ಧಾರಾವಾಹಿ ಸಂಗಾತಿ-41 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮಕ್ಕಳಿಗೆ ಜನುಮವಿತ್ತು ಮಾತೆ ಎನಿಸಿಕೊಂಡಳು ಸೀತೆ ಲಕ್ಷ್ಮಣನ ಶಿರವದು ಕಣ್ಣಿಂದ ಮರೆಯಾದ ಒಡನೆಯೇ ಬಾಯಾರಿಕೆಯಿಂದ ಕಂಗೆಟ್ಟು ಬಳಲಿದಳು ಸೀತೆ. ಭಯ ಶೋಕಗಳು ಅವಳನ್ನು ಆವರಿಸಿದವು. ಬುಡದಿಂದಲೇ ಕೊಲ್ಲಲ್ಪಟ್ಟ ಬಳ್ಳಿಯಂತೆ ಭೂಮಿಯ ಮೇಲೊರಗಿದಳು ಭೂಮಿಯ ಮಗಳು.ರಾಮಕರುಣೆಗೆ ಈಡಾಗದ ಅವಳ ಮೇಲೆ ಕಾರುಣ್ಯ ಕಣ್ಣೋಟ ಹರಿಸಿದ್ದು ಅಲ್ಲಿದ್ದ ಪಕ್ಷಿ ಪ್ರಾಣಿಗಳು. ಸೀತಾಮಾತೆಯ ಸೋತ ಪರಿಯನ್ನು ಕಂಡ ಮೃಗ- ಖಗಗಳು ಅವಳ ಬಳಿಬಂದವು. ತಮ್ಮ ತಮ್ಮ ವೈರತ್ವವನ್ನೇ ಮರೆತವು. ಆಹಾರ ಬೇಕೆನಿಸಲಿಲ್ಲ ಅವುಗಳಿಗೆ ಆ ಸಮಯಕ್ಕೆ. ಅಲ್ಲಿದ್ದ ಗಿಡ- ಮರ- ಬಳ್ಳಿ- ಕಲ್ಲುಗಳಲ್ಲಿಯೂ ಶೋಕಭಾವ ಮೂಡಿತು. ಒಳ್ಳೆಯ ಗುಣದವಳ ಅಳಿವನ್ನು, ಅಳುವನ್ನು ಸಹಿಸದಾಯಿತು ಅಲ್ಲಿಯ ಪರಿಸರ.ದುಂಬಿಗಳ ನಾದವದು ನಿಂತೇಹೋಯಿತು. ನವಿಲುಗಳ ಕುಣಿತದ ಉತ್ಸಾಹ ಇನ್ನಿಲ್ಲವಾಯಿತು. ಚಕ್ರವಾಕ ಪಕ್ಷಿಗಳಿಗೆ ಬೆರೆಯುವ ಮನಸ್ಸಿಲ್ಲ. ಹಂಸಗಳಿಗೆ ನಡೆಯುವುದರೆಡೆಗೆ ಗಮನವಿಲ್ಲ. ಮೌನವಾದವು ಗಿಳಿಗಳು. ಮೌನಿಗಳಾದವು ಕೋಗಿಲೆಗಳು. ಜಿಂಕೆ. ಆನೆ, ಸಿಂಹ ಇವೆಲ್ಲವೂ ಸೀತೆಯ ಶೋಕಕ್ಕೆ ಸ್ಪಂದಿಸಿದವು, ತಂತಮ್ಮ ರೀತಿಯಲ್ಲಿ.ಪರಿತಾಪದಲ್ಲಿದ್ದ ಸೀತೆಯ ಹೃದಯತಾಪವದು ಅಳಿದುಹೋಗುವಂತೆ ಚಾಮರವ ಬೀಸಿದವು ಚಮರೀ ಮೃಗಗಳು. ಸೀತೆಯ ಕಣ್ಣೀರು ಇನ್ನಿಲ್ಲವಾಗುವಂತೆ ನೀರ ಹನಿಗಳನ್ನು ಚಿಮುಕಿಸಿದವು ನೀರ ಹಕ್ಕಿಗಳು.ಗಂಗಾನದಿಯ ಅಲೆಯ ಮಧ್ಯೆ ಸಿಲುಕಿ ಹೊರಬರದಂತಾಗಿದ್ದರೂ, ಗಂಗೆಯೊಡಲಲ್ಲಿದ್ದ ಕಮಲ ಸುವಾಸನೆಯನ್ನು ಪೂರ್ಣ ಹೊತ್ತು ತರಲಾಗದಿದ್ದರೂ ಸೀತೆಗೆ ಸುಖವನ್ನು ನೀಡಲೇಬೇಕೆಂದು ಬಯಸಿದ ತಂಗಾಳಿಯದು ಗಂಗೆಯ ನೀರಿನ ತಂಪನ್ನು ಹೊಂದಿದ, ಗಂಗೆಯ ಪದುಮ ಗಂಧದಿAದ ಕೂಡಿದ ಗಂಗಾಳಿಯಾಗಿ ಬಂದು ತಲುಪಿತು ಸೀತಾಮಾತೆಯ ಮುಖವನ್ನು, ಮೃದು ಮಧುರ ಭಾವದಲ್ಲಿ ಸ್ಪರುಷಿಸಿ.ಚೇತರಿಸಿಕೊಂಡಳು ಸೀತೆ. ತನಗಿನ್ನು ದಾರಿಯೇನಿದೆ ಎಂದು ಅತ್ತಿತ್ತ ನೋಡಿದಳು. ಶಿಥಿಲವಾಗಿತ್ತು ಅವಳ ಅಂಗಾAಗಗಳು. ಶರೀರವೆಲ್ಲಾ ಧೂಳು ಹಿಡಿದಿತ್ತು. ಮುಡಿ ಬಿಚ್ಚಿಹೋಗಿತ್ತು. ಅದಾವುದೂ ಗಣನೆಗೆ ಬರಲಿಲ್ಲ ಅವಳಿಗೆ ಆ ಕ್ಷಣದಲ್ಲಿ. ಮಿಥಿಲೇಂದ್ರ ವಂಶದಲ್ಲಿ ಜನಿಸಿದ ತಾನು ದಶರಥನ ಸೊಸೆ ಎನಿಸಿಕೊಂಡಿದ್ದರೂ ಈ ಬಗೆಯಲ್ಲಿ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುವಂತಾಯಿತಲ್ಲಾ! ಎಂದು ರೋಧಿಸಿದಳು, ಕಲ್ಲಿನ ಎದೆಯದು ಕರಗುವಂತೆ.