ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ

ರಂಗ ಸಂಗಾತಿ “ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ ರಚನೆ  : ಎಚ್ ಎಸ್ ಶಿವಪ್ರಕಾಶ್ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನಆಡಳಿತಾಧಿಕಾರಿಕನ್ನಡ ಪುಸ್ತಕ ಪ್ರಾಧಿಕಾರಪ್ರಥಮ ಮುದ್ರಣ  : 2011ಪುಟಗಳು : 534 ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತುಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು. ವೆಂಕಟೇಶ ಈಡಿಗರ*ರಾಣೇಬೆನ್ನೂರು**9008698311*

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್ “ನಾವೀಗ ಅನಂತ” ಇನ್ನೂಏನೆಂದರೆ ಏನನ್ನೂ ಧಕ್ಕಿಸಿಕೊಂಡಿರಲಿಲ್ಲಆಗಲೇ ತೊರೆದು ನಡದೆಈಗಷ್ಟೇ ಸಿಕ್ಕ ಹಾಗಿತ್ತು, ಇಲ್ಲ , ಸಿಗುತ್ತಿದ್ದೆ . ಆಗಲೇ ದಾರಿ ಬದಲಿಸಿದೆ ಮುಂದಿನನಿಲ್ದಾಣದಲ್ಲಿ  ಮತ್ತೆ ಸಿಗುತ್ತೇವೆಯೊ  ಅದುಬೇಡದ ಸಂಗತಿ ಇಲ್ಲಿಈಗಲೇ ಸಿಕ್ಕವರು ಒಬ್ಬರಿಗೊಬ್ಬರು ಏನೂದೊರಕಿಸಿಕೊಳ್ಳದೇ ಹೋದಮೇಲೆಮುಂದೆ ಕೊಡುಕೊಳ್ಳುತ್ತೇವೆ ಎನ್ನುವಹಂಬಲ ಭರವಸೆ ನನಗಿಲ್ಲನಿರಿಕ್ಷೆಯೋ ..ಒಮ್ಮೆ ನಿರೀಕ್ಷೆ ಸತ್ತರೆ ಸಿಗುವ ಸಿಗದಿರುವುದರಗೊಡವೆಯೇ ಇರದು ನೀವೆನ್ನಬಹುದುಇಲ್ಲಿ ಕೊಡುಕೊಳ್ಳುವುದಾದರು ಏನಿತ್ತು?ಏನೆಲ್ಲವೂ…. ಬದುಕು ಬವಣೆ,ಕೊನೆಗು ಉಸಿರನ್ನೂ….. ಅವನುಕೊಟ್ಟಿದ್ದರೆ ಬವಣೆಯನ್ನೂ ಉಸಿರಾಗಿಸಿಕೊಳ್ಳುವ ಛಾತಿ ಇತ್ತು. ಅವನದನ್ನೂ ಕೊಡದೇ ತೆರಳಿದ ನೀವನ್ನುವಿರುಅವನು ಎನೂ ಕೊಡದೇ ಹೋದುದೇಬವಣೆಯಲ್ಲವೇ ಎಂದು!ಅದು ಹಾಗಲ್ಲ ಎನೋ ಕೊಡದೇ ಇರುವುದೇ ಅಮೃತ ಪ್ರೀತಿಅದೆ ಎಲ್ಲ, ಎಲ್ಲವೂ… ಅದನ್ನೇ ಬದುಕುತ್ತಿರುವೆ ನಾನೀಗಅವನು ಏನನ್ನಾದರೂ ಕೊಟ್ಟಿದ್ದರೆ ಸೀಮಿತವಾಗುತ್ತಿದ್ದ ಈಗ ಏನನ್ನೂ ಕೊಡದ ಅವನು ಪಡೆಯದ ನಾನು ಇಬ್ಬರೂ ಅನಂತ ಡಾ.ಭಾರತಿ ಅಶೋಕ್.

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಖಾಲಿಹಾಳೆ” ಬದುಕುಬಿಳಿಯ ಖಾಲಿ ಹಾಳೆಯಾಗಿದ್ದರೆಬಣ್ಣಗಳ ಬಳಿಯಬಹುದಿತ್ತು ನಮ್ಮಿಚ್ಛೆಯಂತೆತುಂಬಿಹುದು ಓರೆ ಕೋರೆಯಾದ ಗೆರೆಕಪ್ಪು ಬಣ್ಣದ ಚುಕ್ಕೆಗಳುಎಂದೆದೂ ಅಳಿಸಲಾಗದಂತ ಕಲೆಗಳುಊಹಿಸಲಾರದಂತಹ ತಿರುವುಗಳು ಬರೆದಿಟ್ಟಂತೆ ನಡೆವುದಾದರೆ ಬಾಳುಇರುತ್ತಿರಲಿಲ್ಲ ಇಲ್ಲಾವುದೇ ಗೋಳುಜೀವನ ನಾವು ರಚಿಸುವ ಕಾದಂಬರಿಯಲ್ಲಸುಖಾಂತ್ಯವನ್ನೇ ಬಯಸೋಣವೆಂದರೆನಲಿವೊಂದೇ ತುಂಬಲಿ ಎನ್ನಲುಬದುಕು ನಾವೆಣಿಸಿದಂತಲ್ಲಎಣಿಕೆಗೂ ಮೀರಿದ ಬ್ರಹ್ಮನ ಹೆಣಿಕೆಯಿದು ಇರುವ ಬಣ್ಣಗಳ ಬಳಸಿನೋವು ನಲಿವುಗಳ ಬೆರೆಸಿಚುಕ್ಕಿಗಳ ಸೇರಿಸಿ ರಂಗೋಲಿಯಾಗಿಸಿಚಿತ್ತಾರವಾಗಿಹ ವಾಸ್ತವವಿದುಬರೆದಂತೆ ಬದುಕಲ್ಲನಿನ್ನ ಬದುಕೇ ಬರವಣಿಗೆಯಾಗುವುದಿಲ್ಲಿನಿನ್ನ ಹೆಜ್ಜೆಯ ಗುರುತೇ ಮಾದರಿಯಾಗಿಅಕ್ಷರವ ರೂಪ ತಾಳುವುದು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ” Read Post »

