌಲ್ಯವನ್ನು ವೃದ್ಧಿಸಿದೆ. ‘ ನಕ್ಕುಬಿಡು ಬಾನಕ್ಕಿ’ ಸಂಕಲನದಲ್ಲಿ ಗಜಲ್ ಕವಯಿತ್ರಿ ( ಗಜಲ್ ಗೋ ) ಐದು, ಆರು, ಏಳು ಹಾಗೂ ಒಂಬತ್ತು ಷೇರ್ ಗಳನ್ನುಳ್ಳ ಮುರದ್ದಫ್, ಗೈರ್ ಮುರದ್ದಫ್, ಜುಲ್ ಕಾಫಿಯಾ, ತರಹೀ , ಸಂಪೂರ್ಣ ಮತ್ಲಾವನ್ನು ಒಳಗೊಂಡ ನೂರ ಇಪ್ಪತ್ತೊಂದು ಗಜಲ್ ಗಳ ಗುಚ್ಛವನ್ನೇ ಹೆಣೆದಿದ್ದಾರೆ. ಪ್ರೀತಿ, ವಿರಹ ,ಅಗಲಿಕೆ, ಪ್ರಕೃತಿ ಪ್ರೇಮ, ಪರಿಸರ ಪ್ರಜ್ಞೆ, ತಾಯ್ತನದ ಸಂಭ್ರಮ, ವೈಧವ್ಯ, ರವಿ, ಮಳೆ, ಬಾಳಿನ ನಶ್ವರತೆ….. ಮುಂತಾದ ವಿವಿಧ ವಸ್ತು, ವಿಷಯಗಳ ಬಗ್ಗೆ ನಿಯಮಬದ್ಧವಾಗಿ ಮೂಡಿ ಬಂದಿರುವ ಗಜಲ್ ಗಳು ‘ ಕವಿಯ ಕಲ್ಪನೆ ಸೀಮಾತೀತ ‘ ಎಂಬ ನುಡಿಯನ್ನು ಬಿಂಬಿಸಿವೆ. ಈ ಸಂಕಲನದ ಕೆಲವು ಗಜಲ್ ಗಳ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಕರಪಿಡಿದು ನಡೆವ ಜೋಡು ಜೀವಕೆ ಒಲವೇ ಬಲ ತಾನಾದಾಗಬಾನ ತಾರೆಗಳ ಸಾಲು ಹುಟ್ಟಿವೆ ನಿನ್ನ ನೆನಪಲಿ ನಾನಿರುವಾಗ                               ( ಗಜಲ್ 2 ) ಸುಖದ ಅತಿಯಾಸೆಗೆ ಕಳೆಯಿತೆಲ್ಲವೂಭೂಮಿ ಬಿರುಕುಗಳು ಎಚ್ಚರ ಕೊಡುತಿವೆ                         ( ಗಜಲ್ 9 )                             ಕೈ ಚೆಲ್ಲಿ ಕೂರುವುದ ತೊರೆದು ಮುಂದಡಿ ಇಡಬೇಕುಸಂದೇಹಗಳ ನಿವಾರಿಸಬೇಕು ಬದುಕಿನ ಪ್ರೀತಿಯಲಿ                               ( ಗಜಲ್ 18 )                       ಮದವೇರಿದ ಹೋರಿಯಾಗಿದೆ ನಿನ್ನ ನೆನಪುಎದೆಯೊಳಗೆ ಗೋರಿಯಾಗಿದೆ ನಿನ್ನ ನೆನಪು                                ( ಗಜಲ್ 21 ) ಕರುಳಲಿ ಚಿಗುರಿದ ಹೊಸ ಜೀವ ಮರೆಸುವುದು ಜಗವವನಸುಮದ ನಿತ್ಯ ಗೆಲುವಿನಲಿ ಇದೆ ಎಂಥ ಹರುಷ                               ( ಗಜಲ್ 33 ) ವಿಹಗ ಬೃಂದವು ಔತಣಕೆ ಬಂದಿಹುದು ಕೂ ಕುಕುಲು ಕೂಬಗೆಬಗೆಯ ಶುಭ ಗೀತವ ಹಾಡಿಹುದು ಕೂ ಕುಕುಲು ಕೂ                               ( ಗಜಲ್ 62 ) ನನ್ನವ್ವ ಇರಬೇಕಿತ್ತು ನೆಲತಾಯಿ ಹೊಸ ಕುಸುರಿಟ್ಟ ಸಮಯದಾಗಎಂಥ ಚೆಲುವು ಇಂದು ತೋರಿದೆ ಅವನಿ ಹಸಿರುಟ್ಟ ಸಮಯದಾಗ                                  ( ಗಜಲ್ 63 ) ಹುಟ್ಟುವಾಗಲೇ ನಿಶ್ಚಯವಾಗಿದೆ ಸಾವುನಾಲ್ಕು ದಿನದ ಬಾಳಲಿ ಆಗದಿರು ಬೇವು ( ಗಜಲ್ 67 ) ನೋಡುಗರ ಕಣ್ಮನ ತಣಿಸುವ ಅಲಂಕಾರವದುಅತ್ತಿತ್ತ ಸರಿವ ನೋಟದಿ ಚೇಳು ಹಾವುಗಳ ಕಂಡೆ                                 ( ಗಜಲ್ 91 ) ದೂರ ದೂರ ನಾವು ಹಾರಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿಜಗದ ಬಿತ್ತರವನೆಲ್ಲ ನೋಡಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿ( ಗಜಲ್  117 )ಭಾವಗಳನ್ನು ಸುಲಲಿತವಾಗಿ, ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದನ್ನು ಕರಗತ ಮಾಡಿಕೊಂಡಿರುವ ವನಜಾ ಜೋಶಿಯವರ ಗಜಲ್ ಗಳಲ್ಲಿ ಕಾವ್ಯ ಪ್ರತಿಭೆ ಮಿಂಚಾಗಿ ಹೊಳೆದಿದೆ. ಅರಿವಿನ ವ್ಯಾಪ್ತಿಯನ್ನು ವರ್ಣಿಸುವ ಅಪರೂಪದ ಶಬ್ದಗಳ ಭಂಡಾರವೇ ಅವರಲ್ಲಿದೆ ಎಂಬುದನ್ನು ಕೆಲವು ರಚನೆಗಳಲ್ಲಿ ಬಳಸಲ್ಪಟ್ಟಿರುವ ತೇಜ, ಕದಿರು, ಹದುಳ, ವಲ್ಲರಿ, ಸಲಿಲ, ಸುಮಸಾರ, ಜವನಿಕೆ , ಜಾಳಿಗೆ, ಅಣ್ಣಿ….ಇತ್ಯಾದಿ ಪದಗಳು ಸಾಬೀತುಪಡಿಸಿವೆ. ಗಜಲ್ 62 ನೆಯ ರದೀಫ್ ‘ ಕೂ ಕುಕುಲು ಕೂ ‘ ಬಹಳ ವಿಶಿಷ್ಟವಾಗಿದ್ದು ಗಜಲ್ ವಾಚನಕ್ಕೆ ಹೊಸ ಮೆರುಗನ್ನು ತರುತ್ತದೆ ಎಂಬುದಂತೂ ಸತ್ಯ. ನಲ್ಮೆಯ ಸಹೋದರಿ ವನಜಾ ಜೋಶಿಯವರ ಲೇಖನಿಯ ತೇವವೆಂದೂ ಆರದಿರಲಿ. ಭವಿತವ್ಯದಲ್ಲಿ ಅವರಿಂದ ಮತ್ತಷ್ಟು ಸತ್ವಪೂರ್ಣ ಗಜಲ್ ಸಂಕಲನಗಳು ಪ್ರಕಟಗೊಂಡು ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ. ತಾಯಿ ಸರಸ್ವತಿಯ ಆಶೀರ್ವಾದ ನಿರಂತರವಾಗಿ ಅವರ ಮೇಲಿದ್ದು ಎಲ್ಲ ಆಶೋತ್ತರಗಳು ಈಡೇರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಎ. ಹೇಮಗಂಗಾ                            

