ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಶಿಕ್ಷಣ ಪ್ರವರ್ತಕ ರಾವ್ ಬಹಾದ್ದೂರ್ ಗಿಲಗಂಚಿ ಗುರುಸಿದ್ದಪ್ಪನವರು ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಎಂಬ ಉತ್ತರ ಕರ್ನಾಟಕದ ಧ್ರುವತಾರೆ ಸಮಾಜಸೇವಕ ಅಪ್ರತಿಮ ಸಮಾಜ ಚಿಂತಕರು.  ಇವರ ಸಂಕ್ಷಿಪ್ತ ಪರಿಚಯ ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಪ್ರಕಟ ಮಾಡುತ್ತಿದ್ದೇನೆ.  (1841–1891) ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಪ್ರವರ್ತಕರು, ಲಿಂಗಾಯತ ಧರ್ಮದ ಸಂಘಟಿಕರು, ಸಮಾಜ ಸುಧಾರಕರು ಮತ್ತು ಬ್ರಿಟಿಷ್ ಆಡಳಿತಾವಧಿಯಲ್ಲಿ ಧಾರವಾಡದ ಡೆಪ್ಯೂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಯಾಗಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯ ಮತ್ತು ಶೋಷಿತ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇವರು ನೀಡಿದ ಕೊಡುಗೆ ಅನನ್ಯವಾದದ್ದು. ಜನನ ಮತ್ತು ಶಿಕ್ಷಣ ಗಿಲಗಂಚಿ ಗುರುಸಿದ್ದಪ್ಪನವರು 1841 ರಂದು ಧಾರವಾಡದ ಲಿಂಗಾಯತ ನೇಕಾರ( ಹಟಗಾರ ) ಕುಟುಂಬದಲ್ಲಿ ಜನಿಸಿದರು. ಬಾಲಕ  ಗುರುಸಿದ್ದಪ್ಪನವರು ತುಂಬಾ ಚತುರ ಮತ್ತು ಬುದ್ಧಿವಂತನಾಗಿದ್ದನು. ಹೀಗಾಗಿ ಇವರ ತಂದೆ ವೀರಬಸಪ್ಪ ಇವರ ಶಿಕ್ಷಣಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ಅವರ ಪ್ರಮುಖ ಸಾಧನೆಗಳು ಮತ್ತು ಜೀವನದ ಮುಖ್ಯಾಂಶಗಳು : 1. ಶೈಕ್ಷಣಿಕ ಕ್ರಾಂತಿ ಮತ್ತು ಸಂಸ್ಥೆಗಳ ಸ್ಥಾಪನೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA): ಒಂದು ದಿನ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಆಪ್ತ ಮಿತ್ರರು ಇವರ ಜೊತೆಗೆ ಕೆಲಸ ನಿರ್ವಹಿಸುವ ಶ್ರೀ ಅರಟಾಳ ರುದ್ರಗೌಡರು ಮತ್ತು ಇತರ ಸ್ನೇಹಿತರೊಂದಿಗೆ ಒಂದು ದಿನ ಸಂಜೆ ಮೈಲಾರ ಗುಡ್ಡಕ್ಕೆ   ವಾಕಿಂಗ್ ವಸ್ತು ವಿಹಾರಕ್ಕೆ ಹೋಗುವಾಗ ಬೇರೆ ಬೇರೆ ವಿಷಯ ಮಾತನಾಡುತ್ತಾ ಲಿಂಗಾಯತರು ಏಕೆ ಹಿಂದುಳಿದಿದ್ದಾರೆ ಎಂದು ಚರ್ಚಿಸ ತೊಡಗಿದರು. ಇದಕ್ಕೆ ಮುಖ್ಯ ಕಾರಣ ಬಡತನ ಶಿಕ್ಷಣ ಇಲ್ಲದಿರುವುದು.   ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ ಇ ಎ ಲಿಂಗಾಯತ ಎಜ್ಯುಕೇಶನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು 1883 ರಲ್ಲಿ 215500 ರೂಪಾಯಿ ಹಣವನ್ನು ಡಿಪಾಸಿಟ್ ಮಾಡಿ ಅದರ ಬಡ್ಡಿಯಲ್ಲಿ ಲಾಕ್ ಲಿಂಗಾಯತ ಶಿಷ್ಯ ವೇತನ ಸ್ಕಾಲರ್ಶಿಪ್ ಫಂಡ್ ಬರುವಂತೆ ಯೋಜನೆಯನ್ನು ಜಾರಿಗೆ ತಂದರು.  ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡರು ಸೇರಿ 1883 ರಲ್ಲಿ ಧಾರವಾಡದಲ್ಲಿ Lingayat Education Association ಸಂಸ್ಥೆಯನ್ನು ಸ್ಥಾಪಿಸಿದರು. ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇದು ಪ್ರಮುಖ ಆಧಾರವಾಯಿತು. ಉತ್ತರ ಕರ್ನಾಟಕದ ಡಾ ಫ ಗು ಹಳಕಟ್ಟಿ ಅವರನ್ನೂ ಸೇರಿ ಅನೇಕ ಮಹನೀಯರು ಈ ಸಂಸ್ಥೆಯಿಂದ ಶಿಷ್ಯ ವೇತನ ಪಡೆದು ಬೆಳೆದವರು.  ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಲ್ಪಿ ಡಾ ಫ ಗು ಹಳಕಟ್ಟಿ ಇವರೂ ಸಹಿತ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಸ್ಥಾಪಿಸಿದ ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ತಮ್ಮ ಪದವಿ ಮತ್ತು ವಕೀಲಿ ಕೋರ್ಸ್ ಮಾಡಿದ್ದು. ಕೆ.ಎಲ್.ಇ ಸಂಸ್ಥೆಗೆ ಮುನ್ನುಡಿ:  ಇವರು ಸ್ಥಾಪಿಸಿದ್ದ ‘ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ಅಂದಿನ ಪ್ರಮುಖ ಸಪ್ತರ್ಷಿಗಳು ಪ್ರೊ ಶಿ ಶಿ ಬಸವನಾಳ ಪ್ರೊ ಎಂ ಆರ್ ಸಾಖರೆ ಬಿ ಎಸ್ ಹಂಚಿನಾಳ ಏಚ್ ಎಫ ಕಟ್ಟಿಮನಿ ಬಿ ಬಿ ಮಮದಾಪೂರ ಪಂಡಿತಪ್ಪ ಚಿಕ್ಕೋಡಿ  ಸರ್ದಾರ್ ವೀರನಗೌಡ ಪಾಟೀಲ   (ಏಳು ಜನ ಶಿಕ್ಷಕರು) ಉನ್ನತ ಶಿಕ್ಷಣ ಪಡೆದಿದ್ದರು. ಇದೇ ಪ್ರೇರಣೆಯಿಂದ ಮುಂದೆ ಪ್ರಸಿದ್ಧ KLE ಶಿಕ್ಷಣ ಸಂಸ್ಥೆ 1916 ರಲ್ಲಿ ಉದಯಿಸಲು ಸಾಧ್ಯವಾಯಿತು. 2. ಸಾಮಾಜಿಕ ಸೇವೆ ಮತ್ತು ಸಂಘಟನೆ ಅಖಿಲ ಭಾರತ ವೀರಶೈವ ಮಹಾಸಭೆ: ಸಮಾಜದ ಸುಧಾರಣೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಉದ್ದೇಶದಿಂದ ಸ್ಥಾಪನೆಯಾದ ವೀರಶೈವ ಮಹಾಸಭೆಯ ಆರಂಭಿಕ ದಿನಗಳಲ್ಲಿ ಅರಟಾಳ ರುದ್ರಗೌಡರು, ಸರ್ದಾರ್ ಬುಳ್ಳಪ್ಪ ಮಾಮಲೆದೇಸಾಯಿ ಮುಂತಾದ ಧೀಮಂತರು  ಸೇರಿ  ಸಮಾಜ ಸಂಘಟನೆಗೆ ಇವರು ಸ್ಪೂರ್ತಿಯಾದರು. ದೂರದೃಷ್ಟಿಯ ನಾಯಕತ್ವ: ಲಿಂಗಾಯತ  ಸಮಾಜ ಸುಶಿಕ್ಷಿತವಾಗಬೇಕೆಂಬ ಹಂಬಲದಿಂದ ತಮ್ಮ ಇಡೀ ಜೀವನ ಹಾಗೂ ಸಂಪತ್ತನ್ನು ಧಾರೆ ಎರೆದ ಇವರನ್ನು ಉತ್ತರ ಕರ್ನಾಟಕದ ಶೈಕ್ಷಣಿಕ ರಂಗದ ಪ್ರಾತಃಸ್ಮರಣೀಯರೆಂದು ಗೌರವಿಸಲಾಗುತ್ತದೆ. ಲಿಂಗಾಯತ ಸಮಾಜದಲ್ಲಿ ಮೊಟ್ಟ ಮೊದಲ ಡೆಪ್ಯುಟಿ ಕಮಿಷನರ್ ಆಗಿ ನೇಮಕ ಗೊಂಡ ಪ್ರಥಮರು  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಉದಾರತ್ವತನಕ್ಕೆ ಮಾದರಿ. 1884 ರಲ್ಲಿ ಪುಣೆಯಲ್ಲಿ ಓದುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ತಿಂಗಳಿಗೆ  80 ರೂಪಾಯಿಯಂತೆ ತಿಂಗಳಿಗೆ 320 ರೂಪಾಯಿಯನ್ನು ಐದು  ತಿಂಗಳು  ತಮ್ಮ ಸ್ವಂತ  ಹಣ ಕೊಡುತ್ತಿದ್ದರು.ಕಾರಣ ಲಿಂಗಾಯತ ವೆಲ್ ಫೇರ್ ಫಂಡ್ ಬಡ್ಡಿ ಜಮಾ ಆಗಿರದ ಕಾರಣ ತಮ್ಮ ಹಣವನ್ನು ಕೊಟ್ಟು ವಿದ್ಯಾರ್ಥಿಗಳನ್ನು ಕಲಿಸಿದರು.  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು 1890 ರಲ್ಲಿ ಒಂದು ದಿನ ಮಧ್ಯಾನ್ಹ ಊಟ ಮಾಡಿ ಪ್ರಾಂಗಣದಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಒಬ್ಬ ಬಡ ವಿದ್ಯಾರ್ಥಿ ಬಂದು ತನ್ನ ಕಾಲೇಜಿಗೆ ಫೀ ಕಟ್ಟಲು ಹಣ ಬೇಕೆಂದು ಕೇಳಿಕೊಂಡಾಗ  ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಎದ್ದು ಗೂಟಕ್ಕೆ ನೇತು ಹಾಕಿದ್ದ ತಮ್ಮ ಕೋಟ್ ನ ಕಿಸೆಯಲ್ಲಿ ಕೈಹಾಕಿದಾಗ ಅಲ್ಲಿ ಒಂದು ಅಣೆ ಪೈಸೆ ದೊರೆಯಲಿಲ್ಲ . ಕಣ್ಣೀರು ಕೆನ್ನೆಯ ಮೇಲೆ ಹರಿದವು. ಅಸಹಾಯಕನಾಗಿ ದುಡ್ಡಿಲ್ಲ ಕ್ಷಮಿಸು ಎಂದು ಹೇಳಿ ಕಳುಹಿಸಿದರು. ವಿದ್ಯಾರ್ಥಿ ಮನೆಯ ಕಾಂಪೌಂಡ್ ದಾಟುವ ಮುನ್ನ ತಮ್ಮ ಎದೆಯ ಮೇಲಿನ ಬಂಗಾರದ  ಗುಂಡಗಡಗಿ ಕರಡಿಗೆ ತೆಗೆದು ಇಷ್ಟ ಲಿಂಗವನ್ನು ಕೈಯಲ್ಲಿ ಹಿಡಿದು ಬಿಳಿ ಬಟ್ಟೆಯಲ್ಲಿ ಕಟ್ಟಿ ಬಂಗಾರದ ಗುಂಡಗಡಗಿಯನ್ನು ಬಡ ವಿದ್ಯಾರ್ಥಿಗೆ ಕೊಟ್ಟು. ” ನೋಡು ಇದನ್ನು ಮಾರಿ ನಿನ್ನ ಇಡೀ ಶಿಕ್ಷಣವನ್ನು ಮುಗಿಸು ಎಂದು ಹರಸಿ ಕಳುಹಿಸಿದ ಮಹಾ ಮಾನವತಾವಾದಿ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಕೊನೆಯ ಸಂದೇಶ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಐವತ್ತನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವರನ್ನು ನೋಡಲು ಇವರ ಆಪ್ತ ಮಿತ್ರರು ಶ್ರೀ  ಅರಟಾಳ ರುದ್ರಗೌಡರು ಭೇಟಿಗೆ ಬಂದರು ” ರಾವ್ ಸಾಹೇಬ್ ಶ್ರೀ ಗುರುಸಿದ್ದಪ್ಪನವರೇ ನಮಗೆ ಏನಾದರೂ ತಮ್ಮ ಸಂದೇಶ ಮಾರ್ಗದರ್ಶನ ನೀಡುತ್ತೀರಾ ಎಂದು ಕೇಳಿದಾಗ ಮುಗುಳು ನಕ್ಕು. ರುದ್ರಗೌಡರೆ ನಾವಿಬ್ಬರೂ ಆರಂಭಿಸಿದ ಲಿಂಗಾಯತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA) ಎಲ್ಲಾ ಬಡ ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ಶಿಷ್ಯವೇತನ ನೀಡಿ. ಯಾರೂ ಶಿಕ್ಷಣ ವಂಚಿತರಾಗಬಾರದು. ಬಸವಾದಿ ಶರಣರ ಕಾಯಕ ದಾಸೋಹ ನಿಲ್ಲ ಬಾರದು ಎಂದು ಅವರಿಂದ ಪ್ರಮಾಣ ಮಾಡಿಸಿಕೊಂಡರು.  22ಜೂನ್ 1891 ರಂದು ಅವರು ಬಯಲಲ್ಲಿ ಬಯಲಾದರು. ಇಂತಹ ಅಪರೂಪದ ಮಹಾಶರಣ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ನಾಗರಿಕ ಸಮಾಜಕ್ಕೆ  ಲಿಂಗಾಯತ ಸಮಾಜದವರಿಗೆ ನಿತ್ಯ ಸ್ಮರಣೀಯರು ಸಾವಿಲ್ಲದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »