ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಉತ್ತಮ.ಎ.ದೊಡ್ಮನಿ “ಸುಧಾ” ಕಾಂಪೌಂಡ್‌ನ ಮೂಲೆಯಲ್ಲಿ ಒಂದು ಪುಟ್ಟ ಕೋಣೆ. ಅದರಲ್ಲಿ ಒಂದು ಸ್ಟೌವ್, ಎರಡು ಪಾತ್ರೆಗಳು, ಎರಡು ತಟ್ಟೆಗಳು, ಒಂದು ಕೊಡ, ಅದರ ಮೇಲೆ ಒಂದು ಗ್ಲಾಸ್. ಗೋಡೆಗೆ ನೇತು ಹಾಕಿದ್ದ ಎರಡು ಜೋಡಿ ಬಟ್ಟೆಗಳು. ಟೇಬಲ್ ಫ್ಯಾನ್.ಓ…ಅದು ಓಡಿದಾಗ ಮನೆಯ ಯಜಮಾನನಂತೆ ಸದಾ ತಲೆ ಅಲ್ಲಾಡಿಸುತ್ತಾ ತನ್ನ ಕೆಲಸದಲ್ಲಿ ಮಗ್ನವಾಗಿರುತ್ತಿತ್ತು. ಕೋಣೆಗೆ ಯಾರಾದರೂ ಬಂದರೆ ಹಾಸಲು ಒಂದು ಸಿಂದಿ ಗಿಡದ ಹಳೆಯ ಚಾಪೆ. ಅದೇ ಚಾಪೆ ರಾತ್ರಿ ರವಿಯ ಹಾಸಿಗೆಯಾಗುತ್ತಿತ್ತು.     ರವಿ ಕಲಬುರಗಿಯಲ್ಲಿರುವ ಸಾವಿತ್ರಿಬಾಯಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಲಬುರಗಿಯಿಂದ ಹತ್ತೊಂಬತ್ತು ಕಿಲೋಮೀಟರ್ ದೂರದ “ಕುಂಟ” ಎಂಬ ಹಳ್ಳಿಯಿಂದ ಬಂದು ತನ್ನ ಬದುಕಿನ ದಾರಿ ಹುಡುಕಿಕೊಂಡಿದ್ದ.ರವಿಯ ತಂದೆ ದ್ಯಾವಪ್ಪನಿಗೆ ಪಾರ್ಶ್ವವಾಯುಯಿಂದ ಹೊರಸಿಗೆ ಸಿಪ್ಟ್ ಆಗಿ ಈಗ ಮೂರು ವರ್ಷಗಳಾಗಿತ್ತು. ಆ ದಿನದಿಂದ ಮನೆಯ ಎಲ್ಲ ಜವಾಬ್ದಾರಿಗಳೂ ರವಿಯ ಹೆಗಲ ಮೇಲೆ ಬಿದ್ದವು. ಮನೆಯ ಹಿರಿಯ ಮಗನಾದ ಕಾರಣ ಯಾವುದಕ್ಕೂ ಇಲ್ಲವೆಂದು ಹೇಳುವ ಅವಕಾಶ ಅವನಿಗಿರಲಿಲ್ಲ. ತಂದೆಯ ಸ್ಥಾನವನ್ನು ತುಂಬುವುದು ಹಿರಿಯ ಮಗನ ಕರ್ತವ್ಯ ಎನ್ನುವ ನಂಬಿಕೆಯಲ್ಲಿ ಬೆಳೆದ ಸಮಾಜ ಇದು.      ತಾಯಿ ನಾಗಮ್ಮ ಕೂಡ ಮಗನ ಜೊತೆಯಾಗಿ ನಿಂತಳು. ಊರಲ್ಲಿ ಸಿಕ್ಕ ಕೂಲಿ ಕೆಲಸ ಮಾಡಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು. ಆದರೆ ಮನೆಯ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿತ್ತು. ತಂದೆಯ ಔಷಧಿ, ತಮ್ಮ-ತಂಗಿಯ ಓದು, ದಿನನಿತ್ಯದ ಜೀವನ—ಇವೆಲ್ಲವನ್ನೂ ಸಾಗಿಸುವುದು ದಿನದಿಂದ ದಿನಕ್ಕೆ ಕಷ್ಟವಾಗತೊಡಗಿತು.ರವಿಗೆ ಆಗ ಇನ್ನೂ ಶಾಲೆಗೆ ಹೋಗಿ ಓದಬೇಕಾದ ವಯಸ್ಸು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನು ಹೇಗಾದರೂ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂದು ಹಗಲು-ರಾತ್ರಿ ಶ್ರಮಿಸುತ್ತಿದ್ದ. ಗಣಿತ ಮತ್ತು ಇಂಗ್ಲಿಷ್ ಅವನಿಗೆ ಕಬ್ಬಿಣದ ಕಡಲೆಯಾಗಿದ್ದವು. ಆದರೂ ಶಿಕ್ಷಕರನ್ನು, ಟ್ಯೂಷನ್‌ಗೆ ಹೋಗುವ ಸ್ನೇಹಿತರನ್ನು ಕೇಳಿ ತನ್ನ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದ.                 “ಒಮ್ಮೆ ಓದಿ ಕೆಲಸಕ್ಕೆ ಸೇರಿದರೆ ಸಾಕು… ಅಪ್ಪ-ಅಮ್ಮನನ್ನು ಕೆಲಸದಿಂದ ಬಿಡಿಸಬೇಕು,” ಎಂಬ ಕನಸು ಅವನ ಮನಸ್ಸಿನಲ್ಲಿ ಸದಾ ಜೀವಂತವಾಗಿತ್ತು.ಆದರೆ ವಿಧಿಯ ಲೆಕ್ಕ ಬೇರೆ ಆಗಿತ್ತು. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ತಂದೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೆಲಸಕ್ಕೆ ಹೋಗುವುದೇ ನಿಂತುಹೋಯಿತು. ಮನೆಯ ಸಂಪೂರ್ಣ ಹೊರೆ ನಾಗಮ್ಮನ ಹೆಗಲ ಮೇಲೆ ವರ್ಗಾವಣೆ ಆಗಿತ್ತು. ತಾಯಿಯ ಕಷ್ಟವನ್ನು ಕಣ್ಣಾರೆ ನೋಡುತ್ತಿದ್ದ ರವಿ, ಓದನ್ನು ಅರ್ಧದಲ್ಲೇ ಬಿಟ್ಟು ಕಲಬುರಗಿಗೆ ಬಂದು ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿಕೊಂಡ.         ಹಗಲು-ರಾತ್ರಿ ದುಡಿದು ಮನೆಯ ಖರ್ಚಿಗೆ ಕಳುಹಿಸುತ್ತಿದ್ದರೂ ಅವನ ಮನಸ್ಸಿನಿಂದ ಓದಿನ ಕನಸು ಎಂದೂ ಮಾಯವಾಗಲಿಲ್ಲ. ಪ್ರತಿ ಬೆಳಗ್ಗೆ ವಿದ್ಯಾರ್ಥಿನಿಲಯದ ಹುಡುಗಿಯರು ಸಮವಸ್ತ್ರ, ಬ್ಯಾಗ್, ಬೂಟು ಧರಿಸಿ ಶಾಲೆಗೆ ಹೋಗುವುದನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ನೋವು ಮಿಂಚುತ್ತಿತ್ತು.“ನಮ್ಮ ಅಪ್ಪನಿಗೆ ಈ ಕಾಯಿಲೆ ಬರದೇ ಇದ್ದಿದ್ದರೆ… ನಾನೂ ಇವರಂತೆ ಶಾಲೆಗೆ ಹೋಗುತ್ತಿದ್ದೆ…” ಎಂದು ಮನದಲ್ಲೇ ಹೇಳಿಕೊಂಡು ಮೌನವಾಗಿ ನಿಂತುಕೊಳ್ಳುತ್ತಿದ್ದ.        ಸಂಜೆ ಶಾಲೆಯಿಂದ ಮರಳಿದ ಹುಡುಗಿಯರು ಅಂಗಳದಲ್ಲಿ ಕುಳಿತು ಪಾಠ ಓದುವುದನ್ನು ನೋಡುತ್ತಾ ಅವರ ಬಳಿಗೆ ಹೋಗಿ, “ಇವತ್ತು ಶಾಲೆಯಲ್ಲಿ ಏನು ಹೇಳಿದ್ರು? ಯಾವ ಪಾಠ ಮಾಡಿದರು?” ಎಂದು ಕುತೂಹಲದಿಂದ ಕೇಳುತ್ತಿದ್ದ.ಕೆಲವರು ಅವನ ಮಾತಿಗೆ ಉತ್ತರಿಸುತ್ತಿದ್ದರು. ಇನ್ನೂ ಕೆಲವರು, “ನಿನಗೆ ಅದೇಲ್ಲ ಏಕೆ? ನಿನ್ನ ಕೆಲಸ ನೋಡಿಕೋ,” ಎಂದು ತಿರಸ್ಕಾರದಿಂದ ಹೇಳುತ್ತಿದ್ದರು.ಆದರೆ ರವಿ ಯಾರ ಮೇಲೂ ಬೇಸರ ಮಾಡಿಕೊಳ್ಳಲ್ಲ. ನನ್ನ ಪಾಲಿಗೆ ಇದೆ ಬಂದಿದೆ ಎಂದು ಮಗುಳ ನಕ್ಕು ಅಲ್ಲಿಂದ ಹೋಗುತಿದ್ದ. ಅಕ್ಷರಗಳ ಮೇಲೆ ಇದ್ದ ಅವನ ಹಸಿವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು.      ವಿದ್ಯಾರ್ಥಿನಿಲಯದ ಹುಡುಗಿಯರು ಎಲ್ಲರೂ ಒಂದೇ ತರ ಇರಲಿಲ್ಲ. ಕೆಲವರು ರವಿಯನ್ನು ಕೇವಲ ವಾಚ್‌ಮ್ಯಾನ್ ಎಂದು ನೋಡುತ್ತಿದ್ದರು. ಎದುರಾದರೂ ಮಾತಾಡದೆ ಹೋಗುತ್ತಿದ್ದರು. ಇನ್ನು ಕೆಲವರು ಕೆಲಸ ಹೇಳಿ ಮುಗಿಸುತ್ತಿದ್ದರು. ಆದರೆ ಅವರಲ್ಲೊಬ್ಬಳು ಮಾತ್ರ ವಿಭಿನ್ನಳಾಗಿದ್ದಳು—ಸುಧಾ.         ಸುಧಾ ಬಿ.ಎ. ಓದುತ್ತಿದ್ದ ವಿದ್ಯಾರ್ಥಿನಿ. ಹಲವು ದಿನಗಳಿಂದ ರವಿಯನ್ನು ಗಮನಿಸುತ್ತಿದ್ದಳು. ಹುಡುಗಿಯರು ಓದುತ್ತಿರುವಾಗ ಅವನು ಅವರ ಹತ್ತಿರ ನಿಂತು ಪಾಠದ ಬಗ್ಗೆ ಕೇಳುವುದು, ಪುಸ್ತಕಗಳನ್ನು ಕುತೂಹಲದಿಂದ ನೋಡುವುದು, ಸಮಯ ಸಿಕ್ಕಾಗ ಹಳೆಯ ನೋಟ್ಸ್ ತಿರುವಿ ನೋಡುವುದು—ಇವೆಲ್ಲ ಅವಳ ಕಣ್ಣಿಗೆ ತಪ್ಪಿರಲಿಲ್ಲ.ಒಂದು ಸಂಜೆ ಅವಳು ರವಿಯನ್ನು ಕರೆದು ಕೇಳಿದಳು.“ರವಿ, ನೀನು ದಿನವೂ ಹುಡುಗಿಯರ ಹತ್ತಿರ ಹೋಗಿ ಪಾಠದ ಬಗ್ಗೆ ಕೇಳ್ತೀಯ. ಯಾಕೆ?”  ಮೊದಲು ರವಿ ಮುಜುಗರಪಟ್ಟ. “ಹಾಗೇ ಅಕ್ಕ…” ಎಂದು ತಪ್ಪಿಸಿಕೊಳ್ಳಲು ನೋಡಿದ.“ಇಲ್ಲ, ನಿಜ ಹೇಳು,” ಎಂದು ಸುಧಾ ಮತ್ತೊಮ್ಮೆ ಕೇಳಿದಳು.ಆ ಮಾತಿನಲ್ಲಿ ಪ್ರೀತಿಯಿತ್ತು, ಕಾಳಜಿಯಿತ್ತು. ರವಿ ತನ್ನ ಮನಸ್ಸಿನ ಬಾಗಿಲನ್ನೇ ತೆರೆದ.      ತಂದೆಯ ಕಾಯಿಲೆ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓದು ನಿಂತದ್ದು, ಮನೆಯ ಹೊರೆ, ತಾಯಿಯ ಕಷ್ಟ, ತನ್ನ ಕನಸು—ಒಂದನ್ನೂ ಬಿಡದೆ ಎಲ್ಲವನ್ನೂ ಶಾಲಾ ಒಪ್ಪಿಸಿಬಿಟ್ಟ,ಮಕ್ಕಳು ಶಿಕ್ಷಕರಿಗೆ ಬಾಯಿಪಾಠ ಒಪ್ಪಿಸಿದಂತೆ.“ಅಕ್ಕಾ… ಓದಬೇಕು ಅನ್ನೋ ಆಸೆ ಇನ್ನೂ ಸತ್ತಿಲ್ಲ. ಆದರೆ ಮನೆಯ ಪರಿಸ್ಥಿತಿ ನನ್ನನ್ನು ಕೆಲಸಕ್ಕೆ ನಿಲ್ಲಿಸಿತು.”ಅವನ ಮಾತು ಮುಗಿಯುವಷ್ಟರಲ್ಲಿ ಸುಧಾಳ ಕಣ್ಣಲ್ಲಿ ನೀರು ಅವಳಿಗೆ ಅರಿವಿಲ್ಲದಂತೆ ಪಾದದಡಿ ಬಿದಿತ್ತು. ಒಂದು ಮಾತೂ ಆಡದೆ ಅವಳು ತನ್ನ ಕೋಣೆಗೆ ಹೋದಳು. ಆ ದಿನ ಸರಿಯಾಗಿ ಊಟವೂ ಮಾಡಲಿಲ್ಲ. ರವಿಯ ಬದುಕಿನ ನೋವು ಅವಳ ಮನಸ್ಸನ್ನು ಕದಡಿತ್ತು.      ಆದರೆ ಆ ದಿನದಿಂದ ಅವರಿಬ್ಬರ ನಡುವೆ ಒಂದು ಹೊಸ ಸಂಬಂಧ ಹುಟ್ಟಿತು. ಪ್ರತಿದಿನ ಬೆಳಿಗ್ಗೆ ಎದುರಾದರೆ ರವಿ,“ಅಕ್ಕಾ, ಊಟ ಆಯ್ತಾ?”