ಇತರೆ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ

ಇತಿಹಾಸ ಸಂಗಾತಿ ಲೇಖಕಿ:ಗೊರೂರು ವಸಂತಿ ಮೂರ್ತಿ ಭಾರತ ಸ್ವಾತಂತ್ರ್ಯ ದಿನ ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ 1947 ನೆಯ ಇಸವಿ ಆಗಸ್ಟ್ 15 ನೆಯ ತಾರೀಕು ಭಾರತವನ್ನು ಒಂದು ಸ್ವತಂತ್ರದೇಶ ಎಂದು ಘೋಷಿಸಲಾಯಿತು. ಆದಿನ ಇಂಡಿಯಾ ಪಶ್ಚಾತ್ಯರ ದಬ್ಬಾಳಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಪ್ರಭಾವಿತರಾಗಿ ದೇಶದಾದ್ಯಂತ ಲಕ್ಷಾಂತರ ದೇಶಪ್ರೇಮಿಗಳು ಆ ದಿನಕ್ಕಾಗಿ ದುಡಿದಿದ್ದರು, ಸೆರೆವಾಸ ಅನುಭವಿಸಿದ್ದರು, ಅಪಾರ ತ್ಯಾಗಗಳನ್ನು ಮಾಡಿದ್ದರು. 1947ನೆಯ ಇಸವಿ ಆಗಸ್ಟ್ 15 ಕ್ಕೆ ಅವರುಗಳೆಲ್ಲ ಮಾಡಿದ ತ್ಯಾಗ ಮತ್ತು ಸಹಿಸಿದ ಕಷ್ಟಗಳಿಗೆ ಫಲ ಲಭಿಸಿತು. 1947ನೆಯ ಆಗಸ್ಟ್ 14, ಸರಿಯಾಗಿ ಮಧ್ಯರಾತ್ರಿ 12 ಘಂಟೆಯಲ್ಲಿ ಭಾರತ ಸ್ವತಂತ್ರ ದೇಶವೆಂದು (sovereign nation) ಘೋಷಿಸಲಾಯಿತು. ಮಧ್ಯರಾತ್ರಿಯಲ್ಲಿ All India Radio, ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ನ್ಯೂಸ್ ದೇಶದಾದ್ಯಂತ ಕೆಲವೇ ನಿಮಿಷಗಳಲ್ಲಿ ಹರಡಿತು. ಜನ ಖುಷಿಯಿಂದ ಹುಚ್ಚೆದ್ದು ಬೀದಿ ಬೀದಿಗಳಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಹೊರಟು ತಮ್ಮ ಆತ್ಮ ಸಂತೋಷವನ್ನು ತೋರ್ಪಡಿಸಿದರು ಮತ್ತು ಹಂಚಿಕೊಂಡರು. ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಜವಾಹರಲಾಲ್ ನೆಹರೂಕಿ ಜೈ, ಸರ್ದಾರ್ ವಲ್ಲಬಾಯಿ ಪಟೇಲ್ ಕಿ ಜೈ, ಇತ್ಯಾದಿ ಜಯಘೋಷಗಳ ಕೂಗು ಮುಗಿಲನ್ನೇ ಮುಟ್ಟಿತ್ತು. ಹಳ್ಳಿಹಳ್ಳಿಗಳಲ್ಲಿಯೂ, ದೊಡ್ಡ ಮೈಸೂರು, ಬೆಂಗಳೂರು, ದೆಹಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿಯೂ ಈ ಜಯಘೋಷದ ಪ್ರತಿಧ್ವನಿ ವಾತಾವರಣವನ್ನು ಸಂಪೂರ್ಣವಾಗಿ ಮುಳುಗಿಸಿತ್ತು. ಇಂತಹ ಪವಿತ್ರ ಘಳಿಗೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಮಸ್ತವನ್ನೂ ಮುಡುಪಿಟ್ಟು ಹೊಡೆದಾಡಿದ ಮಹಾತ್ಮಗಾಂಧಿ ಮತ್ತು ಇತರ ಮುಖಂಡರು ಎಲ್ಲಿದ್ದರು? ಅವರು ಖುಷಿಯಿಂದ ಬೀದಿಯಲ್ಲಿ ಮೆರವಣಿಗೆ ಹೊರಟಿರಲಿಲ್ಲ. ಮಿಠಾಯಿ ಹಂಚಿ ತಾವೂ ತಿನ್ನುತ್ತಿರಲಿಲ್ಲ. ಗಾಂಧೀಜಿ ಮತ್ತು ಅವರ ಕೆಲವು ನಿಕಟ ಅನುಯಾಯಿಗಳು (ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್) ಮುಂತಾದವರು ಕಲ್ಕತ್ತಾದಲ್ಲಿ ಇದ್ದರು. ಗಾಂಧೀಜಿ ಅವರು ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಹಿಂದೂ ಮುಸ್ಲಿಂ ಸೌಹಾರ್ದಕ್ಕಾಗಿ ಉಪವಾಸದಲ್ಲಿ ತೊಡಗಿದ್ದರು. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದರು!! ಭಾರತದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಕೋಟ್ಯಾಂತರ ಪ್ರಜೆಗಳು, ಯುವಕರು, ಮಧ್ಯವಯಸ್ಕರು, ಮುದುಕರು, ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕೆಚ್ಚೆದೆಯಿಂದ ತಮ್ಮ ದೇಹವನ್ನು ಬ್ರಿಟಿಷರ ಲಾಠಿ,ಬಂದೂಕಗಳಿಗೆ ಸ್ವಂತ ಇಚ್ಛೆಯಿಂದ ಒಡ್ಡಿದರು. ಗಾಂಧೀ ಅವರ ತತ್ವದ ಪ್ರಕಾರ ವಾಪಸ್ಸು ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿದೂ ಭಾರತದ ಸ್ವಾತಂತ್ರ್ಯದ ಭವ್ಯ ಕನಸಿನಲ್ಲಿ ಪ್ರಜೆಗಳು ತಮ್ಮ ಸಮಸ್ತವನ್ನೂ ತ್ಯಾಗಮಾಡಲು ಮುಂದಾದರು. ಈ ದೇಶಭಕ್ತರು ಕಾರಾಗ್ರಹವಾಸಕ್ಕೂ ಹೆದರಲಿಲ್ಲ; ಬ್ರಿಟಿಷರ ಗುಂಡಿಗೂ ಹೆದರಲಿಲ್ಲ; ಇದು ಗಾಂಧೀಜಿ ಅವರ ತಪಸ್ಸಿನ ಆತ್ಮಶಕ್ತಿ. ಗಾಂಧೀಜಿ ಅವರನ್ನು ಹಿಂಬಾಲಿಸಿ ಸತ್ಯಾಗ್ರಹಕ್ಕೆ ಧುಮುಕಿದರೆ ವಾಪಸ್ಸು ಜೀವಂತವಾಗಿ ಬರುವುದು ಸಂದೇಹ ಎಂದು ತಿಳಿದೂ ಕೂಡ ಕೋಟಿ ಕೋಟಿ ಜನಗಳು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದಾದರು. ಜಗತ್ತಿನ ಚರಿತ್ರೆಯಲ್ಲಿಯೇ ಇಂತಹ ಅದ್ಭುತ ಎಲ್ಲಿಯೂ ನಡೆದಿಲ್ಲ. ಹಾಗಾದರೆ ಎಲ್ಲ ಆರಾಮವಾಗಿ ಸುಭಿಕ್ಷವಾಗಿ, ಶಾಂತಿ ಸೌಹಾರ್ದ, ಪ್ರೀತಿಯಿಂದ ಮುಗಿಯಿತೆಂದು