ಈ ಕ್ಷಣವೇ ತೊರೆದುಬಿಡುತ್ತೇನೆ ಈ ಪ್ರಾಣವನ್ನು ಎಂಬ ಯೋಚನೆ ಬಂತು ಅವಳಲ್ಲಿ. ಮರುಕ್ಷಣವೇ, ಭ್ರೂಣಹತ್ಯಾದೋಷಕ್ಕೆ ಗುರಿಯಾಗುವ ಅಳುಕು ಅವಳನ್ನು ಕಾಡಿತು. ಹೀಗೆ ಬಗೆಬಗೆಯಲ್ಲಿ ಪ್ರಲಾಪಿಸುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಳು ಪೃಥ್ವಿತನುಜೆ.ಆ ಸಮಯದಲ್ಲಿಯೇ ಯಜ್ಞಕ್ಕೆ ಬೇಕಾದ ಸ್ತಂಭವನ್ನು ಅರಸುತ್ತಾ ಆ ವನಕ್ಕೆ ಬಂದವರು ರಾಮಧ್ಯಾನದಲ್ಲಿ ಚಿತ್ತವನ್ನು ಹುತ್ತಗಟ್ಟಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳು. ಸೀತೆಯ ರೋಧನವದು ಅವರ ಕರ್ಣವನ್ನು ಕೆಣಕಿತು. ಹೆಂಗಳೆಯ ಅಳು ಕೇಳಿ ತಲ್ಲಣಿಸಿದರು ಮುನಿವರ್ಯ. ಮೊರೆತದ ಸ್ವರವನ್ನನುಕರಿಸಿ ಚಲಿಸಿದ ಅವರಿಗೆ ಕಾಣಿಸಿದಳು ಸೀತೆ. ‘ಯಾರಿವಳು? ಏಕಿದ್ದಾಳೆ ಈ ಅರಣ್ಯದಲ್ಲಿ ಒಂಟಿಯಾಗಿ?’ ಎಂಬ ಕೌತುಕ ಮೂಡಿತು ಅವರಲ್ಲಿ.ಮಾತನಾಡಿಸಿದರು. ತಾನು ವಾಲ್ಮೀಕಿ ಎನ್ನುವುದನ್ನು ಹೇಳಿಕೊಂಡರು. ಶೋಕಭಾವವನ್ನು ಮೀರಿದ ಹರುಷ ಭಾವ ಮೂಡಿತು ಸೀತೆಯಲ್ಲಿ. ನಡೆದದ್ದೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಳು ಬುವಿಸುತೆ. ಒಳಗಣ್ಣು ತೆರೆದು ಸೀತೆಯ ಗರ್ಭಸ್ಥಳವನ್ನು ವೀಕ್ಷಿಸಿದ ಮುನಿಗಳಿಗೆ ಅವಳು ಅವಳಿ ಮಕ್ಕಳ ಮಾತೆಯಾಗುವಳೆನ್ನುವುದು ತಿಳಿದುಬಂತು. ಅದನ್ನೇ ಹೇಳಿದರು ಅವಳಲ್ಲಿ. ತನ್ನ ಆಶ್ರಮಕ್ಕೆ ಬರುವಂತೆ ಸೂಚಿಸಿದರು. ಗರ್ಭಿಣಿಯ ಬಯಕೆಗಳೆಲ್ಲವನ್ನೂ ಪೂರೈಸುವ ಹೊಣೆ ತನ್ನದೆಂದರು. ಅವರ ದೃಢವಾದ ನುಡಿಗಡಲು ಸೀತೆಯ ಶೋಕವನ್ನು ಮುಳುಗಿಸಿತು. ಧೈರ್ಯಸ್ಥೆಯಾದಳು ಸೀತೆ. ಅವರೊಡನೆ ನಡೆದಳು ಆಶ್ರಮದೆಡೆಗೆ, ಶ್ರಮವಿಲ್ಲದೆ.ಎಲೆಗಳಿಂದ ಮಾಡಲಾದ ಕುಟೀರ. ಋಷಿಪತ್ನಿಯರ ಉಪಚಾರ. ಋತುಗಳ ಭೇದವೆಣಿಸದೆಯೇ ಬೆಳೆಯುವ ಗಿಡ ಮರಗಳು. ವೈರತ್ವ ಭಾವವನ್ನು ಮರೆತು ಬೆರೆಯುವ ಖಗ- ಮೃಗಗಳು. ಸೊಗಸೆನಿಸಿತು ಸೀತೆಗೆ ಆಶ್ರಮದ ಅ-ಶ್ರಮ ಬದುಕು.ಮುನಿಸತಿಯರ ಸಹವಾಸದಲ್ಲಿಯೇ ಸೀತೆಯ ಬಸುರಿಗೆ ನವಮಾಸ ತುಂಬಿತು. ಗರ್ಭದಲ್ಲಿರುವ ಶಿಶುಗಳನ್ನು ಭೂಮಿಗೆ ಇಳಿತರುವ ಕ್ಷಣವನ್ನು ನಿರುಕಿಸುತ್ತಿದ್ದಳು ಸೀತೆ.ಒಂದಿರುಳು ಅವಳ ತವಕವದು ಸಾಕಾರವಾಯಿತು. ಅವಳಿ ಶಿಶುಗಳು ಬಂದರು ಭೂಮಿಗೆ, ಭೂಸುತೆಯ ಗರ್ಭದಿಂದೀಚೆಗೆ. ಆಶ್ರಮದ ಪ್ರೌಢ ಸ್ತಿçÃಯರು ಅವಳ ಆರೈಕೆ ಮಾಡಿದರು. ಮುನಿವಟುಗಳು ತವಕದಿಂದ ಸುದ್ದಿಯನ್ನು ತಲುಪಿಸಿದರು ವಾಲ್ಮೀಕಿ ಮಹರ್ಷಿಗಳಿಗೆ.ಸಾನಂದದಿAದ ಬಂದು ಕಂದAಗಳ ಮೊಗಗಳನ್ನು ಕಂಡ ಮುನಿಗಳು ದರ್ಭೆಯ ಚೂರಿನಿಂದ ನೀರನ್ನು ಪ್ರೋಕ್ಷಿಸಿ, ದರ್ಭೆಯ ಚೂರನ್ನೇ ಸೂಚಿಸುವ ಕುಶ ಲವ ಎಂಬ ಹೆಸರುಗಳನಿಟ್ಟರು ಅವಳಿ ಮಕ್ಕಳಿಗೆ.