“ಕಾಲೇಜಿಗೆ ಲೇಟಾಗೋದಿಲ್ಲವಾ?”“ಏನಾದರೂ ತರಬೇಕಿದ್ದರೆ ಹೇಳಿ. ನಾನೇ ಹೋಗಿ ತರುತ್ತೀನಿ.”ಸುಧಾ ಅವನ ಮಾತುಗಳಲ್ಲಿ ತಮ್ಮನ ಮಮತೆಯನ್ನು ಕಂಡಳು.ರವಿಗೆ ಸುಧಾಳಲ್ಲಿ ಅಕ್ಕನ ನೆರಳು ಕಾಣತೊಡಗಿತು. ದಿನಗಳು ಕಳೆಯುತ್ತಾ ಹೋದವು.     ಒಂದು ದಿನ ಕಾಲೇಜಿಗೆ ಹೊರಡುವ ಮುನ್ನ ಸುಧಾ ರವಿಯ ಬಳಿ ಬಂದು ಹೇಳಿದಳು.“ರವಿ, ನೀನು ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕು.”ರವಿ ಬೆಚ್ಚಿಬಿದ್ದ.“ಅಕ್ಕಾ… ಅದು ಈಗ ಹೇಗೆ ಸಾಧ್ಯ? ನಾನು ಕೆಲಸ ಬಿಟ್ಟರೆ ನಮ್ಮ ಮನೆಯವರು ಏನು ಹಾಲತ್!ಸುಧಾ ನಗುತ ಹೇಳಿದಳು.“ಯಾರು ಕೆಲಸ ಬಿಡು ಅಂತ ಹೇಳಿದರು? ಈಗ ನೇರ ದಾಖಲಾತಿ ಮೂಲಕ ಪರೀಕ್ಷೆ ಬರೆಯಬಹುದು. ಕೆಲಸ ಮಾಡುತ್ತಲೇ ಓದಬಹುದು.”ಆ ಮಾತು ಕೇಳಿದ ಕ್ಷಣ ರವಿಯ ಮುಖದಲ್ಲಿ ವರ್ಷಗಳ ನಂತರ ಮೊದಲ ಬಾರಿಗೆ ನಗು ಅರಳಿತು.ಅವನ ಕಣ್ಣುಗಳಲ್ಲಿ ಮತ್ತೆ ಕನಸುಗಳು ಚಿಗುರೊಡೆಯತೊಡಗಿದವು.        ಮರುದಿನವೇ ಸುಧಾ ತನ್ನ ಮಾತಿನಂತೆ  ದಾಖಲಾತಿ ಮೂಲಕ ರವಿಗೆ ಹತ್ತನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದಳು. ಬೇಕಾದ ಪುಸ್ತಕಗಳನ್ನು ತಂದುಕೊಟ್ಟಳು. ಅಷ್ಟೇ ಅಲ್ಲ, ತನ್ನ ಖರ್ಚಿನ ಹಣದಲ್ಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಿದಳು.”ಇನ್ನು ನೆಪ ಹೇಳಬಾರದು. ಪ್ರತಿದಿನ ಸ್ವಲ್ಪ ಹೊತ್ತಾದರೂ ಓದಬೇಕು,” ಎಂದು ನಗುತ್ತಾ ಹೇಳಿದಳು.      ಆ ದಿನದಿಂದ ರವಿಯ ದಿನಚರಿಯೇ ಬದಲಾಯಿತು.ಹಗಲು ವಾಚ್‌ಮ್ಯಾನ್ ಕೆಲಸ. ರಾತ್ರಿ ಪುಸ್ತಕ.ಸಂಜೆ ಕಾಲೇಜಿನಿಂದ ಬಂದ ನಂತರ ಸುಧಾ ಅವನಿಗೆ ಪಾಠ ಹೇಳಿಕೊಡುತ್ತಿದ್ದಳು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಂದ ನೋಟ್ಸ್ ತಂದುಕೊಡುತ್ತಿದ್ದಳು. ಯಾರಿಗೆ ಯಾವ ವಿಷಯ ಚೆನ್ನಾಗಿತ್ತೋ, ಅವರಿಂದ ಅದನ್ನೇ ರವಿಗೆ ಹೇಳಿಸುತ್ತಿದ್ದಳು.        ಗಣಿತದಲ್ಲಿ ತೊಂದರೆ ಬಂದರೆ ಒಬ್ಬಳು ನೆರವಾಗುತ್ತಿದ್ದಳು.ಇಂಗ್ಲಿಷ್ ಅರ್ಥವಾಗದಿದ್ದರೆ ಇನ್ನೊಬ್ಬಳು ಹೇಳಿಕೊಡುತ್ತಿದ್ದಳು.ವಿದ್ಯಾರ್ಥಿನಿಲಯವೇ ನಿಧಾನವಾಗಿ ರವಿಯ ಶಾಲೆಯಾಗಿ ಮಾರ್ಪಟ್ಟಿತು.ವಾರ್ಡನ್ ಕೂಡ ಅವನ ಆಸಕ್ತಿಯನ್ನು ನೋಡಿ ಪ್ರೋತ್ಸಾಹಿಸಿದರು.   “ರವಿ, ನೀನು ಪಾಸ್ ಆಗಲೇಬೇಕು. ನಿನ್ನಂಥವರೇ ಓದಿದರೆ ಅಕ್ಷರದ ಮೌಲ್ಯ ಗೊತ್ತಾಗುತ್ತದೆ,” ಎಂದು ಧೈರ್ಯ ತುಂಬಿದರು.ಆ ಮಾತುಗಳು ರವಿಗೆ ಹೊಸ ಶಕ್ತಿಯಾಯಿತು. ದಿನವಿಡಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಬೇಕಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಪುಸ್ತಕದ ಕಡೆ ಓಡುತ್ತಿತ್ತು.ಕೆಲವೊಮ್ಮೆ ಕಣ್ಣುಗಳು ನಿದ್ದೆಗೆಜಾರುತ್ತಿದ್ದವು.ಅಷ್ಟರಲ್ಲಿ ಸುಧಾಳ ಮಾತು ನೆನಪಾಗುತ್ತಿತ್ತು.“ಬದುಕು ಬದಲಾಗಬೇಕಾದರೆ ಅಕ್ಷರ ಒಂದೇ ದಾರಿ.”ಆ ಮಾತು ನೆನಪಾದ ಕೂಡಲೇ ಮತ್ತೆ ಪುಸ್ತಕ ತೆರೆದು ಓದಲು ಕುಳಿತುಕೊಳ್ಳುತ್ತಿದ್ದ.ಹೀಗೆ ತಿಂಗಳುಗಳು ಕಳೆದುಹೋದವು.     ಕೊನೆಗೂ ಪರೀಕ್ಷೆಯ ದಿನ ಬಂತು.ಪರೀಕ್ಷಾ ಕೊಠಡಿಗೆ ಕಾಲಿಡುವಾಗ ರವಿಯ ಕೈಗಳು ನಡುಗುತ್ತಿದ್ದವು.ಸುಧಾ ಅವನ ಭುಜದ ಮೇಲೆ ಕೈ ಇಟ್ಟು ಹೇಳಿದಳು.”ಭಯಪಡಬೇಡ ನಿನಗೆ ಗೊತ್ತಿರುವುದನ್ನೇ ಬರೆ, ನಿನ್ನ ಪರಿಶ್ರಮ ನಿನ್ನನ್ನು ಕೈಬಿಡುವುದಿಲ್ಲ.”ಆ ಮಾತು ರವಿಗೆ ಆತ್ಮವಿಶ್ವಾಸ ತುಂಬಿತು.         ಎಲ್ಲಾ ಪರೀಕ್ಷೆಗಳನ್ನೂ ಮುಗಿಸಿ ಫಲಿತಾಂಶಕ್ಕಾಗಿ ಕಾಯಲು ಆರಂಭಿಸಿದ.ಫಲಿತಾಂಶ ಪ್ರಕಟವಾದ ದಿನ ವಿದ್ಯಾರ್ಥಿನಿಲಯವೇ ಹಬ್ಬದ ಸಂಭ್ರಮದಲ್ಲಿತ್ತು.ರವಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.ತನ್ನ ಫಲಿತಾಂಶವನ್ನು ನೋಡಿದ ಕ್ಷಣ ಅವನ ಕಣ್ಣಲ್ಲಿ ನೀರು ತುಂಬಿತು.ಅವನು ನೇರವಾಗಿ ಸುಧಾಳ ಬಳಿ ಹೋಗಿ ಅವಳ ಕಾಲಿಗೆ ಬಿದ್ದ.”ಅಕ್ಕಾ… ಇದು ನನ್ನ ಗೆಲುವಲ್ಲ. ನಿಮ್ಮದು.”ಸುಧಾ ತಕ್ಷಣ ಅವನನ್ನು ಎಬ್ಬಿಸಿದಳು.“ಇಲ್ಲ ರವಿ… ನಾನು ದಾರಿ ತೋರಿಸಿದ್ದೇನೆ ಅಷ್ಟೇ. ನಡೆದದ್ದು ನೀನು.”       ಆ ದಿನ ವಿದ್ಯಾರ್ಥಿನಿಲಯದಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಸಂತೋಷವಿತ್ತು.ಆದರೆ ರವಿಯ ಮನಸ್ಸಿನಲ್ಲಿ ಒಂದೇ ಸಂಕಲ್ಪ ಗಟ್ಟಿಯಾಯಿತು.“ನನಗೆ ಯಾರೋ ಒಬ್ಬರು ಅಕ್ಷರ ಕೊಟ್ಟರು. ನಾನು ಕೂಡ ಮುಂದೆ ಯಾರಿಗಾದರೂ ಅಕ್ಷರದ ಬೆಳಕು ಕೊಡಬೇಕು.”ಅದೇ ಸಂಕಲ್ಪ ಮುಂದೆ ಅವನ ಬದುಕಿನ ಗುರಿಯಾಯಿತು.      ಹತ್ತನೇ ತರಗತಿಯ ಯಶಸ್ಸು ರವಿಯ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.ಅಲ್ಲೇ ನಿಲ್ಲದೆ ಮುಂದೆ ಪಿಯುಸಿ, ನಂತರ ಟಿ.ಸಿ.ಎಚ್. ಪೂರ್ಣಗೊಳಿಸಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಮೊದಲ ನೇಮಕಾತಿ ಆದೇಶ ಕೈಗೆ ಬಂದ ದಿನ ಅವನಿಗೆ ಮೊದಲು ನೆನಪಾದದ್ದು ತನ್ನ ತಾಯಿ ನಾಗಮ್ಮ ಅಲ್ಲ, ಸುಧಾ.“ಅಕ್ಕಾ… ನಿನ್ನ ನಂಬಿಕೆ ಇಂದು ಗೆದ್ದಿದೆ,” ಎಂದು ಮನಸ್ಸಿನಲ್ಲೇ ಹೇಳಿಕೊಂಡ.        ಕೆಲ ದಿನಗಳ ಬಳಿಕ ರವಿ ಸುಧಾಳನ್ನು ಭೇಟಿಯಾಗಲು ಹೋದ. ತನ್ನ ಯಶಸ್ಸನ್ನು ಅವಳೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು.ಆದರೆ ಅವಳ ಮನೆಯ ಮುಂದೆ ಜನಸಮೂಹ ಕಂಡು ಅವನ ಹೆಜ್ಜೆಗಳು ನಿಂತವು.ಮನೆಯೊಳಗೆ ಬಿಳಿ ಬಟ್ಟೆಯಲ್ಲಿ ಮುಚ್ಚಿದ ಎರಡು ದೇಹಗಳು.ಗೋಡೆಯ ಮೇಲೆ ಹೂಹಾರ ಹಾಕಿದ ಎರಡು ಭಾವಚಿತ್ರಗಳು. ರವಿಯ ಹೃದಯ ಒಮ್ಮೆಲೆ ನಿಂತಂತಾಯಿತು. ಒಮ್ಮೆಲೇ ಕತ್ತು ಹಿಸಿಕಿ ಭೂಮಿ ಒಳಗೆ ತಳ್ಳಿದಂತೆ. ತಮ್ಮ ಮಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಸುಧಾ ಮತ್ತು ಅವಳ ಗಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.ಆ ಸುದ್ದಿ ಕೇಳಿದ ರವಿ ಅಲ್ಲೇ ಕುಸಿದು ಕುಳಿತ.“ಅಕ್ಕಾ… ನೀನು ಹೀಗೆ ಹೋಗಬಾರದಿತ್ತು…” ಎಂದು ಮಗುವಿನಂತೆ ಬಿಕ್ಕಿ ಬಿಕ್ಕಿ  ಅತ್ತ.       ಅವನ ಕಣ್ಣ ಮುಂದೆ ಒಂದೊಂದೇ ನೆನಪುಗಳು ಮಿಂಚಿದವು—ಪುಸ್ತಕ ಕೊಟ್ಟ ದಿನ, ಮೊದಲ ಪಾಠ, ಪರೀಕ್ಷಾ ಶುಲ್ಕ ಕಟ್ಟಿದ ಕ್ಷಣ, “ನೀನು ಓದಬೇಕು” ಎಂದು ಹೇಳಿದ ಧ್ವನಿ…ಎಲ್ಲವೂ ಕಣ್ಣೀರಾಗಿ ಹರಿಯಿತು.ಒಂದು ಮೂಲೆಯಲ್ಲಿ ಏನೂ ಅರಿಯದ ಪುಟ್ಟ ಮಗಳು ಕುಳಿತಿದ್ದಳು.ಅವಳೆ ಸುಧಾಳ ಮಗಳು.ಆ ಮಗುವನ್ನು ನೋಡಿದಾಗ ರವಿಯ ಮನಸ್ಸು ಮತ್ತೊಮ್ಮೆ ಒಡೆದುಹೋಯಿತು.        ಮನೆಗೆ ಹಿಂದಿರುಗಿದ ನಂತರವೂ ಅವನು ಸಹಜ ಸ್ಥಿತಿಗೆ ಬರಲಿಲ್ಲ.ಹೆಂಡತಿ ಎಷ್ಟೇ ಸಮಾಧಾನ ಮಾಡಿದರೂ ಅವನ ನೋವು ಕಡಿಮೆಯಾಗಲಿಲ್ಲ.ಒಂದು ರಾತ್ರಿ ಅವನು ಹೆಂಡತಿಯ ಮಡಿಲಲ್ಲಿ ತಲೆ ಇಟ್ಟು ಮಗುವಿನಂತೆ ಅತ್ತ.“ಈ ಬದುಕು ನನ್ನದಲ್ಲ…