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ Read Post »

ಇತರೆ, ವರ್ತಮಾನ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಂಗಾತಿ ಆರ್ ಜಿ ಹಳ್ಳಿ ನಾಗರಾಜ “ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು. ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು. ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ. *ಜೋಶಿ ಇಚ್ಛೆಯಂತೆ ಬೈಲಾ!* ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು. *ಸಚಿವ ದರ್ಜೆ ಸ್ಥಾನ ಎಂಬ ಭೂತ* ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು. ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು. *ಕೋಟಿಗಟ್ಟಲೆ ಹಣ ದುರುಪಯೋಗ!* ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!) *ನಾಲ್ವಡಿ ಅವರ ಫೋಟೋಗೆ ಖೋ!* ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು. ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ. *ಸಾಹಿತಿಯನ್ನೆ ಆಯ್ಕೆ ಮಾಡಿ* ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ Read Post »

ಕಾವ್ಯಯಾನ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?”

ಕಾವ್ಯ ಸಂಗಾತಿ ನಿರಂಜನ ನಾಯಕ “ನಾ ಯಾವುದ ನಂಬಲಿ?” ನಾ ಯಾವುದ ನಂಬಲಿ?ಕಣ್ಣಿಗೆ ರಾಚುವ ಬಣ್ಣದ ಭ್ರಮೆಯನ್ನೋ?ಕರ್ಣಕೆ ಅಪ್ಪಳಿಸುವ ಹುಸಿ ಪದಗಳ ಸದ್ದನ್ನೋ?ಇವೆಲ್ಲವ ಮೀರಿಆ ಎದೆಯಾಳದಿ ತುಡಿಯುವ ಪ್ರಜ್ಞೆಯ ದನಿಯನ್ನೋ? ದಮನಿಸುವ ಸಿಂಹಾಸನದ ದರ್ಪವನ್ನೋ?ಬೀದಿಯಲಿ ಧಗಧಗಿಸುವ ಕಿಚ್ಚಿನ ಜ್ವಾಲೆಯನ್ನೋ?ಎದೆಯತ್ತ ಗುರಿಯಿಟ್ಟ ಬಂದೂಕಿನ ನಾಲಗೆಯನ್ನೋ?ಅಥವಾನೆಲದ ಮೇಲೆ ಹೆಪ್ಪುಗಟ್ಟಿದ ನಿಸ್ಸಹಾಯಕ ನೆತ್ತರ ಗುರುತನ್ನೋ? ನಂಬಿಕೆ ಬೆಲೆಗೆ ಬಿಕರಿಯಾದ ಸರಕಾದಾಗ,ನನ್ನ ನಂಬಿಕೆಗಳು ಮಾರಾಟವಾಗಿ,ನನ್ನತನದ ಗುರುತನ್ನೇ ಕಳೆದುಕೊಂಡಾಗ…ನಾ ಬರಿಯ ಅಧಿಕಾರದ ಗುರುತಾದೆ!ಇಷ್ಟೆಲ್ಲದರ ನಡುವೆ ಕಳೆದುಹೋದನಾನು ಯಾರು?ನಾನು ಯಾರು? ನಿರಂಜನ ನಾಯಕ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?” Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ (ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” ಬಾನಿನ ಬಾನು ಕಣ್ಣ‌ ತೆರೆದು ನೋಡಿದಭುವಿಯು ಭವದಿಂದ‌ ನಮಸ್ಕರಿಸಿದಳುತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳುಆಗಸ ಬೊಗಸೆ ಪ್ರೀತಿ ಬೇಡಿದ ಮಿಥುನ ರಾಗಕೆ ಮಳೆಯ ಸ್ಪುರಿಸಿದಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತುಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತುಲೋಕಕೆ ಸಂತೋಷದ ಹೊಳೆ ಹರಿಸಿದ ಪರಿಸರವ ಪರಿಭ್ರಮಿಸುತ ಜ್ಞಾನಿಸಿದಸಂವತ್ಸರ ಋತುಗಳ ಕಾವ್ಯ ಬರೆದಜಗವನಾಳುವ ಒಡೆಯನಾಗಿ ಮೆರೆದಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ ತೆರೆದು ನೋಡುವ ನೋಟವಿದುಪ್ರಕೃತಿ ಹೇಳುವ ಪಾಠವಿದು ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” Read Post »