ಚೆಲುವು ಎರಡು ರೂಪವನ್ನು ಪಡೆಯಿತೋ! ಶುಭ್ರತೆ ಎರಡು ಕವಲಾಗಿ ಒಡೆಯಿತೋ! ಗೆಲುವು ಗೆಳೆತನವನ್ನು ಗಳಿಸಿತೋ! ಕೀರ್ತಿ ಅಮೃತ ಧಾರೆಯಲ್ಲಿ ಹರಡಿ ಎರಡಾಯ್ತೋ! ಎಂಬAತೆ ಆ ಎಳೆಯ ಶಿಶುಗಳು ತೋರಿದರು ಆಶ್ರಮವಾಸಿಗಳ ಕಣ್ಣಿಗೆ.ಬೆಳೆಯತೊಡಗಿದರು ಕುಶಲವ ಇಬ್ಬರೂ, ಋಷಿಮುನಿಗಳ ಪ್ರೀತಿಯೊಲವನ್ನು ಪಡೆಪಡೆದು. ಕಾಲಕಾಲಕ್ಕೆ ಆಗಬೇಕಾದ ಸಂಸ್ಕಾರಗಳನ್ನೆಲ್ಲವನ್ನೂ ಕೊಡಿಸಿದರು ವಾಲ್ಮೀಕಿ ಮುನಿ ಅವರಿಗೆ. ಹನ್ನೆರಡು ವರುಷಗಳಾದಾಗ ಉಪನಯನ ಶಾಸ್ತç ಮಾಡಿಸಿದರು. ಶಸ್ತಾçಭ್ಯಾಸ ಮತ್ತು ಶಾಸ್ತಾçಭ್ಯಾಸ ಎರಡೂ ನಡೆದವು ಏಕಕಾಲಕ್ಕೆ. ರಾಮನೇ ತಮ್ಮ ತಂದೆಯೆAದು ಅರಿಯದ ಆ ಮಕ್ಕಳು ರಾಮಾಯಣವನ್ನು ಅನುದಿನವೂ ಹಾಡುತ್ತಿದ್ದರು ಭಕ್ತಿಭಾವದಿಂದ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-132 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹಾಸನ ಜಿಲಾಸ್ಪತ್ರೆಗೆ ಸುಮತಿ ಬೆಂಗಳೂರಿನಿಂದ ಹೊರಟ ಸುಮತಿ ಮತ್ತು ಮಗಳು ಹಾಗೂ ಹಿರಿಯ ಅಳಿಯ ಸಕಲೇಶಪುರವನ್ನು ತಲುಪಿದರು. ಮೂವರೂ ಆಶ್ರಮ ತಲುಪಿದರು. ತನ್ನ ಕೋಣೆಯೊಳಗೆ ಆಯಾಸಗೊಂಡಿದ್ದ ಅಮ್ಮನನ್ನು ಮಲಗಿಸಿ, ಬಾವನಿಗೆ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ತಿಳಿಸಿ….. “ನೀವು ಮನೆಗೆ ಹೋಗಿ ಬಾವ…. ಅಕ್ಕ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿದ್ದಾರೆ…. ಮಕ್ಕಳು ನಿಮ್ಮನ್ನು ಬಿಟ್ಟು ಇರುವುದಿಲ್ಲ….. ಅಮ್ಮನನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ದಾಖಲು ಮಾಡುತ್ತೇನೆ”…. ಎಂದಳು. ನಾದಿನಿಯ ಜವಾಬ್ದಾರಿಯುತ ನಡೆಯ ಸಾಮರ್ಥ್ಯವನ್ನು ಅರಿತಿದ್ದ ಬಾವ…. ಹಾಗೆಯೇ ಆಗಲಿ…. ಆದರೆ ಇನ್ನೇನಾದರೂ ಸಹಾಯ ಬೇಕಿದ್ದರೆ ತಡ ಮಾಡದೇ ತಪ್ಪದೇ ನನಗೆ ತಿಳಿಸು…. ನಾನು ಖಂಡಿತ ಬರುತ್ತೇನೆ”…. ಎಂದು ನಾದಿನಿಗೆ ಹೇಳಿ, ಆಯಾಸದಿಂದ ಮಲಗಿದ್ದ ಅತ್ತೆಯ ಬಳಿಗೆ ಹೋಗಿ…. “ಅತ್ತೇ…. ನಿಮ್ಮ ಮಗಳು ಒಬ್ಬಳೇ ಇಬ್ಬರು ಪುಟ್ಟ ಮಕ್ಕಳನ್ನು ಸಂಭಾಳಿಸುತ್ತಾ ಮನೆಯಲ್ಲಿದ್ದಾಳೆ…. ಅದೂ ಅಲ್ಲದೇ ನಾನು ಕೆಲಸಕ್ಕೆ ಕೂಡ ಹೋಗಬೇಕಾಗಿದೆ…. ನಾದಿನಿ ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ನಾನು ಮತ್ತು ನಿಮ್ಮ ಮಗಳು ಆಗಾಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ….. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಿ ಕೊರಗಬೇಡಿ…. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವಿರಂತೆ…. ನಾನಿನ್ನು ಹೊರಡಲೇ?”…ಎಂದು ಹೇಳುತ್ತಾ ಅತ್ತೆಯ ಅನುಮತಿಗಾಗಿ ಅಲ್ಲಿಯೇ ನಿಂತನು. ಅಳಿಯನ ಮಾತುಗಳನ್ನು ಆಲಿಸಿದ ಸುಮತಿ….”ಹೌದು ಅಳಿಯಂದಿರೇ…. ನೀವೀಗ ಮನೆಗೆ ಹೋಗಲೇಬೇಕು…. ನನ್ನ ಮುದ್ದು ಮೊಮ್ಮಕ್ಕಳು ನಿಮಗಾಗಿ ಕಾಯುತ್ತಿರುತ್ತಾರೆ…. ನೀವು ಕೆಲಸಕ್ಕೂ ಹೋಗಬೇಕಿದೆ….. ಇಲ್ಲಿ ಮಗಳು ಇದ್ದಾಳಲ್ಲವೇ ಅವಳು ಎಲ್ಲವನ್ನೂ ನೋಡಿಕೊಳ್ಳುತ್ತಾಳೆ….. ನೀವು ನಿಶ್ಚಿಂತರಾಗಿರಿ…. ನನ್ನ ಮೊಮ್ಮಕ್ಕಳನ್ನು ನೋಡುವ ಬಯಕೆಯಾಗಿದೆ ನೀವು ಬರುವಾಗ ಅವರನ್ನು ಕರೆದುಕೊಂಡು ಬನ್ನಿ”…. ಎಂದು ಹೇಳಿ ಸುಮತಿ ಅಳಿಯನನ್ನು ಬೀಳ್ಕೊಟ್ಟಳು. ಅನಾರೋಗ್ಯದ ತೀವ್ರತೆಯ ಕಾರಣ ಸುಮತಿಗೆ ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಬರಿಯ ಆಕೃತಿ ಮಾತ್ರ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಧ್ವನಿಯಿಂದ ಎಲ್ಲರನ್ನೂ ಗುರುತು ಹಿಡಿಯುತ್ತಿದ್ದಳು. ಸುಮತಿಯ ಎರಡನೇ ಮಗಳಿಗೆ ಆಶ್ರಮದಲ್ಲಿದ್ದ ಗೆಳತಿಯ ಸಹಾಯ ಬಹುದೊಡ್ಡ ಆಧಾರವಾಗಿತ್ತು. ತಡ ಮಾಡದೇ ತಾಯಿಯನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೊರಟಳು. ಆಶ್ರಮದ ಮಕ್ಕಳಿಗೆ ರಜೆ ಇದ್ದ ಕಾರಣ ಎಲ್ಲರೂ ಅವರವರ ಮನೆಗಳಿಗೆ ತರಳಿದ್ದರು. ಹಾಗಾಗಿ ಆಶ್ರಮದಲ್ಲಿದ್ದ ಗೆಳತಿಯು ಸ್ವಲ್ಪ ದಿನದ ಮಟ್ಟಿಗೆ ತಾನು ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಳು….”ಆಶ್ರಮದ ಬೀಗದ ಕೀಲಿಯನ್ನು ಸೆಕ್ರೆಟರಿ ಅವರಿಗೆ ಕೊಟ್ಟಿರುತ್ತೇನೆ…. ನೀನು ಆಸ್ಪತ್ರೆಯಿಂದ ಬರುವಾಗ ಅವರಿಂದ ಕೀಲಿಯನ್ನು ಪಡೆದುಕೋ…. ನಿನಗೆ ಪರೀಕ್ಷೆ ಇದೆಯಲ್ಲವೇ?…. ನಿನಗೆ ಏನಾದರೂ ಅಗತ್ಯಗಳು ಇರುತ್ತವೆ”… ಎಂದು ಹೇಳಿ ತನ್ನ ಊರಿನ ಕಡೆಗೆ ಹೊರಟಳು. ಸುಮತಿಯ ಎರಡನೇ ಮಗಳು ತನ್ನ ತಾಯಿಯೊಂದಿಗೆ ಹಾಸನಕ್ಕೆ ಹೊರಡುವ ಮುನ್ನ ಆಶ್ರಮದ ಬಳಿ ಇದ್ದ ಮೆಡಿಕಲ್ ಸ್ಟೋರ್ ಒಂದರ ಟೆಲಿಫೋನ್ ಬೂತಿಗೆ ಹೋಗಿ, ತೋಟದ ಆಫೀಸಿನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದಳು. ಕರೆಗೆ ಪ್ರತ್ಯುತ್ತರ ನೀಡಿದ್ದು ತೋಟದ ಮ್ಯಾನೇಜರ್ ಆದುದರಿಂದ ಅವರಿಗೆ ಎಲ್ಲ ವಿಷಯವನ್ನು ತಿಳಿಸಿದಳು. ತೋಟದ ಸಾಹುಕಾರಮ್ಮನವರು ವಿದೇಶಕ್ಕೆ ಹೋಗಿರುವುದಾಗಿ ಮ್ಯಾನೇಜರ್ ತಿಳಿಸಿದರು. ಹಾಗಾಗಿ ವಿಷಯವನ್ನೆಲ್ಲ ತನ್ನ ತಂಗಿಗೆ ತಿಳಿಸಲು ವಿನಂತಿಸಿಕೊಂಡಳು. ತಾಯಿಗೆ ಆಯಾಸವಿದ್ದ ಕಾರಣ ನಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಆಟೋದಲ್ಲಿ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಳು. ಅಲ್ಲಿ ಹಾಸನಕ್ಕೆ ಹೋಗುವ ಬಸ್ ನಿಂತಿತ್ತು. ಮೊದಲು ತಾಯಿಯನ್ನು ಬಸ್ಸಿನಲ್ಲಿ ನಿಧಾನವಾಗಿ ಜಾಗರೂಕತೆಯಿಂದ ಹತ್ತಿಸಿ ಕಿಟಕಿಯ ಬಳಿಯ ಸೀಟಿನಲ್ಲಿ ಕುಳ್ಳಿರಿಸಿ, ತಾನು ಕೆಳಗಿಳಿದು ಬಟ್ಟೆಬರೆ ಇರುವ ಬ್ಯಾಗನ್ನು ಎತ್ತಿಕೊಂಡು ಬಂದು ಮೇಲಿನ ಸ್ಟ್ಯಾಂಡ್ ನಲ್ಲಿ ಇರಿಸಿ ಸುಮತಿಯ ಬಳಿ ಕುಳಿತುಕೊಂಡಳು. ಬಸ್ ಹಾಸನದ ಕಡೆಗೆ ಹೊರಟಿತು. ಹಾಸನ ಬಸ್ ಸ್ಟ್ಯಾಂಡ್ ತಲುಪಿದ ನಂತರ ಅಲ್ಲಿಂದ ಮತ್ತೊಂದು ಆಟೋದಲ್ಲಿ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯ ಕಡೆಗೆ ಹೊರಟಳು. ಜಿಲ್ಲಾ ಆಸ್ಪತ್ರೆ ತಲುಪಿದಾಗ ಡಾಕ್ಟರ್ ಬರುವ ಸಮಯವಾಗಿತ್ತು. ನಿಧಾನವಾಗಿ ತಾಯಿಯನ್ನು ಆಟೋದಿಂದ ಇಳಿಸಿ, ಮೆಲ್ಲನೆ ನಡೆಸಿಕೊಂಡು ಹೋಗಿ ಹೊರರೋಗಿಗಳ ವಿಭಾಗದ ಹತ್ತಿರ ಇದ್ದ ಬೆಂಚಿನಲ್ಲಿ ಕುಳ್ಳಿಸಿದಳು. ಸರತಿಯ ಸಾಲಿನಲ್ಲಿ ಹೆಚ್ಚು ಜನರಿರದ ಕಾರಣ ಸ್ವಲ್ಪ ಹೊತ್ತಿನಲ್ಲಿ ಡಾಕ್ಟರನ್ನು ನೋಡುವ ಅವಕಾಶ ದೊರೆಯಿತು. ತಾಯಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ಮಗಳು ಮೊದಲು ತಾನು ಒಬ್ಬಳೇ ಡಾಕ್ಟರ್ ಕೊಠಡಿಯನ್ನು ಪ್ರವೇಶಿಸಿದಳು. ಅಲ್ಲಿನ ಡಾಕ್ಟರ್ (ಫಿಜ಼ಷಿಯನ್) ಮೊದಲು ಸಕಲೇಶಪುರದಲ್ಲಿದ್ದವರಾಗಿದ್ದರು. ಅವರು ಆಸ್ಪತ್ರೆಯ ಮೇಲಾಧಿಕಾರಿಯಾಗಿ ಭಡ್ತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮತಿಗೆ ಹಲವು ವರ್ಷಗಳಿಂದ ಈ ವೈದ್ಯರೇ ಚಿಕಿತ್ಸೆ ಕೊಡುತ್ತಿದ್ದ ಕಾರಣ ಮಗಳ ಪರಿಚಯವು ಅವರಿಗಿತ್ತು…. “ಏನಮ್ಮಾ ಹುಡುಗಿ…. ನಿನ್ನ ತಾಯಿ ಹೇಗಿದ್ದಾರೆ”… ಎಂದು ಕೇಳಿದರು. ಅದಕ್ಕುತ್ತರವಾಗಿ ವೈದ್ಯರಿಗೆ ವಂದಿಸಿದ ಅವಳು… “ಸರ್ ನಿಮ್ಮ ಬಳಿ ಒಂದು ಮುಖ್ಯವಾದ ವಿಷಯವನ್ನು ನಾನು ಪ್ರಸ್ತಾಪಿಸಬೇಕಿದೆ…. ದಯವಿಟ್ಟು ನನಗೆ ನೀವು ಸಹಾಯ ಮಾಡಬೇಕು”…. ಎಂದಳು….. “ಅದೇನು ಹೇಳಮ್ಮಾ”…. ಎಂದು ವೈದ್ಯರು ಕೇಳಿದಾಗ ಬೆಂಗಳೂರಿನಲ್ಲಿ ನಡೆದ ಅಷ್ಟೂ ಘಟನೆಯನ್ನು ವಿವರಿಸಿದಳು. ವೈದ್ಯರಿಗೆ ಸುಮತಿಯ ಬಗ್ಗೆ ತಿಳಿದು ಬಹಳ ಬೇಸರ ಮತ್ತು ಸಂಕಟವಾಯಿತು. ಆಕೆಯ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು…. “ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಯಿತು…. ನನ್ನಿಂದ ನಿಮಗೇನು ಸಹಾಯವಾಗಬೇಕು ತಿಳಿಸು ಮಗು”…. ಎಂದರು…. “ಸರ್…. ಬೆಂಗಳೂರಿನಲ್ಲಿ ದೊರಕುವ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ…. ಅವರಿಗೆ ಸತ್ಯ ಸಂಗತಿಯನ್ನು ನಾನು ತಿಳಿಸಿಲ್ಲ….. ತಿಳಿಸುವ ಮನಶಕ್ತಿಯೂ ನನ್ನಲಿಲ್ಲ…. ದಯವಿಟ್ಟು ತಾವು ಈ ಆಸ್ಪತ್ರೆಯಲ್ಲಿ ನನ್ನ ತಾಯಿಯನ್ನು ದಾಖಲು ಮಾಡಿ ಸ್ವಲ್ಪ ದಿನ ಚಿಕಿತ್ಸೆ ಕೊಡುವಿರಾ?” ….. ಎಂದು ಅಂಗಲಾಚುವಂತೆ ಬೇಡಿಕೊಂಡಳು.
ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ಧರೆ ಹತ್ತಿ ಉರಿದೊಡೆ… ಪ್ರಕೃತಿ ಗೆ ದಿನೆ ದಿನೆ ನಮ್ಮ ಮ್ಯಾಲ ಸಿಟ್ಟು ಹೆಚ್ಚಾಗ್ತಾನೆ ಅದ. ಪ್ರಕೃತಿ ವಿಕೋಪಗಳು ಎಷ್ಟೊಂದು ರೀತಿಯೊಳಗ ಮನುಕುಲಕ್ಕ ಕಾಡತಿದ್ದಾವ.ಅದಕ್ಕ ನಾವೂ ಕಾರಣ ಅನ್ನೊದು ಮರಿಬಾರದು.ಅನಿರೀಕ್ಷಿತ ವಾಗಿ ನೇಪಾಳದಾಗ ಆದ ಪ್ರವಾಹಗಳಂತವನ್ನು ಅದೆಂಗ ತಡಕೊಳ್ಳಬೇಕು ಮನುಷ್ಯ ರು.. ಮಳಿ ಗಾಳಿ ಒಂದು ಇರಲಾರದೆ ಒಮ್ಮೆಲೆ ನೀರು ಮನಿ ಊರು ಎಲ್ಲಾ ಮುಳಗಿಸಿ ಬಿಡತದ ಅಂದರ ಇದು ಅದೇಷ್ಟು ಅನಿರೀಕ್ಷಿತ. ವಿಜ್ಞಾನ ಎಷ್ಟೇ ಮುಂದ ವರೆದ್ರು ಇಂತ ಅವಘಡಗಳು ತಪ್ಪಿಸಲಿಕ್ಕ ಆಗಲ್ಲ.ಕೈಲಾಶ್ ಪರ್ವತ ಯಾತ್ರೆ ಇಷ್ಟು ದಿನ ಬಂದ್ ಆಗಿದ್ದು ಈಗ ಒಂದೆರಡು ವರ್ಷ ಗಳಿಂದ ಶುರು ಆಗ್ಯಾದ.ಪ್ರವಾಸ ಅಂದ್ರ ಬಾಯಿ ಬಿಡುವ ನಾನಗ ಮಾನಸ ಸರೋವರ ಯಾತ್ರ ಮಾಡುವ ಕನಸು ಅದ. ಕೈಲಾಶ್ ಪರ್ವತ ನೋಡಬೇಕು ಅವನ್ನು ಇಚ್ಚೆಗಿಂತ ಪರ್ವತದ ವರೆಗೆ ಹೋಗುವ ದಾರಿಯ ರೋಚಕ ಅನುಭವಕ್ಕ ನನ್ನ ಮನ ಇಷ್ಟಪಡತದ.ನೇಪಾಳ ಪ್ರವಾಸಕ್ಕೆ ಹೋದಾಗ ನನಗ ಅದೇನು ಅಷ್ಟು ಇಷ್ಟ ಆಗಿಲ್ಲ.ಹಿಮಾಲಯ ಪರ್ವತಗಳ ಸಮೀಪ ಹೋಗಬಹುದು , ಸಮೀಪದಿಂದ ಹಿಮಾಲಯ ಪರ್ವತ ನೋಡಬಹುದು ಅನ್ನೊ ಆಸೆಯಿಂದ ಹೋಗಿದ್ಧೆ. ಹಿಮಾಲಯ ಪರ್ವತ ಇರಲಿ , ಪರ್ವತದ ತುದಿನೂ ಕಾಣಲಿಲ್ಲ.ಬೇರೆ ಬೇರೆ ಪರ್ವತಗಳ ತುದಿ ಕಡೆ ಬೆರಳು ಮಾಡಿ ತೊರಿಸುತ್ತ ನಮ್ಮ ಗೈಡ ಅವುಗಳ ಹೆಸರು ಹೆಳತಿದ್ರೆ ಹಿಮಾಲಯ ಪರ್ವತ ಎಲ್ಲಿದೆ ಅಂತ ಕೆಳತಿದ್ಧ.ಅದನ್ನು ನೋಡಬೇಕಾದ್ರೆ ಚೀನಾ ಅಥವಾ ಟಿಬೆಟ್ ಬಾರ್ಡರ್ ಕಡಿ ಹೋಗಬೇಕು , ಇಲ್ಲ ಹೆಲಿಕ್ಯಾಪ್ಟರ್ ನಲ್ಲಿ ಹಿಮಾಲಯ ಮತ್ತು ಇತರ ಪರ್ವತಗಳನ್ನು ಸಮೀಪದಿಂದ ನೋಡಬಹುದು ಅಂತ ಹೆಳ್ದ. ಒಂದು ವೇಳೆ ದುಬಾರಿ ಟಿಕೆಟ್ ಕೊಟ್ಟು ಹೆಲಿಕಾಪ್ಟರನಲ್ಲಿ ಹೋದ್ರೂ ವಾತಾವರಣ ಚನ್ನಾಗಿ ಇರಲಿಲ್ಲಂದ್ರ ವಾಪಸ ಬರಬೇಕಾಗತದ ಅಂತ ಎಚ್ಚರಿಕೆ ಕೊಟ್ಟ.ಯಾರೂ ಆಸಕ್ತಿ ತೋರಿಸಲಿಲ್ಲ . ನನಗೂ ಒಬ್ಬಕಿಗೆ ಹೋಗಲಿಕ್ಕ ದೈರ್ಯ ಸಾಲಲಿಲ್ಲ . ಇಡೀ ನೇಪಾಳ ಪ್ರವಾಸದಾಗ ದೂರದಿಂದ ಕಾಣುವ ಪರ್ವತ ತುದಿ ನೋಡಿ ಬಂದಿದ್ದೆವು. ನೇಪಾಳ ಈಗೀಗ ಅಭಿವೃದ್ಧಿ ಆಗತಿರೋ ದೇಶ.