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ Read Post »

ಕಾವ್ಯಯಾನ

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು”

ಕಾವ್ಯ ಸಂಗಾತಿ ಶ್ಯಾಮಿಲಿ ಪ್ರವೀಣ್ “ಭಾವಚಿತ್ರಗಳು” ಕೈಲೆರಡು ಭಾವಚಿತ್ರಗಳು|ಒಂದು ಬಣ್ಣದ್ದು; ಮತ್ತೊಂದು ಕಪ್ಪು-ಬಿಳುಪು;ಎರಡರಲ್ಲೂ ಒಂದೊಂದು ಭಾವಗಳು|ನಗು-ಅಳು; ಸುಖ-ದುಃಖ ಮಸುಕು-ಹೊಳಪು||ಕೆದಕಲು ಸಮಯವೂ ಬೇಕು;ನೋಡುತ್ತಾ-ನೋಡುತ್ತಾ ತಾಳೆಹಾಕುತ್ತಾ ಕೂರಲು!! ಕಪ್ಪು-ಬಿಳುಪಿನಂತಲ್ಲ ಬಣ್ಣದ್ದು;ನೋಡಿದರೆ ನೇರ-ಹಸಿರು; ದೂರ ದೃಷ್ಠಿಯ ಹಂಗಿಲ್ಲದ್ದು!ಇದ್ದವರು ಇದ್ದಾರೆ; ಇಲ್ಲದವರು ಇಲ್ಲ!ಮಾಸಿದವಲ್ಲ; ಪಕ್ಕನೆ ಗುರುತು ನೆನಪು ಎಲ್ಲಾ!! ಆದರೆ…ಬಣ್ಣದಂತಲ್ಲ ಕಪ್ಪು-ಬಿಳುಪಿನವು;ಅವು ನಿನ್ನೆಗಳು ಆಳ ಕಾಣದ ತಳದವು|ನೆನಪಾಗಲು ಗುರುತಿರಬೇಕು;ಗುರುತಾಗಲು ನೆನಪಿರಬೇಕು| ಬಣ್ಣದವು ಬದಲಾದರೂ-ಸುಣ್ಣದವು ಬದಲಾಗದು|ನಾಳೆಗಳು ಬರುತ್ತಾದರೂ; ನಿನ್ನೆಗಳು ಬರಲಾಗದು|ಹೊಸತರ ಬೇರಿನ್ನೂ ಹಳತರಲ್ಲೇ ಇದೆ|ಬಣ್ಣಕ್ಕೆ ಕಪ್ಪು-ಬಿಳುಪೇ ಮೂಲವೆಂಬಂತೆ!! ಶ್ಯಾಮಿಲಿ ಪ್ರವೀಣ್

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು” Read Post »

ಇತರೆ, ಜೀವನ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ

ವಿಶೇಷ ಸಂಗಾತಿ “ಆತ್ಮದ ಪಯಣ” ಭೂಮಿಕಾ ಮಾದಾಪುರ ಒಂದು ಕಾಲದಲ್ಲಿ, ಎಲ್ಲೋ ಒಂದು ಕಡೆ, ಒಂದು ಆತ್ಮ ತನ್ನ ಮುಂದಿನ ಪಯಣಕ್ಕೆ ಸಿದ್ಧವಾಗುತ್ತಿತ್ತು.ಅದು ತನ್ನನ್ನೇ ಕೇಳಿಕೊಂಡಿತು—“ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಈ ಜೀವನದ ಉದ್ದೇಶವೇನು?”ಆದರೆ ಆ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ, ಆ ಆತ್ಮವು ಒಂದು ಹೊಸ ದೇಹವನ್ನು ಪಡೆದುಕೊಂಡಿತು. ಅದು ಮಗುವಾಗಿ ಭೂಮಿಗೆ ಬಂದಿತು.ಹುಟ್ಟಿದ ಕ್ಷಣದಲ್ಲಿ ಅದು ತನ್ನ ಹಿಂದಿನ ಪಯಣವನ್ನೆಲ್ಲ ಮರೆತುಬಿಟ್ಟಿತು.ಅಮ್ಮನ ಪ್ರೀತಿ ಸಿಕ್ಕಿತು.ಅಪ್ಪನ ಮಮತೆ ಸಿಕ್ಕಿತು.ಹೊಸ ಸಂಬಂಧಗಳು ಸಿಕ್ಕವು.ಹೊಸ ಹೆಸರು ಸಿಕ್ಕಿತು. ಮಗು ಬೆಳೆದಂತೆ ಅದರ ಸುತ್ತಲಿನ ಪ್ರಪಂಚವೂ ದೊಡ್ಡದಾಯಿತು.ಶಾಲೆ, ಸ್ನೇಹಿತರು, ಆಟ, ವಿದ್ಯಾಭ್ಯಾಸ…ನಂತರ ದೊಡ್ಡವನಾದಾಗ ಅವನ ಮುಂದೆ ಮತ್ತೊಂದು ಪ್ರಪಂಚ ತೆರೆದುಕೊಂಡಿತು.ಹಣ. ಹೆಸರು. ಅಧಿಕಾರ. ಯಶಸ್ಸು. ಅವನು ಓಡಲು ಆರಂಭಿಸಿದ.“ಇನ್ನಷ್ಟು ಹಣ ಬೇಕು…”“ಇನ್ನಷ್ಟು ಹೆಸರು ಬೇಕು…”“ಇತರರಿಗಿಂತ ನಾನು ದೊಡ್ಡವನಾಗಬೇಕು…” ಅವನಿಗೆ ಸಿಕ್ಕ ಪ್ರತಿಯೊಂದು ಯಶಸ್ಸಿನ ನಂತರವೂ ಮತ್ತೊಂದು ಆಸೆ ಹುಟ್ಟುತ್ತಿತ್ತು. ಒಂದು ದಿನ ಅವನಿಗೆ ಬಹಳ ಹಣ ಸಿಕ್ಕಿತು.ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.ಅವನು ದೊಡ್ಡ ಮನೆ ಕಟ್ಟಿದ.ಆದರೆ ಮನಸ್ಸಿನೊಳಗಿನ ಖಾಲಿತನ ತುಂಬಲಿಲ್ಲ.ಅವನು ಅನೇಕ ಜನರ ಸ್ನೇಹ ಗಳಿಸಿದ.ಆದರೆ ತನ್ನನ್ನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಹುಡುಕಲಾಗಲಿಲ್ಲ. ಒಂದು ರಾತ್ರಿ ಅವನು ಒಬ್ಬನೇ ಕುಳಿತಿದ್ದ.ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು—“ನಾನು ಇಷ್ಟೆಲ್ಲಾ ಗಳಿಸಿದ್ದೇನೆ… ಆದರೆ ನನಗೆ ಇನ್ನೂ ಸಂತೋಷ ಯಾಕಿಲ್ಲ?” ಆಗ ಅವನೊಳಗಿಂದ ಒಂದು ಮೃದುವಾದ ಧ್ವನಿ ಕೇಳಿಸಿತು.“ಏಕೆಂದರೆ ನೀನು ಹೊರಗೆ ಹುಡುಕುತ್ತಿರುವುದು ಒಳಗಿದೆ.”ಅವನು ಬೆಚ್ಚಿಬಿದ್ದ.“ಯಾರು ಮಾತನಾಡುತ್ತಿರುವುದು?”ಧ್ವನಿ ಮತ್ತೆ ಕೇಳಿಸಿತು.“ನಾನೇ… ನಿನ್ನೊಳಗಿನ ನೀನು.” ಅವನು ತನ್ನ ಜೀವನವನ್ನು ಹಿಂದಿರುಗಿ ನೋಡಿದ.ಚಿಕ್ಕವನಾಗಿದ್ದಾಗ ಅವನು ಎಷ್ಟು ಸರಳನಾಗಿದ್ದ!ಅವನಿಗೆ ದೊಡ್ಡ ಮನೆ ಬೇಕಿರಲಿಲ್ಲ.ದೊಡ್ಡ ಹೆಸರು ಬೇಕಿರಲಿಲ್ಲ.ಹೆಚ್ಚು ಹಣ ಬೇಕಿರಲಿಲ್ಲ.ಸಣ್ಣ ವಿಷಯಗಳಲ್ಲೇ ಸಂತೋಷ ಕಂಡುಕೊಳ್ಳುತ್ತಿದ್ದ.ಆದರೆ ದೊಡ್ಡವನಾದಂತೆ ಅವನು ತನ್ನ ನಿಜವಾದ ಸ್ವಭಾವವನ್ನು ಮರೆತಿದ್ದ. ಅವನು ತನ್ನ ದೇಹವನ್ನೇ “ನಾನು” ಎಂದುಕೊಂಡಿದ್ದ.ತನ್ನ ಹೆಸರನ್ನೇ “ನಾನು” ಎಂದುಕೊಂಡಿದ್ದ.ತನ್ನ ಸಂಪತ್ತು, ಸಂಬಂಧಗಳು ಮತ್ತು ಸ್ಥಾನಮಾನವನ್ನೇ ತನ್ನ ಅಸ್ತಿತ್ವ ಎಂದು ಭಾವಿಸಿದ್ದ. ಆದರೆ ಅವನೊಳಗಿನ ಧ್ವನಿ ಹೇಳಿತು— “ದೇಹ ಬದಲಾಗುತ್ತದೆ.ಹೆಸರು ಬದಲಾಗುತ್ತದೆ.ಸಂಬಂಧಗಳು ಬದಲಾಗುತ್ತವೆ.ಸಂಪತ್ತು ಬರುತ್ತದೆ, ಹೋಗುತ್ತದೆ.ಆದರೆ ಇವೆಲ್ಲವನ್ನೂ ಗಮನಿಸುವ ನಿನ್ನೊಳಗಿನ ಚೈತನ್ಯ ಮಾತ್ರ ನಿನ್ನ ನಿಜವಾದ ಪಯಣದ ಸಂಗಾತಿ.” ಆ ದಿನದಿಂದ ಅವನು ತನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡಲು ಆರಂಭಿಸಿದ. ಅವನು ತನ್ನ ಆಸೆಗಳನ್ನು ಪ್ರಶ್ನಿಸಲು ಶುರುಮಾಡಿದ.“ನನಗೆ ಇದು ನಿಜವಾಗಿಯೂ ಬೇಕೇ?”“ನಾನು ಇದನ್ನು ಪಡೆಯುವುದರಿಂದ ಶಾಂತಿ ಸಿಗುತ್ತದೆಯೇ?”“ನನ್ನ ಜೀವನದ ನಿಜವಾದ ಉದ್ದೇಶವೇನು?” ಅವನಿಗೆ ನಿಧಾನವಾಗಿ ಒಂದು ಸತ್ಯ ಅರ್ಥವಾಗತೊಡಗಿತು.ಜೀವನವೆಂದರೆ ಕೇವಲ ಹುಟ್ಟಿ, ಓದಿ, ಕೆಲಸ ಮಾಡಿ, ಹಣ ಗಳಿಸಿ, ಸಂಬಂಧಗಳನ್ನು ಬೆಳೆಸಿ, ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ.ಜೀವನವೆಂದರೆ ತನ್ನನ್ನೇ ಅರಿಯುವ ಒಂದು ಅವಕಾಶ.ಆತ್ಮದ ಪಯಣ ಹೊರಗಿನ ಜಗತ್ತಿನಲ್ಲಿ ನಡೆಯುವುದಿಲ್ಲ.ಅದು ನಮ್ಮೊಳಗೆ ನಡೆಯುತ್ತದೆ. ಮನುಷ್ಯನು ತನ್ನ ಜೀವನದ ಕೊನೆಯ ಹಂತಕ್ಕೆ ಬಂದಾಗ, ಅವನು ಗಳಿಸಿದ ಹಣ ಅವನ ಜೊತೆ ಬರುವುದಿಲ್ಲ.ಅವನ ಮನೆ ಬರುವುದಿಲ್ಲ.ಅವನ ಸ್ಥಾನಮಾನ ಬರುವುದಿಲ್ಲ.ಅವನ ಜೊತೆ ಬರುವುದು ಅವನ ಜೀವನದ ಅನುಭವಗಳು ಮತ್ತು ಅವನು ಅರಿತ ಸತ್ಯ ಮಾತ್ರ. ಅವನು ಕಣ್ಣು ಮುಚ್ಚಿ ನಿಧಾನವಾಗಿ ಹೇಳಿದ— “ನಾನು ಈ ದೇಹವಲ್ಲ…ನಾನು ಈ ಹೆಸರಲ್ಲ…ನಾನು ಈ ಸಂಪತ್ತಲ್ಲ…ನಾನು ಈ ಸಂಬಂಧಗಳಲ್ಲ…ನಾನು ಈ ಎಲ್ಲದರ ಸಾಕ್ಷಿ.” ಅವನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಶಾಂತಿ ಮೂಡಿತು.ಅವನಿಗೆ ತನ್ನ ಪಯಣದ ಅರ್ಥ ನಿಧಾನವಾಗಿ ತಿಳಿಯಿತು. ನಾವು ಈ ಲೋಕಕ್ಕೆ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಬರಲಿಲ್ಲ.ಹಾಗೆಯೇ ಇಲ್ಲಿಂದ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಹೋಗಲಾರೆವು. ಆದರೆ ಈ ಜೀವನ ನಮಗೆ ಒಂದು ಅಮೂಲ್ಯ ಅವಕಾಶವನ್ನು ಕೊಡುತ್ತದೆ—ನಾವು ಯಾರು ಎಂಬುದನ್ನು ಅರಿಯುವ ಅವಕಾಶ.ಅದೇ ಆತ್ಮದ ನಿಜವಾದ ಪಯಣ. ಮನುಷ್ಯನು ಹೊರಗಿನ ಜಗತ್ತನ್ನು ಗೆಲ್ಲಲು ಎಷ್ಟು ಪ್ರಯತ್ನಿಸಿದರೂ, ತನ್ನ ಮನಸ್ಸನ್ನು ಗೆಲ್ಲದೆ ನಿಜವಾದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ತನ್ನ ಜೀವನದ ಕೊನೆಯಲ್ಲಿ ಒಂದು ಮಾತನ್ನು ಮಾತ್ರ ಹೇಳಿದ— «“ನಾನು ಇಡೀ ಜೀವನ ನನ್ನ ಗಮ್ಯವನ್ನು ಹೊರಗೆ ಹುಡುಕಿದೆ.ಆದರೆ ಕೊನೆಗೆ ಅರಿತದ್ದು ಏನೆಂದರೆ…ನಾನು ಹುಡುಕುತ್ತಿದ್ದ ಗಮ್ಯ ನನ್ನೊಳಗೇ ಇತ್ತು.”» ಅವನ ಪಯಣ ಮುಗಿದಿರಲಿಲ್ಲ.ಅದು ನಿಜವಾಗಿ ಆಗಲೇ ಆರಂಭವಾಗಿತ್ತು.ಆತ್ಮದ ಪಯಣ — ಹೊರಗಿನಿಂದ ಒಳಗಿನತ್ತ. ಭೂಮಿಕಾ ಮಾದಾಪುರ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ Read Post »