ಹೇಳುವಹಾಗಿಲ್ಲ. ದೇಶ ವಿಭಾಗ ಮಾಡುವ ಪ್ರಶ್ನೆ ಎದ್ದಿತ್ತು. ಪಂಜಾಬ್, ಬಂಗಾಳಾಗಳಲ್ಲಿ ಹಿಂದೂ ಮುಸ್ಲಿಂ ಕೋಮುವಾದ ಮತ್ತು ಜಾತೀಯ ಘರ್ಷಣೆಗಳಿಂದ ಹಿಂಸೆ ಕೊಲೆಗಳು ನಡೆದು ಗಾಂಧೀಜಿ ಅವರ ಮನಸ್ಸಿಗೆ ತೀವ್ರ ದುಃಖವುಂಟು ಮಾಡಿದ್ದವು. ಅವರು ಮತ್ತೆ ಉಪವಾಸ ಪ್ರಾರಭಿಸಿದ್ದರು. ಈ ಬಾರಿ ಬ್ರಿಟಿಶರನ್ನು ಎದುರಿಸುವುದಕ್ಕಲ್ಲ. ತಮ್ಮ ಪ್ರೀತಿಯ ಭಾರತೀಯರ ಮನಸ್ಸಿನ ಆತ್ಮ ಸಂಧಾನಕ್ಕಾಗಿ. ಹೀಗೆ ದೇಶದಲ್ಲಿ ಅಶಾಂತಿ ಉಂಟಾದಾಗ ಪ್ರತಿ ಮನೆಯಲ್ಲೂ ಅವರವರದೇ ಆದ ಪರಿಸ್ಥಿತಿ/ಪ್ರಶ್ನೆಗಳು ಹುಟ್ಟಿದುವು ವಿದ್ಯಾರ್ಥಿಗಳು ಅನೇಕರು ಶಾಲೆ ಕಾಲೇಜುಗಳನ್ನು ಬಿಟ್ಟು ಚಳುವಳಿ ಸೇರಿದ್ದರು. ಅವರ ವಿದ್ಯಾಭ್ಯಾಸ ಕಡೆಗಣಿತವಾಗಿ ಅವರು ಯಾವ ತರಗತಿಗೆ ಸೇರಿ ಮುಂದುವರಿಸಬೇಕು ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಇನ್ನು ಕೆಲವು ಯುವಕರು ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಜೀವವನ್ನೇ ಕಳೆದುಕೊಂಡು ಅವರ ಹೆಂಡತಿಯರು ಮತ್ತು ಮಕ್ಕಳ ಗತಿಯೇನು ಎಂದು ತಿಳಿಯದೇ ಆತಂಕದಲ್ಲಿದ್ದರು. ಮತ್ತು ಕೆಲವರು ತಾವು ಸತ್ಯಾಗ್ರಹದಲ್ಲೂ ಭಾಗವಹಿಸಲಿಲ್ಲ, ಕಾರಾಗ್ರಹಕ್ಕೂ ಹೋಗಲಿಲ್ಲ, ಮನೆಯಲ್ಲಿಯೇ ಕುಳಿತು “ನಾನೂ ಸತ್ಯಾಗ್ರಹಿ ಆಗಿದ್ದೇ; ಲಾಠಿ ಏಟು ತಿಂದಿದ್ದೇ” ಎಂದು ಸುಳ್ಳು ಹೇಳತೊಡಗಿದರು. ಮನೆಗೊಂದು ಕಥೆಯಾಯಿತು. ನಮ್ಮ ಗೊರೂರು ಮನೆಯಲ್ಲೂ ಒಂದು ಕಥೆ ಆಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ತಂದೆ ಡಾ. ಗೊರೂರರು ಇನ್ನೂ ಸೆರೆಮನೆಯಲ್ಲಿಯೇ ಇದ್ದರು. “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ.” ಎಂಬ ಮಾತು ಬಳಕೆಯಲ್ಲಿದೆ. 1947 ಆಗುಸ್ಟ್ ತಿಂಗಳಿನಲ್ಲಿ ನನ್ನ ದೊಡ್ಡ ಅಣ್ಣ ರಾಮಚಂದ್ರ ತುಮಕೂರಿನಲ್ಲಿ ಇಂಟರ್ಮೀಡಿಯಟ್ ಓದುತ್ತಿದ್ದ. ಅವನಿಗೆ ಆಗ 17 ವಯಸ್ಸು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕಾಗಿತ್ತು. ಅದಕ್ಕೆ ಎಲ್ಲರೂ ಕಾತುರರಾಗಿದ್ದರು. ಆದರೆ ಅದಕ್ಕೆ ಒಂದು ಅಡಚಣೆ ಬಂದಿತ್ತು. ಅದೇನೆಂದರೆ ಅನೇಕ ಮಹಾರಾಜರುಗಳು ತಮ್ಮ ಆಳ್ವಿಕೆಯನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಸೇರಲು ಇಷ್ಟಪಡಲಿಲ್ಲ. ಆಗ ಮತ್ತೊಂದು ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಗೆ “ಚಲೋ ಪ್ಯಾಲೆಸ್” ಎಂದು ಹೆಸರು. ಈ ಚಳುವಳಿ ರಾಜರುಗಳ ಮನಸ್ಸನ್ನು ಬದಲಾಯಿಸುವುದಕ್ಕಾಗಿ ಮಾಡಿದ ಚಳುವಳಿ. ಇದರಲ್ಲಿ ಡಾ ಗೊರೂರರ ಮಗ ರಾಮಚಂದ್ರ ಭಾಗವಹಿಸುತ್ತಿದ್ದ. 1947 ಸೆಪ್ಟೆಂಬರ್ 14 ನೆಯ ತಾರೀಕು ಪೊಲೀಸರು ತುಮಕೂರಿನಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲೀಬಾರ್ ಚಲಾಯಿಸಿದರು. ಆ ದಿನ ರಾಮಚಂದ್ರನೂ ಸೇರಿದಂತೆ ನಿರಾಯುಧರಾದ ಅಹಿಂಸಾ ಚಳುವಳಿಯಲ್ಲಿ ಶಾಂತರಾಗಿ ತೊಡಗಿದ್ದ ಮೂರು ಜನ ಕನ್ನಡಿಗರನ್ನು ಬ್ರಿಟಿಷ್ ಪೋಲೀಸ ರು ವಿನಾಕಾರಣ ಗುಂಡು ಹಾರಿಸಿ ಕೊಂದರು. ಇಂದಿಗೂ ಆ ಸ್ಥಳದಲ್ಲಿ ಈ ಮೂವರ ಹೆಸರನ್ನು ಹೊತ್ತ ಒಂದು ಶಾಸನ ಇದೆ. ಈ ಪುಣ್ಯ ಸ್ಥಳಕ್ಕೆ “ಸ್ವತಂತ್ರ ಚೌಕ” ಅಥವಾ “Freedom Circle” ಎಂದು ಹೆಸರಿಸಲಾಗಿದೆ. ಇದಾದಮೇಲೆ 1947 ಅಕ್ಟೋಬರ್ 14 ನೆಯ ತಾರೀಕು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತಮ್ಮ ಒಪ್ಪಿಗೆಯನ್ನು ಘೋಷಿಸಿದರು. ಅದಾದಮೇಲೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕರ್ನಾಟಕದ ಮೊಟ್ಟಮೊದಲನೆಯ ಮುಖ್ಯಮಂತ್ರಿ ಎಂಬ ಗೌರವ ಶ್ರೀ ಕೆ ಸಿ ರೆಡ್ಡಿ ಅವರಿಗೆ ಸಲ್ಲುತ್ತದೆ. ಭಾರತ ದೇಶದ ಸ್ವಾತಂತ್ರಕ್ಕಾಗಿ ಕಷ್ಟ ನಷ್ಟಗಳನ್ನು ಅನುಭವಿಸಿದ ಮತ್ತು ಪ್ರಾಣ ಕೊಟ್ಟ ಅನೇಕ ದೇಶಭಕ್ತರಿಗೆ ಅವರ ನಿಸ್ಸ್ವಾರ್ಥ ಸೇವೆಗೆ ಈ ದಿನ ನಮ್ಮ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಗೊರೂರು ವಸಂತಿ ಮೂರ್ತಿ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ Read Post »