ಇತರೆ

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ

ಶರಣ ಸಂಗಾತಿ ಜಯಲಕ್ಷ್ಮಿ ಕೆ “ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಕಾಯಕ ತತ್ವದ ಮೂಲಕ ವ್ಯಕ್ತಿಗತ ವಿಕಾಸದ ಪಥವನ್ನು  ಜಗತ್ತಿಗೆ ತೋರಿದ ಶರಣನೆಂದರೆ ವಚನಕಾರ ಹಡಪದ ಅಪ್ಪಣ್ಣ.  ಕ್ಷೌರ ಮಾಡುವ ವೃತ್ತಿಯ ಮೂಲಕ ಜನರ ಮುಖಗಳನ್ನು ಅಂದಗೊಳಿಸುತ್ತಿದ್ದ ಹಡಪದ ಅಪ್ಪಣ್ಣ  ತನ್ನ ವಚನ ಸಾಹಿತ್ಯದ ಮೂಲಕ ಜನರ ಮನದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳ  ಕೊಳೆ  ತೊಳೆದು ವೈಚಾರಿಕ ಚಿಂತನೆಗೆ ದಾರಿ ತೋರಿದನು. ವ್ಯಕ್ತಿಯಾಗಲಿ ಸಮಾಜವಾಗಲಿ  ಮೌಲ್ಯಗಳ ತಳಹದಿಯಲ್ಲಿ ಸಾಗುದರಿಂದ ಮಾತ್ರ     ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ತನ್ನ ವೃತ್ತಿ ಮತ್ತು ಪ್ರವೃತ್ತಿಗಳ ಮೂಲಕ  ಜಗತ್ತಿಗೆ ಸಾರಿದವನು ಹಡಪದ ಅಪ್ಪಣ್ಣ. ಮಾಡುವ ಕೆಲಸ ಯಾವುದೇ ಇರಲಿ ಮೇಲು ಕೀಳು ಎಂದು ಭಾವಿಸದೆ , ತಮ್ಮ ಹೆಸರಿನ ಹಿಂದೆ ಕಾಯಕವನ್ನು ಅಂಟಿಸಿಕೊಂಡು ಆ ಕಾಯಕಕ್ಕೆ ಅಂತಿದ್ದ ಜಾತಿಯ ಲೇಪವನ್ನು ತೊಡೆದು ಹಾಕಿದವರು ವಚನಗಾರರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ,  ಮೇಧಾರ ಕೇತಯ್ಯ ಮೊದಲಾದವರಂತೆ ಹಡಪದ ಅಪ್ಪಣ್ಣ ಕೂಡಾ ತನ್ನ ಕುಲಕಸುಬನ್ನು ಸತ್ಯ ಶುದ್ಧ ಕಾಯಕವನ್ನಾಗಿ ಪರಿವರ್ತಿಸಿಕೊಂಡವನು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದ ಚೆನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗಳ ಪುತ್ರನಾದ  ಹಡಪದ ಅಪ್ಪಣ್ಣನವರು ಚೆನ್ನಮಲ್ಲೇಶ್ವರರಿಂದ ದೀಕ್ಷೆಯನ್ನು ಪಡೆದರು. ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯ ನಡವಳಿಕೆಗಳನ್ನು  ತೊಡೆದು ಹಾಕಿದ ಕೀರ್ತಿ ಶರಣ ಅಪ್ಪಣ್ಣನಿಗೆ ಸಲ್ಲುತ್ತದೆ. ತನ್ನ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪ್ರಾಮಾಣಿಕವಾಗಿ ಕಾಯಕ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ರಕ್ಷಾ ಕವಚವಾಗಿ, ಅವರ ಬಲಗೈ ಭಂಟನಾಗಿ, “ವಿಶ್ವದ ಪ್ರ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ” ಎಂದೇ ಪ್ರಸಿದ್ಧವಾದ ಅನುಭವ ಮಂಟಪದಲ್ಲಿ ಬಸವಣ್ಣನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ಷಮತೆ ಮೆರೆದವರು. ಬೆಳಗೆದ್ದು ಹಡಪದ( ಕ್ಷೌರಿಕ ) ನ ಮುಖವನ್ನು ನೋಡಿದರೆ ಅಪಶಕುನ ಎಂದು ಪರಿಭಾವಿಸಿದ್ದ ಆ ಕಾಲದಲ್ಲಿ ” ತಮ್ಮನ್ನು ಕಾಣಲು ಬರುವ ಯಾವ ವ್ಯಕ್ತಿಯಾದರೂ ಸರಿ, ಮೊದಲು ತನ್ನ ಕಾರ್ಯದರ್ಶಿ ಹಡಪದ ಅಪ್ಪಣ್ಣನನ್ನು ನೋಡಿಯೇ ತನ್ನ ಬಳಿಗೆ ಬರತಕ್ಕದ್ದು ” ಎನ್ನುವ ಬಸವಣ್ಣನವರ ನಿಯಮ ಅವರು ಶರಣ ಅಪ್ಪಣ್ಣನವರಿಗೆ ನೀಡಿದ್ದ ಆದ್ಯತೆ ಹಾಗೂ ಅವನ ಮೇಲಿನ ನಂಬಿಕೆ,ವಿಶ್ವಾಸ, ಗೌರವಾದರ ಸಂಕೇತವಾಗಿದೆ.  ಕಾಯಕ ನಿಷ್ಠೆ, ದಾಸೋಹ, ಆಚಾರ -ವಿಚಾರ ಇತ್ಯಾದಿಗಳ ಬಗೆಗಿನ  ಹಡಪದ ಅಪ್ಪಣ್ಣನ ಚಿಂತನೆಗಳು ಅವರು ರಚಿಸಿದ ವಚನಗಳಲ್ಲಿ ಬಿಂಬಿತವಾಗಿವೆ. ಜನ ಸಮುದಾಯದಲ್ಲಿದ್ದ ಮೂಢ ನಂಬಿಕೆ ಹಾಗೂ ಶೋಷಣೆಯನ್ನು   ವಚನಗಳ  ಮೂಲಕವೇ ತೀವ್ರವಾಗಿ ಖಂಡಿಸುತ್ತಾ,   ಪ್ರಾಮಾಣಿಕವಾಗಿ ತನ್ನ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂತೋಷವಾಗಿದ್ದ ಹಡಪದ ಅಪ್ಪಣ್ಣನನ್ನು ಜಗಜ್ಯೋತಿ ಬಸವಣ್ಣನವರು ” ನಿಜ ಸುಖಿ ” ಎಂದೇ ಕರೆದರು. ಇವರು ಸುಮಾರು ಇನ್ನೂರ ಐವತ್ತು (250) ವಚನಗಳನ್ನು ರಚಿಸಿದ್ದು ಅವೆಲ್ಲವೂ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಪೂರ್ವ ಕೊಡುಗೆಯೇ ಆಗಿವೆ. ” ನುಡಿದರೆ ಗುರುವಾಗಿ ನುಡಿಯಬೇಕುನಡೆದರೆ ಪರವಾಗಿ ನಡೆಯಬೇಕುಕುಳಿತರೆ ಲಿಂಗವಾಗಿ ಕುಳಿತಿರಬೇಕುಇದ್ದರೆ ಜಂಗಮನಾಗಿ ಇರಬೇಕುಈ ನಾಲ್ಕರ ಹೊಂದಿಕೆಯನ್ನರಿಯದವನು ಎಷ್ಟು ದಿನವಿದ್ದರೂ ಫಲವೇನು ಹೇಳಾ…ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ..ಎನ್ನುವ ಶರಣ ಹಡಪದ  ಅಪ್ಪಣ್ಣ   ನಮ್ಮ ನಡೆ ನುಡಿ ಬದುಕೆಲ್ಲ ಗುರು ಲಿಂಗ ಜಂಗಮ ಎನ್ನುವ ತ್ರಿವಿಧಗಳಿಗೆ ಮೆಚ್ಚುಗೆಯಾಗುವಂತಿರಬೇಕು ಎಂದಿದ್ದಾರೆ.  ನಮ್ಮ ನಡೆಗೂ ನುಡಿಗೂ ಸಾಮರಸ್ಯವಿರಬೇಕು ಎನ್ನುವುದನ್ನು ” ನುಡಿದರೇನಯ್ಯಾ.. ನಡೆ ಇಲ್ಲದನ್ನಕ್ಕ…ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ” ಎಂಬ ವಚನನ ಮುಖೇನ ಪ್ರತಿಪಾದಿಸಿದ್ದಾರೆ. ” ಮನವನರಿದವಂಗೆ ಮತದ ಹಂಗೇಕೋ… ನಿತ್ಯವನರಿದಂಗೆ ತೀರ್ಥದ ಹಂಗೇಕೋ ” ಎನ್ನುವ ಮೂಲಕ ಜಾತಿ ಮತ ದೇವರುಗಳ ವಿಚಾರವಾಗಿ ಜನ ಮನದಲ್ಲಿಇರಬೇಕಾದ ಅರಿವಿನ ಸ್ಪಷ್ಟ ಚಿತ್ರಣ ಮೂಡಿಸುತ್ತಾ ” ಅರಿವೆಂಬುದೇ ಆಚಾರ, ಆಚಾರವೆಂಬುದೇ ಅರಿವು ”  ಎಂದು ವಚನಗಳ ಮೂಲಕ ಸಾರಿದ್ದಾರೆ. ಹೆಸರು ಮತ್ತು ಕೀರ್ತಿ ನಮ್ಮನ್ನರಸಿ ಬರಬೇಕೇ ಹೊರತು ಮನುಷ್ಯ ಅವುಗಳನ್ನು ಅರಸಿ ಹೋಗಬಾರದು ಎನ್ನುವ ಅವರ ನಿಲುವು ” ವಂದನೆಗಾಗಿ ನಿಲ್ಲಬೇಡ, ನಿಂದೆಗಂಜಿ ಓದಬೇಡ, ” ಎನ್ನುವ ವಚನದ ಮೂಲಕ ವ್ಯಕ್ತವಾದರೆ ” ದ್ವಂದ್ವ ಬುದ್ಧಿಯ ಕಳೆದು ನಿಂತವನ ಬಸವ ಪ್ರಿಯ ಕೂಡಲಚೆನ್ನಬಸವಣ್ಣ ಪೊರೆವ ” ಎನ್ನುವ ವಚನದಲ್ಲಿ ನಾವು ಇತರರ ಸಮ್ಮುಖದಲ್ಲಿ ಆಡುವ ಮಾತಿಗೂ ಅವರ ಹಿಂದೆ ಅವರ ಬಗ್ಗೆ ಪರರೊಂದಿಗೆ ಆಡುವ ಮಾತಿಗೂ ವ್ಯತ್ಯಾಸವಿರಬಾರದು ಎನ್ನುವ ವಿವೇಕವಿದೆ.  ಕಲ್ಯಾಣ ಕ್ರಾಂತಿಯ ವರೆಗೂ ಬಸವಣ್ಣನ ಜೊತೆಯಲ್ಲಿಯೇ ಇದ್ದು ತದ ನಂತರ ಕೂಡಲಸಂಗಮಕ್ಕೆ ತೆರಳಿ ಅಲ್ಲಿ ಲಿಂಗೈಕ್ಯರಾದ ಹಡಪದ ಅಪ್ಪಣ್ಣನ ಸರಳ ವ್ಯಕ್ತಿತ್ವ ಮತ್ತು ಉದಾತ್ತ ಚಿಂತನೆಗಳು ಆದರ್ಶಪ್ರಾಯ ಮತ್ತು ಅನುಕರಣೀಯ. ತನ್ನ ಕಾಯಕ ಮತ್ತು ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ 892 ನೇ ಜನುಮ ದಿನಾಚರಣೆಯನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಜಯಲಕ್ಷ್ಮಿ ಕೆಮಡಿಕೇರಿ.