ಪುಸ್ತಕ ಸಂಗಾತಿ

ಶೋಭಾ ಶಂಕರಾನಂದ ಅವರ ಕೃತಿ “ಕಣ್ಣಳತೆಗೆ ಕಂಡದ್ದು” ಒಂದು ಅವಲೋಕನ ಡಾ. ರೇಖಾ ಉದಯ

ಪುಸ್ತಕ ಸಂಗಾತಿ ಡಾ.ರೇಖಾ ಉದಯ ಶೋಭಾ ಶಂಕರಾನಂದ ಕಣ್ಣಳತೆಗೆ ಕಂಡದ್ದು ನಾವು ಏನನ್ನಾದರೂ ಪರಿಶೀಲಿಸಬೇಕೆಂದಾಗ ಮೊದಲು ನಮ್ಮ ಸುತ್ತಮುತ್ತಲನ್ನು ಗಮನಿಸುತ್ತೇವೆ. ನಮ್ಮ ದೃಷ್ಟಿಯ ವ್ಯಾಪ್ತಿಗೆ ಸಿಕ್ಕಷ್ಟು ವಿಚಾರಗಳನ್ನು ಗ್ರಹಿಸುತ್ತೇವೆ. ಆದರೆ ಕಂಡದ್ದರಾಚೆಗೂ ಅನೇಕ ಅರ್ಥಗಳು, ಅನುಭವಗಳು ಮತ್ತು ಒಳನೋಟಗಳು ಅಡಗಿರುತ್ತವೆ. ಅಂತಹ ಒಳನೋಟಗಳನ್ನು ತಮ್ಮ ಕಣ್ಣಳತೆಗೆ ಕಂಡ ವಿಚಾರಗಳ ಮೂಲಕ ಓದುಗರ ಮುಂದೆ ತೆರೆದಿಡುವ ಕೃತಿ ‘ಕಣ್ಣಳತೆಗೆ ಕಂಡದ್ದು’. ಶೋಭಾ ಶಂಕರಾನಂದ ಅವರ ಮೊದಲ ಕೃತಿಯಾದ ಈ ಲೇಖನಮಾಲೆಯಲ್ಲಿ ಸಾಮಾಜಿಕ ಕಳಕಳಿ, ಸ್ತ್ರೀ ಸಂವೇದನೆ, ಮಕ್ಕಳ ಭವಿಷ್ಯದ ಕುರಿತ ಕಾಳಜಿ, ವ್ಯಕ್ತಿತ್ವ ವಿಕಸನ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳು, ಹಲವು ಗಣ್ಯ ವ್ಯಕ್ತಿಗಳ ಪರಿಚಯ ಹಾಗೂ ಅವರ ಬದುಕಿನ ಮೌಲ್ಯಗಳು ಹೀಗೆ ವೈವಿಧ್ಯಮಯ ವಿಚಾರಧಾರೆಗಳು ಹರಿದುಬಂದಿವೆ. ಒಂದೊಂದು ಲೇಖನವೂ ಒಂದೊಂದು ಚಿಂತನೆಯ ಕಿಟಕಿಯನ್ನು ತೆರೆದು, ಓದುಗರನ್ನು ಹೊಸ ದೃಷ್ಟಿಕೋನದತ್ತ ಕರೆದೊಯ್ಯುತ್ತದೆ. ಈ ಕೃತಿಯ ಮೊದಲ ಲೇಖನ ‘ಕುಂಭಮೇಳ ಮತ್ತು ನಾಗ ಸಾಧುಗಳು’. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಹಿನ್ನೆಲೆಯಲ್ಲಿನ ಧಾರ್ಮಿಕ ವೈಭವ, ಸನಾತನ ಪರಂಪರೆಯ ಮಹತ್ವ ಹಾಗೂ ನಾಗ ಸಾಧುಗಳ ಜೀವನದ ಕುರಿತಾಗಿ ಲೇಖಕಿ ಮನಮುಟ್ಟುವಂತೆ ವಿವರಿಸಿದ್ದಾರೆ. ನಾಗ ಸಾಧುಗಳ ಜೀವನಶೈಲಿ, ಅವರ ವೈರಾಗ್ಯ ಮತ್ತು ಧರ್ಮದ ಮೇಲಿನ ನಿಷ್ಠೆಯನ್ನು ಓದುತ್ತಿದ್ದಂತೆ ಅವರ ಬದುಕಿನ ಬಗ್ಗೆ ಕುತೂಹಲವೂ ಗೌರವವೂ ಮೂಡುತ್ತದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಧರ್ಮಪರಂಪರೆಯನ್ನು ಕಾಪಾಡುವ ಅವರ ತ್ಯಾಗದ ಬದುಕಿನ ಪರಿಚಯ ಈ ಲೇಖನದ ವಿಶೇಷತೆ. ‘ಕೃಷ್ಣಶಿಲೆ ಮಂದಸ್ಮಿತ ರಾಮಲೀಲಾ’ ಲೇಖಕಿಯ ವೈಯಕ್ತಿಕ ಅನುಭವದ ಸ್ಪರ್ಶ ಹೊಂದಿರುವ ಮತ್ತೊಂದು ಮನೋಜ್ಞ ಲೇಖನ. ರಾಮಲಲ್ಲಾನ ದರ್ಶನದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾ, ಅಲ್ಲಿನ ಭಕ್ತಿ, ಸಂಭ್ರಮ ಮತ್ತು ಸಕಾರಾತ್ಮಕ ವಾತಾವರಣವನ್ನು ಓದುಗರಿಗೂ ಅನುಭವಿಸುವಂತೆ ಮಾಡಿದ್ದಾರೆ. 51 ಇಂಚು ಎತ್ತರದ ಕಪ್ಪು ಶಿಲೆಯಲ್ಲಿ ಮೂಡಿಬಂದ ಬಾಲರಾಮನ ವಿಗ್ರಹದ ಸೌಂದರ್ಯವನ್ನು ವರ್ಣಿಸುವಾಗ ಲೇಖಕಿಯ ಭಾವತೀವ್ರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಗ್ರಹದ ನಿರ್ಮಾತೃ ಶಿಲ್ಪಿ ಅರುಣ್ ಯೋಗಿರಾಜ್ ಅವರ ಪರಿಚಯದ ಜೊತೆಗೆ, ಅವರ ಕೈಚಳಕದಲ್ಲಿ ಅರಳಿದ ಇನ್ನಿತರ ಶಿಲ್ಪಗಳ ಕುರಿತೂ ಲೇಖಕಿ ಪರಿಚಯಿಸಿದ್ದಾರೆ. ‘ವೈರಾಗ್ಯ ನಿಧಿ ಅಕ್ಕ ಮಹಾದೇವಿ’ ಲೇಖನದಲ್ಲಿ ಹನ್ನೆರಡನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿಯ ವ್ಯಕ್ತಿತ್ವ ಮತ್ತು ವೈಚಾರಿಕತೆಯನ್ನು ಪರಿಚಯಿಸಲಾಗಿದೆ. ರಾಜಪ್ರಭುತ್ವದ ಬಂಧನಗಳನ್ನು ಧಿಕ್ಕರಿಸಿ, ತನ್ನದೇ ಆದ ಸ್ವತಂತ್ರ ಚಿಂತನೆ ಹಾಗೂ ವಚನಗಳ ಮೂಲಕ ಬದುಕಿನ ಸತ್ಯಗಳನ್ನು ಅನಾವರಣಗೊಳಿಸಿದ ಅಕ್ಕಮಹಾದೇವಿಯ ಜೀವನದ ಒಳನೋಟಗಳನ್ನು ಲೇಖಕಿ ವಿಶ್ಲೇಷಿಸಿದ್ದಾರೆ. ಸ್ತ್ರೀ ಅಸ್ತಿತ್ವ, ಆತ್ಮಗೌರವ ಮತ್ತು ಸ್ವತಂತ್ರ ಚಿಂತನೆಯ ನೆಲೆಯಲ್ಲಿ ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ನೋಡುವ ಪ್ರಯತ್ನ ಇಲ್ಲಿ ಗಮನಾರ್ಹವಾಗಿದೆ. ‘ವೀಕ್ಷಕರ ಸಮಯವೂ ಸಹ ಅತ್ಯಮೂಲ್ಯ’ ಎಂಬ ಲೇಖನದಲ್ಲಿ ಬಿಗ್‌ಬಾಸ್‌ನಂತಹ ಜನಪ್ರಿಯ ಕಾರ್ಯಕ್ರಮವನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡದೆ, ನಮ್ಮ ಅಮೂಲ್ಯ ಸಮಯವನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಲೇಖಕಿ ಮುಂದಿಡುತ್ತಾರೆ. ಪ್ರತಿಯೊಂದು ವಿಚಾರಕ್ಕೂ ತನ್ನದೇ ಆದ ದೃಷ್ಟಿಕೋನವನ್ನು ಹೊಂದಿರುವ ಲೇಖಕಿ, ಕಾರ್ಯಕ್ರಮದ ಒಳಿತು-ಕೆಡುಕುಗಳನ್ನು ಚರ್ಚಿಸುವುದರ ಜೊತೆಗೆ, ಸಮಯದ ಮೌಲ್ಯ ಮತ್ತು ಅದರ ಸದುಪಯೋಗದ ಕುರಿತು ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ. ಇಂದಿನ ಮಕ್ಕಳ ಬದುಕಿನ ಮತ್ತೊಂದು ಸೂಕ್ಷ್ಮ ಆಯಾಮವನ್ನು ತೆರೆದಿಡುವ ಲೇಖನ ‘ಮುಗ್ಧ ಮಕ್ಕಳ ಬಾಲ್ಯ ಕಸಿಯದಿರಿ’. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ರಿಯಾಲಿಟಿ ಶೋಗಳ ಹಿಂದಿರುವ ಒತ್ತಡ, ಸ್ಪರ್ಧೆಯ ಮನೋಭಾವ, ಗೆಲುವು-ಸೋಲಿನ ಪರಿಣಾಮ ಮತ್ತು ಜನಪ್ರಿಯತೆಯ ಬೆನ್ನಟ್ಟುವಿಕೆಯ ಕುರಿತು ಲೇಖಕಿ ಗಂಭೀರವಾಗಿ ಚಿಂತಿಸಿದ್ದಾರೆ. ಬಾಲ್ಯವೆಂದರೆ ಸಹಜತೆ, ಆಟ, ನಗು ಮತ್ತು ಮುಗ್ಧತೆಯ ಕಾಲ. ಆದರೆ ವೇದಿಕೆಯ ಮೇಲಿನ ಅತಿಯಾದ ಸ್ಪರ್ಧೆ ಮತ್ತು ನಿರೀಕ್ಷೆಗಳು ಮಕ್ಕಳ ಸಹಜ ಬಾಲ್ಯವನ್ನು ಕಸಿದುಕೊಳ್ಳಬಹುದೆಂಬ ಆತಂಕವನ್ನು ಇಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಮಕ್ಕಳ ಮನಸ್ಸಿನ ಮೇಲೆ ಉಳಿಯಬಹುದಾದ ಪರಿಣಾಮಗಳತ್ತ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ. ‘ಸಾವಿನ ಮನೆ ಸಾಕೋ೯ ಪಾಡ್’ ಎಂಬ ಲೇಖನ ತಂತ್ರಜ್ಞಾನದ ಮತ್ತೊಂದು ಸಂಕೀರ್ಣ ಮುಖವನ್ನು ಪರಿಚಯಿಸುತ್ತದೆ. ಸಾವಿನ ಕುರಿತು ಮಾನವನ ಚಿಂತನೆ, ಜೀವನದ ನೋವು, ಅಸಹಾಯಕತೆ ಮತ್ತು ತಂತ್ರಜ್ಞಾನ ಇವುಗಳ ನಡುವಿನ ಸಂಬಂಧವನ್ನು ಲೇಖಕಿ ಪ್ರಶ್ನಿಸುತ್ತಾರೆ. ಬದುಕಿನ ಅಂತ್ಯವನ್ನು ತಂತ್ರಜ್ಞಾನದ ಮೂಲಕ ನಿರ್ಧರಿಸುವ ಸಾಧ್ಯತೆಗಳ ಕುರಿತು ಓದುಗರಲ್ಲಿ ಹಲವು ನೈತಿಕ ಹಾಗೂ ಮಾನವೀಯ ಪ್ರಶ್ನೆಗಳನ್ನು ಹುಟ್ಟಿಸುವ ಈ ಲೇಖನ, ವಿಜ್ಞಾನದ ಪ್ರಗತಿಯ ಜೊತೆಗೆ ಮಾನವೀಯ ಮೌಲ್ಯಗಳ ಅಗತ್ಯವನ್ನೂ ನೆನಪಿಸುತ್ತದೆ. ಹೀಗೆ ‘ಕಣ್ಣಳತೆಗೆ ಕಂಡದ್ದು’ ಕೇವಲ ಲೇಖನಗಳ ಸಂಕಲನವಲ್ಲ; ಲೇಖಕಿಯ ಸೂಕ್ಷ್ಮ ಅವಲೋಕನ, ಸಾಮಾಜಿಕ ಕಳಕಳಿ ಮತ್ತು ಚಿಂತನಶೀಲ ಮನಸ್ಸಿನ ಪ್ರತಿಬಿಂಬವಾಗಿದೆ. ಧರ್ಮದಿಂದ ತಂತ್ರಜ್ಞಾನದವರೆಗೆ, ಅಕ್ಕಮಹಾದೇವಿಯಿಂದ ಇಂದಿನ ಮಕ್ಕಳವರೆಗೆ, ಮನರಂಜನೆಯಿಂದ ಸಮಯದ ಮೌಲ್ಯದವರೆಗೆ — ಹಲವು ವಿಭಿನ್ನ ವಿಚಾರಗಳನ್ನು ಒಂದೇ ಕೃತಿಯೊಳಗೆ ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಕಣ್ಣಿಗೆ ಕಂಡ ಸಂಗತಿಯನ್ನು ಹಾಗೆಯೇ ದಾಖಲಿಸುವುದಕ್ಕಿಂತ, ಅದರ ಹಿಂದಿರುವ ಅರ್ಥವನ್ನು ಅರಿಯುವ ಪ್ರಯತ್ನವೇ ಈ ಕೃತಿಯ ಜೀವಾಳ. ಪ್ರತಿಯೊಂದು ಲೇಖನವೂ ಓದುಗರ ಮನದಲ್ಲಿ ಒಂದಲ್ಲ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಕೆಲವೊಮ್ಮೆ ಚಿಂತನೆಗೆ ಹಚ್ಚುತ್ತದೆ, ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ, ಮತ್ತೊಮ್ಮೆ ನಮ್ಮದೇ ಬದುಕಿನತ್ತ ತಿರುಗಿ ನೋಡುವಂತೆ ಮಾಡುತ್ತದೆ. ‘ಕಣ್ಣಳತೆಗೆ ಕಂಡದ್ದು’ ಓದಿದಾಗ ಕಣ್ಣಳತೆಗೆ ಕಂಡ ವಿಚಾರಗಳಾಚೆಗೂ ಬದುಕಿನ ಅನೇಕ ಆಯಾಮಗಳು ತೆರೆದುಕೊಳ್ಳುತ್ತವೆ. ಕೃತಿಯ ಹೊರಮೈಯನ್ನು ನೋಡಿದಷ್ಟೇ ಸಾಲದು; ಅದರೊಳಗಿನ ವಿಚಾರಧಾರೆಯ ಹೂರಣವನ್ನು ಸವಿಯಲು ಕೃತಿಯ ಪುಟಗಳನ್ನು ತಿರುವುದೇಬೇಕು. ಓದಿದಂತೆ ಅದರ ವೈಚಾರಿಕ ಸೊಗಡು ಮತ್ತು ಅನುಭವದ ಆಳ ಅರಿವಾಗುತ್ತದೆ. ಕೃತಿ ಹೆಸರು. ಕಣ್ಣಳತೆಗೆ ಕಂಡದ್ದುಕೃತಿಕರ್ತೃ. ಶೋಭಾ ಶಂಕರಾನಂದಪುಸ್ತಕದ ಬೆಲೆ. 250ಪ್ರಕಾಶದ ಹೆಸರು.ಯದು ನಂದನಪುಟಗಳ ಸಂಖ್ಯೆ.204ಕೃತಿ ಬೇಕಾದಲ್ಲಿ ಸಂಪರ್ಕ.94804 09091 ಡಾ. ರೇಖಾ ಉದಯ್