ನಿಮ್ಮೊಂದಿಗೆ

ಎನ್.ಜಯಚಂದ್ರನ್ ಕವಿತೆ “ಆಶ್ರಯ ಯಾರಿಗೆ?”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ಆಶ್ರಯ ಯಾರಿಗೆ?” ಬಡವನಿಗೊಂದು ಮನೆ ಎಂದರು,ಆಶ್ರಯ ಎಂದು ಹೆಸರಿಟ್ಟರು,ಹೆಸರಿನಲ್ಲಿ ಮಾತ್ರ ಬಡವನ ಪಾಲು—ಸೈಟ್  ಬಂದಾಗ ,ಸಿರಿವಂತನ ಕೈಗೆ ಕೊಟ್ಟರು. ಅರ್ಜಿಯ ಮೇಲೆ ಅರ್ಜಿ ಹಾಕಿದ,ಬಡವ ಕಚೇರಿ ಸುತ್ತಿದ,ಸಾರ್, ನನ್ನ ಸೈಟ್ ಎಲ್ಲಿ ? ಎಂದಾಗಫೈಲು ಮಾತ್ರ ಮೇಜಿನ ಕೆಳಗೆ ನಕ್ಕಿತು ! ಸರ್ಕಾರಿ ಜಾಗವಂತೆ—ಬಡವನಿಗಾಗಿ ಮೀಸಲಂತೆ,ರಾತ್ರಿ ಕತ್ತಲಲ್ಲಿ ಗಡಿ ಹಾಕಿಬೆಳಗಾಗುವಷ್ಟರಲ್ಲಿ ಖಾಸಗಿ ಆಸ್ತಿಯಂತೆ ! ಸೈಟ್ ನಮ್ಮದು, ದಾಖಲೆ ನಿಮ್ಮದು,ಕಾಗದ ನಮ್ಮದು, ಕಾನೂನು ನಿಮ್ಮದು.ಹೀಗೆ ಹೇಳಿದ ಕುಳಗಳುಬ್ಯಾಂಕಿನ ಬಾಗಿಲಿಗೆ ಹೋದರು ! ಸರ್ಕಾರಿ ಆಸ್ತಿಗೆ ಸಾಲವಂತೆ,ಸಾಲಕ್ಕೆ ಆಸ್ತಿಯೇ ಭದ್ರತೆಯಂತೆ,ಬಡವನ ಕನಸಿನ ಜಾಗವನ್ನೇಬ್ಯಾಂಕಿನ ಲಾಕರ್‌ಗೆ ಅಡವಿಟ್ಟರಂತೆ ! ಕಚೇರಿಯ ಗೋಡೆ ಕೇಳಿತು—ಇದು ಹೇಗೆ ಸಾಧ್ಯ?ಅಧಿಕಾರಿಯ ಕುರ್ಚಿ ಉತ್ತರಿಸಿತು—ನನಗೇನೂ ಗೊತ್ತಿಲ್ಲ ! ಫೈಲು ಓಡಲಿಲ್ಲ,ಸಹಿ ನಿಲ್ಲಲಿಲ್ಲ,ನ್ಯಾಯ ಮಾತ್ರ ಬಾಗಿಲಲ್ಲೇ  ನಿಂತು ಸರದಿ ಯಾವಾಗ ? ಎಂದು ಕಾಯುತ್ತಿದೆ ! ಬಡವ ಕೇಳಿದ—ನನ್ನ ಆಶ್ರಯ ಎಲ್ಲಿ ?ಅಧಿಕಾರಿ ಹೇಳಿದ—ತನಿಖೆ ನಡೆಯುತ್ತಿದೆ !! ವರ್ಷಗಳು ಉರುಳಿದವು,ಫೈಲುಗಳು ದಪ್ಪವಾದವು,ಬಡವನ ತಲೆಮೇಲೆ ಮಾತ್ರಆಕಾಶವೇ ಸೂರು ಆಯಿತು ! ಆಶ್ರಯ ಯೋಜನೆ ಹೆಸರಿನಲ್ಲಿಆಶ್ರಯವಿಲ್ಲದವನಿಗೆ ಆಸೆ,ಆಸೆಯ ಹಿಂದೆ ಸೈಟ್,ಸೈಟ್ ಹಿಂದೆ ಸಿರಿವಂತನ ನೋಟು ! ಬಡವನ ಬೆವರಿನಿಂದಸರ್ಕಾರದ ಯೋಜನೆ ಹುಟ್ಟಿತು,ಸಿರಿವಂತನ ಬುದ್ಧಿಯಿಂದಅದೇ ಯೋಜನೆ ಆಸ್ತಿಯಾಯಿತು ! ಕಾನೂನು ಪುಸ್ತಕದಲ್ಲಿ ಬಡವನ ಹಕ್ಕು,ಕಚೇರಿ ಪುಸ್ತಕದಲ್ಲಿ ಅಧಿಕಾರಿಯ ಮೌನ,ದಾಖಲೆ ಪುಸ್ತಕದಲ್ಲಿ ಸಿರಿವಂತನ ಹೆಸರು—ಇದೇನಾ ಆಶ್ರಯದ ಹೊಸ ವ್ಯಾಖ್ಯಾನ ? ಒಂದು ದಿನ ಬಡವ ಕೇಳುವನು—ನನ್ನ ಸೈಟ್ ಎಲ್ಲಿ ಹೋಯಿತು ?ಆಗ ಕಡತದೊಳಗಿಂದ ಧ್ವನಿ ಪಿಸುಗುಟ್ಟಿತು ; ನಿನ್ನ ಹೆಸರೇ ಇತ್ತು…ಆದರೆ ಸೈಟ್  ಮಾತ್ರ ಇನ್ನೊಬ್ಬರದಾಯಿತು ! ಆಶ್ರಯ ಯಾರಿಗೆ ?ಬಡವನಿಗೋ…..ಅಥವಾ ಬಡವನ ಹೆಸರಿನಲ್ಲಿಸೈಟ್ ಕಳ್ಳರಿಗೋ ?ಪ್ರಶ್ನೆ ಉಳಿದಿದೆ—ಉತ್ತರ ಮಾತ್ರ ಕಾಣುತ್ತಿಲ್ಲ.ಅಧಿಕಾರಿಗಳ ಮೌನದ ನಡುವೆಬಡವನ ಆಶ್ರಯವೂಆಸೆಯಂತೆಯೇ ದೂರವಾಗುತ್ತಿದೆ ! ಎನ್.ಜಯಚಂದ್ರನ್

ಎನ್.ಜಯಚಂದ್ರನ್ ಕವಿತೆ “ಆಶ್ರಯ ಯಾರಿಗೆ?” Read Post »