ಸದಾ ಚೀನಾದವರ ಅತಿಕ್ರಮಣದ ದಬ್ಬಾಳಿಕೆ ಸಹಿಸ್ತಾ ಅವರ ನೆರವಿನಲ್ಲಿ ಇರಬೇಕಾದ ಅವಶ್ಯಕತೆ . ಮತ್ತು ಟಿಬೇಟ್ , ಭಾರತ ದಂತ ನೆರೆ ರಾಜ್ಯಗಳು , ಯಾರ ಜೊತೆಗೆ ಗೆಳೆತನ ಇಟ್ಟಕೋಬೇಕು ಅನ್ನೊ ಸಂದಿಗ್ಧ ಪರಿಸ್ಥಿತಿ. ಪುರುಷರು ದುಡಿಯಲು ವಲಸೆ ಹೋದ್ರೆ ಮಹಿಳೆಯರೇ ಮನೆ ಮಕ್ಕಳು ನೋಡಕೊಂಡು ಇರತಾರೆ. ಎಲ್ಲಾ ಅಂಗಡಿಯೊಳಗ ಹೆಚ್ಚಾಗಿ ಮಹಿಳೆಯರೆ ಕಾಣತಾರ. ಚೀನಾದವರ ನೆರವಿನ ರಸ್ತೆಗಳು ,ಮತ್ತಿತರ ಕಟ್ಟಡಗಳು ಮಾಡಿ ಪ್ರವಾಸ ಅಭಿವೃದ್ಧಿ ಮಾಡತಿದ್ದಾರ. ಇತ್ತೀಚೆಗಷ್ಟೆ ನೇಪಾಳದ ರಾಜಕೀಯ ಯುವಕರ ದೆಸೆಯಿಂದ ಬದಲಾಗಿ ಹೊಸ ರೂಪ ಪಡಿತಿತ್ತು.ಅಂತದ್ದರಾಗ ಈ ಪ್ರವಾಹದ ಅವಘಡ. ಹಾಳಾಗಿದ್ದದ್ದು ಮೊದಲಿನ ರೂಪಕ್ಕ ಬರಬೇಕಂದ್ರ ಮತ್ತ ಕಾಲ ಒಂದು ಶತಮಾನ ಹಿಂದೆ ಹೋದಂಗ. ಪ್ರವಾಸೋದ್ಯಮ ಅಭಿವೃದ್ಧಿ ಯಿಂದ ವಿಶ್ವ ಕ್ಕ ಯಾವರೀತಿ ಪ್ರಯೋಜನ ಅನ್ನುವ ಪ್ರಶ್ನೆ ಕಾಡತದ.ಬರೀ ದೇಶಗಳು ಅಭಿವೃದ್ಧಿ ಮಾತ್ರ ಆಗತಾವ ಅಂತ ಹೆಳಲಿಕ್ಕಾಗಲ್ಲ.ಅದರೊಂದಿಗೆ ಪ್ರಕೃತಿಗೆ ನಾನಾ ರೀತಿಯ ಅನಾನುಕೂಲಗಳನ್ನು ಮಾಡತದ.ಪ್ರವಾಸಿಗರ ಅನುಕೂಲಕ್ಕ ಅವರ ವಸತಿ ಸೌಕರ್ಯ ಕ್ಕೆ ಅನುಕೂಲ ಮಾಡಿಕೊಡಬೇಕಂದ್ರ ಪ್ರಕೃಗೆ ಹಾನಿ ಮಾಡ್ಲೇಬೇಕು.ಗುಡ್ಡ , ಮರ , ಕಡಿದರೆ ಭೂಮಿ ಸವಕಳಿ ಆಗಿ ಕುಸಿದು ಬಿಳತದ. ರಸ್ತೆ , ಸುರಂಗಗಳು , ಹೊಟೆಲ್ ಗಳು ಇವೆಲ್ಲವೂ ಪ್ರವಾಸೋದ್ಯಮ ಕ್ಕೆ ಬಹಳ ಜರೂರಿ ಇರತವ.ಇದಕ್ಕಾಗಿ ಪರಿಸರಕ್ಕ ಕೆಣಕಿದ್ರೆ ಈ ಅವಘಡಗಳು ಸಂಭವಿಸ್ತಾವ. ಉತ್ತರಾಖಂಡ , ಹಿಮಾಚಲ , ಲಡಾಖ್ ನಂತಹ ಪ್ರದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಪ್ರವಾಸಿ ತಾಣ ಆಗತಿದ್ದಾವ.ಬೆಟ್ಟಗಳ ಮ್ಯಾಲ್ ಮನುಷ್ಯರಿಗಾಗಿ ನಿರ್ಮಾಣ ಆಗತಿರೋ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣ ದ ಒತ್ತಡ ಆ ಪ್ರಕೃತಿ ತಾಳಕೊಳ್ಳೊದು ಕಷ್ಟ. ವರ್ಷ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗತನೆ ಇಧೆ. ಒಂದು ವೇಳೆ ಪ್ರವಾಸೋದ್ಯಮ ಕ್ಕ ಕಡಿವಾಣ ಹಾಕಿದ್ರ ಆ ರಾಜ್ಯಗಳ ಅಭಿವೃದ್ಧಿ ಕುಂಠಿತ ಆಗತದ.ನಮ್ಮ ದೇಶದ ಎಷ್ಟೋ ರಾಜ್ಯಗಳು ಪ್ರವಾಸೊದ್ಯಮದ ಮ್ಯಾಲ ಅವಲಂಬಿತ ಆಗ್ಯಾವ. ಎಲ್ಲಕ್ಕಿಂತ ಹೆಚ್ಚಾಗಿ ವಾತಾವರಣದಲ್ಲಿನ ಬಿಸಿ ಪ್ರಕೃತಿಗೆ ಬಾಳ ಹಾನಿ ಮಾಡಲತದ.ಕಾಶ್ಮೀರ ಕಣಿವೆಯ ಅಮರನಾಥ ಗುಹೆಯ ಮಂಜಿನಿಂದ ಉಂಟಾಗುವ ಶಿವಲಿಂಗ ಕೆಲವೆ ದಿನಗಳಲ್ಲಿ ಕರಗಿ ಹೋಗಲತದ.ಮೊದಲೆಲ್ಲ ನಾಲ್ಕು ತಿಂಗಳು ಲಿಂಗದ ಆಕಾರದಲ್ಲೆ ಇರುವ ಶಿವಲಿಂಗ ಈಗ ತಿಂಗಳಲ್ಲಿ ಕರಗಿ ಬಿಡಲತದಂತ.ಎರಡು ವರ್ಷ ಕೆಳಗೆ ಸೆಪ್ಟೆಂಬರ್ ನಲ್ಲಿ ಅಮರನಾಥ ಪ್ರವಾಸ ಹೋಗಿದ್ಧ. ಅಷ್ಟರಲ್ಲಿ ಮಂಜಿನಿಂದ ಆದ ಶಿವಲಿಂಗ ಕರಗಿ ನೆಲದ ಮ್ಯಾಲೆಲ್ಲ ಹರಡಿತ್ತು.