ಶೋಭಾ ಶಂಕರಾನಂದ ಅವರ ಕೃತಿ “ಕಣ್ಣಳತೆಗೆ ಕಂಡದ್ದು” ಒಂದು ಅವಲೋಕನ ಡಾ. ರೇಖಾ ಉದಯ Read Post »

ಇತರೆ, ಮಕ್ಕಳ ವಿಭಾಗ

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ”

ಮಕ್ಕಳ ಸಂಗಾತಿ ಅರುಣಾ ರಾವ್ ಆದಿ ಕವಿಪಂಪ ತರಗತಿಯ ಸನ್ನಿವೇಶ. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕನ್ನಡ ಗುರುಗಳು ತರಗತಿಯ ಒಳಗೆ ಬರುತ್ತಲೇ ಸದ್ದು ನಿಂತು ಹೋಗುತ್ತದೆ. ವಿದ್ಯಾರ್ಥಿಗಳು ಎದ್ದು ನಿಂತು ‘ ನಮಸ್ಕಾರ ಗುರುಗಳೇ’ಎಂದು ವಂದಿಸಿದಾಗ, ಗುರುಗಳು ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತಾರೆ.) ಮೇಷ್ಟ್ರು : ( ತರಗತಿಯೊಳಗೆ ಒಮ್ಮೆ ಕಣ್ಣಾಡಿಸಿ) ಮೋಹನ ಸದ್ಯ, ಇವತ್ತಾದರೂ ಶಾಲೆಗೆ ಬಂದೆಯಲ್ಲ, ಐದು ದಿನಗಳಿಂದ ಎಲ್ಲಿಗೆ ಹೋಗಿದ್ದೆ? ಮೋಹನ:( ಎದ್ದು ನಿಂತು) ಸರ್, ನಮ್ಮ ಅಜ್ಜಿ ಊರಿಗೆ ಹೋಗಿದ್ದೆ ಸರ್ ಬನವಾಸಿಗೆ. ಅಲ್ಲಿಗೆ ಹೋದರೆ ಸಮಯ ಹೋಗೋದೇ ಗೊತ್ತಾಗಲ್ಲ ಸರ್.( ಹಲ್ಲು ಕಿರಿಯುವನು) ಗಿರಿಜ: ಸರ್ , ‘ಬನವಾಸಿ’ ಪಂಪ ಕವಿ ಜನಿಸಿದ ಊರು ಅಲ್ವಾ? ಮೇಷ್ಟ್ರು: ಹೌದು ಗಿರಿಜಾ, ಪಂಪ ಬರಿ ಕವಿಯಷ್ಠೇ ಅಲ್ಲ, ನಮ್ಮ ಕನ್ನಡದ ಆದಿಕವಿ.( ಎಂದು ಹೇಳುತ್ತಾ ಕಪ್ಪ ಹಲಗೆಯ ಮೇಲೆ ‘ಆದಿಕವಿ ಪಂಪ’ ಎಂದು ಬರೆಯುವರು). ಮೋಹನ ನಿಮ್ಮ ಊರು ಬನವಾಸಿನೇ ಅಲ್ವವೇ! ಪಂಪನ ಬಗ್ಗೆ ನಿನಗೆ ಏನು ತಿಳಿದಿದೆ ಹೇಳು ನೋಡೋಣ. ಮೋಹನ : ಸರ್ ಪಂಪ ೧೦ನೇ ಶತಮಾನದಲ್ಲಿ ಜೀವಿಸಿದ್ದರು. ಅವರ ಕೃತಿಯ ಒಂದು ಸಾಲನ್ನು ನಮ್ಮ ಅಜ್ಜ ಯಾವಾಗಲೂ ಹೇಳುತ್ತಿರ್ತಾರೆ. ನನಗೂ ಅದು ಕಂಠ ಪಾಠ ಆಗಿಹೋಗಿದೆ ಸರ್. ಮೇಷ್ಟ್ರು: ಯಾವುದಪ್ಪಾ ಆ ಸಾಲು? ಮೋಹನ: ( ಆವೇಶಭರಿತವಾದ ಧ್ವನಿಯಿಂದ)ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮೇಷ್ಟ್ರು : ಭೇಷ್ ಭೇಷ್ ಚೆನ್ನಾಗಿ ಹೇಳಿದೆ. ಅನನ್ಯ: ಸರ್, ನನಗೆ ಪಂಪ ಕವಿಯ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕೆಂಬ ಆಸೆ ಆಗ್ತಿದೆ. ಅವರ ಬಗ್ಗೆ ಹೇಳಿ ಸರ್. ಮೇಷ್ಟ್ರು: ಪಂಪನ ಬಗ್ಗೆ ಹೇಳಲು ಇಡೀ ದಿನನೇ ಸಾಲದು. ಪಂಪ ಮಹಾ ಕವಿಯು ‘ಅರಿಕೇಸರಿ’ ಎಂಬ ರಾಜನ ಆಸ್ಥಾನ ಕವಿಯಾಗಿದ್ದನು. ಇವನು ಬರೆದಿರುವ ಎರಡು ಮಹಾನ್ ಕೃತಿಗಳು ‘ಅದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ಆದಿಪುರಾಣ’ ಇವನ‌ಮೊದಲ ಕಾವ್ಯ. ಇದು ಜೈನ ತೀರ್ಥಂಕರರ ಚರಿತ್ತೆಯನ್ನು ಒಳಗೊಂಡಿದೆ. ಕಾವ್ಯ: ಹಾಗಾದರೆ ವಿಕ್ರಮಾರ್ಜುನ ವಿಜಯ ಅಂದ್ರೆ ಏನು ಸರ್? ವಿಕ್ರಮ್-ಬೇತಾಳ ಕತೆಯಲ್ಲಿ ಬರುವ ವಿಕ್ರಮಾನ ಕತೇನಾ? ಮೇಷ್ಟ್ರು : ಅಲ್ಲ ಕಾವ್ಯ, ಇದೊಂದು ಮಹಾಭಾರತದ ಕಥೆ. ವಿಕ್ರಮಾರ್ಜುನ ವಿಜಯ ಅಂದರೆ ಪಾಂಡವರಲ್ಲಿ ಒಬ್ಬನಾದ ಅರ್ಜುನನ ವಿಜಯ. ಪಂಪ ಅರ್ಜುನನನ್ನು ತನ್ನ ಕಾವ್ಯದ ನಾಯಕನನ್ನಾಗಿ ಮಾಡಿಕೊಂಡನು. ಅದಕ್ಕಾಗಿ ತನ್ನ ಕಾವ್ಯವನ್ಬು ವಿಕ್ರಮಾರ್ಜುನ ವಿಜಯ ಎಂದು ಕರೆದನು. ಈ ಕೃತಿಗೆ ಇನ್ನೊಂದು ಹೆಸರೂ ಇದೆ ‘ಪಂಪ ಭಾರತಾ’ ಅಂತ. ಶಂಕರ: ಅಲ್ಲಾ ಗುರುಗಳೇ, ಅರ್ಜುನ ಹೇಗೆ ನಾಯಕ ಆಗ್ತಾನೆ? ಯುಧಿಷ್ಠಿರ ತಾನೆ ಹಿರಿಯವನು? ಮೇಷ್ಟ್ರು : ಹೌದು. ನೀನು ಹೇಳಿದ್ದು ಸರಿಯಾಗಿದೆ. ಆದರೆ ಇಲ್ಲಿ ಪಂಪ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿ ರಾಜನ ಜೊತೆಗೆ ಹೋಲಿಕೆ ಮಾಡಿದ್ದಾನೆ. ಆದ್ದರಿಂದ ಕಾವ್ಯದ ಉದ್ದಕ್ಕೂ ಅರ್ಜುನನನ್ನು ಹೊಗಳುವ ರೀತಿ ತನ್ನ ಆಶ್ರಯದಾತನನ್ನು ಹಾಡಿ ಹೊಗಳಿದ್ದಾನೆ. ಅವನನ್ನೇ ಕೃತಿಯ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ. “ಉಪ್ಪಿಟ್ಟವರನ್ನು ಮುಪ್ಪಿನ ತನಕ ನೆನೆ ಅಂತ ಗಾದೆ ಕೇಳಿಲ್ಲವೇ?” ಆಶ್ರಯದಾತ ಅರಿಕೇಸರಿ ಅಂದ್ರೂ ಇನ್ನಿಲ್ಲದ ಪ್ರೀತಿ ಜೊತೆಗೆ ತನ್ನ ಹುಟ್ಟೂರಾದ ಬನವಾಸಿನ ಕಂಡರೂ ಪಂಚಪ್ರಾಣಆಗಲೇ ಮೋಹನ ಹೇಳಿದನಲ್ಲಾ ಆ ಸಾಲನ್ನು ಕೇಳಿದಾಗ ಇದು ಚೆನ್ನಾಗಿ ಅರ್ಥವಾಗುತ್ತದೆ.. ಮೋಹನ: ( ತಲೆ ಕೆರೆದುಕೊಳ್ಳುತ್ತಾ). ಪಂಪ ಹೇಳಿದ ಮಾತಿನ ಅರ್ಥ ಏನು ಸರ್?(ಇಡೀ ತರಗತಿ ಗಟ್ಟಿಯಾಗಿ ನಗುವುದು) ಮೇಷ್ಟ್ರು: ಅರ್ಥ ತಿಳಿಯದೆಯೇ ಕಂಠ ಪಾಠ ಮಾಡಿದೆಯೋ? ಅದಕ್ಕೆ ಹಿರಿಯರು ಹೇಳೋದು “ಅರ್ಥ ಇಲ್ಲದ ಓದು ವ್ಯರ್ಥ” ಅಂತ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”ಎಂದರೆ ಯಾರಾದರೂ ನನ್ನನ್ನು ಅಂಕುಶದಿಂದ ತಿವಿದಾಗಲೂ ನನಗೆ ಬನವಾಸಿಯ ನೆನಪಾಗುತ್ತದೆ ಎಂದು.ಅಲ್ಲದೆ” ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” ಎಂದು ಬನವಾಸಿಯನ್ನು ತನ್ನ ಕೃತಿಯಲ್ಲಿ ಅಲ್ಲಲ್ಲಿ ನೆನೆಯುತ್ತಾನೆ. ಮರಿದುಂಬಿಯಾಗಿ, ಕೋಗಿಲೆಯಾಗಿ ಆದರೂ ನನ್ನ ಊರಿನಲ್ಲೇ ಬನವಾಸಿಯಲ್ಲೇ ಹುಟ್ಟಬೇಕು ಎಂಬುದು ಅವನ ಮಾತಿನ ಅರ್ಥ. ಶಂಕರ: ಇದೇನು ಪದ್ಯನೋ ಗದ್ಯಾನೋ ? ಮೇಷ್ಟು: ಇದು ಹಳೆಗನ್ಬಡ ಮಕ್ಕಳೇ. ಚಂಪೂ ಶೈಲಿ.ಇದರಲ್ಲಿ ಪದ್ಯನೂ ಇರುತ್ತೆ, ಗದ್ಯಾನೂ ಇರುತ್ತೆ. ಎರಡೂ ಮಿಶ್ರಿತವಾದ ಶೈಲಿಯನ್ನು ಚಂಪೂ ಶೈಲಿ ಅಂತ ಕರೀತೀವಿ. ಮಾಧುರಿ: ಇದು ತುಂಬಾ ಕಷ್ಟ ಅಲ್ಲವೇ ಸರ್? ಮೇಷ್ಟು: ಹಾಗೇನೂ ಇಲ್ಲ ಮಾಧುರಿ. ಓದಿ ಕಲಿತರೆ ಎಲ್ಲವೂ ಸುಲಭಾನೇ. ಪಂಪ ಹಾಕಿಕೊಟ್ಟ ದಾರಿಯಲ್ಲೇ ಅವನ ಸಮಕಾಲೀನರಾದ ರನ್ನ ಮತ್ತು ಪೊನ್ನ ಕೂಡ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಪಂಪ, ರನ್ನ ಮತ್ತು ಪೊನ್ನರನ್ನು ‘ರತ್ನತ್ರಯರು’ ಅಂತ ಕರೆಯುತ್ತಾರೆ. ಶಂಕರ: ಗುರುಗಳೇ ನನಗೂ ಒಮ್ಮೆ ಬನವಾಸಿಯನ್ನು ನೋಡಬೇಕೆನಿಸುತ್ತಿದೆ. ಮೋಹನ: ಅದಕ್ಕೇನಂತೆ, ಬರುವ ಬೇಸಿಗೆ ರಜೆಯಲ್ಲಿ ನೀವೆಲ್ಲರೂ ನನ್ನ ಜೊತೆ ನಮ್ಮ ಊರಿಗೆ ಬನ್ನಿ. ನಮ್ಮ ಅಜ್ಜಿ ತಾತನಿಗೂ ಬಹಳ ಸಂತೋಷವಾಗುತ್ತದೆ. ಮಧುಕೇಶ್ವರ ದೇವಾಲಯ, ಗುಡ್ನಾಪುರ ಸರೋವರ, ರಾಣಿ ಮಹಲ್ ಮುಂತಾದ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳೂ ಇವೆ. ಮೇಷ್ಟ್ರು: ಹಾಗೇ ಆಗಲಿ ಮೋಹನ, ನಾನು ಪ್ರಾಂಶುಪಾಲರ ಜೊತೆ ಮಾತನಾಡಿ ಈ ವರ್ಷದ ಶೈಕ್ಷಣಿಕ‌ ಪ್ರವಾಸವನ್ನು ಬನವಾಸಿಗೇ ಏಪರ್ಡಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಆ ಮಹಾನ್ ಕವಿಯ ಊರನ್ನು ಎಲ್ಲರೂ ದರ್ಶಿಸಿದಂತಾಗುತ್ತದೆ. (ಅಷ್ಟರಲ್ಲಿ ಅವಧಿ ಮುಗಿದ ಗಂಟೆ ಬಾರಿಸುತ್ತದೆ. ಗುರುಗಳು ತರಗತಿಯಿಂದ ಹೊರಗೆ ನಡೆಯುತ್ತಾರೆ. ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು “ಧನ್ಯವಾದಗಳು ಗುರುಗಳೇ” ಎಂದು ವಂದಿಸುತ್ತಾರೆ ಅರುಣಾ ರಾವ್

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ” Read Post »

ಕಥಾಗುಚ್ಛ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ

ಕಥಾ ಸಂಗಾತಿ ದಯಾನಂದ ಪಾಟೀಲರ “ಹೆತ್ತಪ್ಪನ ಕೂಗು…..”   ಅದೊಂದು  ಸಣ್ಣ ಹಳ್ಳಿ ಶಿವಳ್ಳಿ ಸುಂದರ ಹಾಗೂ ಹಸಿರು ತುಂಬಿದ  ವನ ಸಿರಿ. ಕೋಗಿಲೆಯ ಇಂಪು ಪಕ್ಷಿಗಳ ಕೂಗು ನವಿಲುಗಳ ಕುಣಿತ ಹೀಗೆ ಹೇಳುತ್ತಾ ಹೋದರೆ ಕೊನೆಯೆ ಇಲ್ಲ. ಶಿವಳ್ಳಿ ಗ್ರಾಮದ ಮುಖಂಡ ಅವನೇ ಶಿವಲಿಂಗ ಹೆಸರಿಗೆ ತಕ್ಕಂತೆ ಇದ್ದ ಯಾವುದೇ ಸಮಸ್ಯೆ ಇರಲಿ ಪರಿಹಾರ  ಸಿಗುವತನಕ  ಹಠ ಬಿಡುತ್ತಿರಲಿಲ್ಲ ಇವನ ನಿಸ್ವಾರ್ಥ ಸೇವೆ ಕಂಡು ದೇವತಾ ಮನುಷ್ಯ ಎಂದು ಕರೆಯುತ್ತಿದ್ದರು. ಜಾತಿ ಧರ್ಮ ನೋಡದೇ ಸಾವು ನೋವು, ಮದುವೆ ಮನೆಯ ವಾಸ್ತು ಶಾಂತಿ ಎಲ್ಲವನ್ನು ಹೆಗಲು ಮೇಲೆ ಇಟ್ಟುಕೊಂಡು ಪೂರ್ಣ ಮಾಡುತ್ತಿದ್ದ ಕೆಲಸದ ವೈಖರಿ ನೋಡಿ ಹತ್ತಳ್ಳಿಗೆ ಜನಪ್ರಿಯನಾಗಿದ್ದ ಶಿವಲಿಂಗನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು ಇದ್ದರು. ಇಬ್ಬರು ಮಕ್ಕಳಿಗೆ ತಕ್ಕಮಟ್ಟಿಗೆ ಶಿಕ್ಷಣ ಪಡೆದಿದ್ದರೂ ನೂರಾರು ಏಕರೆ ಗದ್ದೆ ಇರುವುದರಿಂದ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸಂತೋಷ ಕಂಡಿದ್ದರು. ತಂದೆಗೆ ಮಕ್ಕಳ ದುಡಿಮೆ ನೋಡಿ ಹೆಮ್ಮೆ ಹಾಗೂ ಅಭಿಮಾನ ಪಡುತ್ತಿದ್ದರು. ಮಕ್ಕಳು ದೊಡ್ಡವರಾದರು. ಮಕ್ಕಳಿಗೆ ಮದುವೆ ಮಾಡಿದರು ಕೆಲವು ವರುಷಗಳ ನಂತರ ಮಕ್ಕಳಿಗೆ ಮಕ್ಕಳು ಹುಟ್ಟಿದವು. ಮೊಮ್ಮಕ್ಕಳನ್ನು ಎತ್ತಿಕೊಂಡು ಆನಂದದ ಕ್ಷಣ ಅನುಭವಿಸುತ್ತಿದ್ದ ಶಿವಲಿಂಗ ಒಂದು ಕಡೆ ಗ್ರಾಮಸ್ಥರ ಪ್ರೀತಿ ಮತ್ತೊಂದು ಕಡೆ ಮಕ್ಕಳ ಮಮತೆ ಆಕಾಶಕ್ಕೆ ಎರಡೇ ಎರಡು ಗೇಣು ಎಂಬ ಭಾವನೆ ಅಡಕವಾಗಿತ್ತು. ತನ್ನ ಹೆಂಡತಿ ರಾಮಕ್ಕ ದೈವಭಕ್ತೆ ಗಂಡನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನು ಮಾಡುತ್ತಿದ್ದಳು. ಮಕ್ಕಳಿಗೆ ತಾಯಿಯಾಗಿ ಮೊಮ್ಮಕ್ಕಳಿಗೆ ಅಜ್ಜಿಯಾಗಿ ಮನೆತನದ ಆಗು ಹೋಗುಗಳನ್ನು ತಾನೇ ಯಜಮಾನಿಯಾಗಿ ತೊಂದರೆಯಾಗದಂತೆ ಸಮಸ್ಯೆಗೆ ಮದ್ದು ನೀಡುವ ಕಲೆ ರಾಮಕ್ಕನಿಗೆ ಒಲಿದು ಬಂದಿತು. ಶಿವಲಿಂಗ ರಾಮಕ್ಕ ಜೋಡಿ ನೋಡಿ ಜನ ಇದ್ದರ ಇಂಗ ಇರಬೇಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಆ ಸ೦ತೋಷ ಬಹಳ ದಿನ ಉಳಿಯಲಿಲ್ಲ ರಾಮಕ್ಕನ ಆಕಾಲಿಕ ಸಾವು ಶಿವಲಿಂಗನಿಗೆ ಆಘಾತ ಜೊತೆ ಬರಸಿಡಿಲು ಕಂಡು ಎದೆ ಹೊಡೆದು ಹೋಗಿತ್ತು. ನನ್ನ ಬಾಳಿಗೆ ನೆರಳಾಗಿ ಬಂದ ಹೆಂಡತಿ ಸತ್ತು ಹೋದಳು ನಾನು ಇಂದು ಅನಾಥನಾದೆ ಬಿಕ್ಕಿ ಬಿಕ್ಕಿ ಅತ್ತ ಆದರೆ ಏನು? ಮಾಡೋದು ಸತ್ತವರು ಮರಳಿ ಬರುವುದಿಲ್ಲ. ರಾಮಕ್ಕನ ಪ್ರೀತಿ ಮುಗ್ಧತೆ ಕಂಡು ಅದೇ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದ. ಮಕ್ಕಳು ಸೊಸೆಂದಿರು ಮನೆಗೊಂದು ಮೂರು ಬಾಗಿಲು ಎಂಬಂತೆ ಬೇರೆ ಬೇರೆಯಾದರು ಶಿವಲಿಂಗ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆದ.  ತಾನು ಇಂದು ದಿಕ್ಕು ಇಲ್ಲದ ಬಿಕಾರಿಯಾಗಿ ನಿಂತಿದ್ದಾನೆ. ಸೊಸೆಂದಿರು ಊಟದಲ್ಲಿ ಸಹ ಪಾಲು ಮಾಡಿಕೊಂಡಿದ್ದಾರೆ ಮುಂಜಾನೆ ಒಬ್ಬರು ರಾತ್ರಿ ಒಬ್ಬರು ಮಕ್ಕಳು ಶಿವಲಿಂಗನನ್ನು ಪಾಲು ಮಾಡಿದ್ದರು ಇದೆಂಥ ಪರಿಸ್ಥಿತಿ ಬಂತು ನಾಯಿಕ್ಕಿಂತ ಕಡೆ,  ಆಸ್ತಿ ಪಾಸ್ತಿ ಮಾಡಿ ಮಕ್ಕಳನ್ನು ಮುದ್ದಾಗಿ ಬೆಳೆಸಿ ಇಂದು ಮಕ್ಕಳು ಬೀದಿಗೆ ತಳ್ಳಿದರು ಇಂಥ ನಾಯಿ ಬದುಕು ಯಾರಿಗೂ ಬರುವುದು ಬೇಡ ಆಕಾಶ ಕಡೆಗೆ ನೋಡುತ್ತಾನೆ. ತಂದೆ ತಾಯಿಗಳು ಹತ್ತು ಮಕ್ಕಳನ್ನು ಪೋಷಣೆ ಮಾಡುತ್ತಾರೆ.  ಆದರೆ ಮಕ್ಕಳಿಗೆ ತಂದೆ ತಾಯಿ ಭಾರ ಎಂದು ವೃದ್ಧಾಶ್ರಮಕ್ಕೆ ಹಾಗೂ ಮನೆಯಿಂದ ಹೊರಗೆ ಹಾಕುತ್ತಾರೆ. ಶಿವಲಿಂಗನ ತಲೆಯಲ್ಲಿ ಓಡುವ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ತಾನು ನಿಂತ ಭೂಮಿ ಬಾಯಿ ತೆರೆದು ಬಾ…ಬಾ ಎಂದು ಕರೆಯುತ್ತಿದೆ. ತಂದೆಯೆಂದರೆ ಸ್ವಾಭಿಮಾನಿ ತಂದೆಯಂದರೆ ಹಠವಾದಿ ದಯಾಮಾಯಿ ಎಂದು ಕರೆಯುವ ನಾವು ಇದೇ ನಾ ನಾವು ನೀಡುವ ಕೊಡುಗೆ ನಾ ? ಇದ್ದಾಗ  ಆಹಾರ  ಆಶ್ರಯ ನೀಡದೇ ಪ್ರೀತಿ ಮಾನವೀಯತೆ ಮಾಡದೇ ಹಣ ಅಧಿಕಾರ ಗಳಿಕೆ ಮಾಡಿದರೆ ಏನು? ಉಪಯೋಗ ಹೇಳಿ? ಕಾಲ ಚಕ್ರ ಹೀಗೆ ತಿರುಗುತ್ತ ಇರುತ್ತದೆ. ಇಂಥ ಘಟನೆಗಳಿಗೆ ಕೊನೆ ಇಲ್ಲವೆ? ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ Read Post »