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ Read Post »

ಕಾವ್ಯಯಾನ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಮಾತು ಮನವ ಕೆದುಕುವಾಗ ಮೌನವೇ ಉತ್ತಮಸತ್ಯ ಬದುಕು ಕದಡುವಾಗ ಮೌನವೇ ಉತ್ತಮ ಸಂಭಾಷಣೆ ಸಂಪ್ರೀತಿಯಿಂದ ಕೂಡಿದರೆ ರಸಗವಳನುಡಿಯಲಿ ಹುಡಿ ಹಾರುವಾಗ ಮೌನವೇ ಉತ್ತಮ  ಮಾತು ಹೃದಯ ಹೃದಯಗಳನು ಕಟ್ಟಿ ಆಳಬಹುದುಅರಿಕೆಯಿಂದ ಅಪಾಯವೆಂದಾಗ ಮೌನವೇ ಉತ್ತಮ  ನುಡಿದರೆ ಈ ಜಗವು ಮೆಚ್ಚಿ ಹಾರ ಹಾಕುವಂತಿರಬೇಕು ನಡೆ ನುಡಿಗಳು ಬೇರೆಯಾದಾಗ ಮೌನವೇ ಉತ್ತಮ ಒಲವು ಗೆಲುವುಗಳು ಸೇಡಿನ ಕಿಡಿಯಲಿ ಸುಡುತಿವೆ ಸಾಕಿಜ್ಯೋತಿ ಬೆಳಗದೆ ಬೂದಿಯಾದಾಗ ಮೌನವೇ ಉತ್ತಮ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ”

ಕಾವ್ಯ ಸಂಗಾತಿ ಹೆಬಸೂರ ರಂಜಾನ್ “ಖಾಲಿ” ನಿನ್ನ ಎದೆ ಖಾಲಿ ಇದೆಅದು ಇಂಚುಗಳ ಅಳತೆಗೆ ಒಗ್ಗುವುದುಅಲ್ಲಿ ತಲೆಯಾನಿಸಿ ನಿಟ್ಟುಸಿರುವೇನೆಂದರೆಅಲ್ಲಿ ಮೊಳೆಗಳನ್ನು ಜಡಿಯಲಾಗಿದೆ ನಿನ್ನ ಎದೆ ಬರಡಾಗಿದೆಅಲ್ಲಿ ಸದಾ  ಜಿನುಗುವ ಪಸೆಬತ್ತಿಹೋಗಿದೆನಿನ್ನ ಎದೆಗೂ ಮೊಲೆಗಳು ಮೂಡಿರಬೇಕಿತ್ತುಹಸಿದ ಹಾಲುಗಲ್ಲುಗಳತುಟಿಗಳಲಿ  ಎದೆ ಹಾಲು ಜಿನುಗುತ್ತಿತ್ತು ನಿನ್ನದೆಯ ರೋಮಗಳನುಸವರುತ್ತಿದ್ದರೆಮುಳ್ಳುಗಳು ಪರುಚುತ್ತಿವೆಅದೆಷ್ಟು ವರುಷಗಳ ರಕ್ತದ ದಾಹವಿದೆ ಅವುಗಳಿಗೆ ನಿನ್ನ ಬೆರಳುಗಳ ಸಹವಾಸಸಾಕುಲಾಠಿಗಳನ್ನೆ ಪಠಿಸುತ್ತೀವೆನಾಲಿಗೆಯ ತುಂಬ ಸಿಡಮದ್ದಿನ ವಾಸನೆಯ ಘಮಲು ತುಂಬಿದೆ ಸಾಕು ದೊರೆಯೇನಿನ್ನನಾಟಕದ ಕೊನೆಯ ಅಂಕನಟಿಸುವ ಆ ಪಟ್ಟುಗಳ ಗತ್ತು ಬಿನ್ನಾಣಎಲ್ಲವನ್ನೂ ಅರಿತಿರುವೆ ಹಸುಳೆಗಳು ಬೀದಿಗಳಿದಿವೆಈಗಲಾದರೂ ನಟಿಸುವುದು ಸಾಕುಒಂದು ಕಡ್ಡಿ ಸಾಕು ಹೊತ್ತಿ ಉರಿಯಲು ಮಕ್ಕಳಿದ್ದರೆ ಗೊತ್ತಾಗುತ್ತಿತ್ತುಅಪ್ಪನ ಎದೆಯೊಳಗೆ ಮೊಲೆಗಳಿವೆ..ಅಳತೆಗಳಿಲ್ಲ..!ಹೆಬಸೂರ ರಂಜಾನ್

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ” Read Post »

