ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ
“ನಿಸರ್ಗದಲ್ಲೊಂದು ಮನೆ.”


ಊರ ಹೊರಗೊಂದು ಮನೆಯ ಕಟ್ಟಿಸಿ
ನೆರೆ ಹೊರೆಗಳಿಂದ ದೂರ ಬೆಟ್ಟ ಸಮೀಪ
ಸುತ್ತಮುತ್ತಲು ಹಸಿರ ಪೈರು ಪಚ್ಚೆಗಳು
ಕಬ್ಬು ಬಾಳೆ ಮಾವು ಬೇವು ಇಲ್ಲಿಹವು.
ಆ ಜನಸಂದಣಿಯಿಂದ ತಪ್ಪಿಸಿಕೊಂಡು
ಬ್ರಾಹ್ಮಿ ಮುಹೂರ್ತದಿ ಎದ್ದು ಆಕಳಿಸುತ
ಹಕ್ಕಿ ಪಕ್ಷಿಗಳ ಸಿಹಿ ಕಲರವ ಅಪ್ಪಿಕೊಂಡು
ಎಷ್ಟೆಲ್ಲ ಜೇನದನಿ ಚಿಲಿಪಿಲಿ ಗಾನ ನಮನ.
ನಿತ್ಯದ ಜಂಜಾಟಗಳು ನೋಡಲು ಸಿಗಲ್ಲ
ಬೆಳಗಿನ ಕಸಬರಿಗೆಯ ಸದ್ದು ಇಲ್ಲವೇ ಇಲ್ಲ
ಗದ್ದೆಯಲಿ ನೀರಿನ ಕಾರಂಜಿಯ ಬುಗ್ಗೆಗಳು
ಮೊಗ್ಗು ಅರಳಿದಂತೆ ಮನಸ್ಸು ಬೀಗುವುದು
ಕುಳಿರ್ಗಾಳಿಯ ಬೆಳಗಿನ ವಾಯು ವಿಹಾರ
ಕಾಡಂಚಿನ ದಿಬ್ಬಣದಿ ನವಿಲುಗಳ ನರ್ತನ
ಸರ್ರನೆ ಏರಿಳಿಯುವ ಅಳಿಲು ಚಮತ್ಕಾರ
ಪಿಳಿಪಿಳಿ ಕಣ್ ಬಿಡುವ ಮೊಲಗಳ ಸತ್ಕಾರ.
ಬನಶಂಕರಿ ತೋಟದಿ ತರೆವಾರಿ ಸಸ್ಯಗಳು
ಬಣ್ಣ ಬಣ್ಣದ ಪುಷ್ಪಗಳ ಘಮ ಪರಿಮಳ
ಹಸಿರ ಹಾಸು ಕೈ ಹಿಡಿದು ನಡೆಸುವುದು
ಮೂಡನದಿ ಬೆಳಕು ಚೆಲ್ಲುವ ಕಿರಣಗಳು.
ಅದೆಷ್ಟು ಹೊತ್ತು ಮೈ ಮರೆತು ಕುಳಿತಿಹೆವು
ಸಮಯ ಸರಿದದ್ದು ತಿಳಿಯದೆ ಹೋದೆವು
ಎಲೆಯ ಮಂಜಿನ ಹನಿಗಳು ಕರಗಿದವು
ನಿಸರ್ಗ ರಮಣೀಯತೆಗೆ ಕಣ್ಮನ ತಣಿದವು
ಜಯಶ್ರೀ.ಭ.ಭಂಡಾರಿ.