ಕಾವ್ಯಯಾನ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ”

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದೆ ಹೋಗಲು ದಾರಿ ಬಿಡಿ” ಬಾನಂಗಳದಿ ಸ್ವಚ್ಚಂದವಾಗಿ ಹಾರಲು ಹೊದರೆ ರೆಕ್ಕೆ ಕತ್ತರಿಸಿ ಬಿಡುವಿರಿ ಮನಸಾರೆ ಈಜಲು  ಹೋದರೆಜಲದಾಳದಲ್ಲೆ ಸಿಡಿಮದ್ದು ಸಿಡಿಸುವಿರಿ  ನೆಲೆದಗಲ  ಹಬ್ಬಲು ಹೋದರೆ ಅಡ್ಡ ಬೇಲಿ ಹಾಕಿ ತಡೆಯುವಿರಿ ಬೆಳೆದು ಹೆಮ್ಮರವಾಗಲು ಹೋದರೆಬುಡಕ್ಕೆ ಬೆಂಕಿ ಹಚ್ಚುವಿರಿಅ  ಅಡೆತಡೆಯಿಲ್ಲದೆ ಓಡಬೇಕೆಂದರೆಗಡಿರೇಖೆ ಹಾಕಿ ನಿಲ್ಲಿಸಿಬಿಡುವಿರಿ ಹೀಗಾದರೆ ನಾವು ನೆಲೆ ಕಾಣುವುದು ಹೇಗೆ? ಬದುಕಿನ ಗುರಿ ಸಾಧಿಸುವುದಾದರೂ  ಹೇಗೆ ವಿಶ್ವಮಾನವನಾಗುವದಿರಲಿಮಾನವತೆಯುಳ್ಳ ಮನುಷ್ಯನಾಗಲಾದರೂನಮ್ಮನ್ನು ಬಿಟ್ಟು ಬಿಡಿ ,ಬಿಟ್ಟು ಬಿಡಿ ಲಕ್ಷ್ಮೀದೇವಿ ಪತ್ತಾರ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ” Read Post »

ಇತರೆ

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ

ಗೃಹ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು” ಮನಸ್ಸಿನಲ್ಲಿ ಅತ್ಯಂತ ಗೊಂದಲವನ್ನು ಮೂಡಿಸಿ ಒಂದು ಬಗೆಯ ವಿಷಣ್ಣತೆಯನ್ನು ತುಂಬಿದ ಒಂದು ಪೋಸ್ಟ್ ಮುಖ ಪುಸ್ತಕದ ಪುಟದಲ್ಲಿ ಓದಿದೆ.ವಿಷಯ ಇಷ್ಟೇ ಕರ್ನಾಟಕದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಚಿಲಕೂರು ಸುಮಲತಾ ಅವರು ವಿವಾಹಿತ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದವರಿಂದ ಗೃಹ ಕೃತ್ಯಗಳನ್ನು ಮಾಡಲೇಬೇಕು ಎಂಬ ಒತ್ತಾಯವನ್ನು ಹಾಗೂ ಪತಿಯ ತಂದೆ ತಾಯಿ ಹಾಗೂ ಕುಟುಂಬದ ಸರ್ವ ಸದಸ್ಯರ ಎಲ್ಲ ರೀತಿಯ ಕಾಳಜಿ ಮಾಡಬೇಕು ಎಂಬ ವಾದವನ್ನು ತಳ್ಳಿ ಹಾಕಿದೆ.ತಮ್ಮ ಪಾಲಕರ ಕಾಳಜಿಯನ್ನು ಮಾಡುವುದು ಅವರ ಗಂಡು ಹಾಗೂ ಹೆಣ್ಣು ಮಕ್ಕಳ ಮೊದಲ ಕರ್ತವ್ಯವಾಗಿರುತ್ತದೆಯೇ ಹೊರತು ಸೊಸೆ ಇಲ್ಲವೇ ಅಳಿಯನ ಕೆಲಸವಲ್ಲ… ಅಂತಹ ಕಾಳಜಿಯನ್ನು ಅವರು ತಾವೇ ಸ್ವಯಂ ಇಚ್ಛಾ ಪೂರ್ವಕವಾಗಿ ಮಾಡುತ್ತಿದ್ದರೆ ಪರವಾಗಿಲ್ಲ ಆದರೆ ಈ ಕುರಿತು ಅವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಹೇರುವುದು ತಪ್ಪು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.ಮುಂದುವರಿಸಿದ ನ್ಯಾಯಮೂರ್ತಿ ಸುಮಲತಾ ಅವರು ವಿವಾಹ ಎಂಬ ಪ್ರಕ್ರಿಯೆಯು ಸಂಗಾತಿಯನ್ನು ನಿಯಂತ್ರಿಸುವ ಅಥವಾ ಅವರ ಮೇಲೆ ಅಧಿಕಾರ ಚಲಾಯಿಸುವ, ಅವರ ವ್ಯಕ್ತಿತ್ವಕ್ಕೆ ಕುಂದು ತರುವ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ   ಲೈಸೆನ್ಸ್ ಅಲ್ಲ. ಈ ಕುರಿತು ಯಾರೊಬ್ಬರೂ ತಮ್ಮ ಸಂಗಾತಿಯನ್ನು ಒತ್ತಾಯ ಪಡಿಸಬಾರದು ಎಂದು ತಮ್ಮ ತೀರ್ಪಿನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹೆಣ್ಣು ಮಕ್ಕಳು ತಮ್ಮ ಪಾಲಕರನ್ನು ಭೇಟಿಯಾಗುವುದಕ್ಕೆ ಪತಿಯ ಇಲ್ಲವೇ ಗಂಡನ ಮನೆಯವರ ಅನುಮತಿಯ ಅವಶ್ಯಕತೆ ಇಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ತನ್ನಿಂದ ದೂರವಾದ ಪತ್ನಿ ಮತ್ತು ಮಗಳ ಮುಂದಿನ ಬದುಕನ್ನು ನಿರ್ವಹಿಸಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು ಕೊಡಲು ನಿರಾಕರಿಸಿ ಆಕೆಯ ಪತಿ ಹಾಕಿದ ಪಿಟಿಶನ್ ಅರ್ಜಿಯನ್ನು ತಿರಸ್ಕರಿಸಿದ ಈ ಮಾತನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ.ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸಾಕಷ್ಟು ಮನನೊಂದ ಮಹಿಳೆಯರು ಸ್ವಾಗತಿಸಿದ್ದಾರೆ. ಆದರೆ ಬಹಳಷ್ಟು ಜನ ಹಿರಿಯ ಜೀವಿಗಳು ಭಾರತೀಯ ಸಂಪ್ರದಾಯಕ್ಕೆ ವಿರೋಧವಾದ ಈ ಮನಸ್ಥಿತಿಯನ್ನು ಖಂಡಿಸಿದ್ದಾರೆ. ಹಾಗಾದರೆ ಮದುವೆಯಾಗುವುದರ ಅವಶ್ಯಕತೆಯಾದರೂ ಏನಿದೆ ಎಂದು ಕೆಲ ಯುವಕರು ಹಾಗೂ ಅವರ ಹೆತ್ತವರು ಪ್ರಶ್ನಿಸಿದ್ದಾರೆ.ಮತ್ತೆ ಕೆಲ ಗಂಡಸರ ಮಾತುಕತೆ ವಾದಗಳನ್ನು ನೋಡಿದಾಗ ಅವರ ವೈವಾಹಿಕ ಬದುಕಿನ ಮುಖ್ಯ ಉದ್ದೇಶ ಓರ್ವ ಪುಕ್ಕಟೆ ಕೆಲಸದ ಹೆಣ್ಣು ಮಗಳನ್ನು ಪಡೆಯುವುದು ಆಗಿದೆ ಎಂಬಂತೆ ತೋರುತ್ತದೆ. ಅವರ ಪ್ರಕಾರ ಮದುವೆ ಎಂದರೆ ಪರಸ್ಪರ ಒಪ್ಪಿ ವಿವಾಹವಾದ ಗಂಡು ಹೆಣ್ಣಿನ ನಡುವಿನ ಸಾಂಗತ್ಯ, ಜೊತೆಗಾರಿಕೆ, ಪರಸ್ಪರ ಗೌರವ ಮತ್ತು ಒಟ್ಟಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಎಂಬ ಅರಿವು ಇಲ್ಲವೇ ಇಲ್ಲ. ಹಿರಿಯರು ನೋಡಿ ಮಾಡುವ ಅರೇಂಜ್ಡ್  ಮ್ಯಾರೇಜ್ ನಂತಹ ವೈವಾಹಿಕ ಸಂಬಂಧಗಳಲ್ಲಿ ವಿವಾಹಕ್ಕೆ ಗಳಿಸುವ ವಧು ಮತ್ತು ವರರು ಪರಸ್ಪರ ಭೇಟಿಯಾಗುವುದು, ಅರಿತುಕೊಳ್ಳುವುದು ಹಾಗೂ ತಮ್ಮ ಜೊತೆ ಬದುಕು ಕಟ್ಟಿಕೊಂಡು ಸುಖವಾಗಿ ಸಂಸಾರ ಮಾಡಬೇಕಾದ ಕುರಿತು ಯಾವುದೇ ಮಾತುಕತೆಗಳು ಇರುವುದಿಲ್ಲ.. ಇದರಿಂದಾಗಿ ಗಂಡು ಹುಡುಗರ ಮನದ ಮಾತುಗಳು ಅಲ್ಲಿಯೇ ಮುಚ್ಚಿ ಹೋದರೆ ಹೆಣ್ಣು ಮಕ್ಕಳು ಕೂಡ ಇದರಿಂದ ಹೊರತಾಗುವುದಿಲ್ಲ.ಅಕಸ್ಮಾತ್ ಮೊದಲ ಭೇಟಿಯಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ನೀನೆ ಮಾಡಬೇಕು, ನನ್ನ ಪಾಲಕರ ಜವಾಬ್ದಾರಿಯೂ ನಿನ್ನದೇ ಎಂದು ಹುಡುಗನೇನಾದರೂ ಹೇಳಿದರೆ ಖಂಡಿತವಾಗಿಯೂ ಆಕೆ ಒಪ್ಪುವುದಿಲ್ಲ. ಬದಲಾಗಿ ತನ್ನ ಕುಟುಂಬವನ್ನು ಒಪ್ಪವಾಗಿಸುವ ತನ್ನ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ತನ್ನ ಜವಾಬ್ದಾರಿಯಲ್ಲಿ ಒಂದಷ್ಟು ಪಾಲನ್ನು ನೀನು ಹೊತ್ತುಕೋ ಎಂದು ಹೇಳಿದರೆ ಭಾರತೀಯ ಸಮಾಜದ ರೀತಿ ನೀತಿಗಳನ್ನು ಸಹಜವಾಗಿ ಆಕೆ ಒಪ್ಪಿಕೊಳ್ಳುತ್ತಾಳೆ.ಆದರೆ ಅದೇ ಹೆಣ್ಣು ಮಗಳಿಗೆ ಕೊಂಚ ಸ್ವಾತಂತ್ರವಿದ್ದು ಆಕೆ ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು  ಒಡನಾಡುವ ಅವಕಾಶ ದೊರೆತರೆ ಆಕೆ ಸಾಮಾಜಿಕ ಒತ್ತಡದ ಅಡಿಯಲ್ಲಿ ನರಳಲು ಇಚ್ಚಿಸದೆ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ತನಗೆ ಒದಗಿ ಬಂದ ಸಂಬಂಧವನ್ನು ಒಪ್ಪದೆ ಹೋಗಬಹುದುಸಾಮಾಜಿಕ ಒತ್ತಡ ಇಲ್ಲದ ಹೊರತು ಪಿತೃ ಸತ್ತಾತ್ಮಕವಾಗಿ ನಡೆದು ಬಂದ ಯೋಚನೆಯನ್ನು ಈಗಾಗಲೇ ಬಹುತೇಕ ಹೆಣ್ಣು ಮಕ್ಕಳ ತಿರಸ್ಕರಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೆ ಕೊಟ್ಟರೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ತಮ್ಮ ಪಾಲಕರ ಊಟ ಉಪಚಾರ ಆರೋಗ್ಯ ಹೀಗೆ ಎಲ್ಲವನ್ನು ನೋಡಿಕೊಳ್ಳಲು… ಅದೂ 24/7  ರಜೆ ಹಾಕದೆ ಪುಕ್ಕಟೆ ದುಡಿಯುವವರು ಎಲ್ಲಿ ಸಿಕ್ಕಬೇಕು ಎಂಬ ಆತಂಕ ಗಂಡು ಹುಡುಗರಲ್ಲಿ ಇದ್ದರೆ ಅವರ ಪಾಲಕರು ಭಾರತೀಯ ಸಂಸ್ಕೃತಿಯನ್ನು ಜನರು ಮರೆಯುತ್ತಿದ್ದಾರೆ ಎಂದು ಸಾರಾಸಗಟಾಗಿ ಎಲ್ಲರನ್ನು ಬೈಯುತ್ತಿದ್ದಾರೆ. ಪಿತೃಸತ್ತಾತ್ಮಕ ಯೋಚನೆಗಳು ಸದಾ ಪುರುಷ ಅಹಂಕಾರವನ್ನು ಹೆಚ್ಚಿಸುವಲ್ಲಿ ಆತನ ಮೇಲರಿಮೆಯನ್ನು ಪೋಷಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಕೂಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಂಡಿದ್ದು ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತಾವೇ ಕೈಗೊಳ್ಳುವಷ್ಟು ಸದೃಢರಾಗಿದ್ದಾರೆ. ಅಂತೆಯೇ ಇದೀಗ ಅವರ ಮೇಲೆ ಪ್ರೀತಿಯ ಒತ್ತಾಸೆ ಮಾಡಬಹುದೇ ಹೊರತು ಕಡಿವಾಣದ ನಿಯಂತ್ರಣ ಸಾಧ್ಯವಿಲ್ಲ. ಬಹುಶಃ ಇದನ್ನೇ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಹೇಳಬಹುದು. ಆಲ್ವೇ ಸ್ನೇಹಿತರೆ?  ವೀಣಾ ಹೇಮಂತ್ ಗೌಡ ಪಾಟೀಲ್ 