ಇತರೆ

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್

ಸ್ವಾತಂತ್ರ್ಯ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ 80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ”  ತಾಯ್ನಾಡಿನ ರಕ್ಷಣೆಗಾಗಿ ಆಕೆಯ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಜನ ಪ್ರಾಣ ತೆತ್ತಿರುವ ಸ್ವಾತಂತ್ರ್ಯ ಸೇನಾನಿಗಳ ಉಗ್ರ ಹೋರಾಟ ಮತ್ತು ಹಲವಾರು ಶಾಂತಿಯುತ ಹೋರಾಟಗಳ ಚಳುವಳಿಗಳ ಫಲವಾಗಿನಾವು ಗಳಿಸಿಕೊಂಡ ಸ್ವಾತಂತ್ರ್ಯಕ್ಕೆ ಇದೀಗ 78ರ ಹರಯ. ಇಷ್ಟು ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ಗಳಿಸಿದ್ದೇನು?.ಉಳಿಸಿದ್ದೇನು? ದೇಶಕ್ಕೆ ಕೊಟ್ಟದ್ದೇನು? ದೇಶದಿಂದ ಪಡೆದುಕೊಂಡದ್ದು ಏನನ್ನು ಎಂದು ಯೋಚಿಸಿದಾಗ ಒಂದೆಡೆ ಹೆಮ್ಮೆಯ ಭಾವ ಸ್ಫುರಿಸಿದರೆ ಮತ್ತೊಂದೆಡೆ ವಿಷಾದ ಮಡುಗಟ್ಟುತ್ತದೆ. ‘ದೇ ದೀ ಹಮೆ ಆಜಾದಿ.. ಬಿನಾ ಖಡ್ಗ ಬಿನಾ ಡಾಲ್: ಎಂಬ ಹಾಡನ್ನು ಹಾಡುವ ಮೂಲಕ ನಮ್ಮ ರಾಷ್ಟ್ರಪಿತನನ್ನು ನೆನೆಸಿಕೊಳ್ಳುವ ನಾವುಗಳು ಗಾಂಧೀಜಿಯವರು ಹಾಕಿಕೊಟ್ಟ ಸತ್ಯ ಅಹಿಂಸೆ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು ಸರ್ವಧರ್ಮ ಸಾಮರಸ್ಯವನ್ನು, ಬಂಧುತ್ವವನ್ನು ತೋರುವ ಅಖಂಡ ಭಾರತವನ್ನು ಸೃಷ್ಟಿಸಿದ್ದೇವೆಯೇ?! ಅವರು ಕಂಡ ರಾಮ ರಾಜ್ಯದ ಕನಸನ್ನು ನನಸು ಮಾಡಿದ್ದೇವೆಯೇ ಎಂದರೆ… ಉಹೂಂ ಕನಸಿನಲ್ಲಿಯೂ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ವಿಶ್ವದ ನೂರಾರು ದೇಶಗಳ ರಾಜ್ಯ ನೀತಿಗಳನ್ನು ಅರಿತು ಅರಗಿಸಿಕೊಂಡು ಭಾರತದಂತಹ ಬಹುದೊಡ್ಡ ಪ್ರಜಾತಂತ್ರ ದೇಶಕ್ಕೆ ಅತ್ಯವಶ್ಯಕವಾದ ಸಂವಿಧಾನವನ್ನು ರೂಪಿಸಿಕೊಟ್ಟ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣಗೊಂಡಿದೆಯೇ ಎಂದರೆ…. ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು.  ನಿಜ, ಭಾರತ ಹಿಂದೆಂದಿಗಿಂತಲೂ ಹೆಚ್ಚು ಆರ್ಥಿಕವಾಗಿ ಬಲಿಷ್ಠವಾಗಿದೆ…. ಆದರೆ ಬಡತನ, ನಿರುದ್ಯೋಗ, ಸುಸ್ಥಿರ ಬದುಕು ಇನ್ನೂ ಕನಸಾಗಿದೆ. ಮೂರು ಹೊತ್ತಿನ ಊಟ ಬಿಡಿ…ಒಪ್ಪತ್ತಿನ ಊಟಕ್ಕೂ ತತ್ವಾರವಾದ ಜನರ ಬವಣೆಗಳು ನಮ್ಮ ಕಣ್ಣ ಮುಂದೆ ಇವೆ. ತಲೆಯ ಮೇಲೆ ಸೂರಿಲ್ಲದ, ಇದ್ದರೂ ಜೋರಾದ ಗಾಳಿ, ಬಿರುಸಾದ ಮಳೆಗೆ ಯಾವಾಗ ಬೀಳುತ್ತದೆ ಎಂಬ ಆತಂಕವನ್ನು ಉಂಟು ಮಾಡುವ, ಹಾಗೊಂದು ವೇಳೆ ಬಿದ್ದರೆ ಮುಂದೇನು? ಎಂದು ಭವಿಷ್ಯದ ಕುರಿತು ಚಿಂತಿಸುವ ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಕೆಲವಷ್ಟು ವಲಯಗಳಲ್ಲಿ ಆರ್ಥಿಕತೆ ತನ್ನ ಛಾಪನ್ನು ಮೂಡಿಸಿದ್ದರೂ ಕೂಡ ನಾವಿನ್ನೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಒದ್ದಾಡುತ್ತಿದ್ದೇವೆ. ಜನಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿಯೇ ನಿಲ್ಲುವ ನಾವು ಕಾರ್ಯಶೀಲತೆಯ ದೃಷ್ಟಿಯಲ್ಲಿ ನೋಡಿದಾಗ ಬಹಳಷ್ಟು ಹಿಂದೆ ಉಳಿದಿದ್ದೇವೆ. ನಮ್ಮನ್ನು ಬೃಹದಾಕಾರವಾಗಿ ಕಾಡುವ ಸಮಸ್ಯೆಗಳು ಹತ್ತು ಹಲವು. ಯುವಕರು, ಮಧ್ಯಮ ವಯಸ್ಸಿನವರು, ಮುದುಕರು ಎನ್ನದೆ ಎಲ್ಲರೂ ಕೂಡ ತಮ್ಮ ಕೈಯನ್ನು ಕೋಳವನ್ನಾಗಿಸಿಕೊಂಡು ದಿನದ ಹಲವಾರು ಗಂಟೆ ಮೊಬೈಲ್ನ ಮಾಯೆಯಲ್ಲಿ ಸಿಲುಕಿದ್ದಾರೆ.ಪರಿಣಾಮವಾಗಿ ನೀರ್ವೀರ್ಯತೆ ನಮ್ಮನ್ನು ಆಳುತ್ತಿದೆ. ಶೈಕ್ಷಣಿಕವಾಗಿ ನಾವು ಸಾಕ್ಷರರಾಗುತ್ತಿದ್ದೇವೆ ನಿಜ…. ಆದರೆ ವಿದ್ಯೆ?. ಸಾವಿರಾರು ವರ್ಷಗಳಿಂದ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮೌಲ್ಯಗಳು ನಶಿಸುತ್ತಿವೆ. ಹಲವಾರು ಮನೆಗಳು ಸಿರಿವಂತಿಕೆಯಿಂದ, ಪೀಠೋಪಕರಣಗಳಿಂದ ತುಂಬಿ ತುಳುಕುತ್ತಿದ್ದರೂ ಮನಸ್ಸು ದ್ವೇಷ ಅಸೂಯೆ ಅಸಹನೆಗಳನ್ನು ಹೊಂದಿ ಪ್ರೀತಿ ವಿಶ್ವಾಸ ಬಾಂಧವ್ಯ ಬಂಧುತ್ವ ಗಳನ್ನು ಹೊರಹಾಕಿವೆ. “ವಸುದೈವ ಕುಟುಂಬಕಂ” ಎಂದು ಜಗತ್ತಿಗೆ ಸಾರಿದ ನಮ್ಮ ದೇಶದಲ್ಲಿ ಕೌಟುಂಬಿಕ ಸಾಮರಸ್ಯ ನಶಿಸುತ್ತಿದೆ. ನೆರೆಹೊರೆಯವರನ್ನು ಬಂಧು ಬಾಂಧವರಂತೆ ಕಾಣುತ್ತಿದ್ದ ನಾವೀಗ ಮನೆಯ ಸದಸ್ಯರನ್ನೇ ನೀವ್ಯಾರು? ಎಂಬಂತೆ ಬದುಕುತ್ತಿದ್ದೇವೆ.ಮನೆ ಮನಗಳು ಛಿದ್ರವಾಗುತ್ತಿವೆ.  ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ’ ಎಂದು ಪಶು ಪಕ್ಷಿಗಳು ಕೂಡ ಹಾಡಿ ಹೊಗಳಿರುವ ನಮ್ಮ ದೇಶದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಸಾಮಾಜಿಕವಾಗಿ ಒಂದಾಗಿ ಬಾಳಬೇಕಿರುವ, ಸರ್ವಧರ್ಮ ಸಮನ್ವಯದ ನಾಡು ಇದೀಗ ಜಾತಿಯ ವಿಷ ಬೀಜಗಳನ್ನು ಬಿತ್ತುವ, ಧರ್ಮಾಂಧತೆಯನ್ನು ತುಂಬುವ ನಾಡಾಗಿ ಪರಿವರ್ತನೆಯಾಗಿದೆ. ಸಾಮಾಜಿಕ ಸಮಾನತೆ ಎನ್ನುವುದನ್ನು ಪುಸ್ತಕಗಳಲ್ಲಿ ಮಾತ್ರ ಕಾಣಬಹುದು…. ಉಳ್ಳವರು ಮತ್ತಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುವ ದೈನೇಸಿ ಸ್ಥಿತಿ ನಮ್ಮದಾಗಿದೆ. ಕೆಲವರಿಗೆ ತಿನ್ನಲು ಸಾಧ್ಯವಾಗದಷ್ಟು ಆಹಾರ ಮಿಕ್ಕಿ ತಿಪ್ಪೆ ಸೇರಿದರೆ ಆ ತಿಪ್ಪೆಯಲ್ಲಿ ಕುಳಿತು ಚೆಲ್ಲಿದ ಆಹಾರವನ್ನು ತಿನ್ನಲು ಬರುವ ನಾಯಿಗಳನ್ನು ಓಡಿಸಿ ತಾವು ತಿನ್ನುವ ಸ್ಥಿತಿಯಲ್ಲಿರುವ ಜನರು ನಮ್ಮಲ್ಲಿದ್ದಾರೆ. ಬಡ ಜನರ ಅನುಕೂಲಕ್ಕಾಗಿ ಸರಕಾರಗಳು ಕೊಡ ಮಾಡುವ ಯೋಜನೆಗಳು ನಿಜವಾಗಿಯೂ ಅವಶ್ಯಕತೆ ಉಳ್ಳವರನ್ನು ತಲುಪುವ ಮುನ್ನವೇ ಮಧ್ಯವರ್ತಿಗಳ ಮತ್ತು ಖೊಟ್ಟಿ ಬಡವರ ಕೈ ಸೇರುತ್ತಿದ್ದು ಬಹಳಷ್ಟು ಬಾರಿ ಈ ಯೋಜನೆಯ ಫಲಾನುಭವಿಗಳು ಕನ್ನಡಿಯಲ್ಲಿನ ಗಂಟಿನಂತೆ ಈ ಸೌಲಭ್ಯಗಳಿಗಾಗಿ ಎದುರು ನೋಡುವುದೇ ಆಗಿದ್ದು ನೀರಿನಲ್ಲಿ ಹೋಮ ಮಾಡಿದಂತೆ ನಿಷ್ಪ್ರಯೋಜಕವಾಗಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವ್ಯವಸ್ಥೆಯು ಸಾಕಷ್ಟು ಹೆಣಗಾಡುತ್ತಿದ್ದರೂ ಕೂಡ ಆಗಾಗ ಅಲ್ಲಲ್ಲಿ ಜಾತಿ, ಮತ, ಪಂಥ, ಗುಂಪುಗಾರಿಕೆಗಳ ಕಾರಣ ಜನರ ಮಾನ, ಜೀವ ಹಾನಿ ಆಗುತ್ತಿದೆ. ಸರ್ವಧರ್ಮ ಸಮಭಾವದಿಂದ ನೋಡುತ್ತಿದ್ದ ದೇಶದಲ್ಲಿ ಇಂದು ಪ್ರತಿಯೊಂದು ಜಾತಿಗಳಲ್ಲಿನ ಒಳ ರಾಜಕೀಯಗಳು ಭಾವೈಕ್ಯತೆಯ ಬದುಕನ್ನು ಶಿಥಿಲಗೊಳಿಸಿವೆ. ಹೆಣ್ಣನ್ನು ದೇವತೆ ಎಂದು ಪೂಜಿಸುತ್ತಿದ್ದ ನಾಡಿನಲ್ಲಿ ಇಂದು ಹಾಡು ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆಗೈಯುತ್ತಿದ್ದಾರೆ. ಬಹುತೇಕ ಶಿಕ್ಷಣವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದ ಪರಿಣಾಮವಾಗಿ ಉನ್ನತ ಶಿಕ್ಷಣ ಎಂಬುದು ಉಳ್ಳವರ ಸ್ವತ್ತಾಗಿದ್ದು, ಬಡವರಿಗೆ ಗಗನ ಕುಸುಮವಾಗಿದೆ. ಉದ್ಯೋಗಾಧಾರಿತ ಶಿಕ್ಷಣಗಳು ದೊರೆಯದೆ ಇರುವ ಕಾರಣ ನಮ್ಮಲ್ಲಿ ಪದವೀಧರರು ಇದ್ದರೂ ಅವರಲ್ಲಿ ಇರಬೇಕಾದ ಅವಶ್ಯಕ ಜಾಣ್ಮೆ, ಕಾರ್ಯಶೀಲತೆ ಕಣ್ಮರೆಯಾಗಿದ್ದು ಒಬ್ಬರೇ ಮಾಡಬಹುದಾದ ಕೆಲಸವನ್ನು ಹತ್ತಾರು ಜನರು ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಗುಲಾಮಿ ಪ್ರವೃತ್ತಿಯನ್ನು ಹೊಂದಿರುವ ಜನರು ಉದ್ಯೋಗಕ್ಕಾಗಿ ಅಲೆಯುತ್ತಾರೆಯೇ ಹೊರತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಐತಿಹಾಸಿಕವಾಗಿ ಸಮೃದ್ಧವಾಗಿರುವ ನಮ್ಮ ಇತಿಹಾಸವನ್ನು, ಶೈಕ್ಷಣಿಕ ಜ್ಞಾನದ ವ್ಯವಸ್ಥೆಯನ್ನು ಹಿಂದಿಕ್ಕೆ ಆಂಗ್ಲರು ಜಾರಿಗೆ ತಂದಂತಹ ಶೈಕ್ಷಣಿಕ ಪದ್ಧತಿಗೆ ಜೋತು ಬಿದ್ದಿರುವ ನಾವುಗಳು ಸೀಡ್ ಲೆಸ್ ಶಿಕ್ಷಕರನ್ನು ಸೃಷ್ಟಿಸುತ್ತಿದ್ದೇವೆ. ಜನರು ಶಿಕ್ಷಿತರಾಗಿದ್ದಾರೆ ನಿಜ, ಆದರೆ ಸುಶಿಕ್ಷಿತರಾಗಿಲ್ಲ. ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರೀತಿ, ಮಮತೆ ಮುಂತಾದ ಮೌಲ್ಯಗಳು ಇಂದಿನ ಜನತೆಯ ಪಾಲಿಗೆ ಹಳೆಯ ಸವಕಲು ನಾಣ್ಯದಂತಾಗಿದ್ದು ಆ ಜಾಗದಲ್ಲಿ ದ್ವೇಷ ಅಸೂಯೆ, ಮತ್ಸರಗಳು ತುಂಬಿ ಮೌಲ್ಯಗಳ ಅಪಮೌಲೀಕರಣವಾಗುತ್ತಿದೆ. ರಾಮಾಯಣ ಮಹಾಭಾರತ, ಭಗವದ್ಗೀತೆಯಂತಹ ಮಹಾನ್ ಗ್ರಂಥಗಳನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದದೇಶದಲ್ಲಿ ಕವಿ, ಸಾಹಿತಿ, ಕಲೆ ಮತ್ತು ಕಲಾವಿದರನ್ನು ಕೆಲಸಕ್ಕೆ ಬಾರದವರು ಎಂಬಂತೆ ಕಾಣಲಾಗುತ್ತಿದೆ. ಹೊಡಿ ಬಡಿ ಲಾಂಗು ಮಚ್ಚು ಹಿಂಸೆಯನ್ನು ವೈಭವೀಕರಿಸುವ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡು ಅದರ ಹೀರೋಗಳು ಜನನಾಯಕರಾಗಿ ಮೆರೆದರೆ, ಸಮಾಜವನ್ನು ಕಟ್ಟುವ ಶಿಕ್ಷಕರು, ದೇಶವನ್ನು ಕಾಯುವ ಯೋಧರನ್ನು ಅಸಡ್ಡೆಯಿಂದ ಕಾಣಲಾಗುತ್ತದೆ. ಶೈಕ್ಷಣಿಕ ಸೇವೆ ಮತ್ತು ವೈದ್ಯಕೀಯ ಸೇವೆಗಳು ಇದೀಗ ಕಾರ್ಪೊರೇಟ್ ರೂಪವನ್ನು ಪಡೆದುಕೊಂಡಿದ್ದು ಸೇವೆಯ ಬದಲಾಗಿ ದಂಧೆಗಳಾಗಿ ಪರಿವರ್ತನೆ ಹೊಂದಿವೆ. ರಕ್ತ ಬೀಜಾಸುರನ ಸಂತತಿಯಂತೆ ದೇಶವನ್ನೆಲ್ಲಾ ವ್ಯಾಪಿಸಿರುವ ಇವರ ಜಾಲವು ಜನರ ಶೈಕ್ಷಣಿಕ ಗುಣಮಟ್ಟವನ್ನು, ಆರೋಗ್ಯವನ್ನು ಕಟ್ಟಿಕೊಡುವ ಭರವಸೆಯನ್ನು ನೀಡುತ್ತವೆ, ನಿಜ ಆದರೆ ಅದರ ಜೊತೆಗೆ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ. ಇನ್ನು ಕೃಷಿ ಪ್ರಧಾನವಾದ ಭಾರತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ನಮ್ಮ ದೇಶದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಮಳೆ, ಸಿಗದ ಬಿತ್ತನೆ ಬೀಜಗಳು ಗೊಬ್ಬರಗಳು ಬಿತ್ತಿದ್ದು ಬೆಳೆಯಾಗದೆ, ಬೆಳೆದದ್ದು ಸರಿಯಾಗಿ ಕೈಗೆ ಬರದೆ ಕೈಗೆ ಬಂದರೂ ದಲ್ಲಾಳಿಗಳ ಮಧ್ಯವರ್ತಿಗಳ ನಡುವೆ ಸಿಲುಕಿ ಮಾರಾಟ ಮಾಡಿದಾಗ ಹಿಡಿಯಷ್ಟು ಹಣವನ್ನು ಕೈಯಲ್ಲಿ ಮನೆಗೆ ಹಿಡಿದು ಬರುವ ರೈತ ತನ್ನ ಮನೆಯವರ ಕಣ್ಣಿನಲ್ಲಿಯೇ ಸಸಾರವಾಗುತ್ತಾನೆ. ದೇಶದ ಬೆನ್ನೆಲುಬು ರೈತ ಎಂದು ನಮ್ಮ ಜನ ಹಾಡಿ ಹೊಗಳುವರು ….ಆದರೆ ಆ ರೈತನ ಬೆನ್ನೆಲುಬೇ ಮುರಿದುಹೋಗಿದೆ.  ಓಟು ಪಡೆಯುವ ಮುನ್ನ ಮತದಾರ ಪ್ರಭುವಿನ ಎದುರು ಶಿರಬಾಗಿ ನಮಿಸುವ ಮತ ಯಾಚಿಸುವ ನಾನು ನಿಮ್ಮವನು ಎಂದು ಹೇಳುವ ರಾಜಕಾರಣಿಗಳು ಒಂದೊಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದಾಗ ಇವನ್ಯಾರವ ಎಂದು ಕೇಳುವ, ಅಧಿಕಾರ ಚಲಾಯಿಸುವ, ತಮ್ಮ ಮುಂದಿನ ಮೂರು ತಲೆಮಾರಿನ ಜನರು ಕುಳಿತು ತಿನ್ನುವಷ್ಟು ಹಣವನ್ನು ಆಸ್ತಿಯನ್ನು ಸಂಗ್ರಹಿಸುವುದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ‘ಶ್ವಾಸ ಬಿಟ್ಟರೂ ಆಶ್ವಾಸನೆ ಕೊಡುವುದನ್ನು ಬಿಡುವುದಿಲ್ಲ ಎಂಬಂತೆ ವರ್ತಿಸುವ ಜನ ಸೇವಕರು ಮುಂದೆ ಜನ ನಾಯಕರಾಗಿ ಪ್ರಜಾಪ್ರಭುತ್ವವನ್ನೇ ತಮ್ಮ ಕಾಲಡಿಯಲ್ಲಿ ತುಳಿದು ಅಟ್ಟಹಾಸಗೈಯುವುದನ್ನು ನಾವು ನೋಡುತ್ತೇವೆ.  ನಿಜ! ರಸ್ತೆಗಳ ಅಗಲೀಕರಣ ಮಾಡುವುದರಿಂದ ಫ್ಲೈ ಓವರ್ ಗಳನ್ನು ನಿರ್ಮಿಸುವುದರಿಂದ, ಬೃಹದಾಕಾರದ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಿಂದ ನಮ್ಮ ದೇಶ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಯನ್ನು 360° ಕೋನದಲ್ಲಿ ನೋಡಬೇಕು. ದೇಶದ ಅಭಿವೃದ್ಧಿಯನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಅತ್ಯವಶ್ಯಕವಾದ ಮಾರ್ಗಗಳನ್ನು ಅನುಸರಿಸಲು ಸರಕಾರಗಳು ಹೆಣಗಾಡುತ್ತಿವೆ ನಿಜ…. ಆದರೆ ಪ್ರಯತ್ನ ಮತ್ತು ಕಾರ್ಯಶೀಲತೆ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಲೇಬೇಕು. ಮುಖ್ಯವಾಗಿ ಯುವ ಜನತೆಯಲ್ಲಿ ಮೌಲ್ಯಗಳ ಪುನರುತ್ಥಾನವಾಗಬೇಕು. ಬದುಕಿನಲ್ಲಿ ಭರವಸೆಯ ಜೊತೆಗೆ ಭದ್ರ ಭವಿಷ್ಯದ ಕನಸುಗಳು ಸಾಕಾರಗೊಳ್ಳುವ ನಿಶ್ಚಯಗಳು ಇರಬೇಕು. ಬಹಳಷ್ಟು ಇಲ್ಲಗಳ ನಡುವೆಯೂ ಕೂಡ ಸತತ ಪ್ರಯತ್ನಕ್ಕೆ ಜಯವಿದೆ ಎಂಬ ಮಾತಿನಂತೆ ದೇಶದ ನಾಲ್ಕು ಅಂಗಗಳು ಸಂವಿಧಾನವು ನಮಗೆ ನೀಡಿರುವ ಅಧಿಸೂಚನೆಗಳಂತೆ ಕಾರ್ಯನಿರ್ವಹಿಸಿದರೆ ಮುಂದಿನ ಕೆಲವೇ ದಶಕಗಳಲ್ಲಿ ನಾವು ಸುಸ್ಥಿರವಾದ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವ ಯುವ ಪೀಳಿಗೆಯನ್ನು ನೋಡಬಹುದು.  ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಅಂಕಿ ಅಂಶಗಳ ಆಧಾರದಿಂದ ನೋಡದೆ ಆ ದೇಶದ ಜನರ ಬದುಕಿನ ಸ್ಥಿತಿಗತಿಗಳು, ಆರ್ಥಿಕ ಸ್ಥಿರತೆ, ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆ, ಉತ್ತಮ ನಾಯಕತ್ವದ ಸಜ್ಜನಿಕೆಯ ದೂರ ದೃಷ್ಟಿಯುಳ್ಳ ವೈಯುಕ್ತಿಕ ಹಿತಾಸಕ್ತಿಯನ್ನು ಮೀರಿದ ರಾಜಕಾರಣ,ಸರ್ವಧರ್ಮ ಸಮಾನತೆಯ ಸಂಘಟನಾತ್ಮಕವಾದ ಜಾತ್ಯತೀತ, ಧರ್ಮಾತೀತ ಸಮಾಜ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜವನ್ನು, ಮಹಿಳೆಯರ ಸದಲೀಕರಣವನ್ನು ಹೊಂದಿರುವ ನಿಟ್ಟಿನಲ್ಲಿ ನಾವು ನೋಡುವುದು. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ನೀಡಬೇಕಾಗಿರುವ ನಮ್ಮ ನಮ್ಮ ಸಾಲಿನ ಕಾಣಿಕೆ.ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ…. ಸುಸ್ಥಿರ ಸಮಾಜದ ಭದ್ರಬುನಾದಿಗೆ ಅಸ್ತಿ ಭಾರವನ್ನು ಹಾಕೋಣ ಎಂಬ ಆಶಯದೊಂದಿಗೆಎಲ್ಲರಿಗೂ 08ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು ವೀಣಾ ಹೇಮಂತ್ ಗೌಡ ಪಾಟೀಲ್