ಕಥಾಗುಚ್ಛ

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ

ಕಥಾ ಸಂಗಾತಿ ಸೌಮ್ಯ ಕೆ ವಿ “ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..”       ಜೇನುಪುರದ ತಾವರೆ ಕೆರೆ ಹಿಂದೆಂದೂ  ಸುದ್ದಿಯಾಗಿರಲಿಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಕುಗ್ಗಿ, ವರ್ಷದಿಂದ ವರ್ಷಕ್ಕೆ ಅದೇ ತಾವರೆ ಹೂಗಳನ್ನು ಅರಳಿಸುತ್ತಾ, ಊರಿನ ಹಿರಿಯರಂತೆ ಗಂಭೀರವಾಗಿ ಬದುಕಿತ್ತು. ಆ ದಿನ ಮಾತ್ರ ಕೆರೆಯ ದಂಡೆಯಲ್ಲಿ ಜನಸಂದಣಿ. “ಮೊಸಳೆ… ಮೊಸಳೆ ಬಂದಿದೆ!” ಎಂಬ ಕೂಗು ಕೇಳುತ್ತಿದ್ದಂತೆ ಊರಿನ ಜನರೆಲ್ಲ ಓಡಿಬಂದಿದ್ದರು. ನೀರಿನ ಅಂಚಿನಲ್ಲಿ ಒಂದು ಪುಟ್ಟ ಮೊಸಳೆಯ ಮರಿ ಬಿಸಿಲಿಗೆ ಮೈಯೊಡ್ಡಿ ಮಲಗಿತ್ತು. ಯಾರೋ ಮೊಬೈಲ್‌ನಲ್ಲಿ ಚಿತ್ರ ತೆಗೆಯುತ್ತಿದ್ದರು. ಯಾರೋ ಮಕ್ಕಳನ್ನು ಹಿಂದೆ ಸರಿಸುತ್ತಿದ್ದರು. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡುತ್ತಿದ್ದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ದಿನವಿಡೀ ಸಿಲುಕಿ ಬೇಸರಗೊಂಡು ಸಹನಾ  ಎಂದಿನಂತೆ ಸಂಜೆಯ ವಾಕಿಂಗ್‌ಗೆ ಬಂದಿದ್ದಳು. ಜನಸಂದಣಿ ಕಂಡು ಕುತೂಹಲದಿಂದ ಮುಂದೆ ಹೋಗಿ ಮೊಸಳೆಯನ್ನು ನೋಡಿದಳು. ಅವಳೂ ಮೊಬೈಲ್ ತೆಗೆದು ಎರಡು ಚಿತ್ರ, ಒಂದು ಚಿಕ್ಕ ವಿಡಿಯೋ ಮಾಡಿಕೊಂಡಳು.  ಮನೆಗೆ ಬಂದು ಅಡುಗೆ, ಮಕ್ಕಳ ಓದು, ಅತ್ತೆ-ಮಾವಂದಿರ ಔಷಧಿ—ಇವೆಲ್ಲದರ ನಡುವೆ ಆ ವಿಡಿಯೊವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದಾಗ, ಅರಿವಿಲ್ಲದೆ ಹಳೆಯ ಪ್ರಾಥಮಿಕ ಶಾಲಾ ಸಹಪಾಠಿಗಳ ವಾಟ್ಸ್ಆಪ್‌ ಗುಂಪಿಗೂ ಕಳುಹಿಸಿಬಿಟ್ಟಳು. ಆ ಗುಂಪು ವರ್ಷಗಳಿಂದ ಚಾಲ್ತಿಯಿದ್ದರೂ ಅದರಲ್ಲಿ ಜೀವಂತಿಕೆಯೇನಿರಲಿಲ್ಲ.ಬೆಳಿಗ್ಗೆ “ಶುಭೋದಯ” ಹೂವುಗಳು, ದೇವರ ಚಿತ್ರಗಳು, ಹಬ್ಬದ ಶುಭಾಶಯಗಳು… ಅಷ್ಟಕ್ಕೇ ಸೀಮಿತವಾಗಿತ್ತು. ಮೊಸಳೆಯ ವಿಡಿಯೊ ಕಳುಹಿಸಿದ ನಂತರವೂ ಸಹನಾ ಅದನ್ನು ಮರೆತುಬಿಟ್ಟಳು. ಆದರೆ ಮರುದಿನ  ಅವಳ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂತು. “ಹಲೋ… ನಾನು ಕಿಶನ್ ಭಾರದ್ವಾಜ್. ನಿನ್ನ ಪ್ರಾಥಮಿಕ ಶಾಲಾ ಸಹಪಾಠಿ.. ನೆನಪಿದೆಯೇ?” ಆ ಒಂದು ಸಾಲು ಅವಳನ್ನು ಮೂವತ್ತು ವರ್ಷಗಳ  ಹಿಂದಕ್ಕೆ ಕರೆದೊಯ್ದಿತು. ಕಿಶನ್… ಪುಸ್ತಕಗಳೊಳಗೇ ಬದುಕುತ್ತಿದ್ದ ಹುಡುಗ. ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳುತ್ತಿದ್ದ ಹುಡುಗ. ದಪ್ಪ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಯೋಚಿಸುತ್ತಿದ್ದ ಕಣ್ಣುಗಳು. ಆದರೆ ಯಾರೊಂದಿಗೂ ಹೆಚ್ಚು ಮಾತನಾಡದ ಮೌನ. ಸಹನಾ ಅವನನ್ನು ನೆನಪಿಸಿಕೊಂಡಳು. ಆದರೆ ಅವನ ಜೊತೆ ಮಾತನಾಡಿದ ಒಂದೇ ಒಂದು ಸಂದರ್ಭ ನೆನಪಿಗೆ ಬರಲಿಲ್ಲ. “ಹೇಗಿದ್ದೀರಾ? ಇಷ್ಟು ವರ್ಷಗಳ ನಂತರ ನನ್ನ ನೆನಪಾಯಿತೇ?” ಎಂದು ಅವಳು ಉತ್ತರ ಕಳುಹಿಸಿದಳು. ಕೆಲವೇ ಕ್ಷಣಗಳಲ್ಲಿ ಉತ್ತರ ಬಂತು. “ನಿನ್ನ ಮೊಸಳೆಯ ವಿಡಿಯೋ ವನ್ನು ಗ್ರೂಪ್ ನಲ್ಲಿ ನೋಡಿದೆ. ಆ ಕೆರೆ ನಿಮ್ಮ ಊರಿನಲ್ಲೇ ಇದೆಯಾ?” ಸಹನಾಳಿಗೆ ನಗು ಬಂತು. ಇಷ್ಟು ವರ್ಷಗಳ ನಂತರ ಕೇಳುವ ಪ್ರಶ್ನೆ ಇದೇನಾ? ಆದರೂ ಮಾತು ಅಲ್ಲಿಂದಲೇ ಆರಂಭವಾಯಿತು. ಕಿಶನ್ ಈಗ ಒಡಿಶಾದ ಒಂದು ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ. ದೇಶ-ವಿದೇಶ ಅಲೆದ ಜೀವನ. ಮದುವೆಯಾಗಿತ್ತು. ಮುರಿದುಹೋಗಿತ್ತು. ಮಕ್ಕಳು ಇರಲಿಲ್ಲ. ಈಗ ಕೆಲಸವೇ ಅವನ ಸಂಗಾತಿ. ಸಹನಾ ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. “ಜೇನುಪುರದಲ್ಲಿ ಇದ್ದೇನೆ. ಇಬ್ಬರು ಮಕ್ಕಳು. ಗಂಡನಿಗೆ ಬಟ್ಟೆ ಅಂಗಡಿ.” ಅಷ್ಟೇ. ಮಾತುಗಳು ಕಡಿಮೆಯಿದ್ದರೂ, ದಿನಕ್ಕೆ ಒಂದೆರಡು ಸಂದೇಶಗಳು ಬರತೊಡಗಿದವು. ಸಹನಾಳ ದಿನಚರಿಯೂ ಬದಲಾಯಿತು. ಬೆಳಿಗ್ಗೆ ಎದ್ದ ಕೂಡಲೇ ಅವಳು ಮೊಬೈಲ್ ನೋಡುತ್ತಿದ್ದಳು. ಅವನು ಏನಾದರೂ ಕಳುಹಿಸಿದ್ದಾನಾ? ಒಂದು ಸಂದೇಶ ಬಂದರೂ ಮನಸ್ಸು ಹಗುರವಾಗುತ್ತಿತ್ತು. ಅವಳಿಗೆ ಗಂಡನ ಬಗ್ಗೆ ದೂರುಗಳಿರಲಿಲ್ಲ. ಅವನು ದುಡಿತದ ಹಿಂದೆ ಬಿದ್ದ ಮನುಷ್ಯ. ಮನೆ, ಮಕ್ಕಳು, ಅತ್ತೆ-ಮಾವ—ಎಲ್ಲರ ಹೊಣೆ.. ಅವರ ಬದುಕು ಯಾವಾಗಲೋ ಲೆಕ್ಕಾಚಾರವಾಗಿಬಿಟ್ಟಿತ್ತು. ಮಾತುಗಳಿದ್ದವು. ಮಮತೆ ಇರಲಿಲ್ಲ. ಕಾಳಜಿಯಿತ್ತು. ಕುತೂಹಲ ಇರಲಿಲ್ಲ. ಸಹನಾ ಯಾವಾಗ ನಕ್ಕಳು, ಯಾವಾಗ ಬೇಸರಪಟ್ಟಳು ಎಂಬುದನ್ನು ಗಮನಿಸುವಷ್ಟು ಬಿಡುವು ಯಾರಿಗೂ ಇರಲಿಲ್ಲ. ಹಳೆಯ ಗೆಳತಿ ಶುಭಾಳೊಂದಿಗೆ ಮೊಬೈಲ್ ನಲ್ಲಿ ಸಂಪರ್ಕಿಸುವುದನ್ನು ಬಿಟ್ಟರೆ ಬದುಕಿನ ಯಾವ ಸಂಗತಿಯಲ್ಲೂ ಉಮೇದಿಯಿರಲಿಲ್ಲ.. ಗಂಡ ನಾಲ್ಕು ಸಲ ಲೆಕ್ಕ ಮಾಡಿ ಕೊಡುವ ಎರಡು ಮೂರು ನೋಟುಗಳಲ್ಲಿ ಆನ್ ಲೈನ್ ಬಟ್ಟೆ ಆರ್ಡರ್ ಮಾಡುವ, ಧರಿಸಿ ಫೋಟೋ ಹೊಡಕೊಂಡು ಆಮೇಲೆ ರಿಟರ್ನ್ ಮಾಡಿ  ಆ ದುಡ್ಡಿನಲ್ಲಿ ಮತ್ತೇನೋ ಆರ್ಡರ್ ಮಾಡುವುದಷ್ಟೇ ಅವಳಿಗೆ ಖುಷಿ ಕೊಡುವ ಸಂಗತಿಯಾಗಿತ್ತು.. ಕಿಶನ್‌ನ  ಪ್ರತಿಯಂದು ಸಂದೇಶ  ಅವಳ ದೈನಂದಿನ ಬದುಕಿನಲ್ಲಿ ಹೊಸ ಅಲೆ ಎಬ್ಬಿಸತೊಡಗಿತ್ತು. ಕೆಲವೊಮ್ಮೆ ಮನುಷ್ಯನಿಗೆ ಪ್ರೀತಿಗಿಂತ ಮೊದಲು ಬೇಕಾಗುವುದು, ಯಾರೋ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂಬ ಭಾವನೆ. ಬಹುಶಃ ಸಹನಾ ಅನುಭವಿಸುತ್ತಿದ್ದುದೂ ಅದೇ. ಒಂದು ಸಂಜೆ ಕಿಶನ್ ಸಂದೇಶ ಕಳುಹಿಸಿದ. “ನಾನು ಜೇನುಪುರಕ್ಕೆ ಬರಬಹುದಾ? ಆ ಮೊಸಳೆಯನ್ನು ಕಣ್ಣಾರೆ ನೋಡಬೇಕು.” ಸಹನಾ ಮೊಬೈಲ್ ಪರದೆಯತ್ತ ಬಹಳ ಹೊತ್ತು ನೋಡುತ್ತ ಕುಳಿತಳು. ಗೆಳತಿ ಶುಭಾಗೆ ಹೀಗೆಲ್ಲ ನಡೀತು ಅಂದರೆ  ಮೊಸಳೆ ಒಂದು ನೆವ ಅಷ್ಟೇ.. ಅವನು ಭೇಟಿ ಮಾಡಲು ಬಯಸಿರುವುದು ನಿನ್ನನ್ನು.. ! ಹೊಸ ಕಥೆ ಶುರುವಾಗುತ್ತಿದೆಯೋ ಅಥವಾ ಹಳೆಯ ಕಥೆಯೇ ಮರುಜೀವ ಪಡೆಯುತ್ತಿದೆಯೋ ಎಂದು ಕಾಲೆಳೆದಿದ್ದಳು.. ಕಿಶನ್ ಜೇನುಪುರಕ್ಕೆ ಬರುವ  ದಿನ, ಸಹನಾ ತನ್ನ ವಯಸ್ಸನ್ನು ಮರೆತು ಕನ್ನಡಿಯ ಮುಂದೆಯೇ  ನಿಂತಿದ್ದಳು.ಅದು ಅವಳಿಗೆ ಹೊಸ ಅನುಭವ.ಮದುವೆಯ ಮೊದಲ ವರ್ಷಗಳಲ್ಲಿ ಗಂಡನಿಗಾಗಿ ಸಿಂಗಾರ ಮಾಡಿಕೊಂಡಿದ್ದ ನೆನಪು ಇತ್ತು. ನಂತರ ಮಕ್ಕಳು, ಮನೆ, ಜವಾಬ್ದಾರಿಗಳು—ಇವೆಲ್ಲದರ ನಡುವೆ ತನ್ನ ಮುಖವನ್ನು ನೋಡುವುದಕ್ಕೂ ಸಮಯ ಸಿಕ್ಕಿರಲಿಲ್ಲ.ಆದರೆ ಆ ದಿನ ನಾಲ್ಕು ಸೀರೆ ಬದಲಿಸಿದಳು. ಕೂದಲು ಮತ್ತೆ ಮತ್ತೆ ಸರಿಪಡಿಸಿದಳು. ಕಣ್ಣಿನ ಕೆಳಗಿನ ಆಯಾಸವನ್ನು ಮುಚ್ಚಲು ಸ್ವಲ್ಪ ಮೇಕಪ್ ಹಚ್ಚಿಕೊಂಡಳು.ಯಾರಿಗೂ ಗೊತ್ತಾಗದಂತೆ.ತನ್ನನ್ನೇ ಮೋಸಗೊಳಿಸುತ್ತಾ.. ಅವಳ ಬುದ್ದಿ, ಮನಸ್ಸು, ಹೃದಯ ಯಾವುದೂ ಅವಳ ಹತೋಟಿಯಲ್ಲಿ ಇರಲಿಲ್ಲ.. ಆದರೆ ಕಿಶನ್‌ನ್ನು ನೋಡಿದ  ತಕ್ಷಣ ಅವಳ ಮನಸ್ಸಿನೊಳಗೆ ನಿರೀಕ್ಷೆಯ ಬಲೂನು  ಢಮ್ಮೆಂದು  ಒಡೆದ ಶಬ್ದ ಕೇಳಿಸಿತು!! ಶಾಲೆಯ ದಿನಗಳ ಸಣಕಲು ಹುಡುಗ ಈಗ ಎಲ್ಲಿದ್ದ!