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ, ಜೀವನ

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ

ಅರಿವಿನ ಸಂಗಾತಿ ವನಜಾ ಮಹಾಲಿಂಗಯ್ಯ “ಅರಿವಿನ ಪರಿಧಿ” ಅರಿವು ಎಂದರೆ ಬೆಳಕಿದ್ದಂತೆ. ಆದರೆ ನಾವು ಸಾಮಾನ್ಯವಾಗಿ ಬೆಳಕಿನಲ್ಲಿ ಕಾಣುವ ವಸ್ತುಗಳನ್ನೇ ನೋಡುತ್ತೇವೆ, ಬೆಳಕಿನ ಮೂಲವನ್ನಲ್ಲ.     ನಮ್ಮ ಬದುಕಿನ ಬಹುಪಾಲು ಭಾಗ ನಾವು “ತಿಳಿದಿದ್ದೇವೆ” ಎಂದುಕೊಂಡಿರುವುದರೊಳಗೇ ನಡೆಯುತ್ತದೆ. ಇದಕ್ಕೆ ನಾವು ಜ್ಞಾನ ಎನ್ನುತ್ತೇವೆ. ಪದವಿ, ಉದ್ಯೋಗ, ಸಂಬಂಧ, ಊರು – ಇವೆಲ್ಲಾ ನಮ್ಮ ಅರಿವಿನ ಕೇಂದ್ರಬಿಂದು.     ಆದರೆ ನಿಜವಾದ ಬೆಳವಣಿಗೆ ನಡೆಯುವುದು ಕೇಂದ್ರದಲ್ಲಲ್ಲ, ಪರಿಧಿಯಲ್ಲಿ.   “ಪರಿಧಿ ಎಂದರೇನು?”1.  ನಮಗೆ ಗೊತ್ತಿಲ್ಲ ಎಂದು ಗೊತ್ತಿರುವುದು:ಇದು ಪರಿಧಿಯ ಮೊದಲ ಹಂತ. “ನನಗೆ ವಚನ ಸಾಹಿತ್ಯದ ಆಳ ಗೊತ್ತಿಲ್ಲ” ಎಂದು ಒಪ್ಪಿಕೊಳ್ಳುವುದು. ಇಲ್ಲಿ ವಿನಯ ಹುಟ್ಟುತ್ತದೆ.2.  ನಮಗೆ ಗೊತ್ತೇ ಇಲ್ಲ ಎಂದು ಗೊತ್ತಿಲ್ಲದಿರುವುದು: ಇದು ಅತಿ ದೊಡ್ಡ ಪರಿಧಿ. ನಮ್ಮ ಅಹಂ, ನಮ್ಮ ಪೂರ್ವಗ್ರಹ, ನಾವು ದಿನಾ ಮಾಡುವ ಸಣ್ಣ ಸುಳ್ಳುಗಳು – ಇವು ನಮಗೆ ಕಾಣುವುದೇ ಇಲ್ಲ. ಆದರೆ ಇವೇ ನಮ್ಮನ್ನು ನಡೆಸುತ್ತಿರುತ್ತವೆ. ಬಸವಣ್ಣನವರು ಇದನ್ನೇ “ಅಂತರಂಗದ ಅರಿವು” ಎಂದರು.ಪರಿಧಿ ವಿಸ್ತಾರವಾದಷ್ಟೂ ಕೇಂದ್ರ ಚಿಕ್ಕದಾಗುತ್ತದೆ. ನಾನು ದೊಡ್ಡವನು ಎನ್ನುವ ಭಾವ ಕರಗುತ್ತದೆ. “ಪರಿಧಿಯನ್ನು ಹೇಗೆ ವಿಸ್ತರಿಸುವುದು?”          ಪುಸ್ತಕ ಓದುವುದರಿಂದ ಮಾತ್ರವಲ್ಲ. ಮೂರು ಅಭ್ಯಾಸಗಳಿಂದ:          1. ಕೇಳುವುದು:   ವಾದ ಮಾಡಲು ಅಲ್ಲ, ಅರ್ಥ ಮಾಡಿಕೊಳ್ಳಲು ಕೇಳುವುದು. ಎದುರಿನವರು ನಮ್ಮ ವಿರೋಧಿಯಲ್ಲ, ನಮ್ಮ ಪರಿಧಿಯನ್ನು ತೋರಿಸುವ ಕನ್ನಡಿ.         2. ಸುಮ್ಮನಿರುವುದು:  ದಿನಕ್ಕೆ 10 ನಿಮಿಷವಾದರೂ ಮಾತು, ಮೊಬೈಲ್, ಆಲೋಚನೆ ಇಲ್ಲದೆ ಸುಮ್ಮನಿರುವುದು. ಆಗ ಪರಿಧಿಯಲ್ಲಿರುವ ಸೂಕ್ಷ್ಮ ಸದ್ದುಗಳು ಕೇಳಿಸುತ್ತವೆ. 3. ಅನುಮಾನಿಸುವುದು:   ನಮ್ಮ ಅತ್ಯಂತ ಖಚಿತವಾದ ನಂಬಿಕೆಯನ್ನೇ ಒಂದು ದಿನ “ಇದು ತಪ್ಪಾಗಿರಬಹುದೇ?” ಎಂದು ಕೇಳಿಕೊಳ್ಳುವುದು. ಇದೇ ಬಸವ ತತ್ವದ ಪೂರ್ಣ ಕ್ರಾಂತಿ. ಬಸವಣ್ಣನವರು ಹೇಳಿದರು – “ಅರಿವೇ ಗುರು”. ಅರಿವು ಎಂದರೆ ಮಾಹಿತಿಯ ರಾಶಿಯಲ್ಲ. ಅದು ನನ್ನ ಮಿತಿಯನ್ನು ನಾನೇ ನೋಡುವ ಬೆಳಕು.ಕೇಂದ್ರದಲ್ಲಿ ಬದುಕುವವನು ಸುರಕ್ಷಿತ. ಪರಿಧಿಯಲ್ಲಿ ಬದುಕುವವನು ಜೀವಂತ. ವನಜಾ ಮಹಾಲಿಂಗಯ್ಯ ಮಾದಾಪುರ.

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ Read Post »

ಕಾವ್ಯಯಾನ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ

ಕಾವ್ಯ ಸಂಗಾತಿ ಪೃಥ್ವಿರಾಜ್ ಟಿ ಬಿ ನಿನ್ನನ್ನು ಪ್ರೀತಿಸುವುದಕ್ಕಿಂತ… ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದುಪದಗಳಲ್ಲಿ ಹೇಳಲು ನನಗೆ ಬರುವುದಿಲ್ಲ…ಆದರೆ ಒಂದು ಸತ್ಯ ಮಾತ್ರ ಹೇಳಬಲ್ಲೆ—ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ,ನಿನ್ನನ್ನು ಗೌರವಿಸುತ್ತೇನೆ. ನಿನ್ನ ಕೆನ್ನೆಯನ್ನು ಮುಟ್ಟುವ ಆಸೆಗಿಂತ,ನಿನ್ನ ಮನಸ್ಸನ್ನು ನೋಯಿಸದಿರಬೇಕೆಂಬ ಭಯ ನನಗೆ ಹೆಚ್ಚು… ನಿನ್ನ ಕೈ ಹಿಡಿಯುವ ಹಕ್ಕಿಗಿಂತ,ಆ ಕೈಯನ್ನು ಜೀವನಪೂರ್ತಿಗೌರವದಿಂದ ಹಿಡಿದು ನಡೆಯುವ ಆಸೆ ನನಗೆ ಹೆಚ್ಚು… ನಿನ್ನ ಕಣ್ಣಲ್ಲಿ ಕಣ್ಣಿಟ್ಟು“ನೀನು ನನ್ನವಳು” ಎನ್ನುವುದಕ್ಕಿಂತ,ನಿನ್ನ ಕಣ್ಣಲ್ಲಿ ಒಂದೇ ಒಂದು ಕಣ್ಣೀರು ಬಂದರೂ“ಅದಕ್ಕೆ ಕಾರಣ ನಾನು ಆಗಬಾರದು”ಎಂಬುದೇ ನನ್ನ ಪ್ರಾರ್ಥನೆ… ನಿನ್ನ ಕೆನ್ನೆಗೆ ಮುತ್ತಿಡುವುದುನನ್ನ ಪ್ರೀತಿಯ ಒಂದು ಸಣ್ಣ ಭಾಗ ಮಾತ್ರ…ಆದರೆ ನಿನ್ನ ಪಾದಕ್ಕೆ ಮುತ್ತಿಟ್ಟು“ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ”ಎಂದು ಹೇಳಲು ನಾನು ಸಿದ್ಧ. ನಿನ್ನ ಸೌಂದರ್ಯಕ್ಕೆ ಮಾತ್ರ ನಾನು ಮಾರುಹೋಗಿಲ್ಲ…ನಿನ್ನ ನಗು, ನಿನ್ನ ಮಾತು,ನಿನ್ನ ಕೋಪ, ನಿನ್ನ ಮೌನ,ನಿನ್ನ ಒಳ್ಳೆಯತನ, ನಿನ್ನ ಸಣ್ಣ ಸಣ್ಣ ಹಠಗಳು—ಇವೆಲ್ಲವನ್ನೂ ಸೇರಿಸಿಕೊಂಡುನಿನ್ನನ್ನೇ ಪ್ರೀತಿಸಿದ್ದೇನೆ. ನಾಳೆ ನಿನ್ನ ಸೌಂದರ್ಯ ಬದಲಾಗಬಹುದು,ಕಾಲ ನಿನ್ನ ಕೂದಲಲ್ಲಿ ಬೆಳ್ಳಿಯನ್ನು ತುಂಬಬಹುದು…ಆದರೆ ನನ್ನ ಕಣ್ಣಲ್ಲಿನೀನು ಆಗಲೂ ಇದೇ ಹುಡುಗಿ—ನನ್ನ ಹೃದಯಕ್ಕೆ ಒಮ್ಮೆ ಬಂದವಳು,ಮತ್ತೆಂದೂ ಹೊರಗೆ ಹೋಗದವಳು. ನಿನ್ನನ್ನು ಪಡೆಯಬೇಕು ಎಂಬ ಆಸೆಗಿಂತನಿನ್ನನ್ನು ಕಳೆದುಕೊಳ್ಳಬಾರದು ಎಂಬ ಭಯವೇ ಹೆಚ್ಚು… ನಿನ್ನ ಜೊತೆ ಜೀವನ ಕಳೆಯಬೇಕು ಎಂಬ ಕನಸಿಗಿಂತ,ನಿನ್ನ ಜೀವನದಲ್ಲಿಒಳ್ಳೆಯ ಮನುಷ್ಯನಾಗಿ ಉಳಿಯಬೇಕುಎಂಬ ಆಸೆ ನನಗೆ ಹೆಚ್ಚು. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ…ನನ್ನ ಬದುಕಿನಲ್ಲಿ ನೀನು ಸಿಕ್ಕೆ. ಆದರೆ ಈ ಜನ್ಮದಲ್ಲಿನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎನ್ನುವುದಕ್ಕಿಂತಒಂದು ಮಾತು ಮಾತ್ರ ನಿನಗೆ ಕೊಡುವೆ— ನಿನ್ನನ್ನು ನನ್ನ ಪ್ರೀತಿಯಿಂದ ಬಂಧಿಸುವುದಿಲ್ಲ,ನನ್ನ ಗೌರವದಿಂದ ಕಾಪಾಡುತ್ತೇನೆ. ನೀನು ನನ್ನ ಕೈ ಹಿಡಿದರೆಅದನ್ನು ಎಂದಿಗೂ ಬಿಡುವುದಿಲ್ಲ…ನೀನು ನನ್ನ ಜೊತೆ ನಡೆದರೆನಿನ್ನ ಹೆಜ್ಜೆಗೆ ಹೆಜ್ಜೆ ಹಾಕುತ್ತೇನೆ…ಒಂದು ದಿನ ನೀನು ಹಿಂದೆ ತಿರುಗಿ ನೋಡಿದಾಗ,“ನನ್ನನ್ನು ಇಷ್ಟು ಪ್ರೀತಿಸಿದವನುನನ್ನ ಜೀವನದಲ್ಲಿ ಇದ್ದ”ಎಂಬ ನೆನಪು ನಿನ್ನ ಕಣ್ಣಂಚಿನಲ್ಲಿಒಂದು ಸಣ್ಣ ಕಣ್ಣೀರಾಗಿಯಾದರೂ ಉಳಿದರೆ… ಅದೇ ನನ್ನ ಪ್ರೀತಿಯ ಗೆಲುವು.  ಪೃಥ್ವಿರಾಜ್ ಟಿ ಬಿ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ Read Post »

You cannot copy content of this page

Scroll to Top