ದಿನಾ ಲಕ್ಷ ಲಕ್ಷ ಜನ ಗುಹೆಯೊಳಗ ಹೋದ್ರ ಅವರ ಉಸಿರಿನ ಬಿಸಿಗಿ ಗುಹೆಯಲ್ಲಿ ತಂಪು ವಾತಾರಣ ಬಿಸಿ ಆಗತದ. ಬಿಸಿ ಹವಾಕ್ಕ ನಾಲ್ಕು ತಿಂಗಳ ಇರೋ ಲಿಂಗ ಒಂದೇ ತಿಂಗಳಲ್ಲಿ ಕರಗಲತದ. ಉತ್ತರಾಖಂಡ ಕೇದಾರ ಬದರಿನಾಥ ಧಾಮಗಳಲ್ಲೂ ಇತ್ತಿಚಿನ ವರ್ಷ ಗಳಲ್ಲಿ ಅತೀ ಜನದಟ್ಟಣೆ ಆಗಲತದ.ಹೋದ ವರ್ಷ ಮೇ ನಲ್ಲಿ ಹೋದಾಗ ಸಾವಿರಾರು ಜನರ ಲೈನ್. ಬೆಟ್ಟಗಳು ಇಷ್ಟು ಜನರ ಒತ್ತಡ ಹ್ಯಾಂಗ್ ತಡಕೋತಾವ.ಯಾವಾಗ ಯಾವ ಬೆಟ್ಟ ಕುಸಿದು ಬಿಳತದೋ ಅಂತ ಆತಂಕದಲ್ಲೆ ಪ್ರವಾಸ ಮುಗಿಸ್ದೆವು. ಭೂಲೋಕದ ಸ್ವರ್ಗ ಎಂದು ಹೆಸರಾಗಿದ್ದ ಕಾಶ್ಮೀರ ಕ್ಕ ಹೋದಾಗ ಅಲ್ಲಿ ನ ಬಿಸಿಲು ನೋಡಿ ಗಾಬರಿ ಆಗಿತ್ತು.ಅಷ್ಟು ತಾಪಮಾನದಲ್ಲಿ ಎರಿಕೆ ಆಗಿತ್ತು ,ಅಲ್ಲಿನ ಸ್ಥಳಿಯರು ಬಿಸಿಲು ತಡಿಲಾರದೆ ಒದ್ದಾಡ್ತಿದ್ರು.ಕಾಶ್ಮೀರ ಅಂದ್ರೆ ಎನೋ ಅಂತ ತಿಳಕೊಂಡ ಹೋದ ನಮಗೆ ಅಲ್ಲಿನ ಬಿಸಿಲು ನಿರಾಶೆ ಮಾಡಿತ್ತು. ಹಿಮಾಚಲ ಪ್ರದೇಶದ ಕುಲು ಮನಾಲಿಗಳು ಜನದಟ್ಟಣೆ ಪ್ರದೇಶ ಆಗಿಬಿಟ್ಟಾವ.ನಾವು ಡಿಸೆಂಬರ್ ನಲ್ಲಿ ಹೋಗಿದ್ದಕ್ಕ ಹಿಮಪಾತ ಆಗ್ತಿತ್ತು.ಪ್ರಕೃತಿ ಸುಂದರ ಅನಿಸಿತ್ತು.ಪ್ರವಾಸಿಗರಿಗಾಗಿ ಗುಡ್ಡ ಕಡಿದು ಸುರಂಗ ಮಾಡುವಾಗ ಆದ ಅವಘಡದಿಂದ ಎಷ್ಟೋ ಜನ ಒಳಗೆ ಸಿಕ್ಕಿಹಾಕಿಕೊಂಡಿದ್ರು. ಲಡಾಖ್ ಗೆ ಈಗೀಗ ಪ್ರವಾಸಿಗರ ಸಂಖ್ಯೆ ಹೆಚ್ಚು ಆಗಲತದ.ಜನದಟ್ಟಣೆ ಹೆಚ್ಚಾದಂಗ ಪರಿಸರ ಮುನಿಯುವದಕ್ಕ ಶುರು ಆಗತದ.ನನಗ ಲಡಾಖ್ ಸುಂದರ ಮತ್ತ ಶಾಂತ ಅನಿಸ್ತು. ಬೆಟ್ಟಗಳ ನಡು ಶಾಂತವಾಗಿದ್ದ ಸ್ಥಳ ನಮ್ಮಂತ ಪ್ರವಾಸಿ ಗರಿಂದ ಅಶಾಂತಗೊಳ್ಳತದ. ಜನದಟ್ಟಣೆ ಯಾವಾಗಲೂ ಎನಾದ್ರು ಒಂದು ಕೆಟ್ಟ ಘಟನೆಗೆ ಕಾರಣ ಆಗ್ತಾನೆ ಇರತದ.ಕಾಲ್ತುಳಿತದಂತ ಪ್ರಸಂಗಗಳು ಮತ್ತ ಮತ್ತ ಆಗ್ತಾನೆ ಇರತಾವ.ಕಾಲ್ತುಳಿತ ಆಗತದ ಅಂತ ಗೊತ್ತಿದ್ರೂ ಮತ್ತು ದಟ್ಟಣೆಯೊಳಗ ಹೋಗಿ ತೂರಿಕೊಳ್ಳತೀವಿ. ಪ್ರಕೃತಿ ವಿಕೋಪಗಳು , ಯುದ್ದಗಳು ಎಷ್ಟು ಕರಾಳ ನೆನಪುಗಳು ಉಳಿಸಿಬಿಡತಾವ , ಬದುಕುಳಿದವರವರ ಬದುಕು ಮೂರಾಬಟ್ಟೆ. ಜೀವನವೀಡಿ ಚಂದದ ಬದುಕಿಗಿ ಹವಣಿಸಿ ಹೆಣಗಿ ಪರಿಶ್ರಮದಿಂದ ಕಟ್ಟಿಕೊಂಡ ಬದುಕು ಕ್ಷಣದಲ್ಲಿ ನಿರ್ನಾಮ ಆದ್ರ ಅದನ್ನು ತಾಳಕೊಳ್ಳೊ ಕಷ್ಟ ವರ್ಣಿಸಲಕ್ಕ ಆಗದ ಮಾತು. ಆದ್ರೂ ಬದುಕಲೇಬೇಕಲ್ಲ.ಸಮಯದ ಆಧಾರದ ಮ್ಯಾಲ. ಮನುಕುಲ ಈಗಲಾದ್ರು ಪ್ರಕೃತಿ ಬಗ್ಗೆ ವಿಚಾರ ಮಾಡಲೇಬೇಕು.ಅಭಿವೃದ್ದಿ ಹೆಸರಲ್ಲಿ ಗುಡ್ಡ , ನೆಲ ಅಗೀತಾ ಹೋದ್ರ ಮುಂದೆ ಇನ್ನೂ ಘೋರ ಪರಿಣಾಮ ಎದುರಿಸಬೇಕಾಗತದ.ನಾವು ಪ್ರವಾಸ ಮಾಡೋರು ಕೂಡ ಎಲ್ಲಾ ಸೌಕರ್ಯ ಐಶಾರಾಮಿ ಆಗಿ ಇರಬೇಕಂತ ಬಯಸ್ತಿವಿ.ನಮ್ಮ ಸೌಕರ್ಯ ಕ್ಕಾಗಿ ಪ್ರಕೃತಿ ಮ್ಯಾಲ ದಬ್ಬಾಳಿಕೆ ಮಾಡೋದು ಮುಂದುವರಿತಾನೆ ಅದ.ಪ್ರಕೃತಿ ಆದ್ರು ಎಷ್ಟಂತ ಸಹಿಸಿಕೊಳ್ಳತದ ಮನುಷ್ಯರ ಹುಂಬತನ. ಜ್ಯೋತಿ ಡಿ ಬೊಮ್ಮಾ