ಬೊಜ್ಜು ದೇಹ. ವಿರಳವಾಗಿರುವ ಕೂದಲು. ಆಯಾಸಗೊಂಡ ಕಣ್ಣುಗಳು. ವಯಸ್ಸಿಗಿಂತ ಹೆಚ್ಚು ಮುಪ್ಪು. ವರ್ಷಗಳ ಸಂಶೋಧನೆ, ನಿರಂತರ ಪ್ರಯಾಣ, ಏಕಾಂತ—ಇವೆಲ್ಲ ಸೇರಿ ಅವನ ಮುಖದ ಮೇಲೆ  ಅಳಿಸಲಾರದ ಗುರುತು ಬಿಟ್ಟಿದ್ದವು.ಸಹನಾ ಮನಸ್ಸಿನಲ್ಲೇ ನಕ್ಕಳು.“ಇವನಿಗಿಂತ ನನ್ನ ಗಂಡನೇ ಚೆನ್ನಾಗಿ ಕಾಣುತ್ತಾರೆ.”ಆ ಸಂಜೆ ಶುಭಾಗೆ ಕರೆ ಮಾಡಿದಾಗ ಮೊದಲ ಮಾತೇ ಅದಾಗಿತ್ತು.                         ಶುಭಾ ಹೊಟ್ಟೆ ಹಿಡಿದು ನಕ್ಕಳು.“ಅಯ್ಯೋ, ನೀನು ಹೀರೋನನ್ನೇ ಕಲ್ಪಿಸಿಕೊಂಡಿದ್ದೆಯಾ ಏನು!”ಸಹನಾ ಕೂಡ ನಕ್ಕಳು.ಆದರೆ ಆ ನಗುವಿನೊಳಗೆ ಸ್ವಲ್ಪ ನಿರಾಶೆಯೂ ಇತ್ತು.ಅವಳು ಕಾಯುತ್ತಿದ್ದದ್ದು ಹಳೆಯ ನೆನಪುಗಳ ಮಾತುಗಳನ್ನು. ಆದರೆ ಕಿಶನ್‌ಗೆ ಆಸಕ್ತಿ ಇದ್ದದ್ದು ಕೇವಲ ಮೊಸಳೆಯ ಮೇಲೆ. ಅಯ್ಯೋ ..ಅದರ ಮೇಲೆ ಸಂಶೋಧನೆ ಮಾಡಲೆಂದು ಅಷ್ಟು ದೂರದಿಂದ ಬಂದನೇ?? ಮುಂದಿನ ಎರಡು ದಿನ ಅವನು ತಾವರೆ ಕೆರೆಯ ದಂಡೆಯಲ್ಲೇ ಕಳೆದ. ಬೆಳಿಗ್ಗೆ. ಮಧ್ಯಾಹ್ನ. ಸಂಜೆ. ಕೆರೆಯ ಸುತ್ತ ತಿರುಗುತ್ತಿದ್ದ. ನೀರಿನ ಅಂಚಿನಲ್ಲಿ ಕುಳಿತು ದೂರ ನೋಡುತ್ತಿದ್ದ. ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದ. ಆದರೆ ಮೊಸಳೆ ಮತ್ತೆ ಕಾಣಿಸಲಿಲ್ಲ. ಹಿಂತಿರುಗುವ ಮುನ್ನ ಒಂದು ಸಂಜೆ ಇಬ್ಬರೂ ಕೆರೆಯ ದಡದಲ್ಲಿ ನಿಂತಿದ್ದರು. ಸೂರ್ಯ ಅಸ್ತಮಿಸುತ್ತಿದ್ದ. ತಾವರೆ ಎಲೆಗಳ ನಡುವೆ ಗಾಳಿ ನಿಧಾನವಾಗಿ ಹರಿಯುತ್ತಿತ್ತು. ಆಗ ಕಿಶನ್   ಮನದಾಳದ ಮಾತುಗಳನ್ನು ಹಂಚಿಕೊಂಡ.. “ನನ್ನ ತಾಯಿ ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ತೀರಿಕೊಂಡರು.. -ಬ್ರೇನ್ ಕ್ಯಾನ್ಸರ್..  ಕೊನೆಯ ದಿನಗಳಲ್ಲಿ ಅವರು ನನ್ನನ್ನು ಗುರುತಿಸಲೂ ಆಗುತ್ತಿರಲಿಲ್ಲ.” ಅವನು ಸ್ವಲ್ಪ ಹೊತ್ತು ನೀರಿನತ್ತ ನೋಡಿದ. “ಕಳೆದ ಕೆಲವು ವರ್ಷಗಳಿಂದ ಒಂದು ಕನಸು ಪದೇಪದೇ ಬೀಳುತ್ತಿದೆ.” “ಯಾವ ಕನಸು?” ಎಂದು ಸಹನಾ ಕೇಳಿದಳು. “ನನ್ನ ತಾಯಿ  ಮೊಸಳೆಯಾಗಿ ಹುಟ್ಟಿದ್ದಾರೆ ಅಂತ!” ಸಹನಾಳಿಗೆ ಅವನು ತಮಾಷೆ ಮಾಡುತ್ತಿದ್ದಾನೇನೋ ಅನಿಸಿತು. ಆದರೆ ಅವನ ಮುಖದಲ್ಲಿ ನಗುವಿರಲಿಲ್ಲ. ಅವನು ನಿಜವಾಗಿಯೇ ಹೇಳುತ್ತಿದ್ದ. ವಿಜ್ಞಾನಿಯಾಗಿದ್ದೂ? ಸಂಶೋಧಕನಾಗಿದ್ದೂ? ಸಹನಾ ಗೊಂದಲಕ್ಕೊಳಗಾದಳು. “ಅದು ನಿಜವೋ ಸುಳ್ಳೋ ಗೊತ್ತಿಲ್ಲ, ನೀನು ಮೊಸಳೆಯ ವಿಡಿಯೋ ಶೇರ್ ಮಾಡಿದ ಮೇಲೆ ಇವಳೇ ನನ್ನ ಅಮ್ಮ ಎಂದು ಮತ್ತೆ ಕನಸಾಯಿತು!!” ಎಂದು ಕಿಶನ್ ನಿಧಾನವಾಗಿ ಹೇಳಿದ. ಒಬ್ಬ ವಿಜ್ಞಾನಿ.. ಒಬ್ಬ ಬುದ್ಧಿವಂತ ಮನುಷ್ಯ..  ತನ್ನ ತಾಯಿಯನ್ನು ಒಂದು ಮೊಸಳೆಯೊಳಗೆ ಹುಡುಕುತ್ತಿದ್ದಾನೆ!! ಮನುಷ್ಯನ ದುಃಖಕ್ಕೆ ತರ್ಕದ ಭಾಷೆ ಗೊತ್ತಿರದಿರಬಹುದು ಎಂದು ಮೊದಲ ಬಾರಿಗೆ ಅವಳಿಗೆ ಅನಿಸಿತು. ಹಿಂತಿರುಗುವಾಗ ಕಿಶನ್ ಒಂದು ವಿನಂತಿ ಮಾಡಿದ. “ಮೊಸಳೆ ಮತ್ತೆ ಕಂಡರೆ ನನಗೆ ಫೋಟೋ ಕಳುಹಿಸು.” “ಸರಿ.” “ಸಾಧ್ಯವಾದರೆ ಅದರ ಬಗ್ಗೆ ಗಮನವಿಡು.” “ಅಂದರೆ?” “ಆಹಾರ ಹಾಕು. ಯಾರಾದರೂ ತೊಂದರೆ ಕೊಡದಂತೆ ನೋಡಿಕೋ.” ಸಹನಾ ನಕ್ಕಳು. “ನಾನು ಮೊಸಳೆಯ ಕಾವಲುಗಾರ್ತಿಯಾ?” “ನಾನು ಖರ್ಚು ಕಳುಹಿಸುತ್ತೇನೆ.” ಆ ಮಾತು ಕೇಳಿದಾಗ ಸಹನಾ ಏನೂ ಹೇಳಲಿಲ್ಲ. ಮೊದಲ ತಿಂಗಳು ಕಿಶನ್ ಸ್ವಲ್ಪ ಹಣ ಕಳುಹಿಸಿದ. ಸಹನಾ ನಿಜವಾಗಿಯೇ ಕೆಲವು ಮೀನುಗಳನ್ನು ತಂದು ಕೆರೆಯ ಬಳಿ ಹಾಕಿದಳು. ಮುಂದಿನ ತಿಂಗಳು ಮತ್ತೆ ಹಣ ಬಂತು. ಅದಾದ ಮೇಲೆ ಇನ್ನೊಮ್ಮೆ. ಇದರ ಮಧ್ಯೆ ಕಿಶನ್ ಜರ್ಮನಿಗೆ ಹೊರಟ. ದೂರದ ದೇಶದಿಂದಲೂ ಅವನು ಮೊಸಳೆಯ ವಿಚಾರ ಕೇಳುತ್ತಿದ್ದ. “ಇವತ್ತು ಕಂಡಿತಾ?” “ನೀರಿನ ಮಟ್ಟ ಹೇಗಿದೆ?” “ಅದಕ್ಕೆ ಆಹಾರ ಹಾಕಿದ್ದೀಯಾ?” ಸಹನಾ ಉತ್ತರಿಸುತ್ತಿದ್ದಳು. ಆದರೆ ನಿಧಾನವಾಗಿ ಅವಳ ಉತ್ತರಗಳಲ್ಲಿ ಸತ್ಯ ಕಡಿಮೆಯಾಗತೊಡಗಿತು. ಒಂದು ದಿನ ಅವಳು ಬರೆದಳು: “ಮೊಸಳೆಗೆ ಮೀನು ತರಲು ಖರ್ಚು ಹೆಚ್ಚಾಗಿದೆ.” ಕಿಶನ್ ತಕ್ಷಣ ಹಣ ಕಳುಹಿಸಿದ. ಮತ್ತೊಂದು ದಿನ: “ಕೆರೆಯ ನೀರು ಕಲುಷಿತವಾಗಿದೆ. ಸ್ವಚ್ಛಗೊಳಿಸಬೇಕು.” ಮತ್ತೆ ಹಣ ಬಂತು. ಮೊದಲ ಬಾರಿ ಹಣ ಬಂದಾಗ ಅವಳಿಗೆ ಸಂಕೋಚವಾಯಿತು.ಎರಡನೇ ಬಾರಿ ಕಡಿಮೆ ಆಯಿತು.ಮೂರನೇ ಬಾರಿ ಸಂಪೂರ್ಣ ಮಾಯವಾಯಿತು. ಅವಳು ತನ್ನೊಳಗೆ ಒಂದು ಸಮರ್ಥನೆ ಕಂಡುಕೊಂಡಳು. “ನಾನು ಕದಿಯುತ್ತಿಲ್ಲ. ಅವನೇ ಕೊಡುತ್ತಿದ್ದಾನೆ.” ಆದರೆ ಕೆಲವು ಸುಳ್ಳುಗಳು ಮೊದಲಿಗೆ ಇತರರನ್ನು ಮೋಸಗೊಳಿಸುತ್ತವೆ.ನಂತರ ಅವುಗಳನ್ನು ಹೇಳಿದವರನ್ನೇ. ಅದನ್ನು ಸಹನಾ ಇನ್ನೂ ಅರಿತಿರಲಿಲ್ಲ. ಕೆರೆಯ ನೀರು ನಿಶ್ಚಲವಾಗಿತ್ತು. ಮೊಸಳೆ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಸಹನಾಳ ಬದುಕಿನಲ್ಲಿ ಹೊಸ ಅಲೆಗಳು ಎದ್ದಿದ್ದವು. ಅವು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದು ಅವಳಿಗೂ ಗೊತ್ತಿರಲಿಲ್ಲ.ವರ್ಷಗಳು ಕೆಲವೊಮ್ಮೆ ಮನುಷ್ಯರನ್ನು ದೊಡ್ಡವರನ್ನಾಗಿಸುವುದಿಲ್ಲ.ಅವರೊಳಗಿನ ಆಸೆಗಳನ್ನು ಮೊಸಳೆಯ ಬಾಯಿಗಿಂತ ದೊಡ್ಡದಾಗಿಸುತ್ತವೆ.. ಕಿಶನ್ ಕಳುಹಿಸುತ್ತಿದ್ದ ಹಣದಿಂದ ಸಹನಾ ಮೊದಲು ಒಂದು ಬಂಗಾರದ ಸರ ಕೊಂಡಳು. ನಂತರ ಇನ್ನೊಂದು. ದುಬಾರಿ ಸೀರೆಗಳು ಬಂದವು. ಗಂಡನ ಬಟ್ಟೆ ಅಂಗಡಿಯ ಒಂದು ಮೂಲೆಯಲ್ಲಿ ಮಹಿಳೆಯರ ಸಿದ್ಧ ಉಡುಪು ಮತ್ತು ಕೃತಕ ಆಭರಣಗಳ ಪುಟ್ಟ ಮಳಿಗೆಯನ್ನೂ ತೆರೆದಳು.“ತವರು ಮನೆಯಿಂದ ಸ್ವಲ್ಪ ಆಸ್ತಿ ಬಂದಿದೆ,” ಎಂದು ಗಂಡನಿಗೆ ಹೇಳಿದಳು.ಅವನು ಪ್ರಶ್ನಿಸಲಿಲ್ಲ.ನಂಬಿಕೆ ಕೆಲವೊಮ್ಮೆ ಪ್ರಶ್ನೆಗಳಿಗಿಂತ ದೊಡ್ಡದು. ಮೂರು ವರ್ಷಗಳು ಕಳೆದುಹೋದವು.ಒಂದು ಬೆಳಿಗ್ಗೆ ಕಿಶನ್‌ನ ಸಂದೇಶ ಬಂತು.“ನನ್ನ ಜರ್ಮನಿ ನಿಯೋಜನೆ ಮುಗಿದಿದೆ.  ಒಂದೆರಡು  ವಾರದಲ್ಲಿ  ಜೇನುಪುರಕ್ಕೆ ಬರುತ್ತಿದ್ದೇನೆ.”ಆ ಒಂದು ಸಾಲು ಓದಿದ ಕ್ಷಣದಿಂದ ಸಹನಾಳ ಮನಸ್ಸು ತನ್ನದೇ ಧ್ವನಿಯನ್ನು ಕಳೆದುಕೊಂಡಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ.ಬಂದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಎಚ್ಚರವಾಗುತ್ತಿತ್ತು.ಕನಸಿನಲ್ಲಿ ಕೆರೆಯ ನೀರು ಕಾಣಿಸುತ್ತಿತ್ತು.ಆ ನೀರಿನಲ್ಲಿ ಮೊಸಳೆಯಲ್ಲ…ತನ್ನ ಮುಖವೇ ತೇಲುತ್ತಿತ್ತು.ಕುತ್ತಿಗೆಯ ತುಂಬ ಬಂಗಾರದ ಸರಗಳಿದ್ದರೂ, ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. ರಾತ್ರಿಯಿಡೀ ಕೆಟ್ಟ ಕನಸುಗಳು.. ಸರಗಳೇ ನೇಣಿನ ಕುಣಿಕೆಯಾದಂತೆ.. ತನ್ನ ಮೈಯಿಡೀ ಮೊಸಳೆಯ ಚರ್ಮದಂತಾಗಿ ಬಿಟ್ಟಂತೆ.. ಯಾವ ಸೀರೆ ಉಡಲು ಹೋದರೂ ಮೊಸಳೆಯ ವಾಸನೆ ಬಂದಂತೆ..

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ Read Post »

You cannot copy content of this page

Scroll to Top