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ “ನನ್ನ ಮನೆ”

ಕಾವ್ಯ ಸಂಗಾತಿ ಡಿ. ಪಿ.ಯಮನೂರ್ ಸಾಬ್ “ನನ್ನ ಮನೆ” ನನ್ನ ಮನೆ ಅದು ಮನೆ ಅಲ್ಲಅದು ಸ್ಮಶಾನ ಮೌನ ತಾಳಿದ ಮನೆಅಲ್ಲಿ ನನಗೆ ಅಕ್ಕರೆಯಿಂದ ಉಣಬಡಿಸುತ್ತಿದ್ದನನ್ನ ತಾಯಿ ಇಲ್ಲ ಮಮತೆಯಿಂದ ಸತ್ಕರಿಸುತ್ತಿದ್ದನನ್ನ ಅಜ್ಜಿ ಇಲ್ಲ ನನ್ನ ಸಹೋದರಸಹೋದರಿಯರ ಗುದ್ದಾಟದಗದ್ದಲವಿಲ್ಲ, ಮನೆಯಲ್ಲಿ ಬೈದು ಬದ್ದಿ ಹೇಳುವಹಿರಿಯರಿಲ್ಲ,ನಾನು ದುಃಖದಲ್ಲಿರುವಾಗಕರೆದು ಸಂತೈಸುವರಿಲ್ಲನನಗೆ ನನ್ನೋರು ಯಾರೂ ಇಲ್ಲ ಅದಕ್ಕೆ ನಾನು ಮನೆಗೆ ಹೋಗುವುದಿಲ್ಲಯಾಕಂದ್ರೆ ಅದು ನನ್ನ ಮನೆಯಲ್ಲಅದು ಸ್ಮಶಾನಮೌನ ತಾಳಿದ ಮನೆಅಲ್ಲಿರುವುದಕ್ಕಿಂತ ಬೀದಿಯ ಒಂದುಚೌಕದಲ್ಲಿರುವುದೇ ಲೇಸು. ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ

ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ “ನನ್ನ ಮನೆ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್‌ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು…  ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು  ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್‌ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು.  ಏಕೀಕರಣವು  ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು  ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್‌ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ  ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು  ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು  ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.

Read Post »

ಇತರೆ, ಜೀವನ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »

ಇತರೆ, ನಿಮ್ಮೊಂದಿಗೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.)

ವಿಶೇಷ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) *ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*(ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ಪ್ರತಿಯೊಬ್ಬ ಕನ್ನಡದ ಕವಿಗಳು ಓದಬೇಕು.)ಲೇಖಕ – *ಡಾ.ಸಿದ್ಧರಾಮ ಹೊನ್ಕಲ್* ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ  ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ‌ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ‌ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ‌ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ‌ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು‌ ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ‌, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ. ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ‌ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ‌ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ‌ ಕೈ‌ಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ‌ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.*ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ**ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು**ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ**ಕಲಿಸಿದ ಪೂರ್ವ ಪಾಠಶಾಲೆ…*ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ  ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು.ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.*ತಂತ್ರ ವಾದ್ಯವು ಲೇಸು**ಮಂತ್ರಿಯ ಕಳೆ ಲೇಸು**ಯಂತ್ರ ವಾಹಕನ ದಯೆ ಲೇಸು**ಜಗದೀ ಸ್ವಾತಂತ್ರ್ಯವೇ ಲೇಸು*ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.*ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*@*ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು  ಬೀರುತ**ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ**ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು* *ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು**ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ**ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ*(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ)  ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.*ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು**ಸಾರಿ ಬಾ ಸರ್ವರ್ಗೆ  ಸ್ವಾತಂತ್ರ್ಯಮಂ**ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ *ಸರ್ವಂಗೆ ಸಾರಿ ಬಾ ಸೌಹಾರ್ದಮಂ**ಸರ್ವ ಲೋಕದ ಸರ್ವ ಸಂತೋಷ ಮಂ *ಸರ್ವರಿಂ  ಸರ್ವರಾ ಉದ್ಧಾರಮಮಂ* ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ  ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದುಬಲವಂತರಾದವರು ಬಲವಿಲ್ಲದವರುಗಳತುಳಿಯುತ್ತಿರಲು ಜನರ ಮೊರೆ ಬಾನೆಡೆಗೆಮುಟ್ಟುತ್ತಿರಲು ಉರುಳುರುಳು ಹಗಲಿರಲುಎಲೆ ಧರಣಿ! ನೀ ನಿಷ್ಕರುಣಿಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.@*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.@*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು**ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ‌ ನೀಡಿದ್ದಾರೆ.@*ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ  ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ. *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ* ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು  ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ. ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) Read Post »

You cannot copy content of this page

Scroll to Top